ಹೊರಗಲ್ಲ; ಒಳಗೇ ಇದೆ ಎಲ್ಲ! (ವಿಕಾಸವಾದದ ಅರ್ಥವನ್ನು ಧ್ವನಿಸುವ ವಚನ) / ಡಾ. ಬಸವರಾಜ ಸಾದರ, ಬೆಂಗಳೂರು.

ನಾವಿರುವ ಈ ಸೃಷ್ಟಿ ನಿತ್ಯ ಪರಿವರ್ತನಶೀಲವಾದದ್ದು. ಪರಿವರ್ತನೆ ಜಗದ ಹಾಗೂ ವಿಜ್ಞಾನದ ಒಂದು ಮುಖ್ಯ ನಿಯಮ. ವಿಕಾಸವಾದದ ಮೂಲ ಚಹರೆಯೇ ಪರಿವರ್ತನೆ. ಇಂಥ ಪರಿವರ್ತನಾ ಪ್ರಕ್ರಿಯೆಯ ವೇಗವು ವಸ್ತು ಮತ್ತು ಜೀವಿಗಳ ಸ್ವರೂಪಗಳನ್ನು ಆಧರಿಸಿ ನಿಗದಿತವಾಗಿರುತ್ತದೆ. ಬದಲಾವಣೆ ಮತ್ತು ಬೆಳವಣಿಗೆ ಎರಡೂ ಅದರ ಅಭಿನ್ನ ಅಂಗಗಳಾಗಿದ್ದು, ಅವೆರಡೂ ಪರಸ್ಪರ ಪೂರಕ ಮತ್ತು ಪ್ರೇರಕ ಗತಿಯಲ್ಲಿಯೇ ನಡೆದಿರುತ್ತವೆ. ಈ ಕಾರಣಕ್ಕಾಗಿ ಅದರ ವೇಗ ಒಂದು ನಿಗದಿತ ನಿಯಂತ್ರಣಾ ಕ್ರಮದಲ್ಲಿರುತ್ತದೆ. ಬದಲಾಗುವುದರ ಮೂಲಕವೇ ಗತಿಶೀಲತೆಯನ್ನು ಸಾಧಿಸುವ ಕಾರಣಕ್ಕೆ ಅದು ತಕ್ಷಣ ನಮ್ಮ ಕಣ್ಣಿಗೆ ಗೋಚರವಾಗುವುದಿಲ್ಲ. ಒಂದು ವಸ್ತು ಅಥವಾ ಜೀವಿಯ ಮೂಲಸ್ವರೂಪದಲ್ಲಿ ಸಂಪೂರ್ಣ ವ್ಯತ್ಯಾಸಗಳಾದಾಗ ಮಾತ್ರ ಬದಲಾವಣೆಯ ಸ್ವರೂಪ ನಮ್ಮ ಅರಿವಿಗೆ ಬರುತ್ತದೆ. ಆಗ ನಾವೆನ್ನುವ ಸಾಮಾನ್ಯ ಮಾತು, “ಇದು ಹೊಸ ಬದಲಾವಣೆ” ಎಂದು.

ಆದರೆ ಇಂಥ ಬದಲಾವಣೆ ಹೊಸದಾಗಿಯೇ ಆಗುತ್ತದೆಯೆ? ಹಾಗೆ ಹೊಸದಾಗಿಯೇ ಆಗುವುದಾದರೆ ಅದರಲ್ಲಿರುವ ಮೂಲ ವಸ್ತುವಿನ ಪಾತ್ರ ಏನು? ಅಥವಾ ಬದಲಾವಣೆ ಹೊಸದೇ ಅದರೆ ಅದಕ್ಕೆ ಅಗತ್ಯವಿರುವ ಹೊಸ ವಸ್ತುಗಳು ಎಲ್ಲಿಂದ ಬಂದವು? ಅದಕ್ಕೂ ಮೊದಲು ಅವು ಎಲ್ಲಿದ್ದವು? ಹೇಗೆ ಬಂದವು? ಇವೆಲ್ಲ ಮಹತ್ವದ ಪ್ರಶ್ನೆಗಳು. ಇವು ಖಚಿತ ಉತ್ತರ ಬಯಸುವ ಪ್ರಶ್ನೆಗಳೂ ಕೂಡ. ಆಧುನಿಕ ವಿಜ್ಞಾನವು ಕೇಳುವ ಇಂಥ ಪ್ರಶ್ನೆಗಳಿಗೆ 12 ನೇಯ ಶತಮಾನದಷ್ಟು ಹಿಂದೆಯೇ ತಮ್ಮ ಅರಿವಿನ ಬೆಳಕಿನ ಮೂಲಕ ಶರಣರು ಸಮರ್ಥ ಉತ್ತರ ಕೊಟ್ಟಿರುವುದು ಸೋಜಿಗದ ಸಂಗತಿ. ನಮ್ಮ ಜ್ಞಾನದ ಪರಿಧಿಯನ್ನು ವಿಸ್ತರಿಸುವ ಹಾಗೂ ನಮ್ಮಲ್ಲೂ ಅರಿವಿನ ಬೆಳಕು ಮೂಡಿಸುವ ಅವರ ಇಂಥ ವಿಚಾರ ಸರಣಿ ಆಧುನಿಕ ವಿಜ್ಞಾನದ ಪ್ರಮೇಯಗಳಿಗೆ ಸಂವಾದಿಯಾಗಿರುವುದು ಸಣ್ಣ ಸಂಗತಿಯಲ್ಲ. ಈ ನೆಲೆಯಲ್ಲಿ ಶರಣ ನಗೆಯ ಮಾರಿತಂದೆಯವರ ವಚನವೊಂದು ನಮ್ಮ ಗಮನವನ್ನು ವಿಶೇಷವಾಗಿ ಸೆಳೆಯುತ್ತದೆ. ವಿಕಾಸವಾದದ ಮೂಲ ತತ್ವಗಳನ್ನು ಸೂಕ್ಷ್ಮ ಮತ್ತು ಸೂಕ್ತ ವಿವರಗಳ ಮೂಲಕ ಮನದಟ್ಟು ಮಾಡಿಕೊಡುವ ಈ ವಚನವು ಒಂದರ್ಥದಲ್ಲಿ ಬೆರಗು, ಮತ್ತೊಂದರ್ಥದಲ್ಲಿ ಬೆಳಕು.

ಬೀಜವೊಡೆದು ಮೊಳೆಯಂಕುರಿಸುವಾಗ ಎಲೆ ಎಲ್ಲಿದ್ದಿತ್ತು?
ಎಲೆ ಸುಳಿಬಿಟ್ಟು ಕಮಲುವಾಗ ಶಾಖೆಯೆಲ್ಲಿದ್ದಿತ್ತು?
ಶಾಖೆ ಒಡೆದು ಕುಸುಮ ತೋರುವಾಗ ಫಲವೆಲ್ಲಿದ್ದಿತ್ತು?
ಫಲ ಬಲಿದು ರಸ ತುಂಬುವಾಗ ಸವಿಯೆಲ್ಲಿದ್ದಿತ್ತು?
ಸವಿಯ ಸವಿದು ಪರಿಣತೆಗೊಂಬಾಗ ಅದೇತರೊದಗು?
ಇಷ್ಟರಿ ನೀತಿಯನರಿ, ಆತುರವೈರಿ ಮಾರೇಶ್ವರಾ.
(ಸಮಗ್ರ ವಚನ ಸಂಪುಟ: ಏಳು-2021 / ಪುಟ ಸಂಖ್ಯೆ-433 / ವಚನ ಸಂಖ್ಯೆ-1233)

ಶರಣ ನಗೆಯ ಮಾರಿತಂದೆಯವರ ಈ ವಚನದ ಪ್ರತಿ ಪಂಕ್ತಿಯ ಕೊನೆಯಲ್ಲೂ ಪ್ರಶ್ನಾರ್ಥಕ ಚಿನ್ಹೆ ಇರುವುದು ವಿಶೇಷ. ಮತ್ತೂ ಆಶ್ಚರ್ಯ ಹಾಗೂ ಕುತೂಹಲಕರ ಸತ್ಯವೆಂದರೆ, ಈ ಪ್ರಶ್ನೆಗಳ ಒಳಗೇ ಉತ್ತರಗಳೂ ಅವಿತಿರುವುದು! ಸತ್ಯವನ್ನು ಸೂಕ್ಷ್ಮಾತಿಸೂಕ್ಷ್ಮವಾಗಿ ಸಾಕ್ಷಾತ್ಕಾರ ಮಾಡಿಕೊಡುವ ಶರಣರ ಅನನ್ಯ ಕ್ರಮವಿದು. ಇನ್ನೂ ಮುಖ್ಯವೆಂದರೆ, ಇಲ್ಲಿನ ನಾಲ್ಕು ಸಾಲುಗಳಲ್ಲಿ ‘ಎಲ್ಲಿದ್ದಿತ್ತು?’ ಎಂಬ ಒಂದೇ ಪ್ರಶ್ನೆಯೇ ಪುನಾವರ್ತನೆ ಆಗಿರುವುದು! ನಾವು ದಿನನಿತ್ಯ ಲೋಕರೂಢಿಯ ಮಾತಾಡುವಾಗ ಪ್ರಶ್ನೆಗಳಲ್ಲೇ ಉತ್ತರ ಸೂಚಿಸುವ ವಿಶೇಷ ಭಾಷಾ ಪ್ರಯೋಗದ ಪರಿಯೊಂದು ಪ್ರಚಲಿತವಿದೆ. ನಮ್ಮ ಕಣ್ಣೆದುರಿಗೇ ಇರುವ ವಸ್ತುವೊಂದನ್ನು ನಾವು ಕಾಣಲಾಗದಿದ್ದಾಗ, ‘ಅದು ಎಲ್ಲೆೈತಿ ಹೇಳ್ರಿ ನೋಡೋಣ?’ ಎಂದು ಧ್ವನಿಪೂರ್ಣವಾಗಿ ಕೇಳಿದರೆ, ಇಲ್ಲೇ ನಮ್ಮ ಕಣ್ಣ ಮುಂದೆಯೇ ಇದೆ ಎಂದು ಅರ್ಥವಲ್ಲವೆ? ಹೀಗೆ ಹೇಳಿದಾಗಲೂ ಎದುರಿಗಿರುವವರು ಆ ವಸ್ತುವನ್ನು ಕಾಣಲಾಗದಿದ್ದರೆ, ಅದನ್ನು ತೋರಿಸಿಕೊಡಲು ಮತ್ತಷ್ಟು ವಿವರಗಳನ್ನು ಕೊಡುವುದು ಅಗತ್ಯವಾಗುತ್ತದೆ. ಪ್ರಸ್ತುತ ವಚನ ಈ ಕ್ರಮವನ್ನೇ ಅನುಸರಿಸಿದೆ.

ಮಾರಿತಂದೆ ಇಲ್ಲಿ ಚಿತ್ರಿಸಿಕೊಟ್ಟಿರುವುದು ಒಂದು ಸುಂದರ ವೃಕ್ಷವನ್ನು. ಅದನ್ನು ತೋರಿಸುತ್ತ ತರ್ಕಬದ್ಧವಾಗಿ ನಮಗೆ ಹಲವು ಪ್ರಶ್ನೆಗಳನ್ನು ಕೇಳುತ್ತ ಹೋಗುತ್ತಾರೆ ಶರಣ ನಗೆಯ ಮಾರಿತಂದೆ. ಒಂದು ಗಿಡವೆಂದರೆ ಅದಕ್ಕೆ ಮೂಲ ಒಂದು ಬೀಜ. ಆ ಬೀಜವು ಮೊಳಕೆ ಒಡೆಯುವಾಗ ಮುಂದೆ ಮೂಡಲಿರುವ ಎಲೆ ಎಲ್ಲಿತ್ತು? ಎಂಬುದು ಆತನ ಮೊದಲ ಪ್ರಶ್ನೆ. ಆ ಎಲೆ ಸುಳಿದೆಗೆದು ಬೆಳೆಯುತ್ತ ಹೋಗುವಾಗ, ತದನಂತರ ಒಡೆಯುವ ಗಿಡದ ಟೊಂಗೆ ಎಲ್ಲಿತ್ತು? ಎಂಬುದು ಅವನ ಎರಡನೆಯ ಪ್ರಶ್ನೆ. ಹಾಗೆ ಟೊಂಗೆ ಅಥವಾ ಶಾಖೆ ಮೂಡಿ, ಅದರಲ್ಲಿ ಹೂವು ಬಿಟ್ಟು, ನಂತರ ಫಲವಾಗುತ್ತದೆ. ಈ ಹೂವು ಮತ್ತು ಫಲಗಳು ಎಲ್ಲಿದ್ದವು? ಎಂಬುದು ಮೂರನೆಯ ಪ್ರಶ್ನೆ. ಇದೆಲ್ಲ ಮುಗಿದು, ಫಲ ಬಲಿತು ರಸವತ್ತಾಗಿ ಅದರಲ್ಲಿ ರುಚಿ ತುಂಬುತ್ತದೆಯಲ್ಲವೆ? ಇಂಥ ರುಚಿ ಎಲ್ಲಿತ್ತು? ಎಂಬುದು ಮಾರಿತಂದೆಯ ನಾಲ್ಕನೆಯ ಪ್ರಶ್ನೆ. ಇದೆಲ್ಲವೂ ಮುಗಿದು, ಗಿಡವು ಕೊಡುವ ಫಲವನ್ನು ಸವಿದು ಅನುಭವಿಸುವಾಗ ಅದೆಂತಹ ತೃಪ್ತಿ ಹಾಗೂ ಸುಖವಲ್ಲವೆ? ಈ ಸುಖ-ತೃಪ್ತಿ ಎಲ್ಲಿಂದ ಬಂದವು ಎಂಬುದನ್ನು ಮೊದಲು ತಿಳಿ-ಎಂಬುದು ಈ ವಚನದ ವಾಚ್ಯಾರ್ಥ. ಎಲ್ಲಿತ್ತು? ಎಲ್ಲಿತ್ತು? ಎಂದು ಕೇಳುತ್ತ ಕೇಳುತ್ತ ಕೇಳುಗನ ಕುತೂಹಲ ಹೆಚ್ಚಿಸುವ ವಚನವು ಬರೀ ಉತ್ತರವನ್ನು ನಿರೀಕ್ಷಿಸುವುದಿಲ್ಲ; ಅದನ್ನೂ ಮೀರಿ ಇನ್ನೂ ವಿಶೇಷವಾದ ವೈಜ್ಞಾನಿಕ ಸತ್ಯವೊಂದರ ದರ್ಶನದ ಕಡೆಗೆ ನಮ್ಮನ್ನು ಕರೆದೊಯ್ಯುತ್ತದೆ. ಹಾಗಿದ್ದರೆ ಏನದು ಸತ್ಯದರ್ಶನ?

ವೃಕ್ಷದ ಬೆಳವಣಿಗೆಯ ಪ್ರತಿ ಹಂತದಲ್ಲೂ ಕಾಣಲಿರುವ ವಸ್ತು ಎಲ್ಲಿತ್ತು? ಎಲ್ಲಿತ್ತು? ಎಂದು ಮತ್ತೆ ಮತ್ತೆ ಕೇಳುವಲ್ಲಿ ಅದು ಬೇರೆಲ್ಲಿಯೂ ಇಲ್ಲ, ಮೂಲ ವಸ್ತುವಿನ ಒಳಗೇ ಇದೆ ಎಂದು ಧ್ವನಿಸುವುದೇ ಈ ವಚನದಲ್ಲಿರುವ ಇಲ್ಲಿರುವ ವಿಶೇಷ ಅರ್ಥ. ಬೀಜ ಒಡೆದು ಮೊಳೆ ಅಂಕುರಿಸುವಾಗ ಮುಂದೆ ಚಿಗುರುವ ಎಲೆ ಬೇರೆಲ್ಲಿಯೂ ಇರದೆ, ಆ ಬೀಜದ ಒಳಗೇ ಇರುತ್ತದೆ ಎಂದರ್ಥ. ಎರಡನೆಯ ಹಂತದಲ್ಲಿ ಎಲೆ ಸುಳಿ ಬಿಟ್ಟು ಬೆಳೆಯುವಾಗ ಮುಂದೆ ಕಾಣಲಿರುವ ಟೊಂಗೆಯು ಮತ್ತೆಲ್ಲಿಯೂ ಇರದು, ಅದು ಸುಳಿ ಬಿಟ್ಟು ಬೆಳೆಯುವ ಎಲೆಯಲ್ಲಿಯೇ ಇರುತ್ತದೆ ಎಂದರ್ಥ. ಟೊಂಗೆ, ಹೂ ಬಿಟ್ಟು ಅದರಲ್ಲಿ ಮುಂದೆ ಬಿಡಲಿರುವ ಫಲ ಎಲ್ಲಿತ್ತೆಂದರೆ, ಅದು ಹೂವಿನಲ್ಲಿಯೇ ಇರುತ್ತದೆ ಎಂದರ್ಥ. ಫಲ ಬಲಿತು ಅದರಲ್ಲಿ ರಸ ತುಂಬುವಾಗ ಅದಕ್ಕೆ ಬರುವ ಸವಿ ಅಥವಾ ರುಚಿ ಎಲ್ಲಿರುತ್ತದೆ ಎಂದರೆ, ಆ ಫಲದಲ್ಲಿಯೇ ಇರುತ್ತದೆ ಎಂಬ ಅರ್ಥ. ಹೀಗೆ ಮರವು ಒಂದೊಂದು ಹಂತದಲ್ಲಿ ಬದಲಾಗುತ್ತ, ಬೆಳೆಯುತ್ತ ಸಾಗುವಾಗ ಆಗುವ ಬದಲಾವಣೆಗೆ ಹೊರಗಿನ ಯಾವ ವಸ್ತುಗಳೂ ಕಾರಣವಲ್ಲ; ಬದಲಾಗಿ ಮೂಲ ಬೀಜದಲ್ಲಿಯೇ ಇವೆಲ್ಲವೂ ಅಣು-ಕಣ-ಶಕ್ತಿರೂಪದಲ್ಲಿ ಅಡಗಿರುತ್ತವೆ ಎಂದೇ ಅರ್ಥ. ಹೀಗೆ ಮೂಲ ವಸ್ತುವಿನಲ್ಲೇ ಅಡಗಿದ ಅಣು, ಕಣ ಶಕ್ತಿಯೇ ಕಾಲಾನುಕ್ರಮದಲ್ಲಿ, ತನ್ನ ಸುತ್ತಲಿನ ಪರಿಸರದ ಪೂರಕ ನೆರವಿನೊಂದಿಗೆ ವಿಕಾಸ ಹೊಂದಿ ಬೇರೆ ಬೇರೆ ಆಕಾರ, ರೂಪ, ಬಣ್ಣಗಳನ್ನು ಪಡೆದು, ಫಲ ಸ್ವರೂಪದ ಪರಿಪೂರ್ಣ ಹಂತಕ್ಕೆ ತಲುಪುತ್ತದೆ. ಇದು ಸೃಷ್ಟಿಯ ಅಚ್ಚರಿಯ ಪ್ರಕ್ರಿಯೆ. ಇದೇ ವಿಕಾಸದ ಕ್ರಮ. ಸೃಷ್ಟಿಗಿರುವ ಈ ಅನನ್ಯ ವಿಕಾಸಕ್ರಮವೇ ಒಂದು ಮಹಾಸೋಜಿಗ.

ಒಂದು ನವಿಲಿನ ಮೊಟ್ಟೆಯನ್ನು ಗಮನಿಸಿದರೆ, ಹೊರನೋಟಕ್ಕೆ ಅದರಲ್ಲಿ ನವಿಲು ಕಾಣದು. ತತ್ತಿಯೊಳಗಿನ ದ್ರವದಲ್ಲಿ ಕೂಡ ನವಿಲು ಕಾಣದು. ಹಾಗಾದರೆ ನವಿಲು ಎಲ್ಲಿಂದ ಉತ್ಪತ್ತಿಯಾಗುತ್ತದೆ? ಎಂದರೆ, ತತ್ತಿಯೊಳಗಿರುವ ಮೂಲ ದ್ರವವೇ ಕಾಲಾನುಕ್ರಮದಲ್ಲಿ ಪರಿವರ್ತನೆಯ ನಿಯಮಕ್ಕನುಸಾರ ವಿಕಾಸ ಹೊಂದುತ್ತ ಹೋಗಿ, ಪಕ್ವತೆಯ ಕಾಲಘಟ್ಟ ಬಂದಾಗ ನವಿಲಾಗಿ ರೂಪ ಪಡೆಯುತ್ತದೆ. ಅಂದರೆ, ನವಿಲು ಬೇರೆಲ್ಲಿಯೂ ಇರಲಿಲ್ಲ, ಮೂಲ ದ್ರವದಲ್ಲಿಯೇ ಇತ್ತು ಎಂದೇ ಅರ್ಥ. ಮತ್ತೊಂದು ಸತ್ಯವೆಂದರೆ, ನವಿಲೇ ಆಗಿರಲಿ ಅಥವಾ ಮರ ಬೆಳೆದು ಅಂತಿಮವಾಗಿ ಕೊಡುವ ಫಲವೇ ಆಗಿರಲಿ ವಿಕಾಸದ ಕೊನೆಯ ಹಂತದಲ್ಲಿ ದೊರೆಯುವ ಫಲವು ಒಂದು ಪರಿಪೂರ್ಣ ಸ್ಥಿತಿಗೆ ಬಂದು ತಲುಪಿರುತ್ತದೆ ಎಂಬುದು. (ಅದೂ ಕೊನೆಯಲ್ಲ, ಅದು ಮತ್ತೆ ವಿಕಾಸದ ಹಾದಿಯಲ್ಲಿಯೇ ಸಾಗುತ್ತದೆ) ಅದು ಆ ಹಂತದ ಬದಲಾವಣೆ ಮತ್ತು ಬೆಳವಣಿಗೆಯ ಅಂತಿಮ ಫಲ. ಇದೆಲ್ಲ ಒಳಗಿನದೇ; ಯಾವುದೂ ಹೊರಗಿನದಲ್ಲ.

ಪರಿವರ್ತನೆ ಹಾಗೂ ವಿಕಾಸದ ಪ್ರಕ್ರಿಯೆಯನ್ನು ಹೀಗೆ ಅರ್ಥೈಸಿಕೊಡುವ ಪ್ರಸ್ತುತ ವಚನ ಇಷ್ಟಕ್ಕೇ ನಿಲ್ಲುವುದಿಲ್ಲ. ವಾಚ್ಯಾರ್ಥದ ಹಂತ ದಾಟಿ ವಚನದ ಒಳಗೆ ಪ್ರವೇಶ ಮಾಡಿದರೆ, ಅದು ಆನುಭಾವಿಕ ಪ್ರಪಂಚದ ವಿಕಾಸ ಕ್ರಮವನ್ನೂ ಧ್ವನಿಸುವುದು ಮಹತ್ವದ ಸಂಗತಿ. ಆತ್ಮದಲ್ಲಿ ಅರಿವಿನ ಬೀಜಾಂಕುರವಾದ ಮೇಲೆ ಅದು ವಿವಿಧ ಹಂತಗಳಲ್ಲಿ ವಿಕಾಸವಾಗುತ್ತ, ಒಂದೊಂದೇ ಹೆಜ್ಜೆ ಕ್ರಮಿಸುತ್ತ ಸಾಗಿ, ಅಂತಿಮವಾಗಿ ದೊರೆಯುವ ಆತ್ಮ ಸಾಕ್ಷಾತ್ಕಾರದ ಅಥವಾ ಪರಮ ಸುಖದ ಹಂತಕ್ಕೆ ಬಂದು ತಲುಪುವ ಘಟ್ಟಕ್ಕೆ ನಮ್ಮನ್ನು ತಂದು ನಿಲ್ಲಿಸುತ್ತದೆ ಈ ವಚನ. ವೃಕ್ಷದ ಬೀಜವು ನಿಧಾನ ಗತಿಯಲ್ಲಿ ವಿಕಾಸ ಹೊಂದಿ ಪಕ್ವ ಫಲ ಕೊಡುವ ಹಾಗೂ ಆ ಪಕ್ವ ಫಲವನ್ನು ವ್ಯಕ್ತಿ ಸವಿಯುವಾಗ ಉಂಟಾಗುವ ಅನಿರ್ವಚನೀಯ ಆನಂದದ ಸುಖವನ್ನು ದರ್ಶಿಸಿಸುವ ಕ್ರಮವೇ ಆತ್ಮ ಸಾಕ್ಷಾತ್ಕಾರದ ಕ್ರಮ ಕೂಡ ಆಗಿದ್ದು, ಅಲ್ಲಿಯೂ ಅರಿವೆಂಬ ಬೀಜವೇ ವಿಕಾಸವಾಗುತ್ತ ‘ಸವಿಯ ಸವಿದು ಪರಿಣತೆಗೊಂಬಾಗ ಅದೇತರೊದಗು?’ ಎಂಬಂತೆ ಅಚ್ಚರಿಯ ಪರಮ ಸುಖದ ದರ್ಶನ ಮಾಡಿಸುತ್ತದೆ. ಇಂಥ ಕ್ರಮವನ್ನು ಅರಿಯಬೇಕು (ಇಷ್ಟರಿ ನೀತಿಯನರಿ) ಎನ್ನುತ್ತಾರೆ ಶರಣ ನಗೆಯ ಮಾರಿತಂದೆ. ಇಂಥ ಅರಿವೇ ಆನಂದದ ಮೂಲ. ಈ ಕ್ರಮಣದ ಪ್ರತಿ ಘಟ್ಟದಲ್ಲೂ ಕಾಣುವ ಬದಲಾವಣೆಗೆ ಹೊರಗಿನ ಯಾವ ವಸ್ತುಗಳೂ ಕಾರಣವಲ್ಲ; ಬದಲಾಗಿ ಅದು ಮೂಲ ಅರಿವಿನ ಬೀಜದ ಮೂಲಕವೇ ವಿಕಾಸಗೊಂಡದ್ದು. ಅಂದರೆ ಮನುಷ್ಯನ ಆನಂದಕ್ಕೆ ಅಥವಾ ಅನುಭಾವದ ಸುಖಕ್ಕೆ ಅಗತ್ಯವಿರುವ ಎಲ್ಲ ಸಲಕರಣೆಗಳೂ ಅವನ ಒಳಗಡೆಯೇ ಇವೆಯೆಂಬುದು ಇಲ್ಲಿನ ಮುಖ್ಯ ಧ್ವನಿ. ಈ ಹಂತ ತಲುಪಲು ನಿಧಾನ ಹಾಗೂ ನಿರಂತರ ಗತಿಯ ಸಾಧನೆ ಅತ್ಯಗತ್ಯ. ಇಲ್ಲಿ ಆತುರಕ್ಕೆ ಅವಕಾಶವೇ ಇಲ್ಲ. “ಆತುರವೈರಿ” ಯಾದಾಗಲೇ ಈ ಸತ್ಯದ ದರ್ಶನವಾಗಲು ಸಾಧ್ಯ. ತನ್ನ ವಚನಾಂಕಿತದ ಮೂಲಕವೇ ಶರಣ ನಗೆಯ ಮಾರಿತಂದೆಯವರು ನಿಧಾನ ತತ್ತವವನ್ನೂ ಧ್ವನಿಸುತ್ತಾರೆ ಇಲ್ಲಿ. ಶರಣರು ಷಟ್‌ಸ್ಥಲ ಸಿದ್ಧಾಂತವನ್ನು ರೂಪಿಸಿದ್ದೂ ಈ ಹಿನ್ನೆಲೆಯಲ್ಲಿಯೆ. ಇದೆಲ್ಲಕ್ಕೂ ನಮ್ಮೊಳಗಿರುವ ಅರಿವೇ ಮೂಲಧಾತು.

ವಿಕಾಸದ ಕ್ರಮದಲ್ಲಿ ಯಾವುದೂ ಹೊಸದಲ್ಲ, ಹೊರಗಿನದಲ್ಲ, ಅದೆಲ್ಲವೂ ಒಳಗಿನದೆ. ಅಷ್ಟೇ ಅಲ್ಲ, ಅದೆಲ್ಲವೂ ಮೇಲೆ ಕಾಣದ ಹಾಗೆ ಒಂದರೊಳಗೊಂದು ಒಳಗೇ ಅಡಗಿರುತ್ತದೆ. ಅದು ಕಾಣುವುದು ವಿಕಾಸವಾಗುತ್ತ ಬೆಳೆದು ದೊಡ್ಡದಾದಾಗ ಅಥವಾ ಪರಿಪೂರ್ಣ ಸ್ಥಿತಿ ತಲುಪಿದಾಗ ಮಾತ್ರ. ವಿಕಾಸದ ಇಂಥ ವೈಜ್ಞಾನಿಕ ಕ್ರಮವೇ ಅನುಭಾವ ಸಾಧನೆಯ ಮಾರ್ಗಕ್ಕೂ ಮೂಲ ಸೂತ್ರ. ಇದನ್ನೇ ಶರಣ ನಗೆಯ ಮಾರಿತಂದೆಯವರು ಎಲ್ಲಿತ್ತು? ಎಲ್ಲಿತ್ತು? ಎಂಬ ವಿಶಿಷ್ಟ ಪ್ರಶ್ನಾ ಪ್ರಯೋಗದ ಮೂಲಕ ಮಂಡಿಸಿದ್ದಾರೆ. ಹೀಗೆ ವಿಶೇಷ ಅರ್ಥ ಧ್ವನಿಯ ಅಭಿವ್ಯಕ್ತಿಗೆ ಕನ್ನಡ ಭಾಷೆಯನ್ನು ದುಡಿಸಿಕೊಂಡದ್ದು ಶರಣ ನಗೆಯ ಮಾರಿತಂದೆಯವರ ಅನನ್ಯ ಪ್ರಯೋಗವೇ ಸರಿ. ಈ ಎಲ್ಲ ಕಾರಣಗಳಿಂದಾಗಿ ಪ್ರಸ್ತುತ ವಚನ ತುಂಬ ಮಹತ್ವದ್ದಾಗುತ್ತದೆ.

ಡಾ. ಬಸವರಾಜ ಸಾದರ.
ನಿಲಯದ ನಿರ್ದೇಶಕರು (ನಿ), ಆಕಾಶವಾಣಿ, ಬೆಂಗಳೂರು.
303, ಎಸ್. ಎಲ್. ವಿ. ತೇಜಸ್‌, 3 ನೇ ಮಹಡಿ,
2 ನೇ ಅಡ್ಡ ರಸ್ತೆ, ಭುವನೇಶ್ವರಿ ನಗರ,
(ಹೆಬ್ಬಾಳ-ಕೆಂಪಾಪೂರ)
ಬೆಂಗಳೂರು – 560 024
ಮೋಬೈಲ್‌ ಸಂ. +91 98869 85847

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

Leave a Reply