
ಕರಿ ಘನ; ಅಂಕುಶ ಕಿರಿದೆನ್ನಬಹುದೆ? ಬಾರದಯ್ಯಾ
ಗಿರಿ ಘನ; ವಜ್ರ ಕಿರಿದೆನ್ನಬಹುದೆ? ಬಾರದಯ್ಯಾ
ತಮಂಧ ಘನ; ಜ್ಯೋತಿ ಕಿರಿದೆನ್ನಬಹುದೆ? ಬಾರದಯ್ಯಾ
ಮರಹು ಘನ; ನಿಮ್ಮ ನೆನೆವ ಮನ ಕಿರಿದೆನ್ನಬಹುದೆ? ಬಾರದಯ್ಯಾ
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-7/ವಚನ ಸಂಖ್ಯೆ-6)
ಎಲ್ಲರಿಗೂ ವಿಶ್ವಗುರು ಬಸವಣ್ಣನವರ ಜಯಂತಿಯ ಹಾರ್ದಿಕ ಶುಭಾಶಯಗಳು ಹಾಗೂ ಎಲ್ಲರಿಗೂ ಶರಣು ಶರಣಾರ್ಥಿಗಳು. ಸೌಹಾರ್ದತೆಯ ಬೀಜ ಬಿತ್ತಿ ಧರೆಯ ಮೇಲೆ ಸುಂದರವಾದ ಸಮ ಸಮಾಜವನ್ನು ಕಟ್ಟಬಯಸಿದ ಬಸವಾದಿ ಶಿವಶರಣರು ನಿತ್ಯ ಸ್ಮರಣಿಯರಾಗಿದ್ದಾರೆ.
ಲೋಕದಂತೆ ಬಾರರು, ಲೋಕದಂತೆ ಇರರು,
ಲೋಕದಂತೆ ಹೋಹರು, ನೋಡಯ್ಯಾ.
ಪುಣ್ಯದಂತೆ ಬಪ್ಪರು, ಜ್ಞಾನದಂತೆ ಇಪ್ಪರು,
ಮುಕ್ತಿಯಂತೆ ಹೋಹರು, ನೋಡಯ್ಯಾ.
ಉರಿಲಿಂಗದೇವಾ, ನಿಮ್ಮ ಶರಣರು
ಉಪಮಾತೀತರಾಗಿ ಉಪಮಿಸಬಾರದು.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-464/ವಚನ ಸಂಖ್ಯೆ-1255)
ಎಂಬ ಉರಿಲಿಂಗದೇವರ ವಚನಗಳ ಸಾಲಿನಂತೆ ಶಿವಶರಣರ ಜನನ, ಬದುಕು, ಮರಣ ಎಲ್ಲವೂ ಶ್ರೇಷ್ಠವಾದುದಾಗಿದೆ. ಹುಟ್ಟು-ಸಾವುಗಳನ್ನು ಏಕ ಪ್ರಕಾರದಲ್ಲಿ ಸ್ವೀಕರಿಸಿದವರು. ಮರಣವೇ ಮಹಾನವಮಿ ಎಂದು ಸಾವನ್ನೂ ಸಂಭ್ರಮಿಸಿದವರು. ಇವರ ತತ್ವ ಸಿದ್ಧಾಂತಗಳು ಜನ ಸಾಮಾನ್ಯರ ಬದುಕನ್ನು ಹಸನುಗೊಳಿಸಿವೆ. ನಡೆ-ನುಡಿ ಸಾಮರಸ್ಯ ಶರಣರ ಬದುಕಿನ ಸಹಜತೆಯಾಗಿತ್ತು. ಶಿವಶರಣರು ಮಾನವನ ಬದುಕಿಗೆ ನೀಡಿದ ಮಾನವೀಯ ಮೌಲ್ಯಗಳು ಮಾನವ ದೇವನಾಗುವ ಮಾರ್ಗವನ್ನು ತೋರಿವೆ.
12 ನೇ ಶತಮಾನ ಕರ್ನಾಟಕದಲ್ಲಿ ಒಂದು ತೇಜೋಮಯವಾದ ಕಾಲಘಟ್ಟ. ವರ್ಗ, ವರ್ಣ, ಲಿಂಗ ತಾರತಮ್ಯ ರಹಿತ ಉನ್ನತ ಸಮಾಜ ರಚನೆಗೆ ಹಾತೊರೆದ ಶರಣ ಚಳುವಳಿ ಕರ್ನಾಟಕದಲ್ಲಿ ಬಹು ದೊಡ್ಡ ಕ್ರಾಂತಿಯನ್ನೇ ಮಾಡಿತು. ಈ ಚಳುವಳಿಯ ನೇತಾರರಾದ ಬಸವಣ್ಣನವರು ಆ ಯುಗದ ಉತ್ಸಾಹದ ಬುಗ್ಗೆ, ದಯೆಯ ಮೂರ್ತಿ, ವಿಚಾರವಾದಿ, ವಿಭೂತಿ ಪುರುಷ, ಭಕ್ತಿ ಭಂಡಾರಿ, ಜಗದ ಜ್ಯೋತಿ. ಬಸವಣ್ಣನವರು ಹೀಗೆ ಅನೇಕ ಹೆಸರುಗಳಿಂದ ಕರೆಯಿಸಿಕೊಂಡು ಗುರುತಿಸಿಕೊಂಡವರು.
ಎಲ್ಲರೂ ಕೂಡಿ ಬಾಳುವ ಒಗ್ಗಟ್ಟಿನ ಪಾಠ ಕಲಿಸಿದ ಶಿವಶರಣರು “ಶರಣ ಸಂಕುಲ” ವೆಂಬ ಸಮಾಜವನ್ನೇ ನಿರ್ಮಿಸಿದರು. ಆ ಶರಣ ಸಂಕುಲವೆಂಬ ಸಮಾಜದಲ್ಲಿ ಲಕ್ಷದ ಮೇಲೆ ತೊಂಭತ್ತಾರು ಸಾವಿರ ಶರಣರಿದ್ದರು. ಅವರಲ್ಲಿ ವಿವಿಧ ವೃತ್ತಿಯವರು, ವಿವಿಧ ಜಾತಿಯವರು, ವಿವಿಧ ಭಾಷೆ ಮಾತನಾಡುವವರು, ವಿವಿಧ ಸಂಸ್ಕೃತಿಯವರು ಇದ್ದರು. ಅವರೆಲ್ಲರೂ ಶರಣ ಧರ್ಮವನ್ನು ಒಪ್ಪಿಕೊಂಡವರಾಗಿದ್ದರು. ಹೀಗಾಗಿ ಅಲ್ಲಿ ಒಂದೇ ಪಂಗಡ, ಒಂದೇ ಪಂಥ, ಒಂದೇ ಸಂಕುಲ ಅದೇ ಶರಣ ಸಂಕುಲವಾಗಿತ್ತು. ಇವತ್ತು ನಮ್ಮ ಬಹುತ್ವದ ಭಾರತದಲ್ಲಿ ವಿವಿಧತೆಯಲ್ಲಿ ಏಕತೆಗಾಗಿ ಪರಿತಪಿಸುತ್ತಿರುವಾಗ ಕೂಡಿ ಬಾಳುವ ತತ್ವ ಕಲಿಸಿ ಕೊಟ್ಟ ಶರಣ ಧರ್ಮದತ್ತ ಮತ್ತೆ ಮತ್ತೆ ಹೊರಳಿ ನೋಡುವ ಅವಶ್ಯಕತೆ ಇದೆ.
ಬಸವೇಶ್ವರ ಜಯಂತಿಯ ನಿಮಿತ್ತ ಅಮೇರಿಕಾದ VSNA ಸಂಸ್ಥೆಯು ಸಾಂಸ್ಕೃತಿಕ ನಾಯಕ, ಮಹಾ ಮಾನವತಾವಾದಿ ಬಸವಣ್ಣನವರ ಮತ್ತು ಒಟ್ಟು ಶರಣರ ಸಿದ್ಧಾಂತಗಳನ್ನು ಅಮೇರಿಕಾದಂಥ ಮುಂದುವರೆದ ದೇಶದಲ್ಲಿ ಪಸರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇದಕ್ಕೆ ಕಾರಣೀಭೂತರಾದ ಶರಣ ಮನಸ್ಸನ್ನು ಹೊಂದಿರುವ VSNA ಯ ಅಧ್ಯಕ್ಷರಾದ ಶ್ರೀ. ಹರೀಶ ಹಿರೇಮಠ ಮತ್ತು ಸಂಸ್ಥೆಯ ಎಲ್ಲ ಗೌರವಾನ್ವಿತ ಪದಾಧಿಕಾರಿಗಳಿಗೆ ಅನಂತ ಶರಣು ಶರಣಾರ್ಥಿಗಳು. ಇಂತಹ ಉತ್ತಮ ಸಂಸ್ಥೆ ನಡೆಸುತ್ತಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಕ್ಕಾಗಿ ಅನಂತ ಧನ್ಯವಾದಗಳು. ರಾಜ್ಯದಾಚೆ, ದೇಶದಾಚೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಎಲ್ಲ ಶರಣ ಚೇತನರ ಅಂತರಾತ್ಮಕ್ಕೆ ಶರಣು ಶರಣಾರ್ಥಿಗಳು.
ಈ ಕಾಲಘಟ್ಟದ ಅನಿವಾರ್ಯವೂ ಮತ್ತು ಅವಶ್ಯಕವೂ ಆಗಿರುವ ಶಾಂತಿ ಮತ್ತು ಸೌಹಾರ್ದತೆ ಎಂಬುದು ಮನುಕುಲದ ಉಸಿರಾಗಬೇಕಾಗಿದೆ. “ವಿಶ್ವಶಾಂತಿಗೆ ಶರಣರ ಸಂದೇಶ” ಎಂಬ ಆಶಯಕ್ಕೆ ಅನುಗುಣವಾಗಿ ಸರ್ವಕಾಲಕ್ಕೂ ಅನ್ವಯವಾಗುವ ಶರಣರ-ಶಾಂತಿ-ಸೌಹಾರ್ದತೆಯ ಕುರಿತಾದ ಸಂದೇಶಗಳು ದುರಿತ ಕಾಲ ಸಂದರ್ಭಕ್ಕೆ ಅತ್ಯಂತ ಅವಶ್ಯಕವಾಗಿವೆ. ಈ ಕಾರಣದಿಂದ VSNA ಸಂಸ್ಥೆಯು ಈ ವರ್ಷ ಇದನ್ನು ಆಶಯವಾಗಿ ಸ್ವೀಕರಿಸಿದ್ದು ಸ್ವಾಗತಾರ್ಹವಾಗಿದೆ.
ಶರಣ ಬಂಧುಗಳೆ, ಇಂದು ಭೌತಿಕವಾದ ಮಾನವರ ಸಾಧನೆ ನಿಬ್ಬೆರಗುಗೊಳಿಸುತ್ತದೆ. ಎಷ್ಟೊಂದು ಅವಿಷ್ಕಾರಗಳನ್ನು ಮನುಷ್ಯರು ಮಾಡಿದ್ದಾರೆ. ದುರಂತವೆಂದರೆ ಸಾಧನೆಯ ಭರದಲ್ಲಿ ಅಂತಃಕರಣವನ್ನು ಮರೆಯುತ್ತಾ ಸಂಬಂಧಗಳ ಕೊಂಡಿ ಕಳಚಿಕೊಳ್ಳುತ್ತಾ ನಡೆಯುತ್ತಿರುವುದು. ಅವ್ಯಾಹತವಾಗಿ ಪ್ರಕೃತಿಯ ಮೇಲೆ, ಹೆಣ್ಣಿನ ಮೇಲೆ ದಾಳಿಯಾಗುತ್ತಿದೆ. ದೇಶ-ದೇಶಗಳ ನಡುವೆ, ಭಾಷೆ-ಭಾಷೆಗಳ ನಡುವೆ, ಧರ್ಮ-ಧರ್ಮಗಳ ನಡುವೆ, ಬಣ್ಣ-ಬಣ್ಣಗಳ ನಡುವೆ ಎಷ್ಟೊಂದು ಸಂಘರ್ಷಗಳು? ಅಬ್ಬಾ ಇಂದು ಈ ಕಾರಣಗಳಿಂದ ನಮ್ಮ ಬದುಕು ಶಾಂತಿ ಕಳೆದುಕೊಂಡಿದೆ. ಸೌಹಾರ್ದತೆಯ ಸೌಧ ಕುಸಿಯುತ್ತಿದೆ. ಉಕ್ರೇನ್ ಮತ್ತು ರಷಿಯಾ ಯುದ್ಧ, ಸಾವು-ನೋವು ಜಗತ್ತನ್ನೇ ತಲ್ಲಣಗೊಳಿಸಿದೆ. ಮಾನವ ಸೃಷ್ಟಿಯ ಅಣುಬಾಂಬ್ ಯಾವಾಗ ಯಾವ ದೇಶವನ್ನು ನಿರ್ನಾಮ ಮಾಡುತ್ತೋ ಬಲ್ಲವರಾರು? ದ್ವೇಷಾಸೂಯೆಗಳೇ ಇಂದಿನ ಮಾನವರ ಹೃದಯವನ್ನಾಳುತ್ತಿದೆ. ಮಾನವೀಯತೆಯನ್ನು ಕಳೆದುಕೊಂಡ ಮಾನವನ ಪ್ರಗತಿ ದುರಂತವನ್ನು ಹುಟ್ಟು ಹಾಕುತ್ತಿರುವುದು ವರ್ತಮಾನದ ವಿಷಾದ. ಇಂತಹ ಪ್ರಕ್ಷುಬ್ಧ ವಾತಾವರಣದಲ್ಲಿ ಮತ್ತೆ ಮತ್ತೆ ನಮಗೆ ಶರಣ ಸಾಹಿತ್ಯ ಅತ್ಯಂತ ಅವಶ್ಯಕ ಎನಿಸುತ್ತದೆ. ಶರಣರು ರಚಿಸಿದ ವಚನ ಸಾಹಿತ್ಯದಲ್ಲಿ ಬಹಳಷ್ಟು ಶಾಂತಿ-ಸೌಹಾರ್ದತೆಯ ಅಂಶಗಳು ಹರಳುಗಟ್ಟಿವೆ ಎಂದರೆ ಕದಡಿದ ಮನಗಳಿಗೆ ಸಮಾಧಾನ ಹೇಳುವ, ಸಾಂತ್ವನ ಮಾಡುವ ಔಷಧೀಯ ಗುಣಗಳಿವೆ. ಅಧರಕ್ಕೆ ಕಹಿ ಎನಿಸಿದರೂ ಉದರಕ್ಕೆ ಸಿಹಿಯಾಗಿ ಮನದ ಬೇಗುದಿಗೆ ಮುಲಾಮಿನಂತಿವೆ.
ನೆಮ್ಮದಿಯ ಶಾಂತಿಯುತ ಬದುಕಿಗೆ ಹಾತೊರೆದ 12 ನೇಯ ಶತಮಾನದ ಶರಣರು ಸಹಜವಾದ ಬದುಕನ್ನು ಬದುಕಿ ಜೀವನವನ್ನು ಸುಂದರವಾಗಿಸಿಕೊಂಡವರು. ಆ ವಿಧಾನವನ್ನು ತುಂಬಾ ಅಚ್ಚುಕಟ್ಟಾಗಿ ಶರಣ ಹಡಪದ ಅಪ್ಪಣ್ಣನವರ ಒಂದು ವಚನ ಸಾಕ್ಷೀಭೂತವಾಗುತ್ತದೆ.
ಜಗದೊಳಗೆ ಹುಟ್ಟಿದವರೆಲ್ಲ ಹಗರಣಿಗರಾಗಿ ಹುಟ್ಟಿದರಲ್ಲದೆ,
ಜಗವ ಗೆಲ್ಲಲರಿಯದೆ, ನಗೆಗೆಡೆಯಾಗಿ ಹೋದರು.
ಎಮ್ಮ ಶರಣರು ಅಂತಲ್ಲ ಕೇಳಿರಣ್ಣಾ.
ಜಗದಲ್ಲಿಯೇ ಹುಟ್ಟಿ, ಜಗದಲ್ಲಿಯೇ ಬೆಳೆದು,
ಜಗದಂತೆ ಇದ್ದು, ಈ ಜಗವ ಗೆದ್ದು ಹೋಗುವರು.
ನಿಗಮ ಶಾಸ್ತ್ರ ಸಾಕ್ಷಿಯಾಗಿ, ಚೆನ್ನಮಲ್ಲೇಶ್ವರ ನಿನಗಾಯಿತ್ತಯ್ಯಾ.
ಅಂತಪ್ಪ ಚೆನ್ನಮಲ್ಲೇಶ್ವರನ ಪಾದವಿಡಿದು,
ಅವರು ಹೋದ ಹಾದಿಗೊಂಡು ಹೋಗುವನಲ್ಲದೆ,
ಈ ಮೇದಿನಿಯೊಳಗೆ ಕಾಮಕಾಲಾದಿಗಳ ಬಲೆಯೊಳಗೆ
ಸಿಕ್ಕಿಬಿದ್ದು ಹೋದೆನಾದರೆ,
ನಿಮ್ಮ ಪಾದಕ್ಕೆ ಅಂದೇ ದೂರವಯ್ಯಾ.
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-389/ವಚನ ಸಂಖ್ಯೆ-157)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:
ಹಗರಣಿಗ: ಹರಟೆಖೋರ, ವಿವಾದಾತ್ಮಕ ಪ್ರಕರಣಗಳಲ್ಲಿ ತೊಡಗಿಕೊಂಡವರು.
ನಿಗಮ: ವೇದ ಅಥವಾ ಶೃತಿ, ಆಗಮ ಸಿದ್ಧಾಂತ.
ಮೇದಿನಿ: ಸಚರಾಚರ ಎಲ್ಲವನ್ನೂ ಒಳಗೊಂಡ ಪೃಥ್ವಿ, ಭೂಮಿ.
ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ ಮಹಾನ್ ಚಕ್ರವರ್ತಿಗಳು ಕಾಣಿಸಿಕೊಳ್ಳುತ್ತಾರೆ. ಸಾಮ್ರಾಜ್ಯದ ಆಸೆಗೆ ಯುದ್ಧ ಮಾಡುತ್ತಾ ರಕ್ತಪಾತ ಮಾಡಿ ಅನೇಕ ಸಾವು-ನೋವುಗಳಿಗೆ ಕಾರಣರಾಗಿದ್ದಾರೆ. ಇಂದಿನ ದಿನಮಾನದಲ್ಲಿಯೂ ಎಷ್ಟೊಂದು ಹಗರಣಗಳನ್ನು ನೋಡುತ್ತೇವೆ. ಎಲ್ಲಾ ರಂಗಗಳಲ್ಲಿಯೂ ಹಗರಣಗಳ ಸರಮಾಲೆಯೇ ಕಾಣ ಸಿಗುತ್ತದೆ. ಹೆಣ್ಣಿನ ಹಗರಣ, ಮಣ್ಣಿನ ಹಗರಣ, ಭೋಫೋರ್ಸ್ ಹಗರಣ, ಮೇವು ಹಗರಣ, ಲೋಹ ಹಗರಣ ಪಟ್ಟಿ ಮಾಡುತ್ತಾ ಹೋದರೆ ಬೆಳೆಯುತ್ತಲೇ ಹೋಗುತ್ತದೆ. ಎಷ್ಟೊಂದು ಲಂಚಾವತಾರ, ಎಷ್ಟೊಂದು ಭ್ರಷ್ಟಾಚಾರ, ಎಷ್ಟೊಂದು ಭಯೋತ್ಪಾದನೆ, ಎಷ್ಟೊಂದು ಕೋಮು ಗಲಭೆ, ಎಷ್ಟೊಂದು ಅತ್ಯಾಚಾರ, ಎಷ್ಟೊಂದು ಕೊಲೆ-ಸುಲಿಗೆ ಒಂದೇ-ಎರಡೇ? ಇಡೀ ಜಾಗತಿಕ ಮಟ್ಟದಲ್ಲಿ ಇವೆಲ್ಲವುಗಳಿಂದ ಅಶಾಂತಿ, ಅರಾಜಕತೆ, ಮಾನಸಿಕ ಕ್ಷೋಭೆ, ತಲ್ಲಣ-ತಳಮಳ, ಭಯ-ಆತಂಕ ಮನೆ ಮಾಡಿವೆ. “ಮಣ್ಣನ್ನು ಆಳಿದವರು ಮಣ್ಣಾಗಿ ಹೋದರು, ಮನವನ್ನು ಆಳಿದವರು ಮನದಲ್ಲಿ ಅಜರಾಮರರಾದರು”. ವಿಪರೀತ ಬುದ್ಧಿ ವಿನಾಶಕ್ಕೆ ಕಾರಣ ಎಂಬಂತೆ ಏನೆಲ್ಲಾ ಮಾನವರು ಮಾಡಿದ ಸಾಧನೆಗಳು ಇಂದು ಅವರಿಗೇ ಮಾರಕ ಆಗಿವೆ. ಚಂದ್ರಲೋಕ, ಮಂಗಳಲೋಕ ಕಂಡು ಬಂದ ಮಾನವರಿಗೆ ತಮ್ಮ ಬದುಕನ್ನೇ ಸುಂದರವಾಗಿ ಕಟ್ಟಿಕೊಳ್ಳಲು ಆಗದೆ ತೊಳಲಾಡುವಂತಾಗಿದೆ. ಅದಕ್ಕೆ ಶರಣ ಹಡಪದ ಅಪ್ಪಣ್ಣನವರ ಈ ವಚನ “ಜಗದೊಳಗೆ ಹುಟ್ಟಿದವರೆಲ್ಲ ಹಗರಣಿಗರಾಗಿ ಹುಟ್ಟಿದರಲ್ಲದೆ, ಜಗವ ಗೆಲ್ಲಲರಿಯದೆ, ನಗೆಗೆಡೆಯಾಗಿ ಹೋದರು” ಎಂಬಲ್ಲಿ ಏನೆಲ್ಲಾ ಮಾಡಿ, ವಿದ್ಯೆ ಕಲಿತು. ಸಾಮ್ರಾಜ್ಯ ಗೆದ್ದು, ಸಂಪತ್ತು ಗಳಿಸಿದರೂ ಬದುಕನ್ನು ಗೆಲ್ಲಲು ಆಗಲಿಲ್ಲ ಮತ್ತು ನಗೆಪಾಟಲಿಗೆ ಒಳಗಾದರು. ಆದರೆ ಮನವನ್ನಾಳಿದ ನಮ್ಮ ಶರಣರು ಮಾತ್ರ ಇದೇ ಜಗತ್ತಿನಲ್ಲಿ ಹುಟ್ಟಿ ಇದೇ ಜಗತ್ತಿನಲ್ಲಿಯೇ ಬೆಳೆದು ಜಗದಂತೆಯೇ ಇದ್ದು ಈ ಜಗತ್ತನ್ನೇ ಗೆದ್ದವರು. ಜಗತ್ತನ್ನು ಗೆಲ್ಲುವ ಶಕ್ತಿ ಇರುವದು ಪ್ರೀತಿಗೆ ಮಾತ್ರವೇ ಹೊರತು ದ್ವೇಷ-ಅಸೂಯೆಗಳಿಗಲ್ಲ. ಬಸವಾದಿ ಶರಣರು ಇಂತಹ ಜೀವ ಪ್ರೀತಿಯನ್ನು ಧಾರೆ ಎರೆದು ಶಾಂತಿ-ನೆಮ್ಮದಿಯನ್ನು ನೆಲೆಗೊಳಿಸಲು ಪ್ರಯತ್ನಿಸಿದರು. ಸಂಯಮ, ತಾಳ್ಮೆ, ಪ್ರೀತಿ, ಮಮತೆ, ವಿಶ್ವಾಸ, ನಂಬಿಕೆಗಳು, ಮಾನವೀಯ ಮೌಲ್ಯಗಳನ್ನು ಧರೆಯ ಮೇಲೆ ಬಿತ್ತಿ ಬೆಳೆದು ಶರಣರು ಸಾಮರಸ್ಯದ ಹೂವುಗಳನ್ನು ಅರಳಿಸಿದ್ದರು. ಅದಕ್ಕೆಂದೇ ಶರಣ ಹಡಪದ ಅಪ್ಪಣ್ಣನವರು “ಈ ಮೇದಿನಿಯೊಳಗೆ ಕಾಮಕಾಲಾದಿಗಳ ಬಲೆಯೊಳಗೆ ಸಿಕ್ಕಿಬೀಳುವುದಿಲ್ಲ” ಎನ್ನುತ್ತಲೇ ನಿಜವಾದ ಶಾಂತಿ-ಸಾಮರಸ್ಯ ನೆಲೆಸುವುದು ಕಾಮ-ಕಾಲಾದಿಗಳ ಬಲೆಯಿಂದ ಮುಕ್ತರಾದಾಗ ಮಾತ್ರ ಎಂಬುದನ್ನು ತಮ್ಮ ವಚನದಲ್ಲಿ ನೆಲೆಗೊಳಿಸಿದ್ದಾರೆ.
ಸಮೂಹ ನಾಯಕತ್ವವನ್ನು ನೀಡಿ ಬಸವಣ್ಣನವರು ಅಂದೇ ಸಾಂಸ್ಕೃತಿಕ ನಾಯಕರಾಗಿದ್ದರು. ಅದಕ್ಕಾಗಿಯೆ ಇಂದು ನಾವು ಅವರಿಗೆ “ಸಾಂಸ್ಕೃತಿತ ನಾಯಕ” ಎಂದು ಕರೆದು ಸಂಭ್ರಮಿಸುತ್ತಿದ್ದೇವೆ. ಜಗತ್ತಿನ ಯಾವ ದೇಶಕ್ಕೂ ಸಂವಿಧಾನದ ಕನಸೂ ಬೀಳದ ಕಾಲಘಟ್ಟದಲ್ಲಿ ಬಸವಣ್ಣನವರು ಸುಮಾರು 900 ವರ್ಷಗಳ ಹಿಂದೆಯೇ ಎಲ್ಲ ಸ್ಥರದ ಕಾಯಕ ಜೀವಿಗಳಿಗೆ, ಎಲ್ಲ ಜಾತಿಯವರಿಗೆ, ಎಲ್ಲ ಮಹಿಳೆಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದ್ದರು. ವ್ಯಕ್ತಿ ಗೌರವ, ವ್ಯಕ್ತಿ ಸ್ವಾತಂತ್ರ್ಯದ ಅನುಭೂತಿ ಒದಗಿಸಿದ್ದರು. ಆದ್ದರಿಂದ ಕಲ್ಯಾಣ ಅಂದು ಯುದ್ಧಗಳಿಂದ ಹಾಗೂ ಹಿಂಸೆಗಳಿಂದ ಮುಕ್ತವಾಗಿತ್ತು. ಇವತ್ತು ಜಾಗತಿಕ ಶಾಂತಿ-ಸೌಹಾರ್ದತೆಗೆ ಬಸವಾದಿ ಶರಣರ ಈ ಎಲ್ಲ ವಿಚಾರಗಳೂ ಅವಶ್ಯಕವಾಗಿ ಬೇಕಾಗಿವೆ. ಬಸವಾದಿ ಶಿವಶರಣರು ಹಿಂಸೆ ಮತ್ತು ಯುದ್ಧಕ್ಕೆ ಬದಲಾಗಿ ಚಳುವಳಿ, ಕ್ರಾಂತಿ ಅಂದರೆ ಬದಲಾವಣೆಗೆ ಎನ್ನುವ ಮಾರ್ಗ ತಿಳಿದಿದ್ದರು. ಅತೃಪ್ತಿ, ಅಸಮಾಧಾನ, ಮೇಲು-ಕೀಳು, ಉಚ್ಛಾಟನೆಗೆ ಇಷ್ಟಲಿಂಗವನ್ನು ನೀಡಿದರು.
ಸ್ನೇಹಿತರೇ, ಶಾಂತಿ ಕದಡುತ್ತಿರುವುದು ಮುಖ್ಯವಾಗಿ ಸಂಪತ್ತಿನ ಕ್ರೋಢೀಕರಣ (ಡಾಕ್ಟರ್, ಇಂಜನೀಯರ್, ಪ್ರೊಫೇಸರ್ ಆಗುವುದೆಲ್ಲಾ ಹಣಗಳಿಕೆಗೆ. ಇಂದು ದಶಾವತಾರಗಳ ಕಾಲ ಮುಗಿದು ಹನ್ನೊಂದನೇ ಅವತಾರ ಪ್ರಾರಂಭವಾಗಿದೆ. ಅದೇ “ಹಣಾವತಾರ”. ಅದರ ಹಾವಳಿ ಇಂದು ಹೆಚ್ಚಾಗಿ ಮತ್ತೊಮ್ಮೆ ಸಮಾಜದಲ್ಲಿ ಬಡವ-ಶ್ರೀಮಂತ ಎಂಬ ವರ್ಗ ತಾರತಮ್ಯ ತಾರಕಕ್ಕೇರಿದೆ. “ಕುರುಡು ಕಾಂಚಾಣ ಕುಣಿಯುತಲಿತ್ತು ಕಾಲಿಗೆ ಬಿದ್ದವರ ತುಳಿಯುತಲಿತ್ತು” ಎನ್ನುವ ವರಕವಿ ಡಾ. ದ. ರಾ. ಬೇಂದ್ರೆಯವರ ಮಾತು ಅಕ್ಷರಶಃ ನಿಜವಾಗುತ್ತಿದೆ. ಆದರೆ ಹಣದ ಹಿಂದೆ ಬಿದ್ದವರು ಹೆಣವಾಗಿ ಹೋಗುತ್ತಿದ್ದಾರೆ. ಹಣ ಗಳಿಸುವುದೇ ಒಂದು ಹವ್ಯಾಸ ಹಾಗೂ ಗೀಳಾಗಿದೆ. ಇದರಿಂದ ಜಗತ್ತು ಶಾಂತಿ-ನೆಮ್ಮದಿ ಕಳೆದುಕೊಳ್ಳುತ್ತಿದೆ.
ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ,
ಹೊನ್ನು ಹೆಣ್ಣು ಮಣ್ಣಿಂಗೆ ಸತ್ತುದು ಕೋಟಿ.
ಗುಹೇಶ್ವರಾ ನಿಮಗಾಗಿ ಸತ್ತವರನಾರನೂ ಕಾಣೆ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-35/ವಚನ ಸಂಖ್ಯೆ-91)
ಎನ್ನುವ ಅಲ್ಲಮ ಪ್ರಭುಗಳ ಮಾತು ಸತ್ಯವಾದುದಾಗಿದೆ. ನಾವು ಎಷ್ಟು ಗಳಿಸಿದರೇನು? ಒಬ್ಬ ವ್ಯಕ್ತಿಯ ಜೀವಿತಕ್ಕೆ ಲೆಕ್ಕಾಚಾರ ಹಾಕಿದರೆ ಎಷ್ಟು ಬೇಕು? ಎಂಬುದಕ್ಕೆ ಶರಣ ಮೋಳಿಗೆ ಮಾರಯ್ಯನವರ ಒಂದು ವಚನ ಅತ್ಯಂತ ಸರಳ ಸೂತ್ರವನ್ನು ನೀಡುತ್ತದೆ.
ಆನೆ ಕುದುರೆ ಭಂಡಾರವಿರ್ದಡೇನೊ?
ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ.
ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ.
ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ?
ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ.
ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ,
ನಿಃಕಳಂಕ ಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಎಂಟು-2021/ಪುಟ ಸಂಖ್ಯೆ-560/ವಚನ ಸಂಖ್ಯೆ-1504)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.
ಪಡಿ: ಧಾನ್ಯವನ್ನು ಅಳೆಯುವ ಒಂದು ಸಾಧನ.
ಆನೆ, ಕುದುರೆ, ಭಂಡಾರ ಎಷ್ಟಿದ್ದರೂ, ಎಷ್ಟೇ ಅಷ್ಟ ಐಶ್ವರ್ಯವಿದ್ದರೂ ಉಣ್ಣುವುದು ಒಂದು ಪಡಿಯಷ್ಟು ಅಂದರೆ ಒಂದು ಹಿಡಿಯಷ್ಟು ಅಕ್ಕಿಯ ಅನ್ನ, ಒಂದು ಲೋಟ ಹಾಲು, ಮಲಗುವುದಕ್ಕೆ ಅರ್ಧ ಮಂಚ ಸಾಕು. ಇಷ್ಟಕ್ಕೇ ನಾವು ಬಡಿದಾಡಿ ಇಡೀ ಬದುಕನ್ನೇ ಆಶಾಂತಿಯಿಂದ ಕಳೆಯುತ್ತೇವೆ. ಮಕ್ಕಳಿಗೆ, ಮೊಮ್ಮಕ್ಕಳಿಗೆ ಎಂದು ಮೂರು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡುತ್ತೇವೆ. ಸತ್ತ ಬಳಿಕ ಗಳಿಸಿದ ಭೂಮಿ, ಒಡವೆ ಏನಾಗುವುದೋ ಕಂಡವರಾರು. ಹೆಂಡತಿ-ಮಕ್ಕಳು ಎನ್ನುವ ವ್ಯಾಮೋಹ ಇರುವವರೆಗೆ ಮಾತ್ರ. ಸತ್ತಾಗ ಯಾರೂ ಸಂಗಡ ಬರುವುದಿಲ್ಲ. ಇದೇ ಬದುಕಿನ ಅಂತಿಮ ಸತ್ಯ. ಆದರೆ ಜಗತ್ತು ಇದನ್ನು ಅರಿಯದೇ ಅಲ್ಲಮ ಪ್ರಭುಗಳು ತಮ್ಮ ಒಂದು ವಚನದಲ್ಲಿ ಹೇಳುವ ಹಾಗೆ:
ಕೊಟ್ಟ ಕುದುರೆಯನೇರಲರಿಯದೆ
ಮತ್ತೊಂದು ಕುದುರೆಯನೇರ ಬಯಸುವರು,
ವೀರರೂ ಅಲ್ಲ, ಧೀರರೂ ಅಲ್ಲ, ಇದು ಕಾರಣ,
ನೆರೆ ಮೂರು ಲೋಕವೆಲ್ಲವೂ ಹಲ್ಲಣವ ಹೊತ್ತುಕೊಂಡು,
ತೊಳಲುತ್ತ ಇದ್ದಾರೆ.
ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರು?
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-47/ವಚನ ಸಂಖ್ಯೆ-127)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:
ಹಲ್ಲಣ: ಕುದುರೆಯ ಬೆನ್ನ ಮೇಲೆ ಹಾಸುವ ಜೀನು, ತಡಿ.
ಹಲ್ಲಣವ ಹೊತ್ತುಕೊಂಡು ಕುದುರೆ ಬಳಲುವ ಹಾಗೆ ಬಳಲುತ್ತಿದ್ದಾರೆ. ಅತಿಯಾದ ಆಸೆಯೇ ಜಗತ್ತಿನ ದುಃಖಕ್ಕೆ ಕಾರಣವಾಗಿದೆ. ಶರಣರು ನೀಡಿದ ಇಂತಹ ಸಂದೇಶಗಳು ವಿಶ್ವ ಶಾಂತಿಗೆ ಮುನ್ನುಡಿ ಬರೆದಂತಿವೆ. ಕಾಶ್ಮೀರ ದೇಶದ ಅರಸ ಮಹಾದೇವ ಭೋಪಾಲ ದಂಪತಿಗಳು ಐಶ್ವರ್ಯದ ಮಧ್ಯ ಇದ್ದು ಬಂದವರು. ಆ ಭೌತಿಕ ಸಿರಿ ನೀಡಲಾರದ ಸುಖವನ್ನು ಬಸವಣ್ಣನವರ ಅನುಭವ ಮಂಟಪದಲ್ಲಿ ಕಂಡವರು. ಸರಳ, ಸಹಜ ಶರಣರಾಗಿ ಮೋಳಿಗೆ ಮಾರಯ್ಯ ಮತ್ತು ಮೋಳಿಗೆ ಮಹಾದೇವಿ ಶರಣ ದಂಪತಿಗಳಾಗಿ ಅನುಭವಿಸಿದ ಆ ಆತ್ಮ ಸುಖವನ್ನೇ ತಮ್ಮ ಅನುಭಾವದಲ್ಲಿ ಹೇಳಿದ್ದಾರೆ. ಇಂದು ಹಣದಾಸೆಗೆ ಹಡೆದ ಮಕ್ಕಳನ್ನು ವಿದೇಶಕ್ಕೆ ಕಳಿಹಿಸಿ ಕೊನೆಗಾಲದಲ್ಲಿ ವೃದ್ಧಾಶ್ರಮದಲ್ಲಿ ಪರಿತಪಿಸುತ್ತಿರುವ ಎಷ್ಟೋ ತಂದೆ-ತಾಯಿಗಳು ಈ ಸತ್ಯವನ್ನು ಅರಿಯಲಾಗಲಿಲ್ಲ. ಕೊನೆಗೆ ಅಪ್ಪ-ಅಮ್ಮನ ಅಂತಿಮ ಸಂಸ್ಕಾರಕ್ಕೂ ಕೂಡ ಮಕ್ಕಳು ಬರದೇ ಇರುವಂಥ ದುರಂತವನ್ನು ಕಾಣುತ್ತಿದ್ದೇವೆ. ಬದುಕಲು ಹಣ ಬೇಕು ನಿಜ, ಅದರೆ ಅದು ನಮ್ಮನ್ನೇ ಹೆಣವಾಗಿಸುವಷ್ಟು ಮಟ್ಟಿಗೆ ನಾವು ಅದರ ಅಡಿಯಾಳಾಗಿ ಶಾಂತಿ ಕಳೆದುಕೊಳ್ಳಬಾರದೆಂಬುದನ್ನು ಸರಿ ಸುಮಾರು 900 ವರ್ಷಗಳ ಹಿಂದೆಯೇ ಶರಣರು ಹೇಳಿದ್ದಾರೆ.
ಇವತ್ತು ಇಂದಿಗೂ ಎಷ್ಟೋ ಆರ್ಥಿಕ ತಜ್ಞರ ಸಲಹೆ, ಮಾರ್ಗದರ್ಶನ ಅತ್ಯಂತ ಉನ್ನತ ಮಟ್ಟದಲ್ಲಿದ್ದರೂ ಜಗತ್ತು ಇವತ್ತು Economic Imbalance ನಿಂದ ಅಂದರೆ ಆರ್ಥಿಕ ಅಸಮತೋಲನದಿಂದ ಬಳಲುತ್ತಿದೆ. ಸಂಗ್ರಹ ನೀತಿಯಿಂದ ಜಗತ್ತು ಉರಿಯುತ್ತಿದೆ. ಶಿವಶರಣರು ಅಂದೇ “ಅಸಂಗ್ರಹ ತತ್ವ” ವನ್ನು ಪ್ರತಿಪಾದಿಸಿದ್ದರು.
ಆಸೆಯೆಂಬುದು, ಅರಸಿಂಗಲ್ಲದೆ,
ಶಿವಭಕ್ತರಿಗುಂಟೆ ಅಯ್ಯಾ?
ರೋಷವೆಂಬುದು ಯಮದೂತರಿಗಲ್ಲದೆ,
ಅಜಾತರಿಗುಂಟೆ ಅಯ್ಯಾ?
ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ.
ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ
ದೂರ ಮಾರಯ್ಯ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-268/ವಚನ ಸಂಖ್ಯೆ-708)
ಅವಶ್ಯಕತೆಯನ್ನೂ ಮೀರಿ ಪದಾರ್ಥಗಳನ್ನು ಸಂಗ್ರಹಿಸಬಾರದು. ಅವತ್ತಿನ ಕಾಯಕದಿಂದ ಬಂದ ದ್ರವ್ಯದಲ್ಲಿ ಅಂದಿನ ಜೀವನವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಜಾಣತನ. ಆಸೆ, ರೋಷಗಳನ್ನು ಮನುಷ್ಯರು ತಮ್ಮ ಇತಿಮಿತಿಯಲ್ಲಿ ಇಟ್ಟುಕೊಂಡು ಬದುಕಿದರೆ ಬದುಕು ಸುಂದರವಾಗಿರುತ್ತದೆ. ಶಾಂತಿ-ನೆಮ್ಮದಿಗಳಿಂದ ಕೂಡಿರುತ್ತದೆ. ಕಾರಣ ಆದಷ್ಟೂ ಮನುಷ್ಯರು ಅತಿ ಆಸೆಗಳಿಂದ, ಅತಿ ಮೋಹಗಳಿಂದ ದೂರ ನಿಲ್ಲಬೇಕು. ಅದನ್ನೇ ಶರಣೆ ಆಯ್ದಕ್ಕಿ ಲಕ್ಕಮ್ಮನವರು ಹೇಳುತ್ತಾರೆ. “ಈಸಕ್ಕಿಯಾಸೆ ನಿಮಗೇಕೆ?” ಎಂದು ಪತಿಯನ್ನು ಪ್ರಶ್ನಿಸುವ ಮೂಲಕ ಶರಣೆ ಆಯ್ದಕ್ಕಿ ಲಕ್ಕಮ್ಮನವರ ಈ ವಚನ ಇಡೀ ಭ್ರಷ್ಟಾಚಾರ ವ್ಯವಸ್ಥೆಯನ್ನೇ ಪ್ರಶ್ನಿಸುವಂತಿದೆ. ಲಂಚತನ, ಭ್ರಷ್ಠ ವ್ಯವಸ್ಥೆಗೆ ಮನುಷ್ಯರ ಅತಿಯಾಸೆಯೇ ಕಾರಣ. ಗ್ರಹ ಜೀವನದಲ್ಲಿ ಪತಿಯನ್ನು ಲಂಚತನ, ಭ್ರಷ್ಠತೆಗೆ ತಳ್ಳುವಲ್ಲಿ ಮಹಿಳೆಯರ ಆಡಂಬರ, ಐಷಾರಾಮಿ ಜೀವನದ ಹಪಹಪಿಯೇ ಕಾರಣವಾಗುವ ಸಾಧ್ಯತೆಯ ಭಯವೂ ಇದೆ. ಶರಣೆ ಆಯ್ದಕ್ಕಿ ಲಕ್ಕಮ್ಮನವರಂತಹ ಮನೋಭಾವದ ಒಬ್ಬೊಬ್ಬ ಗೃಹಿಣಿ ಒಂದೊಂದು ಮನೆಯಲ್ಲಿ ಇದ್ದರೆ ಸಾಕು ಲೋಕಾಯುಕ್ತರ ಅವಶ್ಯಕತೆಯೇ ಬೇಕಾಗುತ್ತಿರಲಿಲ್ಲ.
ಈ ಕಾರಣದಿಂದ 12 ನೇ ಶತಮಾನದಲ್ಲಿ ಶಿವಶರಣರು “ದಾಸೋಹ” ದ ಮಹಾಪರ್ವವನ್ನೇ ಜಗತ್ತಿಗೆ ಸಾದರಪಡಿಸಿದರು. ದಾಸೋಹವೆಂಬುದು ಬೇರೇನೂ ಆಗಿರದೆ ಅದೊಂದು ಸಾಮಾಜಿಕ ನಿಧಿಯಾಗಿತ್ತು. ಆರ್ಥಿಕ ಅಸಮಾನತೆಯನ್ನು ದೂರ ಮಾಡುವ ಒಂದು ಅಚ್ಚುಕಟ್ಟಾದ ವ್ಯವಸ್ಥೆಯಾಗಿತ್ತು. ಸಮಾಜದಲ್ಲಿ:
- ಯೋಗ್ಯ ಉತ್ಪಾದನೆ: ಕಾಯಕ
- ಯೋಗ್ಯ ಬಳಕೆ: ಸೋಹಂ
- ಯೋಗ್ಯ ವಿತರಣೆ: ದಾಸೋಹಂ
ಇವುಗಳು ಮೂಲಕ ಸಮ ಹಂಚಿಕೆಯ ತತ್ವವನ್ನು ಪ್ರತಿಪಾದಿಸುವ ಮಂತ್ರವಾಗಿತ್ತು. ಇದರಿಂದ ಸಮಾಜದಲ್ಲಿ ಸಂಘಟನೆಗೆ ಬಲ ಬಂದಿತು. ಕಾಯಕ ಜೀವಿಗಳಿಗೆ, ಶ್ರಮ ಜೀವಿಗಳಿಗೆ ಒಂದು ಗೌರವ ದೊರೆಯಿತು. 19 ನೇ ಶತಮಾನದಲ್ಲಿ ಕಾರ್ಲ್ ಮಾರ್ಕ್ಸ್ ಹೇಳುವಂತೆ “ಜಗತ್ತಿನ ಇತಿಹಾಸವು ವರ್ಗ ಹೋರಾಟಗಳ ಇತಿಹಾಸ” ಎಂಬುದು ಸತ್ಯವಾದ ಮಾತು. ಇದು 12 ನೇ ಶತಮಾನದಲ್ಲಿ ಸಾಬೀತಾಗಿತ್ತು. ಬಸವಣ್ಣನವರ ನೇತೃತ್ವದಲ್ಲಿ ಕಾಯಕ ಜೀವಿಗಳ ಬಹು ದೊಡ್ಡ ಸಂಘಟನೆಯೇ ನಡೆದದ್ದು ಐತಿಹಾಸಿಕ ದಾಖಲಾರ್ಹ ಸಂಗತಿ. ಕಾಯಕ ಜೀವಿಗಳಿಂದಲೇ ನಾಡಿನ ಅಭಿವೃದ್ಧಿ ಸಾಧ್ಯ ಎಂಬ ತಾತ್ವಿಕತೆ ಅರಿತಿದ್ದರಿಂದಲೇ ಬಸವಣ್ಣನವರು ಕಾಯಕ ಜೀವಿಗಳನ್ನು ಪ್ರೀತಿಸಿದರು. ಕಾಯಕವೇ ಕೈಲಾಸ ಎಂದು ಕಾಯಕಕ್ಕೆ ಮಹತ್ವ ನೀಡಿ ಇಂದಿನ Labor Dignity Act ಗೆ ಅಂದೇ ಮುನ್ನುಡಿಯನ್ನು ಬರೆದದ್ದು ಬಸವಣ್ಣನವರ ಅದ್ಭುತ ಜ್ಞಾನಶಕ್ತಿಗೆ ಹಿಡಿದ ಕನ್ನಡಿ. ಇದನ್ನು ಪ್ರಗತಿಪರರೆಂದು ತಮ್ಮನ್ನು ತಾವೇ ಕರೆದುಕೊಳ್ಳುವವರು ತಿಳಿದುಕೊಳ್ಳಬೇಕಿದೆ. ಡಾ. ಬಿ. ಕೃಷ್ಣಮೂರ್ತಿಯೆಂಬ ಮನೋ ವಿಜ್ಞಾನಿ ಹೇಳುವಂತೆ “ಸಮಯವಿಲ್ಲ ನನಗೆ ನನ್ನ ಅರಿಯಲು ಸದಾ ಸ್ವತಂತ್ರ ನಾ ಧಣಿಗಳಿಗಾಗಿ ದುಡಿಯಲು” ಎಂಬ ಮನೋಭಾವನೆಯಾಚೆ ತಮಗಾಗಿ ತಮ್ಮ ಹಕ್ಕಿಗಾಗಿ ಬದುಕಬೇಕೆಂಬ ಅರಿವು ಹುಟ್ಟಿದ್ದರ ಪರಿಣಾಮವೇ ಇಂದು ನಾವು ಆಚರಿಸುವ ವಿಶ್ವ ಕಾರ್ಮಿಕ ದಿನಾಚರಣೆ (ಮೇ-1), ವಿಶ್ವ ಮಹಿಳಾ ದಿನಾಚರಣೆ (ಮಾರ್ಚ್-8) ಎಂಬುದು ಈಗಿನ ಸತ್ಯ. ಆದರೆ 12 ನೇ ಶತಮಾನದಲ್ಲಿಯೇ ಬಸವಾದಿ ಶಿವಶರಣರು ವಿಶ್ವದ ಮೊಟ್ಟ ಮೊದಲ ಸಂಸತ್ತು ಎಂದೆನಿಸಿಕೊಂಡ ಅನುಭವ ಮಂಟಪ ಕಟ್ಟಿದರು. ಇಲ್ಲಿ ಮಹಿಳೆಯರೂ ಸೇರಿದಂತೆ 770 ಅಮರ ಗಣಂಗಳಿಗೆ ಸಮಾನ ನೆಲೆ ಒದಗಿಸಿದರು.
ಜಾಗತಿಕ ಅಶಾಂತಿಗೆ, ನೆಮ್ಮದಿಗೆ ಮಾರಕವಾದದ್ದು ಪರಿಸರ ನಾಶ. ಪರಿಸರದ ಮೇಲೆ ಮಾನವನ ದಾಳಿ. 12 ನೇ ಶತಮಾನದಲ್ಲಿ ಶಿವಶರಣರಲ್ಲಿದ್ದ ಪರಿಸರ ಪ್ರೇಮ ನೋಡಿದರೆ ಅವರ ವಿಚಾರಗಳಿಗೆ ನಿಜಕ್ಕೂ ವಿಶ್ವವೇ ತಲೆಬಾಗಬೇಕಾಗುತ್ತದೆ.
ಮರ ಗಿಡು ಬಳ್ಳಿ ಧಾನ್ಯಂಗಳ ಬೆಳಸೆಲ್ಲವ ತರಿತರಿದು
ಪ್ರಾಣವ ಕೊಂದುಂಡು,
ಶರೀರವ ಹೊರೆವ ದೋಷಕ್ಕೆ
ಇನ್ನಾವುದು ವಿದ್ಥಿಯಯ್ಯಾ?
ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ
ಜೀವಜಾಲದಲ್ಲಿದೆ ಚರಾಚರವೆಲ್ಲ.
ಅದು ಕಾರಣ,
ಕೂಡಲಸಂಗನ ಶರಣರು
ಲಿಂಗಕ್ಕರ್ಪಿಸಿ ಪ್ರಸಾದವ ಕೊಂಡು
ನಿರ್ದೋಷಿಗಳಾಗಿ ಬದುಕಿದರು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-391/ವಚನ ಸಂಖ್ಯೆ-1307)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:
ಬೆಳಸ: ಬೆಳೆ, ಪೈರು.
ಹೀಗೆ ಸಸ್ಯಗಳಿಗೂ ಜೀವವಿದೆ. ಮರ, ಗಿಡ, ಬಳ್ಳಿಗಳಲ್ಲಿ ದವಸ, ಧಾನ್ಯ, ಫಲ ಮುಂತಾದವುಗಳನ್ನು ಕತ್ತರಿಸಿ ಕತ್ತರಿಸಿ ಅವುಗಳ ಪ್ರಾಣವನ್ನೇ ಕೊಂದುಂಡು ಶರೀರ ಹೊರೆಯುವುದು ದೋಷವೇ. ಪ್ರಾಣಿ ಹಿಂಸೆಯಂತೆ ಇದೂ ಕೂಡ ಹಿಂಸೆಯೆ. ಅದಕ್ಕೆ ಶರಣರು ಹಿಂಸೆಯಿಂದ ದೂರವಿರಲು ಬಯಸಿದರು. ಉಣ್ಣುವ ಆಹಾರ ಪ್ರಸಾದವಾಗಬೇಕು, ನಿರ್ದೋಷವಾಗಬೇಕೆಂದು ಲಿಂಗಕ್ಕೆ ಅರ್ಪಿಸಿದರು. ಇದು ಮಾನವರ ಮನಸ್ಸು ಹಿಂಸೆಯಿಂದ ಮುಕ್ತವಾಗುವ ಮಾರ್ಗ. ಸಸ್ಯಗಳಿಗೂ ಹಿಂಸೆಯಾಗಬಾರದು ಎಂಬುದೇ ಧ್ಯೇಯವಾದಾಗ ಪ್ರಾಣಿಹಿಂಸೆ, ಮಾನವ ಹಿಂಸೆಯನ್ನು ಶರಣ ಧರ್ಮ ಒಪ್ಪುವುದೇ? ಖಂಡಿತ ಇಲ್ಲಾ. ಶರಣ ಧರ್ಮ ಕೊಂದು ಧರ್ಮ ಕಟ್ಟುವುದಲ್ಲ. ಸಕಲ ಜೀವಿಗಳನ್ನೂ ಪ್ರೀತಿಸಿ ನಿಜಧರ್ಮ ಕಟ್ಟಲು ಶಿವಶರಣರು ಬಯಸಿದರು. ಅದಕ್ಕಾಗಿಯೇ ಅವರು ದಯವೇ ಧರ್ಮದ ಮೂಲವೆಂದು ಜಗತ್ತಿಗೆ ಶಾಂತಿಯ ದಯೆಯ ಧರ್ಮವನ್ನು ಪ್ರತಿಪಾದಿಸಿದರು.
ಇಂದಿನ ಕಾಲಘಟ್ಟದ ಅಶಾಂತಿಗೆ ಇನ್ನೊಂದು ಕಾರಣವೆಂದರೆ ದೇಹ ವ್ಯಾಮೋಹ ಅಂದರೆ Beauty Concept. ಇದು ಎಷ್ಟು ಅತಿರೇಕ ಆಗಿದೆಯೆಂದರೆ ಯಾರಿಗೂ ಮುಪ್ಪು ಬೇಡವಾಗಿದೆ. ಆದರೆ ಮುಪ್ಪು ಎಂಬುದು ಜೀವನದ ಒಂದು ಘಟ್ಟ. ಇದನ್ನು ತುಂಬಾ ಗೌರವದಿಂದ ಬರಮಾಡಿಕೊಳ್ಳಬೇಕು. ನಮಗೆ ಪ್ರಕೃತಿ ಸಹಜ ಜೀವನವೇ ಮುಖ್ಯ. ಯಯಾತಿ ತನ್ನ ಯೌವನ ಉಳಿಸಿಕೊಳ್ಳಲು ಮುಪ್ಪನ್ನೂ ಮುಂದೂಡಲು ಮಗನ ಯೌವನವನ್ನೇ ಬೇಡಿ ಪಡೆದನು. ಅದರಿಂದ ಮುಂದೆ ಅದೆಷ್ಟೋ ಮನೋಕ್ಷೋಭೆಗೆ ಒಳಗಾದನು. ನಾವು ಕೂಡ ಆಧುನಿಕ ಯಯಾತಿಗಳಾಗಲು ಹೊರಟಿದ್ದೇವೆ. ಆದರೆ ಈ ದೇಹ ಸೌಂದರ್ಯಕ್ಕಿಂತ ಅಂತರಂಗ ಸೌಂದರ್ಯಕ್ಕೆ ಬೆಲೆ ಹೆಚ್ಚು. ದೇಹ ಎಂಬುದು ಶಾಶ್ವತವಲ್ಲ. ಇದು ಕೆಟ್ಟು ಹೋಗುವುದು. ಕೆಡುವ ದೇಹವ ಒಪ್ಪಗೊಳಿಸಿಕೊಳ್ಳಲು ನಾವುಗಳು ಅದೆಷ್ಟು ಹೋರಾಡುತ್ತಿದ್ದೇವೆ. ಮುಪ್ಪು ಬಂದೀತೆಂದು ಅದೆಷ್ಟೂ ದುಃಖಿಗಳಾಗುತ್ತಿದ್ದೇವೆ, ಖಿನ್ನರಾಗುತ್ತಿದ್ದೇವೆ. ಇದು ಕೂಡಾ ಮನಸ್ಸಿನ ಅಶಾಂತಿಗೆ ಕಾರಣವಾಗುತ್ತವೆ. ಈ ದೇಹ ಮೋಹವನ್ನು ಸಲೀಸಾಗಿ ನೀಗಲು ಮತ್ತು ನೆಮ್ಮದಿಯನ್ನು ಹೊಂದಲು ಶರಣರು ತಮ್ಮ ವಚನಗಳಲ್ಲಿ ಅದ್ಭುತವಾದ ಸಂದೇಶಗಳನ್ನು ನೀಡಿದ್ದಾರೆ.
ವ್ಯಾಧನೊಂದು ಮೊಲನ ತಂದಡೆ
ಸಲುವ ಹಾಗಕ್ಕೆ ಬಿಲಿವರಯ್ಯಾ,
ನೆಲನಾಳ್ವನ ಹೆಣನೆಂದಡೆ
ಒಂದಡಕೆಗೆ ಕೊಂಬವರಿಲ್ಲ ನೋಡಯ್ಯಾ.
ಮೊಲನಿಂದ ಕರಕಷ್ಟ ನರನ ಬಾಳುವೆ,
ಸಲೆ ನಂಬೊ ನಮ್ಮ ಕೂಡಲಸಂಗಮದೇವನ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-45/ವಚನ ಸಂಖ್ಯೆ-158)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:
ವ್ಯಾದ: ಬೇಟೆಗಾರ.
ಹಾಗ: ನಾಣ್ಯ, ಬೆಲೆ, ಕಿಮ್ಮತ್ತು.
ಬಿಲಿ: ಮುಗಿಬೀಳು, ಉಳಿದುಕೊಳ್ಳು.
ಎಂಬ ಬಸವಣ್ಣನವರ ಈ ವಚನ ನರನ ಬದುಕಿನ ಕನಿಷ್ಠತೆಯನ್ನು ಎತ್ತಿ ಹೇಳುತ್ತದೆ. ಸತ್ತ ಮೊಲವಾದರೂ ಆಹಾರಕ್ಕೆ ಉಪಯೋಗಕ್ಕೆ ಬರುತ್ತದೆ. ಅದೇ ಮನುಷ್ಯನು ಸತ್ತರೆ ಆ ಹೆಣವನ್ನು ಒಂದು ಘಳಿಗೆಯೂ ಹೆಚ್ಚು ಹೊತ್ತು ಇಟ್ಟುಕೊಳ್ಳುವುದಿಲ್ಲ. ಅರಸನ ಹೆಣವಾದರೂ ಕೂಡ ಅದಕ್ಕೆ ಒಂದು ಅಡಿಕೆಯ ಬೆಲೆಯೂ ಇಲ್ಲ. ಕಾರಣ ಬದುಕಿದ್ದಾಗಲೇ ಅರ್ಥವತ್ತಾದ ಜೀವನ ನಡೆಸಬೇಕಾಗುತ್ತದೆ. ಸತ್ತಾಗ ಆ ಹೆಣಕ್ಕೆ ಯಾವುದೇ ಬೆಲೆ ಇಲ್ಲ. ಎಷ್ಟೇ ಶ್ರೀಮಂತಿಕೆ, ವಿದ್ಯಾವಂತಿಕೆ, ರೂಪ ಇದ್ದರೂ ಸತ್ತಾಗ ಯಾವುದೂ ಮುಖ್ಯವಾಗುವುದೇ ಇಲ್ಲ. ಕೊರೋನಾ ಸಂದರ್ಭದಲ್ಲಿ ನಾವೆಲ್ಲರೂ ಈ ಸಾವಿನ ಸತ್ಯವನ್ನು ಅರಿತಿದ್ದೇವೆ. ನಾವ್ಯಾರೂ ಶಾಶ್ವತವಾಗಿ ಈ ಭೂಮಿಯಲ್ಲಿ ಬದುಕಲು ಬಂದಿಲ್ಲ. ಅತಿಥಿಗಳಂತೆ ಇದ್ದು ಹೋಗಲು ಬಂದವರು. ಈ ಎಲ್ಲಾ ಸತ್ಯಗಳನ್ನು ಅರಿತವರು ಮಾತ್ರ ನಿಶ್ಚಿಂತರಾಗಿರಲು ಸಾಧ್ಯ. ಇಂತಹ ಸತ್ಯ ಸಂದೇಶಗಳನ್ನು ಶರಣರು ನಮಗೆ ನೀಡಿದ್ದಾರೆ.
ಆವ ವಿದ್ಯೆಯ ಕಲಿತಡೇನು
ಸಾವ ವಿದ್ಯೆ ಬೆನ್ನಬಿಡದು.
ಅಶನವ ತೊರೆದಡೇನು, ವ್ಯಸನವ ಮರೆದಡೇನು?
ಉಸುರ ಹಿಡಿದಡೇನು, ಬಸುರ ಕಟ್ಟಿದಡೇನು?
ಚೆನ್ನಮಲ್ಲಿಕಾರ್ಜುನದೇವಯ್ಯಾ,
ನೆಲ ತಳವಾರನಾದಡೆ ಕಳ್ಳನೆಲ್ಲಿಗೆ ಹೋಹನು?
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-30/ವಚನ ಸಂಖ್ಯೆ-65)
“ಆವ ವಿದ್ಯೆಯ ಕಲಿತಡೇನು ಸಾವ ವಿದ್ಯೆ ಬೆನ್ನಬಿಡದು” ಎಂಬ ವೈರಾಗ್ಯನಿಧಿ ಅಕ್ಕಮಹಾದೇವಿಯವರ ನುಡಿಗಳನ್ನು ಅರ್ಥ ಮಾಡಿಕೊಂಡಾಗ ಬದುಕಿನ ಹುಟ್ಟು-ಸಾವುಗಳನ್ನು ಸಹಜವಾಗಿ ಸ್ವೀಕರಿಸಲು ಸಾಧ್ಯವಾಗುತ್ತದೆ. ಇಂತಹ ಶರಣ ಸಂದೇಶಗಳು ಜಾಗತಿಕ ಶಾಂತಿಗೆ ನಾಂದಿ ಹಾಡುತ್ತವೆ.
ಇವತ್ತಿನ ರಾಜಕಾರಣವನ್ನು ನೋಡಿದರೆ ಅದು ಜಾತಿ ರಾಜಕಾರಣವಾಗಿದೆ, ದ್ವೇಷ ರಾಜಕಾರಣವಾಗಿದೆ. ಜನಜೀವನದ ಅಸ್ತವ್ಯಸ್ತತೆಗೆ, ಕೋಮು ಗಲಭೆಗೆ ಇಂತಹ ರಾಜಕಾರಣವೇ ಮೂಲ ಕಾರಣ. ಇದು ಜಾಗತಿಕ ಶಾಂತಿಗೆ ಮಾರಕ. ಯಾವ ಜಾತಿಯನ್ನು ಕಿತ್ತೆಸೆಯಬೇಕೆಂದು ಬಸವಾದಿ ಪ್ರಮಥರು ಸಾಕಷ್ಟು ಶ್ರಮವಹಿದ್ದರೋ ಅದು ಇಂದು ಮತ್ತಷ್ಟು ವ್ಯಾಪಕವಾಗಿ ರಕ್ತಬೀಜಾಸುರನಂತೆ ಎಲ್ಲೆಡೆ ವ್ಯಾಪಿಸುತ್ತಿದೆ. ಜಾತಿ ಎಲ್ಲಿದೆ? ಎಂಬುದರ ಸತ್ಯಕ್ಕೆ ಬಸವಣ್ಣನವರ ಈ ವಚನ ಕನ್ನಡಿ ಹಿಡಿದಂತಿದೆ.
ವ್ಯಾಸ ಬೋವಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ,
ಮಂಡೋದರಿ ಕಪ್ಪೆಯ ಮಗಳು.
ಕುಲವನರಸದಿರಿಂ ಭೋ!
ಕುಲದಿಂದ ಮುನ್ನೇನಾದಿರಿಂ ಭೋ!
ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದುರ್ವಾಸ ಮುಚ್ಚಿಗ, ಕಶ್ಯಪ ಕಮ್ಮಾರ,
ಕೌಂಡಿನ್ಯನೆಂಬ ಋಷಿ ಮೂರು ಭುವನರಿಯೆ ನಾವಿದ, ಕಾಣಿ ಭೋ!
ನಮ್ಮ ಕೂಡಲಸಂಗನ ವಚನವಿಂತೆಂದುದು:
ಶ್ವಪಚೋಪಿಯಾದಡೇನು, ಶಿವಭಕ್ತನೆ ಕುಲಜಂ ಭೋ!
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-159/ವಚನ ಸಂಖ್ಯೆ-589)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:
ಕಬ್ಬಿಲ: ಬೇಡ.
ನಾವಿದ: ನಾವಲಿಗ, ಕ್ಷೌರಿಕ.
ಶ್ವಪಚ: ಅಸ್ಪೃಶ್ಯ.
ಎಲ್ಲರೂ ಕೂಡಿದ್ದು ಎಲ್ಲರ ಕಲೆ, ಜ್ಞಾನ ಮೇಳವಿಸಿದ್ದುದೇ ಸುಂದರ ಸಮಾಜ, ಕ್ರಿಶ್ಚಿಯನ್, ಬೌದ್ಧ, ಜೈನ, ಸಿಖ್, ಹಿಂದೂ, ಮುಸ್ಲಿಂ, ಕರಿಯ-ಬಿಳಿಯ, ಹೆಣ್ಣು-ಗಂಡು ಎಲ್ಲ ಮೇಳೈಸಿದರೆ ಜಗತ್ತಿನ ಶ್ರೀಮಂತಿಕೆಗೆ ಬೆಲೆ. ಇದನ್ನು ತಿಳಿದು ಬದುಕುವ ಕಲೆಯನ್ನು ಶಿವಶರಣರು ಅವತ್ತೇ ನಮಗೆ ಕಲಿಸಿ ಕೊಟ್ಟಿದ್ದಾರೆ.
ಮುಂದುವರೆದು ನಮ್ಮ ದೇಹದ ಪ್ರತೀ ಅಂಗಾಂಗವೂ ಸರ್ವ ಧರ್ಮದಿಂದ, ಸರ್ವ ಜಾತಿಗಳಿಂದ ನಿರ್ಮಾಣವಾಗಿದೆ. ಎಲ್ಲಾ ಅಂಗಾಂಗ ಸೇರಿದರೆ ಒಂದು ಸುಂದರ ಶರೀರ (ದೇಹ) ಎನಿಸಿಕೊಳ್ಳಲು ಹೇಗೆ ಸಾಧ್ಯವೋ ಹಾಗೆ ಒಂದು ದೇಶ, ಒಂದು ವಿಶ್ವದ ರಚನೆ ಇರಬೇಕು ಎನ್ನುವ ಸತ್ಯವನ್ನು ಜಗತ್ತಿನ ಎಲ್ಲಾ ದೇಶಗಳೂ ತಿಳಿದುಕೊಳ್ಳಬೇಕಿದೆ. ಶರಣ ಸೊಡ್ಡಳ ಬಾಚರಸರ ವಚನ ಈ ಮಾತಿಗೆ ಎಷ್ಟು ಅದ್ಭುತವಾಗಿ ನಿಲ್ಲುತ್ತದೆ ಎಂಬುದನ್ನು ಕಾಣಬಹುದು.
ಶಿಖಿ ಬ್ರಾಹ್ಮಣ, ನಯನ ಕ್ಷತ್ರಿಯ,
ನಾಶಿಕ ಬಣಜಿಗ, ಅಧರ ಒಕ್ಕಲಿಗ,
ಕರ್ಣ ಗೊಲ್ಲ, ಕೊರಳು ಕುಂಬಾರ,
ಬಾಹು ಪಂಚಾಳ, ಅಂಗೈ ಉಪ್ಪಾರ,
ನಖ ನಾಯಿಂದ, ಒಡಲು ಡೊಂಬ,
ಬೆನ್ನು ಅಸಗ, ಚರ್ಮ ಬೇಡ,
ಪೃಷ್ಠಸ್ಥಾನ ಕಬ್ಬಿಲಿಗ, ಒಳದೊಡೆ ಹೊಲೆಯ,
ಮೊಣಕಾಲು ಈಳಿಗ, ಕಣಕಾಲು ಸಮಗಾರ,
ಮೇಗಾಲು ಮಚ್ಚಿಗ, ಚಲಪಾದವೆಂಬ
ಅಂಗಾಲು ಶುದ್ಧ ಮಾದಿಗ ಕಾಣಿರೊ!
ಇಂತೀ ಹದಿನೆಂಟುಜಾತಿ ತನ್ನಲಿ ಉಂಟು.
ಇವು ಇಲ್ಲಾಯೆಂದು ಜಾತಿಗೆ ಹೋರುವ ಅಜ್ಞಾನಿಗಳ
ನಮ್ಮ ಸೊಡ್ಡಳದೇವರು ಮೆಚ್ಚನಯ್ಯಾ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-328/ವಚನ ಸಂಖ್ಯೆ-817)
ಈ ವಚನವಂತೂ ಒಂದು ವಿಕಾಸ ಗೀತೆ ಹಾಗೂ ಆತ್ಮ ವಿಶ್ವಾಸಗೀತೆಯಂತಿದೆ. ಹದಿನೆಂಟು ಕುಲಗಳು ನಮ್ಮಲ್ಲಿರುವ ಅದ್ಭುತ ವಿಚಾರವನ್ನು ಶರಣ ಸೊಡ್ಡಳ ಬಾಚರಸರು ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ ಎನ್ನುವದೇ ಚೋದ್ಯ.
ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯೆಂದರೆ “ಎಲ್ಲರನ್ನೂ ಒಳಗೊಂಡಿದ್ದು ಮುಖ್ಯವಾಗಿ ಚರ್ಚೆ ಮತ್ತು ವಿಮರ್ಶೆಯ ಮೂಲಕವೇ ನಡೆಯುವಂತಹ ಸರ್ಕಾರವೇ ಪ್ರಜಾಪ್ರಭುತ್ವ” ಎಂದು ಜಾನ್ ಬರ್ಕೋವ್ ಎಂಬ ಚಿಂತಕರು ಹೇಳುತ್ತಾರೆ. “ಪ್ರಜಾಪ್ರಭುತ್ವವು ಜೀವನ ಕ್ರಮದ ಅನ್ವೇಷಣೆ” ಎಂದು ಚಿಂತಕ ಸಿ. ಸಿ. ಮಾಕ್ಸಿಯವರ ವಿಚಾರ. ಈ ವಿಚಾರಗಳೆಲ್ಲಾ ತೀರ ತೀರ ಇತ್ತೀಚಿನ ಆಧುನಿಕ ವಿಚಾರಗಳು. 12 ನೇ ಶತಮಾನದಲ್ಲಿ ಬಸವಣ್ಣನವರು ಕಲ್ಯಾಣದಲ್ಲಿ ಕಟ್ಟಿದ ಅನುಭವ ಮಂಟಪ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿತ್ತು. ಇಲ್ಲಿ ಚರ್ಚೆಗಳು ನಡೆಯುತ್ತಿದ್ದವು. ವಿಚಾರ-ವಿಮರ್ಶೆಗಳು ನಡೆಯುತ್ತಿದ್ದವು. ನಾನಾ ಭಾಗದಿಂದ ಬಂದ ಎಲ್ಲ ಶರಣರು ತತ್ವಜ್ಞಾನಿಗಳಂತೆ ಚರ್ಚಿಸುತ್ತಿದ್ದ ದೃಶ್ಯ ಪ್ಲೇಟೋನ ಅಕಾಡೆಮಿಯನ್ನು ನೆನಪಿಸುತ್ತದೆ.
ಇಂದಿಗೂ ಸಹ ಜಾಗತಿಕ ಮಟ್ಟದಲ್ಲಿ ಉಳ್ಳವರು ಮತ್ತು ಇಲ್ಲದವರ ಮಧ್ಯ ಸಂಘರ್ಷವಿದೆ. ಕರಿಯ-ಬಿಳಿಯ ಎಂಬ ವರ್ಣ ಸಂಘರ್ಷ ಇದೆ. ಇಂತಹ ಕಂದಕ ಆಫ್ರಿಕಾ, ಅಮೇರಿಕಾ, ಬ್ರಿಟನ್, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿದೆ. ಇದು ಜಾಗತಿಕ ಅಶಾಂತಿ-ಅಸಹನೆಗೆ ಕಾರಣವಾಗುತ್ತದೆ. ಈ ಜ್ವಲಂತ ಸಮಸ್ಯೆಗೆ ಶರಣರು ಸರಿ ಸುಮಾರು 900 ವರ್ಷಗಳ ಹಿಂದೆಯೇ ಉತ್ತರವನ್ನು ಕಂಡುಕೊಂಡಿದ್ದರು.
ಕೆಂಚ ಕರಿಕನ ನೆನೆದಡೆ ಕರಿಕನಾಗಬಲ್ಲನೆ?
ಕರಿಕ ಕೆಂಚನ ನೆನೆದಡೆ ಕೆಂಚನಾಗಬಲ್ಲನೆ?
ದರಿದ್ರನು ಸಿರಿವಂತನ ನೆನೆದಡೆ ಸಿರಿವಂತನಾಗಬಲ್ಲನೆ?
ಸಿರಿವಂತ ದರಿದ್ರನ ನೆನೆದಡೆ ದರಿದ್ರನಾಗಬಲ್ಲನೆ?
ಮುನ್ನಿನ ಪುರಾತರ ನೆನೆದು ಧನ್ಯನಾದೆಹೆನೆಂಬ
ಮಾತಿನ ರಂಜಕರನೇನೆಂಬೆ ಕೂಡಲಸಂಗಮದೇವಾ?
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-173/ವಚನ ಸಂಖ್ಯೆ-637)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:
ರಂಜಕರು: ಮನರಂಜಿಸುವವರು, ವಿದೂಷಕರು.
ಎಂಬ ಬಸವಣ್ಣನವರ ಈ ವಚನದಲ್ಲಿ ಸಂಘರ್ಷ ಮೀರಿ ಸಮಾನತೆ-ಸೌಹಾರ್ದತೆ ಉದ್ದೀಪನಗೊಳಿಸುವ ಬೆಳಕಿದೆ. ಬಸವಣ್ಣನವರ ಮುಂದಿನ ಎರಡು ವಚನಗಳು ಜಾತಿ ವ್ಯವಸ್ಥೆಯನ್ನು ತಿರಸ್ಕರಿಸುವ ವಚನಗಳಾಗಿವೆ.
ನೆಲನೊಂದೆ: ಹೊಲಗೇರಿ ಶಿವಾಲಯಕ್ಕೆ,
ಜಲವೊಂದೆ: ಶೌಚಾಚಮನಕ್ಕೆ,
ಕುಲವೊಂದೆ: ತನ್ನ ತಾನರಿದವಂಗೆ,
ಫಲವೊಂದೆ: ಷಡುದರುಶನ ಮುಕ್ತಿಗೆ,
ನಿಲವೊಂದೆ: ಕೂಡಲಸಂಗಮದೇವಾ,
ನಿಮ್ಮನರಿದವಂಗೆ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-248/ವಚನ ಸಂಖ್ಯೆ-879)
ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ,
ಜಲ-ಬಿಂದುವಿನ ವ್ಯವಹಾರ ಒಂದೇ,
ಆಶೆಯಾಮಿಷ ರೋಷಹರುಷ ವಿಷಯಾದಿಗಳೆಲ್ಲಾ ಒಂದೇ.
ಏನನೋದಿ, ಏನ ಕೇಳಿ, ಏನು ಫಲ?
ಕುಲಜನೆಂಬುದಕ್ಕೆ ಆವುದು ದೃಷ್ಟ?
ʼಸಪ್ತಧಾತುಸಮಂ ಪಿಂಡಂ ಸಮಯೋನಿಸಮದ್ಭವಂ |
ಆತ್ಮಜೀವಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ ||ʼ ಎಂದುದಾಗಿ,
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ,
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ.
ಕರ್ಣದಲ್ಲಿ ಜನಿಸಿದರುಂಟೆ ಜಗದೊಳಗೆ?
ಇದು ಕಾರಣ ಕೂಡಲಸಂಗಮದೇವಾ,
ಲಿಂಗಸ್ಥಲವನರಿದವನೆ ಕುಲಜನು.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-160/ವಚನ ಸಂಖ್ಯೆ-590)
“ನೆಲನೊಂದೆ ಹೊಲಗೇರಿ ಶಿವಾಲಯಕೆ” ಮತ್ತು “ಕಾಸಿ ಕಮ್ಮಾರನಾದ ಬೀಸಿ ಮಡಿವಾಳನಾದ” ಎಂದು ಜಾತಿ ವ್ಯವಸ್ಥೆಯನ್ನು ತೊಡೆದು ವೃತ್ತಿ ಆಧರಿಸಿದ ಜಾತಿ ನಿರ್ಮಾಣದ ಸತ್ಯ ಅರುಹಿದ ಶರಣರು ಈ ಮೂಲಕ ಮನುಕುಲಕ್ಕೆ ಸಮಾನತೆ-ಸೌಹಾರ್ದತೆಯ ಪಾಠಗಳನ್ನು ಹೇಳಿಕೊಟ್ಟಿದ್ದಾರೆ. ಈ ಅರಿವು ಉಂಟಾದಾಗ ಸಂಘರ್ಷಕ್ಕೆ ದಾರಿಯೇ ಇರಲಾರದು.
ಬಡವ-ಬಲ್ಲಿದ, ಉತ್ತಮಕುಲ-ಹೀನಕುಲ, ಸ್ತ್ರೀ-ಪುರುಷ ಎಂಬ ತರತಮ ಭಾವನೆಯೇ ಜಗತ್ತಿನ ಹಾಹಾಕಾರಕ್ಕೆ ಕಾರಣ. ಈ ಹಾಹಾಕಾರ ನಿಲ್ಲಬೇಕೆಂದರೆ ಪ್ರೇಮ ಸೂತ್ರವೊಂದು ಸೂಜಿಯಂತೆ ಕೆಲಸ ಮಾಡಬೇಕು. ಹೌದು ಶರಣರು ಜಾಗತಿಕ ಶಾಂತಿಯ ಹರಿಕಾರರು. ಅವರು ಕತ್ತರಿಸುವ ಕತ್ತರಿ ಆಗಲಿಲ್ಲ. ಹೊಲೆಯುವ ಸೂಜಿ ಆದರು. ಕಾರಣ ಜಾತಿಯಂತಹ ದೊಡ್ಡ ಕಂದರಕ್ಕೆ ಅವರು ಪ್ರೇಮದ ಸೇತುವೆ ಕಟ್ಟಿದರು. 21 ನೇ ಶತಮಾನದಲ್ಲೂ ಕೂಡ ಮಾಡಲಾಗದ ಮಾನವತೆಯ ಮಹಾ ಸಿದ್ಧಿಯನ್ನು 12 ನೇ ಶತಮಾನದಲ್ಲಿಯೇ ಮಾಡಿದ್ದರು. ಜಾತಿ ಕಂದರವನ್ನು ಮುಚ್ಚುವ ಸೌಹಾರ್ದತೆಯನ್ನು ಬೆಸೆಯುವ ಮಹಾನ್ ಕಾರ್ಯ ಮಾಡಿದ್ದರು. ಪ್ರೀತಿಯೊಂದೇ ಈ ಜಗತ್ತನ್ನು ಆಳಬಲ್ಲುದು ಎಂಬ ಅಂತಿಮ ಸತ್ಯವನ್ನು ಕಂಡುಕೊಂಡಿದ್ದರು. ಆದ್ದರಿಂದಲೇ ಅಂದು ಕಲ್ಯಾಣವೆಂಬುದು ಬಿಜ್ಜಳನ ಕಲ್ಯಾಣವಾಗದೆ ಆತ್ಮ ಕಲ್ಯಾಣವಾಗಿತ್ತು, ಬಸವನ ಕಲ್ಯಾಣವಾಗಿತ್ತು, ಜಾಗತಿಕ ಕಲ್ಯಾಣವಾಗಿತ್ತು ಎನ್ನಬಹುದು.
ಜಾಗತೀಕರಣ, ಖಾಸಗೀಕರಣ, ಉದಾರೀಕರಣ, ಆಧುನೀಕರಣ, ಕಂಪ್ಯೂಟರೀಕರಣಗಳ ಭರಾಟೆಯಲ್ಲಿ ಮಾನವರು ಪಡೆದುಕೊಂಡದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಯಂತ್ರವನ್ನು ಕಂಡು ಹಿಡಿದದ್ದು ಮಾನವನಾದರೂ ಅವನನ್ನು ಆಳುತ್ತಿರುವುದೂ ಯಂತ್ರವೇ ಆದದ್ದು ದುರಂತ. ಕುಟ್ಟುವ, ಬೀಸುವ, ಸೇದುವ ಯಂತ್ರಗಳು ಕಾಲಹರಣದ ಮೂಲವಾಗಿವೆ. ಸಾಮಾಜಿಕ ಪ್ರಜ್ಞೆ ಆತ್ಮಹತ್ಯೆ ಮಾಡಿಕೊಂಡಿದೆ. ವೈಚಾರಿಕತೆಯ ತುಟ್ಟ ತುದಿಯಲ್ಲಿದ್ದೇವೆ ಎಂದರೂ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ದೇವಾನುದೇವತೆಗಳ ಜಾತ್ರೆಗಳ ನೆಪದಲ್ಲಿ ಮೋಜು-ಮಸ್ತಿ, ಪ್ರಾಣಿಬಲಿ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಆದರೆ 12 ನೇಯ ಶತಮಾನದಲ್ಲಿ ಶರಣರು “ಧರ್ಮಕ್ಕೆ ಭಯ ಮೂಲವಾಗಬಾರದು ದಯೆ ಮೂಲವಾಗಬೇಕು” ಎಂದು ಸಾರಿದರು. ಮೂಕ ಪ್ರಾಣಿಗಳ ಬಲಿಯನ್ನು ವಿರೋಧಿಸಿದರು. “ಕೊಂದವರುಳಿವರೇ?” ಎಂದು ಪ್ರಶ್ನಿಸಿ ಜೀವ ಹಿಂಸೆಯನ್ನು ಖಂಡಿಸಿದರು.
ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು
ಎಲೆ ಹೋತೇ ಅಳು, ಕಂಡಾ!
ವೇದವನೋದಿದವರ ಮುಂದೆ ಅಳು, ಕಂಡಾ!
ಶಾಸ್ತ್ರ ಕೇಳಿದವರ ಮುಂದೆ ಅಳು, ಕಂಡಾ!
ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲಸಂಗಮದೇವ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-154/ವಚನ ಸಂಖ್ಯೆ-573)
ಎಂಬಲ್ಲಿ ಶೋಷಣೆಯ ವಿರುದ್ಧ ಧ್ವನಿ ಎತ್ತಬೇಕು ಎಂಬ ಎಚ್ಚರಿಕೆಯನ್ನು ಕಾಣುತ್ತೇವೆ.
ಹಾಗಾದರೆ ಶಾಂತಿ ಎಲ್ಲಿದೆ? ಅದನ್ನು ಎಲ್ಲಿ ಹುಡುಕಬೇಕಿದೆ? ಎಂಬುದಾದರೆ ಶಾಂತಿ ಎಂಬುದು ನಮ್ಮಲ್ಲಿಯೇ ಇದೆ. ಅದನ್ನು ಹುಡುಕಬೇಕಾಗಿಲ್ಲ. ನಾವು ಅದನ್ನು ಕಂಡುಕೊಳ್ಳಬೇಕಾಗಿದೆ. ಅದನ್ನು ಹೇಗೆ ಕಂಡುಕೊಳ್ಳಬೇಕು ಎಂಬುದೇ ಜಗತ್ತಿನ ಪ್ರಶ್ನೆಯಾಗಿದೆ. ಅದಕ್ಕೆ ಶರಣರ ಸಂದೇಶದ ಉತ್ತರ ಹೀಗಿದೆ.
ಆಸೆ, ಆಮಿಷ, ತಾಮಸ, ಹುಸಿ, ವಿಷಯ,
ಕುಟಿಲ, ಕುಹಕ, ಕ್ರೋಧ, ಕ್ಷುದ್ರ, ಮಿಥ್ಯೆ-
ಇವನೆನ್ನ ನಾಲಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ.
ಅದೇಕೆಂದಡೆ, ನಿನ್ನತ್ತಲೆನ್ನ ಬರಲೀಯವು.
ಇದು ಕಾರಣ, ಇವೆಲ್ಲವ ಕಳೆದು
ಎನ್ನ ಪಂಚೈವರ, ಭಕ್ತರ ಮಾಡು
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-16/ವಚನ ಸಂಖ್ಯೆ-46)
“ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು” ಎಂಬ ಗಾದೆಯ ಮಾತಿನಂತೆ ಮನಸ್ಸು ಮತ್ತು ನಾಲಿಗೆಯ ಶುದ್ಧತೆಗಳೇ ಶಾಂತಿ ಸದನದ ನಿರ್ಮಾಣಕ್ಕೆ ತಳಪಾಯಗಳು. ಶರಣರ ಇಂತಹ ನುಡಿಗಳಿಗೆ ಜ್ಯೋತಿರ್ಲಿಂಗಗಳು ಆಸೆ, ಆಮಿಷ, ತಾಮಸ, ಹುಸಿ, ವಿಷಯ, ಕುಟಿಲ, ಕಯಹಕ, ಕ್ರೋಧ, ಕ್ಷುದ್ರ, ಮಿಥ್ಯೆಗಳನ್ನೆಲ್ಲಾ ಕಳೆದುಕೊಂಡರೆ ಮನ ಕದಡಲು ಹೇಗೆ ಸಾಧ್ಯ? ಆಗ ಅಲ್ಲಿ ನೆಲೆಸುವುದು ಕೇವಲ ಶಾಂತಿ! ಶಾಂತಿ! ಶಾಂತಿ!
ಇಡೀ ಜಗತ್ತು ಶಾಂತಿ-ಸೌಹಾರ್ದತೆಯತ್ತ ಮುಖ ಹೊರಳಿಸಬೇಕೆಂದು ಸತ್ಯ, ಶಾಂತಿ, ಪ್ರೀತಿ, ಅಹಿಂಸೆಯೆಂಬ ಅಸ್ತ್ರಗಳನ್ನು ಹಿಡಿದು ಹೊರಟರೆ ಆ ದೇವನನ್ನೇ ಗೆಲ್ಲಲು ಸಾಧ್ಯ. ಸತ್ಯ, ಶಾಂತಿ, ಪ್ರೀತಿಗೆ ದೇವನೇ ಸೋಲುತ್ತಾನೆ. ಸತ್ಯಂ ಶಿವಂ ಸುಂದರಂ ಎಂಬಂತೆ ಸತ್ಯ ಇದ್ದಲ್ಲಿ ಶಿವನು, ಶಿವನು ಇದ್ದಲ್ಲಿ ಸೌಂದರ್ಯ ನೆಲೆಸುವುದು. ಆಗ ಶಾಂತಿ ಸಮಾಧಾನ ಸಮಾನತೆ ಸೌಹಾರ್ದತೆಗಳು ತಮ್ಮಿಂದ ತಾವೇ ಜೊತೆಯಾಗಲು ಸಾಧ್ಯವಾಗುತ್ತದೆ.
ಜಂಬೂದ್ವೀಪ ನವಖಂಡ ಪೃಥ್ವಿಯೊಳಗೆ
ಕೇಳಿರಯ್ಯಾ ಎರಡಾಳಿನ ಭಾಷೆಯ,
ಕೊಲುವೆನೆಂಬ ಭಾಷೆ ದೇವನದು,
ಗೆಲುವೆನೆಂಬ ಭಾಷೆ ಭಕ್ತನದು.
ಸತ್ಯವೆಂಬ ಕೂರಲಗನೆ ಕಳೆದುಕೊಂಡು
ಸದ್ಭಕ್ತರು ಗೆದ್ದರು ಕಾಣಾ,
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-184/ವಚನ ಸಂಖ್ಯೆ-678)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:
ಕೂರಲಗು : ಹರಿತವಾದ ಅಲಗು, ಚೂಪಾದ ಖಡ್ಗ.
ಸತ್ಯವೆಂಬುದೇ ಕೂರಲಗು (ಹರಿತವಾದ ಖಡ್ಗ). ಇದರಿಂದ ಕೊಲುವೆನೆಂಬ ದೇವನನ್ನೇ ಗೆದ್ದವರು ಶರಣರು. ಅವರು ನಡೆದ ದಾರಿ ದಿವ್ಯವಾಗಿತ್ತು. ಸರ್ವರನ್ನೂ ಒಳಗೊಂಡ ಅವರ ಬದುಕು ಸರ್ವ ಜನಾಂಗದ ಶಾಂತಿಯ ತೋಟವಾಗಿತ್ತು. ಸರ್ವರನ್ನೂ ಕವಿರಾಜಮಾರ್ಗಕಾರ ಹೇಳುವಂತೆ:
ಕಸರವಮೆಂಬುದು
ನೆರೆಸೈರಿಸಲಾರ್ಪುಡೆ
ಪರಧರ್ಮಮಂ ಪರವಿಚಾರಮುಮಂ
ಬಂಗಾರವೆಂದರೆ ಬೇರೆಯವರನ್ನು ಸಹಿಸುವುದು. ಪರಧರ್ಮ ಮತ್ತು ಪರ ವಿಚಾರಗಳನ್ನು ಪ್ರೀತಿಸಿ ಗೌರವಿಸುವುದೇ ಆಗಿದೆ. ಆದ್ದರಿಂದ ಶರಣ ಧರ್ಮ ಕೂಡಿ ಉಣ್ಣುವ, ಕೂಡಿ ದುಡಿಯುವ, ಕೂಡಿ ಬದುಕುವುದನ್ನು ಹೇಳಿಕೊಟ್ಟಿದೆ. ಪರಸ್ಪರ ವ್ಯಕ್ತಿ ಗೌರವ, ವೃತ್ತಿ ಗೌರವದೊಂದಿಗೆ ಎಲ್ಲರೂ ಸಮಾನರು ಎಂದು ಸಾರಿದೆ. ನಮ್ಮದು ಬಹುತ್ವದ ಭಾರತ. ವಿವಿಧತೆಯಲ್ಲಿ ಏಕತೆ ಸಾರಿದ ದೇಶ. ಇಂತಹ ಭವ್ಯ ಭಾರತಕ್ಕೆ ಶರಣ ಸಂದೇಶಗಳು ಬುನಾದಿ ಆಗಿವೆ. ಕಾರಣ ಶರಣ ಸಂದೇಶಗಳು ಜಗತ್ತಿನ ಉದ್ದಗಲಕ್ಕೂ ಪಸರಿಸಿದರೆ ವಿಶ್ವ ಶಾಂತಿ ಖಂಡಿತವಾಗಿಯೂ ನೆಲೆಸುವುದು.
ಒಟ್ಟಿನಲ್ಲಿ ಶರಣರ ಸಂದೇಶಗಳು ವಿಶ್ವಶಾಂತಿಗೆ ದಿವ್ಯ ಮಂತ್ರಗಳಾಗಿವೆ. 12 ನೇ ಶತಮಾನದ ಶಿವಶರಣರ ವಚನಗಳೇನಾದರೂ ಬೇರೆ ಬೇರೆ ಭಾಷೆಗಳಿಗೆ ಅನುವಾದವಾಗಿದ್ದರೆ ಇವತ್ತು ಇಡೀ ಜಗತ್ತೇ ಕರ್ನಾಟಕದತ್ತ ತಿರುಗಿ ನೋಡುತ್ತಿತ್ತು. ಈಗ 21 ನೇ ಶತಮಾನದಲ್ಲಿ ವಚನ ಸಾಹಿತ್ಯ ಮತ್ತು ಶಿವಶರಣರ ಸಂದೇಶಗಳು ವ್ಯಾಪಕವಾಗಿ ಪ್ರಚಾರಗೊಳ್ಳುತ್ತಿವೆ. ಯುವ ಜನತೆಯನ್ನು, ಸಂಶೋಧಕರನ್ನು, ಜನ ಸಾಮಾನ್ಯರನ್ನು ಹೆಚ್ಚು ಹೆಚ್ಚು ತನ್ನತ್ತ ಸೆಳೆದುಕೊಳ್ಳುತ್ತಿದೆ. ಶಿವಶರಣರ ವಚನಗಳ ಭಾಷೆಯ ದೃಷ್ಟಿಕೋನವನ್ನು ನೋಡಿದಾಗ ಕನ್ನಡ ಭಾಷೆಯನ್ನು ಧರ್ಮ ದರ್ಶನದ, ಶಾಸ್ತ್ರದ, ಕಾಯಕ ಜೀವಿಗಳ ಸಾಹಿತ್ಯದ ಮತ್ತು ಚಳುವಳಿಯ ಭಾಷೆಯಾಗಿ ರೂಪಿಸಿದರು. ಕನ್ನಡ ಭಾಷೆಯನ್ನು ದೇವ ಭಾಷಾ ಮಟ್ಟಕ್ಕೆ ಎತ್ತರಿಸಿದರು. ಭಾಷೆಗೆ ಕಸುವು ತುಂಬಿ ಜಾಗತಿಕ ಭಾಷೆಗಳಲ್ಲಿ ಕನ್ನಡ ಭಾಷೆಯ ಸ್ಥಾನಮಾನವನ್ನು ಹೆಚ್ಚಿಸಿದರು. ಅವರು ಸರಳ ಕನ್ನಡ ಭಾಷೆಯಲ್ಲಿ ಬರೆದ ವಚನ ಸಾಹಿತ್ಯ ಇವತ್ತು ವಿಶ್ವಶಾಂತಿ-ಸೌಹಾರ್ದತೆಗೆ ದಿವ್ಯ ಸಂದೇಶದ ಮಂತ್ರಗಳಾಗಿವೆ. ಈ ಎಲ್ಲಾ ದೃಷ್ಟಿಕೋನಗಳಿಂದ ವಿಶ್ವಶಾಂತಿಗೆ ಶರಣರು ನೀಡಿದ ಸಂದೇಶಗಳು ತೀರಾ ವಾಸ್ತವಕ್ಕೆ ಅಂಟಿಕೊಂಡಿವೆ ಎಂಬುದರಲ್ಲಿ ಎರಡು ಮಾತಿಲ್ಲ.
VSNA ಸಂಸ್ಥೆಯವರು ಇದನ್ನು ಗುರುತಿಸಿ ಈ ವಿಚಾರಗಳನ್ನು ಜಗತ್ತಿಗೆ ನಿಲುಕಲಿ ಎಂದು ಪ್ರಯತ್ನಪಡುತ್ತಿರುವುದು ಶ್ಲಾಘನೀಯ. ಇಂತಹ ಶರಣ ಸಂದೇಶಗಳನ್ನು ವಿದೇಶದಲ್ಲಿ ಪಸರಿಸುವ ಪುಣ್ಯದ ಕೆಲಸ ಮಾಡುತ್ತಿರುವ VSNA ಸಂಸ್ಥೆಯ ಅಧ್ಯಕ್ಷರಿಗೂ ಮತ್ತು ಗೌರವಾನ್ವಿತ ಪದಾಧಿಕಾರಿಗಳಿಗೂ ಅಭಿನಂದಿಸುತ್ತಾ ಎಲ್ಲ ಶರಣ ಬಂಧುಗಳಿಗೆ ಅನಂತ ಶರಣು ಶರಣಾರ್ಥಿಗಳನ್ನು ಅರ್ಪಿಸಿ ನನ್ನ ಮಾತುಗಳಿಗೆ ವಿರಾಮ ಹೇಳುತ್ತೇನೆ. ಅವಕಾಶಕ್ಕಾಗಿ ಧನ್ಯವಾದಗಳು.
2023 ರ ಬಸವ ಜಯಂತಿ ಸಂದರ್ಭದಲ್ಲಿ VSNA ಅಮೇರಿಕಾದವರು ಪ್ರಸಾರ ಮಾಡಿದ ಈ ಉಪನ್ಯಾಸದ ಅವತರಣಿಕೆಯ Link.
ಡಾ. ಪುಷ್ಪಾ ಶಲವಡಿಮಠ,
ಕನ್ನಡ ಉಪನ್ಯಾಸಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಚಿಕ್ಕ ಬಾಸೂರು, ಹಾವೇರಿ ಜಿಲ್ಲೆ.
ಮೋಬೈಲ್. ಸಂ. 97407 38330
ಪರಾಮರ್ಶನ ಕೃತಿಗಳು:
- ಬಸವ ತತ್ವ ಪ್ರದೀಪಿಕೆ: ಡಾ. ಸಿದ್ಧರಾಮ ಶರಣರು ಬೆಲ್ದಾಳ ಮತ್ತು ಡಾ. ಬಸವರಾಜ ಧನ್ನೂರ
- ಶರಣರ ಸಿದ್ಧಾಂತಗಳು ಮತ್ತು ಶೂನ್ಯ ಸಂಪಾದನೆಯಲ್ಲಿ ಅಕ್ಕಮಹಾದೇವಿ ಮತ್ತು ಮುಕ್ತಾಯಕ್ಕನವರು: ಡಾ. ವಿಜಯಕುಮಾರ ಕಮ್ಮಾರ.
- ಶಿವಾಗಮಗಳು ಮತ್ತು ವಚನ ಸಾಹಿತ್ಯ ಒಂದು ವಿಮರ್ಶಾತ್ಮಕ ಅಧ್ಯಯನ: ಡಾ. ಶ್ರೀಕರ ದಿವಾಕರ ಸ್ವಾಮಿ ಹಿರೇಮಠ.
- ಸಮಗ್ರ ವಚನ ಸಂಪುಟಗಳು-2021: ಸಂಪಾದಕರು – ಎಮ್ ಎಮ್ ಕಲಬುರ್ಗಿ.
- ಸಾರ್ಥಕ ಬದುಕು, ವಚನಗಳು, ವಚನಕಾರರು, ಒಂದು ಸಂಶೋಧನಾತ್ಮಕ ದೃಷ್ಟಿಕೋನ, ಸಂಪುಟ-1 & 2: ಸಂಪಾದಕರು – ಡಾ. ಅಮರೇಶ ಯತಗಲ್.
- ಶೂನ್ಯ ಸಂಪಾದನೆಯ ಪರಾಮರ್ಶೆ: ಸಂ. ಸಂ. ಶಿ. ಭೂಸನೂರಮಠ.
- ಸಮಗ್ರ ವಚನ ಸಂಪುಟಗಳು: ಸಂಪಾದಕರು – ಡಾ. ಎಮ್. ಎಮ್. ಕಲಬುರ್ಗಿ.
- ವರ್ಣನಾತ್ಮಕ ವಚನ ಪದಕೋಶ: ಡಾ. ಸಂಗಮೇಶ ಸವದತ್ತಿಮಠ.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in