
ವನವೆಲ್ಲ ಕಲ್ಪತರು, ಗಿಡವೆಲ್ಲ ಮರುಜಿವಣಿ,
ಶಿಲೆಗಳೆಲ್ಲ ಪರುಷ, ನೆಲವೆಲ್ಲ ಅವಿಮುಕ್ತ ಕ್ಷೇತ್ರ,
ಜಲವೆಲ್ಲ ನಿರ್ಜರಾಮೃತ ಮೃಗವೆಲ್ಲ ಪುರುಷ ಮೃಗ,
ಎಡಹುವ ಹರಳೆಲ್ಲ ಚಿಂತಾಮಣಿ.
ಚೆನ್ನಮಲ್ಲಿಕಾರ್ಜುನಯ್ಯನ ನೆಚ್ಚಿನ ಗಿರಿಯ ಸುತ್ತಿ,
ನೋಡುತ್ತ ಬಂದು
ಕದಳಿಯ ಬನವ ಕಂಡೆ ನಾನು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-126/ವಚನ ಸಂಖ್ಯೆ-360)
ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆನ್ನಮಲ್ಲಿಕಾರ್ಜುನನ್ನು ಅರಸುತ್ತಾ ಕಲ್ಯಾಣದಿಂದ ಶ್ರೀಶೈಲಕ್ಕೆ ಹೊರಟ ಅಕ್ಕ ಮಹಾದೇವಿ ಗಿರಿಯನ್ನು ಸುತ್ತುತ್ತಾ ಹೊರಟಾಗ ಅಲ್ಲಿಯ ಪ್ರಕೃತಿ ಸೌಂದರ್ಯ ಕಂಡು ವಿಸ್ಮಯಳಾಗುತ್ತಾಳೆ. ಅಕ್ಕನ ಆತ್ಮಸಂಗಾತ ಚೆನ್ನಮಲ್ಲಿಕಾರ್ಜುನಯ್ಯನಿರುವ ಗಿರಿಯ ಒಂದೊಂದು ಗಿಡ ಮರ ಬಳ್ಳಿ ಎಲ್ಲವು ಅವಳಿಗೆ ಅಮೂಲ್ಯ. ಅವಳ ಪಾಲಿಗೆ ಅವು ಬೇಡಿದ್ದನ್ನು ನೀಡುವ ಕಲ್ಪತರು. ನಡೆದು ಹೋಗುವಾಗ ಕಾಲಿಗೆ ಚುಚ್ಚುವ ಸಣ್ಣ ಸಣ್ಣ ಹರಳುಗಳು ಚಿಂತಾಮಣಿಗಳಂತೆ. ಇಂಥ ಸುಂದರ ತಾಣವೆ ನಿಜ ಪುಣ್ಯಕ್ಷೇತ್ರ ಶ್ರೀಶೈಲ ಇರಲು ಸಾಕು ಎಂದುಕೊಳ್ಳುವಳು. ತನ್ನ ಗುರುಗಳಿಂದ ಕೇಳಿ ತಿಳಿದಿದ್ದ ಗಿರಿಯ ಬಗ್ಗೆ ಅವಳಿಗೆ ಅಭಿಮಾನ. ಗಿಡಮರ ಕಲ್ಪತರುವಾದರೆ, ನೀರು ಅಮೃತ, ಕಲ್ಲು ಮಾಣಿಕ್ಯದ ಹರಳುಗಳಂತೆ ಗೋಚರಿಸುವಲ್ಲಿ ಅಕ್ಕ ಮಹಾದೇವಿ ಚೆನ್ನಮಲ್ಲಿಕಾರ್ಜುನನಲ್ಲಿಟ್ಟ ಆರಾಧನಾ ಭಾವ ಗೋಚರಿಸುತ್ತದೆ. ಶ್ರೀಶೈಲ ಪರ್ವತದಲ್ಲಿ ಅಡಗಿರುವ ಸೃಷ್ಟಿ ಸೌಂದರ್ಯವನ್ನು ವರ್ಣಿಸುತ್ತಾ ಆಕಾಶದೆತ್ತರ ಬೆಳೆದ ಗಿಡಮರ, ಜಲಧಾರೆ, ಹಳ್ಳ ಕೊಳ್ಳ ಹೀಗೆ ಎಲ್ಲವುಗಳ ವರ್ಣನೆ ಅವಳ ವಚನಗಳಲ್ಲಿ ಅವ್ಯಾಹತವಾಗಿ ಹರಿದಿರುವದನ್ನು ಕಾಣುತ್ತೇವೆ. ಇಂಥ ಅದ್ಭುತ ಗಿರಿಯನ್ನು ಸೃಷ್ಟಿಸಿದ ಆ ಭಗವಂತನೆ ಇಡೀ ವನವನ್ನು ವ್ಯಾಪಿಸಿರುವಂತೆ ಅಕ್ಕನ ಮನವನ್ನು ವ್ಯಾಪಿಸಿದ್ದಾನೆ. ಹೀಗೆ ಪ್ರಕೃತಿಯ ಅಣು ರೇಣುವಿನಲ್ಲು ದೇವನ ಇರುವಿಕೆಯನ್ನೆ ಕಾಣುವ ಅಕ್ಕನ ದೈವಿಪ್ರಜ್ಞೆ ಅದ್ಭುತ.
ಅಕ್ಕ ಜನಿಸಿದ್ದು ಮಲೆನಾಡ ಐಸಿರಿ ಶಿವಮೊಗ್ಗ ಜಿಲ್ಲೆಯ ಉಡುತಡಿಯಲ್ಲಿ. ಅಲ್ಲಿಯ ದಟ್ಟಕಾಡು ಗುಡ್ಡ ನದಿಗಳು ನೈಸರ್ಗಿಕ ಸೌಂದರ್ಯ ಹೆಚ್ಚಿಸುವ ಹಸಿರು ಕಣಿವೆಗಳು, ನದಿ ತೊರೆಗಳು, ಕಣ್ಮನ ಸೆಳೆಯುಂತಹವು. ಮರಗಳು, ಸಸ್ಯಗಳು ಮತ್ತು ವನ್ಯಜೀವಿಗಳು ಮನ ಸೂರೆಗೊಳ್ಳುತ್ತವೆ. ಇಂತಹ ಪ್ರಕೃತಿಯ ನಾಡಲ್ಲಿ ಜನಿಸಿ ಅವುಗಳ ಸಾಂಗತ್ಯದಲ್ಲಿ ಆಡಿ ಬೆಳೆದ ಮಹಾದೇವಿಗೆ ಸಹಜವಾಗಿಯೇ ಪ್ರಕೃತಿಯ ಬಗ್ಗೆ ವಿಶೇಷ ಪ್ರೀತಿ ಒಲವು ಇದ್ದುದರಿಂದ ಅಷ್ಟೆ ಅಲ್ಲ ಅವುಗಳ ಜೊತೆ ಒಡನಾಡುತ್ತಾ ಸಮಯ ಕಳೆಯುತ್ತಿದುದರಿಂದ ಪರಿಸರದ ಬಗ್ಗೆ ಜ್ಞಾನ ಹೊಂದಿದ್ದು ಸಹಜ. ಹಾಗಾಗಿ ತನ್ನ ವಚನಗಳಲ್ಲಿ ಕೆರೆ, ಹಳ್ಳ, ತೊರೆ, ನದಿ, ಹೂ-ಬಳ್ಳಿ ಬೆಟ್ಟ, ಪ್ರಾಣಿ, ಪಕ್ಷಿ ಹೀಗೆ ಪ್ರಕೃತಿಯ ಪ್ರತಿಯೊಂದು ಅಂಶಗಳನ್ನು ಉಪಮಾನ ಉಪಮೇಯ ದೃಷ್ಟಾಂತಗಳಾಗಿ ಉಪಯೋಗಿಸಿರುವದನ್ನು ಕಾಣುತ್ತೇವೆ. ಏಕಾಂಗಿಯಾಗಿ ಹೊರಟ ಅಕ್ಕನಿಗೆ ನಿಸರ್ಗವೆ ಸಂಗಾತಿ. ಅಷ್ಟೇ ಅಲ್ಲ ಅವುಗಳೊಂದಿಗೆ ತನ್ನ ಮನದ ಮಾತುಗಳನ್ನು ಹಂಚಿಕೊಳ್ಳುವದನ್ನು ಕಾಣುತ್ತೇವೆ. ಅವುಗಳನ್ನು ತನ್ನ ಗೆಳತಿಯರಂತೆ ಕಂಡು ತನ್ನ ನೋವು ಸಂತಸ ಹಂಚಿಕೊಳ್ಳುವದನ್ನು ನೋಡುತ್ತೇವೆ. ನಿಸರ್ಗ ಅಕ್ಕನಿಗೆ ತುಬಾ ಅಪ್ಯಾಯಮಾನ. ಪ್ರಕೃತಿಯಲ್ಲಿ ದೈವೀಪ್ರಜ್ಞೆ ಕಂಡ ಅಕ್ಕ ಫಲಭರಿತ ಹಣ್ಣುಗಳ ಸೃಷ್ಟಿಯ ವೈಶಿಷ್ಟ್ಯತೆಗೆ ಬೆರಗಾಗಿ
ಈಳೆ ನಿಂಬೆ ಮಾವು ಮಾದಲಕೆ
ಹುಳಿನೀರನೆರೆದವರಾರಯ್ಯಾ?
ಕಬ್ಬು ಬಾಳೆ ಹಲಸು ನಾರಿವಾಳಕ್ಕೆ
ಸಿಹಿನೀರನೆರೆದವರಾರಯ್ಯಾ?
ಕಳವೆ ರಾಜಾನ್ನ ಶಾಲ್ಯನ್ನಕ್ಕೆ
ಓಗರದ ಉದಕವನೆರೆದವರಾರಯ್ಯಾ?
ಮರುಗ ಮಲ್ಲಿಗೆ ಪಚ್ಚೆ ಮುಡಿವಾಳಕ್ಕೆ
ಪರಿಮಳದುದಕವನೆರೆದವರಾರಯ್ಯಾ?
ಇಂತೀ ಜಲವು ಒಂದೆ,
ನೆಲನು ಒಂದೆ, ಆಕಾಶವು ಒಂದೆ.
ಜಲವು ಹಲವು ದ್ರವ್ಯಂಗಳ ಕೂಡಿ
ತನ್ನ ಪರಿಬೇರಾಗಿಹ ಹಾಗೆ,
ಎನ್ನದೇವ ಚೆನ್ನಮಲ್ಲಿಕಾರ್ಜುನಯ್ಯನು
ಹಲವು ಜಗಂಗಳ ಕೂಡಿಕೊಂಡಿರ್ದಡೇನು?
ತನ್ನ ಪರಿ ಬೇರೆ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-33/ವಚನ ಸಂಖ್ಯೆ-75)
ಈಳೆ ನಿಂಬೆ ಮಾವು ಮಾದಲ ಮರಕೆ ಹುಳಿ ನೀರನು ಎರೆದವರಾರಯ್ಯ? ಕಬ್ಬು ಬಾಳೆ ಹಲಸು ನಾರಿಕೇಳಕೆ ಸಿಹಿ ನೀರೆರದವರಾರಯ್ಯ? ಹೀಗೆ ಕಿತ್ತಳೆ ನಿಂಬೆ ಮಾವು ಮುಂತಾದವಗಳು ಹುಳಿ ಇರುವದನ್ನು, ಕಬ್ಬು, ಬಾಳೆ ಹಲಸು ಸಿಹಿ ಇರುವದನ್ನು, ಪರಿಮಳ ಇರುವದನ್ನು ಕಂಡು ವಿಸ್ಮಯ ವ್ಯಕ್ತಪಡಿಸುತ್ತಾ, ಇದಕ್ಕೆಲ್ಲ ಜಗದೊಡೆಯನೇ ಕಾರಣ ಎಂದು ನಂಬಿದ್ದಾಳೆ. ಬೆಟ್ಟದ ಸಾಲುಗಳನ್ನೇರುತ್ತಾ, ಕೊಳ್ಳಗಳನ್ನು ಇಳಿಯುತ್ತಾ, ಪ್ರಕೃತಿಯ ವಿಸ್ಮಯತೆಯನ್ನು ತಿಳಿಸಿತ್ತಾ, ಪ್ರಕೃತಿಯ ಸಮತೋಲನ ಕಾಪಾಡುವಲ್ಲಿ ದೇವರ ಇರುವಿಕೆಯನ್ನು ದೃಢೀಕರಿಸುತ್ತಾಳೆ. ಹಾಗೆ ಅವಳ ಪ್ರಸಿದ್ಧ ಮತ್ತೊಂದು ವಚನ ಇದನ್ನು ಪುಷ್ಟೀಕರಿಸುತ್ತದೆ.
ವನವೆಲ್ಲ ನೀನೆ, ವನದೊಳಗಣ ದೇವತರುವೆಲ್ಲಾ ನೀನೆ,
ತರುವಿನೊಳಗಾಡುವ ಖಗಮೃಗವೆಲ್ಲಾ ನೀನೆ.
ಚೆನ್ನಮಲ್ಲಿಕಾರ್ಜುನಾ, ಸರ್ವಭರಿತನಾಗಿ
ಎನಗೇಕೆ ಮುಖದೋರೆ?
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-126/ವಚನ ಸಂಖ್ಯೆ-361)
ವನದಲ್ಲಿರುವ ಪ್ರತಿ ಗಿಡ, ಮರ, ತರು, ಲತೆಗಳಲ್ಲಿ ಕಾನನದಲ್ಲಿರುವ ಖಗ, ಮೃಗ, ಪಕ್ಷಿ ಹೀಗೆ ಪ್ರಕೃತಿಯ ಪ್ರತಿ ಜೀವ-ಜಂತುಗಳಲ್ಲಿ ನಿರಾಕಾರ ಸ್ವರೂಪದಲ್ಲಿರುವ ದೇವ ನೀನು ನಿನ್ನ ನಿಜ ಸ್ವರೂಪದ ದರ್ಶನ ತೋರು ಎಂದು ಪರಿತಪಿಸುವ ಪ್ರಕೃತಿಯಲ್ಲಿ ಅವಳ ಅಚಲ ದೈವೀಪ್ರಜ್ಞೆ ಅನನ್ಯ.
ಚಿಲಿಮಿಲಿ ಎಂದು ಓದುವ ಗಿಳಿಗಳಿರಾ,
ನೀವು ಕಾಣಿರೆ, ನೀವು ಕಾಣಿರೆ.
ಸರವೆತ್ತಿ ಪಾಡುವ ಕೋಗಿಲೆಗಳಿರಾ,
ನೀವು ಕಾಣಿರೆ, ನೀವು ಕಾಣಿರೆ.
ಎರಗಿ ಬಂದಾಡುವ ತುಂಬಿಗಳಿರಾ,
ನೀವು ಕಾಣಿರೆ, ನೀವು ಕಾಣಿರೆ.
ಕೊಳನತಡಿಯೊಳಾಡುವ ಹಂಸೆಗಳಿರಾ,
ನೀವು ಕಾಣಿರೆ, ನೀವು ಕಾಣಿರೆ.
ಗಿರಿ ಗಹ್ವರದೊಳಗಾಡುವ ನವಿಲುಗಳಿರಾ,
ನೀವು ಕಾಣಿರೆ, ನೀವು ಕಾಣಿರೆ.
ಚೆನ್ನಮಲ್ಲಿಕಾರ್ಜುನನೆಲ್ಲಿದ್ದಹನೆಂದು ಹೇಳಿರೆ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-73/ವಚನ ಸಂಖ್ಯೆ-204)
ಇದು ಅಕ್ಕನ ಅತ್ಯಂತ ಅಪ್ಯಾಯವಾದ ವಚನವಿದು. ಅಕ್ಕನ ಕಾವ್ಯ ಕರ್ತೃತ್ವ ಶಕ್ತಿಗೆ ಈ ವಚನವೊಂದು ಸಾಕು. ಅವಳ ವಚನಗಳು ಭಾವ ಗೀತಾತ್ಮ. ಪ್ರಕೃತಿಯಲ್ಲಿ ಸದಾ ತಮ್ಮ ಮಧುರ ಕಂಠದಿಂದ ಹಾಡುವ ಕೋಗಿಲೆಗೆ ಚಿಲಿಪಿಲಿ ನಿದಾದದ ಗಿಳಿಗಳಿಗೆ ಹಾರಾಡುವ ದುಂಬಿಗಳಿಗೆ ಕೊಳದ ಹಂಸಗಳಿಗೆ ಗಿರಿಯೊಳಗೆ ಸ್ವಚ್ಛವಾಗಿ ಓಡಾಡುತ್ತಾ ನರ್ತಿಸುವ ನವಿಲುಗಳಿಗೆ ಅಕ್ಕ ತನ್ನ ಮನದೊಡೆಯ ಮಹದೇವನನ್ನು ನೀವು ಬಲ್ಲಿರಾ ನೀವು ನೋಡಿರುವಿರಾ ಎಂದು ಪ್ರಕೃತಿಯ ಚರಾಚರ ವಸ್ತುವಿಗೆ ಪ್ರಶ್ನಿಸುತ್ತ ನೀವು ಕಂಡಿದ್ದರೆ ತೋರಿಸಿ ಎಂದು ಪರಿಪರಿಯಲಿ ಪರಿತಪಿಸುವ ಪರಿ ಎಲ್ಲರ ಮನ ಕಲಕುತ್ತದೆ. ಪ್ರಕೃತಿಯ ಮಡಿಲಲ್ಲಿ ಈ ಎಲ್ಲ ಪ್ರಾಣಿ, ಪಕ್ಷಿಗಳು ಇಷ್ಟು ಸ್ವತಂತ್ರವಾಗಿ ಸಂತಸದಿಂದ ಇರಲು ಕಾರಣ ಚೆನ್ನಮಲ್ಲಿಕಾರ್ಜುನನ ಇರುವಿಕೆ ಎಂದು ನಂಬಿದ ಅಕ್ಕ ತಾನು ಸಾಗುತ್ತಿರುವ ಮಾರ್ಗ ಮಧ್ಯದಲ್ಲಿ ಕಾಣುವ ಎಲ್ಲ ಪ್ರಾಣಿ ಪಕ್ಷಿ ಸಂಕುಲವನ್ನು ದೈನ್ಯತೆಯಿಂದ ಬೇಡಿಕೊಳ್ಳುವಲ್ಲಿ ಅವಳು ಪ್ರಕೃತಿಯಲ್ಲಿ ದೇವರನ್ನು ಕಾಣುತ್ತಿದ್ದಾಳೆ ಎನ್ನುವದು ವಿಧಿತ. ಹಾಗೇ ಪಕ್ಷಿ ಸಂಕುಲದಲ್ಲಿ ಮೊರೆ ಇಡುವ ಮತ್ತೊಂದು ವಚನ
ಅಳಿಸಂಕುಲವೆ, ಮಾಮರವೆ,
ಬೆಳುದಿಂಗಳೆ, ಕೋಗಿಲೆಯೆ
ನಿಮ್ಮನೆಲ್ಲರನೂ ಒಂದ ಬೇಡುವೆನು.
ಎನ್ನೊಡೆಯ ಚೆನ್ನಮಲ್ಲಿಕಾರ್ಜುನದೇವ ಕಂಡಡೆ
ಕರೆದು ತೋರಿರೆ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-23/ವಚನ ಸಂಖ್ಯೆ-51)
ಎಂದು ತನ್ನ ಮಧುರ ಕಂಠದಿಂದ ಹಾಡುತ್ತಿದ್ದರೆ ನಿಸರ್ಗದಲ್ಲಿರುವ ಎಲ್ಲ ಪಕ್ಷಿ ಪ್ರಾಣಿಗಳು ತಮ್ಮ ತಮ್ಮ ಭಾಷೆಯಲ್ಲಿ ಉಲಿಯುತ್ತ ಅಕ್ಕನೊಂದಿಗೆ ನಲಿದಾಡುತ್ತಿವೆಯೆನೋ ಅನಿಸದಿರದು. ಹೀಗಾಗಿ ಅಕ್ಕನಿಗೆ ದೂರದ ದಾರಿ ಸವಿದದ್ದೆ ತಿಳಿಯುತ್ತಿರಲಿಲ್ಲ.
ನಿಸರ್ಗದ ಒಡಲಲ್ಲಿ ಹರಿಯುವ ನೀರಲ್ಲಿ, ಬೆಳದಿಂಗಳಲ್ಲಿ ಮೇರು ಪರ್ವತಗಳಲ್ಲಿ, ಸದಾ ಚೈತನ್ಯ ತುಂಬಿದ ಅಳಿಲು, ಹಂಸ, ಕೋಗಿಲೆಗಳನ್ನು ಅಪ್ಯಾಯತೆಯಿಂದ ನೋಡುವ ದೃಷ್ಟಿ ಅನನ್ಯ. ಅವು ತನ್ನ ಆತ್ಮಸಂಗಾತದೊಡೆಯನ ಸಾಂಗತ್ಯದಲ್ಲಿರುವದರಿಂದ ಅವುಗಳನ್ನು ಕೇಳಿದರೆ ಅವನಿರುವು ತಿಳಿದೀತು ಎಂಬುದು ಅವಳ ಆಸೆ. ಎಲ್ಲರ ಮನಕಲಕುವಂತೆ ಪರಿಪರಿಯಲ್ಲಿ ಕೇಳುವದು ಅವಳು ಪ್ರಕೃತಿಯ ಎಲ್ಲದರಲ್ಲೂ ದೈವೀಪ್ರಜ್ಞೆ ಕಾಣುವದು ವಿಶೇಷ.
ಅವಳ ಮಾರ್ಗ ಮಧ್ಯದಲ್ಲಿ ಹಲವಾರು ಕಷ್ಟ ಕಾರ್ಪಣ್ಯಗಳು ಎದುರಾದರೂ ಕೂಡ ಚೆನ್ನಮಲ್ಲಿಕಾರ್ಜುನನಲ್ಲಿಯೇ ಧ್ಯಾನಾಸಕ್ತಳಾದ ಅಕ್ಕನಿಗೆ ಅವೆಲ್ಲ ಗೌಣ. ಹೀಗೆ ತನ್ನ ಮನದೊಡೆಯನನ್ನು ಅರಸುತ್ತಾ ದಟ್ಟಾರಣ್ಯ ಕಾಡ್ಗತ್ತಲಿನ ಕದಳಿಯ ಪ್ರವೇಶ ಮಾಡುವ ಅಕ್ಕ ಕದಳಿಯ ಬನದಲ್ಲಿ ಭವಹರನ ಕಂಡು ಚೆನ್ನಮಲ್ಲಿಕಾರ್ಜುನನ ಹೃದಯ ಕಮಲದಲ್ಲಿ ಅಡಗುವವರೆಗೆ ಪ್ರಕೃತಿಯೊಂದಿಗಿನ ಅವಳ ಒಡನಾಟ ಮತ್ತು ಅಲ್ಲಿಯ ಪ್ರತಿಯೊಂದರಲ್ಲಿ ಅವನ ಉಪಸ್ಥಿತಿ ಕಾಣುವ ಅಕ್ಕನ ಮನ:ಪ್ರಜ್ಞೆ ವಿವರಿಸಲಸದಳ. ಏರು ಜವ್ವನದ ಅಕ್ಕ ದೇವರನ್ನರಸುತ್ತಾ ಕಾಡಿನಲ್ಲಿ ಒಂಟಿಯಾಗಿ ಸಂಚರಿಸಿದ ಸಂದರ್ಭ ರೋಮಾಂಚನ ವಿಸ್ಮಯ. ಅಂತೆಯೆ ಪರಿಸರದೊಂದಿಗೆ ಸಂಭಾಷಿಸುತ್ತಾ ಸಾಗಿದ್ದಾಳೆ. ಅಕ್ಕನ ಸಾಹಸಕ್ಕೆ ಅಕ್ಕನೆ ಸಾಟಿ. ತಾನು ಅರಣ್ಯದಲ್ಲಿ ಏಕಾಂಗಿಯಾಗಿ ಹೊರಟ ಪ್ರಸಂಗವನ್ನು ವಿವರಿಸುವ ಅಕ್ಕನ ಒಂದು ಅರ್ಥಗರ್ಭಿತ ವಚನ ಹೀಗಿದೆ.
ಒಡಲ ಕಳವಳಕ್ಕಾಗಿ ಅಡವಿಯ ಪೊಕ್ಕೆನು.
ಗಿಡುಗಿಡುದಪ್ಪದೆ ಬೇಡಿದೆನೆನ್ನಂಗಕ್ಕೆಂದು.
ಅವು ನೀಡಿದವು ತಮ್ಮ ಲಿಂಗಕ್ಕೆಂದು.
ಆನು ಬೇಡಿ ಭವಿಯಾದೆನು ; ಅವು ನೀಡಿ ಭಕ್ತರಾದವು.
ಇನ್ನು ಬೇಡಿದೆನಾದಡೆ
ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮಾಣೆ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-46/ವಚನ ಸಂಖ್ಯೆ-120)
ಈ ವಚನ ಇಂದಿನ ಕಾಲಕ್ಕೂ ಪ್ರಸ್ತುತ. “ಪ್ರಕೃತಿ ರಕ್ಷಿತೊ ರಕ್ಷಿತ:” ಪರಿಸರವನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರಿಯಬೇಕು ಎಂದು ಹೇಳುವ ವಚನ. ನಾನು ಬೇಡಿ ಭವಿಯಾದೆ, ಅವು ನೀಡಿ ಭಕ್ತರಾದವು. ನಾನು ನನ್ನ ಅಂಗಕ್ಕೆಂದು ಬೇಡಿದೆ ಆದರೆ ಅವು ತಮ್ಮ ಲಿಂಗಕ್ಕೆಂದು ನೀಡಿದವು. ಎಂಥಾ ಆತ್ಮಾವಲೋಕನ ಅಕ್ಕನದು! ಪ್ರಕೃತಿಯ ಎಲ್ಲದರಲ್ಲೂ ದೈವತ್ವವನ್ನು ಕಾಣುವ ಅಕ್ಕಮಹಾದೇವಿ ಮೇರು ವಿಚಾರವನ್ನು ಎಲ್ಲರೂ ಅರಿಯಬೇಕಿದೆ. ಅಕ್ಕನ ಆತ್ಮಶಕ್ತಿ ಹಾಗೂ ಆಧ್ಯಾತ್ಮದ ಬೆಳಕು ಅವರ್ಣನೀಯ.
ಶ್ರೀಮತಿ. ಶಾರದಾ ಕೌದಿ,
ಅಧ್ಯಕ್ಷರು,
ಕದಳಿ ಮಹಿಳಾ ವೇದಿಕೆ, ಜಿಲ್ಲಾ ಘಟಕ,
ಧಾರವಾಡ.
ಮೋಬೈಲ್ ಸಂ. +91 89514 91838
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in
ವಚನ ಸಾಹಿತ್ಯ ಕುರಿತು ನನಗೆ ತುಂಬಾ ಆಸಕ್ತಿ ಇದೆ.ಹಾಗೂ ಪುಸ್ತಕ ಹೊರತಂದಿದ್ದೇನೆ.ನಾನೂ ಕೂಡ ಇಲ್ಲಿ ಬರೆಯಬೆಕೆಂದಿದ್ದೇನೆ.ದಯವಿಟ್ಟು ಮಾಹಿತಿ ಸಿಗಬಹುದಾ?
ನಿಮ್ಮ ಲೇಖನಗಳನ್ನು ನಮ್ಮ ಈ-ಮೇಲ್ ವಿಳಾಸಕ್ಕೆ ಕಳಿಸಿ. vijikammar@gmail.com