ಶರಣೆ ಗಂಗಾಂಬಿಕೆ ವ್ಯಕ್ತಿತ್ವದ ಶೋಧ / ಡಾ. ಸರ್ವಮಂಗಳ ಸಕ್ರಿ, ರಾಯಚೂರು.

12 ನೇ ಶತಮಾನ ವಚನ ಸಾಹಿತ್ಯ ರಚನೆಯಲ್ಲಿ ಒಂದು ಪ್ರಗತಿಪರವಾದ ಕಾಲಘಟ್ಟ. ಸಾಮಾಜಿಕ ಸುಧಾರಣೆಯ ಸಂದರ್ಭದಲ್ಲಿ ರಚನೆಯಾದ ಶರಣ ಸಾಹಿತ್ಯ ಸ್ತ್ರೀ ಸಂವೇದನೆಯ ನೆಲೆಯಲ್ಲಿ ಪ್ರಕಟವಾದವು. ಅಂದು ಎಲ್ಲಾ ವರ್ಗದ ಸ್ತ್ರೀಯರು ಸಾಹಿತ್ಯ ಮತ್ತು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದು ಮುನ್ನಡೆಯ ಪ್ರಚಲಿತ ಹಂತವದು. ಸ್ತ್ರೀಯರಿಗೆ ಆತ್ಮವಿಶ್ವಾಸ, ಸಮಾನತೆಯ ಅವಕಾಶವನ್ನು ಕೊಟ್ಟದ್ದು ಇದೇ ಕಾಲದಲ್ಲಾಗಿತ್ತು.

ಸ್ತ್ರೀ ವಚನಕಾರರಲ್ಲಿ ವೈರಾಗ್ಯನಿಧಿ ಅಕ್ಕ ಮಹಾದೇವಿಯವರು ಮೊದಲು ನೆನಪಾದರೂ ಕೂಡ ಗಂಗಾಂಬಿಕೆ, ನೀಲಾಂಬಿಕೆ, ಮುಕ್ತಾಯಕ್ಕ, ಅಕ್ಕನಾಗಮ್ಮ, ಮೋಳಿಗೆ ಮಹಾದೇವಿ, ಕದಿರೆ ರೆಮ್ಮವ್ವೆ, ಕಾಳವ್ವೆ, ಗುಡ್ಡವ್ವೆ. ಮಸಣಮ್ಮ, ಸೂಳೆ ಸಂಕವ್ವೆ, ರಾಯಮ್ಮ ಹೀಗೆ ಹಲವಾರು ವಚನಕಾರ್ತಿಯರು ವಚನಗಳ ಬರವಣಿಗೆಗೆ ತಮ್ಮನ್ನು ತೊಡಗಿಸಿಕೊಂಡಿದ್ದರು. ವಚನ ಸಾಹಿತ್ಯದಲ್ಲಿ ಕಂಡು ಬರುವ ಶರಣಿಯರ ಪಾತ್ರಗಳು ದಾಖಲಾರ್ಹ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ. ಸಾಮಾನ್ಯವಾಗಿ ಸ್ತ್ರೀಯರನ್ನು ಅಂದಿನ ಸಂದರ್ಭದಲ್ಲಿ ಅವಮಾನಿಸಿ, ಅವಳ ಸ್ವಾಭಿಮಾನಕ್ಕೆ ದಕ್ಕೆ ತಂದುಕೊಟ್ಟದ್ದೇ ಹೆಚ್ಚಾಗಿತ್ತು. ಆದರೆ ಆ ಕಾಲಘಟ್ಟದಲ್ಲಿ ಶರಣೆಯರು ತಮ್ಮ ವ್ಯಕ್ತಿತ್ವ ವಿಕಸನದ ಮೂಲಕ ಅರಳಿದ್ದು ಇತಿಹಾಸ.

ವಚನ ಸಂಸ್ಕೃತಿಯ ಚರಿತ್ರೆಯನ್ನು ಗಮನಿಸಿದಾಗ ತಾತ್ವಿಕವಾಗಿ ಶರಣೆಯರು ಭಕ್ತಿಯ ಮೂಲಕ ಗುರುತಿಸಿಕೊಂಡದ್ದು ದಾಖಲಾರ್ಹ. ಪುರೋಹಿತಶಾಹಿ ವರ್ಗದವರ ಅತಿರೇಕಗಳನ್ನು ಖಂಡಿಸುವುದರ ಮೂಲಕ ಹೊಸ ಸಂಸ್ಕೃತಿಯನ್ನು ಹುಟ್ಟು ಹಾಕಿದರು. ಶರಣೆ ಗಂಗಾಂಬಿಕೆಯವರನ್ನು ಬಸವಣ್ಣನವರ ಹಿರಿಯ ಪತ್ನಿ ಸುಶೀಲೆ, ಯೋಗಿನಿ, ಶಕ್ತಿ ಸ್ವರೂಪಿಣಿ, ಕತ್ತಿ ಹಿಡಿದು ಯುದ್ದ ರಂಗದಲ್ಲಿ ಹೋರಾಟ ಮಾಡಿದ ವೀರ ವನಿತೆ ಎಂದು ಗುರುತಿಸಲಾಗಿದೆ.
ಅವುಗಳಲ್ಲಿ ಹರಿಹರನ ಬಸವರಾಜದೇವರ ರಗಳೆ, ಭೀಮ ಕವಿಯ ಬಸವ ಪುರಾಣ, ಸಿಂಗಿರಾಜನ ಸಿಂಗಿರಾಜ ಪುರಾಣ, ಸಿದ್ದನಂಜೇಶನ ಗುರುರಾಜ ಚಾರಿತ್ರೆ, ಷಡಕ್ಷರದೇವನ ಬಸವರಾಜ ವಿಜಯ, ಶಾಂತಲಿಂಗ ದೇಶಿಕನ ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ, ಮುಖಬೋಳು ಸಿದ್ದಲಿಂಗನ ಷಟ್ ಸ್ಥಲ ತಿಲಕ, ಚೆನ್ನಪ್ಪ ಕವಿಯ ಶರಣ ಲೀಲಾಮೃತ ಈ ಎಲ್ಲಾ ಕೃತಿಗಳಲ್ಲಿ ಶರಣೆ ಗಂಗಾಂಬಿಕೆಯವರ ದಿವ್ಯ ವ್ಯಕ್ತಿತ್ವದ ಬಗ್ಗೆ ಮುಕ್ತವಾಗಿ ಪ್ರತಿಕ್ರಿಯಿಸಿದ್ದಾರೆ. ಏಕೆಂದರೆ ಗಂಗಾಂಬಿಕೆಯವರ ಪಾತ್ರ ನೀಲಾಂಬಿಕೆಯವರಿಗಿಂತ ಭಿನ್ನವಾದದ್ದು. ಗಂಗಾಂಬಿಕೆಯವರ ಕಥನದ ಹಿಂದೆ ಪುತ್ರ ಶೋಕದ ಚರಿತ್ರೆ ಇದೆ. ಶರಣ ಧರ್ಮದ ಕಾಳಜಿ ಇದೆ.

ವಚನ ಸಂಸ್ಕೃತಿಯ ಧರ್ಮದಲ್ಲಿ ಗಂಗಾಂಬಿಕೆಯವರ ಬೆಳವಣಿಗೆ ಅಲ್ಪ. ಆದರೂ ಅವರ ಹಿರಿದಾದ ವ್ಯಕ್ತಿತ್ವವನ್ನು ಅವರ 9 ವಚನಗಳ ಮೂಲಕ ಸಮರ್ಥಿಸಿಕೊಂಡು, ಮರೆಯಾದ ಅವರ ಹಿರಿತನವನ್ನು ಶೋಧಿಸಿ ಹೇಳುವ ಪ್ರಯತ್ನ ಈ ಲೇಖನದ್ದಾಗಿದೆ.

ಶರಣೆಯರ ಮೌಲಿಕ ಬರಹ ಮತ್ತು ಅವರ ಅನುಭವಗಳನ್ನು ಅವರ ವಚನಗಳ ಮೂಲಕ ಮಾತ್ರ ನೋಡಲು ಸಾಧ್ಯವಾಗುತ್ತದೆ. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಲದೇವನ ಮಗಳು ಗಂಗಾಬಿಕೆಯವರು. ತನ್ನ ಸೋದರಳಿಯನಾದ ಬಸವಣ್ಣನವರಿಗೆ ಮದುವೆ ಮಾಡಿಕೊಡುವ ಉತ್ಸಾಹ ಹೊಂದಿದ್ದ ಬಲದೇವ ಅದೇ ರೀತಿ ವಿವಾಹವನ್ನು ಮಾಡಿಕೊಡುತ್ತಾನೆ.

ಶರಣೆ ಗಂಗಾಂಬಿಕೆಯವರಿಗೆ ಬಾಲಸಂಗಯ್ಯನೆಂಬ ಮಗುವಿದ್ದುದನ್ನು ಅವರ ವಚನಗಳು ಸ್ಪಷ್ಟಪಡಿಸುತ್ತವೆ. ಮಗುವನ್ನು ಕಳೆದುಕೊಂಡ ವ್ಯಥೆ, ಸಂಕಟವನ್ನು ಅನುಭವಿಸುತ್ತಾರೆ. ಆದರೆ ತಾಯ್ತನ ಪ್ರತಿಯೊಬ್ಬ ಮಹಿಳೆಗೆ ಅಭಿಮಾನದ ಸಂಗತಿಯದು. ನಿಸರ್ಗದತ್ತವಾಗಿ ಬಂದಿರುವ ತಾಯ್ತನದ ಮೌಲಿಕ ಗುಣಗಳಾದ ಮಮತೆ, ಪ್ರೀತಿ, ಪಾಲನೆ-ಪೋಷಣೆಗಳ ಮೂರ್ತರೂಪವೇ ತಾಯಿ. ಇಂಥ ತಾಯಿಗೆ ತಾಯ್ತನದ ಸ್ವಾತಂತ್ರ್ಯವನ್ನು ವಿಧಿ ಕಿತ್ತುಕೊಂಡಾಗ ಆಗುವ ಸಂಕಟ ನೋವುಗಳನ್ನು ಶರಣೆ ಗಂಗಾಂಬಿಕೆಯವರು ತಮ್ಮ ಒಂದು ವಚನದಲ್ಲಿ ನಿರೂಪಣೆ ಮಾಡುತ್ತಾರೆ.

ಅವಳ ಕಂದ ಬಾಲಸಂಗ, ನಿನ್ನ ಕಂದ ಚೆನ್ನಲಿಂಗ
ಎಂದು ಹೇಳಿದರಮ್ಮಾ ಎನ್ನ ಒಡೆಯರು.
ಫಲವಿಲ್ಲದ ಕಂದನಿರ್ಪನವಳಿಗೆ,
ಎನಗೆ ಫಲವಿಲ್ಲ, ಕಂದನಿಲ್ಲ.
ಇದೇನೋ ದುಃಖದಂದುಗ
ಗಂಗಾಪ್ರಿಯ ಕೂಡಲಸಂಗಮದೇವಾ?
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-290/ವಚನ ಸಂಖ್ಯೆ-751)

ಶರಣೆ ಗಂಗಾಂಬಿಕೆಯವರಿಗೆ ತಮ್ಮದೇ ಆದ ವಾತ್ಸಲ್ಯ ಹೊಂದಿದ ಭಾವ ಪ್ರಪಂಚವಿತ್ತು. ಮಗುವನ್ನು ಕಳೆದುಕೊಂಡ ಪ್ರಜ್ಞೆ ಅವರಿಗೆ ಕಾಡುತ್ತಿತ್ತು. ಪತಿಯ ಹಿತನುಡಿಯ ಮಾತುಗಳು ಆವರನ್ನು ಜೀವಂತವಾಗಿರಿಸಿರಬೇಕು. ತಾಯಿ ಮಗುವಿನ ಕರುಳ ಬಳ್ಳಿಯ ಸಂಬಂಧಗಳು ಆಕಾಂಕ್ಷೆ ಪ್ರೇರಿತ ಮನೋಭಾವ ಅವರದು. ತಾಯ್ತನ ಎನ್ನುವುದು ಹಿರಿತನದ ಫಲವಾಗಿರುತ್ತದೆ. ಮಾತೃತ್ವವೆಂಬ ಪವಿತ್ರ ಸ್ಥಾನವನ್ನು ಪಡೆದ ಅವರಿಗೆ ಮಗುವನ್ನು ಪಡೆದರೂ ಕೂಡ ಬಂಜೆತನದ ನೋವು ಕಾಡುತ್ತಿತ್ತು. ಗಂಗಾಂಬಿಕೆಯವರಿಗೆ ಭಯ-ಭೀತಿ ಕಾಡಿದಾಗ ಪರ ಸೇವಾ ವ್ಯಕ್ತಿತ್ವ ಹೊಂದಿದ ಬಸವಣ್ಣನವರು ಅವರ ಕಂದ ಬಾಲಸಂಗ ನಿನ್ನ ಕಂದ ಚೆನ್ನಲಿಂಗವೆಂದರು.

ಯಾವುದೇ ತಾಯಿ ಎದುರಿಸುವ ಆತಂಕ, ನೋವು ಸ್ತ್ರೀಯರಿಗೆ ಮಾತ್ರ ಅರಿವಿಗೆ ಬರುತ್ತದೆ. ಮಗುವಿನ ಭವಿಷ್ಯದ ಕನಸು ಕಟ್ಟಿದವರಿಗೆ ತಾನು ದುರ್ಬಲಳಾದೆ ಎಂದು ಮನ ಹಳಹಳಿಸುತ್ತದೆ. ಬಸವಣ್ಣನವರು ಹೇಳುವರು ಸಾವು ನಿಸರ್ಗದ ನಿಯಮ ಕೂಡಲಸಂಗಮದೇವನ ಇಚ್ಚೆ ಎಂದು ಪತ್ನಿಯನ್ನು ಸಾಂತ್ವನ ಮಾಡುತ್ತಾರೆ. ಆದರೂ ಆಕೆಯ ಮನ ಬೆದುರುತ್ತದೆ. ಎನಗೆ ಫಲವಿಲ್ಲ, ಕಂದನಿಲ್ಲ ಎನ್ನುವ ದುಃಖ. ಮಗುವಿನ ಅಳು ಹಾಗೂ ನಗುವಿನ ಕನಸು ಹೊತ್ತಾಕೆಗೆ ಮನಸ್ಸು ಶಾಂತವಾಗಿ ಬದಲಾಗುತ್ತದೆ.

ಅನಾದಿ ಕಾಲದಿಂದಲೂ ನಮ್ಮ ಪರಂಪರೆಯಲ್ಲಿರುವಂತೆ ಮಗನೇ ಕುಟುಂಬದ ರಕ್ಷಕ. ವಂಶಕ್ಕೆ ಸಂತಾನೋತ್ಪತ್ತಿಗೆ ಗಂಡು ಮಗು ಬೇಕು. ಇಂತಹ ಪಿತೃ ಪ್ರಧಾನ ಸಮಾಜದಲ್ಲಿ ತಾನು ನೆಲೆ ನಿಂತ ಸಮೂಹದಲ್ಲಿ ನೊಂದುಕೊಂಡಾಕೆ. ಮುಂದೆ ಕಲ್ಯಾಣದಲ್ಲಿ ಬಲದೇವನಂತೆ ರಾಜಕೀಯ ಸೂತ್ರವಿಡಿದ ತಂದೆಯ ಮನಸ್ಥಿತಿಯಲ್ಲಿ ತನ್ನದು ದ್ವಿತೀಯ ಸ್ಥಾನವದು. ಹೀಗಾಗಿ ಕನಸಿನಲ್ಲಿ, ಕನವರಿಕೆಯಲ್ಲಿ ಮಗುವಿನ ಸಾವು ಆಕೆನ್ನು ಬೆಚ್ಚಿ ಬೀಳಿಸುತ್ತದೆ.

ಒಂದು ಹಾಳಭೂಮಿಯ ಹುಲಿ ಬಂದು
ಎನ್ನ ಎಳೆಗರುವ ಭಕ್ಷಿಸಿತ್ತಲ್ಲಾ!
ಆ ಹುಲಿ ಹಾಳಿಗೆ ಹೋಗದು.
ಆ ಹುಲಿ ಎಳೆ ಗರುವ ಕಂಡು ಜನನಿಯಾಯಿತ್ತು,
ಇದೇನೆಂಬೆ ಗಂಗಾ ಪ್ರಿಯ ಕೂಡಲಸಂಗಮದೇವ?
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-290/ವಚನ ಸಂಖ್ಯೆ-753)

ಈ ಕಾಯ ಭೂಮಿಯೂ ಹೌದು. ಹುಲಿ ಮತ್ತು ಎಳೆ ಕರುವಿನ ವಾಸಸ್ಥಾನವು ಹೌದು. ಕಾಲ ವ್ಯಾಘ್ರನೆಂಬ ಹುಲಿ ಹುಟ್ಟು ಸಾವಿನ ಮಧ್ಯೆ ಓಲಾಡುತ್ತಿರುತ್ತದೆ. ಎಳೆಗರುವಿನ ಮನಸ್ಥಿತಿ ಹೊಂದಿದ ಗಂಗಾಂಬಿಕೆಯವರ ಮನಸ್ಸಿನಲ್ಲಿ ಹುಲಿಯು ಎಳೆ ಕರುವನ್ನು ಬೇಟೆಯಾಡುತ್ತದೆ. ಗಂಗಾಂಬಿಕೆಯವರಿಗೆ ಸಾವಾಗಿ ಬಂದ ಹುಲಿಯನ್ನು ಕಂಡು ಭಯಪಡುವ ಸನ್ನಿವೇಶ ಒಂದೆಡೆ. ಇನ್ನೊಂದೆಡೆ ಎಳೆಗರುವಿನ ಕರುಣೆಯ ಕೂಗು ಪ್ರತಿಧ್ವನಿಸುತ್ತದೆ. ಭಯದಲ್ಲಿ ಓಲಾಡುವ ಗಂಗಾಂಬಿಕೆಯವರಿಗೆ ಹುಲಿ ಸಾವಾಗಿ ಕಾಡುತ್ತದೆ. ಹುಲಿ ಬೆನ್ನಟ್ಟಿ ಕಾಡುವ ಭಯವನ್ನು ವ್ಯಕ್ತಪಡಿಸಿ ಹತಾಶಳಾಗುವ ಸನ್ನಿವೇಶದ ಸ್ಪಷ್ಟತೆ ಇಲ್ಲಿದೆ. ಎಳೆಗರುವೆಂಬ ಶರಣೆಗೆ ಹುಲಿ ಎಂಬ ಬೇಟೆಗಾರ ಹೊಂಚು ಹಾಕುವ ಸಮಯ ಬಂದಾಗ ಕೊಲ್ಲುವ ಮನಸ್ಥಿತಿಯ ಹೊಯ್ದಾಟಗಳಾಗಿವೆ.

ಬಸವಣ್ಣನವರ ಪತ್ನಿಯರಾದ ಗಂಗಾಂಬಿಕೆ ಮತ್ತು ನೀಲಾಂಬಿಕೆ ಈ ಇಬ್ಬರೂ ಶರಣೆಯರು ಸಂಸಾರದಲ್ಲಿದ್ದುಕೊಂಡೇ ಸತಿ-ಪತಿ ಭಾವದ ಮೂಲಕ ಶರಣ ಧರ್ಮದ ಮೌಲ್ಯಗಳನ್ನು ಗಟ್ಟಿಗೊಳಿಸಿದಂತವರು. ರಾಜಪ್ರಭುತ್ವ ವ್ಯವಸ್ಥೆಯಲ್ಲಿದ್ದುಕೊಂಡೆ ಸಮಾನತೆಗಾಗಿ ನವ ಸಮಾಜದ ಆಶಯಗಳಿಗಾಗಿ ತುಡಿದಿದ್ದರು. ರಾಣಿಯರಾಗಿ ಶರಣೆಯರಿಗೆ ಅತ್ಮವಿಶ್ವಾಸ ಧೈರ್ಯ ತುಂಬುವ ಮೂಲಕ ಸ್ವತಂತ್ರ ವ್ಯಕ್ತಿತ್ವವನ್ನು ಪಡೆದಿದ್ದರು. ಹೀಗಾಗಿ ಬಸವಣ್ಣನು ಬಿಜ್ಜಳನ ಆರ್ಥಿಕ ಮಂತ್ರಿಯಾಗಿ ರಾಜಕೀಯ ಸೂತ್ರಗಳನ್ನು ಹಿಡಿದುಕೊಂಡೆ ನ್ಯಾಯ-ನಿಷ್ಠೆಯಿಂದ ಕರ್ತವ್ಯವನ್ನು ನಿಭಾಯಿಸಿದ್ದರು. ಇದಕ್ಕೆ ಕಾರಣ ಬಸವಣ್ಣನವರ ಪತ್ನಿಯರಾಗಿದ್ದರು. ಬಸವಣ್ಣನವರ ಇಬ್ಬರೂ ಪತ್ನಿಯರು ಸಾಂಸಾರಿಕ, ಆಧ್ಯಾತ್ಮಿಕ ಜೀವನದಲ್ಲಿ ಸ್ತ್ರೀ-ಸಮಾನತೆಯನ್ನು ಬಿತ್ತರಿಸಲು ಸಾದ್ಯವಾಯಿತೆ ಎಂದು ನಾವು ಪ್ರಶ್ನೆ ಹಾಕಿಕೊಳ್ಳಬೇಕು. ಬಸವಣ್ಣನವರ ಕಿರಿಯ ಪತ್ನಿ ಬಿಜ್ಜಳನ‌ ಆಸ್ಥಾನದಲ್ಲಿದ್ದ ಸಿದ್ದರಸನವರ ಮಗಳು. ಬಿಜ್ಜಳನ ಸಾಕು ತಂಗಿ ನೀಲಾಂಬಿಕೆ.

ಈ ಇಬ್ಬರೂ ಪತ್ನಿಯರು ಜವಾಬ್ದಾರಿಯುತ ಸ್ಥಾನದಲ್ಲಿದ್ದವರು. ತಮ್ಮ ತಂದೆ-ತಾಯಿಗೆ ಮತ್ತು ತಮ್ಮ ಕುಟುಂಬಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕಾಗಿತ್ತು. ಬಸವಣ್ಭನವರ ಧರ್ಮಪತ್ನಿಯರಾಗಿ ಅಣ್ಣನವರ ವ್ಯಕ್ತಿತ್ವಕ್ಕೆ ಹಾನಿಯಾಗದಂತೆ ಎಚ್ಚರವಹಿಸಬೇಕಾಗಿತ್ತು. ಹಾಗೆಯೇ ತಮ್ಮ ಮಾನಸಿಕ ವಿಕಾಸಕ್ಕೆ ಊನವಾಗದಂತೆ ತೊಂದರೆಯಾಗದಂತೆ ತಮ್ಮ ಬೌದ್ಧಿಕತೆಯಲ್ಲಿ ಗಟ್ಟಿತನವನ್ನು ಹೊಂದಿದ್ದರು. ಹಾಗೆಯೇ ಸ್ವತಂತ್ರ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದರು.

ಆ ಕಾಲದಲ್ಲಿ ಜೈನ ಮತ್ತು ಬೌದ್ದ ಧರ್ಮಗಳ ಧಾರ್ಮಿಕತೆಯಿಂದ ಸನ್ಯಾಸಿನಿಯರಾಗುವುದು ಸಮಾಜದಲ್ಲಿತ್ತು. ಅಂದು ಅಕ್ಕ ಮಹಾದೇವಿಯವರು

ಎರದ ಮುಳ್ಳಿನಂತೆ ಪರಗಂಡರೆನಗವ್ವಾ.
ಸೋಂಕಲಮ್ಮೆ ಸುಳಿಯಲಮ್ಮೆ
ನಂಬಿ ನಚ್ಚಿ ಮಾತಾಡಲಮ್ಮೆನವ್ವಾ.
ಚೆನ್ನಮಲ್ಲಿಕಾರ್ಜುನನಲ್ಲದ ಗಂಡರಿಗೆ
ಉರದಲ್ಲಿ ಮುಳ್ಳುಂಟೆಂದು ನಾನಪ್ಪಲಮ್ಮೆನವ್ವಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-42/ವಚನ ಸಂಖ್ಯೆ-105)

“ಎರದ ಮುಳ್ಳಿನಂತೆ ಪರಗಂಡರೆನಗವ್ವಾ” ಎಂದು ಹೇಳಿ ವಿರಾಗಿಣಿಯಾಗಿ ಹೊರಹೋದಳು. ಅನುಭವ ಮಂಟಪದಲ್ಲಿ ಅಕ್ಕನಿಗೆ ವಿಶೇಷ ಸತ್ಕಾರ ನೀಡಿದ್ದರೂ ಗಂಗಾಂಬಿಕೆ ಮತ್ತು ನೀಲಾಂಬಿಕೆ ಶರಣೆಯರಿಗೆ ಪತಿಯೇ ಪರದೈವ.

ಕಾಯವಿಲ್ಲದೆ ಪ್ರಾಣವಿರದು, ಪ್ರಾಣವಿಲ್ಲದೆ ಕಾಯವಿರದು.
ಆ ಕಾಯ ಪ್ರಾಣಕ್ಕೆ ಮೂಲಿಗನಾದ ಬಸವ.
ಬಸವನಿಲ್ಲದೆ ಭಾವ ನೆಲೆಗೊಳ್ಳದು.
ಭಕ್ತಿ ಸಂಗಸಂಯೋಗವಾದರೆ
ಬಸವನಲ್ಲಿ ಬಯಲನವಲಂಬಿಸಿದೆ ನಾನು.
ಸಂಗಯ್ಯಾ, ರೂಪಿಲ್ಲದ ಬಹುರೂಪನಾದ ಬಸವಯ್ಯನು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-352/ವಚನ ಸಂಖ್ಯೆ-944)

“ಕಾಯವಿಲ್ಲದೇ ಪ್ರಾಣವಿರದು, ಪ್ರಾಣವಿಲ್ಲದೆ ಕಾಯವಿರದು ಕಾಯ ಮತ್ತು ಪ್ರಾಣಗಳಿಗೆ ಬಸವಣ್ಣ ಮೂಲಿಗನು. ಬಸವನಿಲ್ಲದೆ ಭಾವ ನೆಲೆಗೊಳ್ಳದು” ಎಂಬ ಭಾವ ನೀಲಾಂಬಿಕೆಯವರದಾಗಿತ್ತು. ಹೀಗಾಗಿ ಅಂದು ಸಮ ಸಮಾಜಕ್ಕಾಗಿ ಹೋರಾಟದ ತುಡಿತಗಳು ಸ್ತ್ರೀ ಸಂವೇದನೆಯ ಅಭಿಪ್ರಾಯಗಳು ಇನ್ನಷ್ಟು ಪಕ್ವ ಗೊಳ್ಳುತ್ತವೆ.

ಗಂಗಾಂಬಿಕೆಯವರು ಶರಣ ಧರ್ಮದ ಮೌಲ್ಯಗಳೊಂದಿಗೆ ಪ್ರಾಮಾಣಿಕವಾಗಿ ಧರ್ಮದ ಮೂಲಕ ಬದುಕುವುದರಲ್ಲಿ ಯಶಸ್ಸನ್ನು ಕಂಡಿದ್ದರು. ಬಸವಣ್ಣನವರ ಮತ್ತು ಗಂಗಾಂಬಿಕೆಯವರ ಸತಿ-ಪತಿ ಭಾವಗಳು ದಾಂಪತ್ಯ ಧರ್ಮದ ಚೌಕಟ್ಟಿನಾಚೆಗೆ ವ್ಯಕ್ತವಾಗಿವೆ. ಸೂಕ್ಷ್ಮ ಸ್ವಭಾವದ ವಿದ್ಯಾವಂತೆಯಾದ ಗಂಗಾಂಬಿಕೆಯವರಿಗೆ ಕೌಟುಂಬಿಕ ಅಶೋತ್ತರಗಳನ್ನು ಆಧ್ಯಾತ್ಮಿಕವಾಗಿ ವೈಚಾರಿಕ ಪ್ರಜ್ಞೆಯ ಮೂಲಕ ಗಟ್ಟಿಗೊಳಿಸುತ್ತಾರೆ.

ಪತಿಯಾಜ್ಞೆಯಲ್ಲಿ ಚರಿಪ ಸತಿಗ್ಯಾಕೆ ಪ್ರತಿಜ್ಞೆಯ?
ಪ್ರತಿಜ್ಞೆಯ ಪತಿಕರಲ್ಲಿ ಪೋಪದದಿರೆ ಯಾತನೆಯಲ್ಲವೆ?
ಇವಳ ಲಿಂಗ ನಿಷ್ಠೆ ಇವಳಿಗೆ,
ನಮ್ಮ ನಿಷ್ಟೆ ಪತಿಯಾಜ್ಞೆಯಲ್ಲಿ ಕಾಣಾ
ಗಂಗಾಪ್ರಿಯ ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-292/ವಚನ ಸಂಖ್ಯೆ-756)

ಅಂದು ಸಮಾಜದಲ್ಲಿ ಲೌಕಿಕ ನೆಲೆಯಲ್ಲಿ ಅಸಮಾನತೆ ಬಹುದೊಡ್ಡ ಕಂದಕವಾಗಿತ್ತು. ರಾಜ ಮನೆತನದ ಸ್ತ್ರೀಯರಾದ ಈ ಶರಣೆಯರಿಗೆ ಧಾರ್ಮಿಕ ಬೋಧನೆ, ಪಾತಿವ್ರತ್ಯ ಸಮಾಜದ ಸುಧಾರಣೆಗಳು ಮಾನವೀಯ ಗುಣಗಳಾಗಿದ್ದವು. ತಮ್ಮ ಯೋಗ್ಯತೆ ಮೀರಿ ತಮಗೆ ನಿರ್ವಹಿಸಿದ ಕೆಲಸದಲ್ಲಿ ಭಾಗಿಯಾಗುತ್ತಿದ್ದರು. ಅನುಭವ ಮಂಟಪದ ಕಾರ್ಯ ಕಲಾಪಗಳಲ್ಲಿ ಪತಿಯ ಆಜ್ಞೆಯಂತೆ ತನ್ನ ಸೇವೆಯನ್ನು ಸಲ್ಲಿಸಿ ಕೃತಾರ್ಥಳಾಗಿದ್ದಳು. ರುದ್ರಮುನಿ ಗುರುಗಳ ಶಿಷ್ಯಳಾಗಿ ಬಸವಣ್ಣನವರ ಆದರ್ಶ ಸತಿಯಾಗಿ ಬಿಜ್ಜಳನ ಮಹಾಮಂತ್ರಿ ಬಲದೇವನ ಮಗಳಾಗಿ ಗಂಗಾಂಬಿಕೆಯವರು ಗುರುತಿಸಿಕೊಂಡಿದ್ದರು.

ಸ್ತ್ರೀ ಶಕ್ತಿ ಪ್ರಧಾನವಾಗಿ ಗುರುತಿಸಿಕೊಂಡ ಕಾಲದ ಶರಣರಲ್ಲಿ ಮಹಾ ಶರಣೆಯಾಗಿ ಬಸವರಸರ ಹಿರಿಯ ಪತ್ನಿಯಾಗಿ ಉತ್ಸಾಹದಿಂದ ಧಾರ್ಮಿಕ ವಲಯದಲ್ಲಿ ಪಾಲ್ಗೊಳ್ಳುತ್ತಿದ್ದರು. ಪತಿಯಾಜ್ಞೆ, ಪ್ರತಿಜ್ಞೆ ಎಂಬ ಪದಗಳ ಅರ್ಥ ನಿಶ್ಕಲ್ಮಶ ಮನದ ಸತ್ಯವನ್ನು ಮುಂದೆ ಮಾಡುತ್ತವೆ. ಪ್ರತಿಜ್ಞೆ ಮಾಡುವುದು ಬಹು ದೊಡ್ಡ ವಿಷಯ. ಬಸವಣ್ಣನವರ ಖ್ಯಾತಿಗೆ ಗಂಭೀರವಾದ ಗುರುತು. ಮನದ ದುರ್ಬಲತೆಯನ್ನು ದೂರ ಮಾಡುವ ಅಸ್ತ್ರ ಪ್ರತಿಜ್ಞೆಯಾಗಿತ್ತು. ಹೀಗಾಗಿ ಶರಣ ಸಂಸ್ಕೃತಿಯಲ್ಲಿ ಸ್ತ್ರೀ ಪ್ರಧಾನ ಅಂಶಗಳಲ್ಲಿ ವಚನಗಳ ಬರವಣಿಗೆಯೂ ಒಂದಾಗಿತ್ತು. ಅಷ್ಟಾವರಣದ ವ್ಯಾಖ್ಯಾನಗಳು ವಚನ ಸಂಸ್ಕೃತಿಯ ನೆಲೆಗಟ್ಟಿನಿಂದ ಉಗಮಗೊಂಡಿದ್ದರಿಂದ ”ನಮ್ಮ ನಿಷ್ಠೆ ಪತಿಯಾಜ್ಞೆಯಲಿ ಕಾಣಾ“ ಈ ಧ್ವನಿ ಶರಣರ ಧಾರ್ಮಿಕ ವಲಯದಿಂದ ಪ್ರಾರಂಭವಾಗಿದ್ದನ್ನು ಗಮನಿಸಬಹುದು. ಏಕೆಂದರೆ ಮಹಿಳೆಯರ ಸ್ಥಾನ ಸಾಮಾಜಿಕ ಸಂಬಂಧಗಳನ್ನು ಅರಿಯುವಲ್ಲಿ ಇಂತಹ ವಚನಗಳು ದಾಖಲಾತಿಗಳೆನಿಸುತ್ತವೆ.

ಗಂಗಾಂಬಿಕೆಯವರ ಪತಿಯ ನಿಷ್ಠೆ ಆ ಕಾಲದಲ್ಲಿ ಸಹಜವಾದದ್ದು. ಮೃತ್ಯು ಪ್ರಚಲಿತವೂ ಹೌದು. ಅಣ್ಣ ಲೌಕಿಕ ಪತಿಯಾಗದೆ ಶರಣ ಧರ್ಮದ ಮೌಲ್ಯಗಳ ನೇತಾರರಾಗಿದ್ದರು. ಅಣ್ಣನವರ ಪಾದಗಳಲ್ಲಿ ಪಾದೋದಕದ ಸ್ವೀಕಾರ ಭಾವ ವಚನ ಸಂಸ್ಕೃತಿಯ ಆರಾಧನಾ ಭಾವವಾಗಿತ್ತು. ಹೀಗಾಗಿ ಪತಿಯ ಜೊತೆಗಿನ ಅಂತರಂಗದ ಅನುಭಾವದ ನಿಷ್ಠೆಯಾಗಿತ್ತು.

ಸಂಸಾರ ಮತ್ತು ಆಧ್ಯಾತ್ಮಿಕ ಪಯಣದಲ್ಲಿ ಓಲಾಡುವ ಮನಸ್ಸು ಹತಾಶೆಗೆ ಒಳಪಟ್ಟಿರುತ್ತದೆ. ಶ್ರೀಮಂತಿಕೆ ವಿದ್ಯೆ, ಪ್ರತಿಭೆ ಏನೇ ಅವಕಾಶಗಳಿದ್ದರೂ ಆಧ್ಯಾತ್ಮದ ಮೂಲಕ ಪ್ರವೇಶಿಸಲು ಸಾದ್ಯವಾಗದೇ ಇದ್ದಾಗ ಮಾನಸಿಕವಾಗಿ ದುರ್ಬಲಳಾಗಿರುವ ಸಾಧ್ಯತೆ ಇರುತ್ತದೆ. “ಬಸವಣ್ಣ ನಮ್ಮ ಹಂಗಿನವನೂ ಅಲ್ಲ, ನಮ್ಮ ಜೊತೆಯಲ್ಲಿ ಇರುವವನೂ ಆದರೂ ನಮ್ಮನ್ನು ಮೀರಿದ ಬೇರೆ ಲೋಕದವನೂ ಅಲ್ಲ” ಎಂದು ನೀಲಾಂಬಿಕೆಯವರು ಸ್ಪಷ್ಟಪಡಿಸುತ್ತಾರೆ. ಏಕೆಂದರೆ ನೀಲಾಂಬಿಕೆಯವರು ಸಂಸಾರವನ್ನು ತತ್ವ ಸಮ್ಮತವಾಗಿ ನೋಡಿದ್ದರು. ಇದು ಇಬ್ಬರೂ ಶರಣೆಯರ ಪತಿ ನಿಷ್ಠೆಯ ಸಮರ್ಥನೆಯಾಗಿದೆ. ಗಂಡು ಸಂತತಿಯಾಗಬೇಕೆಂಬ ಬಯಕೆ ಹೊತ್ತ ಆ ಕಾಲದಲ್ಲಿ ವೀರಪತ್ನಿ ವೀರಮಾತೆ ಎಂದು ತಮ್ಮನ್ನು ಗುರುತಿಸಲಿ ಎಂಬ ಬಯಕೆ ಇದ್ದ ಸ್ತ್ರೀಯರು. ಆ ಕಾಲದಲ್ಲಿ ಅನೇಕ ವ್ರತಗಳನ್ನು ಮಾಡಿ ಗಂಡು ಮಗುವನ್ನು ಪಡೆಯುತ್ತಿದ್ದರು. ಆದರೆ ಗಂಗಾಬಿಕೆಯವರಿಗೆ ಪತಿಯೇ ಪರದೈವವೆಂಬ ನಂಬಿಕೆ ಅವರದು. ವಿಶ್ವವೆಂಬ ಮಹಾಮನೆಯ ಸಂಸಾರದಲ್ಲಿ ಅನುಭಾವ ಮಾರ್ಗದ ಅನುಭೂತಿ ನೀಡುವ ಗುರು ಬಸವಣ್ಣನವರಾಗಿದ್ದರು.

ನಮ್ಮಯ್ಯನ ಮನದಲ್ಲಿ ಮಾತಿನಲ್ಲಿ ಸೂಸುವ ಮೂರ್ತಿ
ನೋಡನೋಡುತ್ತ ಬಯಲಾಯಿತ್ತಲ್ಲಾ!
ಇದು ಅಲ್ಲಮಯ್ಯ ಮಾಡಿದ ಬೇಟ.
ಹೋದುದು ನಿಶ್ಚಯವಾದಡೆ, ಕರುಳು ಕಳವಳಿಸುತ್ತಿದ್ದವು.
ಇಂತಪ್ಪ ಕಂದ ಪೋದಡೆಯೂ ಪೋಗಿಲ್ಲ.
ಗಂಗಾಪ್ರಿಯ ಕೂಡಲಸಂಗನ ಶರಣರ
ಮೊಲೆಯನುಂಬುದಕ್ಕೆ ಬಾರ, ಕೇಳಾ ಚೆನ್ನಬಸವಣ್ಣಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-291/ವಚನ ಸಂಖ್ಯೆ-754)

ಮಗುವಿಲ್ಲದ ನನ್ನ ಬದುಕು ಊನವಾಯ್ತಲ್ಲ ಎಂಬ ಹತಾಶೆ ನೋವು ದಟ್ಟವಾದಾಗ ಗಂಗಾಂಬಿಕೆ ಪತಿಯ ಪ್ರೀತಿಗಾಗಿ ಹಂಬಲಿಸುತ್ತಾಳೆ. ಹೀಗಾಗಿ ಬಸವಣ್ಣನವರು ತಮ್ಮ ಭಾವನೆಗಳನ್ನು ಆದರಿಸುವ ತಂದೆಯಂತೆ, ಗುರುವಿನಂತೆ, ಸ್ನೇಹಿತನಂತೆ ಇರಬೇಕೆಂಬ ಮನಸ್ಥಿತಿ ಅವರದು. ಮಾತುಗಳೇ ವಚನಗಳಾದ ಸಂಧರ್ಭದಲ್ಲಿ ಅಂತರಂಗ ಮತ್ತು ಬಹಿರಂಗದಲ್ಲಿ ಬಸವಣ್ಣನವರ ಮೂರ್ತರೂಪದ ಮೂಲಕ ಸಾರ್ಥಕತೆಯ ಬೆಳಕು ಹಚ್ಚಬೇಕೆಂದು ಬಯಸುತ್ತಾಳೆ.

ಅಲ್ಲಮರ ಬಗ್ಗೆ ಅಪಾರ ಗೌರವವಿದ್ದ ಕಾರಣ ಬಸವಣ್ಣನವರ ಆಧ್ಯಾತ್ಮಿಕ ಶಕ್ತಿಯನ್ನು ಬಯಲ ಭಾವದಲ್ಲಿ ಕಂಡಿದ್ದರು. ಅವರು ಕಂಡುಕೊಂಡಂತೆ ಪರಸೇವೆ ಎನ್ನುವುದು ಮಾತೃ ಹೃದಯದ ತಾಯ್ತನವಾಗಿತ್ತು. ತಬ್ಬಲಿತನದಲ್ಲಿ ಬರಡಾದ ಕರಳು ಶರಣ ಶರಣೆಯರ ಮಹಾಮನೆಯ ಅನುಭಾವದಲ್ಲಿ ಮಮತೆಯನ್ನು ಹಂಚುವ ಗುರುವಾಗಿ ತಾಯಿಯಾದರು. ಕೂಡಲಸಂಗನ ಶರಣರ ಮೊಲೆ‌ಯನುಂಬುವದಕ್ಕೆ. ಇದು ಗಂಗಾಂಬಿಕೆಯವರ ಸೂಕ್ಷ್ಮವಾದ ಸ್ತ್ರೀ ಶಕ್ತಿಯದು. ಶರಣ ಶರಣೆಯರ ಮಡಿಲು ತಾಯಿಯ ಮಡಿಲೆಂದು ನಿವೇದಿಸುವರು. ಶರಣರ ಸಾಮಿಪ್ಯ ಶಿವತತ್ವದ ತಾಯಿಭಾವವಾಗಿ ಪ್ರತಿಕ್ರಿಯಿಸಿದ್ದಾಳೆ. ಶರಣ ಚೆನ್ನಬಸವಣ್ಣನವರನ್ನು ತನ್ನ ಮಗನಂತೆ ಪ್ರೀತಿಸಿ ಮಮತೆಯ ತಾಯಿಯಾಗಿದ್ದನ್ನು ಗಮನಿಸಬೇಕು. ಅಂದು ಸಮಾಜವು ಕೆಲ ಇತಿ-ಮಿತಿಗಳನ್ನು ರೂಪಿಸಿತ್ತು. ಸ್ತ್ರೀಯರು ಸದಾ ತಮ್ಮ ಮಿತಿಯಲ್ಲಿರಬೇಕೆಂದು ನಿರ್ಬಂಧಿಸಿತ್ತು. ರಾಜರ ಆಳ್ವಿಕೆಯಲ್ಲಿ ರಾಣಿಯಾದವಳು ಭೋಗದ ವಸ್ತುವಾಗಿದ್ದಳು. ಭೂಮಿಯೊಂದಿಗೆ ಹೆಣ್ಣನ್ನು ಗೆಲ್ಲುವುದು ಸಾಮಾನ್ಯವಾಗಿತ್ತು.

ಶರಣರ ಸ್ತ್ರೀ ಪರ ವ್ಯಾಖ್ಯೆಗಳು ಮಾಯೆಯ ಮೂಲಕ ಪ್ರಕಟವಾಗಿದ್ದವು. ಸ್ತ್ರೀ ಬದುಕಿನ ಅಸ್ವಸ್ಥತೆ ಶೋಷಣೆಯ ಬದುಕು ಶಿಕ್ಷಣ ಸೌಲಭ್ಯದ ಅಭಾವ, ಬಾಲ್ಯ ವಿವಾಹದಂತಹ ಕಠಿಣತೆ ಬಹು ಪತ್ನಿತ್ವದಂತಹ ಒತ್ತಡಗಳಿಂದ ಸ್ತ್ರಿಯರ ಬದುಕು ಅಸಹನೀಯ ಯಾತನೆಗಳಿಂದ ಕೂಡಿತ್ತು. ವೇದಾಂತದಲ್ಲಿ ಸ್ತ್ರೀಯನ್ನು ಮಾಯೆಯಾಗಿ ಹೊರಗಿಟ್ಟಿದ್ದರು. ತಂತ್ರದಲ್ಲಿ ಸ್ತ್ರೀಯನ್ನು ಶಕ್ತಿಯಾಗಿ ಪೂಜಿಸಲ್ಪಟ್ಟರು. ಸಾಂಖ್ಯದಲ್ಲಿ ಸ್ತ್ರೀಯನ್ನು ಪ್ರಕೃತಿಯನ್ನಾಗಿಸಿದ್ದರು. ಈ ಎಲ್ಲಾ ಅಸ್ಪಷ್ಟ ಶೋಷಣೆ ಸಮಾಜದಲ್ಲಿದ್ದವು. ಈ ಇತಿ-ಮಿತಿಗಳ ನಡುವೆ ಶರಣರು ಸತಿ ಪತಿಭಾವದ ಮೇರುತನವನ್ನು ಸಮಾನತೆಯ ಎಚ್ಚರಿಕೆಯನ್ನು ಮರು ಆಶಯಗಳ ಮೂಲಕ ಕಟ್ಟಿಕೊಟ್ಟರು. ಸತಿ ಪತಿಯ ಸಂಬಧಗಳು ಲೌಕಿಕದ ಜೊತೆಗೆ ಆಧ್ಯಾತ್ಮಿಕವಾಗಿ ಗಟ್ಟಿಯಾಗಿರಬೇಕೆಂಬ ಜೀವನ ತತ್ವವಾಗಿರಬೇಕೆಂದು ಬಯಸಿದ್ದರು.

ಶರಣ ಸಂಸ್ಕೃತಿಯು ಆಧ್ಯಾತ್ಮಿಕ ಪಥವನ್ನು ಮೀರಿ ಹೆಚ್ಚಿನ ಅವಕಾಶ ಸ್ವತಂತ್ರತೆಯನ್ನು ನೀಡಿತ್ತು. ಗಂಗಾಂಬಿಕೆಯವರಂಥ ಪ್ರಬುದ್ಧ ವಚನಕಾರ್ತಿ ಶರಣ ಧರ್ಮದ ಅನೇಕ ಶರಣ ಶರಣೆಯರನ್ನು ವಚನಗಳ ಮೂಲಕ ನೆನಪಿಸಿಕೊಂಡಿದ್ದಾರೆ. ಮಹಾಮನೆಯ ಉಸ್ತುವಾರಿಯಲ್ಲಿ ಎಲ್ಲಾ ಶರಣರ ಯೋಗಕ್ಷೇಮ ಕಾಳಜಿಗಳಿಂದ ಗಂಗಾಂಬಿಕೆಯವರನ್ನು ತಾಯಿ ಎಂದೇ ಗುರುತಿಸಿದ್ದಾರೆ. ಹೀಗಾಗಿ ಮಹಿಳೆಯರೆಂದರೆ ಮಾನವತಾವಾದದ ಹೊಸ ಎಚ್ಚರವನ್ನು ಈ ಕಾಲದಲ್ಲಿ ಕಾಣಲು ಸಾಧ್ಯವಾಗುತ್ತದೆ. ಅನುಭವ ಮಂಟಪದಲ್ಲಿ ಅನೇಕ ಶರಣೆಯರು ಅಕ್ಷರ ಸಂಸ್ಕೃತಿಗೆ ಸೇರ್ಪಡೆಯಾದರು. ಉತ್ಸಾಹದಿಂದ ವಚನಗಳ ಬರವಣಿಗೆಗೆ ತಮ್ಮನ್ನು ತೊಡಗಿಸಿಕೊಂಡರು.

ಬಸವಣ್ಣನವರಂತ ಆದರ್ಶ ಪುರುಷ ಶರಣ ಸಂಸ್ಕೃತಿಯ ನೇತಾರ ಬಿಜ್ಜಳನ ಆರ್ಥಿಕ ಮಂತ್ರಿಯಂತಹ ಪ್ರಭಾವ ವಲಯದಲ್ಲಿದ್ದ ಗಂಗಾಬಿಕೆಯವರ ಜ್ಞಾನವನ್ನು ಹಂಚುವ ಪ್ರಬುದ್ಧರಾಗಿ ಪರಿವರ್ತಿಗರಾಗುತ್ತಾರೆ. ತಮ್ಮ ವೈಯಕ್ತಿಕ ಬದುಕಿನ ಮಿತಿಗಳನ್ನು ಮೀರುತ್ತಲೇ ನಿಗೂಢವಾದ ಆಧ್ಯಾತ್ಮಿಕ ಪ್ರಪಂಚಕ್ಕೆ ಸೇರ್ಪಡೆಯಾಗುತ್ತಾರೆ.

ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಬಸವಣ್ಣನವರಿಗೆ ಧೈರ್ಯ ತುಂಬಿ ಅನೇಕ ಅಡೆ ತಡೆ ಕಷ್ಟಗಳು ಬಂದಾಗ ವೈಚಾರಿಕತೆಯಿಂದ ನಿರ್ಧಾರ ತೆಗೆದುಕೊಂಡು ಸಮಸ್ಯೆಗಳನ್ನು ಸರಳಗೊಳಿಸುತ್ತಿದ್ದರೆಂದು ತಿಳಿದು ಬರುತ್ತದೆ. ಕಲ್ಯಾಣ ಕ್ರಾಂತಿಯ ನಂತರ ಬಸವಣ್ಣನವರು ಸಂಗಮಕ್ಕೆ ಹೋಗುತ್ತಾರೆ. ಆದರೆ ಗಂಗಾಂಬಿಕೆಯವರು ತನ್ನ ಆತ್ಮಬಲದಿಂದ ಶರಣ ಧರ್ಮದ ರಕ್ಷಣೆ ಮಾಡುತ್ತಾರೆ. ಕ್ರಾಂತಿಗೆ ಸಮಗ್ರ ರೂಪ ಬರಬೇಕಾದರೆ ಅದು ಗಂಗಾಂಬಿಕೆಯವರ ನಾಯಕತ್ವದಿಂದ ಎಂಬುದನ್ನು ಸ್ಪಷ್ಟಪಡಿಸಬಹುದು.

ಮಡಿವಾಳ ಮಾಚಿದೇವರು ಕಲ್ಯಾಣ ಕ್ರಾಂತಿಯ ವ್ಯವಸ್ಥೆಯ ಒಂದು ಭಾಗ. ಮಡಿವಾಳ ಮಾಚಿದೇವರು ಚನ್ನಬಸವಣ್ಣನವರ ಸಹಕಾರದೊಂದಿಗೆ ವೀರ ಪಡೆಯನ್ನು ಕಟ್ಟುತ್ತಾರೆ. ಯುದ್ಧದಲ್ಲಿ ಅಗಲಿದ ಅನೇಕ ಶರಣರನ್ನು ನೆನೆದು ಶೋಕದಲ್ಲಿ ಮಡಿವಾಳ ಮಾಚಿದೇವರು ದುಃಖಿತರಾಗಿದ್ದ ಸಮಯದಲ್ಲಿ.

ಮಡಿವಾಳಣ್ಣಂಗೇಕೆ ಬಾರದವ್ವಾ ಕರುಣಾರಸ?
ಮಡಿವಾಳಣ್ಣಂಗೇಕೆ ಬಾರದವ್ವಾ ಶೌರ್ಯರಸ?
ಮಡಿವಾಳಣ್ಣಂಗೇಕೆ ಬಾರದವ್ವಾ ಅದ್ಬುತರಸ?
ಮಡಿವಾಳಣ್ಣಂಗೇಕೆ ಬಾರದವ್ವಾ
ಗಂಗಾಪ್ರಿಯ ಕೂಡಲಸಂಗನ ಶರಣಪ್ರಾಣ
ದಾನರಸ ಸಿದ್ದರಾಮಯ್ಯಾ?
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-292/ವಚನ ಸಂಖ್ಯೆ-757)

ಸಾವಿಗೂ ಹೆದರದ ಪ್ರೋತ್ಸಾಹದ ಈ ಗಟ್ಟಿತನ ಗಂಗಾಂಬಿಕೆಯವರಿಗಲ್ಲದೆ ಮತ್ತಾರಲ್ಲೂ ಕಾಣಲು ಸಾಧ್ಯವಿಲ್ಲ. ಸಹಾನುಭೂತಿಯ ಒಂದು ಅಂಶ ಕರುಣ ರಸ ಶರಣರ ಮರಣ ಸಮೀಪವಾದಂತೆಲ್ಲಾ ಸಾವಿನಲ್ಲಿ ಕೊನೆಯಾಗುವ ದುಃಖದ ಮಾತುಗಳಾಗಿವೆ. ಧೈರ್ಯ ತುಂಬುವ ವಾತಾವರಣದಲ್ಲಿ ಗಂಗಾಂಬಿಕೆಯವರಿಗೆ ಭಯ ಆವರಿಸಿದೆ. ಹೋರಾಟದ ಕೆಚ್ಚು ದುಃಖವಾದಾಗ ತನ್ನೆದುರೇ ಸಾವಿನ ಅಪಾಯ ದೃಶ್ಯ ಕಂಡು ಶೋಕದಿಂದ ಮಿಡಿಯುತ್ತಾರೆ. ಮಡಿವಾಳ ಮಾಚಿದೇವರು ಯುದ್ಧದಲ್ಲಿ ಕೊನೆಯಾದಾಗ ಅದ್ಭುತರಸವೆಂದು ಸಿದ್ದರಾಮ ಶರಣರ ಮುಂದೆ ದುಃಖವನ್ನು ಹಂಚಿಕೊಳ್ಳುತ್ತಾರೆ. ಶರಣರ ಧರ್ಮದ ಈ ಕ್ರಾಂತಿ ಸದಾ ಇತಿಹಾಸದಲ್ಲಿ ಕಾಡುತ್ತಿರುತ್ತದೆ.

ವಚನಗಳ ಕಟ್ಟುಗಳನ್ನು ತಲೆಯ ಮೇಲೆ ಹೊತ್ತುಕೊಂಡು ಶರಣರು ಮಲಪ್ರಭಾ ನದಿ ತೀರದ ಕಾದರವಳ್ಳಿಗೆ ಬರುತ್ತಾರೆ. ಉಳುವಿಗೆ ಹೊರಟ ಈ ಶರಣ ಸಮೂಹ ಬಿಜ್ಜಳನ ಸೈನ್ಯದೊಂದಿಗೆ ಸೆಣಸುತ್ತದೆ. ಈ ಹೋರಾಟದಲ್ಲಿ ವೀರ ವನಿತೆಯಾಗಿ ಪಾಲ್ಗೊಂಡ ಗಂಗಾಂಬಿಕೆಯವರು ಅದೇ ಸ್ಥಳದಲ್ಲಿ ವೀರ ಮರಣವನ್ನಪ್ಪುತ್ತಾರೆ.

ಬೆಳಗಾವಿ ಜಿಲ್ಲೆಯ ಮಗುಟಖಾನ ಹುಬ್ಬಳ್ಳಿ ಎಂಬ ಸ್ಥಳದಲ್ಲಿ ಐಕ್ಯರಾದಳೆಂದು ಶ್ರೀ. ದಿ. ಫ ಗು ಹಳಕಟ್ಟಿಯವರು ಹೇಳಿದ್ದಾರೆ. ಮಗುಟಖಾನ ಹುಬ್ಬಳ್ಳಿ ಸಮೀಪ ಮಲಪ್ರಭಾ ನದಿಯ ದಂಡೆಯ ಮೇಲೆ ಗಂಗಾಂಬಿಕೆಯವರ ಸಮಾಧಿ ಸ್ಮಾರಕವಾಗಿ ಉಳಿದಿದೆ.

ಗಂಗಾಂಬಿಕೆ ತಾಯಿ ಗುಂಗೆಲ್ಲಾ ಶಿವನಲ್ಲಿ
ಗಂಗ್ಯಾಗಿ ಹರದಾಳ ಕಲ್ಯಾಣಕ

ಜನಪದರ ಈ ಹಾಡಿನಲ್ಲಿ ಗಂಗಾಂಬಿಕೆಯವರ ಜೀವನದ ಸೂಕ್ಷ್ಮತೆಗಳನ್ನು ದಾಖಲಿಸಿದೆ. ಶರಣೆಯ ಈ ತ್ಯಾಗದ ಬದುಕಿನಲ್ಲಿ ಗಂಗೆಯಂತೆ ನಿರರ್ಗಳವಾಗಿ ಹರಿದು ಪರಿಶುಭ್ರತೆಯನ್ನು ನೀಡಿದರು. ಹೀಗೆ ಅವರ ಮನಸ್ಸಿನ ತಲ್ಲಣ ಹೊಯ್ದಾಟಗಳು ವಚನ ಸಂಸ್ಕೃತಿಯಲ್ಲಿ ಪ್ರತ್ಯೇಕತೆಯನ್ನು ಬಿಂಬಿಸುತ್ತವೆ.

ತಾತ್ವಿಕವಾಗಿ ಗಂಗಾಂಬಿಕೆಯವರ ಕೇವಲ 9 ವಚನಗಳು ಇದ್ದರೂ ಕೂಡ 12 ನೇ ಶತಮಾನದಲ್ಲಿ ಬಸವಣ್ಣನವರ ಹಿರಿಯ ಪತ್ನಿಯಾಗಿ ಗೌರವವನ್ನು ಹೆಚ್ಚಿಸಿಕೊಂಡಂಥವರು. ಅವರ ವಚನಗಳ ಅಸ್ತಿತ್ವ ಸ್ತ್ರೀಯಾತ್ಮಕವಾಗಿ ಚರ್ಚೆಗೆ ಎತ್ತಿಕೊಳ್ಳಲು ಸಾಧ್ಯವಾಗುತ್ತದೆ. ಭಾಷೆಯ ಅವಲೋಕನದಲ್ಲಿ ಮಾತೃ ಪ್ರಧಾನತೆಗೆ ಮುಕ್ತವಾಗಿ ತೆರೆದುಕೊಳ್ಳುತ್ತವೆ. ಏಕೆಂದರೆ ವಚನದಲ್ಲಿ ದಾಖಲಿತವಾದಂತೆ ಮಹಿಳೆಯ ಅನುಭವ ಮತ್ತು ಅನುಭಾವ ಪ್ರಾಮಾಣಿಕವಾಗಿ ಶರಣ ಧರ್ಮದಲ್ಲಿ ಮರು ಚರ್ಚೆಗೆ ಒಳಪಡುತ್ತಿರಬೇಕು. ಗಂಗಾಂಬಿಕೆಯವರ ವ್ಯಕ್ತಿತ್ವವೆಂದರೆ ಶರಣ ಧರ್ಮದ ವಿಕಾಸಕ್ಕೆ ಮಾದರಿಯಾಗಿ ಅನೇಕ ಶರಣ ಶರಣೆಯರಿಗೆ ತಾಯಿಯಾಗಿ ಸಹೋದರಿಯಾಗಿ ಗೌರವದ ಮನ್ನಣೆ ಪಡೆದುಕೊಂಡಾಕೆ.

ಸಾಂದ್ರವಾಗಿ ಹಗರಣಭಕ್ತಿಯ ಮಾಳ್ಪನೆಂತೊ
ಮಾದಲಾಂಬಿಕಾನಂದನನು?
ಸಾಂದ್ರವಾಗಿ ಬಿಜ್ಜಳನರಮನೆಯ ನ್ಯಾಯ ನೋಳ್ಪನೆಂತೊ
ಮಾದರಸನ ಮೋಹದ ಮಗನು?
ಸಾಂದ್ರವಾಗಿ ಲಿಂಗಾರ್ಚನೆ ಲಿಂಗತೃಪ್ತಿ ಅನುಗೆಯ್ವನೆಂತೋ
ಗಂಗಾಪ್ರಿಯ ಕೂಡಲಸಂಗನ ಶರಣ ಚೆನ್ನ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-292/ವಚನ ಸಂಖ್ಯೆ-759)

ಬಸವಣ್ಣನವರ ಹಿರಿದಾದ ವ್ಯಕ್ತಿತ್ವಕ್ಕೆ ಅದಮ್ಯ ಪ್ರೀತಿ ಕಾಳಜಿ ಗೌರವ ಗಂಗಾಂಬಿಕೆಯವರಿಗೆ. ಅಣ್ಣನು ನಿಷ್ಠೆಯಿಂದ ನ್ಯಾಯಯುತವಾಗಿ ಬಿಜ್ಜಳನ ರಾಜ್ಯದ ಮತ್ತು ಅರಮನೆಯ ವ್ಯವಹಾರಗಳನ್ನು ಸಮರ್ಥವಾಗಿ ನಿಭಾಯಿಸುವ ಬಿಜ್ಜಳನ ಬಂಡಾರವನ್ನು ಕಾಪಾಡುವ ಶರಣ ಪರಿವಾರವನ್ನು ರಕ್ಷಿಸುವ ಹೊಣೆ ಅಣ್ಣನವರದಾಗಿತ್ತು. ಈ ಎಲ್ಲಾ ಕರ್ತವ್ಯಗಳನ್ನು ಪತಿ ಹೇಗೆ ಮಾಡುವರೆಂಬ ಆತಂಕ ಗಂಗಾಂಬಿಕೆಯವರಿಗಿತ್ತು. ಬಸವಣ್ಣನವರ ಕಾರ್ಯ ಕಲಾಪಗಳು ಅವರ ದೈತ್ಯ ವ್ಯಕ್ತಿತ್ವವನ್ನು ಗೌರವಿಸುವ ಈ ಶರಣೆಗೆ ಅಣ್ಣನವರ ತಂದೆ ತಾಯಿಯರನ್ನು ಉನ್ನತ ಸ್ಥಾನಲ್ಲಿಟ್ಟು ಆರಾಧಿಸಿದ್ದರು. ಧರ್ಮದ ಚರಿತ್ರೆಯಲ್ಲಿ ಹಿರಿಯರಿಗೆ ಶರಣಾಗುವ ಗುಣ ಗಂಗಾಂಬಿಕೆಯವರಿಗಲ್ಲದೆ ಮತ್ತಾರಿಗೆ ಬರಲು ಸಾದ್ಯ? ಆದರೂ ಕಲ್ಯಾಣ ಕ್ರಾಂತಿಯ ಮುನ್ಸೂಚನೆಯ ಭೀತಿ ಹೆಚ್ಚಾದಾಗ ಬಸವಣ್ಣನವರಿಗೆ ಅಪಾಯವೇ? ಗಂಗಾಂಬಿಕೆಗೆ ಆತಂಕ ಹೆಚ್ಚಾಗುತ್ತದೆ. ಮನ ಕಾಯ ಲಿಂಗವಾದ ದಾರ್ಶನಿಕ ಬಸವಣ್ಣನವರು ಶರಣ ಧರ್ಮದ ವ್ಯಾಖ್ಯಾನಗಳನ್ನು ಸ್ವ ಪ್ರಜ್ಞೆಯ ಮೂಲಕ ಸಮಾಜಕ್ಕೆ ಹಂಚಿದ ಅಣ್ಣನವರಿಗೆ ಅಪಾಯವೆ? “ಸಾಂದ್ರವಾಗಿ ಬಿಜ್ಜಳನರಮನೆಯ ನ್ಯಾಯ ನೋಳ್ಪನೆಂತು?” ಎಂದು ಚಿಂತಿಸುತ್ತಾರೆ. ಗಂಗಾಂಬಿಕೆಯವರ ವೈಚಾರಿಕ ಪ್ರಾಮಾಣಿಕ ಅಭಿವ್ಯಕ್ತತೆ ಈ ವಚನದಲ್ಲಿ ಇನ್ನೂ ಹೆಚ್ಚು ಆತ್ಮೀಯವಾಗುತ್ತದೆ. ವಚನ ಸಾಹಿತ್ಯದಲ್ಲಿ ಸ್ಥಾಯಿ ಭಾವವಾಗಿ ವಿಶೇಷವಾಗಿ ಗಮನ ಸೆಳೆಯುತ್ತದೆ. ಮನ ತೇವವಾಗುತ್ತದೆ..

ಡಾ. ಸರ್ವಮಂಗಳ ಸಕ್ರಿ,
ಹಿರಿಯ ಲೇಖಕರು.
ಅದ್ಯಕ್ಷರು: ಜಾಗತಿಕ ಲಿಂಗಾಯತ ಮಹಾಸಭಾ, ಮಹಿಳಾ ಘಟಕ.
ರಾಯಚೂರು ಜಿಲ್ಲೆ.
ಮೋಬೈಲ್‌ ಸಂ. +91 94499 46839

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

Leave a Reply