ಪರಮ ಪೂಜ್ಯ ನಿರುಪಾಧೀಶ ಸ್ವಾಮೀಜಿಯವರ ವಚನಗಳು: ವಿಭೂತಿ – 2 / ಡಾ. ಪುಷ್ಪಾವತಿ ಶಲವಡಿಮಠ, ಹಾವೇರಿ.

ಅಕ್ಷರಗಳು ಮೂರ್ತರೂಪವೆತ್ತಿದಂತೆ ನಿಂತ ಮಹಾಂತರು, ಸಂತರು, ಶರಣರು ಪೂಜ್ಯ ನಿರುಪಾಧೀಶ ಸ್ವಾಮಿಗಳು. ಪೂಜ್ಯರ ಅನುಪಮವಾದ ವಿಮಲಜ್ಞಾನ, ಅನುಭವ, ಅನುಭಾವದಿಂದ ಇದುವರೆಗೂ ಹದಿನೇಳು ಕೃತಿಗಳು ಸಾರಸ್ವತ ಲೋಕದ ಹೊಂಗಿರಣಗಳಂತೆ ಕಂಗೊಳಿಸಿವೆ. ಚತುರ್ಭಾಷಾ ಪ್ರವೀಣರಾದ ನಿರುಪಾಧೀಶ್ವರರು ಕನ್ನಡ ಭಾಷೆಯಲ್ಲಿಯೂ ಸಾಕಷ್ಟು ಕೃಷಿ ಮಾಡಿದವರು. ಕನ್ನಡದಲ್ಲಿ ಏಳು ವಚನ ಗ್ರಂಥಗಳನ್ನು, ನಾಲ್ಕು ಪುರಾಣಗಳನ್ನು, ಒಂದು ಶತಕ ಕೃತಿಯನ್ನು, ಒಂದು ಮುಕ್ತಕ ಕೃತಿಯನ್ನು ರಚಿಸಿದವರು. ಪೂಜ್ಯರು ಕನ್ನಡ ಸಾಹಿತ್ಯ ರೂಪಗಳಲ್ಲಿ ಷಟ್ಪದಿ, ತ್ರಿಪದಿ, ಚೌಪದಿ ರೂಪಗಳನ್ನು ಕರಗತ ಮಾಡಿಕೊಂಡಿದ್ದಾರೆ. ಇವರು ಬರೆದ ಪುರಾಣಗಳೆಲ್ಲ ಭಾಮಿನಿ ಷಟ್ಪದಿಯಲ್ಲಿವೆ. ಉಳಿದವುಗಳು ಆಧುನಿಕ ವಚನಗಳು ತ್ರಿಪದಿ, ಚೌಪದಿ ರೂಪದಲ್ಲಿವೆ. ಪೂಜ್ಯರು ರಚಿಸಿದ ಆಧುನಿಕ ವಚನಗಳು ಸಹಸ್ರಾರು ಸಂಖ್ಯೆಯಲ್ಲಿದ್ದು, ಸಂಖ್ಯೆ ಮತ್ತು ಸತ್ವದ ದೃಷ್ಟಿಯಿಂದ ಅಮೋಘವೂ, ಶ್ರೇಷ್ಠವೂ ಆಗಿವೆ. ಬದುಕಿನ ವಿವಿಧ ಮಜಲುಗಳನ್ನು ತಮ್ಮ ಕ್ಷ-ಕಿರಣದ ದೃಷ್ಟಿಯಿಂದ ನೋಡಿ ಅವುಗಳಿಗೊಂದು ವೈಚಾರಿಕವಾದ ತಾತ್ವಿಕ ಚೌಕಟ್ಟನ್ನು ಇವರು ಹಾಕಿದ್ದಾರೆ.

ಆಧುನಿಕ ವಚನಕಾರರಾಗಿ ಶ್ರೀಗಳ ಒಕ್ಕಲುತನ ತುಂಬಾ ಅನನ್ಯವಾಗಿದೆ. ಅವರು ತಮ್ಮ ಆಧುನಿಕ ವಚನವೆಂಬ ಹೊಲದಲ್ಲಿ ವೈವಿಧ್ಯಮಯ ಅಕ್ಕಡಿಕಾಳುಗಳನ್ನು ಬಿತ್ತಿ ಬೆಳೆದಿದ್ದಾರೆ. ಅವರ ಆಧುನಿಕ ವಚನಗಳಲ್ಲಿ ಲೌಕಿಕ-ಆಧ್ಯಾತ್ಮಿಕ ವಿಚಾರಗಳ ಸಂಗಮಗಳನ್ನು ದರ್ಶಿಸಬಹುದು. ವರ್ತಮಾನದ ಸ್ಥಿತಿಗತಿಗಳನ್ನು, ಇಲ್ಲಿಯ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಶಿಕ್ಷಣ, ಯುವಜನಾಂಗ, ವಿಜ್ಞಾನ, ತಂತ್ರಜ್ಞಾನ, ಕೃಷಿ, ಆಚಾರ, ವಿಚಾರ, ಸಂಪ್ರದಾಯ ಹೀಗೆ ಎಲ್ಲಾ ಕ್ಷೇತ್ರಗಳ ಜ್ಞಾನ ಸಂಗಮವೇ ಪೂಜ್ಯರ ಆಧುನಿಕ ವಚನಗಳು. ಅವುಗಳಲ್ಲಿ ಒಂದು ಮಹತ್ವದ ಆಧುನಿಕ ವಚನ ಸಂಕಲವೇ “ನಿರುಪಾಧೀಶನ ವಚನಗಳು ವಿಭೂತಿ – 2.”

ಮಸ್ತಕದಿಂದುದಯಿಸಿದ ಅಕ್ಷರ ಅಕ್ಷಯವಾಗಿ
ಹಸ್ತಗತವಾದಾಗ ಲಾಭ ಸಲ್ಲಾಭ.
ಇದುವೇ ಮಸ್ತಕದೊಳಗಿಂಗಿದಾಗ – ನಿರುಪಾಧೀಶ
ನೀರುಂಡ ನೀರಜ ನೀರವ ನಕ್ಕಂತೆ ನಭ ಶೋಭ
(ನಿ.ವ.ವಿ.೨.ಪ.ಸಂ.೩೯)


ಭಾಷಾ ಚಮತ್ಕೃತಿಗೆ ನಿದರ್ಶನವಾದ ಪದಪದಲ್ಲೂ ಅರ್ಥರಸ ತುಳುಕುವ ವಚನವಿದು. ಆಧುನಿಕ ವಚನಗಳಿಗೆ ನಿದರ್ಶನವಿದು. ಶ್ರೀ ನಿರುಪಾಧೀಶ್ವರರು ಅಡವೇಶ’,ಅಡವಿಸಿದ್ಧ’, ನಿರುಪಾಧೀಶ’ ಹೀಗೆ ಅಂಕಿತಗಳು ಅವರ ಬೇರೆ ಬೇರೆ ವಚನ ಸಂಕಲನಗಳಲ್ಲಿ ಇರುವುದನ್ನು ಗುರುತಿಸಬಹುದು. ಆದರೆ ಈ ವಚನ ಸಂಕಲನದಲ್ಲಿನಿರುಪಾಧೀಶ’ ಎಂಬ ಅಂಕಿತವೇ ಬಳಸಲ್ಪಟ್ಟಿದೆ. ಮತ್ತು ಇಲ್ಲಿರುವ ವಚನಗಳಿಗೆ ತ್ರಿಪದಿ, ಚೌಪದಿ, ಷಟ್ಪದಿ ಎಂದು ಸಾಲುಗಳ ನಿರ್ಬಂಧವಿಲ್ಲ.

ಆಧುನಿಕ ವಚನಗಳಿಗೆ ಪಾದಗಳ ಮಿತಿಯಿಲ್ಲ. ಅವುಗಳೂ ಸಹ ಮುಕ್ತ ಸ್ವರೂಪ ಹೊಂದಿವೆ. ವಚನ ಸಾಹಿತ್ಯ 12 ನೇ ಶತಮಾನದ ಅಪೂರ್ವ ಕಾಣಿಕೆ ಎನ್ನಬಹುದಾದರೂ ಬಸವಣ್ಣನವರಿಗಿಂತ ಪೂರ್ವದಲ್ಲಿಯೇ ವಚನ ಸಾಹಿತ್ಯದ ಕುರುಹುಗಳು ಕಂಡುಬರುತ್ತವೆ. ಈ ಕಾರಣದಿಂದ ಒಟ್ಟಾರೆ ವಚನ ಸಾಹಿತ್ಯವನ್ನು ನಾಲ್ಕು ಘಟ್ಟಗಳ ವ್ಯಾಪ್ತಿಯಲ್ಲಿ ವಿಂಗಡಿಸಬಹುದು.

  1. ಬಸವಪೂರ್ವ ಯುಗ
  2. ಬಸವ ಯುಗ
  3. ಬಸವೋತ್ತರ ಯುಗ
  4. ಆಧುನಿಕ ವಚನ ಯುಗ

ಒಟ್ಟು ವಚನ ಸಾಹಿತ್ಯದಲ್ಲಿ ಮಾನವರ ಸರ್ವಾಂಗೀಣ ಪ್ರಗತಿಯ ಮಂತ್ರಗಳಿವೆ. ಸಾರ್ವಕಾಲಿಕ ಜೀವನ ಮೌಲ್ಯಗಳಿವೆ. ಇದರೊಂದಿಗೆ ಸಾಮರಸ್ಯ, ಸಹಬಾಳ್ವೆ, ಜೀವನ ನಿರ್ವಹಣಾ ಕೌಶಲ್ಯ, ವ್ಯಕ್ತಿತ್ವ ವಿಕಸನ ಹೀಗೆ ಪ್ರಮುಖವಾಗಿ ಜೀವ ವಿಕಾಸದ ತತ್ವಗಳಿವೆ. ಆಧುನಿಕ ವಚನಗಳು ಇವುಗಳಿಂದ ದೂರವಾಗಿಲ್ಲ.

ಬಸವಪೂರ್ವ ಯುಗದಲ್ಲಿ ಜೇಡರ ದಾಸಿಮಯ್ಯ, ಕೊಂಡಗುಳಿ ಕೇಶಿರಾಜ, ಸಕಲೇಶ ಮಾದರಸ, ಉದ್ಭಟ, ಕೆಂಭಾವಿ ಭೋಗಣ್ಣ, ಸಿಂಗಿದೇವ ಮೊದಲಾದವರು ಕಾಣಸಿಗುತ್ತಾರೆ.

ಬಸವಯುಗವಂತೂ ವಚನ ಸಾಹಿತ್ಯದ ಉತ್ಸಾಹದ ಬುಗ್ಗೆ. ಅತ್ಯಂತ ವೈಭವಯುತವಾದದ್ದು. ಬಸವಣ್ಣ, ಅಲ್ಲಮಪ್ರಭು, ಅಂಬಿಗರ ಚೌಡಯ್ಯ, ಚನ್ನಬಸವಣ್ಣ, ಸಿದ್ದರಾಮೇಶ, ಹಡಪದ ಅಪ್ಪಣ್ಣ, ಮೋಳಿಗೆ ಮಾರಯ್ಯ, ಆಯ್ದಕ್ಕಿ ಮಾರಯ್ಯ ಮುಂತಾದ ಅಸಂಖ್ಯಾತ ಶರಣರು, 39 ವಚನಕಾರ್ತಿಯರು ವಚನ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದರು.

ಬಸವೋತ್ತರ ವಚನಸಾಹಿತ್ಯವು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ತನ್ನ ಶ್ರೀಮಂತಿಕೆಯನ್ನು ಹೆಚ್ಚಿಸಿಕೊಂಡಿತು. ಲಕ್ಕಣದಂಡೇಶ, ಜಕ್ಕಣಾರ್ಯ ಮುಂತಾದವರು ಸೇರಿದಂತೆ ಸ್ಥಲಾಧಾರಿತ ವಚನಗಳ ವಿಂಗಡನೆ ನಡೆಯಿತು. ಶೂನ್ಯ ಸಂಪಾದನೆ, ವಚನಗಳ ಸಂಕಲನ, ಸಂಪಾದನೆ, ಪರಿಷ್ಕರಣೆ, ಟೀಕೆ, ವ್ಯಾಖ್ಯಾನ ಕಾರ್ಯಗಳು ಭರದಿಂದ ನಡೆದರೇ, ನೂರೊಂದು ವಿರಕ್ತರು, ತೋಂಟದ ಸಿದ್ಧಲಿಂಗೇಶ್ವರರು, ಕಾಡಸಿದ್ಧೇಶ್ವರ, ಘನಲಿಂಗದೇವ, ಷಣ್ಮುಖ ಶಿವಯೋಗಿ ಮುಂತಾದವರು ಈ ಯುಗದಲ್ಲಿ ಕಾಣಿಸಿಕೊಳ್ಳುತ್ತಾರೆ.

ಆಧುನಿಕ ವಚನ ಸಾಹಿತ್ಯವು ವ್ಯಾಪಕ ಹರವು ಪಡೆದುಕೊಂಡಿದೆ. ವಚನಬ್ರಹ್ಮ ರೆಂದೇ ಖ್ಯಾತವೆತ್ತಡಾ.ಜ.ಚ.ನಿ’, ಶ್ರೀ ಮೂಜಗಂ’ ಖ್ಯಾತಿಯ ಹುಬ್ಬಳ್ಳಿಯ ಮೂರುಸಾವಿರ ಮಠದ ಶ್ರೀ ಜಗದ್ಗುರು ಗಂಗಾಧರ ರಾಜಯೋಗಿಂದ್ರ ಮಹಾಸ್ವಾಮಿಗಳು, ಜಗದ್ಗುರು ಶ್ರೀ ಅನ್ನದಾನೀಶ್ವರ ಮಹಾಸ್ವಾಮಿಗಳು, ಚಿತ್ರದುರ್ಗ ಬ್ರಹನ್ಮಠದ ಜಗದ್ಗುರು ಶ್ರೀ ಮುರುಘ ರಾಜೇಂದ್ರ ಶರಣರು, ಅಥಣಿ ಮೊಟಗಿ ಮಠದ ಶ್ರೀ ಪ್ರಭು ಚನ್ನಬಸವ ದೇವರು, ಡಾ. ಅಭಿನವ ಚೆನ್ನಬಸವ ಮಹಾಸ್ವಾಮಿಗಳು, ತರಳಬಾಳು ಬ್ರಹನ್ಮಠದ ಸಿರಿಗೆರೆಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೀಗೆ ಮಠಾಧೀಶ ಪರಂಪರೆಯ ಆಧುನಿಕ ವಚನಕಾರ ಪೂಜ್ಯರಲ್ಲಿ ಮರೆಗುದ್ಧಿಯ ನಿರುಪಾದಿ ಸ್ವಾಮಿಗಳಂತೂ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇವರವಚನಾಂಕುರ’ ಎಂಬುದೇ ಭಾಗ 1 ರಿಂದ 3 ಸಂಪುಟಗಳಲ್ಲಿದೆ. ವಚನ ಪಲ್ಲವಿ’ ಎಂಬುದು ಸಹ 1 ರಿಂದ 3 ಭಾಗಗಳಲ್ಲಿದೆ. ಹಾಗೆಯೇವಚನ ತೋರಣ’ ಪ್ರಕಟವಾಗಿದೆ. ಭಾಷೆ, ಅರ್ಥ, ಅನುಭಾವ ಹೀಗೆ ಇವೆಲ್ಲ ದೃಷ್ಟಿಕೋನಗಳಿಂದ ಪೂಜ್ಯರ ಆಧುನಿಕ ವಚನಗಳು ತುಂಬಾ ಸಶಕ್ತವಾಗಿವೆ. “ಆಧುನಿಕ ಕನ್ನಡ ವಚನಕಾರರಲ್ಲಿ ಶ್ರೀ ನಿರುಪಾಧಿ ಸ್ವಾಮಿಗಳು ತಮ್ಮ ವಚನ ರಚನಾ ಕೌಶಲ್ಯದಿಂದಲೂ, ನಿರಂತರ ಪ್ರಯೋಗದಿಂದಲೂ, ವಿಚಾರ ವಿಧಾನ ಚಿಂತನಾ ಧಾಟಿಯಿಂದಲೂ ಮಹತ್ವದ ವಚನಕಾರರಾಗಿದ್ದಾರೆ. ಆಧುನಿಕ ವಚನ ಸಾಹಿತ್ಯದ ಇತಿಹಾಸದಲ್ಲಿ ಇವರಿಗೆ ಪ್ರಮುಖ ಸ್ಥಾನವಿದೆ” ಎಂದು ಅಭಿಪ್ರಾಯ ಪಡುವ ಹಿರಿಯ ವಿದ್ವಾಂಸರಾದ ಡಾ.ಗುರುಪಾದ ಮರೆಗುದ್ಧಿಯವರ ವಿಚಾರ ಗಮನಾರ್ಹವಾದುದು.

ನಿರುಪಾಧೀಶನ ವಚನಗಳು (ವಿಭೂತಿ-2) ತುಂಬಾ ಮಹತ್ವದ ವಚನ ಸಂಕಲನವಿದು. ಇದು ಆರು ಭಾಗವಾಗಿ ವಿಭಜಿಸಲ್ಪಟ್ಟಿದೆ.

  1. ತತ್ವ ತೊಳಲು
  2. ಕಂಡ ಕರುಗಳು
  3. ಮಾತಿನ ಮಳಲು
  4. ಭಾವ ಬೆರಳು
  5. ಹಂಸಿ ಹರಳು
  6. ನಾಳ ನೆರಳು

ಹೀಗೆ ಆರು ಭಾಗಗಳ ಶಿರೋನಾಮೆಗಳು ಅಂತ್ಯ ಪ್ರಾಸದೋಪಾಯದಲ್ಲಿ ಗಮನ ಸೆಳೆಯುತ್ತವೆ. ತೊಳಲು, ಕರುಳು, ಮಳಲು, ಬೆರಳು, ಹರಳು, ನೆರಳು ಹೀಗೆ ಪ್ರಾಸಮಯತೆಯಲ್ಲಿ ಭಾವ ತನ್ಮಯವಾದ ವಿಚಾರಗಳು ಹಲವಾರು ರಂಗಗಳನ್ನು ವಿಹರಿಸಿ ಬರುತ್ತವೆ.

ತಾತ್ವಿಕವಾಗಿ ಕಟ್ಟಲ್ಪಟ್ಟ ತತ್ವ ತೊಳಲು ಮೊದಲ ಭಾಗದಲ್ಲಿ ಒಟ್ಟು 72 (ಎಪ್ಪತ್ತೆರಡು) ವಚನಗಳಿವೆ.ಕಂಡ ಕರುಳು’ ಎರಡನೆಯ ಭಾಗದಲ್ಲಿ ಒಟ್ಟು 79 (ಎಪ್ಪತ್ತೊಂಬತ್ತು) ವಚನಗಳಿವೆ. ಮಾತಿನ ಮಳಲು’ ಮೂರನೆಯ ಭಾಗದಲ್ಲಿ ಒಟ್ಟು 20 (ಇಪ್ಪತ್ತು) ವಚನಗಳಿವೆ.ಭಾವ ಬೆರಳು’ ನಾಲ್ಕನೆಯ ಭಾಗದಲ್ಲಿ 18 (ಹದಿನೆಂಟು) ವಚನಗಳಿವೆ. ಹಂಸಿ ಹರಳು (ಸೂಫಿ) ಐದನೆಯ ಭಾಗದಲ್ಲಿ 3 (ಮೂರು) ವಚನಗಳಿವೆ. ಒಟ್ಟು ಈ ಆಧುನಿಕ ವಚನ ಸಂಕಲನದಲ್ಲಿ 271 (ಎರಡನೂರಾ ಎಪ್ಪತ್ತೊಂದು) ವಚನಗಳಿವೆ. ಪ್ರತಿ ವಚನವೂ `ನಿರುಪಾಧೀಶ’ ಅಂಕಿತವನ್ನು ಪಡೆದುಕೊಂಡಿದೆ.

ಈ ವಚನ ಸಂಕಲನದ ಪ್ರಾರಂಭದ ಒಂದು ವಚನವೇ ಸಾಕು ಓದುಗರಿಗೆ ಇದರ ಆಂತರ್ಯವನ್ನು ಅರಿತುಕೊಳ್ಳಲು. ಸ್ವತಃ ವಚನಕಾರರೇ ಹೇಳುವಂತೆ

ವಚನವೆಂಬುದು ವಿಭಾವದರಳು
ನಂದದಾನಂದ ಕಂದನ ಕರುಳು
ವಾತ್ಸಲ್ಯ ಶಿಶುವಿನ ಹರ್ಷಹೆಳಲು
ಅನುಕಂಪದಿಂಪಿನ ತಂಪದ ತಿರುಳು
ಪಾಶುಪತಾಸ್ತ್ರದ ಸರಳು
ತ್ರಿವೇಣಿ ಸಂಗಮದ ತತ್ವದೆಸಳು
ನೀರವದನುಪಮ ನೆರಳು
ಹರಿಯದ ಪರಿಮಳ ಹೊನಲು
ಬಯಲುಹರಳು, ಹೊಸ ಹೊಂಬೆಳಗಿನ ಹವಳು
ನಿಮ್ಮವರ ಕರುಳು
ಮುಂದುವರಿಯುತಿಹುದಿದೇ
ಸರಣಿ ಶಿರೋನಾಮದೆಸಳುಗಳು

ವಚನವೆಂದರೆ ಅದು ಭಾವ-ವಿಭಾವದ ಹೂವು (ಅರಳು). ಕಂದನ ಮುಗ್ಧತೆಯ ನಂದದ ಆನಂದದ ಕರುಳು, ತಾಯಿಯ ವಾತ್ಸಲ್ಯದ ಶಿಶುವಿನ ಹರುಷದ ಹೆಳಲು, ಕರುಣೆ, ಮೈತ್ರಿ, ಅನುಕಂಪಗಳ ಇಂಪಿನ ತಂಪಿನ ತಿರುಳು, ವೀರತನದ (ಪಾಶುಪತಾಸ್ತ್ರದ ಸರಳು) ಸರಳು (ಬಾಣ), ಸರ್ವಧರ್ಮ ಸಮನ್ವಯತೆಯ ತತ್ವದ ಎಸಳು, ಮಹಾಮೌನದ (ನೀರವ) ಅನುಪಮ ನೆರಳು, ಸದಾ ಪಸರಿಸುವ ಪರಿಮಳದ ಹೊನಲು ಬಯಲು ಹೆರಳು (ಅಂದರೆ ಬಯಲು ಬುತ್ತಿ) ಹೊಸ ವಿಚಾರಗಳ ಹವಳು (ಹವಳ) ಸಕಲಜಗದ ಕರುಳು ಈ ತತ್ವಗಳ ಮೇಲೆ ಈ ವಚನಗಳು ಮುಂದುವರೆಯುತ್ತವೆ, ಈ ಸರಣಿ ಶಿರೋನಾಮೆಗಳ ಎಸಳುಗಳಲ್ಲಿ ಎಂಬುದಾಗಿದೆ. ಅರಳು, ಕರುಳು, ಹೆಳಲು, ತಿರುಳು, ಸರಳು, ಎಸಳು, ನೆರಳು, ಹೊನಲು, ಹವಳು, ಹೀಗೆ ಅಂತ್ಯ ಪ್ರಾಸ ಸೊಗಸಾಗಿದ್ದು, ಭಾಷಾ ಬಳಕೆಯ ಪ್ರೌಢಿಮೆ, ಅರ್ಥದ ಹೊನಲು ವಚನಕಾರರ ರಚನಾಶಕ್ತಿಗೆ ಕನ್ನಡಿ ಹಿಡಿದಂತಿದೆ.

ಇಷ್ಟೇ ಸಾಲುಗಳಿರಬೇಕು ಎಂಬ ನಿರ್ಬಂಧವಿಲ್ಲಧೇ, ಯಾವ ಛಂದಸ್ಸು, ಅಲಂಕಾರಗಳಿಗೆ ಕಟ್ಟು ಬೀಳದೆ ನಿರರ್ಗಳವಾಗಿ ಭಾಷಾಭಿವ್ಯಕ್ತಿಯೊಂದಿಗೆ ತೆರೆದುಕೊಳ್ಳುವ ವಚನಗಳು ಮುಕ್ತವಾಗಿ ಹೊರಹೊಮ್ಮಿವೆ. “ಕೊಡದಿರು ಶರಧಿಗೆ ಷಟ್ಪದಿಯ ದೀಕ್ಷೆ” ಎಂಬ ವಿ.ಕೃ.ಗೋಕಾಕ ಅವರ ಸಾಲುಗಳನ್ನು ನೆನಪಿಸುತ್ತಾ, ಸ್ವಚ್ಛಂದ ಭಾವಗಳಿಗೆ ಇಲ್ಲಿನ ವಚನಗಳು ಸಾಕ್ಷಿಯಾಗಿವೆ.

ತಾತ್ವಿಕತೆಗೆ ಮುಖ ಹೊರಳಿಸುವ ಇಲ್ಲಿಯ ವಚನಗಳಲ್ಲಿ ತಾತ್ವಿಕತೆಯು ಒಂದು ಸುಂದರವಾದ ನುಡಿಕಟ್ಟಿನ ಮೂಲಕ ಹೊಮ್ಮುತ್ತದೆ.

  • ಮಾತಿನ ಕಂತೆಯೊಳ ಕಾಲಹರಣ
  • ತದ್ಭವತಿ ನಿಶಬ್ದದ ನಿಲುಕು
  • ಸದ್ಭಾವಂ ತದ್ಭವತಿ ಚಿತ್ತ
  • ಕರ್ತವ್ಯ ದಿಶೆ ಕೊರತೆಯ ಕಂಡಾಗ ನುಡಿದೆ, ಫಲಸಿದಾಗ ಸುಮ್ಮನಾದೆ
  • ದಿಕ್ಸೂಚಿ ಮರೆತ ಸಾರಿಗೆ
  • ಹಟಮಾರಿಗೆ ಹದವರಿತ ಹಿತನುಡಿ ನಿಮಗೆ ಹುಡಿಯಾಗಿತ್ತೇ ಹೇಳಾ
  • ಹೆಪ್ಪನಳಿದು ತುಪ್ಪತೆರೆದಿರುಸುವೆನೆನುವವ ಬೆಪ್ಪ
  • ಆವ ಪದ-ಪ್ರಶಸ್ತಿ ವಿಭೂಷಿತನಾದರೂ ನಿರುಪಾಧೀಶನ ವಾಸ್ತವಿಕದೆಡೆ ತಾನಾಗಬೇಕು
  • ಬೇಸಿಗೆಯ ಬೆವರಕ್ಕಿಂತ, ಪರಿಶ್ರಮದ ಪನಿಗೆ ಬೆಲೆ
  • ಗುಣ ಸಣ್ಣತನ ಮಗು ಮಣ್ಣ ತಿಂದಂತೆ
  • ಎಡೆ ಬಡಿಸುತ್ತಾರೆಂದು ಹಿಗ್ಗಬೇಡಿ ಪಚಿಸುವ ಬಲವಿರಬೇಕು.
  • ಹೂಹಾರ ಭಾರ ಪರಿಮಳವಲ್ಲ

ಇಂತಹ ನುಡಿಕಟ್ಟುಗಳು ಗಾದೆ ಮಾತಿನಂತೆ, ನಾಣ್ಣುಡಿಯಂತೆ ಲೋಕೋಕ್ತಿಗಳಂತೆ ಜನಮಾನಸಕ್ಕೆ ಸಮೀಪವಾಗುತ್ತವೆ. ತುಂಬಾ ಸರಳವಾಗಿ ಗಹನವಾದ ತತ್ವಗಳು ಓದುಗರಿಗೆ ಅರ್ಥವಾಗುತ್ತವೆ. ಇಂತಹ ಭಾಷಾ ಕೌಶಲ್ಯವನ್ನು ನಿರುಪಾಧೀಶ್ವರರ ಈ ವಚನಗಳಲ್ಲಿ ಸಾಕಷ್ಟು ದರ್ಶಿಸಬಹುದಾಗಿದೆ.

ನಿರುಪಾಧೀಶ್ವರರ ವಚನಗಳಲ್ಲಿ ಸತ್ಯ ಮತ್ತು ವಾಸ್ತವತೆಯ ಮುಖಾಮುಖಿ:
ಮಾನವರ ಬದುಕು ವಾಸ್ತವಕ್ಕಂಟಿಕೊಂಡಿದೆ. ವಾಸ್ತವದೊಂದಿಗೆ ಮಾನವರು ಬದುಕಬೇಕು. ಯಾವುದೋ ಭ್ರಮೆ, ಮೋಹ, ಆಸೆ, ದುರಾಸೆಗಳಿಗೆ ಹತ್ತಿರವಾದರೇ ಬದುಕು ಬಲು ಕಠಿಣವಾಗುತ್ತದೆ. ಒಮ್ಮೊಮ್ಮೆ ವಾಸ್ತವ ಕಹಿ ಎನಿಸುವುದು, ಕಠೋರ ಎನಿಸುವುದು ಆದರೆ ಅದೇ ಸತ್ಯವಾಗಿರುತ್ತದೆ. ಅದನ್ನು ಒಪ್ಪಿಕೊಂಡು ಬದುಕುವುದೇ ಧರ್ಮ. ಇಂತಹ ವಾಸ್ತವತೆಗೆ ಮಾನವರು ತೆರೆದುಕೊಳ್ಳಲು ನಿರುಪಾಧೀಶ್ವರ ವಚನಗಳು ಸಹಕರಿಸುತ್ತವೆ.

ಕನ್ನಡಿಯೆದುರು ನಿಂತು ನಕ್ಕರೆ,
ಅತ್ತರೆ ಬಿಕ್ಕಿದರೆ ಅದೇ ಕಂಡಿತ್ತು
ಸಲೆಸುಮ್ಮನಾದಾಗ ನಿನ್ನೆನಹು ಏನಾಗಿತ್ತು?
ನಿರುಪಾಧೀಶ “ಸದ್ಭಾವಂ ತದ್ಭವತಿ ಚಿತ್ತ”

“ಕನ್ನಡಿ”ಯನ್ನು ರೂಪಕವಾಗಿಟ್ಟುಕೊಂಡು ಮಾತನಾಡುವ ವಚನಕಾರರು ಕನ್ನಡಿಯೆದುರು ನಿಂತು ನಕ್ಕರೆ, ಅತ್ತರೆ, ಬಿಕ್ಕಿದರೆ ಅದರಲ್ಲಿ ನಮ್ಮ ಪ್ರತಿಬಿಂಬ ಹಾಗೆಯೇ ತೋರುವುದು. ನಾವು ಸುಮ್ಮನಾದರೆ ಅದು ಸುಮ್ಮನಾಗುವುದು. ನಮ್ಮ ಭಾವದಂತೆ ನಮ್ಮ ಚಿತ್ತವಿರುತ್ತದೆ. “ಸದ್ಭಾವಂ ತದ್ಭವತಿ ಚಿತ್ತ” ಅಂದರೆ ಸದ್ಭಾವದಿಂದ ಸತ್ ಚಿತ್ತ ಉಂಟಾಗುವುದು. ಇಂತಹ ವಾಸ್ತವತೆಯನ್ನು ಅರಿಯಬೇಕು. ಈ ಬದುಕೆ ಒಂದು ಕನ್ನಡಿ. ನಾವು ಹೇಗೆ ಬದುಕುತ್ತೇವೆಯೋ ಹಾಗೆ ಬದುಕು ಸುಖ-ದುಃಖಗಳಿಗೆ ಒಗ್ಗುತ್ತಾ ಹೋಗುತ್ತದೆ ಎಂಬ ಸತ್ಯ ದರ್ಶನ ಇಂತಹ ವಚನಗಳಿಂದ ದೊರೆಯುತ್ತವೆ.

“ಮರುಳನಕ್ಕಿಂತ ಮಳಲವೇ ಲೇಸು ಕಟ್ಟಡಕ್ಕಾಶ್ರಯವಾಗಿತ್ತು, ಮರುಳಾರಿಗೆ? ಎಂದು ಪ್ರಶ್ನಿಸುವಲ್ಲಿ `ಮರಳು’ ಅಂದರೆ ಅರೆಹುಚ್ಚು, ಅರೆ ಪ್ರಜ್ಞಾವಸ್ಥೆ, ಮೂರ್ಖತನವೆಂದು ಅರ್ಥೈಸಿದರೆ, ಇನ್ನೊಂದು ಅರ್ಥ “ಉಸುಕು”. ಈ ಮರುಳು ಕಟ್ಟಡಕ್ಕಾದರೂ ಉಪಯೋಗವಾಯ್ತು ಆದರೆ ಈ ಮೂರ್ಖ ಯಾರಿಗೆ ಉಪಯೋಗವಾದ? ಎಂಬುದನ್ನು ವ್ಯಂಗೋಕ್ತಿ ಮೂಲಕ ಅಭಿವ್ಯಕ್ತಿಸುವುದು ಕಾಣುತ್ತದೆ.

ಬದುಕಿನಲ್ಲಿ ಮೂರು ತೆರನಾದ ಜನರಿರುತ್ತಾರೆ. ಅಧಿಕಾರ, ಹಣ ಮುಂತಾದವುಗಳ ಬಲದಿಂದ ಇದ್ದಾಗ ದರ್ಪದಿಂದಲೋ, ದೌರ್ಜನ್ಯದಿಂದಲೋ ಹೆಸರು ಮಾಡುತ್ತಾರೆ. ಅಂತಹವರಿಗೆ ಜನರು ಬದುಕಿದ್ದಾಗ ಮಾತ್ರ ಬೆಲೆ, ಗೌರವ ಕೊಡಬಹುದು. ಆದರೆ ಆ ವ್ಯಕ್ತಿ ಸತ್ತ ನಂತರ ಅವನಿಗೆ ಬೆಲೆ ಇರದು. ಇನ್ನು ಎರಡನೆಯ ಗುಂಪಿನವರು ಅವರು ಇದ್ದೂ ಸತ್ತಂತಿರುವವರು. ಅವರಿಗೆ ಬದುಕಿದ್ದಾಗಲೂ ಬೆಲೆ ಇಲ್ಲ, ಸತ್ತ ಮೇಲೂ ಬೆಲೆ ಇಲ್ಲ. ಆದರೆ ಮೂರನೆಯವರು ಶರಣರು. ಅವರಿಗೆ ಇದ್ದಾಗಲೂ, ಸತ್ತಾಗಲೂ ಬೆಲೆ ಇರುತ್ತದೆ. ಅವರೇ ನಿರುಪಾಧೀಶನ ಶರಣರು ಎಂದು, ಮೂರು ವರ್ಗದ ಜನರನ್ನು ಪೂಜ್ಯರು ಇಲ್ಲಿ ತೆರೆದಿಡುತ್ತಾರೆ.

ಕೆಲವರಿದ್ದಾಗುಂಟು ಹೋದಬಳಿಕಿಲ್ಲ,
ಕೆಲವರಿದ್ದಾಗ್ಯೂ – ಹೋದಬಳಿಕೆನಿತಿಲ್ಲ
ಕೆಲರಿದ್ದಾಗ – ಹೋದಬಳಿಕುಂಟು ಬೆಲೆ – ನಿರುಪಾಧೀಶ
ನಿನ್ನೊಲವಿನೊಳಗಾದವರದೇನುಂಟು – ನಾ ಹೇಳೆ.

ಎಷ್ಟು ಸುಂದರವಾಗಿ ಈ ತಾತ್ವಿಕತೆಯನ್ನು ತಮ್ಮ ವಚನದಲ್ಲಿ ಕಟ್ಟಿಕೊಡುತ್ತಾರೆ. ಇದು ಶ್ರೀಗಳ ಶಕ್ತಿ.

  • ಆಧುನಿಕತೆಯ ಪ್ರಭಾವ:
    ಸೌಲಭ್ಯ ಸಾಕಷ್ಟು ನೆಮ್ಮದಿ ಕಡಿಮೆ,
    ಬೋಧನೆ ಅಧಿಕ, ಪಾಲಿನತೆ ಕಡಿಮೆ
    ಚಾರಿತ್ರ್ಯಗಳು ಹೆಚ್ಚು ಚಿಂತನ ಕಡಿಮೆ
    ನಾ ಹೆಚ್ನಾಚು ನೀ ಕಡಿಮೆ ಕಡಿಮೆ
    ನಿರುಪಾಧೀಶ ನಿನದೆಂಥ ನಿಲುಮೆ
    ಚಿದ್ರಸ ಚಿಲುಮೆ ಚಿಂತನೆ ಕುಲುಮೆ

ಸಾಕಷ್ಟು ವಿವರಗಳಿವೆ ಈ ವಚನದಲ್ಲಿ. ಮನುಷ್ಯರು ಸೌಲಭ್ಯ ಪಡೆದುಕೊಂಡಷ್ಟು ನೆಮ್ಮದಿ ಕಳೆದುಕೊಳ್ಳುತ್ತಿರುವುದು, ಮಾತು ಚಂದ ನಡೆ ಅಧಮ, ಕತೆ, ಕಲಿಕೆ ಹೆಚ್ಚು ಚಿಂತನೆ ಕಡಿಮೆಯಾಗುತ್ತಿರುವ ಮೌಲ್ಯಗಳು ಕಳಸುತ್ತಿರುವ ಕಾಲಘಟ್ಟದ ವಿಡಂಬನೆ ಇಲ್ಲಿದೆ.

  • ಜ್ಞಾನ ಹೆಚ್ಚಿದಂತೆ ಜ್ಞಾನ ಪ್ರಸಾರವಾಗಬೇಕು:
    ಇವತ್ತಿನ ಆಧುನಿಕ ಕಾಲಘಟ್ಟದಲ್ಲಿ ಜ್ಞಾನದ ಮೂಲಗಳು ಸಾಕಷ್ಟು ಇವೆ. ಸಾಕಷ್ಟು ವಿದ್ಯೆ, ಜ್ಞಾನ ಸಿಗುತ್ತಿದೆ. ಇಂದಿನ ಯುವ ಪೀಳಿಗೆ ಪದವಿ ಮೇಲೆ ಪದವಿ, ಹುದ್ದೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಎಲ್ಲರೊಂದಿಗೆ ಬೆರೆಯುವ ಗುಣವಿಲ್ಲ. ಆದರೆ ಈ ಬದುಕಿನಲ್ಲಿ ಬೆರೆಯದೇ ಹೋದರೆ ಆ ಜ್ಞಾನಕ್ಕೆ, ಆ ಪದವಿಗೆ, ಹುದ್ದೆಗೆ ಯಾವ ಬೆಲೆಯೂ ಇರುವುದಿಲ್ಲ. ಇದು ಬಹಳನೇ ಮುಖ್ಯವಾದದ್ದು. ಜ್ಞಾನದಿಂದ ಎತ್ತರವಿದ್ದು ಮೌಲ್ಯದಿಂದ ಕುಸಿದರೆ ಆ ಬದುಕು ಅನರ್ಥ ಎಂಬ ಕಿವಿಮಾತು ಸಹ ಇವರ ವಚನದ ಮುಖ್ಯ ತಾತ್ವಿಕತೆ.

ಸಿದ್ಧಿಗಳ ಪಡೆದರೇನಾಯ್ತಯ್ಯ
ಬಯಲ ಬೆರೆವುದಕೆ ಸಿದ್ಧನಾಗಲೇಬೇಕು.
ಆವ ಪದ- ಪ್ರಶಸ್ತಿ ವಿಭೂಷಿತನಾದರೂ
ನಿರುಪಾಧೀಶನ ವಾಸ್ತವಿಕದೆಡೆ ತಾನಾಗಬೇಕು

ಎಷ್ಟೊಂದು ತೂಕಬದ್ಧವಾದ ಮಾತುಗಳಿವು. ಇದು ನಿರುಪಾಧೀಶ್ವರರ ವಚನಗಳ ಸೌಂದರ‍್ಯ. “ಇದ್ದಾಗ ಅಗೌರವ, ಕಸಬರಿಗೆಗಿಂತ ಕಡೆ, ಬಿದ್ದು ಹೋದಾಗ ಹೊಗಳು ಬಟ್ಟಂಗಿಗಳು” ಎನ್ನುತ್ತಲೇ ವಾಸ್ತವ ತೆರೆದಿಡುವ ನಿಷ್ಠುರತೆ ಇವರಲ್ಲಿದೆ. ಇದ್ದಾಗ ಗುರುತಿಸದ ಸಮಾಜ ಸತ್ತಾಗ ಹೊಗಳಿದರೆ ಏನು ಉಪಯೋಗ? ಎಂಬುದೇ ದೊಡ್ಡ ವ್ಯಂಗ್ಯವಿದು. “ಹೊಟ್ಟು ತಿಂದು ಗಟ್ಟಿಯಾದ ಹಾಲು ಕೊಟ್ಟಿತು ಹಸು; ಹಿಟ್ಟು ಹದಗೊಳಿಸುತ್ತುಂಡು ನೀನೇನು ಕೊಟ್ಟೆ?” ಎಂದು ಮಾನವರ ಬದುಕನ್ನು ವಿಡಂಭಿಸುವ ಇಂತಹ ನುಡಿಗಳು, “ಹೆಣಕೆ – ಎಕ್ಕೆಗಿಡದ ಜತೆಗೆ ಮದುವೆ ಮಾಡುವ ಮಹಾಮತಿವಂತ ನೋಡ ಬಾರಯ್ಯ” ಎಂದು ಜನರ ಮೌಢ್ಯವನ್ನು ಅಣಕಿಸುವ ಇಂತಹ ನುಡಿಗಳು ಹಸಿಗೋಡೆಯಲ್ಲಿ ಹರಳು ಬಗೆದಂತೆ ಆಳವಾಗಿ ಮನಸ್ಸಿನಲ್ಲಿ ಅಚ್ಚೊತ್ತಿ ಬಿಡುತ್ತವೆ.

  • ಕೋಮುಗಲಭೆ, ಗುರು-ಶಿಷ್ಯ ಸಂಬಂಧ, ಅಜ್ಞಾನ, ಮೌಢ್ಯ, ಸಹಕಾರ, ಸೌಹಾರ್ದತೆಗೆ ಸಾಕಷ್ಟು ವಚನಗಳು ಪೂಜ್ಯರಿಂದ ರಚಿತವಾಗಿವೆ.
  1. ಕತ್ತೆ- ಕಲಕತ್ತೆಗೆ ಹೋಗಲದರ ರಾಗ
    ಹಂದಿ ಹರಿದ್ವಾರಕ್ಕೆ ಪಯಣಿಸಲದರ ಭೋಗ
    ಬದಲಹುದೆ?
  2. ಭಾಷೆ ಹಲವಾದರೇನಾಯ್ತವರೆಲ್ಲರ
    ಆಸೆ – ಹಾಸಿಗೆ – ಹೇಸಿಗೆ – ಬೇಸಿಗೆ
    ಶ್ವಾಸ ಪ್ರಕ್ರಿಯೆದೊಳಗಾವುದಂತರವಯ್ಯ?
  3. ಟೆಂಗಿನ ಜುಟ್ಟವಾದರೇನಾಯ್ತು
    ಕುಂಭಕ್ಕೆ ಸಿಂಬೆಯಾಗಿತ್ತು
    ಜಲ ಸೇದಲು ಹಗ್ಗವಾಗಿತ್ತು; ನೀನೇನಾದೆ?
  4. ಪ್ರಶಸ್ತಿಗಾಗಿ ಪ್ರಾರ್ಥನಾ ಪತ್ರ ಹಾಕಿದಂತೆ,
    ಪ್ರಸಾದಿಕನಾಗುವದಿಶೆಗದೇಕಿಲ್ಲ?
    ಇಂತಹ ನೇರಾನೇರಾ ಪ್ರಶ್ನೆಗಳು ಓದುಗರ ಜಂಘಾಬಲವನ್ನೇ ಉಡುಗಿಸುತ್ತವೆ. ಛಾಟಿಯೇಟಿನಂತಹ ವಚನಗಳು ಈ ವಚನ ಸಂಕಲನದುದ್ದಕ್ಕೂ ಇವೆ.
  • ರಾಜಕೀಯ ವಿಡಂಬನೆ:
    ಪ್ರಜಾಪ್ರಭುತ್ವ ವ್ಯವಸ್ಥೆ ಹಳಿ ತಪ್ಪುತ್ತಿರುವಾಗ ಅವುಗಳನ್ನು ಸರಿ ದಾರಿಗೆ ತರಬೇಕಾಗುತ್ತದೆ. ಇದು ಪ್ರಜ್ಞಾವಂತ ಪ್ರಜೆಯ ಕರ್ತವ್ಯ. ರಾಜಕಾರಣಿಗಳು, ರಾಜಕಾರಣ, ಮತ- ಮತದಾರ, ಒಂದು ದೇಶದ ಪವಿತ್ರ ಸಂವಿಧಾನ ಎಲ್ಲವೂ ಎತ್ತ ಮುಖ ಹೊರಳಿಸಿವೆ ಎಂಬುದೇ ಪ್ರಶ್ನಾರ್ಹ. ಅದಕ್ಕೆ ವಚನಕಾರರು ವಿಡಂಬನೆ, ವ್ಯಂಗ್ಯ, ಕಠೋರೋಕ್ತಿ, ನಿಷ್ಠುರತೆಯಿಂದ ಕಟುನುಡಿಗಳನ್ನಾಡಿ, ಒಂದು ವ್ಯವಸ್ಥೆಯನ್ನು ಎಚ್ಚರಿಸುವ ಎಚ್ಚರಿಕೆಯ ಘಂಟೆಯಂತೆ ಘರ್ಜಿಸುವುದು ಈ ವಚನಗಳ ಬಹುದೊಡ್ಡ ಶಕ್ತಿ.
  1. ಹಣ ಹರಿಸಿ `ಮತ’ ಯಾಚನೆ.
  2. `ಮತ’ ವೆಂಬ ಪಾವಿತ್ರ್ಯಕ್ಕೆ ಅವಮಾನ, ಇದೊಂದು ಸೂಳೆಯಂತಾಚರಣ.
  3. ಮತದಾನಿ ಹೆಣದಂತಾಗಬಾರದಯ್ಯಾ.
  4. ನೀ ಗೆದ್ದಿಲ್ಲಪ್ಪ ಹಣ ಹೆಂಡ ನಿನ್ನ ಗೆಲ್ಲಿಸಿದೆ.
  5. ಸಮ್ಮಿಶ್ರ ಸರಕಾರವೆನೆ ತುಪ್ಪದೊಳಗೆ ಕಪ್ಪೆ ಜಿಗಿದಂತೆ
  6. ಹಳಸಿದನ್ನದೊಳಗೆ ಹಣ್ಣುರಸ ಬೆರಸಿದಂತೆ” (ರೂಪಕ)
  7. ಅತ್ತ ನೋಡಿ ಒಂದೇ ಕುಟುಂಬದ ರಾಜಕೀಯದಾಟ.

ಇಂತಹ ಸಶಕ್ತ ಮಾತುಗಳು ರಾಜಕೀಯ ದೊಂಬರಾಟವನ್ನು ತೆರೆಯ ಮುಂದೆ ತಂದು ನಿಲ್ಲಿಸುತ್ತವೆ.

  • ಕಳ್ಳ ಸ್ವಾಮಿಗಳ ಬಂಢತನ ಬಯಲು:
    ಇವತ್ತು ಮಾನವರನ್ನು ಸನ್ಮಾರ್ಗಕ್ಕೆ ತರುವಲ್ಲಿ ಧರ್ಮದ ಪಾತ್ರ ಬಹಳ ಮುಖ್ಯ. ಖಾವಿ, ಖಾದಿ, ಖಾಕಿ ಇವುಗಳ ಕೆಲಸ ಮಹತ್ವ ಇಂದಿನ ಸ್ಥಿತಿ “ಬೇಲಿಯ ಎದ್ದು ಹೊಲ ಮೇಯ್ದಂತೆ” ಆಗುತ್ತದೆ. ಪೂಜ್ಯ ನಿರುಪಾಧೀಶ್ವರರು ತಮ್ಮ ವಚನಗಳಲ್ಲಿ ಕಳ್ಳ ಸ್ವಾಮಿಗಳ ಮುಖವಾಡವನ್ನೇ ಬಯಲಿಗೆಳೆಯುತ್ತಾರೆ.
  1. ಸ್ವಾಮಿಗಳಿರಾ –
    ತಿಳಿದುದೆಷ್ಟು – ತಿಳಿಸಿಹುದೆಷ್ಟು?
    ಉಳಿಸಿಹುದೆಷ್ಟು – ಬಳಸಿಹುದೆಷ್ಟು?
    ನಿಮಗೆಷ್ಟು – ಸಮಾಜಕ್ಕೆಷ್ಟು?
  2. ಸ್ವಾಮಿಗಳೆ
    ನಿಮ್ಮ ನುಡಿ ಸಿಡಿಸಿ ಕಾರಣಿರದೆದ್ದೆದ್ದು
    ಹೋಗುವ ನಿಮ್ಮ ಚಾಳಿ ಸಭಾಭಂಗ
    ಪಡಿಸಿದಂತಾಯ್ತೆನಲೆ ಹೇಳಿ

    ಕೇಳುವವರ ಕಿವಿಗೆ ಬರೆಯಿಟ್ಟಂತೆನಿಸಿದೇನು?
  3. ಸ್ವಾಮಿಯಾಗಿರಲಿ _ `ನೇಮಿ’ಯಾಗಿರಲಿ
    ಕರ್ತವ್ಯಕ್ಕೆ ಕುಂಟು ನೆಪ ಸಲ್ಲದದು ನುಡಿ,
    ಭಕುತ್ತರ ಭಾವಪೂರ್ಣ ಕರೆಯೆಡೆಗೆ ಸ್ಪಂದಿಸದಿದ್ದರೆ
    ಸ್ಥಾನಕ್ಕೆಂತು ಭೂಷಣ? ನಿಮದೆಂಥ ಭೂಷಣ?

ನೇರಾನೇರ ಪ್ರಶ್ನೆಗಳು ಸ್ವಾಮಿ, ಸ್ವಾಮಿತ್ವ, ಮಠ-ಪೀಠ ಪರಂಪರೆಯನ್ನೇ ತರಾಟೆಗೆ ತಗೆದುಕೊಳ್ಳುವ ವಚನಕಾರರ ಸಾತ್ವಿಕ ಆಕ್ರೋಶ ಒಂದು ಹದಗೆಡುತ್ತಿರುವ ವ್ಯವಸ್ಥೆಯನ್ನು ಎಚ್ಚರಿಸಿ sಸರಿಯಗಿ ಮುನ್ನಡೆಸುವುದಾಗಿದೆ.

  • ಕನ್ನಡ ಭಾಷೆ ಸಾಹಿತ್ಯದ ಕಂಪು:
    ನಿರುಪಾಧೀಶ್ವರರ ವಚನಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಅಪಾರ ಒಲವು, ಅಭಿಮಾನ ಹಾಸು ಹೊಕ್ಕಾಗಿದೆ. ಸಾಹಿತ್ಯದ ಪ್ರೀತಿ ಮೊಗೆಮೊಗೆದು ಹೊಮ್ಮಿದೆ. ಅವರದೆ ಆದ ಭಾಷೆ ಸೊಗಸು ನೀಡಿದೆ ಅವರ ವಚನಗಳಿಗೆ. ಭಾಷೆ- ಸಾಹಿತ್ಯ – ವಿಮರ್ಶೆಗಳ ಕೆಲಸಗಳನ್ನು ಸ್ವತಃ ಒಬ್ಬ ಸಾಹಿತಿಯಾಗಿ ಪೂಜ್ಯರು ಪ್ರಾಂಜಲವಾದ ಮನಸ್ಸಿನಿಂದ ಅವುಗಳ ಮಹತ್ವವನ್ನು ವಚನಗಳ ಮೂಲಕ ಪಸರಿಸುವ ಕೆಲಸ ಮಾಡಿದ್ದಾರೆ.
  1. ಜಾತಿ ಪಂಗಡವುಂಟೆ ಸಾಹಿತ್ಯಕ್ಕೆ.
  2. ಪುಸ್ತಕಕ್ಕಿಲ್ಲ ಲಿಂಗ ಜಾತಿ ವಯೋಭೇದ.

ಸಾಹಿತ್ಯಕ್ಕೆ ಜಾತಿಯ ಜಾಡ್ಯ ಅಂಟಬಾರದು. ಸಾಹಿತ್ಯ ರಚನೆಗೆ ಲಿಂಗಭೇದ, ವರ್ಗಭೇದ, ವರ್ಣಭೇದವಿಲ್ಲ ಸಾಹಿತ್ಯ ಎಲ್ಲರ ಸ್ವತ್ತು ಎಂಬ ಸಾರ್ವತಿಕ ಸತ್ಯ ಇವರ ವಚನಗಳಲ್ಲಿದೆ.

ಸಾಹಿತಿಗಳೆಂದರೆ ವಚನಕಾರರ ದೃಷ್ಟಿಯಲ್ಲಿ ಎಲೆಯ ಮೆರೆಯ ಮಲ್ಲಿಗೆ. ಅದು ಎಲ್ಲಿದ್ದರೂ ಕಂಪು ಸೂಸುವಂತೆ ಸಾಹಿತಿಯ ಶ್ರೇಷ್ಠೆತೆ ಗುಡಿಸಲಲ್ಲೂ ಅರಳುವುದು. ಅಂತಹ ಸಾಹಿತಿಗಳ ಬಗ್ಗೆ ಗೌರವಭಾವ ಇವರ ವಚನಗಳಲ್ಲಿ ಹೊಮ್ಮಿದೆ.

ಸಾಹಿತಿಗಳಂತೆನೆ ಮರೆಯೊಳರಳಿದ
ಮಲ್ಲಿಗೆಯಂತೆ ಕೆಲರು
ಮಗ್ಗಿಯೊಳಗಿರಬಹುದು ಮಕರದಂತಹ ಹಲರು
ಕಂದನೆಡೆಯ ಮಮತೆಯ ಮಧುರ

ಕನ್ನಡ ಭಾಷೆಯ ಔನ್ಯತವನ್ನು ವ್ಯಕ್ತಪಡಿಸಿದ ಬಗೆಯಿದು;

ಕನ್ನಡ ಎಂಬುವುದು ಕನ್ನಡಿ
ಮಡಿಯೊಳರಳಿದ ಮರುಗಕುಡಿ
ಜರತಾರಿಸೀರೆಯ ಸೆರಗಿನ ಸೊಬಗು

ಇಂದು ಕನ್ನಡ ಭಾಷೆ ಮೋಹ ಮರೆಯಾಗುತ್ತಿದೆ. ಪರಭಾಷೆ ಮೋಹ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ನಿರುಪಾಧೀಶ್ವರರ ವಚನಗಳು ಕನ್ನಡ ಭಾಷೆ ಮತ್ತು ಸಾಹಿತ್ಯ ಶ್ರೀಮಂತಿಕೆಯನ್ನು ಎತ್ತಿತೋರುವ ಕೈಗನ್ನಡಿಯಂತಿವೆ.

ಒಟ್ಟಾರೆ ನಿರುಪಾಧೀಶ್ವರ ವಚನಗಳು ವಿಭೂತಿ-2 ಈ ಸಂಕಲನದಲ್ಲಿ ನಿರುಪಾಧೀಶ್ವರರ ಜೀವನ ಪ್ರೀತಿ ಉಕ್ಕಿ ಹರಿದಿದೆ. ಒಬ್ಬ ಹಿರಿಯ ಮನುಷ್ಯ ತನ್ನ ಮನೆತನವನ್ನು ತನ್ನ ಗಟ್ಟಿತನ ಮತ್ತು ನಿಷ್ಠುರತೆಯಿಂದ ಕಟ್ಟಿಕೊಂಡು ಮುಂದೊಯ್ಯುವಂತೆ ಇವರ ವಚನಗಳಲ್ಲಿ ಒಂದು ಕನ್ನಡ ಸಂಸ್ಕೃತಿಯ ಸೌಹಾರ್ದ ಪರಂಪರೆಯನ್ನು ಪ್ರೀತಿಯಿಂದ, ಕಾಳಜಿಯಿಂದ, ನಿಷ್ಠುರತೆಯಿಂದ ಮುಂದುವರೆಸುವ ತಾಕತ್ತು ಇದೆ. ಇವರ ಧ್ಯಾನಿಸುವ ಅನುಭಾವವೇ ಇವರ ವಚನಗಳ ಗಮ್ಯವಾಗಿದೆ. ಎಲ್ಲದರ ಹಿಂದೆ ಒಂದು ಚಿಂತನಾಶೀಲ ಮನಸ್ಸು ಜಾಗೃತಾವಸ್ಥೆಯಲ್ಲಿದೆ. ಆಧ್ಯಾತ್ಮ ಲೋಕದ ವಿಹಾರಿಗಳಾದರೂ ಮರದ ಬೇರು ಮಣ್ಣನ್ನು ಅಪ್ಪಿಕೊಂಡಂತೆ ಸಮಾಜ ಶಿವನನ್ನು ಅಪ್ಪಿಕೊಂಡು ನಿರುಪಾಧೀಶ್ವರರು ಭಕ್ತರ ಬದುಕಿಗೆ ಚೇತೋಹಾರಿಗಳಾದದ್ದು ಅವರು ಈ ಬದಕನ್ನು ಪ್ರೀತಿಸಿದ್ದರ ಕುರುಹು ಎಂದು ಹೇಳಬಹುದು. ನಿರುಪಾಧೀಶ್ವರರ ಈ ಎಲ್ಲಾ ವಚನಗಳು ಬದುಕಿಗೆ ಹತ್ತಿರವಾಗಿವೆ. ಜನಮುಖಿಯಾಗಿವೆ, ಸಮಾಜಮುಖಿಯಾಗಿವೆ ಎಂದು ಹೇಳಬಹುದು. ಉತ್ಕೃಷ್ಟವಾದ ಪ್ರಬುದ್ಧ ಮನಸ್ಸೊಂದು ಸಂವಾದಕ್ಕಿಳಿದಂತಹ ಅನುಪಮ ನೋಟಗಳು ಇಲ್ಲಿ ಕಾಣಿಸಿಕೊಂಡಿವೆ.

ಡಾ. ಪುಷ್ಪಾವತಿ ಶಲವಡಿಮಠ,
ಕನ್ನಡ ಉಪನ್ಯಾಸಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಚಿಕ್ಕ ಬಾಸೂರು, ಹಾವೇರಿ ಜಿಲ್ಲೆ.
ಮೋಬೈಲ್‌. ಸಂ. 97407 38330

ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

ಪರಾಮರ್ಶನ ಗ್ರಂಥಗಳು
1. ನಿರುಪಾಧೀಶನ ವಚನಗಳು (ವಿಭೂತಿ-2): ಮೂಲ ಆಕರ.
2. ಅನುಭಾವದರಳು: ಪ್ರ. ಸಂ, ಡಾ. ಮಲ್ಲಿಕಾರ್ಜುನ ಯಾಳವಾರ.
3. ಹೊಸಗನ್ನಡ ಸಾಹಿತ್ಯ ರೂಪಗಳು: ಸಂ. ಡಾ.ಲಕ್ಷ್ಮೀಕಾಂತ ಪಂಜಾಳ.
4. ನುಡಿತೋರಣ: ಪ್ರ. ಸಂ. ಡಾ. ಕಲ್ಯಾಣರಾವ ಪಾಟೀಲ.

Loading

Leave a Reply