ಶರಣರು ಕಂಡ ಬಸವಣ್ಣ: ಬಸವಣ್ಣನವರ ವ್ಯಕ್ತಿತ್ವದ ಅನಾವರಣ / ಡಾ. ವಿಜಯಕುಮಾರ ಕಮ್ಮಾರ, ತುಮಕೂರು.

ವಚನ ಸಾಹಿತ್ಯ ಮತ್ತು ಶರಣ ಸಿದ್ಧಾಂತ ಹಾಗೂ ಸಂಸ್ಕೃತಿಯ ಪುಸ್ತಕಗಳನ್ನು ಓದುವ ಹವ್ಯಾಸ ಬಹುಶಃ ಮಕ್ಕಳ ಸಾಹಿತ್ಯ ಮತ್ತು ವಚನ ಸಾಹಿತ್ಯದಲ್ಲಿ ತಮ್ಮ ಜೀವನವನ್ನು ಸವೆಸಿದ ನಮ್ಮ ತಂದೆ ಲಿಂ. ಶ್ರೀ ಈಶ್ವರ ಕಮ್ಮಾರ ಅವರಿಂದ ನನಗೆ ಬಂದ ಬಳುವಳಿ ಅನಿಸುತ್ತೆ. ಈ ಲೇಖನವನ್ನು ಬರೆಯುವುದಕ್ಕೆ ಅವರು ನನಗಿತ್ತ ಪ್ರೇರಣೆಯೇ ಕಾರಣ.

ಕಳೆದ ಸುಮಾರು ಎರಡೂವರೆ ಮೂರು ದಶಕಗಳಿಂದ ಶರಣರ ಕುರಿತು ಮಾಹಿತಿ ಸಂಗ್ರಹಿಸಲು ನಮಗೆ ಸಿಕ್ಕ ಮೌಲ್ಯಯುತವಾದ ಆಕರಗಳು ಅಂದರೆ ಡಾ. ಫ. ಗು. ಹಳಕಟ್ಟಿಯವರ 770 ಅಮರ ಗಣಂಗಳ ಸಂಗ್ರಹ, ಶೂನ್ಯ ಸಂಪಾದನೆಗಳು, ಬಸವ ಪುರಾಣಗಳು, ಹರಿಹರನ ರಗಳೆ, ಮಲ್ಲಿಕಾರ್ಜುನ ಪಂಡಿತಾರಾಧ್ಯ ಚರಿತಂ, ಶಿವತತ್ವ ಚಿಂತಾಮಣಿ ಮುಂತಾದ ಅನೇಕ ಗ್ರಂಥಗಳು. ಅನೇಕ ಸಾಹಿತಿಗಳು ನಡುಗನ್ನಡ ಮತ್ತು ಹೊಸಗನ್ನಡ ಸಾಹಿತ್ಯ ಪ್ರಕಾರಗಳಲ್ಲಿ ರಚನೆ ಮಾಡಿದ ಬಹು ಮೌಲಿಕವಾದ ಗ್ರಂಥಗಳು. ಒಟ್ಟು ನಮಗೆ 1300 ಕ್ಕೂ ಹೆಚ್ಚು ಶರಣರ ಮತ್ತು 250 ಕ್ಕೂ ಹೆಚ್ಚು ಶರಣೆಯರ ಹೆಸರುಗಳು ನಮಗೆ ಸಿಗುತ್ತವೆ. ಕಲ್ಯಾಣದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಶರಣ-ಶರಣೆಯರ ಬಹು ದೊಡ್ಡ ಸಂಕುಲ ಸೇರಿತ್ತು ಎನ್ನುವುದು ಈ ಅಂಕಿ ಅಂಶಗಳು ಪ್ರಬಲ ಆಧಾರ ನೀಡಿ ಸಾಕ್ಷಿಯಾಗಿ ನಿಲ್ಲುತ್ತದೆ. ಡಾ. ವೀರಣ್ಣ ದಂಡೆ ಮತ್ತು ಅವರ ಶ್ರೀಮತಿ ಡಾ. ಜಯಶ್ರೀ ದಂಡೆಯವರು ಈ ಎಲ್ಲ ಮಾಹಿತಿಗಳನ್ನು ಕ್ರೋಢೀಕರಿಸಿ “ಕಲ್ಯಾಣದ ಶರಣರು” ಎನ್ನುವ ಸಂಶೋಧನೆಯ ಗ್ರಂಥವನ್ನು ಅತ್ಯಂತ ಶ್ರದ್ಧೆ ಮತ್ತು ಶ್ರಮವಹಿಸಿ ಬರೆದಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಕನ್ನಡ ಸಾಹಿತ್ಯದ ಲೋಕದಲ್ಲಿ ವಚನ ಸಾಹಿತ್ಯದ ಆಂದೋಲನದಿಂದ ಒಂದು ಸುವರ್ಣ ಯುಗದ ಆರಂಭವಾಯಿತು ಎನ್ನಬಹುದು. ವಚನ ಚಳುವಳಿ ಜನಪರ ಸಾಹಿತ್ಯಕ್ಕೆ ಕನ್ನಡದವರು ಜಗತ್ತಿಗೆ ನೀಡಿದ ಕೊಡುಗೆ. ಹನ್ನೊಂದನೇ ಶತಮಾನದ ಅಂತ್ಯ ಭಾಗದಿಂದ ವಚನಾಂದೋಲನಕ್ಕೆ ಪ್ರೇರಣೆ ಮತ್ತು ಪ್ರಭಾವ ಬೀರಲು ಪ್ರಾರಂಭವಾಯಿತು ಎಂದು ಹೇಳಬಹುದು. ಕೊಂಡಗುಳಿ ಕೇಶಿರಾಜ, ಕೆಂಭಾವಿ ಭೋಗಣ್ಣ, ತೆಲುಗು ಬೊಮ್ಮಣ್ಣ, ಏಕಾಂತದ ರಾಮಿತಂದೆ, ಮಾದಾರ ಚೆನ್ನಯ್ಯ, ಜೇಡರ ದಾಸಿಮಯ್ಯ ಮುಂತಾದವರು ತಮ್ಮ ಅನುಭಾವದಿಂದ ರಚಿಸಿದ ವಚನಗಳು ಬಹಳವಾಗಿ ಸಮಾಜವನ್ನು ಆಕರ್ಷಿಸಿದವು. ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಧಾರ್ಮಿಕ ಕ್ಷೇತ್ರಗಳನ್ನು ಏಕ ಕಾಲಕ್ಕೆ ವ್ಯಾಪಿಸಿದ ವಚನ ಸಾಹಿತ್ಯ ಅತ್ಯಂತ ಅಲ್ಪ ಸಮಯದಲ್ಲಿಯೇ ಉನ್ನತ ಸ್ಥಾನಕ್ಕೆ ಏರಿದ್ದು ಅಸಾಧಾರಣ, ಅಪ್ರತಿಮ ಮತು ಆಶ್ಚರ್ಯಕರವಾದದ್ದು.

ಡಾ. ಎಂ. ಎಂ. ಕಲಬುರ್ಗಿಯವರು ಬರೆದ ಶಾಸನಗಳಲ್ಲಿ ಶಿವಶರಣರು ಎನ್ನುವ ಪುಸ್ತಕದಲ್ಲಿ ಬಸವಣ್ಣನವರ ಜೀವನದ ವಿವರಣೆಗಳನ್ನು ನೀಡುವ ಶಾಸನಗಳ ಬಗ್ಗೆ ವಿವರಿಸಲಾಗಿದೆ. ಅದರಲ್ಲೊಂದು ಅರ್ಜುನವಾಡ ಶಾಸನ. ಅರ್ಜುನವಾಡ ಶಾಸನವನ್ನು ಮೊದಲು ಕಂಡು ಹಿಡಿದವರು ಶ್ರೀ ನಾ. ಶ್ರೀ. ಪುರೋಹಿತ ಎನ್ನುವವರೆಂದು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಮತ್ತಂ ತರ್ದ್ದವಾಡಿ ಮಧ್ಯಗ್ರಾಮ ಬಾಗವಾಡಿ ಪುರವರಾಧೀಶ್ವರ ಮಾದಿರಾಜನ ತನೂಜಂ ಬಸವರಾಜನ ಮಹಿಮೆಯೆಂತೆಂದಡೆಎಂದು ಹೇಳುತ್ತದೆ ಈ ಅರ್ಜುನವಾಡ ಶಾಸನ. ಈ ಮೂಲಕ ಬಸವಣ್ಣನವರ ಜನ್ಮಸ್ಥಳದ ಸ್ಪಷ್ಟವಾದ ನಿರೂಪಣೆ ಸಿಗುತ್ತದೆ. ಚೌಡದಾನಪುರ ಶಾಸನ, ಕಲ್ಲೆದೇವರಪುರ ಶಾಸನ, ಮರಡಿಪುರ ಶಾಸನ, ಬಾಗವಾಡಿ ಸಮೀಪದ ಗುಡಿಹಾಳ ಕುಂಟೋಜಿ ಗ್ರಾಮಗಳ ಸೀಮೆಯಲ್ಲಿನ ಶಾಸನಗಳಲ್ಲಿ ಬಸವಣ್ಣನವರ ಪ್ರಸ್ತಾಪವಿದೆ. ಬಸವಣ್ಣನವರು ಮಾದರಸ ಮತ್ತು ಮಾದಲಾಂಬಿಕೆಯರ ಮಗನಾಗಿ, ನಾಗಲಾಂಬಿಕೆಯ ತಮ್ಮನಾಗಿ ಇಂಗಳೇಶ್ವರ ಬಾಗೇವಾಡಿಯಲ್ಲಿ ಹನ್ನೆರಡನೇ ಶತಮಾನದ ಪ್ರಾರಂಭದ ಭಾಗದಲ್ಲಿ ಅಪ್ಪಟ ಬ್ರಾಹ್ಮಣ ಕುಟುಂಬದಲ್ಲಿ ಜನಿಸುತ್ತಾರೆ. ಇದಿಷ್ಟು ಬಸವಣ್ಣನವರ ಕುರಿತು ಪೀಠಿಕೆ.

ಬಸವಾದಿ ಶರಣರು ಬಸವಣ್ಣನವರನ್ನು ಕಂಡದ್ದನ್ನು ವಿವಿಧ ಆಯಾಮಗಳಲ್ಲಿ ಅಧ್ಯಯನ ಮಾಡಬಹುದು.

ಮೊದಲನೇಯದಾಗಿ ಆಯಾ ಕಾಲಘಟ್ಟದ ಸಾಹಿತ್ಯವನ್ನು ಆಧಾರವಾಗಿ ಇಟ್ಟುಕೊಂಡು ಮಾಡುವಂಥ ಅಧ್ಯಯನ, 12 ನೇ ಶತಮಾನದ ಆಸುಪಾಸಿನ ಸಾಹಿತ್ಯ ವ್ಯಕ್ತಿಯ ಚಿತ್ರಣವನ್ನು ನೀಡುತ್ತದೆ. ವಚನಕಾರರು ಮತ್ತು ವಚನಕಾರ್ತಿಯರು ಬಸವಣ್ಣನವರನ್ನು ಬಹಳ ಹತ್ತಿರದಿಂದ ಕಂಡಂಥವರು. ಅಂದರೆ ವ್ಯವಸ್ಥೆಯ ಭಾಗವಾಗಿ ಅವರು ಬಸವಣ್ಣನವರನ್ನು ಕಂಡಿದ್ದನ್ನು ಅವರವರ ವಚನಗಳಲ್ಲಿ ಉಲ್ಲೇಖಿಸಿದ್ದಾರೆ. ಈ 12 ನೇ ಶತಮಾನದ ಕಾಲಘಟ್ಟದ ಅಧ್ಯಯನ ನಮಗೆ ಬಹಳ ಮುಖ್ಯವಾದ ಆಕರಗಳು.  ಆ ಶರಣ ಕ್ರಾಂತಿಯ ಭಾಗವಾಗಿ ಪಾಲ್ಗೊಂಡಂಥ ಶರಣ-ಶರಣೆಯರು ತಮ್ಮ ವಚನಗಳಲ್ಲಿ ಬಸವಣ್ಣನವರ ಬಗ್ಗೆ ಬಹು ಮೌಲಿಕವಾದ ಚಿತ್ರಣವನ್ನು ನೀಡಿದ್ದಾರೆ. ತೆಲುಗಿನಲ್ಲಿ ಬರೆದ ಪಾಲ್ಕುರಿಕೆ ಸೋಮನಾಥನ ಬಸವ ಪುರಾಣ, ಹರಿಹರನ ರಗಳೆಗಳು ಮುಂತಾದ ಗ್ರಂಥಗಳು ಬಸವಣ್ಣನವರ ವ್ಯಕ್ತಿ ಚಿತ್ರಣವನ್ನು ನೀಡುತ್ತವೆ.  

15 ನೇ ಶತಮಾನದ ಆಸುಪಾಸಿನ ಹಾಗೂ ನಂತರದ ಶತಮಾನಗಳಲ್ಲಿ ಬರೆದಂಥ ಸಾಹಿತ್ಯ ಬಸವಣ್ಣನವರ ವ್ಯಕ್ತಿತ್ವದ ಚಿತ್ರಣವನ್ನು ನೀಡುತ್ತದೆ. ಶಿವಗಣ ಪ್ರಸಾದಿ ಮಹದೇವಯ್ಯನವರ ಶೂನ್ಯ ಸಂಪಾದನೆ, ಚಾಮರಸನ ಪ್ರಭುಲಿಂಗಲೀಲೆ, ಹಲಗೆ ಆರ್ಯನ ಶೂನ್ಯ ಸಂಪಾದನೆಯ ಪರಿಷ್ಕರಣೆ, ಚೆನ್ನಬಸವಾಂಕನ ಮಹಾದೇವಿಯಕ್ಕನ ಪುರಾಣ, ಚಿಕ್ಕರಾಚಕವಿಯ ಮಹಾದೇವಿಯಕ್ಕನ ಸಾಂಗತ್ಯ, ಸಿದ್ಧನಂಜೇಶನ ಗುರುರಾಜ ಚಾರಿತ್ರ್ಯ, ಶಾಂತಲಿಂಗ ದೇಶಿಕನ ಭೈರವೇಶ್ವರ ಕಥಾಮಣಿಸೂತ್ರ ರತ್ನಾಕರ, ಗೂಳೂರು ಸಿದ್ಧವೀರಣ್ಣನೊಡೆಯರ ಪ್ರಭುದೇವರ ಶೂನ್ಯ ಸಂಪಾದನೆ, ಮಗ್ಗೆಯ ಮಾಯಿದೇವನ ಶಿವಾಧವ ಶತಕ, ಸಂಸ್ಕೃತದಲ್ಲಿ ಸಾಹಿತ್ಯ ರಚನೆ ಮಾಡಿದ ಕಂಚಿ ಶಂಕರಾರಾಧ್ಯರ ವೃಷಭೇಂದ್ರ ವಿಜಯ ಮುಂತಾದ ಗ್ರಂಥಗಳು ಅತ್ಯಮೂಲ್ಯ ವಿಷಯಗಳನ್ನು ಪ್ರತಿಪಾದನೆ ಮಾಡಿವೆ.

19/20 ನೇ ಶತಮಾನದಲ್ಲಿ ಆಧುನಿಕ ನವೋದಯ ವಚನ ಸಾಹಿತ್ಯ ಸಂಶೋಧನೆ ಮತ್ತು ಬಸವ ತತ್ವ ಚಿಂತನೆಯು ಮಹತ್ವದ ತಿರುವನ್ನು ಪಡೆಯುತ್ತದೆ. ಅಪ್ರತಿಮ ಮತ್ತು ಪ್ರಭುದ್ಧ ಚಿಂತಕರು ವಚನ ಸಾಹಿತ್ಯವನ್ನು ಅತ್ಯಂತ ಪರಿಶ್ರಮದಿಂದ ಸಂಶೋಧಿಸಿ ಪರಿಷ್ಕರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದರು. ಅವರಲ್ಲಿ ಟಿ.ಎಸ್.‌ ವೆಂಕಣ್ಣಯ್ಯ, ಫ. ಗು. ಹಳಕಟ್ಟಿ, ಮಾಸ್ತಿ ವೆಂಕಟೇಶ ಅಯ್ಯಂಗಾರ, ಎಮ್.‌ ಆರ್‌, ಶ್ರೀನಿವಾಸಮೂರ್ತಿ, ಆರ್.‌ ಆರ್.‌ ದಿವಾಕರ, ಏ. ಕೆ. ರಾಮಾನುಜನ್‌, ಎಮ್.‌ ಎಮ್.‌ ಕಲಬುರ್ಗಿ, ಎಲ್.‌ ಬಸವರಾಜು, ಎಮ್.‌ ಚಿದಾನಂದ ಮೂರ್ತಿ, ಎಚ್.‌ ತಿಪ್ಪೆರುದ್ರಸ್ವಾಮಿ, ಅರ್.‌ ಸಿ. ಹಿರೇಮಠ ಹೀಗೆ ದೊಡ್ಡ ಪಟ್ಟಿಯೇ ಇದೆ.

ಪ್ರಸ್ತುತ ಕಾಲಘಟ್ಟದಲ್ಲಿ ನಮಗೆ ವ್ಯಕ್ತಿ ಮತ್ತು ವ್ಯಕ್ತಿತ್ವದ ಚಿತ್ರಣದ ಜೊತೆಗೆ ಅವರ ತಾತ್ವಿಕ ಮತ್ತು ವೈಚಾರಿಕ ಚಿಂತನೆಗಳು ನಮಗೆ ಹೇಗೆ ದಾರ ತೋರಿಸುತ್ತವೆ ಅನ್ನೋದು ಪ್ರಮುಖವಾಗಿದೆ.

ವಚನಕಾರರು ಮತ್ತು ವಚನಕಾರ್ತಿಯರು ಬಸವಣ್ಣನವರನ್ನು ಬಹಳ ಹತ್ತಿರದಿಂದ ಕಂಡಂಥವರು. ಅಂದರೆ ವ್ಯವಸ್ಥೆಯ ಭಾಗವಾಗಿ ಅವರು ಕಂಡಂತೆ ಬಸವಣ್ಣನವರು ನಮಗೆ ಬಹಳ ಪ್ರಮುಖವಾಗಿ ಕಂಡು ಬರುತ್ತದೆ. ಇದು 12 ನೇ ಶತಮಾನದ ಕಾಲಘಟ್ಟದ ಅಧ್ಯಯನ.

ಅಕ್ಕ ನಾಗಲಾಂಬಿಕೆ:
ಹುಬ್ಬಳ್ಳಿಯ ಶ್ರೀ ಮಹಾಂತಪ್ಪ ನಂದೂರ ಅವರು “ಅರಿವೇ ಪ್ರಮಾಣು” ಎನ್ನುವ ತಮ್ಮ ಪುಸ್ತಕದಲ್ಲಿ ನಾಗಲಾಂಬಿಕೆಯವರ ವೈದಿಕ ಪರಂಪರೆಯನ್ನು ವಿರೋಧಿಸಿದ ಸಂಗತಿಯನ್ನು ದಾಖಲಿಸತಾರೆ. 

ದೇವರಿಗೊಂದು ಕೋಣೆ
ನಾಗಲಾ ತೆರೆದಳು ಕೋಣೆಯ ಕದ
ಅರಗು ಕಂಚು ಬೆಳ್ಳಿ ಬಂಗಾರ ಮೂರುತಿಗಳು
ಕೈ ಮುಟ್ಟಿದರೂ ದೇವರುಗಳು
ಸಿಡಿದೇಳಲಿಲ್ಲವೆನ್ನುವ ಸಮಾಧಾನ

ನಾಗಲಾಂಬಿಕೆಯವರು ಮೂರ್ತಿ ಪೂಜೆ ಮತ್ತು ಹೆಣ್ಣಿನ ಅಸಮಾನತೆಯನ್ನು ವಿರೋಧಿಸುತ್ತಾ ಬೆಳೆದಳು ಎನ್ನುವುದನ್ನು ಸೂಚಿಸುತ್ತದೆ. ಈ ಪಾಠಗಳೇ ಮುಂದೆ ಬಸವಣ್ಣನವರಿಗೆ ಸಮಾಜದಲ್ಲಿ ಸಮಾನತೆಯ ಹೆಜ್ಜೆಗಳನ್ನು ಮೂಡಿಸುವಲ್ಲಿ ಸಹಕಾರಿಯಾದವು ಎನ್ನುವುದಕ್ಕೆ ಪುಷ್ಠಿ ನೀಡುತ್ತವೆ. ಸ್ತ್ರೀ ಸಮಾನತೆಯ ಬೀಜವನ್ನು ಅಕ್ಕ ನಾಗಲಾಂಬಿಕೆಯವರು ಬಿತ್ತಿದರು ಮತ್ತು ಬಸವಣ್ಣನವರನ್ನು ಈ ದಿಸೆಯಲ್ಲಿ ಕಾರ್ಯೋನ್ಮುಖರಾಗಲೂ ಪ್ರೇರಣೆ ನೀಡಿದ್ದು ಎನ್ನುವುದು ನಿರ್ವಿವಾದ. ಇದಕ್ಕಾಗಿಯೇ ಅಕ್ಕ ನಾಗಲಾಂಬಿಕೆಯವರು ನಮಗೆ ಇಲ್ಲಿ ಅತ್ಯಂತ ಪ್ರಸ್ತುತ ಅನಿಸುತ್ತಾರೆ.

ಅಕ್ಕ ನಾಗಮ್ಮನವರು ಬಸವಣ್ಣನವರ ಉಜ್ವಲ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಒಂದರ್ಥದಲ್ಲಿ ಅಕ್ಕ ನಾಗಮ್ಮನವರಂತಹ ಸಾತ್ವಿಕ, ಸಧೃಢ ಶಕ್ತಿ ಬಸವಣ್ಣನವರ ಬಳಿ ಇರದಿದ್ದರೆ ಇಂತಹ ಒಂದು ಭವ್ಯ ಇತಿಹಾಸ ನಿರ್ಮಾಣ ಆಗುತ್ತಿರಲಿಲ್ಲವೇನೋ ಅನ್ನುವ ಅನುಮಾನ ನಮಗೆ ಕಾಡುವಷ್ಟೂ ಅಕ್ಕ ನಾಗಲಾಂಬಿಕೆ ಅವರ ಮೇಲೆ ಪ್ರಭಾವ ಬೀರತಾಳೆ. ಬಸವಣ್ಣನವರ ಬಾಲ್ಯದಿಂದ ಹಿಡಿದು ಕಲ್ಯಾಣ ಕ್ರಾಂತಿಯವರೆಗೂ ಅವರ ಜೊತೆಗಿದ್ದು ಅವರ ಪ್ರತಿ ಹೆಜ್ಜೆಯೂ ಮಹಾನ್ ಕ್ರಾಂತಿಯೆಡೆಗೆ ಸಾಗುವಲ್ಲಿ ಅಕ್ಕನಾಗಮ್ಮನವರ ಪಾತ್ರ ಅತ್ಯಂತ ಹಿರಿದು. ಮತ್ತು ಬಸವಣ್ಣ, ಅಲ್ಲಮಪ್ರಭುಗಳಷ್ಟೆ ಅಕ್ಕ ನಾಗಮ್ಮನ ಚರಿತ್ರೆ ಪ್ರಾಮುಖ್ಯತೆಯನ್ನು ಪಡೆಯುತ್ತದೆ.

ಅಕ್ಕ ನಾಗಲಾಂಬಿಕೆಯವರು ರಚಿಸಿದ ನಮಗೆ ಉಪಲಬ್ಧವಾದ ವಚನಗಳ ಸಂಖ್ಯೆ ಕೇವಲ 14. “ಬಸವಣ್ಣಪ್ರಿಯ ಚೆನ್ನಸಂಗಯ್ಯ” ಎಂಬುದು ಅವರ ಅಂಕಿತ ನಾಮ. ಅವುಗಳಲ್ಲಿ ಬಸವಣ್ಣನವರ ಸ್ತುತಿ ಪರವಾದವುಗಳೇ ಅಧಿಕ. ಬಸವಣ್ಣನವರನ್ನು ಒಮ್ಮೆ ಪುತ್ರ ವಾತ್ಸಲ್ಯದಿಂದ ಕಂಡಿದ್ದರೆ ಮತ್ತೊಮ್ಮೆ ತಂದೆ, ಮಗದೊಮ್ಮೆ ಗುರುರೂಪದಲ್ಲಿ ಕಂಡು ಸಮರ್ಪಣಾ ಭಾವದಿಂದ ಆಶಯಗಳನ್ನು ವ್ಯಕ್ತ ಮಾಡಿದ್ದಾರೆ. ಜೊತೆಗೆ ಇತರ ಶರಣರ ಪ್ರಸ್ತಾಪವೂ ಇದೆ. ಆಕೆಯ ಬದುಕಿನಲ್ಲಿ ಬಂದೆರಗಿದ ಎಡರು ತೊಡರುಗಳು, ಅವುಗಳನ್ನು ಧೈರ್ಯದಿಂದ ಎದುರಿಸಿದ ರೀತಿ ಕೆಲವು ವಚನಗಳಲ್ಲಿ ಪ್ರತಿಧ್ವನಿಸಿವೆ.

ಎನ್ನ ಕುಲ ಸೂತಕವ ಕಳೆದಾತ ಬಸವಣ್ಣ.
ಎನ್ನ ಛಲ ಸೂತಕವ ಕಳೆದಾತ ಬಸವಣ್ಣ.
ಎನ್ನ ತನು ಸೂತಕವ ಕಳೆದಾತ ಬಸವಣ್ಣ.
ಎನ್ನ ಮನ ಸೂತಕವ ಕಳೆದಾತ ಬಸವಣ್ಣ.
ಎನ್ನ ನೆನಹು ಸೂತಕವ ಕಳೆದಾತ ಬಸವಣ್ಣ.
ಎನ್ನ ಭಾವ ಸೂತಕವ ಕಳೆದಾತ ಬಸವಣ್ಣ.
ಎನ್ನ ಅರುಹು ಮರಹಿನ ಸಂದು ಸಂಶಯವ
ಬಿಡಿಸಿದಾತ ಬಸವಣ್ಣ.
ಎನ್ನ ತನ್ನೊಳಗೆ ಇಂಬಿಟ್ಟುಕೊಂಡಾತ ಬಸವಣ್ಣ.
ತನ್ನ ಎನ್ನೊಳಗೆ ಇಂಬಿಟ್ಟುಕೊಂಡಾತ ಬಸವಣ್ಣ.
ನಿಜದ ನಿರ್ವಯಲ ಬಾಗಿಲ ನಿಜವ ತೋರಿದಾತ ಬಸವಣ್ಣ.
ಬಸವಣ್ಣಪ್ರಿಯ ಚೆನ್ನಸಂಗಯ್ಯನ ಹೃದಯ ಕಮಲದಲ್ಲಿ
ನಿಜ ನಿವಾಸಿಯಾಗಿರಿಸಿದ ಎನ್ನ ತಂದೆ ಸಂಗನಬಸವಣ್ಣನು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-875 / ವಚನ ಸಂಖ್ಯೆ-790)

ಬಸವಣ್ಣನವರು ಉನ್ನತ ವಿಚಾರ, ದಿಟ್ಟ ನಿಲುವು, ಸಾತ್ವಿಕ ನೆಲೆಗಟ್ಟಿನ ಕ್ರಾಂತಿ ಪುರುಷನಾಗಿ ಬೆಳೆಯುವಲ್ಲಿ ಅಕ್ಕ ನಾಗಮ್ಮನವರ ಪಾತ್ರ ಬಹಳ ಮಹತ್ವದ್ದಾಗಿದ್ದರೂ ಕೂಡ, ಬಸವಣ್ಣನವರಿಂದಲೇ ನಾನು ಶುದ್ಧಳಾದೆನು ಮತ್ತು ಅವರಿಂದಲೇ ನನ್ನ ಎಲ್ಲ ಸಂದು ಸಂಶಯಗಳು ನಿವಾರಣೆಯಾಗಿ ಆತ್ಮಸಾಕ್ಷಾತ್ಕಾರದ ನಿಜದ ನಿರ್ವಯಲನರಿತೆ ಎಂದಿದ್ದಾರೆ.

ಗಂಗಾಂಬಿಕೆ:
ಬಸವಣ್ಣನವರ ಹಿರಿಯ ಪತ್ನಿ ಮತ್ತು ಮಂತ್ರಿ ಬಲದೇವರ ಮಗಳು. ಹರಿಹರ ತನ್ನ ರಗಳೆಯಲ್ಲಿ “ಸತ್ಕುಲ ಸಾದೃಶ್ಯಮಪ್ಪ ಸುಶೀಲೆ” ಅಂತ ಬರೀತಾನೆ. ಬಸವಣ್ಣನವರ ಪತ್ನಿಯಾಗಿ ಅವರನ್ನು ಚಾಚೂ ತಪ್ಪದೇ ಪಾಲಿಸಿದ ಸಂಪ್ರದಾಯ ಸುಶೀಲೆ ತಾಯಿ ಗಂಗಾಂಬಿಕೆಯವರು. ಕಲ್ಯಾಣ ಕ್ರಾಂತಿಯ ನಂತರ ಅಕ್ಕ ನಾಗಲಾಂಬಿಕೆಯವರ ಜೊತೆಗೆ ವಚನ ಕಟ್ಟಗಳ ರಕ್ಷಣೆಗೆ ನಿಲ್ಲುತ್ತಾಳೆ. ಬೆಳಗಾವಿ ಜಿಲ್ಲೆಯ ಮುಗುಟಖಾನ ಹುಬ್ಬಳ್ಳಿಯ ಮಲಪ್ರಭಾ ತೀರದಲ್ಲಿರುವ ಕಾದರೊಳ್ಳಿಯಲ್ಲಿ ಲಿಂಗೈಕ್ಯಳಾಗುತ್ತಾಳೆ. ತಮಗಿದ್ದ ಒಬ್ಬನೇ ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದಂಥವಳು ಗಂಗಾಂಬಿಕೆ. ಹಾಗಾಗಿ ಹೆಚ್ಚಾಗಿ ಮನೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿದ್ದರು ಅಂತ ಕಾಣುತ್ತದೆ. “ಗಂಗಾಪ್ರಿಯ ಕೂಡಲಸಂಗ” ಎನ್ನುವ ವಚನಾಂಕಿತದಿಂದ ಬರೆದ 9 ವಚನಗಳು ಇಲ್ಲಿಯವರೆಗೆ ಲಭ್ಯವಾಗಿವೆ.

ಪತಿಯಾಜ್ಞೆಯಲ್ಲಿ ಚರಿಪ ಸತಿಗ್ಯಾಕೆ ಪ್ರತಿಜ್ಞೆಯು?
ಪ್ರತಿಜ್ಞೆಯ ಪತಿಕರದಲ್ಲಿ ಪೋಪದಿರೆ ಯಾತನೆಯಲ್ಲವೆ?
ಇವಳ ಲಿಂಗನಿಷ್ಠೆ ಇವಳಿಗೆ,
ನಮ್ಮ ನಿಷ್ಠೆ ಪತಿಯಾಜ್ಞೆಯಲ್ಲಿ ಕಾಣಾ
ಗಂಗಾಪ್ರಿಯ ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-871 / ವಚನ ಸಂಖ್ಯೆ-757)

ಬಸವಣ್ಣನವರನ್ನು ಅತ್ಯಂತ ಗೌರವದಿಂದ ನೋಡಿಕೊಂಡು ಅವರನ್ನು ಅನುಸರಿಸಿದವರು ಶರಣೆ ಗಂಗಾಂಬಿಕೆಯವರು.

ನೀಲಾಂಬಿಕೆ:
ನೀಲಮ್ಮ, ನೀಲಾಂಬಿಕೆ, ನೀಲಲೋಚನೆ, ನೀಲಗಂಗಾ ಎಂದು ಕರೆಯಿಸಿಕೊಂಡ ನೀಲಾಂಬಿಕೆ ಬಸವಣ್ಣನವರ ಎರಡನೆಯ ಪತ್ನಿ. ಈಕೆ ಕಲ್ಯಾಣದ ಕಲಚೂರಿ ಅರಸ ಬಿಜ್ಜಳದೇವನ ಸಾಕು ತಂಗಿ. ವಿನಯ ವಿದ್ಯಾವಂತಳಾಗಿದ್ದ ನೀಲಾಂಬಿಕೆ ಬಸವಣ್ಣನವರ ಭಕ್ತಿ, ಆತ್ಮಶಕ್ತಿ, ಮೃದು ಹೃದಯಕ್ಕೆ ಮಾರುಹೋಗಿ ಸಂಪೂರ್ಣವಾಗಿ ತನ್ನನ್ನು ಬಸವಣ್ಣನವರಿಗೆ ಅರ್ಪಿಸಿಕೊಳ್ಳುತ್ತಾಳೆ. ಅನುಭವಿ ನೀಲಮ್ಮ ಬಸವಣ್ಣನವರನ್ನು ಕೇವಲ ಪತಿಯೆಂದು ಭಾವಿಸದೆ ಅವರನ್ನು ಗುರುವೆಂದು, ದೇವರೆಂದು ಭಾವಿಸುತ್ತಾಳೆ. ಅವರ ಪ್ರತಿಯೊಂದು ಕಾರ್ಯದ ಹಿಂದೆ ಕೈಜೋಡಿಸಿ ನಿಲ್ಲುತ್ತಾಳೆ. ಈಕೆ ಬಸವಣ್ಣನವರ ಮಾರ್ಗದರ್ಶನದಲ್ಲಿ ಶರಣ ಸಮುದಾಯಕ್ಕೆ ಆದರ್ಶ ಶರಣೆಯಾಗಿ ತೋರುತ್ತಾಳೆ. ಶರಣ ಸಮುದಾಯ ಅವಳನ್ನು ಕೊಂಡಾಡಿದರೆ ನಿರಹಂಕಾರಿ ನೀಲಮ್ಮ ಅದಕ್ಕೆಲ್ಲ ಬಸವಣ್ಣನೆ ಕಾರಣ ಎನ್ನುತ್ತಾಳೆ. ಎಲ್ಲವನ್ನೂ ಬಸವಣ್ಣನಲ್ಲಿಯೆ ಕಾಣುತ್ತಾಳೆ.

ಎನಗೆ ಲಿಂಗವು ನೀವೆ ಬಸವಯ್ಯಾ,
ಎನಗೆ ಸಂಗವು ನೀವೆ ಬಸವಯ್ಯಾ,
ಎನಗೆ ಪ್ರಾಣವು ನೀವೆ ಬಸವಯ್ಯಾ,
ಎನಗೆ ಪ್ರಸಾದವು ನೀವೆ ಬಸವಯ್ಯಾ,
ಎನಗೆ ಪ್ರಭೆಯಮೂರ್ತಿಯು ನೀವೆ ಬಸವಯ್ಯಾ,
ಎನಗೆ ಸಂಗಯ್ಯನು ನೀವೆ ಬಸವಯ್ಯಾ
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-883 / ವಚನ ಸಂಖ್ಯೆ-876)

ಬಸವಣ್ಣನಿಂದ ವಿವರವ ಪಡೆದು ವಿಚಾರಪತ್ನಿಯಾದೆನಯ್ಯಾ” ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನೀಲಾಂಬಿಕೆ ಬಸವಣ್ಣನವರ ಬದುಕಿನಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತಾಳೆ. ನೀಲಾಂಬಿಕೆ ಬಸವಣ್ಣನವರ ಲೌಕಿಕ ಮತ್ತು ಅಲೌಕಿಕ ಜೀವನಕ್ಕೆ ಪೂರಕವಾಗಿ ನಿಂತು ಅವರ ದಾಸೋಹ ಕಾಯಕಕ್ಕೆ ಸಮರ್ಪಣಾ ಮನೋಭಾವದಿಂದ ಸಹಕಾರಿಯಾಗುತ್ತಾಳೆ. ತನ್ನ ಸತ್ಯಶುದ್ಧ ನಡೆಯಿಂದ ಎಲ್ಲರ ಮೆಚ್ಚುಗೆಗೆ ಗೌರವಕ್ಕೆ ಪಾತ್ರಳಾಗುತ್ತಾಳೆ. ಮಹಾಮನೆಯ ಅನ್ನ ದಾಸೋಹದ ಅನ್ನಪೂರ್ಣೆಯಾಗಿ ನಿಲ್ಲುತ್ತಾಳೆ. ಮಹಾಮನೆಯ ಅತಿಥಿಗಳಿಗೆ ಅಂತಃಕರಣೆಯಿಂದ ಪ್ರಸಾದವನ್ನು ಅರ್ಪಿಸಿದ್ದರಿಂದ ಶರಣ ಶರಣೆಯರೆಲ್ಲ ಆಕೆಯನ್ನು “ನಿಜಭಕ್ತಿ ನೀಲಾಂಬಿಕೆ ” ಎಂದು ಗೌರವಿಸುತ್ತಾರೆ.

ಅಲ್ಲಮ ಪ್ರಭು:
ವಚನಕಾರರಲ್ಲಿಯೇ ಅನುಭವದ ಮೇರು ಸದೃಶ ವ್ಯೆಕ್ತಿತ್ವ ಹೊಂದಿದ ಅಲ್ಲಮ ಪ್ರಭುಗಳ ಈ ವಚನವೇ ಹೇಳುತ್ತೆ ಬಸವಣ್ಣವರ ಆ ಅದ್ಬುತವಾದ ವ್ಯಕ್ತಿತ್ವವನ್ನು.

ಕೌಪ ಕಾಷಾಯಾಂಬರವ ಕಟ್ಟಿ,
ಮಂಡೆ ಬೋಳಾದಡೇನಯ್ಯಾ, ಎನ್ನಲ್ಲಿ ನಿಜವಿಲ್ಲದನ್ನಕ್ಕ?
ಹೊನ್ನು ಹೆಣ್ಣು ಮಣ್ಣು ತ್ರಿವಿಧವ ತೊರೆದಡೇನಯ್ಯಾ
ಮನದಲ್ಲಿ ವ್ರತಿಯಾಗದನ್ನಕ್ಕ?
ಹಸಿವು ತ್ರಷೆ ವ್ಯಸನಾದಿಗಳ ಬಿಟ್ಟಡೇನಯ್ಯಾ
ಅರ್ಥದಿಚ್ಚೆ ಮನದಲ್ಲಿ ಹಿಂಗದನ್ನಕ್ಕ?
ಆನು ಜಂಗಮವೆ?
ಆನು ಹಿರಿಯನಾದೆನಲ್ಲದೆ ಆನು ಜಂಗಮವೇ?
ಒಡಲಿಲ್ಲದಾತ ಬಸವಣ್ಣ, ಪ್ರಾಣವಿಲ್ಲದಾತ ಬಸವಣ್ಣ.
[ಎನ್ನ] ಬಸವಣ್ಣನಾಗಿ ಹುಟ್ಟಿಸದೆ
ಪ್ರಭುವಾಗಿ ಏಕೆ ಹುಟ್ಟಿಸಿದೆ ಗುಹೇಶ್ವರಾ?
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-242 / ವಚನ ಸಂಖ್ಯೆ-1139)

ಬಸವಣ್ಣನವರ ವ್ಯೆಕ್ತಿತ್ವವೆ ಅಂತಹದು. ಇಂದಿಗೂ ಬಸವಣ್ಣನವರ ವ್ಯೆಕ್ತಿತ್ವವನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ. ಬಸವಣ್ಣ ಕೇವಲ ಚರಿತ್ರೆಯಲ್ಲ ವರ್ತಮಾನವಾಗಿ ಸರಿ ಸುಮಾರು 900 ವರ್ಷಗಳಿಂದ ಇಂದಿಗೂ ಕವಿಗಳಿಂದ ಚಿಂತಕರಿಂದ ಸಂಶೋಧಕರಿಂದ ಮರುಹುಟ್ಟು ಪಡೆಯುತ್ತಾ, ಆಯಾ ಕಾಲಗಳ ಅಗತ್ಯತೆಯಂತೆ ಪರಿವರ್ತನೆಯಾಗುತ್ತಾ ಅಂದಿನಿಂದ ಇಂದಿಗೂ ಬಸವಣ್ಣನ ವ್ಯಕ್ತಿತ್ವ ಅರಿಯುವುದು ಕಷ್ಟವೆ ಆಗಿದೆ. ಬಸವಣ್ಣನವರು ಕೇವಲ ವ್ಯೆಕ್ತಿಯಲ್ಲ ಅವರೊಬ್ಬ ಸಾಂಸ್ಕೃತಿಕ ಸಂಕೇತ. ಬಸವಣ್ಣ ಸ್ಥಾವರವಾಗದೆ, ಜಂಗಮವಾದ ಚೇತನ. ಬಸವಣ್ಣ ಕೇವಲ ಚರಿತ್ರೆಯಲ್ಲ, ಚಾರಿತ್ರ್ಯವೂ ಹೌದು. ವಚನಕಾರರು ಸಹ ಬಸವಣ್ಣನ ವ್ಯಕ್ತಿತ್ವವನ್ನು ಹೇಗೆ ಅರ್ಥ ಮಾಡಿಕೊಂಡರು ಎಂಬುವುದು ಅವರ ವಚನಗಳಿಂದಲೆ ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ.

ಬಸವಣ್ಣನ ವ್ಯಕ್ತಿತ್ವಕ್ಕೆ ಮಾರು ಹೋಗಿ “ಒಡಲಿಲ್ಲದಾತ ಬಸವಣ್ಣ ಪ್ರಾಣವಿಲ್ಲದಾತ ಬಸವಣ್ಣ” ಎಂದು ಬಸವಣ್ಣನಿಗೆ ಜಂಗಮವೆ ಒಡಲಾಗಿ ಜಂಗಮವೆ ಪ್ರಾಣವಾಗಿದ್ದು ಕಂಡು ಅಲ್ಲಮರು “ಎನ್ನ ಬಸವಣ್ಣನಾಗಿ ಹುಟ್ಟಿಸದೆ ಪ್ರಭುವಾಗಿ ಏಕೆ ಹುಟ್ಟಿಸಿದೆ ಗುಹೇಶ್ವರಾ? ಎಂದು ಆ ಗುಹೇಶ್ವರನಲ್ಲಿ ಬೇಡಿಕೊಂಡಿರಬಹುದು.

ಬಸವಣ್ಣನಂತೆ ನಾನು ಸಮಾಜಮುಖಿಗಲಿಲ್ಲವೇನೊ? ಬಸವಣ್ಣನಂತೆ ಜಂಗಮಗಲಿಲ್ಲವೇನೊ? ಬಸವಣ್ಣನ ಆ ಒಳಗೊಳ್ಳುವಿಕೆಯ ಗುಣ ಕಂಡು ಅಲ್ಲಮರು ಬೆರಗುಗೊಂಡು ಎನ್ನ ಬಸವಣ್ಣನಾಗಿ ಹುಟ್ಟಿಸದೆ ಪ್ರಭುವಾಗಿ ಏಕೆ ಹುಟ್ಟಿಸಿದೆ ಗುಹೇಶ್ವರಾ? ಎಂದು ಗುಹೇಶ್ವರನಲ್ಲಿ ಕೇಳಿಕೊಂಡಿರಬಹುದು. ವಚನಕಾರರ ಸ್ವಾನುಭಾವದ ನಲೆಯಿಂದ ಆತ್ಮಶೋದನೆಯ, ಆತಂಕ ಅನುಮಾನಗಳ ತಲ್ಲಣದ ಆರ್ದ್ರ ಭಾವ ಭಾಷೆಗಳ ಮೂಲಕ ಬಸವಣ್ಣನ ವ್ಯಕ್ತಿತ್ವ ಅರ್ಥ ಮಾಡಿಕೊಳ್ಳಲು ಸಾಧ್ಯ.

ಅಕ್ಕಮಹಾದೇವಿ:
ಅನುಭವ ಮಂಟಪಕ್ಕೆ ಬಂದು ನಿಂತಾಗ ಅಕ್ಕಮಹಾದೇವಿಯವರ ಸನ್ನಿವೇಶವ ಅಥವಾ ದೃಶ್ಯ ನಮ್ಮ ಕಣ್ಣ ಮುಂದೆ ಹಾದು ಹೋಗತದೆ. ಶೂನ್ಯಪೀಠದ ಮೇಲೆ ಅಲ್ಲಮ ಪ್ರಭುಗಳು, ಅವರ ಅಕ್ಕ ಪಕ್ಕದಲ್ಲಿ ಬಸವೇಶ್ವರರು, ಚೆನ್ನಬಸವಣ್ಣನವರು ಮುಂತಾದವರು ಕುಳಿತಿದ್ದರು. ಅಕ್ಕಮಹಾದೇವಿಯವರು ಸಭಾಂಗಣಕ್ಕೆ ಬರುತ್ತಿದ್ದಂತೆಯೆ ಬಸವೇಶ್ವರರು ಎದ್ದು ನಿಂತು ಅಕ್ಕಮಹಾದೇವಿಯವರನ್ನು ಸ್ವಾಗತಿಸಿದರು. ಸಭೆಯ ಶಿಷ್ಟಾಚಾರದಂತೆ ಅಲ್ಲಿದ್ದ ಶರಣರಿಗೆಲ್ಲರಿಗೂ ನಮಸ್ಕರಿಸಿದರು. ನಂತರ ಬಸವೇಶ್ವರರ ಬಳಿಗೆ ಹೋಗಿ

ಅರಸಿ ತೊಳಲಿದಡಿಲ್ಲ, ಹರಸಿ ಬಳಲಿದಡಿಲ್ಲ,
ಬಯಸಿ ಹೊಕ್ಕಡಿಲ್ಲ, ತಪಸ್ಸು ಮಾಡಿದಡಿಲ್ಲ,
ಅದು ತಾನಹ ಕಾಲಕ್ಕಲ್ಲದೇ ಸಾಧ್ಯವಾಗದು.
ಶಿವನೊಲಿದಲ್ಲದೆ ಕೈಗೂಡದು.
ಚೆನ್ನಮಲ್ಲಿಕಾರ್ಜುನನೆನಗೆ ಒಲಿದನಾಗಿ
ನಾನು ಸಂಗನಬಸವಣ್ಣನ ಶ್ರೀಪಾದವ ಕಂಡು ಬದುಕಿದೆನು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-790 / ವಚನ ಸಂಖ್ಯೆ-39)

ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.
ತೊಳಲು    : ಶ್ರಮಪಡು, ಕಷ್ಟಪಡು

ಎಲ್ಲರಿಗೂ ಬಸವಣ್ಣನವರ ಪಾದ ದರ್ಶನವಾಗುವುದಿಲ್ಲ. ಶ್ರಮ ಪಡದೆ, ಹುಡುಕಾಡದೆ, ಹಾರೈಸದೆ, ತಪಸ್ಸು ಮಾಡದೆ ಚೆನ್ನಮಲ್ಲಿಕಾರ್ಜುನನ ಕೃಪಾಶೀರ್ವಾದ ಮತ್ತು ಪ್ರಸಾದದಿಂದ ಬಸವಣ್ಣನವರ ಪಾದ ದರ್ಶನವಾಗಿ ಕೃತಾರ್ಥಳಾದೆ ಎಂದು ನುಡಿಯುತ್ತ ಅವರ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ಮಾಡತಾರೆ ಅಕ್ಕಮಹಾದೇವಿಯವರು.

ತುರುಗಾಹಿ ರಾಮಣ್ಣ:
ಆತನು ಬಸವಣ್ಣನವರ ಸಮಕಾಲೀನನು. ಕಲ್ಯಾಣದ ನರಹತ್ಯೆಯನ್ನು ಕಣ್ಣಾರೆ ಕಂಡವನು ಅಂತ ಈ ವಚನದ ಮೂಲಕ ನಾವು ಕಂಡುಕೊಳ್ಳಬಹುದು. ಐತಿಹಾಸಿಕವಾಗಿ ಈ ವಚನ ಪ್ರಮುಖವಾದದ್ದು. ಕಲ್ಯಾಣದ ಕ್ರಾಂತಿಯ ನಂತರ ಯಾರು ಯಾರು ಯಾವ ಯಾವ ಕಡೆಗೆ ಹೋದರು ಎಂಬುದು ತಿಳಿದು ಬರುತ್ತದೆ.

ಬಂದಿತ್ತು ದಿನ ಬಸವಣ್ಣ ಕಲ್ಲಿಗೆ
ಚೆನ್ನ ಬಸವಣ್ಣ ಉಳುವೆಯಲ್ಲಿಗೆ
ಪ್ರಭು ಅಕ್ಕ ಕದಳಿದ್ವಾರಕ್ಕೆ
ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ಲಕ್ಷ್ಯಕ್ಕೆ
ನಾ ತುರುವಿನ ಬೆಂಬಳಿಯಲ್ಲಿ ಹೋದ ಮರೆಯಲ್ಲಿ
ಅಡಗಿಹರೆಲ್ಲರು ಅಡಗಿದುದ ಕೇಳಿ ನಾ
ಗೋಪಿನಾಥ ವಿಶ್ವೇಶ್ವರ ಲಿಂಗದಲ್ಲಿಯೆ ಉಡುಗುವೆನು.
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1301 / ವಚನ ಸಂಖ್ಯೆ-1025)

ಬಹಳ ಪ್ರಮುಖವಾಗಿ ಗಮನಿಸಬೇಕಾದದ್ದು ತುರಗಾಹಿ ರಾಮಣ್ಣನವರು “ಬಸವಣ್ಣ ಕಲ್ಲಿಗ” ಅಂತ ಹೇಳತಾನೆ. ಅಂದರೆ ಕಲ್ಲು ಮತ್ತು ಪಡಿ ಸೇರಿ ಕಪ್ಪಡಿ ಆಯತೆಂದು ಕಪ್ಪಡಿಗೆ ಹೋಗಿರಬೇಕು ಎನ್ನುವುದು ನಮ್ಮೆಲ್ಲರ ಸಾಮಾನ್ಯ ತಿಳುವಳಿಕೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯಬೇಕಾಗಿದೆ. ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ಲಕ್ಷಕ್ಕೆ ಅಂದರೆ ಎಲ್ಲೆಲ್ಲಿಯೋ ಹೋದರು ಅನ್ನುವ ಅರ್ಥದಲ್ಲಿ ನಾವು ಈ ಸಾಲನ್ನು ಪರಿಭಾವಿಸಬೇಕಾಗಿದೆ.

ಇನ್ನು ಬಸವಣ್ಣನವರ ಕಾಲಘಟ್ಟಕ್ಕೆ ಅತ್ಯಂತ ಸಮೀಪವಿದ್ದಂಥ ಕವಿಗಳು ಅಂದರೆ ಪಾಲ್ಕುರಿಕೆ ಸೋಮನಾಥ ಮತ್ತು ಹರಿಹರ. ಬಸವಣ್ಣನವರ ಬಗ್ಗೆ ಅಪಾರವಾದ ಗೌರವವನ್ನು ಇಟ್ಟುಕೊಂಡಂಥ ಕವಿಗಳು. ಹರಿಹರನ ರಗಳೆಯಲ್ಲಿ ಬಸವಣ್ಣನವರ ಸುಂದರ ಚಿತ್ರಣವನ್ನು ನೀಡತಾನೆ.

ಬಸವನ ಮಾತೆ ಮಾತು ಬಸವಣ್ಣನ ಭಕ್ತಿಯ ಓಜೆಯೋಜೆ ಕೇಳಿ
ಬಸವನನ ರೀತಿ ರೀತಿ ಬಸವಣ್ಣನ ಕಿಂಕರ ವೃತ್ತಿ ಮೇಣ್‌
ಬಸವನ ಬಟ್ಟೆ ಬಟ್ಟೆ ಬಸವಣ್ಣನ ಬಿಂಕದ ಭಾಷೆ ಭಾಷೆ ಹೋ
ಬಸವನ ನಿಷ್ಠೆ ನಿಷ್ಠೆ ಬಸವಣ್ಣನ ನೇಮವೆ ನೇಮವೂರ್ವಿಯೋಳ್
(ಬಸವರಾಜದೇವರ ರಗಳೆ-ಟಿ ಎಸ್‌ ವೆಂಕಣ್ಣಯ್ಯ-1938/ಪುಟ ಸಂ. 48/8 ನೇ ಸಂಧಿ)

ಎಲ್ಲೆಡೆಯೂ ಬಸವಣ್ಣನವರ ಕೀರ್ತಿಯ ಮಾತುಗಳು, ನಿರ್ಮಲ ವ್ಯಕ್ತಿತ್ವ ಅನಾವರಣ, ಬಸವಣ್ಣನವರ ಪ್ರಬುದ್ಧತೆಯ ಚರ್ಚೆ ಹೀಗೆ ಹರಿಹರ ತನ್ನ ರಗಳೆಯಲ್ಲಿ ಬಸವಣ್ಣನವರನ್ನು ಕುರಿತು ಮಾತನಾಡತಾನೆ.

ಪಾಲ್ಕುರಿಕೆ ಸೋಮನಾಥರು ರಚಿಸಿದ ಇನ್ನೊಂದು ಸಾಹಿತ್ಯ “ಗಣ ಸಹಸ್ರಮು” ಕೂಡ ಪ್ರಸಿದ್ಧವಾಗಿದೆ. ಇದರ ಕಾಲ ಸುಮಾರು ಕ್ರಿ. ಶ. 1200. ಗಣ ಸಹಸ್ರದಲ್ಲಿಯೂ ಬಸವಣ್ಣನವರ ಉಲ್ಲೇಖ ಇದೆ.

ಶಿವತತ್ವ ಸರ್ವ ಚೈತನ್ಯನೀಶ | ಗುರುಬಸವಲಿಂಗ ||
ಪ್ರಥಮಾಚಾರ್ಯರೆಂದು | ವಂದಿಸಿ ನುತಿಸುವೆನು ||

ಅನುಭವ ಸಾರ, ಸೋಮನಾಥ ಸ್ಥವನ, ಪಂಚ ಪ್ರಕಾರ ಗದ್ಯ, ನಮಸ್ಕಾರ ಗದ್ಯ, ಅಕ್ಷರಾಂಕನ ಗದ್ಯ, ಬಸವೋದಾಹರಣ ಯುಗ್ಮ, ಬಸವ ರಗಡ, ಬಸವ ಪುರಾಣ ದ್ವಿಪದಿ, ಅಕ್ಷರಾಂಕ ಪದ್ಯ, ಚತುರ್ವೇದ ಸಾರ, ಸೋಮನಾಥ ಭಾಷ್ಯ, ವೃಷಾಧಿಪ ಶತಕ, ಪಂಡಿತಾರಾಧ್ಯ ಚರಿತ್ರೆ, ಚೆನ್ನಮಲ್ಲನ ಸೀಸ ಪದ್ಯಗಳು, ಆರಾಧ್ಯ ಚಾರಿತ್ರ್ಯ, ಅನ್ಯವಾದ ಕೋಲಾಹಲ, ಬಸವಣ್ಣನ ಪಂಚಗದ್ಯ, ಸದ್ಗುರು ರಗಳೆ, ಚೆನ್ನಬಸವ ರಗಳೆ, ಶರಣು ಬಸವ ರಗಳೆ, ಬಸವೇಶ್ವರ ಸಹಸ್ರ ನಾಮಾವಳಿ ಮೊದಲಾದ 21 ಗ್ರಂಥಗಳನ್ನು ಬರೆದಿರುವುದು ತಿಳಿದು ಬರುತ್ತದೆ. ಇದರಲ್ಲಿ ಕೆಲವು ಕೃತಿಗಳು ಲಭ್ಯವಿಲ್ಲ ಎಂದು ಹೇಳಲಾಗುತ್ತಿದೆ.

ಬಸವ ಪುರಾಣಮು ಕಾವ್ಯವನ್ನು ಕ್ರಿ. ಶ 1369 ರಲ್ಲಿ ಭೀಮಕವಿ ಇದನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ನಂತರ ಕ್ರಿ. ಶ 1863 ರಲ್ಲಿ ಬ್ರಿಟೀಷ್‌ ಆಡಳಿತದ ಕಾಲದಲ್ಲಿದ್ದ ಸಿ. ಬಿ. ಬ್ರೌನ್‌ ಎನ್ನುವವರಿಂದ ಇಂಗ್ಲೀಷಿಗೆ ಭಾಷಾಂತರ ಮಾಡಿದ್ದನ್ನು ನಾವು ನೆನಪಿಸಿಕೊಳ್ಳಬೇಕು.

1920 ರಲ್ಲಿ 280 ಬಸವಣ್ಣನವರ ವಚನಗಳನ್ನು ಇಂಗ್ಲೀಷಿಗೆ ಭಾಷಾಂತರಿಸಿದರು. 1921 ರಲ್ಲಿ ಇಂಡಿಯನ್‌ ಆಂಟಿಕ್ವಿಯರಿ (Indian Antiquary) ಯಲ್ಲಿ ಡಾ. ಜೆ. ಎನ್. ‌ಫರ್ಖುಹಾರ್‌ (Dr. J. N. Farquhar) ಅವರ ಸಹಯೋಗದಿಂದ Vachanas Attributed to Basava ಎನ್ನುವ ಅಧ್ಯಾಯದಲ್ಲಿ ಇಂಗ್ಲೀಷಿಗೆ ಭಾಷಾಂತರವಾದ ವಚನಗಳು ಪ್ರಕಟವಾಗುತ್ತವೆ. ಎಂಥ ಅದ್ಭುತ ಕೆಲಸ ಅಂದರೆ ವಚನಗಳನ್ನು ಇಂಗ್ಲೀಷನಲ್ಲಿ ಪ್ರಕಟಿಸಿದ ಪ್ರಪ್ರಥಮ ಪ್ರಯತ್ನ ಇದು. ಶೂನ್ಯ ಸಂಪಾದನೆ, ಶಿವಾನುಭವ, ಪ್ರಭುದೇವರ ವಚನಗಳು, ಹರಿಹರನ ರಗಳೆ, ಪ್ರದೀಪಿಕೆ, ಶಬ್ದಕೋಶ, ಆದಿಶೆಟ್ಟಿ ಪುರಾಣ ಡಾ. ಫ. ಗು. ಹಳಕಟ್ಟಿಯವರ ಇನ್ನಿತರ ಕೃತಿಗಳು.

ಶರಣು ಶರಣಾರ್ಥಿಗಳು.

ಸಂಗ್ರಹ ಮತ್ತು ಲೇಖನ:
ಡಾ. ವಿಜಯಕುಮಾರ ಕಮ್ಮಾರ,
“ಸವಿಚರಣ” ಸುಮತಿ ಶಾಲೆಯ ಹತ್ತಿರ,
ಕ್ಯಾತ್ಸಂದ್ರ, ತುಮಕೂರು – 572 104
ಮೋಬೈಲ್‌ ನಂ: 9741 357 132
ಈ-ಮೇಲ್‌: vijikammar@gmail.com

ಸಹಾಯಕ ಗ್ರಂಥಗಳು :

  • ಶರಣ ಚರಿತಾಮೃತ: ಡಾ. ಸಿದ್ಧಯ್ಯ ಪುರಾಣಿಕ
  • ಶಾಸನಗಳಲ್ಲಿ ಶಿವಶರಣರು: ಡಾ. ಎಮ್.‌ ಎಮ್.‌ ಕಲಬುರ್ಗಿ
  • ಹರಿಹರನ ಶರಣ ರಗಳೆಗಳು: ಅನುವಾದ-ಡಾ. ಸದಾನಂದ ಪಾಟೀಲ.
  • ಬಸವಯುಗದ ವಚನ ಮಹಾಸಂಪುಟ: ಡಾ. ಎಮ್.‌ ಎಮ್.‌ ಕಲಬುರ್ಗಿ
  • ಕನ್ನಡ ಸಾಹಿತ್ಯದಲ್ಲಿ ಅಲ್ಲಮಪ್ರಭುದೇವ: ಡಾ. ಎಸ್.‌ ಎಮ್.‌ ವೃಷಭೇಂದ್ರಸ್ವಾಮಿ
  • ಷಟ್‌ ಸ್ಥಲ ಪ್ರಭೆ: ಡಾ. ಆರ್.‌ ಸಿ. ಹಿರೇಮಠ
  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in

Loading

Leave a Reply