
ಶರಣರು ಅವರ ಹಿರಿಮ ಗರಿಮೆಗಳನ್ನು ಅವರ ಹಾಗೆಯೇ ಇರುವವರೇ ಬಲ್ಲರು. ಅವರು ನಿಜವನರಿದದ ನಿಶ್ಚಿಂತರು. ಮರಣವನ್ನೇ ಗೆಲಿದ ಮಹಂತರು. ಘನವ ಕಂಡ ಮಹಿಮರು. ಬಯಲು ಬಿತ್ತಿ ಬಯಲು ಬೆಳೆದು ಬಯಲನುಂಡು ಬಯಲಾದ ಬಯಲಯೋಗಿಗಳು.
ಶರಣರ ಮಾತುಗಳೂ ಹಾಗೆಯ, ಮಧುರ, ಜೇನು ಬೆರೆಸಿದ ಹಾಲಿನಂತೆ ಸವಿ, ಕೆಲವೊಮ್ಮೆ ಕಠಿಣ, ಕೆಲವೂಮ್ಮೆ ಕಹಿ. ಅದರಕ್ಕೆ ಕಹಿಯಾದರು ಉದರಕ್ಕೆ ಸಿಹಿ. ಅವು ಮನದ ಕತ್ತಲೆಉನ್ನು ಕಳೆಯುವ ಜ್ಯೋತಿಗಳು. ಅವುಗಳಲ್ಲಿ ಹದವಾದ ಹಾಗೂ ಹಸನಾದ ಬದುಕಿಗೆ ಬೇಕಾಗುವ ಅವಶ್ಯಕವಾದವುಗಳೆಲ್ಲ ಇವೆ. ಹೊರಗೆ ಕಾವ್ಯದ ಸೊಬಗು, ಒಳಗೆ ಅನುಭವದ ಜೇನು – ಅನುಭಾವದ ಅಮೃತ.
ಬಸವಾದಿ ಶರಣರು ರಚಿಸಿರುವ ವಚನಗಳನ್ನು ಕೆಲವರು ಶಾಸ್ತ್ರ ಎಂದರೆ ಕೆಲವರು ಸಾಹಿತ್ಯ ಅಂದುಕೊಳ್ಳುತ್ತಾರೆ. ಆದರೆ ವಚನಗಳು ಸಾಹಿತ್ಯಕ್ಕೆ ಸಾಹಿತ್ಯವಾಗಿ, ಶಾಸ್ತ್ರಕ್ಕೆ ಶಾಸ್ತ್ರವಾಗಿ ತಮ್ಮ ಅರ್ಥ ವಿಸ್ತಾರವನ್ನು ಪಡೆದುಕೊಳ್ಳುತ್ತವೆ. ವಚನಗಳಲ್ಲಿ ಭಾವ ಗುಣದ ಲಯಗಾರಿಕೆಯ ಜೊತೆಗೆ ಆತ್ಮ ವಿಮರ್ಶೆ, ಸಾಮಾಜಿಕ ವಿಡಂಬನೆ, ಶೋಷಣೆ ಮತ್ತು ಮೌಢ್ಯಗಳ ಖಂಡನೆ ಅಲ್ಲದೇ ನೈತಿ ಮೌಲ್ಯಗಳ ಭೋಧನೆ, ತತ್ವಜ್ಞಾನ ಮತ್ತು ಧಾರ್ಮಿಕ ಆಚರಣೆಗಳು ವಿಪುಲವಾಗಿವೆ. ಇಷ್ಟೆಲ್ಲಾ ಇದ್ದರೂ ವ್ಯಕ್ತಿಯ ಅನನ್ಯತೆಯನ್ನು ಪ್ರತಿಪಾದಿಸಿರುವುದು ವಚನಗಳ ಹೆಗ್ಗಳಿಕೆಯಾಗಿದೆ. ಶರಣರು ತಮ್ಮ ಅನುಭವ, ಅನುಭಾವ ಮತ್ತು ಆಲೋಚನೆಗಳನ್ನು ವಚನಗಳಲ್ಲಿ ಮುಕ್ತವಾಗಿ ಅಭಿವ್ಯಕ್ತಿಗೊಳಿಸಿದ್ದಾರೆ. ಆತ್ಮ ಕಲ್ಯಾಣ, ಸಮಾಜ ಕಲ್ಯಾಣಗಳ ಮೂಲಕ ಮಾನವ ಕಲ್ಯಾಣವನ್ನು ಸಾಧಿಸುವ ಆಶಯ ಶಿವ-ಶರಣದಾಗಿತ್ತು. ವಸ್ತುನಿಷ್ಠ ವಿವೇಚನೆ, ಸಾಮಾಜಿಕ ಪ್ರಸ್ತುತತೆ ಮತ್ತು ಎಲ್ಲ ಕಾಲಕ್ಕೂ ಪ್ರಸ್ತುತವಾಗುವ ವಿಶ್ವಮಾನ್ಯ ಮೌಲ್ಯಗಳು ವಚನಗಳಲ್ಲಿ ಅಡಕವಾಗಿವೆ.
ಭಾರತದ ಧಾರ್ಮಿಕ ಇತಿಹಾಸದಲ್ಲಿ 12 ನೇ ಶತಮಾನ ಒಂದು ಮೈಲಿಗಲ್ಲಾಗಿದೆ. ಪ್ರಪಂಚದ ಯಾವುದೇ ಭಾಗವಿರಲಿ ಅಲ್ಲಿಯ ಜನರ ಮತ್ತು ಜೀವನಕ್ಕೆ ಪ್ರಸ್ತುತವಾಗುವಂತಹ ತತ್ವ ಸಿದ್ಧಾಂತ, ವಿವೇಚನಾ ರೀತಿ ನೀತಿಗಳು ನೀಡಿದ ಕೀರ್ತಿ 12 ನೇ ಶತಮಾನದ ಕರ್ನಾಟಕದ ಕಲ್ಯಾಣದಲ್ಲಿದ್ದ ಶಿವಶರಣರಿಗೆ ಸಲ್ಲುತ್ತದೆ. ಮೌಢ್ಯತೆಯಿಂದ ಕೂಡಿದ ಅನೇಕ ವೈದಿಕ ಸಂಪ್ರದಾಯ ರೂಢಿಗಳಿಗೆ ವಿರುದ್ಧವಾಗಿ ಉಗ್ರವಾದ ಒಂದು ಚಳುವಳಿಯನ್ನು ಈ ಶಿವ-ಶರಣರು ನಡೆಸಿದರು.
ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಶಿವ-ಶರಣರು ಕ್ರಾಂತಿ ಮಾಡದ ಕ್ಷೇತ್ರವೇ ಇಲ್ಲ ಎನ್ನಬಹುದು. ಧಾರ್ಮಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಮುಂತಾದ ಎಲ್ಲಾ ಕ್ಷೇತ್ರಗಳಲ್ಲೂ ಹೊಸಗಾಳಿ ಬೀಸುವಂತಾಯಿತು. ಜೀವನದ ಎರಡು ಮುಖ್ಯವಾದ ಮಗ್ಗಲುಗಳೆಂದರೆ ಧಾರ್ಮಿಕ ಚಿಂತನೆ ಮತ್ತು ಸಾಮಾಜಿಕ ಚಿಂತನೆ. ಒಬ್ಬ ವ್ಯಕ್ತಿ ಉನ್ನತಿಗೆ ಏರಬೇಕೆಂದರೆ ಒಳ್ಳೆಯ ಸಮಾಜ ವ್ಯವಸ್ಥೆ ಇರಬೇಕು. ಉತ್ತಮ ಜನರಿಂದ ಕೂಡಿದ ಸಮಾಜದಿಂದ ಸಮಾಜ ವ್ಯವಸ್ಥಿತವಾಗಿ ನಡೆದುಕೊಂಡು ಹೋಗಲು ಸರ್ವರಿಗೂ ಸಮಾನವಾದಂತಹ ರೀತಿ-ನೀತಿ ಕಟ್ಟು-ಪಾಡುಗಳ ಅಗತ್ಯವಿದೆ. ಜಾತಿ, ಲಿಂಗ, ವರ್ಣ ವರ್ಗಗಳ ಭೇದವಿಲ್ಲದೆ ಶಿವಾನುಭವವೆಂಬ ಒಂದೆ ನಂಬಿಕೆಯಡಿಯಲ್ಲಿ ಒಂದಾಗಿದ್ದು ಶಿವ-ಶರಣರ ವಿಶೇಷತೆಯಾಗಿದೆ.
ಬಸವಣ್ಣನವರು ಭಕ್ತಿ ನಿಷ್ಠನಾದರೆ, ಅಲ್ಲಮ ಪ್ರಭು ಸುಳಿದಾಡುವ ಲಿಂಗವೆಂದು ಪ್ರಖ್ಯಾತರಾದ ಜಂಗಮರು. ಚೆನ್ನಬಸವಣ್ಣನವರು ಘಟಸ್ಥಲ ಜ್ಞಾನಿಗಳು. ಶಿವಯೋಗಿ ಸಿದ್ಧರಾಮಯ್ಯನವರು ಕಾಯಕ ಯೋಗಿಗಳು, ಅಕ್ಕಮಹಾದೇವಿಯವರ ನಿಷ್ಠೆ ಶರಣಸತಿ- ಲಿಂಗಪತಿಯಾದರೆ, ಮತ್ತೊಬ್ಬ ಶರಣ ಮಾರಯ್ಯನವರ ನಿಷ್ಠೆ ಕಾಯಕದಲ್ಲಿ. ಹೀಗೆ ವಿವಿಧ ನಿಷ್ಠೆಯ ಶರಣ ಶರಣೆಯರನ್ನು ಒಂದು ಗೂಡಿಸುವ ಸೂತ್ರ ಎಂದರೆ ತನ್ನಂತೆ ಪರರ ಬಗೆದು ಸಕಲ ಜೀವಾತ್ಮರಿಗೂ ಲೇಸನೆ ಬಯಸುವದು ಎಂಬ ಮೌಲ್ಯಗಳು. ಹೀಗೆ ಶರಣರು ಜೀವನಕ್ಕೆ ಅಗತ್ಯವಾದ ಮೌಲ್ಯಗಳನ್ನು ಕಟ್ಟಿ ಕೊಟ್ಟಿದ್ದಾರೆ. ಅವರು ಕೇವಲ ಉಪದೇಶಿಸಲಿಲ್ಲ ಅದೇ ರೀತಿ ಬಾಳಿ ಬದುಕಿದರು.
ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಬೆಲೆ ಕೊಡುವಂತಹ ಪ್ರಾಮುಖ್ಯತೆ ನೀಡುವಂತಹ ಮೂಲಭೂತ ಅಂಶಗಳ ಮೌಲ್ಯಗಳು ಸಂಘ ಜೀವಿಗಳಾದ ಮಾನವರು ಪರಸ್ಪರ ಸೌಹಾರ್ದತೆಯಿಂದ ಬಾಳಲು, ಆ ಮೂಲಕ ಅವರು ಬದುಕುವ ಸಮಾಜ ವ್ಯವಸ್ಥಿತವಾಗಿ ಸಾಗಲು ಹಲವಾರು ನಿಯಮ ನೀತಿಗಳನ್ನು ನಮ್ಮ ಪೂರ್ವಜರು ತಮ್ಮ ಅನುಭವ ಮತ್ತು ಜೀವನಗಳ ಸಾರ ಸಂಗ್ರಹದಿಂದ ರೂಪಿಸಿದ್ದಾರೆ. ಈ ರೀತಿ ನೀತಿಗಳು ಮೌಲಿಕವಾಗಿದ್ದು ಒಬ್ಬ ವ್ಯಕ್ತಿಯ ಬೆಲೆಯನ್ನು ಏರಿಸುವಂತೆ ಆಗಿದೆ. ಇಂತ ನೈತಿಕ ಮೌಲ್ಯಗಳನ್ನು ಆಧರಿಸಿ ಜೀವನ ನಡೆಸುವ ವ್ಯಕಿ ಗಣ್ಯನೆನಿಸಿಕೊಂಡು ಶ್ರೇಷ್ಠ ಸ್ಥಾನಮಾನ ಪಡೆಯುತ್ತಾನೆ. ವ್ಯತ್ತಿರಿಕ್ತವಾಗಿ ನಡೆದವರು ಸಮಾಜ ಕಂಟಕರಾಗಿ ನಗ್ಯಣ್ಯರಾಗುತ್ತಾರೆ.
ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ,
ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ.
ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ,
ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ
ಗುಹೇಶ್ವರಾ, ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾನು ಬೆರಗಾದೆನು.
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-142/ವಚನ ಸಂಖ್ಯೆ-52)
ಎಂಬ ಈ ಅಲ್ಲಮ ಪ್ರಭುಗಳ ವಚನ ನೋಡಿದಾಗ ಕಾಲ ಕಾಲಕ್ಕೆ ಮನುಷ್ಯರಾದ ನೈತಿಕ ಮೌಲ್ಯಗಳ ಬದಲಾವಣೆಯನ್ನು 12 ನೇ ಶತಮಾನದಲ್ಲಿಯೇ ಅಲ್ಲಮ ಪ್ರಭುದೇವರು ಗುರುತಿಸಿದ್ದನ್ನು ಗಮನಿಸಬಹುದು. ಮಾನವ ಕುಲಕ್ಕೆ ಅತ್ಯಂತ ಅಗತ್ಯವಾದ ಜೀವನ ಮೌಲ್ಯಗಳನ್ನು ಬಸವಣ್ಣನವರ ಈ ಒಂದು ವಚನದಲ್ಲಿ ನಾವು ಕಾಣಬಹುದು.
ಕಲಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ,
ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ,
ಇದೆ ಅಂತರಂಗ ಶುದ್ಧಿ, ಇದೆ ಬಹಿರಂಗ ಶುದ್ಧಿ,
ಇದೆ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-20/ವಚನ ಸಂಖ್ಯೆ-235)
ಜೀವನದ ಪೂರ್ಣ ಸಾರವೆ ಈ ವಚನದಲ್ಲಿದೆ. ನಂದಿವಾಡ ಗ್ರಾಮದಲ್ಲಿ ಕಳ್ಳನಾಗಿದ್ದ ಪೆದ್ದಣ್ಣ ಉರಿಲಿಂಗ ದೇವರು ಭಕ್ತನೊಬ್ಬನಿಗೆ ದೀಕ್ಷೆ ಕೊಡುತ್ತಿರುವುದನ್ನು ಕಂಡು ತಾನೂ ಆ ಗುರುವನ್ನು ಸೇರಿ ಶಿವಭಕ್ತನಾಗುತ್ತಾನೆ. ಮುಂದೆ ಆತ ಶರಣ ಉರಿಲಿಂಗಪೆದ್ದಿಯೆಂದು ಪ್ರಖ್ಯಾತಿಯನ್ನು ಹೊದುತ್ತಾನೆ. ಆ ಕಾಲಘಟ್ಟದಲ್ಲಿದ್ದ ಶ್ರೇಣೀಕೃತ ಸಮಾಜದ ಕಟ್ಟಳೆಯಂತೆ ಅಸ್ಪೃಷ್ಯನಾಗಿದ್ದ ಪೆದ್ದಣ್ಣನವರು ನೀಡಿದ ಜೀವನ ಮೌಲ್ಯಗಳು ಉತ್ಕೃಷ್ಟವಾಗಿವೆ. ಅವರ ಒಂದು ಈ ವಚನ ಈ ತತ್ವವನ್ನು ನೀಡುತ್ತದೆ.
ಶಿವನೇ ದೈವ, ಶಿವಭಕ್ತನೇ ಕುಲಜ, ಷಡಕ್ಷರವೇ ಮಂತ್ರ,
ಕೊಲ್ಲದಿರ್ಪುದೇ ಧರ್ಮ, ಅಧರ್ಮದಿಂದ ಬಂದುದ ಒಲ್ಲದಿಪ್ಪುದೇ ನೇಮ,
ಆಶೆ ಇಲ್ಲದಿಪ್ಪುದೇ ತಪ, ರೋಷವಿಲ್ಲದಿಪ್ಪುದೇ ಜಪ,
ವಂಚನೆ ಇಲ್ಲದಿಪ್ಪುದೇ ಭಕ್ತಿ, ಹೆಚ್ಚು ಕುಂದಿಲ್ಲದಿಪ್ಪುದೇ ಸಮಯಾಚಾರ.
ಇದು ಸತ್ಯ, ಶಿವಬಲ್ಲ, ಶಿವನಾಣೆ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-1138/ವಚನ ಸಂಖ್ಯೆ-1550)
ಇಲ್ಲಿ ಒಂದು ಮುಖ್ಯವಾದ ಪ್ರಶ್ನೆ ಇದೆ. ಯಾವುದು ಸರಿ, ಯಾವುದು ತಪ್ಪು, ಯಾವುದು ನೀತಿ, ಯಾವುದು ಅನೀತಿ, ಯಾವುದು ನ್ಯಾಯ, ಯಾವುದು ಅನ್ಯಾಯಗಳ ಸ್ವರೂಪಗಳನ್ನು ಹೇಗೆ ಗುರುತಿಸಬಹುದು. ಪ್ರತಿಯೊಬ್ಬ ಮನುಷ್ಯನ ನಡೆ-ನುಡಿ, ಆಚಾರ-ವಿಚಾರಗಳಿಗೂ ಮತ್ತು ಅವುಗಳಿಂದಾಗುವ ಪರಿಣಾಮಗಳು ಎನ್ನುವವು ಇದ್ದೆ ಇರುತ್ತವೆ. ಆ ಪರಿಣಾಮ ಕೆಡಕು, ದುಃಖ, ಆಶಾಂತಿಯನ್ನು ಉಂಟು ಮಾಡುತ್ತಿದ್ದರೆ ಅದು ತಪ್ಪು. ಯಾವುದರಿಂದ ಸುಖ, ಶಾಂತಿಯಿಂದ ಮನಸ್ಸು ಪ್ರಸ್ನನ್ನವಾಗುತ್ತದೆಯೋ ಅದು ಒಳ್ಳೆಯದು ಎನಿಸಿಕೊಳ್ಳುತ್ತದೆ. ಪ್ರತಿಯೊಬ್ಬರ ಜೀವನ ರೀತಿ-ನೀತಿಗಳು ಬೇರೆ ಬೇರೆಯಾಗಿರುವುದರಿಂದ ಕೆಲವು ಮೂಲಭೂತ ಅಂಶಗಳನ್ನು ಹೊರತುಪಡಿಸಿ ಕುರುಡು ನಂಬಿಕೆ, ಮೂಢ ನಂಬಿಕೆ, ಧರ್ಮದ ಕುರುಡು ನಂಬಿಕೆ ಮತ್ತು ಆಚರಣೆಗಳು ಅಪ್ರಯೋಜಕ ಅಷ್ಟೆ ಅಲ್ಲ, ಅಪಾಯಕಾರಿಯೂ ಹೌದು. ಅದಕ್ಕೆಂದೇ ಬಸವಣ್ಣನವರು ನಮ್ಮ ಆಚಾರ ವಿಚಾರ ನಡೆ ಮತ್ತು ನುಡಿಗಳು ಒಂದಾಗಿರಬೇಕೆಂದು ಹೇಳುತ್ತಾರೆ.
ನೀರ ಕಂಡಲ್ಲಿ ಮುಳುಗುವರಯ್ಯ,
ಮರವ ಕಂಡಲ್ಲಿ ಸುತ್ತುವರಯ್ಯ,
ಬತ್ತುವ ಜಲವ, ಒಣಗುವ ಮರನ ಮಚ್ಚಿದವರು
ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-54/ವಚನ ಸಂಖ್ಯೆ-580)
ಎಂದು ಪೊಳ್ಳು ಆಚರಣೆಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ. ಮತ್ತೊಂದು ವಚನದಲ್ಲಿ:
ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು,
ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ.
ಉಂಬ ಜಂಗಮ ಬಂದಡೆ ನಡೆಯೆಂಬರು,
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ.
ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ,
ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-25/ವಚನ ಸಂಖ್ಯೆ-194)
ಎಂದು ಜನರ ಆಚರಣೆಗೂ ಮತ್ತು ವಿಚಾರಕ್ಕೂ ಎಷ್ಟು ವ್ಯತ್ಯಾಸವಿದೆ ಎಂದು ಹೇಳುತ್ತಾ ಅದು ತಪ್ಪು ನಡುವಳಿಕೆ ಎಂದು ಹೇಳಿದ್ದಾರೆ.
ವಯಸ್ಸಿನಲ್ಲಿ ಕಿರಿಯವರಾದರೂ ಪಾಂಡಿತ್ಯ ಮತ್ತು ಆಧ್ಯಾತ್ಮ ಸಾಧನೆಗಳಲ್ಲಿ ಹಿರಿಯರಾಗಿ ಪರಮಜ್ಞಾನಿ ಎನಿಸಿ ಎಲ್ಲರಿಂದ ಗೌರವಿತರಾದ ಚನ್ನಬಸವಣ್ಣನವರು ಅನುಭವ ಮಂಟಪದಲ್ಲಿ ಬಸವಾದಿ ಶರಣರಿಂದ ಮಹತ್ತರವಾದ ಸಾಧನೆಗಾಗಿ ಹೊಗಳಿಸಿಕೊಂಡವರು.
ಸಮಾಜದಲ್ಲಿ ಹೇಗಿರಬೇಕೆಂದು ಅಲ್ಲಮ ಪ್ರಭುಗಳು ಈ ರೀತಿಯಾಗಿ ನಿರೂಪಣೆ ಮಾಡಿದ್ದಾರೆ:
ಲೋಕ ಒಂದೆನೆಂದಡೆ ತಾನೊಂದೆನಬೇಡ.
ಮತ್ತಾರೇನೆಂದೆಡೆಯೂ ತನ್ನನೆಂದರೆನಬೇಡ.
ಭೈತ್ರಕ್ಕೆ ಬೈಗುಂಡನಿಕ್ಕಿದಂತಿರಬೇಕು,
ಹಿರಿಯರು ಗುಹೇಶ್ವರ.
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-165/ವಚನ ಸಂಖ್ಯೆ-353)
ಅಲ್ಲಸಲ್ಲದ ಮಾತುಗಳಿಗೆ ವಿಚಲಿತರಾಗದಂತೆ ಹಿರಿಯರು ಇರಬೇಕೆನ್ನುವ ಅಲ್ಲಮರು ಹಿರಿ–ಕಿರಿದೆಂಬ ಶಬ್ದವಡಗಿದರೆ ಆತನೆ ಶರಣನೆಂದು ಹೇಳುತ್ತ ಹಿರಿಯರು ಹಿರಿದಾದ ನಡೆ-ನುಡಿಗಳಿಂದ ಮಾತ್ರ ಹಿರಿಯರೆನಿಸಿಕೊಳ್ಳುತ್ತಾರೆಯೆ ಹೊರತು ವಯಸ್ಸಿನಿಂದಲ್ಲ ಎನ್ನುತ್ತಾರೆ.
ಇದನ್ನೆ ಅವಿರಳಜ್ಞಾನಿ ಚನ್ನಬಸವಣ್ಣನವರು
ಅಜಕೋಟಿ ಕಲ್ಪ ವರುಷದವರೆಲ್ಲರು ಹಿರಿಯರೆ?
ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರು ಹಿರಿಯರೆ?
ನಡುಮುರಿದು ಗುಡುಗೂರಿ ತಲೆ ನಡುಗಿ ನೆರೆತೆರೆ ಹೆಚ್ಚಿ, ಮತಿಗೆಟ್ಟು,
ಒಂದನಾಡ ಹೋಗಿ ಒಂಬತ್ತನಾಡುವ ಅಜ್ಞಾನಿಗಳೆಲ್ಲರು ಹಿರಿಯರೆ?
ಅನುವನರಿದು, ಘನವ ಬೆರಸಿ ಹಿರಿದು ಕಿರಿದೆಂಬ ಭೇದವ ಮರೆದು,
ಕೂಡಲಚೆನ್ನಸಂಗಯ್ಯನಲ್ಲಿ ಬೆರಸಿ ಬೇರಿಲ್ಲದಿಪ್ಪ ಹಿರಿಯತನ
ನಮ್ಮ ಮಹಾದೇವಿಯಕ್ಕಂಗಾಯಿತ್ತು.
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-387/ವಚನ ಸಂಖ್ಯೆ-921)
ಎಂದು ಹೇಳುತ್ತಾರೆ.
ವೈರಾಗ್ಯನಿಧಿ ಅಕ್ಕಮಹಾದೇವಿಯವರು ತಮ್ಮ ಜೀವನದ ಗುರಿಯಾದ ಚೆನ್ನಮಲ್ಲಿಕಾರ್ಜುನನನ್ನು ಸೇರುವ ಸಲುವಾಗಿ ತಾವು ಹುಟ್ಟಿದ ಮನೆ, ಅರಸೊತ್ತಿಗೆಯನ್ನೂ ಸಹ ತೊರೆದು ಹೊರಟಾಗ ಅವರ ದಾರಿ ಏನೂ ಸುಗಮವಾಗಿರಲಿಲ್ಲ.
ಆರೂ ಇಲ್ಲದವಳೆಂದು ಆಳಿಗೊಳಲುಬೇಡ ಕಂಡೆಯಾ?
ಏನ ಮಾಡಿದಡೂ ಆನಂಜುವಳಲ್ಲ.
ತರಗೆಲೆಯ ಮೆಲಿದು ಆನಿಹೆನು,
ಸರಿಯ ಮೇಲೊರಗಿ ಆನಿಹೆನು.
ಚೆನ್ನಮಲ್ಲಿಕಾರ್ಜುನಯ್ಯಾ, ಕರ ಕೇಡನೊಡ್ಡಿದಡೆ
ಒಡಲನು ಪ್ರಾಣವನು ನಿಮಗರ್ಪಿಸಿ ಶುದ್ಧಳಹೆನು.
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-793/ವಚನ ಸಂಖ್ಯೆ-63)
ಎಂದವರು ಅಕ್ಕಮಹಾದೇವಿಯವರು, ಬಸವಣ್ಣನವರ ಜೀವನದಲ್ಲಿ ಮಹತ್ವದ ಪಾತ್ರವಹಿಸಿದ, ಅವರ ವ್ಯಕ್ತಿತ್ವದ ಬೆಳವಣಿಗೆಗೆ ಅಪೂರ್ವ ಕೊಡುಗೆ ನೀಡಿದ ಅಕ್ಕನಾಗಮ್ಮನವರು ಎಂತಹ ಪರಿಸ್ಥಿಯನ್ನಾದರೂ ಧೈರ್ಯಗೆಡದೆ ನಿಭಾಯಿಸಿದ ಶರಣೆ.
ಮನದೊಡೆಯ ಮಹಾದೇವ ಮನವ ನೋಡಿಹನೆಂದು
ಮನುಜರ ಕೈಯಿಂದ ಒಂದೊಂದ ನುಡಿಸುವನು.
ಇದಕ್ಕೆ ಕಳವಳಸಿದಿರು ಮನವೆ, ಕಾತರಿಸದಿರು ತನುವೇ,
ನಿಜ ಮರೆಯದಿರು ಕಂಡಾ, ನಿಶ್ಚಿಂತನಾಗಿರು ಮನವೆ.
ಬಸವಣ್ಣಪ್ರಿಯ ಚೆನ್ನಸಂಗಯ್ಯನು ಬೆಟ್ಟದನಿತಪರಾಧವನು
ಒಂದು ಬೊಟ್ಟಿನಲ್ಲಿ ತೊಡೆವನು.
(ಸಮಗ್ರ ವಚನ ಸಂಪುಟ: ಒಂದು-2016/ಪುಟ ಸಂಖ್ಯೆ-876/ವಚನ ಸಂಖ್ಯೆ-798)
ಎಂದು ಮಹಾದೇವನಲ್ಲಿ ಸಂಪೂರ್ಣ ಶರಣಾಗತವಾಗಿ ನಮ್ಮ ಕಾರ್ಯಗಳನ್ನು ನಿರ್ವಹಿಸಬೇಕೆಂದು ಹೇಳಿದ್ದಾರೆ.
ಹಾಗೆ ನೋಡಿದರೆ ಪ್ರತಿಯೊಬ್ಬ ಶರಣ ಶರಣೆಯರ ಪ್ರತಿಯೊಂದು ಮಾತೂ ನಮಗೆ ಜೀವನ ಮೌಲ್ಯಗಳನ್ನು ತಿಳಿಸಕೊಡುವ ಪಾಠಗಳೇ ಆಗಿವೆ. ಸಾಗರದಿಂದ ಒಂದು ಬೊಗಸೆ ನೀರನ್ನು ತಗೆದಂತೆ ಶರಣರು ತಿಳಿಸಿದ ಜೀವನ ಮೌಲ್ಯಗಳ ಸಾಗರದಿಂದ ಕೆಲವಷ್ಟನ್ನು ಹೇಳುವ ಪ್ರಯತ್ನವನ್ನು ಮಾಡಿದೇನೆ.
ಶ್ರೀಮತಿ. ಅನುಪಮ ಪಾಟೀಲ,
ನಂ. 10, ದೇಸಾಯಿ ಪಾರ್ಕ್,
ಕುಸೂಗಲ್ ರಸ್ತೆ, ಕೇಶ್ವಾಪೂರ,
ಹುಬ್ಬಳ್ಳಿ – 580 023.
ಮೋಬೈಲ್. ಸಂ. +91 9845810708.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: admin@vachanamandara.in / info@vachanamandara.in