ಬೊಂತಾದೇವಿಯವರ ವಚನ ವಿಶ್ಲೇಷಣೆ / ಘಟದೊಳಗಣ ಬಯಲು / ಶ್ರೀ ಸಿದ್ಧೇಶ್ವರ ಸ್ವಾಮೀಯವರು.

ಘಟದೊಳಗಣ ಬಯಲು,
ಮಠದೊಳಗಣ ಬಯಲು,
ಬಯಲು ಬಯಲು ಬಯಲು?
ತಾನೆಲ್ಲಾ ಬಯಲು, ಬಿಡಾಡಿ ಬಯಲು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-392/ವಚನ ಸಂಖ್ಯೆ-1093)

ಇದು ಬೊಂತಾದೇವಿಯವರ ವಚನ. ಅವರು ಕಾಶ್ಮೀರದ ರಾಜಮನೆತನದ ರಾಜಪುತ್ರಿ. ಪರಮಸತ್ಯ ಪರಮಾತ್ಮನ ಶೋಧನೆಗಾಗಿ ರಾಜ ಭೋಗವನೆಲ್ಲ ತೊರೆದವರು. ರಾಜ ಪೋಷಾಕವನೆಲ್ಲ ಬಿಟ್ಟು ಕೇವಲ ಕೌದಿಯನ್ನು ಮೈಮೇಲೆ ಹೊತ್ತುಕೊಂಡರು. ಜನ ಕೇಳಿದರು “ಹೀಗೇಕೆ” ಎಂದು. ರಾಜ ಪೋಷಾಕು ಹಾಗೂ ಕೌದಿ ಎರಡೂ ಬಯಲಾಗುತ್ತವೆ ಎಂದರವರು.

ಕೌದಿಯು ಹಲವಾರು ತುಂಡು ಬಟ್ಟೆಗಳ ತೇಪೆ. ನಮ್ಮ ಬದುಕು, ವಿದ್ಯೆ, ಬುದ್ದಿ ಎಲ್ಲವೂ ಒಂದು ರೀತಿ ಮಿಶ್ರಣ, ತೇಪೆ. ಅಲ್ಲಿಷ್ಟು ಇಲ್ಲಿಷ್ಟು ನೋಡಿ, ಓದಿ, ಕೇಳಿ ನಾವು ಪಂಡಿತರಾಗಿರುತ್ತೇವೆ. ಅದರಲ್ಲಿ ನಮ್ಮದೆನ್ನುವುದು ತೀರಾ ಕಡಿಮೆ. ಉಳಿದುದೆಲ್ಲವೂ ಅವರಿಂದ ಇವರಿಂದ ತಂದು ಮಾಡಿದ ತೇಪೆಯ ಕೌದಿಯಷ್ಟೇ. ಅದನ್ನು ಹೊತ್ತುಕೊಂಡವರು ಪ೦ಡಿತರು ಹೇಗಾಗುತ್ತಾರೆಂಬುದೆ ಬೊಂತಾದೇವಿಯವರ ಸಂದೇಶವಾಗಿರಬಹುದಲ್ಲವೆ?

ಬೊಂತಾದೇವಿಯವರು ದೇವರಿಗೆ ಬಿಡಾಡಿ ಎಂದು ಕರೆದಿರುವರು. ಬಿಡಾಡಿ ಎಂದರೆ ಬಂಧಿಸಲಾಗದ ಸರ್ವತಂತ್ರ ಸ್ವತಂತ್ರ ವಸ್ತು. ದೇವರನ್ನು ನಾವು ಗುಡಿ ಗುಂಡಾರ, ಮಠ ಮಂದಿರದಲ್ಲಾಗಲಿ, ಹೃದಯ ಮಂದಿರದಲ್ಲಾಗಲಿ ಬಂಧಿಸಲಾಗದು. ಘಟವು ಸಣ್ಣದು ದೊಡ್ಡದು ಇರಬಹುದು. ಆದರೆ ಆ ಎಲ್ಲ ಘಟಕಗಳಲ್ಲಿರುವ ಬಯಲು ಸಣ್ಣದೂ ಅಲ್ಲ ದೊಡ್ಡದೂ ಅಲ್ಲ. ಹಾಗೇ ಸಿರಿವಂತ-ಬಡವ, ಸುರೂಪಿ-ಕುರೂಪಿ ಎಲ್ಲರಲ್ಲಿರುವ ಆತ್ಮ ಪರಮಾತ್ಮ ಬಯಲು.

ಒಂದೇ ಘಟವು ಒಡೆದರೂ ಬಯಲು ಒಡೆಯುವುದಿಲ್ಲ. ದೇಹ ಬಿದ್ದು ಹೋದರೂ ಆತ್ಮ ಬಯಲು ನಾಶವಾಗುವುದಿಲ್ಲ. ತೋರುವ ಈ ಪ್ರಪಂಚವೆಲ್ಲ ಒಂದು ದಿನ ಘಟದಂತೆ ಮರೆಯಾಗಿ ಬಯಲೊಳಗೆ ಒಂದಾಗಿ ಬಿಡುತ್ತದೆ.

ವಿಜಯನಗರ ಸಾಮ್ರಾಜ್ಯದಲ್ಲಿ ಅಂದು ಮುತ್ತು ರತ್ನ ದಾರಿಯಲ್ಲಿ ಅಳೆದವರು ಇಂದು ಎಲ್ಲಿರುವರು? ನಿಜವಾಗಿಯೂ ಈ ಬಯಲು ಎಂಬ ದಿವ್ಯ ಶಬ್ದವು ಮಹಾಮಂತ್ರವೇ ಸರಿ. ನಮ್ಮ ಜೀವನದಲ್ಲಿ ಬರುವ ಸ್ತುತಿ-ನಿಂದೆ, ಮಾನ-ಅಪಮಾನ ಎಲ್ಲವೂ ಒಂದು ದಿನ ಬಯಲಾಗಿಬಿಡುತ್ತವೆ ಎಂದಾಗ ನಾವು ಹಿಗ್ಗುವುದೇಕೆ, ಕುಗ್ಗುವುದೇಕೆ? ಸದಾ ಶಾಂತರಾಗಿರಬೇಕಷ್ಟೇ. ಈ ಜಗತ್ತಿನಲ್ಲಿರುವ ರವಿ, ಶಶಿ, ತಾರಾಗ್ರಹಗಳೆಲ್ಲವೂ ಒಂದು ದಿನ ಬಯಲಾಗಿ ಹೋಗುವಾಗ ನಮ್ಮ ಮನೆ-ಮಠ, ಅಧಿಕಾರ ಅಂತಸ್ತುಗಳೆಲ್ಲಿರುತ್ತವೆ?

ಇನ್ನು ತಂದೆ-ತಾಯಿ, ಸತಿ-ಪತಿ, ಬಂಧು-ಬಳಗ ಎಲ್ಲಿರುತ್ತದೆ? ನಾವೆಲ್ಲರೂ ಬಯಲಾತ್ಮರೇ. ನಾವು ಅನ್ನವನುಂಡು ಬಯಲು ಮಾಡುತ್ತೇವೆ. ಮತ್ತೊಂದು ದಿನ ಅದೇ ಅನ್ನ ನಮ್ಮನ್ನೂ ಬಯಲು ಮಾಡುತ್ತದೆ. ಬಡವರು-ಬಲ್ಲಿದರು, ಶೂರರು-ಧೀರರು ಎಲ್ಲರೂ ಬಯಲಿನತ್ತ ಧಾವಿಸುತ್ತಿರುವರು. ಇದನ್ನೇ ಮಹಾನುಭಾವಿ ಅಲ್ಲಮ ಪ್ರಭುದೇವರು ಇನ್ನಷ್ಟು ವಿಸ್ತಾರವಾಗಿ ಹೇಳಿರುವರು.

ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ಬಯಲ ಜೀವನ ಬಯಲ ಭಾವನೆ,
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು,
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-197/ವಚನ ಸಂಖ್ಯೆ-639)

ಬಯಲು ಎನ್ನುವುದು ಪರಮಾತ್ಮನಿಗೆ ತಾತ್ವಿಕವಾದ ಸುಂದರ ಹೆಸರು. ಶರಣರು ಆತ್ಮ ಜ್ಞಾನವೆಂಬ ಬೀಜವನ್ನೇ ತಮ್ಮ ಹೃದಯ ಹೊಲದಲ್ಲಿ ಬಿತ್ತಿದರು. ಮುಕ್ತಿಯ ಬೆಳೆಯನ್ನು ಬೆಳೆದು ಆ ಪರಮಾತ್ಮನಲ್ಲಿ ಬೆರೆತು ಬಯಲಾದರು. ಈ ಬಯಲ ಮಂತ್ರವನ್ನು ದೃಢವಾಗಿ ನಂಬಿ ಮುನ್ನಡೆದರೆ ನಾವು ನಿತ್ಯ ಮುಕ್ತರೇ. ಇದೇ ಬಯಲ ಮಂತ್ರ.

ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಉಪನ್ಯಾಸದಿಂದ ಆಯ್ದ ಭಾಗ.

  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in and admin@vachanamandara.in

Loading

Leave a Reply