
ಎಳ್ಳು ಬೆಲ್ಲ ಬಿರೋಣ ಒಳ್ಳೆ ಮಾತಾಡೋಣ
ಬೆಳಕು ಹೊಂಗಿರಣ ಪಸರಿಸಿದೆ ಮೂಡಣದಿ
ಕತ್ತಲೆಯ ಮೋಡ ಕರಗಿದೆ ಪಡುವಣದಿ
ತಂದಿದೆ ಸಂಕ್ರಾಂತಿಯ ಸಂಭ್ರಮ ಜಗದಿ
ಸೂರ್ಯನು ಮಕರ ರಾಶಿ ಪ್ರವೇಶಿಸಿ ಉತ್ತರಾಭಿಮುಖವಾಗಿ ಪಯಣಿಸುವ ಮಕರ ಸಂಕ್ರಾಂತಿ ಸಾಮಾನ್ಯವಾಗಿ ಪುಷ್ಯ ಮಾಸದಲ್ಲಿ ಬರುವ ಜನೇವರಿ 14 ರಂದು ಸಂಭವಿಸುತ್ತದೆ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವದಕ್ಕೆ ಸಂಕ್ರಾಂತಿ ಎನ್ನುವರು. ಉತ್ತರಾಯಣದ ಆರಂಭವಾದ್ದರಿಂದ ಮಕರ ಸಂಕ್ರಾಂತಿ ವಿಶೇಷ. ಜಗತ್ತಿನ ಅಂಧಕಾರ ಅಳಿದು ಬದುಕಿಗೆ ಬೆಳಕು ನೀಡುವ ಸೂರ್ಯನು ಜ್ಞಾನದ ಸಂಕೇತ. ಮಳೆ ಬೀಳಲು, ಬೆಳೆ ಬೆಳೆಯಲು, ಇಳೆ ಬೆಳಗಲು ಆತನೇ ಕಾರಣ. ಸೂರ್ಯದೇವನ ಅಪಾರ ಕರುಣೆಯಿಂದ ದಿವ್ಯ ತೇಜಸ್ಸು ಸಿದ್ಧಿ-ಬುದ್ಧಿಗಳು ನಮಗೆ ಸಮೃದ್ಧಿಯಾಗಿ ಸಿಗಲು ಸಾಧ್ಯ. ಅದಕ್ಕಾಗಿ ಸೂರ್ಯದೇವನಿಗೆ ವಿಶೇಷ ಪೂಜೆ. ಉತ್ತರಾಯಣವನ್ನು ದೇವತೆಗಳ ಕಾಲ ಎನ್ನಲಾಗಿದೆ.
ಹೊಸ ಗ್ರೆಗೋರಿಯನ್ ಕ್ಯಾಲೆಂಡರ್ ನೊಂದಿಗೆ ಪ್ರಾರಂಭವಾಗುವ ಭಾರತೀಯರ ಪುರಾತನ ಮತ್ತು ವೈಜ್ಞಾನಿಕ ನೆಲೆಯುಳ್ಳ ಹಬ್ಬ ಮಕರ ಸಂಕ್ರಮಣ. ಎಳ್ಳು ಬೆಲ್ಲದ ಹಬ್ಬವನ್ನು ರೈತರು ಸುಗ್ಗಿಯ ಹಬ್ಬವೆಂದು ಆಚರಿಸುವರು. ಹೆಚ್ಚು ಬಾಹ್ಯಾಡಂಬರವಿಲ್ಲದ ಮಕರಸಂಕ್ರಾಂತಿಗೆ “ಎಳ್ಳುಬೆಲ್ಲ ತಿಂದು ಒಳ್ಳೇ ಮಾತಾಡೋಣ” ಎನ್ನುವದೇ ಈ ಮಕರ ಸಂಕ್ರಾಂತಿಯ ಸಂದೇಶ. ವಿಶೇಷವಾಗಿ ಈ ಹಬ್ಬಕ್ಕೂ ಎಳ್ಳಿಗೂ ನಿಕಟ ಸಂಬಂಧವಿದೆ.
ತಿಲಸ್ನಾಯೀ ತಿಲೋದ್ವರ್ತಿ | ತಿಲಹೋಮಿ ತಿಲೋದಕೀ ||
ತಿಲಭುಕ್ ತಿಲದಾತಾ ಚ | ಷಟ್ ತಿಲಾ ಪಾಪನಾಶಕಾ: ||
ಎಳ್ಳು-ಬೆಲ್ಲ ಹಬ್ಬದ ವಿಶೇಷ ಖಾದ್ಯ. ಚಳಿ ಬೆಚ್ಚಗಿನ ವಾತಾವರಣ. ಚಳಿಯಿಂದ ಚರ್ಮದಲ್ಲಿ ಎಣ್ಣೆ ಅಂಶ ಕಡಿಮೆಯಾಗುವದರಿಂದ ಎಳ್ಳು ತಿನ್ನುವ ವಾಡಿಕೆ ಇರಬಹುದು. ಎಳ್ಳು-ಬೆಲ್ಲ ಶೀತ-ವಾತ ಜನ್ಯವಾದ ಜಡ್ಡು ಆಲಸ್ಯ ದೂರ ಮಾಡುವ ಸ್ನೇಹ ದ್ರವ್ಯವಾಗಿವೆ. ಮಕರ ಸಂಕ್ರಮಣದಲ್ಲಿ ತೀರ್ಥಸ್ನಾನ ಮತ್ತು ದಾನಕ್ಕೆ ವಿಶೇಷ ಮಹತ್ವವಿದೆ. ದೇಶದ ನಾನಾ ಭಾಗಗಳಲ್ಲಿ ಬೇರೆ ಬೇರೆ ರೀತಿಯಾಗಿ ಆಚರಿಸುವ ಮಕರ ಸಂಕ್ರಮಣ ಉತ್ತರ ಕರ್ನಾಟಕದಲ್ಲಿ ಮೂರು ದಿನ ಆಚರಿಸುವ ಸಂಭ್ರಮದ ಹಬ್ಬವಾಗಿದೆ.
- ಮೊದಲ ದಿನ ಭೋಗಿ:
ಮೈಗೆ ಎಳ್ಳು ಹಚ್ಚಿ ಎಳ್ಳನ್ನು ನೀರಿಗೆ ಹಾಕಿ ತಲೆ ಸ್ನಾನ ಮಾಡುವರು. ಮುತ್ತೈದೆಯರಿಗೆ ಭೋಗಿ ಬಾಗಿನ ಕೊಡುವದು ವಿಶೇಷ. ಮರದಲ್ಲಿ ಎಳ್ಳು, ಬೆಲ್ಲ, ಕೊಬ್ಬರಿ ಗಿಟಕು, ಬದನೆ, ಗಜ್ಜರಿ, ಸೊಪ್ಪುಗಳು, ಕಾಳುಗಳು, ಮಸಾಲೆ, ಹುಗ್ಗಿ ಮಾಡಲು ಬೇಕಾಗುವ ಸಾಮಾನುಗಳು, ಅರಿಷಿಣ ಕುಂಕುಮ, ಬಳೆ, ಹಣಿಗೆ, ಕನ್ನಡಿ ಇತ್ಯಾದಿ ಸುಮಂಗಲ ದ್ರವ್ಯಗಳು, ಹಣ್ಣು ಹೂ ಮುಂತಾದವನೆಲ್ಲ ಇಟ್ಟು ಮೇಲೆ ಬಾಳೆ ಎಲೆಯಿಂದ ಮುಚ್ಚಿ ಕೊಡುವುದು ವಾಡಿಕೆ. ಬೆಳೆದ ಬೆಳೆಗಳ ಕಟಾವಿನ ಕಾಲ. ಪ್ರಕೃತಿ ಮೈದಡವಿ ಪುಟಿದೇಳುವ ಕಾಲ. ಹೀಗಾಗಿ ಗೋಧಿ, ಕಡಲೆ, ತರಕಾರಿಗಳಾದ ಗಜ್ಜರಿ, ಬಾರಿಹಣ್ಣು ಮುಂತಾದವುಗಳ ಮೊದಲ ಫಸಲು ಇದಾಗಿದ್ದು ಇವುಗಳ ದಾನ, ಭಕ್ಷ್ಯ ವಿಶೇಷ. ಇಂದು ಸೆಜ್ಜಿ ರೊಟ್ಟಿ ಮಾಡುವದು ವಿಶೇಷ. ಜೊತೆಗೆ ಜೋಳದ ರೊಟ್ಟಿ ಕೂಡ. ಅದರ ಜೊತೆ ವಿಶೇಷ ಅಂದರ ಬದನೆಕಾಯಿ ಬರ್ತ. ಬದನೆಕಾಯಿ ಬೇಯಿಸಿ ಅದಕ್ಕೆ ಗಜ್ಜರಿ, ಹಸಿಗಡಲೆ ಹಾಕಿ ಮಾಡುವ ಬರ್ತ. ಶೇಂಗಾ ಚಟ್ನಿ, ಪುಠಾಣಿ ಚಟ್ನಿ, ಗುರೆಳ್ಳ ಚಟ್ನಿ, ಅಗಸಿ ಚಟ್ನಿ, ಕೆಂಪ ಚಟ್ನಿ, ಹುಣಸಿ ಟೊಕ್ಕ, ಮಡಕಿಕಾಳ ಪಲ್ಲೆ ಜೊತೆಗೆ ಹಕ್ಕರಕಿ, ಈರುಳ್ಳಿ ಸೊಪ್ಪುಗಳು ಬಾಯಲ್ಲಿ ನೀರೂರಿಸುತ್ತವೆ. ಇನ್ನು ಮಾದ್ಲಿ, ಶೇಂಗಾ ಮತ್ತು ಎಳ್ಳ ಹೋಳಗಿ. ಈ ರೀತಿ ಭಾರಿ ಭೋಜನ. ಹೀಗೆ ಉಂಡುಟ್ಟು ಸಂಭ್ರಮಿಸುವ ಹಬ್ಬ. - ಎರಡನೇ ದಿನ ಮಕರಸಂಕ್ರಮಣ:
ತೀರ್ಥಸ್ನಾನ ಮಾಡಿ ಪುಣ್ಯ ಪಡೆವರು. ಇಂದು ದೇವತೆಗಳು ಭೂಮಿಗಿಳಿದು ಗಂಗೆಯಲ್ಲಿ ಸ್ನಾನ ಮಾಡುವರೆಂಬ ಪ್ರತೀತಿ ಇದೆ. ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ. ದೇವರಿಗೆ ಎಳ್ಳೆಣ್ಣೆ ದೀಪ ಹಚ್ಚುವರು. ಬೆಲ್ಲ ಮತ್ತು ಒಣಕೊಬ್ಬರಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅದಕ್ಕೆ ಹುರಿದ ಶೇಂಗಾ, ಎಳ್ಳು ಮತ್ತು ಪುಠಾಣಿ ಸೇರಿಸಿ, ಸಕ್ಕರೆ ಅಚ್ಚುಗಳ ತುಂಡುಗಳನ್ನು ಸೇರಿಸಿ ತಯಾರಿಸುವರು. ಮೊದಲೆಲ್ಲ ಮನೆಯಲ್ಲೇ ಕುಸರೆಳ್ಳು ತಯಾರಿಸುತ್ತಿದ್ದರು. ಸಕ್ಕರೆ ಪಾಕ ಮಾಡಿ ಎಳ್ಳು, ಬಡೀಸೋಪ, ಪುಠಾಣಿ, ಶೇಂಗಾಕ್ಕೆ ಪಾಕಹಾಕಿ, ಇದ್ದಲಿ ಒಲಿ ಮೇಲೆ ಸಣ್ಣ ಹಿತ್ತಾಳಿ ಬಾಳಿಗೆಯಲ್ಲಿ ಮಡಿಯಿಂದ ಮಾಡುತ್ತಿದ್ದರು. ಅದು ಬಹಳ ಸೂಕ್ಷ್ಮ ಮತ್ತು ಸಂಯಮ ಹಾಗು ಬಹಳ ಸಮಯ ಬೇಕಾಗುವ ಕೆಲಸ. ಅದೊಂದು ಕಲೆ ಅಂತಾನೇ ಹೇಳಬಹುದು. ಇಂದಿನವರಿಗೆ ಅದರ ಕುರಿತು ತಿಳಿದಿರಲಿಕ್ಕೂ ಇಲ್ಲ, ತಿಳಿದರೆ ಆಶ್ಚರ್ಯವಾಗಬಹುದು. ಆದರೆ ಇಂದಿನ ಧಾವಂತ ಯುಗಕ್ಕೆ ಪೇಟೆಯಲ್ಲಿ ದೊರೆಯುವ ಸಕ್ಕರೆ ಪಾಕದ ಬಿಳಿ ಮತ್ತು ಬಣ್ಣದ ಎಳ್ಳುಗಳನ್ನು ತರುವರು. ಮಕ್ಕಳಿಗೆ ಚೆಂದ ಚೆಂದದ, ವಿವಿಧ ಆಕೃತಿಯ ಎಳ್ಳಿನ ಡಬ್ಬಿ ಸಿಗುತ್ತವೆ. ಮಕ್ಕಳೆಲ್ಲ ಸೇರಿ ಜರಿ ಲಂಗ ತೊಟ್ಟು ಜಡಿ ಹೆಣೆದುಕೊಂಡು ಕೈಯ್ಯಲ್ಲಿ ಡಬ್ಬಿ ಹಿಡಿದು ಓಣಿಯ ಮನೆಗಳಿಗೆಲ್ಲ ಹೋಗಿ ಎಳ್ಳು ಕೊಟ್ಟು ಹಿರಿಯರ ಆಶೀರ್ವಾದ ಪಡೆಯುವದು ವಿಶೇಷ. ಹಿರಿಯರಿಗೆ ಸಂಬಂಧಿಕರಿಗೆ, ನೆರೆಹೊರೆಯವರಿಗೆ ಎಳ್ಳು ಕೊಟ್ಟು “ಎಳ್ಳು ಬೆಲ್ಲ ತಗೊಂಡ ಒಳ್ಳೊಳ್ಳೆ ಮಾತಾಡೋಣ” ಎಂದು ಹೇಳುವರು. ಹಳೆ ಕಹಿ ನೆನಪು, ದ್ವೇಷ ಬಿಟ್ಟು ಎಲ್ಲರೂ ಮತ್ತೆ ಒಂದುಗೂಡುವ ಸಂದರ್ಭ. ಎಳ್ಳು ಬೆಲ್ಲ ತಿಂದು ಒಳ್ಳೆಯವರಾಗಲು ಅವಕಾಶ. ದೇವಸ್ಥಾನಗಳಲ್ಲಿ ಸಂಜೆಯ ಸಮಯದಲ್ಲಿ ಎಲ್ಲ ಮಹಿಳೆಯರು ಸೇರಿ ಅರಿಷಿಣ ಕುಂಕುಮ ಕೊಟ್ಟು ಎಳ್ಳು ಬೆಲ್ಲ ಬೀರುವದರ ಜೊತೆ ಚಿಕ್ಕ ಚಿಕ್ಕ ಆಕರ್ಷಕ ಡಬ್ಬಿಗಳ ಕಾಣಿಕೆ ಕೊಡುವರು. ಇವೆಲ್ಲ ಸಂಪ್ರದಾಯಗಳು ಜನರಲ್ಲಿ ಸಾಮರಸ್ಯ ಬೆಳೆಸುವದಾಗಿವೆ. ಇಂದು ಶಬರಿಮಲೈ ಅಯ್ಯಪ್ಪಸ್ವಾಮಿಯ ಸನ್ನಿಧಿಯಲ್ಲಿ ಕಾಣುವ ಮಕರ ಜ್ಯೋತಿಗೆ ಹೆಚ್ಚಿನ ಮಹತ್ವವಿದೆ. ಜ್ಯೋತಿಯ ದರ್ಶನಕ್ಕಾಗಿ ಲಕ್ಷಾನುಗಟ್ಟಲೇ ಜನ ಸೇರುತ್ತಾರೆ ಮತ್ತು ಪಾವನರಾಗುತ್ತಾರೆ. - ಮೂರನೇ ದಿನ ಸಂಕ್ರಾಂತಿ ಕರಿ:
ಇಂದು ಸುತ್ತಲಿನ ಹೊಳೆ, ಹಳ್ಳ, ನದಿ ಮುಂತಾದವುಗಳಲ್ಲಿ ಸ್ನಾನ ಮಾಡುವರು. ಇದನ್ನ ಕರಿ ಜಳಕ ಎನ್ನುವರು. ಇದರಿಂದ ಪಾಪ ಕರ್ಮಗಳು ಕಳೆಯುವವು ಮತ್ತು ಚರ್ಮ ರೋಗಾದಿಗಳು ಬರಲಾರವೆಂಬ ನಂಬಿಕೆ. ಅಷ್ಟೇ ಅಲ್ಲ ಹೊಲ, ತೋಟ, ಪಾರ್ಕಗಳಿಗೆ ಊಟ ಕಟ್ಟಿಕೊಂಡು ಹೋಗುವ ಸಂಭ್ರಮ ಹೇಳತೀರದು. ವಿಶೇಷವೆಂದರೆ ಇಂದು ಚಿಕ್ಕ ಮಕ್ಕಳಿಗೆ ಕರಿ ಎರೆಯುವದು. ಸಂಜೆ ಸಮಯದಲ್ಲಿ ಮಗುವಿಗೆ ಹೊಸ ಬಟ್ಟೆ, ಬಳೆ ಹಾಕುತ್ತಾರೆ. ಎಳ್ಳಿನಿಂದ ಮಾಡಿದ ಕಿರೀಟ, ಎಳ್ಳಿನ ಸರ, ಎಳ್ಳಿನ ಸೊಂಟಪಟ್ಟಿ, ಎಳ್ಳಿನ ಬಳೆಗಳನ್ನು ಮಗುವಿಗೆ ತೊಡಿಸುತ್ತಾರೆ. ಮುದ್ದಾಗಿ ಕಾಣುವ ಮಗುವಿನ ತಲೆ ಮೇಲೆ ಚುರುಮರಿ, ಬಾರಿಹಣ್ಣು, ಸೇಬುಹಣ್ಣಿನ ಹೋಳು, ಕಬ್ಬಿನ ತುಂಡು, ಸಕ್ಕರೆ ಅಚ್ಚಿನ ತುಂಡು, ಹಸಿಕಡಲೆ, ನಾಣ್ಯ ಹಾಕಿ ಕರಿ ಎರೆಯುವರು. ದೃಷ್ಟಿ ತಗೆಯುವದರ ಜೊತೆ ಇದರಿಂದ ಮಕ್ಕಳಲ್ಲಿರುವ ತುಂಟತನ, ಹಠಮಾರಿತನ ಕಡಿಮೆ ಅಗುವದು ಎಂಬ ನಂಬಿಕೆ. ಇದು ಸಂಪ್ರದಾಯಿಕವಾಗಿ ಕಂಡು ಬಂದರೂ ವೈಜ್ಞಾನಿಕ ಅಂಶವಿದೆ. ಬಾರಿಹಣ್ಣನ್ನು ತಲೆಗೆ ಹಾಕಿದಾಗ ಅದರ ಸ್ಪರ್ಷದಿಂದ ದೇಹದಲ್ಲಿರುವ ವಿದ್ಯುತ್ ಆ ಹಣ್ಣಿನಲ್ಲಿರುವ ಗುಣವನ್ನು ಆಕರ್ಷಿಸುವದರಿಂದ ನೆತ್ತಿಯ ಮೇಲಿನ ನರಗಳ ಮೇಲೆ ಪ್ರಭಾವ ಬೀರುವದು ಹಾಗು ತಂಪು ಹವಾ ಮಕ್ಕಳಿಗೆ ಬಾಧಿಸದು ಎಂದು ಹೇಳುವದಿದೆ. ಏನೆ ಇರಲಿ ಮಕ್ಕಳಂತು ಸಖತ್ ಖುಷಿ ಪಡತಾರೆ. ಹಣ್ಣುಗಳನ್ನು, ಸಕ್ಕರಿ ಅಚ್ಚು ಇನ್ನೂ ಹೆಚ್ಚಾಗಿ ನಾಣ್ಯಗಳನ್ನು ಮಕ್ಕಳು ನಾ ಮುಂದು ತಾ ಮುಂದು ಅಂತ ಆಯ್ದುಕೊಳ್ಳುವದಿದೆಯಲ್ಲ! ಅದು ಇಂದಿನ ಯಾವ ಮೋಬೈಲ್ ಆಟಗಳಿಗೂ ಸಾಟಿ ಅಲ್ಲ. ಮಕ್ಕಳ ಹರ್ಷ ಹೇಳತೀರದು.
ಹಳ್ಳಿಗರಿಗಂತೂ ಇದು ಸುಗ್ಗೀಯ ಕಾಲ. ಕಷ್ಟ ಪಟ್ಟು ಬೆಳೆದ ಬೆಳೆ ಕೈ ಸೇರುವ ಸಂಭ್ರಮ. ದನಕರುಗಳ ಕೊರಳಿಗೆ ಗಂಟೆ, ಕಾಲಿಗೆ ಗೆಜ್ಜೆ, ಕೊಂಬಿಗೆ ಬಣ್ಣ ಹಚ್ಚಿ ರಿಬ್ಬನ್ ಕಟ್ಟಿ, ಬೆನ್ನಿಗೆ ಹೆಣಿಕೆ ಬಟ್ಟೆ ಹಾಕಿ ಸಿಂಗರಿಸಿ ಊರಲ್ಲಿ ಮೆರವಣಿಗೆ ಮಾಡುವರು. ರೈತರಲ್ಲಿ ಹೊಸ ಹುರುಪು ಚೈತನ್ಯ ಮೂಡಿಸುವ ಸಡಗರದ ಹಬ್ಬ ಮಕರ ಸಂಕ್ರಮಣ. ಕೆಲವು ದೇವಸ್ಥಾನಗಳಲ್ಲಿ ಸಂಕ್ರಾಂತಿಯಂದು ಜಾತ್ರೆ ಕೂಡ ನಡೆಯುತ್ತದೆ. ಮಕ್ಕಳೆಲ್ಲ ಸೇರಿ ಗಾಳಿಪಟ ಆಕಾಶದ ಬಾನಂಚಿನವರೆಗೆ ಹಾರಿಸುವದು ಈ ಹಬ್ಬದ ವಿಶೇಷ. ಭಾರತೀಯ ಹಬ್ಬಗಳಿಗೆ ತನ್ನದೇ ಆದ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಗಳಿದ್ದರೂ ವೈಜ್ಞಾನಿಕ ಅಂಶ ಅಡಗಿರುವದನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿ ಹೇಳಿದಲ್ಲಿ ನಮ್ಮ ಸಂಪ್ರದಾಯಗಳು ಉಳಿಯುವದರಲ್ಲಿ ಸಂಶಯವಿಲ್ಲ. ಭಾರತೀಯರಲ್ಲಿ ಹೊಸ ಚೈತನ್ಯ ಹೊಸ ಹುರುಪುಗಳಿಗೆ ಕಾರಣ ನಾವು ಆಚರಿಸುವ ಹಬ್ಬ ಹರಿದಿನಗಳು.
ಶ್ರೀಮತಿ. ಶಾರದಾ ಕೌದಿ,
ಅಧ್ಯಕ್ಷರು,
ಕದಳಿ ಮಹಿಳಾ ವೇದಿಕೆ, ಜಿಲ್ಲಾ ಘಟಕ,
ಧಾರವಾಡ.
ಮೋಬೈಲ್ ಸಂ. +91 89514 91838
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in