ಆದ್ಯ ವಚನಕಾರ ಶರಣ ಜೇಡರ ದಾಸಿಮಯ್ಯನವರು / ಶ್ರೀಮತಿ. ಅನುಪಮ ಪಾಟೀಲ, ಹುಬ್ಬಳ್ಳಿ.

ಕನ್ನಡ ಸಾಹಿತ್ಯದ ಇತಿಹಾಸದಲ್ಲಿ 12 ನೇ ಶತಮಾನವು ಒಂದು ವಿಶಿಷ್ಟ ಕಾಲಘಟ್ಟ. ಆ ಕಾಲಘಟ್ಟದ ಸಾಹಿತ್ಯಿಕ, ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ರಾಂತಿಗಳು ವಿಶಿಷ್ಟತೆಗೆ ಕಾರಣಗಳು. ಧರ್ಮ, ದರ್ಶನ ಮತ್ತು ಸಾಹಿತ್ಯದ ಹಿನ್ನೆಲೆಯಲ್ಲಿ ಬಸವಾದಿ ಶರಣರ ವಚನಗಳಿಗೆ ಮಹತ್ವದ ಸ್ಥಾನವಿದೆ. ಶಿವ ಶರಣರ ಜೀವನ ಬಹುಮುಖಿಯಾದುದು. ಅವರು ಒಂದೆಡೆ ಸಾಧಕರು ಇನ್ನೊಂದೆಡೆ ಸಮ-ಸಮಾಜದ ನಿರ್ಮಾಪಕರು. ಇಂತಹ ಅಗ್ರಗಣ್ಯ ಶಿವಶರಣರಲ್ಲಿ ಶರಣ ಜೇಡರ ದಾಸಿಮಯ್ಯನವರೂ ಒಬ್ಬರು. ಬಸವಣ್ಣನವರ ಹಿರಿಯ ಸಮಕಾಲೀನರು. ವಚನ ಸಾಹಿತ್ಯದಲ್ಲಿ ಕಂಡು ಬರುವಂತೆ ಬಸವಣ್ಣವರಿಗಿಂತ ಮುಂಚಿತವಾಗಿ ವಚನಗಳನ್ನು ರಚಿಸಿದ ಶರಣ ಜೇಡರ ದಾಸಿಮಯ್ಯನವರು ಒಬ್ಬ ಅದ್ಭುತ ವಚನಕಾರರು. ವೃತ್ತಿಯಲ್ಲಿ ನೇಯ್ಗೆ ಕೆಲಸ ಮಾಡುತ್ತಿದ್ದರು. ಈಗಿನ ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದೇನೂರು ಗ್ರಾಮದಲ್ಲಿ ಶರಣೆ ಶಂಕರಿ ಮತ್ತು ಶರಣ ರಾಮಯ್ಯ ಎಂಬ ಶಿವಭಕ್ತ ದಂಪತಿಗಳಿಗೆ ಜನಿಸಿದರು. ನೇಯ್ಗೆಯ ಕಾಯಕ ಮಾಡುತ್ತ ವಚನ ಸಾಹಿತ್ಯಕ್ಕೆ ಒಂದು ತಳಹದಿ ಹಾಗೂ ಪರಂಪರೆಯನ್ನು ಹಾಕಿಕೊಟ್ಟವರು ಆದ್ಯ ವಚನಕಾರ ಶರಣ ಜೇಡರ ದಾಸಿಮಯ್ಯನವರು.

ಅವರ ವಚನಗಳ ಸಾಹಿತ್ಯಿಕ ಗುಣ ಮತ್ತು ಮೌಲ್ಯಗಳಿಂದಾಗಿ ಶ್ರೇಷ್ಠ ವಚನಕಾರರು ಎಂದು ಎನಿಸಿಕೊಳ್ಳುತ್ತಾರೆ. ಅವರ ವಚನಗಳ ಮುಖ್ಯ ಗುಣ ಅಂದರೆ ಸಂಕ್ಷಿಪ್ತತೆ, ಸರಳತೆ ಹಾಗೂ ಅರ್ಥಪ್ರಚುರತೆ. ವಚನಗಳು ಒಂದು ಸಾಹಿತ್ಯ ಪ್ರಕಾರವಾಗಿ ರೂಪುಗೊಳ್ಳುತ್ತಿದ್ದುದನ್ನು ಇವರ ವಚನಗಳಲ್ಲಿ ಕಾಣಬಹುದು. ಹೊಸ ಸಾಹಿತ್ಯ ಪ್ರಕಾರಕ್ಕೆ ಹೊಸ ಆಯಾಮಗಳನ್ನು ತೋರಿಸಿದವರು ದಾಸಿಮಯ್ಯನವರು. ಬೆಳೆಯುತ್ತಲೆ ಶಿವನ ಆರಾಧಕರಾಗಿ ಶಿವತತ್ವ ಚಿಂತನೆಯ ಜ್ಞಾನ ಸಂಪಾದಿಸಿಕೊಂಡು ವಚನ ರಚಿಸಲು ಆರಂಭಿಸಿದರು. ಮುದೇನೂರಿನಲ್ಲಿರುವ ದೇವರು ಶಿವಸ್ವರೂಪಿ ರಾಮನಾಥನನ್ನೆ ಆರಾಧ್ಯ ದೈವವಾಗಿ ಸ್ವೀಕರಿಸಿ ರಾಮನಾಥ ಎನ್ನುವ ಅಂಕಿತ ನಾಮದೊಂದಿಗೆ ಸುಮಾರು 176 ವಚನಗಳನ್ನು ರಚಿಸಿದ್ದಾರೆ. ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರ ಪಡೆದು ಜ್ಞಾನವಂತರಾದ ದಾಸಿಮಯ್ಯನವರು ಯಾವುದನ್ನೂ ಪ್ರಶ್ನಿಸದೆ ಸ್ವೀಕರಿಸುವ ಮನೋಭಾವದವರಲ್ಲ. ಅವರು ವೈಚಾರಿಕ ನೆಲೆಗಟ್ಟಿನ ಅಸಾದೃಶ್ಯ ವ್ಯಕ್ತಿತ್ವ ಹೊಂದಿದ್ರು.

ವಚನ ಸಾಹಿತ್ಯದಲ್ಲಿ ಒಟ್ಟು ಐವರು ದಾಸಿಮಯ್ಯನವರ ಪ್ರಸ್ತಾಪ ಸಿಗುತ್ತದೆ.

  • ಶಂಕರ ದಾಸಿಮಯ್ಯ.
  • ಶಿವ ದಾಸಿಮಯ್ಯ.
  • ವೀರಶಂಕರ ದಾಸಯ್ಯ.
  • ದೇವರ ದಾಸಿಮಯ್ಯ.
  • ಜೇಡರ ದಾಸಿಮಯ್ಯ.

ಇವರಲ್ಲಿ ದೇವರ ದಾಸಿಮಯ್ಯ ಹಾಗೂ ಶರಣ ಜೇಡರ ದಾಸಿಮಯ್ಯ ಇಬ್ಬರೂ ಒಬ್ಬರೇ ಅಂತ ಕೆಲ ಇತಿಹಾಸಕಾರರು ಪ್ರತಿಪಾದಿಸುತ್ತಾರೆ. ಇನ್ನೂ ಕೆಲವರು ಇಬ್ಬರೂ ಬೇರೆ ಬೇರೆ ಶರಣರು ಅಂತ ಹೇಳ್ತಾರೆ. ದೇವರ ದಾಸಿಮಯ್ಯನವರು 11 ನೇ ಶತಮಾನದ ಒಬ್ಬ ಶಿವಭಕ್ತ. ಇಮ್ಮಡಿ ಜಯಸಿಂಹನ ಮಡದಿ ಸುಗ್ಗಳೆಯವರಿಗೆ ಶಿವಬೋಧೆ ದೀಕ್ಷೆ ನೀಡಿ ಶೈವ ಧರ್ಮದ ಅನುಯಾಯಿಯನ್ನಾಗಿ ಮಾಡಿದವರು ದೇವರ ದಾಸಿಮಯ್ಯನವರು. ಇವರು ಒಬ್ಬ ಅಪ್ಪಟ ಸನ್ಯಾಸಿಗಳು ಹಾಗೂ ವೃತ್ತಿಯಿಂದ ಕೃಷಿಕರು. ಅವರು ಯಾವುದೇ ವಚನಗಳನ್ನು ರಚಿಸಿಲ್ಲ ಇದಕ್ಕಾಗಿಯೇ ದೇವರ ದಾಸಿಮಯ್ಯ ಮತ್ತು ಶರಣ ಜೇಡರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ ಶರಣರು ಎನ್ನುವುದು ವಚನ ಸಾಹಿತ್ಯದ ವಿದ್ವಾಂಸರ ಅಭಿಪ್ರಾಯ..

ಶರಣ ಜೇಡರ ದಾಸಿಮಯ್ಯನವರ ವಚನಗಳಲ್ಲಿ ರೂಪಾಲಂಕಾರ ವಿಶೇಷವಾಗಿದೆ. ಸರಳತೆ, ಸಾಹಿತ್ಯಿಕ ಗುಣ ಹಾಗೂ ಮೌಲ್ಯಗಳಿಂದ ಕೂಡಿರುವ ಇವರ ವಚನಗಳಲ್ಲಿ ವಿಡಂಬನೆಯೂ ಸಾಕಷ್ಟು ಕಂಡು ಬರುತ್ತದೆ. ಕೆಲವೊಮ್ಮೆ ನಯವಾಗಿ, ಕೆಲವೊಮ್ಮೆ ಒರಟಾಗಿ, ಭಾವ ಬುದ್ಧಿಯ ಹದವಾದ ಮಿಶ್ರಣಗಳೊಂದಿಗೆ ವಚನಗಳು ರಚನೆ ಆಗಿ ಜನಪರ ಕಾಳಜಿ ಬಿಂಬಿತವಾಗಿವೆ. ದಾಸಿಮಯ್ಯನವರ ವಚನಗಳಲ್ಲಿ ಭಕ್ತಿಯ ಮಹಿಮೆ, ಉತ್ಕಟವಾದ ಲಿಂಗ ನಿಷ್ಠೆ, ನಿಷ್ಟೂರವಾದ ಸ್ಪಷ್ಟ ವಾಕ್ಯ ರಚನೆ, ಆಳವಾದ ಅರ್ಥ ಮತ್ತು ಭಾವ ಮಾರ್ಮಿಕವಾದ ಸಂಕ್ಷಿಪ್ತ ಶೈಲಿ ಮುಂತಾದವುಗಳು ಎದ್ದು ಕಾಣುತ್ತವೆ. ದಾಂಪತ್ಯ ಧರ್ಮ, ಸ್ತ್ರಿ ಪುರುಷ ಸಮಾನತೆ ಗುರುವಿನ ಶ್ರೇಷ್ಠತೆ, ಒಡಲ ಹಸಿವಿನ ತೀವ್ರತೆ, ದಾನ ಗುಣ, ಮಾನವನ ಸ್ವಾರ್ಥ, ಸಮಾಜದ ವೈಪರೀತ್ಯಗಳು, ವಿಡಂಬನೆ ಮತ್ತು ಸರ್ವ ಸಮಾನತೆ ಕಂಡು ಬರುತ್ತವೆ. ಅವಕಾಶ ಸಿಕ್ಕಾಗಲೆಲ್ಲ ಸತಿ ದುಗ್ಗಳೆಯನ್ನು “ದುಗ್ಗಳೆಯಂತಹ ಸತಿ ಇದ್ದರೆ ಸಂಸಾರ ಲೇಸು ಇಲ್ಲದಿರೆ ಸನ್ಯಾಸ ಲೇಸು” ಅಂತ ಹೊಗಳಿದ್ದಾರೆ. ಶರಣ ಜೇಡರ ದಾಸಿಮಯ್ಯನವರ ವಚನಗಳು ಗಾತ್ರದಲ್ಲಿ ಚಿಕ್ಕದಾದರೂ ವಿಶಾಲ ಅರ್ಥ ನೀಡುವಂತಹವಾಗಿವೆ. ಇಲ್ಲಿ ದೇವರು, ಧರ್ಮ, ಆಧ್ಯಾತ್ಮ, ಕಾಯಕ, ವ್ಯಕ್ತಿ ಮತ್ತು ಸಮಾಜ ಸುಧಾರಣೆಗಳು ಪ್ರತ್ಯೇಕ ಚಟುವಟಿಕೆಗಳಲ್ಲ ಒಂದಕ್ಕೊಂದು ಸಂಬಂಧ ಹೊಂದಿದ್ದು ಪರಸ್ಪರ ಬೆಸೆದು ಕೊಂಡಿರುತ್ತವೆ.

ವಚನಗಳಲ್ಲಿ ವಚನಕಾರರು ಮೂರು ಬಗೆಗಳಲ್ಲಿ ನಿರೂಪಣೆಯನ್ನು ಮಾಡುತ್ತಾರೆ:

  1. ಅವರು ತಮ್ಮೊಳಗೆ ಮಾತಾಡಿಕೊಳ್ಳುತ್ತಾರೆ. ಇದನ್ನು “ಆತ್ಮ ಸಂವಾದ” ಅಂತ ಕರೆಯಬಹುದು.
  2. ಜನರೊಂದಿಗೆ ಮಾತಾಡುತ್ತಾರೆ. ಇದನ್ನು “ಲೋಕ ಸಂವಾದ” ಅಂತ ಹೇಳಬಹುದು.
  3. ತಮ್ಮ ಆರಾದ್ಯ ದೈವದೊಂದಿಗೆ ಮಾತಾಡುತ್ತಾರೆ. ಇದನ್ನು “ದೈವ ಸಂವಾದ” ಅನ್ನಬಹುದು.

ಈ ಮೂರೂ ಗುಣಗಳನ್ನು ನಾವು ಶರಣ ಜೇಡರ ದಾಸಿಮಯ್ಯನವರ ವಚನಗಳಲ್ಲಿ ಕಾಣಬಹುದು. ಅವರ ವಚನಗಳಲ್ಲಿ ಆತ್ಮ ಸಂವಾದ, ಲೋಕ ಸಂವಾದ ಮತ್ತು ದೈವ ಸಂವಾದ ಈ ಮೂರು ಸಂವಾದಗಳು ಒಂದೆ ಒಂದೆ ವಚನದಲ್ಲಿ ಕಂಡು ಬರುವುದು ಸೋಜಿಗ. “ಕಾಣಾ ರಾಮನಾಥ” “ಹೇಳಾ ರಾಮನಾಥ”, “ಕೇಳಾ ರಾಮನಾಥ” ಅಂತ ವಚನಗಳಲ್ಲಿ ದೈವದೊಂದಿಗೆ ಮಾತಾಡ್ತಾರೆ.

ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ.
ಸತಿಪತಿಗಳೊಂದಾಗದವನ ಭಕ್ತಿ
ಅಮೃತದೊಳು ವಿಷ ಬೆರೆದಂತೆ ಕಾಣಾ!
ರಾಮನಾಥ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-296/ವಚನ ಸಂಖ್ಯೆ-862)

“ಸತಿ ಪತಿಗಳು ಒಂದಾದ ಭಕ್ತಿ ಹಿತವಪ್ಪುದು ಶಿವಂಗೆ” ಎನ್ನುವ ಸಾಲನ್ನು ತಮ್ಮ ವಚನದಲ್ಲಿ ಬಿಂಬಿಸುವುಸರ ಮೂಲಕ ಶರಣ ಜೇಡರ ದಾಸಿಮಯ್ಯನವರು ತಮ್ಮ ಧರ್ಮಪತ್ನಿ ದುಗ್ಗಳೆಯವರೂ ಕೂಡ ಮಹಾ ಶಿವಶರಣೆ ಆಗಿದ್ದು ಪತಿಯ ಜೊತೆಗೂಡಿ ಕಾಯಕ ನಿಷ್ಟಳಾಗಿ ವಚನಗಳನ್ನು ರಚಿಸಿದ್ದು ಕಂಡು ಬರುತ್ತದೆ. ಸದಾ ಶಿವಭಕ್ತಿಯಲ್ಲಿ ನಿರತಳಾದ ಶರಣೆ ದುಗ್ಗಳೆ ಶಿವಪುರದ ಮಲ್ಲಯ್ಯ ಹಾಗೂ ಮಹಾದೇವಿ ಎಂಬ ಶರಣರ ಪುತ್ರಿ. “ದಾಸಿಮಯ್ಯ ರಾಮನಾಥ” ಎಂಬ ಅಂಕಿತದಿಂದ ಬರೆದ ಎರಡು ವಚನಗಳು ಇಲ್ಲಿಯವರೆಗೆ ಲಭ್ಯವಾಗಿವೆ.

ಭಕ್ತನಾದಡೆ ಬಸವಣ್ಣನಂತಾಗಬೇಕು.
ಜಂಗಮವಾದಡೆ ಪ್ರಭುದೇವರಂತಾಗಬೇಕು.
ಯೋಗಿಯಾದಡೆ ಸಿದ್ಧರಾಮಯ್ಯನಂತಾಗಬೇಕು.
ಭೋಗಿಯಾದಡೆ ಚೆನ್ನಬಸವಣ್ಣನಂತಾಗಬೇಕು.
ಐಕ್ಯನಾದಡೆ ಅಜಗಣ್ಣನಂತಾಗಬೇಕು.
ಇಂತಿವರ ಕಾರುಣ್ಯಪ್ರಸಾದವ ಕೊಂಡು
ಸತ್ತಹಾಗಿರಬೇಕಲ್ಲದೆ ತತ್ವದ ಮಾತು ಎನಗೇಕಯ್ಯಾ
ದಾಸಯ್ಯಪ್ರಿಯ ರಾಮನಾಥಾ?
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-305/ವಚನ ಸಂಖ್ಯೆ-785)

ಬಸವಣ್ಣನಿಂದ ಗುರುಪ್ರಸಾದಿಯಾದೆನು.
ಚೆನ್ನಬಸವಣ್ಣನಿಂದ ಲಿಂಗಪ್ರಸಾದಿಯಾದೆನು.
ಪ್ರಭುದೇವರಿಂದ ಜಂಗಮಪ್ರಸಾದಿಯಾದೆನು.
ಮರುಳಶಂಕರದೇವರಿಂದ ಮಹಾಪ್ರಸಾದಿಯಾದೆನು.
ಇಂತೀ ಚತುರ್ವಿಧವು ಏಕೀಭವಿಸಿ ಪ್ರಾಣಲಿಂಗವಾದ
ಮಹಾಮಹಿಮಂಗೆ ಶರಣೆಂದು ಬದುಕಿದೆನಯ್ಯಾ
ದಾಸಯ್ಯಪ್ರಿಯ ರಾಮನಾಥ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-305/ವಚನ ಸಂಖ್ಯೆ-784)

ಇದನ್ನು ಅರಿತು ಆಚರಿಸಬಲ್ಲ ಸಾಧಕನಿಗೆ ಸಂಸಾರವು ಬಂಧನವಾಗಲಾರದು.      ಬರೆದದ್ದು ಎರಡೇ ವಚನಗಳಾದರೂ ಅತ್ಯಂತ ಉತ್ಕೃಷ್ಟ ವಚನಗಳನ್ನು ದುಗ್ಗೆಳೆಯವರು ರಚಿಸಿದ್ದಾರೆ. ಲೋಕದಲ್ಲಿ ಭಕ್ತಿ, ಜಂಗಮ, ಯೋಗಿ, ಭೋಗಿ ಮತ್ತು ಐಕ್ಯಗಳ ಪ್ರತೀಕರೆನಿಸಿಕೊಂಡಿರುವ ಹಾಗೂ ವಿಶೇಷ ಸಾಧನೆಗಳಿಂದ ವಿಶೇಷ ವ್ಯಕ್ತಿತ್ವ ಬೆಳಿಸಿಕೊಂಡು ಲೋಕಕ್ಕೆ ಮಾದರಿ ಆಗಿರುವ ಈ ಐದು ಮಂದಿಯ ಕಾರುಣ್ಯ ಪ್ರಸಾದವನ್ನು ಸ್ವೀಕರಿಸಿ ಅವರು ಪ್ರತಿಪಾದಿಸಿರುವ ತತ್ವ ವಿಚಾರಗಳನ್ನು ಅನುಸರಿಸಬೇಕೆಂದು ದುಗ್ಗಳೆ ಹೇಳುತ್ತಾರೆ.

ಇನ್ನು ದುಗ್ಗಳೆಯವರನ್ನು ಕುರಿತು ಶರಣ ಜೇಡರ ದಾಸಿಮಯ್ಯನವರ ವಚನ ಇಂತಿದೆ:

ಬಂದುದನರಿದು ಬಳಸುವಳು
ಬಂದುದ ಪರಿಣಾಮಿಸುವಳು
ಬಂಧು ಬಳಗವ ಮರೆಸುವಳು
ದುಗ್ಗಳೆಯ ತಂದು ಬದುಕಿದೆನು ಕಾಣಾ! ರಾಮನಾಥ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-287/ವಚನ ಸಂಖ್ಯೆ-822)

ಈ ವಚನದಿಂದ ನಮಗೆ ದುಗ್ಗಳೆಯವರು ಶರಣ ಜೇಡರ ದಾಸಿಮಯ್ಯನವರ ಜೀವನದಲ್ಲಿ ಎಷ್ಟು ಹಾಸು ಹೊಕ್ಕಾಗಿದ್ದರು ಅಂತ ತಿಳಿಯುತ್ತದೆ. ತುಂಬಾ ಅನ್ಯೋನ್ಯ ದಾಂಪತ್ಯ ಅವರದು. ಅದಕ್ಕೇನೆ ಶರಣ ಜೇಡರ ದಾಸಿಮಯ್ಯನವರು ಅವಕಾಶ ಸಿಕ್ಕಾಗಲೆಲ್ಲ ತಮ್ಮ ವಚನಗಳಲ್ಲಿ ದುಗ್ಗಳೆಯವರನ್ನು ಹೊಗಳಿದ್ದಾರೆ. ನಮ್ಮ “ದುಗ್ಗಳೆಯಂತಹ ಸತಿ ಇದ್ದರೆ ಸಂಸಾರ ಲೇಸು ಇಲ್ಲದಿದ್ದರೆ ಸನ್ಯಾಸ ಲೇಸು” ಅಂತ ಮನದುಂಬಿ ಹೊಗಳಿದ್ದಾರೆ.

ಶರಣರ ದೃಷ್ಟಿಯಲ್ಲಿ ದಾಸಿಮಯ್ಯನವರು:

ಬಸವಣ್ಣನವರ ಸಾಧನೆ ಸಿದ್ಧಿಗಳಿಗೆ ಅವರ ಸಮಕಾಲೀನ ಶಿವ-ಶರಣರಿಂದ ಸಂದ ಕಾಣಿಕೆ ಮಹತ್ತರವಾದದ್ದು. ಅವರ ಧ್ಯೇಯಾದರ್ಶಗಳ ಸಾಧನೆಗೆ ಪರೋಕ್ಷವಾಗಿ ನೆರವು ನೀಡಿದರು. ಅದರಲ್ಲೂ ಬಸವಪೂರ್ವದ ಶರಣರು ಬಸವಣ್ಣನವರ ಸಾಧನೆಗೆ ಅಚ್ಚೊತ್ತಿದರು. ಶರಣ ಜೇಡರ ದಾಸಿಮಯ್ಯ, ಶರಣ ಮಾದರ ಚೆನ್ನಯ್ಯ ಮುಂತಾದವರು ಬಸವಣ್ಣನವರ ಮೇಲೆ ಪ್ರಭಾವ ಬೀರಿದವರಲ್ಲಿ ಪ್ರಮುಖರು ಬಸವಣ್ಣನವರು ತಮ್ಮ ಹಲವಾರು ವಚನಗಳಲ್ಲಿ ಇದನ್ನು ವ್ಯಕ್ತ ಪಡಿಸಿದ್ದಾರೆ.

ಇಲ್ಲಿ ಬಸವಣ್ಣನರು ದಾಸಿಮಯ್ಯನವರನ್ನು ದಾಸ, ದಾಸಯ್ಯ, ದಾಸಿದೇವ, ದಾಸಿಮಯ್ಯ ಎಂಬ ಹೆಸರುಗಳಿಂದ ಸ್ಮರಿಸಿದ್ದಾರೆ. ಬಸವಣ್ಣನವರು ತಮ್ಮ 18 ವಚನಗಳಲ್ಲಿ ಶರಣ ಜೇಡರ ದಾಸಿಮಯ್ಯನವರ ಕುರಿತು ಹೇಳುತ್ತಾರೆ.

  • ಭಕ್ತಿ ಎಂದರೆ ದಾಸಿಮಯ್ಯ ಮಾಡಿದಂತಹುದಯ್ಯ
  • ನೆರೆ ನೆಂಬೋ ನೆರೆನೆಂಬೊ ದಾಸ ದುಗ್ಗಳೆಯರಂತೆ ದಾಸಿಮಯ್ಯ ನಂತೆ ಉಡಕೊಡಬಲ್ಲನೇ?
  • ಭಕ್ತಿ ಇಲ್ಲದ ಬಡವ ನಾನಯ್ಯ ಕಕ್ಕಯ್ಯನ ಮನೆಯಲ್ಲೂ ಬೇಡಿದೆ ಚನ್ನಯ್ಯನ ಮನೆಯಲ್ಲೂ ಬೇಡಿದೆ ದಾಸಯ್ಯನ ಮನೆಯಲ್ಲೂ ಬೇಡಿದೆ.

ಹೀಗೆ ಬಸವಣ್ಣನವನರು ಶರಣ ಜೇಡರ ದಾಸಿಮಯ್ಯನವರನ್ನು ಕೊಂಡಾಡಿದ್ದಾರೆ.

ಇನ್ನು ಸಿದ್ಧರಾಮ ಶಿವಯೋಗಿಗಳು ತಮ್ಮ ಒಂದು ವಚನದಲ್ಲಿ:

ಕುಂಬಾರರೆಲ್ಲರು ಗುಂಡಯ್ಯನಾಗಬಲ್ಲರೆ?
ಮಡಿವಾಳರೆಲ್ಲರು ಮಾಚಯ್ಯನಾಗಬಲ್ಲರೆ?
ಜೀಡರೆಲ್ಲರು ದಾಸಿಮಯ್ಯನಾಗಬಲ್ಲರೆ?
ಎನ್ನ ಗುರು ಕಪಿಲಸಿದ್ಧಮಲ್ಲೇಶ್ವರಯ್ಯಾ,
ಪ್ರಾಣಿಗಳ ಕೊಂದು ಪರಿಹರಿಸಬಲ್ಲಡೆ
ತೆಲುಗ ಜೊಮ್ಮಯ್ಯನಾಗಬಲ್ಲರೆ?
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-447/ವಚನ ಸಂಖ್ಯೆ-1431)

ಅಂತ ಹೇಳಿದ್ದಾರೆ.

ಎನಗುಣಲಿಕ್ಕಿದರಯ್ಯ ಸಿರಿಯಾಳ-ಚೆಂಗಳೆಯರು,
ಎನಗುಡ ಕೊಟ್ಟರಯ್ಯಾ ದಾಸ- ದುಗ್ಗಳೆಯವರು.
ಎನ್ನ ಮುದ್ದಾಡಿಸಿದರಯ್ಯಾ ಅಕ್ಕನಾಗಮ್ಮನವರು.
ಎನ್ನ ಸಲಹಿದರಯ್ಯಾ ಅಮ್ಮವ್ವೆ ಕೊಡಗೂಸು
ಚೋಳಿಯಕ್ಕ ನಿಂಬವ್ವೆ ನೀಲಮ್ಮ
ಮಹಾದೇವಿ ಮುಕ್ತಾಯಕ್ಕಗಳು.
ಇಂತಿವರ ಒಕ್ಕುಮಿಕ್ಕ ತಾಂಬೂಲ
ಪ್ರಸಾದವ ಕೊಂಡು ಬದುಕಿದೆನಯ್ಯಾ
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-82/ವಚನ ಸಂಖ್ಯೆ-190)

ಅಂತ ಶರಣ ಕೋಲ ಶಾಂತಯ್ಯನವರು ತಮ್ಮ ಒಂದು ವಚನದಲ್ಲಿ ಶರಣ ಜೇಡರ ದಾಸಿಮಯ್ಯನವರನ್ನು ಹಾಗೂ ಶರಣೆ ದುಗ್ಗಳೆಯವರನ್ನೂ ಸ್ಮರಿಸಿದ್ದಾರೆ.

ಶರಣ ಚಂದೀಮರಸರು ತಮ್ಮ ವಚನದಲ್ಲಿ ಈ ರೀತಿ ದಾಸಿಮಯ್ಯನವರ ಹಿರಿಮೆಯನ್ನು ಸಾರಿದ್ದಾರೆ.

ದಾಸಯ್ಯನೆನಗೆ ಸಾಲೋಕ್ಯನಯ್ಯಾ,
ಚೆನ್ನಯ್ಯನೆನಗೆ ಸಾಮೀಪ್ಯನಯ್ಯಾ.
ಕಕ್ಕಯ್ಯನೆನಗೆ ಸಾರೂಪ್ಯನಯ್ಯಾ.
ಮಾಚಯ್ಯನೆನಗೆ ಸಾಯುಜ್ಯನಯ್ಯಾ.
ದಾಸಯ್ಯನೊಕ್ಕುದ ಕೊಂಡೆನು.
ಚನ್ನಯ್ಯನ ಮಿಕ್ಕುದ ಕೊಂಡೆನು.
ಕಕ್ಕಯ್ಯನುಂಡು ಮಿಕ್ಕುದ ಕಾದು ಕೊಂಡೆನು.
ಮಾಚಯ್ಯನ ಜ್ಞಾನಪ್ರಸಾದವ ಕೊಂಡೆನು.
ಪುರಾತರೊಳಗಾಗಿ ಬಸವಣ್ಣನ ಡಿಂಗರಿಗ
ಚನ್ನಬಸವಣ್ಣನ ಹಳೆಯನೆಂದು
ತಮ್ಮೊಕ್ಕುದನಿಕ್ಕಿ ಸಲಹಿದರು ಕಾಣಾ,
ಸಿಮ್ಮಲಿಗೆಯ ಚೆನ್ನರಾಮಾ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-230/ವಚನ ಸಂಖ್ಯೆ-623)

ಆಮುಗೆ ದೇವಯ್ಯನವರು:

ಕಕ್ಕಯ್ಯನ ಪ್ರಸಾದವ ಕೊಂಡೆನ್ನ ಕುಲಸೂತಕ ಹೋಯಿತ್ತಯ್ಯಾ,
ಚೆನ್ನಯ್ಯನ ಪ್ರಸಾದವ ಕೊಂಡೆನ್ನ ಛಲಸೂತಕ ಹೋಯಿತ್ತಯ್ಯಾ,
ದಾಸಯ್ಯನ ಪ್ರಸಾದವ ಕೊಂಡೆನ್ನ ತನುಸೂತಕ ಹೋಯಿತ್ತಯ್ಯಾ,
ಚಂದಯ್ಯನ ಪ್ರಸಾದವ ಕೊಂಡೆನ್ನ ಮನಸೂತಕ ಹೋಯಿತ್ತಯ್ಯಾ,
ತೆಲುಗ ಜೊಮ್ಮಯ್ಯನ ಪ್ರಸಾದವ ಕೊಂಡೆನ್ನ ನೆನಹುಸೂತಕ ಹೋಯಿತ್ತಯ್ಯಾ,
ಬಿಬ್ಬಿ ಬಾಚಯ್ಯನ ಪ್ರಸಾದವ ಕೊಂಡೆನ್ನ ಭಾವಸೂತಕ ಹೋಯಿತಯ್ಯಾ,
ಮೋಳಿಗಯ್ಯನ ಪ್ರಸಾದವ ಕೊಂಡೆನ್ನ ಜನನಸೂತಕ ಹೋಯಿತ್ತಯ್ಯಾ,
ಕೋಲ ಶಾಂತಯ್ಯನ ಪ್ರಸಾದವ ಕೊಂಡೆನ್ನಂತರಂಗದ ಸೂತಕ ಹೋಯಿತ್ತಯ್ಯಾ,
ಮೇದಾರ ಕೇತಯ್ಯನ ಪ್ರಸಾದವ ಕೊಂಡೆನ್ನ
ಬಹಿರಂಗದ ಸೂತಕ ಹೋಯಿತ್ತಯ್ಯಾ,
ಘಟ್ಟಿವಾಳಯ್ಯನ ಪ್ರಸಾದವ ಕೊಂಡೆನ್ನ
ಸರ್ವಾಂಗದ ಸೂತಕ ಹೋಯಿತ್ತಯ್ಯಾ
ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವರು,
ಮಡಿವಾಳಯ್ಯ, ಸಿದ್ಧರಾಮಯ್ಯ,
ಸೊಡ್ಡರ ಬಾಚರಸರು, ಹಡಪದಪ್ಪಣ್ಣ, ಶಂಕರ ದಾಸಿಮಯ್ಯ,
ಹೆಂಡದ ಮಾರಯ್ಯಾ, ಗಾಣದ ಕಣ್ಣಪ್ಪಯ್ಯ, ಕೈಕೂಲಿ ಚಾಮಯ್ಯ,
ಬಹುರೂಪಿ ಚೌಡಯ್ಯ, ಕಲಕೇತ ಬ್ರಹ್ಮಯ್ಯ ಮೊದಲಾದ
ಶಿವಗಣಂಗಳ ಪರಮಪ್ರಸಾದವ ಕೊಂಡು ಬದುಕಿದೆನಯ್ಯಾ,
ಮಹಾಘನ ಸದ್ಗುರು ಸಿದ್ಧಸೋಮನಾಥಲಿಂಗವೆ
ನಿಮ್ಮ ಧರ್ಮ, ನಿಮ್ಮ ಧರ್ಮ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-126/ವಚನ ಸಂಖ್ಯೆ-323)

ಹೀಗೆ ಈ ವಚನದಲ್ಲಿ ಆಮುಗೆ ದೇವಯ್ಯನವರು “ದಾಸಯ್ಯನ ಪ್ರಸಾದವ ಕೊಂಡೆನ್ನ ತನುಸೂತಕ ಹೋಯಿತ್ತು” ಎಂದು ಶರಣ ಜೇಡರ ದಾಸಿಮಯ್ಯನವರನ್ನು ನೆನಪಿಸಿಕೊಳ್ಳುತ್ತಾರೆ.

ಶಿವಯೋಗಿ ಸಿದ್ಧರಾಮೇಶ್ವರರು:

ಪಚ್ಚೆಯಗಿರಿ ಪ್ರಭೆಯೇರಿ ನಿಚ್ಚ ವಿನಯದ ಸುಖವ ಕಂಡು
ಅನುಭವದ ಹೆಣ್ಣಿಗೆ [ಧವಳೆ]ವರ್ಣವನೇಕೀಕರಿಸಲು
ನಿಚ್ಚಲನುವಾಯಿತ್ತಯ್ಯಾ ಅಚ್ಚ ಆರೆಸಳ ಪೀಠ.
ಆ ಪೀಠದಲ್ಲಿ ವೀರದಾಸಯ್ಯನೆಂಬವ ಗುರುವಿಡಿದು ನಡೆಯೆ
ನೀರಾಟ ನಿಂದು ನೆಲೆಗೊಂಡನಯ್ಯ
ನಿಮ್ಮ ಶರಣ ಚೆನ್ನಬಸವಣ್ಣನು.
ಕಪಿಲಸಿದ್ಧಮಲ್ಲಿನಾಥಯ್ಯಾ ಚೆನ್ನಬಸವಣ್ಣನಿಂದ
ಬದುಕಿದೆನಯ್ಯಾ.
(ಸಮಗ್ರ ವಚನ ಸಂಪುಟ: ನಾಲ್ಕು-2021/ಪುಟ ಸಂಖ್ಯೆ-226/ವಚನ ಸಂಖ್ಯೆ-743)

ಈ ವಚನದಲ್ಲಿ ಶಿವಯೋಗಿ ಸಿದ್ಧರಾಮೇಶ್ವರರು ಶರಣ ಜೇಡರ ದಾಸಿಮಯ್ಯನವರನ್ನು ಗುರುವಿನ ಸ್ಥಾನದಲ್ಲಿ ಇರಿಸಿದ್ದಾರೆ.

  • ಹರಿಹರನ “ಶಂಕರ ದಾಸಿಮಯ್ಯನ ರಗಳೆ”
  • ಲಕ್ಕಣ್ಣ ದಂಡೇಶನ “ಶಿವತತ್ವ ಚಿಂತಾಮಣಿ”
  • ಗುಬ್ಬಿ ಮಲ್ಲಣ್ಣನವರ “ವೀರಶೈವಾಮೃತ ಮಹಾ ಪುರಾಣ”
  • ಗುಬ್ಬಿ ಸಿದ್ದ ನಂಜೇಶನ “ಗುರುರಾಜ ಚಾರಿತ್ರ್ಯ”
  • ಶಾಂತಲಿಂಗ ದೇಶಿಕನ “ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ”
  • ತ್ರಿಭುವನ ತಾತನ “ದೇವರ ದಾಸಿಮಯ್ಯನ ಪ್ರಶಸ್ತಿ”
  • ಷಡಕ್ಷರದೇವನ “ವೃಷಭೇಂದ್ರ ವಿಜಯ”
  • ದೇವರ ಕವಿಯ “ದೇವಾಂಗ ಪುರಾಣ”

ಹೀಗೆ ಇನ್ನೂ ಅನೇಕ ಗ್ರಂಥಗಳಲ್ಲಿ ಶರಣ ಜೇಡರ ದಾಸಿಮಯ್ಯನವರ ನಿರೂಪಣೆ ಕಾಣಸಿಗುತ್ತದೆ.

ಕಾವ್ಯಗಳಂತೆ ಅನೇಕ ಶಾಸನಗಳಲ್ಲೂ ಶರಣ ಜೇಡರ ದಾಸಿಮಯ್ಯನವರ ಉಲ್ಲೇಖ ಕಂಡು ಬರುತ್ತದೆ. 1148 ರ ಗೊಬ್ಬೂರು ಶಾಸನದಲ್ಲಿ ಶರಣ ಜೇಡರ ದಾಸಿಮಯ್ಯ ಹಾಗೂ ಅವರ ಇಷ್ಟದೈವ ರಾಮನಾಥನ ಉಲ್ಲೇಖ ಕಾಣಸಿಗುತ್ತದೆ. 1200 ನೇಯ ಅರಸಿಕೆರೆಯ ಶಾಸನದಲ್ಲಿ ದಾಸಿಮಯ್ಯನವರ ಕಾರೇಗೌಡರ ಪ್ರಸ್ತಾಪವಿದೆ.

ಇನ್ನು ಜೇಡರ ದಾಸಿಮಯ್ಯನವರ ಕೆಲವು ವಚನಗಳನ್ನು ನೋಡೊಣ:

ಹರ ತನ್ನ ಭಕ್ತರ ತಿರಿಯುವಂತೆ ಮಾಡುವ
ಒರೆದು ನೋಡುವ ಮಿಸುನಿಯ ಚಿನ್ನದಂತೆ
ಅರೆದು ನೋಡುವ ಚಂದನದಂತೆ
ಅರಿದು ನೋಡುವ ಕಬ್ಬಿನ ಕೋಲಿನಂತೆ.
ಬೆದರದೆ ಬೆಚ್ಚಗೆ ಇರ್ದಡೆ
ಕರವಿಡಿದೆತ್ತಿಕೊಂಬ, ನಮ್ಮ ರಾಮನಾಥನು.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-298/ವಚನ ಸಂಖ್ಯೆ-872)

ನೂರಾರು ಬಾರಿ ಉಳಿಯ ಪೆಟ್ಟುಗಳು ಬಿದ್ದು ಒಂದು ಮೂರ್ತಿಯಾಗುವಂತೆ ಹಲವಾರು ಅನುಭಗಳ ಸುಖ ದುಖಃಗಳಿಂದ ಸಾಧಕನ ಹೃದಯ ಪರಿಪಕ್ವಗೊಳ್ಳುತ್ತದೆ. ಪರಮಾತ್ಮ ತನ್ನ ಭಕ್ತನಿಗೆ ಜೀವನದಲ್ಲಿ ಏಳು ಬೀಳು, ಸುಖ ದುಖಃಗಳನ್ನು ಸಮನಾಗಿ ಕೊಟ್ಟಿರುತ್ತಾನೆ. ಸಮಯ ಬಂದಾಗ ತನ್ನ ಭಕ್ತರನ್ನು ಪರೀಕ್ಷಿಸಲು ಯಾವ ರೀತಿ ಕಷ್ಟ ಕೊ‌ಡುತ್ತಾನೆ ಅಂದರೆ ಒಬ್ಬ ಅಕ್ಕಸಾಲಿಗ ಚಿನ್ನವನ್ನು ಭೂಗರ್ಭದಿಂದ ಯಾವ ರೀತಿ ಅಗೆದು ಬಗೆದು, ತಗೀತಾನೋ, ಚಿನ್ನವನ್ನು ಹೇಗೆ ಉಜ್ಜಿ ತಿಕ್ಕಿ ನೋಡುತ್ತಾನೊ, ಗಂಧದ ತುಂಡಿನಿಂದ ತಿಕ್ಕಿ ಅರೆದರೆ ಹೇಗೆ ಪರಿಮಳ ಬರುವದೊ ಮತ್ತು ಕಬ್ಬಿನ ಹಾಲು ತೆಗೆಯಲೆಂದು ಕಬ್ಬನ್ನು ಹೇಗೆ ಅರೆಯುತ್ತಾರೂ ಹಾಗೆ ಶಿವನು ತನ್ನ ಭಕ್ತರನ್ನು ತಿರಿಯುತ್ತಾನೆ. ಆ ಸಂದರ್ಭದಲ್ಲಿ ನಾವು ಅಂಜದೇ ಅಳುಕದೆ ಎದುರಿಸಿದಾಗ ಶಿವನು ನಮ್ಮನ್ನು ತನ್ನ ಅಂಗೈಲಿ ಹಿಡಿದು ಕಾಪಾಡುತ್ತಾನೆ.

ಅಗ್ನಿ ಸುಡಲಲ್ಲದೆ ಸುಳಿಯಲರಿಯದು
ವಾಯು ಸುಳಿವುದಲ್ಲದೆ ಸುಡಲರಿಯದು
ಈ ಅಗ್ನಿ ವಾಯುವ ಕೂಡಿದಲ್ಲದೆ ಅಡಿ ಇಡಲರಿಯದು
ಈ ಪರಿಯಂತೆ ನರರರಿವರೆ ಕ್ರಿಯಾಜ್ಞಾನಭೇದವ?
ರಾಮನಾಥ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-262/ವಚನ ಸಂಖ್ಯೆ-714)

ಮಾನವನ ಜೀವನವು ಒಳ್ಳೆಯ ರೀತಿಯಲ್ಲಿ ರೂಪುಗೊಳ್ಳಲು ಅರಿವು ಮತ್ತು ಕಾಯಕ ಒಂದರೊಡನೊಂದು ಜೊತೆಗೂಡಿರಬೇಕು ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ. ಅರಿವು ಅಂದರೆ ಜ್ಞಾನ ನಮ್ಮ ಜೀವನದಲ್ಲಿ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು, ವಾಸ್ತವ ಯಾವುದು, ಯಾವುದು ಕಲ್ಪಿತ ಅನ್ನೊ ತಿಳುವಳಿಕೆ. ಇನ್ನು ಕಾಯಕ ಅಂದರೆ ದುಡಿಮೆ. ವ್ಯಕ್ತಿ ಮಾಡುವ ಕಾಯಕದಿಂದ ಅವನು ಕುಟುಂಬಕ್ಕೆ ಒಲವು, ನಲಿವು, ನೆಮ್ಮದಿಯನ್ನು ತರಬೇಕು. ಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನ ಉಂಟು ಮಾಡುತ್ತಿರಬೇಕು. ಮಾನವರ ಜೀವನದಲ್ಲಿ ಒಲವು. ನಲಿವು ನೆಮ್ಮದಿಯಿಂದ ಬಾಳ‌ ಬೇಕಾದರೆ ಅವರಲ್ಲಿ ಅರಿವು ಮತ್ತು ಕ್ರಿಯೆ ಜೊತೆಗೂಡಿರಬೇಕು. ಕೇವಲ ಅರಿವಿನಿಂದ ಜೀವನಕ್ಕೆ ಅಗತ್ಯವಾದ ಅನ್ನ, ವಸತಿ, ಆರೋಗ್ಯ ಮತ್ತು ಉದ್ಯೋಗ ದೊರಕುವುದಿಲ್ಲ. ಅದಕ್ಕೆ ಕಾಯಕವನ್ನು ಮಾಡಬೇಕಾಗುತ್ತದೆ. ಆದರೆ ಅರಿವಿಲ್ಲದ ಕಾಯಕ ಅಥವಾ ಕಾಯಕವನ್ನು ಮಾಡದ ಅರಿವಿನಿಂದ ಸಮಾಜಕ್ಕೆ ಎಂದೂ ಒಳಿತಾಗುವುದಿಲ್ಲ. ಜ್ಞಾನಕ್ಕೆ ಕ್ರಿಯೆ ಸೇರಿದರೆ ಮಾಧುರ್ಯ್ಯಕ್ಕೆ ಮಾಧುರ್ಯ ಸೇರಿದಂತೆ.

ಹೀಗೆಯ ಹಲವಾರು ವಚನಗಳಿವೆ. ಇಲ್ಲಿ ನಾನು ಕೇವಲ ಎರಡು ವಚನಗಳ ಬಗ್ಗೆ ಹೇಳಿದ್ದೇನೆ. ಅಂದು ರಚಿಸಿದ ವಚನಗಳು ಇಂದಿಗೂ ಸಹ ಅಮೂಲ್ಯವಾಗಿ ಜನರ ಬದುಕಿಗೆ ದಾರಿ ದೀಪವಾಗಿ ಪ್ರಜ್ಜಲಿಸುತ್ತಿವೆ. ಶರಣ ಜೇಡರ ದಾಸಿಮಯ್ಯನವರು ತಮ್ಮ ಬುದ್ಧಿಯ ಮಿಂಚಿಗೆ, ಭಾವದ ಬೆಳಕಿಗೆ, ಅನುಭಾವದ ಉಸಿರಿಗೆ ಆಕಾರವನ್ನು ನೀಡುವಾಗ ಆಡುನುಡಿಯನ್ನು ಬಳಸಿಕೊಂಡಿದ್ದರಿಂದ ಅವರ ಭಾಷೆಯಲ್ಲಿ ಹೊಸತನವಿದೆ. ಜೀವಂತಿಕೆಯಿದೆ ಸಾಹಿತ್ಯ, ಭಾವ, ಕಾವ್ಯ, ಭಾಷೆ ಸೌಂದರ್ಯ ಈ ಎಲ್ಲ ದೃಷ್ಟಿಯಿಂದನೂ ದಾಸಿಮಯ್ಯನವರ ವಚನಗಳು ತುಂಬಾ ಎತ್ತರಕ್ಕೆ ನಿಲ್ಲುತ್ತದೆ.

“ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ”‌ ಮತ್ತು “ಮೊಲೆ ಮುಡಿ ಬಂದರೆ ಹೆಣ್ಣೆಂಬರು” ಇಂತಹ ಇನ್ನೂ ಅನೇಕ ವಚನಗಳು ಜನರು ನಾಲಿಗೆ ಮೇಲೆ ನಲಿದಾಡುತ್ತವೆ. ಪ್ರಗತಿಪರ ಚಿಂತನೆಗಳು ಸಮಾಜದ ಹುಳುಕಿಗೆ ಚಿಕಿತ್ಸೆ ಕೊಡುವಲ್ಲಿ ಯಶಸ್ವಿ ಆಗಿದ್ದು ಕಂಡು ಬರುತ್ತದೆ.

ಶರಣ ಜೇಡರ ದಾಸಿಮಯ್ಯನವರು ನಡೆಸುತ್ತಿದ್ದ ಶಿವಕಾರುಣ್ಯ ಗೋಷ್ಟಿಗಳು ಮುಂದೆ ಬಸವಣ್ಣನವರ ಕಾಲದಲ್ಲಿ ಅನುಭವ ಮಂಟಪದಂತಹ ಪ್ರಸಿದ್ಧ ವಿಚಾರ ಗೋಷ್ಟಿಗಳು ರೂಪುಗೊಳ್ಳಲು ಪ್ರೇರಕವಾದವು ಎನ್ನುವುದು ಚಿಂತಕರ ಅಭಿಪ್ರಾಯ. ಸಮ ಸಮಾಜದ ದೃಷ್ಟಿಯಿಂದ ಶರಣ ಜೇಡರ ದಾಸಿಮಯ್ಯನವರು ಪ್ರಾರಂಭಿಸಿದ ಧಾರ್ಮಿಕ ಹಾಗೂ ಸಾಮಾಜಿಕ ಸುಧಾರಣೆಗಳು ಮುಂದುವರೆದು ಬಸವಣ್ಣವರು ಮತ್ತು ಸಮಕಾಲೀನ ಶರಣರ ಕಾಲದಲ್ಲಿ ಸಮ ಸಮಾಜದ ನಿರ್ಮಾಣ ಮುಂದುವರೆದುದನ್ನು ನಾವು ಕಾಣಬಹುದು.

ಶರಣ ಜೇಡರ ದಾಸಿಮಯ್ಯನವರ ಆದರ್ಶ ವ್ಯಕ್ತಿತ್ವ ಬಸವಣ್ಣ ಹಾಗೂ ಇತರೆ ಶರಣರ ಮೇಲೆ ಆಗಾಧವಾದ ಪ್ರಭಾವ ಬೀರಿದೆ. ಬಸವಣ್ಣನವರ ಸಮಗ್ರ ಚಟುವಟಿಕೆಗಳಿಗೆ ದಾಸಿಮಯ್ಯನವರು ಪ್ರೇರಕ ಶಕ್ತಿಯಾಗಿ ನ್ಯಾಯ ಬದ್ಧವಾದ ವಿಚಾರ ಹಾಗೂ ಸೌಜನ್ಯದಿಂದಲೆ ಅನ್ಯರನ್ನು ಪರಿವರ್ತಿಸಿದ ಕೀರ್ತಿ ಶರಣ ಜೇಡರ ದಾಸಿಮಯ್ಯನವರದದು.

ಇಂತಹ ಶರಣ ಶ್ರೇಷ್ಠ ಜೇಡರ ದಾಸಿಮಯ್ಯನವರ ಜಯಂತಿ ಇಂದು. ಅಂದರೆ ಅವರಾತ್ರಿ ಅಮವಾಸ್ಯೆಯಂದು ಇದೆ. ತನ್ನಿಮಿತ್ತ ಅವರ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುವ ಸೌಭಾಗ್ಯ ನನ್ನದು. ಇದಕ್ಕೆ ಅವಕಾಶ ಮಾಡಿಕೊಟ್ಟಂತಹ ವಚನ ಮಂದಾರ ವೇದಿಕೆಗೆ ಮತ್ತು ಡಾ. ವಿಜಯಕುಮಾರ ಕಮ್ಮಾರ ಗುರುಗಳಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಈ ಲೇಖನದ Youtube Link:

ಶ್ರೀಮತಿ. ಅನುಪಮ ಪಾಟೀಲ,
ನಂ. 10, ದೇಸಾಯಿ ಪಾರ್ಕ್‌,
ಕುಸೂಗಲ್‌ ರಸ್ತೆ, ಕೇಶ್ವಾಪೂರ,
ಹುಬ್ಬಳ್ಳಿ – 580 023.
ಮೋ. ಸಂ. +91 9845810708.

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply