
.ಶಿರವ ಸೀರೆಯ ಕರವ ಕಂಗಳ ಶಿಶುವನಿಕ್ಕಿಯೆರದರು.
ಭಾಷೆ ಬಳಸಿ ಹಂಗು ಹಳಸಿಹೋಯಿತ್ತು.
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗಜಂಗಮಕ್ಕೆ
ಕೊಟ್ಟಿಹೆನೆಂಬ ಶಬ್ದ ಅಳಿದರು ಉಳಿಯಿತು.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-250/ವಚನ ಸಂಖ್ಯೆ-682)
ಶರಣ ಚಂದಿಮರಸರ ಈ ವಚನ ಮೇಲ್ನೋಟಕ್ಕೆ ಸರಳವಾಗಿರುವಂತೆ ಕಂಡರೂ ವಿಶ್ಲೇಷಣೆ ಮಾಡುತ್ತಾ ಹೋದಂತೆ ಭಾಷೆ ಅಥವಾ ಮಾತು ಅಥವಾ ನುಡಿ ಎನ್ನುವ ಭಾಷಾ ಕ್ರಾಂತಿಯ ಗುಟ್ಟುಗಳನ್ನು ಮತ್ತು ತತ್ವಗಳನ್ನು ಅಡಗಿಸಿಕೊಂಡಂತೆ ಕಾಣುತ್ತದೆ. ಕೊಟ್ಟಿಹೆನೆಂಬ ಶಬ್ದ ಅಳಿದರೂ ಉಳಿಯಿತ್ತು ಎನ್ನುವುದರ ಮೂಲಕ ದಾಸೋಹ ತತ್ವದ ಪರಿಭಾಷೆಯನ್ನು ಅತ್ಯಂತ ಸಮರ್ಥವಾಗಿ ಬಿಂಬಿಸುತ್ತದೆ.
ವಚನ ಸಾಹಿತ್ಯದ ಅಧ್ಯಯನ ಇಂದಿನ ಕಾಲಘಟ್ಟದ ಬಹಳಷ್ಟು ಉಪನ್ಯಾಸಕರನ್ನು, ವಿದ್ವಾಂಸರನ್ನು, ವಿದ್ಯಾರ್ಥಿಗಳನ್ನು ಹಾಗೂ ಲೇಖಕರನ್ನು ಆಕರ್ಷಿಸಿದ್ದು ಒಂದು ಉತ್ತಮ ಬೆಳವಣಿಗೆ. ಬಾಲ್ಯದಿಂದಲೂ ಅಂದರೆ ಸುಮಾರು ನಾನು 12 ವರ್ಷದವನಾಗಿದ್ದಾಗಿನಿಂದ ವಚನ ಸಾಹಿತ್ಯದ ಕಡೆಗಿನ ಒಲವು ಮೂಡಿಸಿದ್ದು ಅಥವಾ ಗೀಳನ್ನು ಹಚ್ಚಿದ್ದು ನಮ್ಮ ತಂದೆ ಲಿಂ. ಶ್ರೀ ಈಶ್ವರ ಕಮ್ಮಾರ ಅವರು. ಇವತ್ತು ಅವರ ಪಾದ ಕಮಲಗಳನ್ನು ಮನಮಂದಿರದಲ್ಲಿ ಪ್ರತಿಷ್ಠಾಪಿಸುತ್ತಾ ಇಂದಿನ ವಿಷಯದ ಕಡೆಗೆ ಗಮನ ಹರಿಸೋಣ.
ಭಾರತ ಅಷ್ಟೇ ಅಲ್ಲಾ ಇಡೀ ಪ್ರಪಂಚದ ಇತಿಹಾಸದಲ್ಲಿ 12 ನೆ ಶತಮಾನ ಅತ್ಯಂತ ಮಹತ್ವಪೂರ್ಣವಾದುದು. ಅಜ್ಞಾನ, ಜಾತೀಯತೆ, ಮತಾಂಧತೆ, ಶೋಷಣೆ, ಮೌಡ್ಯಗಳಿಂದ ಮುಳುಗಿಹೋಗಿದ್ದ ಸಮಾಜವನ್ನು ಮೇಲೆತ್ತಲು ಬಸವಣ್ಣನವರು ರಾಜಿ ಇಲ್ಲದ ಬದ್ಧತೆ, ಪ್ರಶ್ನಾತೀತವಾದ ಜನಪರ ಕಾಳಜಿಯ ಮೂಲಕ ಮಾಡಿದ ಪ್ರಯತ್ನ-ಪ್ರಯೋಗಗಳು ಪ್ರಪಂಚದ ಎಲ್ಲ ಆಡಳಿತಗಾರರ ಆದರ್ಶ ಎನ್ನುವುದನ್ನು ನಾವು ಗಮನಿಸಬೇಕು. ಕನ್ನಡ ಮತ್ತು ಕನ್ನಡಿಗರ ಅಸ್ಮಿತೆಯನ್ನು ಎತ್ತಿ ಹಿಡಿದ ಬಸವಣ್ಣನವರು ಸಾಮಾಜಿಕ ನ್ಯಾಯದ ಮೊದಲ ಹರಿಕಾರರು.
ಬಸವಣ್ಣನವರನ್ನು ಕರ್ನಾಟಕದ “ಸಾಂಸ್ಕೃತಿಕ ನಾಯಕ” ಎಂದು ಕರ್ನಾಟಕ ಸರ್ಕಾರ ದಿನಾಂಕ 10.02.2024 ರಂದು ಘೋಷಣೆ ಮಾಡಿತು. ಸಾಂಸ್ಕೃತಿಕ ನಾಯಕ ಎನ್ನುವಲ್ಲಿ ಎರಡು ಶಬ್ದಗಳನ್ನು ನಾವು ನೋಡತೀವಿ. ಒಂದು ಸಂಸ್ಕೃತಿ ಮತ್ತು ಇನ್ನೊಂದು ನಾಯಕ. ಈ ಎರಡೂ ಶಬ್ದಗಳ ಮೂಲಕ ಬಸವಣ್ಣನವರನ್ನು ಅರ್ಥ ಮಾಡಿಕೊಳ್ಳುವದರ ಮೂಲಕ ಭಾಷಾ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವ ಸಣ್ಣ ಪ್ರಯತ್ನ. ಭಾಷೆ ಮತ್ತು ಭಾಷಾ ಸಂಸ್ಕೃತಿಯನ್ನು ಕುರಿತು ಸ್ವಲ್ಪ ಅವಲೋಕನ ಮಾಡಿ ಮುಂದೆ ಹೋಗೋಣ.
ಮಾಂಸದ ಮುದ್ದೆಯಾಗಿ ಜನಿಸುವ ಮಾನವ ಕಾಲದ ನಿರಂತರತೆಯ ಜೊತೆಗೆ ಬೆಳೆಯುತ್ತ ಬೆಳೆಯುತ್ತಾ ಭಾಷೆಯೊಂದಿಗೆ ಚೈತನ್ಯಶೀಲನನ್ನಾಗಿ ತನ್ನನ್ನು ರೂಪಿಸಿಕೊಳ್ಳುತ್ತಾನೆ. ಭಾಷೆ ಎನ್ನುವುದು ಮಾನವ ಸಂಕುಲದ ಸಂಸ್ಕೃತಿಯ ಜೀವಂತಿಕೆಯ ಲಕ್ಷಣ. ಭಾಷೆ ಮಾಹಿತಿ ಸಂವಹನೆಗೆ ನಿರೂಪಿತವಾಗಿರುವ ಸಂಕೇತಗಳ ಮಾಧ್ಯಮ. ಈ ಸಂಕೇತಗಳು ಧ್ವನಿ ರೂಪದಲ್ಲಿರಬಹುದು, ಬರಹ ರೂಪದಲ್ಲಿರಬಹುದು ಅಥವಾ ಅಭಿವ್ಯಕ್ತಿಯ ರೂಪದಲ್ಲಿರಬಹುದು. ಪ್ರಪಂಚದಲ್ಲಿ ಕಂಡು ಬರುವ ಜೀವಿ ಸಂಕುಲದಲ್ಲಿ ಭಾಷೆ ಮಾನವನ ವಿಶಿಷ್ಠ ಮತ್ತು ಅನುಪಮ ಗುಣಗಳಲ್ಲಿ ಒಂದಾಗಿದೆ. ಭಾಷೆ ಎನ್ನುವುದು ಮಾನವನಿಗೆ ಮಾತ್ರ ಸಾಧಿಸಲ್ಪಡಬಹುದಾದ ಒಂದು ಸಂಕೀರ್ಣ ಸಂವಹನ ಮಾಧ್ಯಮ (Complex Communication Media) ವಾಗಿದೆ. ಹಲವಾರು ಸಂಶೋಧನೆ ಮತ್ತು ಅಧ್ಯಯನಗಳ ವರದಿಯಂತೆ ಪ್ರಪಂಚದಲ್ಲಿ ಒಟ್ಟು 6,000 ದಿಂದ 7,000 ಭಾಷೆಗಳಿವೆ ಎನ್ನಲಾಗಿದೆ.
ಮಾನವ ಬೆಂಕಿಯನ್ನು ಉಪಯೋಗಿಸುವುದಕ್ಕಿಂತ ಮೊದಲೇ ಸಂಜ್ಞೆ ಅಥವಾ ಭಾಷೆಯನ್ನು ಗುರುತಿದ್ದನ್ನು ನಾವು ಗಮನಿಸಬೇಕು. ಮಾನವ ಸಂಸ್ಕೃತಿಯ ಪ್ರತಿಬಿಂಬವಾಗಿ ಪರಂಪರೆ ಮತ್ತು ಸಂಸ್ಕೃತಿಗೆ ಭಾಷೆ ಬಹುಮುಖ್ಯ ಕೊಡುಗೆ ನೀಡುತ್ತದೆ. ಹಾಗಾಗಿ ಭಾಷೆ ಸಂವಹನ ಮಾಧ್ಯಮವಾಗುವುದರ ಜೊತೆ ಜೊತೆಗೆ ಪ್ರಾದೇಶಿಕ ಹಾಗೂ ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ಕಾರ್ಯವನ್ನು ಮಾಡುತ್ತದೆ. ಭಾಷೆಯು ಕಾಲಕಾಲಕ್ಕೆ ಮೌಲ್ಯಮಾಪನಕ್ಕೆ ಒಳಪಡುವ ಹಾಗೂ ಕೌಶಲ್ಯಗಳನ್ನು ವೃದ್ದಿಸಿಕೊಳ್ಳುವ ಶಕ್ತಿಯನ್ನು ಪಡೆದಿದೆ.
ಭಾಷೆಯನ್ನು ಅಕ್ಷರ ರೂಪದಲ್ಲಿ ದಾಖಲಿಸುವದನ್ನು ಕ್ರಿ. ಪೂ 6 ನೇ ಶತಮಾನದಿಂದ ಸಾಗಿ ಬಂದಿದೆ. ಅಕ್ಷರ ರೂಪವೆಂದರೆ ಲಿಪಿಗಳು. ಲಿಪಿಗಳ ಮೂಲ ಆಕರವೆಂದರೆ ಬ್ರಾಹ್ಮೀ ಮತ್ತು ಖರೋಷ್ಟಿ. ಈ ಎರಡೂ ಲಿಪಿಗಳ ಮೂಲವನ್ನು ಕೆದಕುತ್ತಾ ಹೋದಂತೆ ನಮಗೆ ಪೀನೀಷಿಯನ್ ಅಥವಾ ಅರೇಬಿಕ್ ಎಂಬ Semitek ಲಿಪಿಗಳೆ ಕಾರಣವಾಗಿದೆ.
The Semitic languages are a branch of the Afroasiatic language family. They include Arabic, Amharic, Tigrinya, Aramaic, Hebrew, Maltese and numerous other ancient languages and modern languages.
ಈ ಲಿಪಿಗಳನ್ನು ಬಳಸಿಕೊಂಡು ಬರವಣಿಗೆ ವಿಕಾಸವಾಗಿದೆ. ಇಂಥ ಬರವಣಿಗೆಯಲ್ಲಿ ಮೂರು ವಿಧ:
- ಚಿಹ್ನೆಗಳು, ಸಂಕೇತಗಳು, ಗುರುತುಗಳು, ವೃತ್ತ ರೇಖೆಗಳು ಮುಂತಾದ “ಬೀಜ ರೂಪ ಬರವಣಿಗೆ”
- ವಿಗ್ರಹ ರೂಪದಲ್ಲಿ ಗುಹೆ, ಕಲ್ಲು-ಬಂಡೆಗಳಲ್ಲಿ ಕಂಡು ಬರುವ “ತಾಂತ್ರಿಕ ಬರವಣಿಗೆ”
- ಸ್ಮರಣೆಗೆ ಸಹಾಯಕವಾದ ಉಪಾಯಗಳು, ಪ್ರಪಂಚದಲ್ಲೆಡೆ ಉಪಯೋಗಿಸುವ “ಅಕ್ಷರಮಾಲೆ”
ಭಾಷೆಗೆ ತನ್ನದೇ ಆದ ಲಕ್ಷಣಗಳಿವೆ ಅಥವಾ ಸ್ವರೂಪಗಳಿವೆ:
ಭಾಷೆ ದೈವದತ್ತವಾದದ್ದಲ್ಲ, ಆನುವಂಶಿಕ ಅಲ್ಲ ಮೇಲಾಗಿ ಅನುಕರಣದಿಂದ ಮುಂದೆ ಸಾಗುವ ಪ್ರಕ್ರಿಯೆ.
ಮಾನವನ ಭಾಷಾ ಪ್ರಯೋಗ ಇತರೆ ಜೀವರಾಶಿಗಳಿಗಿಂತ ಅತ್ಯಂತ ವಿಭಿನ್ನವಾಗಿದೆ.
ಭಾಷೆ ಒಂದು ಸಾಮಾಜಿಕ ಕ್ರಿಯೆ ಆಗಿರುವುದರಿಂದ ಭಾಷೆಗೆ ಅಂತಿಮ ಸ್ವರೂಪವಿಲ್ಲ. ಹಾಗಾಗಿ ಭಾಷೆ ಎನ್ನುವುದು ಜಂಗಮಶೀಲವಾದ್ದು ಹಾಗೂ ನಿರಂತರ ಪರಿವರ್ತನಾಶೀಲವಾದದ್ದು.
ಭಾಷೆಗೆ ತನ್ನದೇ ಆದ ಇತಿಹಾಸ ಮತ್ತು ಭೌಗೋಳಿಕ ಗಡಿ-ಸೀಮೆ ಇರುತ್ತದೆ.
ಭಾಷೆ ಎಂಬುದು ಧ್ವನಿ ಪ್ರಪಂಚವಾಗಿರುವುದರಿಂದ ಸಂಕೀರ್ಣತೆಯಿಂದ ಸರಳತೆಯ ಕಡೆಗೆ ಚಲಿಸುವ ಪ್ರಕ್ರಿಯೆ.
ಕ್ರಿ. ಶ. 12 ರಿಂದ 16 ನೆಯ ಶತಮಾನದ ನಡುವಣ ಅವಧಿಯಲ್ಲಿ ಕರ್ನಾಟಕ ಧಾರ್ಮಿಕವಾಗಿ, ಸಾಮಾಜಿಕವಾಗಿ ಅಸ್ಥಿರತೆಯ ಕಾಲಘಟ್ಟ. ಧಾರ್ಮಿಕ ಗುರುಗಳಾದ ರಾಮಾನುಜಾಚಾರ್ಯರು, ಮಧ್ವಾಚಾರ್ಯರು, ಬಸವಣ್ಣನವರು, ವಿದ್ಯಾರಣ್ಯರು ಹಾಗೂ ಇನ್ನೂ ಹಲವಾರು ವಿದ್ವಾಂಸರು ತಮ್ಮ ನೂತನ ವಿಚಾರ ಧಾರೆಗಳಿಂದ ಸಾಂಪ್ರದಾಯಿಕ ತತ್ವಗಳನ್ನು ಪುನರುಜ್ಜೀವನಗೊಳಿಸಲು ಯತ್ನಿಸಿದ ಕಾಲವದು. ಹಲವಾರು ಸುಧಾರಣೆಗಳನ್ನು ಹಾಗೂ ಬದಲಾವಣೆಗಳನ್ನು ಸಮಾಜದಲ್ಲಿ ಅವರು ತಂದರು. ಪರಿಣಾಮವಾಗಿ, ಸಮಾಜದ ಸಮಾಜೋ-ಧಾರ್ಮಿಕ ಕ್ರಾಂತಿಯಾಗಿ ಈ ಅವಧಿಯಲ್ಲಿ ಪ್ರಚಾರ ಮಾಧ್ಯಮವಾಗಿ ಭಾಷೆಯು ಅತ್ಯಂತ ಶ್ರೇಷ್ಠ ಮತ್ತು ವಿಶಾಲವಾದ ಸಾಹಿತ್ಯದ ಸ್ವರೂಪವನ್ನು ಪಡೆಯಿತು.
ಹಾಗೆಯೇ ಸಮಾಜದಲ್ಲಿ ಮೂಢನಂಬಿಕೆಗಳು ಜನಮಾನಸದಲ್ಲಿ ಅಚ್ಚೊತ್ತಿದ್ದವು. 12 ನೇ ಶತಮಾನಕ್ಕಿಂತಲೂ ಪೂರ್ವದಲ್ಲಿ ಪ್ರಮುಖವಾಗಿ ಜೈನಧರ್ಮ, ವೈಷ್ಣವಧರ್ಮ, ಬೌದ್ಧಧರ್ಮಗಳು ಆಚರಣೆಯಲ್ಲಿದ್ದವು. 10 ನೇ ಶತಮಾನದ ಅಂತ್ಯದಲ್ಲಿ ಗಂಗರ ಸಾಮ್ರಾಜ್ಯವು ಪತನಗೊಳ್ಳುವುದರೊಂದಿಗೆ ಜೈನಧರ್ಮದ ಅವನತಿ ಪ್ರಾರಂಭವಾಯಿತು. ಇಂಥ
ಈ ಸಂದರ್ಭದಲ್ಲಿ ನಿತ್ಯೋತ್ಸವ ಕವಿ ಪ್ರೊ. ಕೆ ಎಸ್ ನಿಸ್ಸಾರ ಅಹಮದ್ ಅವರ ಒಂದು ಕವಿತೆ ನನಗೆ ಅತ್ಯಂತ ಪ್ರೀತಿಯದ್ದು.
ಕನ್ನಡವೆಂದರೆ ಬರೀ ನುಡಿಯಲ್ಲ | ಹಿರಿದಿದೆ ಅದರ ಅರ್ಥ ||
ಜಲವೆಂದರೆ ಕೇವಲ ನೀರಲ್ಲ | ಅದು ಪಾವನ ತೀರ್ಥ ||
ಕನ್ನಡವೆಂದರೆ ಬರೀ ನಾಡಲ್ಲ | ಭೂಪಟಕ್ಕೆ ಚುಕ್ಕಿ ||
ಮರವೆಂದರೆ ಬರೀ ಕಟ್ಟಿಗೆಯೇ | ಶ್ರೀಗಂಧದ ಚಕ್ಕೆ ||
ಕನ್ನಡ ಬರೀ ಕರ್ನಾಟಕವಲ್ಲ | ಅಸೀಮ ಅದು ದಿಗಂತ ||
ಕನ್ನಡವೆಂದರೆ ಬರೀ ಜನಜಂಗುಳಿಯೇ | ಜೀವನ ಶೈಲಿ ವಿಧಾನ ||
ಕನ್ನಡವಲ್ಲ ತಿಂಗಳು ನೆಡೆಸೋ | ಹುಲ್ಲಿನ ಕಾಮನಬಿಲ್ಲು ||
ರವಿ ಶಶಿ ತಾರೆಯ ನಿತ್ಯೋತ್ಸವವದು | ಸರಸ್ವತಿ ದೇವಿಯ ಸೊಲ್ಲು ||
ಇದೇ ಕವನವನ್ನು ನಾನು ಯಾಕೆ ಆರಿಸಿಕೊಂಡದ್ದು ಅಂದರೆ ಹಿರಿದಾದ ಈ ಅರ್ಥವನ್ನು ಗ್ರಹಿಸಿಕೊಳ್ಳದೇನೆ ಕನ್ನಡವನ್ನೇ ಮರೆಯುತ್ತಿದ್ದೇವೆ ಎನ್ನುವ ನೋವಿಗೋಸ್ಕರ.
Pre-Classic ಯುಗದಿಂದಲೂ ಅಂದರೆ 3/4/5 ನೇ ಶತಮಾನದಿಂದಲೂ ಭಕ್ತ ಮತ್ತು ಭಗವಂತನ ನಡುವಿನ ಸಂಬಂಧವನ್ನು ಕಂಡುಕೊಳ್ಳಲು ಸಂಸ್ಕೃತವನ್ನೇ ಅಪ್ಪಿಕೊಳ್ಳಲಾಗಿತ್ತು ಮತ್ತು ಬಳಸಿಕೊಂಡು, ಆಡಿಕೊಂಡು ಬರಲಾಗಿತ್ತು. ಭಾರತದ ಬಹತೇಕ ಭಾಷೆಗಳು ಸಂಸ್ಕೃತದಿಂದ ಉದಯಿಸಿದ್ದವಾಗಿದ್ದಂಥವು. ಕನ್ನಡ ಭಾಷೆ ಮತ್ತು ಭಾಷಿಕರೂ ಕೂಡ ಸಂಸ್ಕೃತ ಭಾಷೆಯನ್ನು ಅವಲಂಬಿಸಿದ್ದ ಕಾಲವದು. ಇಂಥ ಸಂಸ್ಕೃತಮಯವಾಗಿದ್ದ ಕಾಲಘಟ್ಟದಲ್ಲಿ ಕನ್ನಡ ಭಾಷೆಯ ಹಿರಿಮೆ ಗರಿಮೆಗಳನ್ನು ಬೆಳೆಸಿ ಹೆಚ್ಚಿಸಿದ್ದು ಬಸವಾದಿ ಶರಣರು ಹಾಗೂ ಈ ಅವಲಂಬನೆಯನ್ನು ಹಾಗೂ ಹುನ್ನಾರಗಳನ್ನು ಛಿದ್ರಗೊಳಿಸಿದ್ದು 12 ನೇ ಶತಮಾನದ ವಚನ ಚಳುವಳಿ. ನಿರಾಕಾರ ಶಿವನ ಸಾಕ್ಷಾತ್ಕಾರ ಮಾಡಿಕೊಳ್ಳಲು ನನ್ನ ಮಾತೃಭಾಷೆಯಾದ ಕನ್ನಡದಲ್ಲಿಯೇ ಸಾಧ್ಯವಿದೆ ಅನ್ನುವುದನ್ನು ಇಡೀ ಭಾರತಕ್ಕೆ ತಿಳಿಸಿಕೊಟ್ಟವರು ಬಸವಾದಿ ಶರಣ ವಚನಕಾರರು. ಆ ಕಾಲಘಟ್ಟದಲ್ಲಿನ ಸಂಘರ್ಷಮಯ ಶ್ರೇಣೀಕೃತ ಸಮಾಜದಲ್ಲಿ ಇದು ಸಣ್ಣ ವಿಷಯವೇನಲ್ಲಾ. “ದೇವರಿಗೇ ಕನ್ನಡ ಕಲಿಸಿದವರು ವಚನಕಾರರು”. ನಂಬಿ ಕರೆದರೆ ಓ ಎಂಬನೇ ಶಿವನು” ಅಂತಾ ಕನ್ನಡದಲ್ಲಿಯೇ ಹೇಳತಾರೆ. ಹಾಗಾಗಿ ಎಲ್ಲ ವಚನಕಾರರ ದೇವರಿಗೆ ಕನ್ನಡ ಬರುತ್ತಿತ್ತು. ಇದು ನಮಗೆ ಇವತ್ತಿಗೂ ಮಾದರಿ. ಆದರೆ ಇಂದು ನಮ್ಮ ಮಕ್ಕಳಿಗೇನೆ ಕನ್ನಡ ಕಲಿಸಲಾಗುತ್ತಿಲ್ಲ ಇದು ದುರಂತ.
ಕರ್ನಾಟಕದಲ್ಲಿ ಬಳಸಲಾಗುವ ಕನ್ನಡ ಭಾಷೆಯನ್ನು ದೇಶದ ಪ್ರಮುಖ ಭಾಷೆಗಳಲ್ಲಿ ಒಂದಾಗಿ ಭಾರತೀಯ ಸಂವಿಧಾನವು ಗುರುತಿಸಿದೆ. ಕರ್ನಾಟಕದಲ್ಲಿ ಪ್ರಾದೇಶಿಕ ವ್ಯತ್ಯಾಸಗಳಿಗೆ ಅನುಗುಣವಾಗಿ ಭಾಷೆಯು ವಿವಿಧ ರೂಪ ಹಾಗೂ ಶೈಲಿಯ ಪ್ರಾಂತೀಯ ಭಾಷೆಗಳನ್ನು ಪಡೆದುಕೊಂಡಿದೆ. ಪ್ರಸ್ತುತ ಕನಿಷ್ಠ ಮೂರು ಪ್ರಾದೇಶಿಕ ಭಾಷೆಗಳಾದ, ಮೈಸೂರು ಕನ್ನಡ, ಧಾರವಾಡ ಕನ್ನಡ ಹಾಗೂ ಮಂಗಳೂರು ಕನ್ನಡಗಳ ಜನಪ್ರಿಯವಾದ ಭಾಷಾ ಶೈಲಿಗಳನ್ನು, ಕ್ರಮವಾಗಿ ಮೂರು ಸಾಂಸ್ಕೃತಿಕ ಕೇಂದ್ರಗಳಾದ ಮೈಸೂರು, ಧಾರವಾಡ ಹಾಗೂ ಮಂಗಳೂರು ಪ್ರದೇಶಗಳಲ್ಲಿ ಮಾತನಾಡಲಾಗುತ್ತದೆ. ಈ ಮೂರು ಮುಖ್ಯ ವಿಭಾಗಗಳೊಂದಿಗೆ, ಪ್ರಾಂತೀಯ ಉಪ-ವಿಭಾಗಗಳಾದ ಹವ್ಯಕ, ಬಡಗ, ನಾಡವ, ಕೂಸ, ಮುಂತಾದ ಸುಮಾರು 177 ಉಪ ಭಾಷೆಗಳು ಕಂಡು ಬರುತ್ತವೆ.
ಕನ್ನಡದಲ್ಲಿಯೇ ಚಿಂತನೆ ಮಾಡಿ ಬದುಕನ್ನು ಹಸನು ಮಾಡಿಕೊಂಡವರು ವಚನಕಾರರು. ಇದು ಸಂಸ್ಕೃತ ಭಾಷೆಯ ಹಿಡಿತದಿಂದ ಕನ್ನಡವು ಹೊರಬರುವ ಮತ್ತು ಪಾರಾಗುವ ಪ್ರಕ್ರಿಯೆಯ ಮೊದಲ ಘಟ್ಟ. ಪ್ರಾದೇಶಿಕವಾಗಿ ಹರಿದು ಹಂಚಿ ಹೋಗಿದ್ದ ಕನ್ನಡ ಪ್ರದೇಶಗಳ ಸನ್ನಿವೇಶವನ್ನು ಬದಲಿಸಿ ಒಟ್ಟುಗೂಡಿಸಿದ್ದು ವಚನ ಚಳುವಳಿ. ವಚನಕಾರರು 12 ನೇ ಶತಮಾನದಲ್ಲಿ ಕನ್ನಡದಲ್ಲಿಯೇ ವಚನಗಳನ್ನು ರಚಿಸಿದೇ ಹೋಗಿದ್ದರೆ ಬಹುಶಃ ಕನ್ನಡ ನಶಿಸಿ ಹೋಗುತ್ತಿತ್ತೋ ಏನೋ. ನಾವು ಕನ್ನಡಕ್ಕಾಗಿ ಈಗ ಮಾಡುತ್ತಿರುವ ಹೋರಾಟ ಮತ್ತು ಹಾರಾಟಕ್ಕಿಂತ ನಾಲ್ಕು ಪಟ್ಟು ಹೆಚ್ಚು ಮಾಡಬೇಕಾಗಿತ್ತು.
ಕಳೆದ 25/30 ವರ್ಷಗಳ ನನ್ನ ವಚನ ಸಾಹಿತ್ಯದ ಅಧ್ಯಯನದಲ್ಲಿ ಕಂಡುಕೊಂಡ ಸತ್ಯ ಅಂದರೆ ವಚನ ಬೇರೆ ಅಲ್ಲ ವಾಸ್ತವತೆ ಬೇರೆ ಅಲ್ಲ. ವಚನಕ್ಕೆ ಸರಿಯಾಗಿ ನಿರ್ವಚನ ಆಗಿ ಅದು ಕಾಲ ಕಾಲಕ್ಕೆ ಪಚನಗೊಳ್ಳತಾನೆ ಇದೆ.
ಓದಿದಷ್ಟೂ ಓದಿಸಿಕೊಳ್ಳುವ,
ಬರೆದಷ್ಟೂ ಬರೆಸಿಕೊಳ್ಳುವ,
ಚಿಂತಿಸಿದಷ್ಟೂ ಚಿಂತನೆಗೆ ಹಚ್ಚಿಕೊಳ್ಳುವ,
ವಿವರಿಸಿದಷ್ಟೂ ವಿಹಂಗಮ ನೋಟಕ್ಕೆ ಎಡೆ ಮಾಡಿಕೊಳ್ಳುವ,
ಯೋಗ ಮತ್ತು ಯೋಗ್ಯತೆ ವಚನ ಸಾಹಿತ್ಯಕ್ಕೆ ಇದೆ ಅಂತಾ “ವಚನ ಮಂದಾರ” ಅಂತರ್ಜಾಲ ಉಪನಾಸಗಳ ಮಾಲಿಕೆಯ ದಿನಾಂಕ 05.11.2022 ರ ಕಾರ್ಯಕ್ರಮದಲ್ಲಿ ಡಾ. ಶ್ರೀಪತಿ ಹಳಗುಂದ ಸರ್ ಹೇಳಿದ್ದು ಈಗ ಜ್ಞಾಪಕಕ್ಕೆ ಬರುತ್ತದೆ.
ಕಾಲವಾಗಿ 12 ನೇ ಶತಮಾನ.
ಪುಣ್ಯಕ್ಷೇತ್ರವಾಗಿ ಕಲ್ಯಾಣ.
ರಾಜನಾಗಿ ಬಿಜ್ಜಳ.
ವ್ಯಕ್ತಿಯಾಗಿ ಬಸವಣ್ಣ.
ಭಾಷೆಯಾಗಿ ಕನ್ನಡ.
ವಿದ್ಯಮಾನವಾಗಿ ವಚನ ಚಳುವಳಿ.
ಶಕ್ತಿಯಾಗಿ ವಚನಗಳು.
ಭಾವನೆಯಾಗಿ ಅನುಭವ.
ಅಭಿವ್ಯಕ್ತಿಯಾಗಿ ಅನುಭಾವ.
ಹೀಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಜಾತಿ-ಜನಾಂಗವನ್ನೂ ಮೀರಿದ ಒಂದು ಸಾಹಿತ್ಯವೆಂದರೆ ಅದು ವಚನ ಸಾಹಿತ್ಯ. ಅದಕ್ಕಾಗಿಯೇ ಸರಿ ಸುಮಾರು 900 ವರ್ಷಗಳದರೂ ಇಂದಿಗೂ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಮತ್ತು ಗೌರವದಿಂದ ವಚನ ಸಾಹಿತ್ಯವನ್ನು ನಾವು ಆರಾಧಿಸುತ್ತೇವೆ. ಗೋಪಾಲ ಕೃಷ್ಣ ಅಡಿಗರು ಹೇಳುವ ಹಾಗೆ:
ಹೊಸ ನೆತ್ತರು ಉಕ್ಕಿ ಉಕ್ಕಿ ಆರಿ ಹೋಗುವ ಮುನ್ನ
ಹರೆಯದೀ ಮಾಂತ್ರಿಕನ ಮಾಟ ಮುಸುಳುವ ಮುನ್ನ
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ದ ಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು
ಹೀಗೆ ವಚನಕಾರರು ತಮ್ಮ ರಕ್ತ ಆರಿ ಹೋಗುವ ಮುನ್ನ ಹೊಸ ನಾಡನ್ನು ಕಟ್ಟಿದ್ದಾರೆ. ಈ ಕನ್ನಡ ನಾಡಿನಲ್ಲಿ ಅವರ ರಕ್ತ ಇನ್ನೂ ಆರಿ ಹೋಗಿಲ್ಲ ಎನ್ನುವುದಕ್ಕೆ ಇಡೀ ವರ್ಷಪೂರ್ತಿಯಾಗಿ ನಡೆಯುವ ಕನ್ನಡ ನಾಡು-ನುಡಿಯ ಉತ್ಸವಗಳು ಸಾಕ್ಷೀಭೂತವಾಗಿವೆ.
Latin ಭಾಷೆಯ “Lingua” ಎನ್ನುವ ಶಬ್ದದಿಂದ Language (ಭಾಷೆ) ಎನ್ನುವ ಶಬ್ದ ಉತ್ಪತ್ತಿಯಾಗಿದೆ. Lingua ಎಂದರೆ “Tongue (ನಾಲಿಗೆ)” ಎಂದರ್ಥ. ನಾಲಿಗೆಯಿಂದ ಹೊರಬರುವುದೇ ಭಾಷೆ. ಹಾಗಾಗಿ ಮನಸ್ಸಿನ ಭಾವನೆಗಳು, ಆಲೋಚನೆಗಳು ಧ್ವನಿಪೆಟ್ಟಿಗೆಯ ಮೂಲಕ ಧ್ವನಿಯ ರೂಪದಲ್ಲಿ ನಾಲಿಗೆಯ ಮೂಲಕ ಉಚ್ಛರಿಸಲ್ಪಟ್ಟು ಹೊರಬಂದು ಭಾಷೆಯಾಗುತ್ತದೆ.
ಯಾವುದೇ ಭಾಷೆಯಲ್ಲಿನ ಶಬ್ದಗಳು ಅಥವಾ ಇಡೀಯಾದ ಸಾಲುಗಳು ಸಾಂಸ್ಕೃತಿಕ ಮೌಲ್ಯ, ವಿಚಾರ, ಘನತೆ, ಅಥವಾ ಸನ್ನಿವೇಷ ಸೃಷ್ಟಿಸಿ ಅರ್ಥಗ್ರಹಿಕೆಗಿಂತಲೂ ಮಿಗಿಲಾದ ಸಂದೇಶವನ್ನು ನೀಡುತ್ತದೆ ಎಂದು Stanley Newman ಎನ್ನುವ ಅಮೇರಿಕಾದ ಒಗಟು ಸೃಷ್ಟಿಕರ್ತ, ಪದಬಂಧ (Crossword Puzzle) ನಿರ್ಮಾತೃ, ಲೇಖಕ, ಸಂಪಾದಕ ಮತ್ತು ಪ್ರಕಾಶಕ ಭಾಷೆಯ ಕುರಿತು ಸುಂದರವಾದ ವ್ಯಾಖ್ಯಾನವನ್ನು ನಿಡುತ್ತಾನೆ.
Words acquire connotative gradiations in accordance with the cultural values assigned to ideas, states, groups and situations.
ಯಾವುದೇ ಭಾಷೆಯಲ್ಲಿನ ಶಬ್ದಗಳು ಅಥವಾ ಇಡೀಯಾದ ಸಾಲುಗಳು ಸಾಂಸ್ಕೃತಿಕ ಮೌಲ್ಯ, ವಿಚಾರ, ಘನತೆ, ಅಥವಾ ಸನ್ನಿವೇಷ ಸೃಷ್ಟಿಸಿ ಅರ್ಥಗ್ರಹಿಕೆಗಿಂತಲೂ ಮಿಗಿಲಾದ ಸಂದೇಶವನ್ನು ನೀಡುತ್ತದೆ.

ಭಾಷೆ ಸಾಮಾಜಿಕ ಸಂಪರ್ಕಕ್ಕೆ ಮತ್ತು ಅಭಿಪ್ರಾಯ ಸಂವಹನಕ್ಕೆ ಇದೆ ಎನ್ನುವುದು ಎಲ್ಲರ ಅಭಿಪ್ರಾಯ. ನಮ್ಮ ಅಭಿಪ್ರಾಯದ ಮಂಡನೆಯ ಜೊತೆಗೆ ಇನ್ನೊಬ್ಬರ ಅಭಿಪ್ರಾಯವನ್ನೂ ಸಹ ಮಂಡಿಸಲು ಭಾಷೆಯ ಅಗತ್ಯತೆ ಇದೆ.

ಭಾಷೆಯನ್ನು ಆಳವಾಗಿ ಅಧ್ಯಯನ ಮಾಡಿದ ಗ್ರೀಕ್ ತತ್ವಜ್ಞಾನಿ ಪ್ಲೂಟೋ “ಧ್ವನಿ ಸಂಕೇತಗಳಿಂದ ಮಾನವ ತನ್ನ ವಿಚಾರಗಳನ್ನು ಅಭಿವ್ಯಕ್ತಿಗೊಳಿಸುವ ಸಾಧನವೇ ಭಾಷೆ” ಅಂತಾ ಹೇಳತಾ ಭಾಷೆಗೆ ಒಂದು ವ್ಯಾಖ್ಯಾನವನ್ನು ನೀಡುತ್ತಾನೆ. ಇವರ ಜೊತೆಗೆ ಪ್ರಪಂಚದ ಹಲವಾರು ಭಾಷಾ ವಿಜ್ಞಾನಿಗಳು ಮತ್ತು ತತ್ವಜ್ಞಾನಿಗಳು ಭಾಷೆಗೆ ತಮ್ಮದೇ ಆದ ನಿರೂಪವನ್ನು ನೀಡುತ್ತಾರೆ.
ಹೆನ್ರಿ ಸ್ವೀಟ್ (ಜರ್ಮನಿ): ಪದಗಳ ಮೂಲಕ ವಿಚಾರಗಳನ್ನು ಅಭಿವ್ಯಕ್ತಿಗೊಳಿಸುವದೇ ಭಾಷೆ.
ಹೆನ್ರಿ ಸ್ವೀಟ್ (1845-1912) ಇಂಗ್ಲಿಷ್ ಭಾಷಾಶಾಸ್ತ್ರಜ್ಞ, ಫೋನೆಟಿಷಿಯನ್ ಮತ್ತು ವ್ಯಾಕರಣಶಾಸ್ತ್ರಜ್ಞ. ಭಾಷಾ ಶಾಸ್ತ್ರಜ್ಞರಾಗಿ ಜರ್ಮನಿಕ್ ಭಾಷೆ ಹಾಗೂ ವಿಶೇಷವಾಗಿ ಹಳೆಯ ಇಂಗ್ಲಿಷ್ ಮತ್ತು ಹಳೆಯ ನಾರ್ಸ್ ಭಾಷೆಗಳಲ್ಲಿ ಪರಿಣತಿ ಪಡೆದವರು.
ಎಡ್ವರ್ಡ್ ಸಪೀರ್ (ಅಮೇರಿಕಾ): ಮನುಷ್ಯರು ತಮ್ಮ ಭಾವ, ಭಾವನೆ ಮತ್ತು ಭಾವಾವೇಶಗಳನ್ನು ಸ್ವಪ್ರೇರಿತ ಧ್ವನಿ ಸಂಕೇತಗಳಿಂದ ಮತ್ತೊಬ್ಬ ಮನುಷ್ಯನಿಗೆ ತಿಳಿಸುವ ವಿಧಾನವೇ ಭಾಷೆ.
ಎಡ್ವರ್ಡ್ ಸಪೀರ (26.01.1884-04.02.1939) ಅಮೇರಿಕಾದ ಮಾನವ ಶಾಸ್ತ್ರಜ್ಞ ಮತ್ತು ಭಾಷಾ ಶಾಸ್ತ್ರಜ್ಞ. ಇವರು ಭಾಷೆಯ ಶಿಸ್ತುಬದ್ಧ ಬೆಳವಣಿಗೆ ಕುರಿತು ಅತ್ಯಂತ ಶ್ರೇಷ್ಠ ಕೆಲಸ ಮಾಡಿದವರಲ್ಲೊಬ್ಬರು.
ಬೆನ್ಡೇಟೋ ಕ್ರೋಸೇ (ಇಟಲಿ): ಸೀಮಿತವಾದ ವ್ಯವಸ್ಥಿತ ಶಬ್ದ ಸಮುದಾಯನ್ನೊಳಗೊಂಡು ಅಭಿವ್ಯಕ್ತಿಗೆ ಕಾರಣವಾಗುವ ಮಾಧ್ಯಮವೇ ಭಾಷೆ.
ಬೆನೆಡೆಟೋ ಕ್ರೋಚೆ (1866-1952) ಇಟಲಿಯ ಪ್ರಸಿದ್ಧ ತತ್ತ್ವಶಾಸ್ತ್ರಜ್ಞ. ಇತಿಹಾಸಕಾರ, ಸಂಪಾದಕ, ವಿಮರ್ಶಕ. ಲಲಿತಕಲೆ, ಅಭಿವ್ಯಕ್ತಿ, ಕಲೆ ಅಥವಾ ಸಾಹಿತ್ಯದ ಜಿಜ್ಞಾಸೆ, ಭಾಷಾ ವಿಮರ್ಷೆ, ಸೌಂದರ್ಯ ಮೀಮಾಂಸೆ ಉರಿತಂತೆ ತನ್ನದೇ ಆದ ಚಿಂತನೆಗಳನ್ನು ಮಂಡಿಸಿದವನು.
ಬ್ರೋನಿಸ್ಲಾವ್ ಮಾಲಿನೋವಸ್ಕಿ (ಬ್ರಿಟನ್): ಅನುಭವಗಳ ಕ್ರಿಯಾತ್ಮಕ ಅಭಿವ್ಯಕ್ತಿಯೇ ಭಾಷೆ ಹಾಗೂ ಇದು ನಮ್ಮ ಮನಸ್ಸಿನ ಕನ್ನಡಿಯ ಬಿಂಬವಲ್ಲ.
ಬ್ರೋನಿಸ್ಲಾವ್ ಮಾಲಿನೋವಸ್ಕಿ (07.04.1884-16.05.1942) ಅವರು ಪೋಲಂಡ್ ಸಂಜಾತ ಬ್ರಿಟೀಷ್ ಮಾನವ ಶಾಸ್ತ್ರಜ್ಞ ಮತ್ತು ಭಾಷಾ ವಿಜ್ಞಾನಿ.
ವಚನಕಾರರು ಸಾಮಾನ್ಯ ಮಾತುಗಳನ್ನೇ “ಅನುಭಾವ” ದ ಎತ್ತರಕ್ಕೇರಿಸಿ ಆ ಅನುಭಾವವನ್ನೇ ತಮ್ಮ ನಡೆ-ನುಡಿಗಳಲ್ಲಿ ಆಚರಣೆಗೆ ತಂದರು. ಈ ವಿಷಯ ವಚನಕಾರರು ಭಾಷೆಯ ಒಂದು ಸರಳತೆಗೆ ಹಿಡಿದ ಕನ್ನಡಿ ಅಂತ ಹೇಳಬಹುದಾದಂಥ ಒಂದು ವಚನವನ್ನು ನಾವು ಗಮನಿಸಬಹುದು.
ಪಾತಾಳದಿಂದತ್ತ ಮಾತ ಬಲ್ಲವರಿಲ್ಲ,
ಗಗನದಿಂದ ಮೇಲೆ ಅನುಭಾವ ತಾನಿಲ್ಲ.
ಒಳಗಣ ಜ್ಯೋತಿಯ ಬೆಳಗ ಬಲ್ಲವರಿಲ್ಲ;
ಹೊರಗಣ ಹೊರಗನು ಅರಿಯಬಲ್ಲವರಿಲ್ಲ.
ಹಿಂದಣ ಹಿಂದನು, ಮುಂದಣ ಮುಂದನು,
ತಂದು ತೋರಿದ ನಮ್ಮ ಗುಹೇಶ್ವರನು.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-23/ವಚನ ಸಂಖ್ಯೆ-58)
ಅಲ್ಲಮ ಪ್ರಭುಗಳ ಈ ವಚನ ಮಾತುಗಳನ್ನು ಅತ್ಯಂತ ಶ್ರೇಷ್ಠ ಸ್ಥರದಲ್ಲಿ ವ್ಯಾಖ್ಯಾನಿಸಿರುವುದನ್ನು ಗಮನಿಸಬಹುದು. ಪಾತಾಳ-ಗಗನ ಎನ್ನುವ ಎರಡು Diagonally Opposite ಇರುವ ಹಂತಗಳನ್ನು ಗುರುತಿಸಿದ್ದಾರೆ. ಪಾತಾಳ ಕೆಳಸ್ಥರದ ಹಂತವಾದರೆ ಆಕಾಶ ಮೇಲುಸ್ಥರದ ಹಂತ. ಕೆಳಸ್ಥರದಲ್ಲಿ ಮಾತುಗಳೆ ವ್ಯವಹಾರಿಕ ಪರಿಭಾಷೆಯಾದರೆ, ಮೇಲುಸ್ಥರದ ಮಾತುಗಳು ವ್ಯವಹಾರಿಕ ಬದುಕಿನ ಲೌಕಿಕ ಅನುಭಾವವನ್ನು ದಾಟಿ ಲೋಕಾನುಭವದ ಅಲೌಕಿಕ ತತ್ವ ಸಿದ್ಧಾಂತಗಳನ್ನು ಸೂಚಿಸುತ್ತದೆ. ಲೋಕದಲ್ಲಿದ್ದುಕೊಂಡೇ ಅನುಭಾವದ ಅಲೌಕಿಕ ಎತ್ತರವನ್ನು ಏರಬಹುದೆನ್ನುವುದಕ್ಕೆ ನಾವಾಡುವ ಮಾತುಗಳು ಸಾಕ್ಷೀಭೂತವಾಗಿ ನಿಲ್ಲಬಹುದು ಎನ್ನುವುದನ್ನು ಅಲ್ಲಮ ಪ್ರಭುಗಳು ಅತ್ಯಂತ ಸ್ಪಷ್ಟವಾಗಿ ಈ ವಚನದಲ್ಲಿ ತಿಳಿಸಿದ್ದಾರೆ.
ಇನ್ನು ಶಬ್ದ, ಸ್ಪರ್ಷ, ರೂಪು, ರಸ ಮತ್ತು ಗಂಧ ಈ ಪಂಚೇಂದ್ರಿಯಗಳಿಗೂ ಪಂಚ ಕರ್ಮೇಂದ್ರಿಯಗಳು ಪ್ರಮಾಣವಾಗಿ ವಚನಕಾರರು ಚಿತ್ರಿಸಿದ್ದಾರೆ. ಅಲ್ಲಮ ಪ್ರಭುಗಳು ಹಾಗೂ ಚಿನ್ಮಯಜ್ಞಾನಿ ಚನ್ನಬಸವಣ್ಣನವರ ವಚನಗಳು ಇದಕ್ಕೆ ಸಂವಾದಿಯಾಗಿ ನಿಲ್ಲಬಹುದು.
ಶಬ್ದವೆಂಬೆನೆ? ಶ್ರೋತ್ರದೆಂಜಲು.
ಸ್ಪರ್ಶವೆಂಬೆನೆ ತ್ವಕ್ಕಿನೆಂಜಲು.
ರೂಪೆಂಬೆನೆ? ನೇತ್ರದೆಂಜಲು.
ರುಚಿಯೆಂಬೆನೆ? ಜಿಹ್ವೆಯೆಂಜಲು.
ಪರಿಮಳವೆಂಬೆನೆ? ಘ್ರಾಣದೆಂಜಲು.
ನಾನೆಂಬೆನೆ? ಅರಿವಿನೆಂಜಲು.
ಎಂಜಲೆಂಬ ಭಿನ್ನವಳಿದ, ಬೆಳಗಿನೊಳಗಣ ಬೆಳಗು
ಗುಹೇಶ್ವರನೆಂಬ ಲಿಂಗವು.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-182/ವಚನ ಸಂಖ್ಯೆ-564)
ಶಬ್ದವೆಂಬುದು ಶ್ರೋತ್ರದೆಂಜಲು,
ರೂಪೆಂಬುದು ನಯನದೆಂಜಲು,
ವಾಸನೆಯೆಂಬುದು ನಾಸಿಕದೆಂಜಲು,
ರುಚಿಯೆಂಬುದು ಜಿಹ್ವೆಯೆಂಜಲು,
ಸ್ವರ್ಶವೆಂಬುದು ತ್ವಕ್ಕಿನೆಂಜಲು, ಮಾಡಲಾಗದು.
ಲಿಂಗಕ್ಕೆ ರೂಪಿಲ್ಲ, ಜಂಗಮಕ್ಕೆ ಅಂಗವಿಲ್ಲ.
ಪದಾರ್ಥವ ನೀಡಬಲ್ಲ ನಿಜೈಕ್ಯ ನಿಮ್ಮ ಶರಣ,
ಕೂಡಲಚೆನ್ನಸಂಗಮದೇವಾ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-324/ವಚನ ಸಂಖ್ಯೆ-823)
ಶಬ್ದಾದಿ ವಿಷಯಂಗಳ ವಿವರವು:
ಶಬ್ದ ಆಕಾಶದ ಗುಣ,
ಸ್ಪರ್ಶ ವಾಯುವಿನ ಗುಣ.
ಶಬ್ದ ಸ್ಪರ್ಶ ರೂಪು ಅಗ್ನಿಯ ಗುಣ,
ಶಬ್ದ ಸ್ಪರ್ಶ ರೂಪು ರಸ ಅಪ್ಪುವಿನ ಗುಣ,
ಶಬ್ದ ಸ್ಪರ್ಶ ರೂಪು ರಸ ಗಂಧ ಸಹಿತ ಇವೈದು ಪೃಥ್ವಿಯ ಗುಣ.
ಇಂತೀ ಪಂಚಗುಣವನು ಒಂದೇ ಗುಣವ ಮಾಡಬಲ್ಲಡೆ
ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುವನು
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-791/ವಚನ ಸಂಖ್ಯೆ-1624)
ಪಂಚೇಂದ್ರಿಯಗಳು ಮತ್ತು ಅವುಗಳ ಗುಣಲಕ್ಷಣಗಳನ್ನು ಭಾಷೆಗೆ ಸಮ್ಮಿಳಿತಗೊಳಿಸಿದ ಅದ್ಭುತವಾದ ವಚನಗಳು. ಮುಂದುವರೆದು ಬಸವಣ್ಣನವರು ಮಾತಿನ ನಂಜು, ಅಲಗು ಎನ್ನುವಂತಹ ಮಾತನ್ನು ತಮ್ಮ ವಚನದಲ್ಲಿ ನಿರೂಪಣೆ ಮಾಡತಾರೆ. ಮಾತಿನ ನಂಜು ಬಹಳ ಕೆಟ್ಟದ್ದು ಎನ್ನುವ ಅರ್ಥದಲ್ಲಿ.
ಎನ್ನ ನುಡಿ ಎನಗೆ ನಂಜಾಯಿತ್ತು,
ಎನ್ನ ಅಲಗೆ ಎನ್ನ ಕೊಂದಿತ್ತು.
ಆನು ಪಾಪಿಯಯ್ಯಾ, ಆನು ಕೋಪಿಯಯ್ಯಾ.
ತರಳತನದಲ್ಲಿ ಕೆಟ್ಟೆನಯ್ಯಾ,
ಭಕ್ತಿಯ ಹೊಲಬನರಿಯದೆ ಮರುಳಾದೆನಯ್ಯಾ.
ಆಳು ಮುನಿದಡೆ ಆಳೇ ಕೆಡುವನು,
ಆಳ್ದ ಮುನಿದಡೆ ಆಳೇ ಕೆಡುವನು.
ನೀವು ಮುನಿದಡೆ ನಾನೇ ಕೆಡುವೆನಯ್ಯಾ
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-318/ವಚನ ಸಂಖ್ಯೆ-1091)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:
ನಂಜು : ವಿಷ.
ಅಲಗೆ: ಕತ್ತಿ, ಚೂರಿ.
ತರಳತನ: ಸರಳತೆ, ನಿಸ್ವಾರ್ಥ.
ಹೊಲಬು: ರೀತಿ, ಬಗೆ, ಮಾರ್ಗ, ತೊಡಕು.
“ಶಬ್ದವೆಂಬೆನೆ ಶ್ರೋತ್ರದೆಂಜಲು”, “ಎನ್ನ ನುಡಿಯೇ ಎನಗೆ ನಂಜಾಯಿತ್ತು” ಎನ್ನುವಂತಹ ಮಾತುಗಳು ನಾವಾಡುವ ಕೆಟ್ಟ ಭಾಷೆ ಹೇಗೆ ನಮ್ಮನ್ನು ತಳಸ್ಥರಕ್ಕೆ ದಬ್ಬುತ್ತದೆ ಎನ್ನುವುದನ್ನು ನಿರೂಪಣೆ ಮಾಡುತ್ತವೆ. ಮಾನಸಿಕ ಭಾವಗಳು, ಬೌದ್ಧಿಕ ಚಿಂತನೆಗಳು, ಆಧ್ಯಾತ್ಮ ಸಾಕ್ಷಾತ್ಕಾರ ಅನುಭೂತಿಯಂತಹ ಪರೋಕ್ಷ ಅನಿಸಿಕೆಗಳು ಇವೆಲ್ಲದಕ್ಕೂ ಭಾಷೆಯೇ ಮಾಧ್ಯಮ ಎನ್ನುವುದನ್ನು ಬಸವಾದಿ ಶರಣರು ತಿಳಿದಿದ್ದರು. ಹಾಗಾಗಿಯೇ ಅವರ ವಚನಗಳು ಭಾಷೆಯ ಒಂದು ಸುಂದರ ರಚನಾತ್ಮಕ ಸ್ವರೂಪವನ್ನು ನಮಗೆ ಮನವರಿಕೆ ಮಾಡಿ ಕೊಡುತ್ತವೆ.
ಇನ್ನು ವಚನಕಾರರು ಭಾಷೆಯನ್ನು ಆಣೆ-ಪ್ರಮಾಣ, ವಚನ ಇತ್ಯಾದಿ ಸ್ವರೂಪದಲ್ಲಿ ಬಳಸಿದ್ದನ್ನು ನಾವು ಗಮನಿಸಬಹುದು. ವೈರಾಗ್ಯನಿಧಿ ಅಕ್ಕಮಹಾದೇವಿಯವರ ಒಂದು ವಚನ ಇದಕ್ಕೆ ಪೂರಕವಾಗಿ ನಿಲ್ಲುತ್ತದೆ.
ಎನ್ನ ಮೀಸಲ ಬೀಸರ ಮಾಡಿದೆಯಲ್ಲಯ್ಯ.
ಎನ್ನ ಮೀಸಲ ಬೀಸಾಡಿ ಕಳೆದೆಯಲ್ಲಯ್ಯ.
ಎನ್ನ ಭಾಷೆಯ ಪೈಸರ ಮಾಡಿದೆಯಲ್ಲಯ್ಯ. (ಹುಸಿ)
ಎನ್ನ ಭಾಷೆಗೆ ದೋಷವ ತೋರಿಸಿದೆಯಲ್ಲಯ್ಯ.
ಎನ್ನ ಮೀಸಲ ಕಾಯವ ನಿಮಗೆಂದಿರಿಸಿಕೊಂಡಿದ್ದಡೆ,
ಬೀಸಾಡಿ ಕಳೆವರೆ ಹೇಳಾ ತಂದೆ?
ಏಸು ಕಾಲ ನಿಮಗೆ ನಾನು ಮಾಡಿದ ತಪ್ಪ
ಈ ಸಮಯದಲ್ಲಿ ಹೊರಿಸಿ ಕೊಂದೆಯಲ್ಲಾ
ಚೆನ್ನಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-41/ವಚನ ಸಂಖ್ಯೆ-103) ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:
ಬೀಸರ: ಹಾಳಾಗು, ಕೆಡಿಸು, ಕೊನೆಗೊಳಿಸು, ನಾಶವಾಗು.
ಪೈಸರ: ವ್ಯರ್ಥ, ಹುಸಿ.
“ಎನ್ನ ಭಾಷೆಯ ಪೈಸರ ಮಾಡಿದೆಯಲ್ಲಯ್ಯ” ನಾನು ಕೊಟ್ಟ ಮಾತನ್ನು ಹುಸಿ ಮಾಡಿದೆ ಮತ್ತು ನನ್ನ ಆಣೆ-ಪ್ರಮಾಣದಲ್ಲಿ ದೋಷವನ್ನು ಹುಡಕಿದೆಯಾ ತಂದೆ ಚನ್ನಮಲ್ಲಿಕಾರ್ಜುನಾ ಎಂದು ಅಕ್ಕ ಹೇಳುವುದು ಆಣೆ-ಪ್ರಮಾಣದ ಕುರಿತಾಗಿ. ಇದನ್ನೇ ಶರಣ ನುಲಿಯ ಚಂದಯ್ಯನವರೂ ಕೂಡ ಪ್ರಸ್ತಾಪ ಮಾಡತಾರೆ.
ನುಡಿದ ಮಾತಿಂಗೆ ತಡಬಡ ಬಂದಲ್ಲಿ
ನುಡಿದ ಭಾಷೆಗೆ ಭಂಗ ನೋಡಾ.
ಹಿಡಿದ ಕುಳಕ್ಕೆ ಹಾನಿ ಬಂದಲ್ಲಿ
ಒಡಲನಿರಿಸುವದೆ ಭಂಗ ನೋಡಯ್ಯಾ.
ಇದು ಕಾರಣ ನಡೆ ನುಡಿ ಶುದ್ಧವಿಲ್ಲದಿದ್ದಡೆ
ಚಂದೇಶ್ವರಲಿಂಗವಾದಡೂ ತಪ್ಪನೊಳಕ್ಕೊಳ್ಳ ಕಾಣಾ
ಮಡಿವಾಳಯ್ಯಾ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-459/ವಚನ ಸಂಖ್ಯೆ-1318)
ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:
ತಡಬಡ: ತಡವರಿಕೆ, ಅಡ್ಡಿ.
ಕುಳ: ಕುಲ.
ನಡೆ-ನುಡಿ ಎರಡೂ ಒಂದಾಗಿದ್ದರೆ ಬದುಕು ಹಸನು ಎನ್ನುವ ಅರ್ಥವನ್ನು ಶರಣ ನುಲಿಯ ಚಂದಯ್ಯನವರು ಈ ವಚನದಲ್ಲಿ ಹಿಡಿದಿಟ್ಟಿದ್ದಾರೆ.
ವಿಶ್ವದ ಭಾಷಾ ಸಂಸ್ಕೃತಿಗೆ ಕರ್ನಾಟಕ ಕೊಟ್ಟ ಉತ್ಕೃಷ್ಟ ಕೊಡುಗೆ ಅಂದರೆ ವಚನ ಸಾಹಿತ್ಯ. ವಚನ ಸಾಹಿತ್ಯ ನಮ್ಮೆಲ್ಲರ ಬದುಕಿನ ಪ್ರತಿಬಿಂಬ ಹಾಗೂ ಅಂತರಂಗದ ಗತಿಬಿಂಬ. ಕನ್ನಡ ಭಾಷೆಯ ಇತಿಹಾಸದಲ್ಲಿ ವಚನ ಸಾಹಿತ್ಯ ಒಂದು ಪ್ರಭಾವಶಾಲಿ ಮೈಲಿಗಲ್ಲು. ಹಾಗಾದರೆ ವಚನ ಎಂದರೆಊ ಎನ್ನುವುದನ್ನು ತಿಳಿದುಕೊಂಡು ಮುಂದೆ ಹೋಗೋಣ.
ವಚನ ಎನ್ನುವ ಶಬ್ದ ಸಂಸ್ಕೃತದ “ವಚ್” ಎಂದರೆ ಹೇಳು, ನುಡಿ ಎಂಬರ್ಥದೊಂದಿಗೆ ಸಾಧಿತವಾದದ್ದು. ಭಾವಪೂರ್ಣವಾಗಿ ವಾಚಿಸು ಎನ್ನುವ ಅರ್ಥವೂ ಕೂಡ ಇದೆ. ವಚನ ಎಂದರೆ “ಭಾಷೆ ಕೊಡು” ಎನ್ನುವುದು ಜನ ಸಾಮಾನ್ಯರ ಅರ್ಥ. ಅನಂತತೆಯ ಆಯಾಮದಲ್ಲಿ ಗದ್ಯ ರೂಪದಲ್ಲಿ ಬಳಕೆಯಾಗಿದೆ. ಪದ್ಯದ ರೂಪದಲ್ಲಿಯೂ ಹಾಡುವಂಥ ಗತಿಶೀಲ ಶಕ್ತಿಯನ್ನು ಪಡೆದಿದೆ. ಹಾಗಾಗಿ ನನಗೆ ತಿಳಿದ ಮಟ್ಟಿಗೆ ವಚನ ಎಂದರೆ “ಪದ್ಯಗಂಧೀ ಗದ್ಯ ಸಾಹಿತ್ಯ” ಅಂತಾ ಹೇಳಬಹುದು. ಅತ್ಯಂತ ಗಹನವಾದ ವ್ಯಾಪ್ತಿಯನ್ನು ವಚನ ಎನ್ನುವ ಶಬ್ದ ಹೊಂದಿದೆ.
ಇನ್ನು ವಚನ ಸಾಹಿತ್ಯವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ ನಮಗೆ ಹಲವಾಯ ವೈಶಿಷ್ಟ್ಯಗಳು ಕಂಡು ಬರುತ್ತವೆ. ಅವುಗಳಲ್ಲಿ ಕೆಲವೊಂದು ಪಟ್ಟಿ ಮಾಡುವುದಾದರೆ:
ರಾಜ ಪ್ರಭುತ್ವವನ್ನು ವಿರೋಧಿಸಿದ್ದರಿಂದ ರಾಜಾಶ್ರಯವಿಲ್ಲದೇ ಬೆಳೆದ ಸಾಹಿತ್ಯ.
ಜನಪರ ಕಾಳಜಿಯುಳ್ಳಂಥ ಹಾಗೂ ಸಾಮಾನ್ಯ ಜನರ ಆಡುಭಾಷೆಯನ್ನೇ ಉಪಯೋಗಿಸಿದ ಸಾಹಿತ್ಯ ಎನ್ನುವ ಹೆಗ್ಗಳಿಕೆ.
ಕಾಯಕ ಮತ್ತು ದಾಸೋಹದ ಪರಿಕಲ್ಪನೆಯ ತಳಹದಿಯ ಮೇಲೆ ವಿಕಾಸವಾದ ಸಾಹಿತ್ಯ.
ಸಾಮಾಜಿಕ ವಿಡಂಬನಾತ್ಮಕ ಸಾಹಿತ್ಯ, ಉದಾಹರಣೆಗೆ ಹೇಳುವುದಾದರೆ ಸ್ಥಾವರ ಮೂರ್ತಿ ಪೂಜೆಯ ನಿರಾಕಾರಣೆ.
ಅತ್ಯಂತ ಪ್ರಮುಖವಾದ ಚಿಂತನೆ ಅಂದರೆ ಜಾತಿ ವ್ಯವಸ್ಥೆಯ ನಿರಾಕರಣೆಯ ಮೂಲಕ ಸಮ ಸಮಾಜದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ ಸಾಹಿತ್ಯ.
ಸ್ತ್ರೀ ಸಮಾನತೆಯಂತ ಉತ್ಕೃಷ್ಠ ಸಾಮಾಜಿಕ ಸಮಾನತೆ ನಿರೂಪಿಸಿದ ಸಾಹಿತ್ಯ.
ವಚನಕಾರರು ರಾಜರನ್ನು ಹೊಗಳಿರುವವರನ್ನೂ ಕೂಡ ತಿರಸ್ಕರಿಸಿರುವುದನ್ನು ನಾವು ಕಾಣಬಹುದು. ಇದು ವಚನ ಸಾಹಿತ್ಯದ ಭಾಷೆಗಿರುವ ತಾಕತ್ತು. ಶರಣ ಆದಯ್ಯನವರ ಒಂದು ವಚನ ಇಂತಹ ಚಿಂತನೆಗಳಿಗೆ ಪುಷ್ಟಿಯನ್ನು ನೀಡುತ್ತದೆ.
ಖ್ಯಾತಿಗೆ ಜೋತು, ಲಾಭಕ್ಕೆ ಲೋಭಿಸಿ,
ಪೂಜೆಯ ಮಾಜದೆ ರಾಜದ್ವಾರದಲ್ಲಿ ಸುಳಿದು
ಬಳಲುವ ಹಿರಿಯರೆಲ್ಲರೂ ಇತ್ತಿತ್ತಲಲ್ಲದೆ ಅತ್ತತ್ತಲೆಲ್ಲಿಯದೋ?
ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ತಲ್ಲೀಯವಾದ
ಶರಣರತ್ತತ್ತಲಲ್ಲದೆ ಇತ್ತಿತ್ತಲೆಂತಿಹರೋ.
(ಸಮಗ್ರ ವಚನ ಸಂಪುಟ: ಆರು-2021/ಪುಟ ಸಂಖ್ಯೆ-325/ವಚನ ಸಂಖ್ಯೆ-894)
ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:
ಮಾಜದೆ: ಮರೆಮಾಚದೆ
ಕರ್ನಾಟಕದ ಸಾಹಿತ್ಯದಲ್ಲಿ ರಾಜರನ್ನು ಹಾಗೂ ರಾಜಪ್ರಭುತ್ವವನ್ನು ಸಂಪ್ರದಾಯವನ್ನು ಹುಟ್ಟು ಹಾಕಿದ್ದನ್ನು ನಾವು ಕಾಣುತ್ತೇವೆ. ವ್ಯಕ್ತಿ ಕೇಂದ್ರೀಕೃತವಾದ ಸಂದರ್ಭದಲ್ಲಿ ಬಸವಾದಿ ಶರಣರು ಇಂಥ ಹೊಗಳು ಭಟ್ಟರನ್ನೂ ಕೂಡ ನಿರಾಕರಿಸಿದರು. ಯಾವುದೇ ಸಾಹಿತ್ಯ ಪ್ರಾಕಾರಗಳಲ್ಲಿ ಇಂಥ ದಿಟ್ಟತನದ ಭಾಷಾ ಪ್ರಯೋಗ ಅತ್ಯಂತ ವಿರಳವಾಗಿ ಕಂಡು ಬರುತ್ತದೆ.
ಹಲವಾರು ಆಯಾಮಗಳಲ್ಲಿ ವಚನ ಸಾಹಿತ್ಯದ ಭಾಷೆ ತನ್ನ ಪ್ರಖರತೆಯನ್ನು ಬೀರಲು ಪ್ರಾರಂಭೀಸಿದ ಕಾಲಘಟ್ಟ ಅದು 12 ನೇ ಶತಮಾನ. ಎಲ್ಲ ಭ್ರಮೆಗಳನ್ನೂ ಮೀರಿ ಭಾಷೆಯ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬಂದಿದ್ದು ವಚನ ಸಾಹಿತ್ಯ. ಕನ್ನಡ ಭಾಷೆ ಶರಣರು ನೀಡಿದ ಪ್ರಾತಿನಿಧಿಕ ಧ್ವನಿಯಾಗಿದೆ. ಅಂದಿನ ಕಾಲಘಟ್ಟದ ಸಂಸ್ಕೃತವನ್ನೂ ಕೂಡ ವಿಡಂಬನಾತ್ಮಕವಾಗಿ ಟೀಕಿಸಿದವರು ವಚನಕಾರರು. ಶರಣ ನಗೆಯ ಮಾರಿತಂದೆಯವರ ವಚನ ಅತ್ಯಂತ ವಿಡಂಬನಾತ್ಮಕವಾಗಿದೆ.
ಕಲ್ಲಿಯ ಹಾಕಿ ನೆಲ್ಲವ ತುಳಿದು
ಗುಬ್ಬಿಯ ಸಿಕ್ಕಿಸುವ ಕಳ್ಳನಂತೆ;
ವಾಗದ್ವೈತವ ಕಲಿತು
ಸಂಸ್ಕೃತದ ಮಾತಿನ ಪಸರವ ಮುಂದೆ ಇಕ್ಕಿಕೊಂಡು
ಮತ್ಸ್ಯದ ವಕ್ತ್ರದಲ್ಲಿ ಗ್ರಾಸವ ಹಾಕುವನಂತೆ
ಅದೇತರ ನುಡಿ? ಮಾತಿನ ಮರೆ.
ಆತುರವೈರಿ ಮಾರೇಶ್ವರಾ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-420/ವಚನ ಸಂಖ್ಯೆ-1191)
ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:
ಕಲ್ಲಿ: ಹೆಣಿಕೆಯ ಬಲೆ, ಸಂಕೋಲೆ.
ನೆಲ್ಲು: ಭತ್ತ.
ಪಸರ: ಅಂಗಡಿ.
ವಕ್ತ್ರ: ಮುಖ.
ಗ್ರಾಸ: ನುಂಗುವಿಕೆಗೆ ತುತ್ತಾಗು, ಮರೆಯಾಗು.
12 ನೇ ಶತಮಾನದಲ್ಲಿ ಜನ ಸಾಮಾನ್ಯರ ಸಂವಹನ ಮಾಧ್ಯಮಕ್ಕೆ ತೊಡಕಾಗಿದ್ದ ಮತ್ತು ಜ್ಞಾನಮಾರ್ಗವನ್ನು ನಿರಾಕರಿಸಿದೆ ಎಂದು ಬಿಂಬಿಸಿಕೊಂಡಂಥಾ ಸಂಸ್ಕೃತವನ್ನು ನಿರಾಕರಿಸುವ ವಚನವಿದು. ಸಂಸ್ಕೃತದ ದಾಳಿಯನ್ನು ನಿರಾಕರಿಸಿ ಅದನ್ನು ವಿರೋಧಿಸಿದ್ದು ಈ ವಚನದ ನಿರೂಪಣೆ. ಆ ಕಾಲಘಟ್ಟದಲ್ಲಿ ಧಾರ್ಮಿಕ ಆಚರಣೆಗಳ ಮೂಲಕ ಮಾನವನ ಬದುಕಿಗೆ ಮೌಲ್ಯವನ್ನು ನಿರ್ಧರಿಸಿದ್ದ ಕಾಲವದು. ಸಂಸ್ಕೃತವೆಂದರೆ ಪಾಂಡಿತ್ಯ ಹಾಗೂ ಪಾವಿತ್ರ್ಯದ ದೈಒತಕವೆಂದು ಬಿಂಬಿಸಿದ್ದ ಆಂಧ್ರದಿಂದ ವಲಸೆ ಬಂದ ಆರಾಧ್ಯ ಶೈವ ಬ್ರಾಹ್ಮಣರು ಅರ್ಥಾತ್ ವೀರಮಾಹೇಶ್ವರರು ಅಥವಾ ವೀರಶೈವರು ಜನ ಸಾಮಾನ್ಯರ ಮೇಲೆ ಸಂಸ್ಕೃತವನ್ನು ಹೇರಿ ಶೋಷಣೆ ಮಾಡುತ್ತಿದ್ದ ಕಾಲಘಟ್ಟದಲ್ಲಿ ಕನ್ನಡ ಭಾಷೆಯನ್ನು ಉಛ್ರಾಯ ಸ್ಥಿತಿಗೆ ಕೊಂಡೊಯ್ದವರು ವಚನಕಾರರು.
ಕಳೆದು ಹೋಗಿದ್ದ ಹಲವಾರು ಕನ್ನಡ ಪದಗಳನ್ನು ಬಳಕೆಗೆ ತಂದವರು ವಚನಕಾರರು. ಇಂಥ ಹಳೆಯ ಪದಗಳಿಗೆ ನವ ನವೀನ ಅರ್ಥವನ್ನು ನಿರೂಪಣೆ ಮಾಡುವಲ್ಲಿ ಶರಣರು ಅತ್ಯಂತ ಪ್ರಭುದ್ಧತೆಯನ್ನು ತೋರಿಸಿದರು. ಮೂಲತಃ ಶರಣರು ಕಾಯಕ ಅಥವಾ ತಮ್ಮ ವೃತ್ತಿಯ ಮೂಲದಿಂದ ಬಂದ ಕಾರಣ ಅನೇಕ ವೃತ್ತಿ ಪರಿಭಾಷೆಯ ಶಬ್ದಗಳು ಹೊಸ ನೆಲೆಯನ್ನು ಕಂಡುಕೊಂಡವು. ಕಮ್ಮಟ, ಉಂಡಿಗ, ಚೆಂಗಳ್, ಜಲಗ, ತಗರ, ಬಜಾವಣೆ, ಕಂದಲು ಮಿಟ್ಟೆ ಹೀಗೆ ಹಲವಾರು ಶಬ್ದಗಳು ಮರು ಬಳಕೆಯಲ್ಲಿ ಬಂದವು. ಹಳೆಯ ಪದಗಳಿಗೆ ಹೊಸ ಅರ್ಥವನ್ನು ಕಟ್ಟಿಕೊಟ್ಟಂಥವರು ವಚನಕಾರರು. ಬಯಲು, ಕುರುಹು, ನಿರಾಳ, ಪ್ರಸಾದ, ಕಾಯಕ, ಜಂಗಮ ಪದಗಳಲ್ಲಿ ಹೊಚ್ಚ ಹೊಸ ಅರ್ಥಗಳು ನಿರೂಪಗೊಂಡವು. ಇದರ ಜೊತೆ ಜೊತೆಗೆ ಹೊಸ ಹೊಸ ಶಬ್ದಗಳನ್ನು ಉಪಯೋಗಿಸಿ ವಚನಗಳ ರಚನೆಯಾದವು. ಮಾರಿಂಗೆ, ಹೆಣನುಂಡು, ಮಾರುಗೋಲು, ಪರದೇಶಿ ಇತ್ಯಾದಿ ಶಬ್ದಗಳ ಉತ್ಪತ್ತಿಯಾಯಿತು. ಅನ್ಯ ಭಾಷೆಯ ಶಬ್ದಗಳನ್ನೂ ಕೂಡ ವಚನಕಾರರು ಬಳಸಿದರು. ಬತ್ತೀಸ, ಜಾತಸ್ಯ, ಧೃವಂ ಇತ್ಯಾದಿ.
ಇಂಥ ಚಿಂತನೆಗಳ ಮೂಲಕ ವಚನ ಸಾಹಿತ್ಯವು ಕಟ್ಟಿಕೊಟ್ಟ ಬಹುಮೂಲ್ಯ ವಿಶ್ವಮಾನ್ಯ ತತ್ವಗಳು ಅಂದರೆ:
ಬಡತನ ನಿರ್ಮೂಲನೆ.
ಅನಕ್ಷರತೆಯ ನಿರ್ಮೂಲನೆ.
ಸಂಪತ್ತಿನ ಸಮಾನ ವಿನಿಯೋಗ.
ಸಮ ಸಮಾಜದ ನಿರ್ಮಾಣ.
ವ್ಯಕ್ತಿ ಸ್ವಾತಂತ್ರ್ಯದ ಸ್ಥಾಪನೆ.
ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಮೂಡಿಸಿದ್ದು.
ಭಾರತ ಅಷ್ಟೇ ಅಲ್ಲಾ ಇಡೀ ಪ್ರಪಂಚದ ಇತಿಹಾಸದಲ್ಲಿ ಹನ್ನೆರಡನೆ ಶತಮಾನ ಅತ್ಯಂತ ಮಹತ್ವಪೂರ್ಣವಾದುದು. ಅಜ್ಞಾನ, ಜಾತೀಯತೆ, ಮತಾಂಧತೆ, ಶೋಷಣೆ, ಮೌಡ್ಯಗಳಿಂದ ಮುಳುಗಿಹೋಗಿದ್ದ ಸಮಾಜವನ್ನು ಮೇಲೆತ್ತಲು ಬಸವಣ್ಣನವರು ರಾಜಿ ಇಲ್ಲದ ಬದ್ಧತೆ, ಪ್ರಶ್ನಾತೀತವಾದ ಜನಪರ ಕಾಳಜಿಯ ಮೂಲಕ ಮಾಡಿದ ಪ್ರಯತ್ನ-ಪ್ರಯೋಗಗಳು ಪ್ರಪಂಚದ ಎಲ್ಲ ಆಡಳಿತಗಾರರ ಆದರ್ಶ ಎನ್ನುವುದನ್ನು ನಾವು ಗಮನಿಸಬೇಕು. ಕನ್ನಡ ಮತ್ತು ಕನ್ನಡಿಗರ ಅಸ್ಮಿತೆಯನ್ನು ಎತ್ತಿ ಹಿಡಿದ ಬಸವಣ್ಣನವರು ಸಾಮಾಜಿಕ ನ್ಯಾಯದ ಮೊದಲ ಹರಿಕಾರರು. ಬಸವಣ್ಣನವರನ್ನು ಕರ್ನಾಟಕದ “ಸಾಂಸ್ಕೃತಿಕ ನಾಯಕ” ಎಂದು ಕರ್ನಾಟಕ ಸರ್ಕಾರ ದಿನಾಂಕ 10.02.2024 ರಂದು ಘೋಷಣೆ ಮಾಡಿತು. ಹಾಗಾಗಿ ಈ ವರ್ಷದ ಬಸವ ಜಯಂತಿ ಅತ್ಯಂತ ವಿಶೇಷ ಸಂದರ್ಭವನ್ನು ನಿರ್ಮಾಣ ಮಾಡಿದೆ. ಸಾಂಸ್ಕೃತಿಕ ನಾಯಕ ಎನ್ನುವಲ್ಲಿ ಎರಡು ಶಬ್ದಗಳನ್ನು ನಾವು ನೋಡತೀವಿ. ಒಂದು ಸಂಸ್ಕೃತಿ ಮತ್ತು ಇನ್ನೊಂದು ನಾಯಕ. ಈ ಎರಡೂ ಶಬ್ದಗಳ ಮೂಲಕ ಬಸವಣ್ಣನವರನ್ನು ಅರ್ಥ ಮಾಡಿಕೊಳ್ಳುವದು ಈ ಸಣ್ಣ ಪ್ರಯತ್ನ.
ಈ ಸಂಸ್ಕೃತಿ ಎನ್ನುವ ವಿಷಯವೇ ಬಹಳ ವಿಸ್ತೃತವಾದದ್ದು. ಸಂಸ್ಕೃತಿ ಎನ್ನುವ ಶಬ್ದ ಬಹಳಷ್ಟು ಬಳಕೆಗೆ ಬಂದಿದ್ದು ತೀರ ಇತ್ತೀಚೆಗೆ, ಮೊದಲು ಇರಲಿಲ್ಲ ಅಂತಲ್ಲಾ, ಅಂದರೆ ಸರಿ ಸುಮಾರು 175 ರಿಂದ 200 ವರ್ಷಗಳಲ್ಲಿ ರೂಢಿಗತವಾಗಿ ಬಂದಿದೆ. ಸಂಸ್ಕೃತಿಯನ್ನು ಇಂಗ್ಲೀಷ್ ಭಾಷೆಯಲ್ಲಿ Culture ಎಂದು ಕರೆಯುತ್ತಾರೆ. ಇದು Culer ಎನ್ನುವ Latin ಭಾಷೆಯಿಂದ ಎರವಲು ಪಡೆದ ಶಬ್ದ. ಬೆಳೆಸುವುದು, ಪೋಷಣೆ ಮಾಡುವುದು, ಭೂಮಿಯನ್ನು ಉತ್ತುವುದು-ಬಿತ್ತುವುದು ಎನ್ನುವ ಹೀಗೆ ಹತ್ತು ಹಲವಾರು ಅರ್ಥಗಳು ಈ ಸಂಸ್ಕೃತಿ ಶಬ್ದಕ್ಕೆ ಇವೆ. ನಡವಳಿಕೆಗಳು, ನಂಬಿಕೆಗಳು, ಮೌಲ್ಯಗಳು ಸಾಂಕೇತಿಕ ತತ್ವ ಸಿದ್ಧಾಂತಗಳು ಹೀಗೆ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಸಾಗುತ್ತಾ ಹೋಗುವ ಒಂದು ಜೀವನ ಕ್ರಮ.

ಪೋಲಂಡ್ ಸಂಜಾತ ಬ್ರಿಟೀಷ್ ಮಾನವಶಾಸ್ತ್ರ ವಿಜ್ಞಾನಿ ಬ್ರೋನಿಸ್ಲಾವ್ ಮಾಲಿನೋವಸ್ಕಿ ಪ್ರಕಾರ:
“ಸಂಸ್ಕೃತಿ ಎಂದರೆ ಮಾನವ ತನ್ನ ಬದುಕಿನ ಗುರಿಗಳನ್ನು ರೂಪಿಸಿಕೊಳ್ಳಲು ಸಾಧಿಸಿಕೊಳ್ಳಲು ರೂಢಿಸಿಕೊಂಡ ಸಾಧನವೇ ಸಂಸ್ಕೃತಿ. ಪ್ರಕೃತಿದತ್ತವಾದಂಥ ಪದಾರ್ಥಗಳನ್ನು ಮನುಷ್ಯ ತನ್ನ ವಿವೇಕ ಮತ್ತು ವಿವೇಚನೆಯಿಂದ ಯಾವ ರೀತಿಯಾಗಿ ಬಳಸಿಕೊಳ್ಳುತ್ತಾನೆ ಅಥವಾ ರೂಪಾಂತರಿಸಿಕೊಳ್ಳುತ್ತಾನೆ ಎನ್ನವುದೇ ಸಂಸ್ಕೃತಿ”
ಎಂದು ಒಂದು ನಿರೂಪವನ್ನು ನೀಡಿದ್ದಾರೆ.
ಶರಣರು ಪ್ರಕೃತಿದತ್ತವಾದ ಸಂಸ್ಕೃತಿಗಳನ್ನು ಸಂಸ್ಕರಿಸಿ ಕೊಟ್ಟರು. ಬೇಸಾಯವನ್ನು ಮಾಡಿದರು, ಆಯಗಾರರು ಅಥವಾ ವಿವಿಧ ಕುಶಲ ಕರ್ಮಿಗಳು ಅನೇಕ ಉತ್ಪನ್ನಗಳನ್ನು ತಯಾರು ಮಾಡಿದರು, ಆಧ್ಯಾತ್ಮವಾದಿಗಳಾದರು, ಸಂಗೀತಗಾರರಾದರ, ಕಲಾವಿದರಾದರು. ಹೀಗೆ ಶರಣರ ಬದುಕಿನ ವಿವಿಧ ಮುಖಗಳನ್ನು ನೋಡತಾ ಹೋದಂತೆಲ್ಲಾ ಸಂಸ್ಕೃತಿಯ ಒಂದು ವೈಶಿಷ್ಠ್ಯಪೂರ್ಣ ಬದುಕು ನಮ್ಮ ಮುಂದೆ ಅನಾವರಣಗೊಳ್ಳುತ್ತಾ ಸಾಗುತ್ತದೆ. ಇಂಥ ಅಭೂತಪೂರ್ವ ಸಂಸ್ಕೃತಿಗೆ ಮುನ್ನುಡಿ ಬರೆದವರು ಬಸವಣ್ಣನವರು.
ಸಂಸ್ಕೃತಿ ಸಮಾಜದ ಪ್ರತಿಯೊಬ್ಬ ಪ್ರಜೆಗಳಿಗೂ ನಂಬಿಕೆಗಳನ್ನು, ಮೌಲ್ಯಗಳನ್ನು ಮತ್ತು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡುವುದರ ಮೂಲಕ ಎಲ್ಲ ಸಂಪ್ರದಾಯಗಳನ್ನು, ನೈತಿಕ ನಿಯಮಗಳನ್ನು ಸಮಾಜದಲ್ಲಿ ಬಿತ್ತುವದನ್ನು ಬೆಳೆಸುತ್ತದೆ. ಹುಟ್ಟಿದ ಮನುಷ್ಯ ಪ್ರಕೃತಿದತ್ತವಾಗಿ ಬಂದಂತಹ ಜ್ಞಾನವನ್ನು ಹೊರತು ಪಡಿಸಿ ವಿದ್ಯೆಯನ್ನು ಕಲಿತು ನಾಗರೀಕತೆಯನ್ನು ಬೆಳೆಸಿಕೊಂಡು ಬದುಕಿನಲ್ಲಿ ಏನಾದರೂ ಬದಲಾವಣೆ ಮಾಡಿಕೊಂಡು ಸಮಾಜದ ಜೊತೆಗೆ ಸಾಗುವುದು ಸಂಸ್ಕೃತಿ.
ಸಂಸ್ಕೃತಿ ಎನ್ನುವುವುದು ವ್ಯಕ್ತಿಗತವಾಗಿ ಬೆಳದು ಸಮಷ್ಠಿಯಲ್ಲಿ ತನ್ನ ಫಲವನ್ನು ಕೊಡತಾ ಹೋಗುತ್ತದೆ. ಹೀಗೆ ಸಂಸ್ಕೃತಿ ಅನ್ನುವಂಥಾದ್ದು ಬೆಳೆದು ಬೆಳದು ಪ್ರತಿಯೊಂದು ಸಮುದಾಯಗಳಲ್ಲಿ, ಪ್ರದೇಶಗಳಲ್ಲಿ, ರಾಜ್ಯಗಳಲ್ಲಿ, ರಾಷ್ಟ್ರಗಳಲ್ಲಿ ಬೆಳೆದು ನಿಲ್ಲುತ್ತದೆ. ಇಂಥ ಸಂಸ್ಕೃತಿ ಬಸವಣ್ಣನವರ ಬದುಕಿನುದ್ದಕ್ಕೂ ಪ್ರತಿಫಲನವಾದದ್ದನ್ನು ನಾವು ಕಾಣಬಹುದು. ಬಸವಣ್ಣನವರ ಒಂದು ವಚನ ಇಲ್ಲಿ ಬಹಳ ಪ್ರಸ್ತುತ ಅನಿಸತದೆ.
ಭಕ್ತಿ ಸುಭಾಷೆಯ ನುಡಿಯ ನುಡಿವೆ,
ನುಡಿದಂತೆ ನಡೆವೆ,
ನಡೆಯೊಳಗೆ ನುಡಿಯ ಪೂರೈಸುವೆ,
ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ.
ಒಂದು ಜವೆ ಕೊರತೆಯಾದಡೆ
ಎನ್ನನದ್ದಿ ನೀನೆದ್ದು ಹೋಗು,
ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-115/ವಚನ ಸಂಖ್ಯೆ-441)
ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:
ಜವೆ: ಕುರೆಯ ಬಾಲದ ಕೂದಲು, ಜವೆಗೋದಿ (ಗೊಂಜಾಳ) ತೆನೆಯ ಕೂದಲು.
“ಭಕ್ತಿ ಸುಭಾಷೆ” ಅಂತ ಹೇಳತಾರೆ ಬಸವಣ್ಣನವರು. ಸುಭಾಷೆ ಅನ್ನುವ ಅರ್ಥದಲ್ಲಿ. ಅವರ ಈ ವಚನದಲ್ಲಿ “ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ, ನಡೆಯೊಳಗೆ ನುಡಿಯ ಪೂರೈಸುವೆ”. ಇದು ಭಾಷೆಯ ಸಂಸ್ಕೃತಿ. ನಡೆಯೊಳಗೆ ನನ್ನ ನುಡಿಯನ್ನ ಪೂರೈಸುವೆ ಅಥವಾ ನಡೆ ನುಡಿ ಒಂದಾಗಿರುವೆ ಅಂತ ಹೇಳಿ ಮಾತು ಕೊಡೋದು ಅಷ್ಟೇ ಅಲ್ಲಾ ನಡೆಯೋದು. ಇಷ್ಟಕ್ಕೆ ಅಲ್ಲಾ ಇದು ಬರೀ ಹೇಳಿಕೆಗಳಲ್ಲಾ. “ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ”. ಈ ತ್ರಾಸು, ಕಟ್ಟಳೆ, ತಕ್ಕಡಿ ಅಂತೀವಲ್ಲಾ ಅದನ್ನು ನಿನ್ನ ಕೈಯಲ್ಲಿ ಹಿಡಿದುಕೋ. ನಾನು ಹೇಳಿದ ಮಾತಿನಲ್ಲಿ ಒಂದು “ಜವೆ ವ್ಯತ್ಯಾಸವಾದರೂ ಎನ್ನನದ್ದಿ ನೀನೆದ್ದು ಹೋಗಾ”. ನನ್ನನ್ನ ಮುಗಿಸಿ ಬಿಡು ನೀನು ಹೋಗು. ಇಷ್ಟು ಪ್ರಮಾಣಬದ್ಧವಾಗಿ ಇಷ್ಟು ಆತ್ಮ ಸ್ಥೈರ್ಯದಿಂದ ಹೇಳುವ ಶಕ್ತಿ ಬಸವಣ್ಣನವರಲ್ಲಿ ಇತ್ತಲ್ಲಾ ಅದು ಇವತ್ತು ಎಷ್ಟು ಜನರಿಗೆ ಇದೆ ಎನ್ನುವ ಅರ್ಥದಲ್ಲಿ ನಾವಿವತ್ತು ಇದನ್ನ ಕೇಳಬೇಕು. ಬಸವಣ್ಣನವರು ಪ್ರಸ್ತುತ ಆಗೋದು ಈ ಕಾರಣಕ್ಕಾಗಿ. ನುಡಿದಂತೆ ನಡೆಯಬೇಕು. ಅದು ಭಕ್ತಿ ಸುಭಾಷೆ ಇರಬೇಕು. ಅದು ಬರೀ ಭಾಷೆ ಆಗಬಾರದು. ನಡೆ ಕೂಡ ಆಗಬೇಕು ಅನ್ನೋ ಅರ್ಥದಲ್ಲಿ ಆ ಮಾತನ್ನು ಕೇಳಬೇಕು. ಇದು ಬಸವಣ್ಣನವರು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡು ಒಂದು ಕ್ರಾಂತಿಯ ಸ್ವರೂಪದಲ್ಲಿ ಬಂದಂಥ ಒಂದು ಸಂಸ್ಕೃತಿ.
ಇನ್ನು ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಅಥವಾ ಸಂಸ್ಕೃತಿ ಹೇಗಿರಬೇಕು. ಈಗಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸಂಸ್ಕೃತಿ ಅಂದರೆ ಬಾಯಿಗೆ ಬಂದದ್ದು ಮಾತಾಡೋದಲ್ಲಾ. ಬಸವಣ್ಣನವರು ಬಹಳ ಅರ್ಥಪೂರ್ಣವಾಗಿ ತಮ್ಮ ಮಾತಲ್ಲಿ ಹೇಳತಾರೆ.
ತಾಳ ಮಾನ ಸರಿಸವನರಿಯೆ,
ಓಜೆ ಬಜಾವಣೆ ಲೆಕ್ಕವನರಿಯೆ,
ಅಮೃತಗಣ ದೇವಗಣವನರಿಯೆ,
ಕೂಡಲಸಂಗಮದೇವಾ,
ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-129/ವಚನ ಸಂಖ್ಯೆ-494)
ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:
ತಾಳಮಾನ: ಹಾಡಿನಲ್ಲಿ ತಾಳ, ಲಯ, ಧಾಟಿ.
ಓಜೆ ಬಜಾವಣೆ: ಹಾಡಿಗೆ ಆಕರ್ಷಣೆಯಾಗುವ ವಾದ್ಯ.
ಇನ್ನೊಬ್ಬರಿಗೆ ನೋವು ಮಾಡಿ ಮಾತಾಡೋದಲ್ಲಾ. ನಿನಗೆ ಕೇಡಿಲ್ಲವಾಗಿ ಎದುರಿಗೆ ಇದ್ದವರಿಗೆ ಕೇಡು ಆಗಲಾರದ ರೀತಿಯಲ್ಲಿ ಹಾಗೆ ಮಾತಾಡುವುದು ಅಭಿವ್ಯಕ್ತಿ ಸಂಸ್ಕೃತಿ. ಓಜ ಬಜಾವಣೆಯ ಲೆಕ್ಕವನರಿಯೆ, ಅಮೃತಗಣ ದೇವಗಣವನರಿಯೆ, ಕೂಡಲಸಂಗಮದೇವಾ ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆನು. ಈ ನಾನು ಒಲಿದಂತೆ ಹಾಡುವೆನು ಅನ್ನೋದೆ ನಿಜವಾದ ಸಂಸ್ಕೃತಿ ಅಥವಾ ಸ್ವಾತಂತ್ರ್ಯದ ಪರಿಕಲ್ಪನೆ. ಮೌಖಿಕ ಅಥವಾ ಮಾತಿನ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಅಂತ ಇವತ್ತು ನಾವು ಸಂವಿಧಾನದಲ್ಲಿ ಹೇಳತೇವಲ್ಲಾ ಆ ವಾಕ್ ಸ್ವಾತಂತ್ರ್ಯದ ಹರಿಕಾರರು ಬಸವಣ್ಣನವರು. ಮಾತಾಡುವ ಸಂಸ್ಕೃತಿಯನ್ನು ಬಸವಣ್ಣನವರು ನಮಗೆ ಹೇಳಿಕೊಟ್ಟರು. ಆದರೆ ಸ್ವಾತಂತ್ರ್ಯದಲ್ಲಿ ಇನ್ನೊಬ್ಬರಿಗೆ ನೋವು ಆಗಲಾರದ ಹಾಗೆ ಮಾತನಾಡುವಂಥ ಒಂದು ಎಚ್ಚರಿಕೆಯನ್ನೂ ಕೊಟ್ಟರು. ಇವತ್ತಿನ ಭಾಷೆಯನ್ನು ನೋಡತೇವೆ ನಾವು ಬಾಯಿ ತೆಗೆದರೆ ಇನ್ನೊಬ್ಬರಿಗೆ ನೋವು ಮಾಡೋದೆ ನಮ್ಮ ಉದ್ದೇಶ ಇರುವಾಗ ಬಸವಣ್ಣನವರ ಈ ಮಾತು ನಿಜವಾಗಿಯೂ ಪ್ರಸ್ತುತ ಆಗತದೆ ಅನ್ನೋದನ್ನ ನಾವು ಗಮನಿಸಬೇಕು. ಇದು ವಚನ.
ಬಸವಣ್ಣನವರ ಇನ್ನೊಂದು ವಚನ ಸಮಾಜದಲ್ಲಿನ ನಮ್ಮ ನಡೆ-ನುಡಿ ಹಾಗೂ ಭಾಷೆ ಹೇಗಿಬೇಕೆಂಬುದನ್ನು ನಿರೂಪಣೆ ಮಾಡುತ್ತದೆ. ನಮ್ಮ ವಿಕೃತ ಭಾಷಾ ಪ್ರಯೋಗದಿಂದಾಗುವ ಅನಹುತಗಳನ್ನು ಬಸವಣ್ಣನವರ ನಮಗೆ 900 ವರ್ಷಗಳ ಹಿಂದೆಯೇ ನಮ್ಮನ್ನು ಎಚ್ಚರಿಸಿದ್ದಾರೆ. ನಮ್ಮ ಭಾಷೆಯಿಂದಾಗುವ ವೈರತ್ವವನ್ನು ಬೆಳೆಸಬಾರದು ಮತ್ತು ಅಂತಹ ಯಾವುದೇ ನಡೆ-ನುಡಿಗಳು ತರವಲ್ಲ ಎನ್ನುವುದು ಬಸವಣ್ಣನವರ ಈ ವಚನದ ಆಶಯ.
ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ?
ತನಗಾದ ಆಗೇನು? ಅವರಿಗಾದ ಚೇಗೇನು?
ತನುವಿನ ಕೋಪ ತನ್ನ ಹಿರಿಯತನದ ಕೇಡು.
ಮನದ ಕೋಪ ತನ್ನ ಅರಿವಿನ ಕೇಡು.
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವಾ.
(ಸಮಗ್ರ ವಚನ ಸಂಪುಟ: ಒಂದು-2021/ಪುಟ ಸಂಖ್ಯೆ-62/ವಚನ ಸಂಖ್ಯೆ-248)
ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ:
ಆಗೇನು: ಆಗಬೇಕಾದದ್ದು, ಮುಂದೆ ಆಗುವುದು, ಭವಿಷ್ಯ.
ಚೇಗು: ಬೇಡವಾದದ್ದು, ಆಪತು, ಭಂಗ, ಕೇಡು, ಹಾನಿ, ದೋಷ.
ಅರಿವು, ನಡವಳಿಕೆ ಮತ್ತು ಭಾಷಾ ಪ್ರಯೋಗ ಅತಿರೇಕವಾಗಿದ್ದರೆ ನಮ್ಮ ಮನೆಯನ್ನೇ ಸುಡುತ್ತದೆ. ಬಸವಣ್ಣನವರು ನಮ್ಮ ಕಿವಿಯಲ್ಲಿ ಹೇಳಿದಂಥ ಈ ಭಾಷಾ ಪ್ರಯೋಗವನ್ನು ನಾವು ಅಳವಡಿಸಿಕೊಳ್ಳಬೇಕು. ಈ ರೀತಿಯಾಗಿ ವಚನಗಳನ್ನು ಕಟ್ಟಿಕೊಟ್ಟು ಬಸವಣ್ಣನವರು ನಮಗೆ ನಿತ್ಯ ಪ್ರಸ್ತುತ ಆಗತಾರೆ ಅನ್ನೋದು ನಾನಿಲ್ಲಿ ಹೇಳಬೇಕಾಗಿದೆ. ಹಾಗಾಗಿ ಬಸವಣ್ಣನವರು ನಮ್ಮ ನಾಡಿನ ಭಾಷಾ ವಿಜ್ಞಾನಿಗಳು ಮತ್ತು ಸಾಂಸ್ಕೃತಿಕ ನಾಯಕರು.
Globalization & Liberalization ನಂತಹ ಈ ಸಂಕೀರ್ಣ ಕಾಲಘಟ್ಟದಲ್ಲಿ ಯಾವುದೇ ಒಂದು ಸ್ಥಳೀಯ ಅಥವಾ ದೇಶೀಯ ಭಾಷೆ ತನ್ನ ಶಕ್ತಿಯನ್ನು ಮೀರಿ ಅದು ಜಾಗತಿಕ ಭಾಷೆ ಆಗುವತ್ತ ಸಾಗಬೇಕಾಗಿದೆ. ಸ್ಥಳೀಯ ಮತ್ತು ದೇಶೀಯ ಭಾಷೆಗಳಿಗೆ ತನ್ನದೇ ಆದಂತಹ ಅಸ್ಮಿತೆ ಕೂಡ ಇದೆ. ಈ ಭಾಷೆಗಳಿಗೆ ನಿಜವಾದ ಆತ್ಮಾಭಿಮಾನದ, ಸ್ವಾಭಿಮಾನದ ಸಂಕೇತ ಎನ್ನುವದನ್ನು ತಿಳಿಸಬೇಕಾದ ಅಗತ್ಯತೆ ಎಂದಿಗಿಂತಲೂ ಇವತ್ತು ಬಹಳವಾಗಿದೆ. ಬಸವಾದಿ ಶರಣರು ಭಾಷೆಯನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡದ್ದನ್ನು ನಾವು ಕಾಣಬಹುದು. ನುಡಿದಂತೆ ನಡೆಯುವ ತತ್ವ ಸಿದ್ಧಾಂತವನ್ನು ಅವರ ಇಡೀ ಬದುಕಿನಲ್ಲಿ ಹಾಸು ಹೊಕ್ಕಾಗಿದ್ದನ್ನು ನಾವು ಕಾಣಬಹುದು. ವಚನಗಳನ್ನು ಕೇವಲ ಅಧ್ಯಯನಕ್ಕೆ ಸೀಮಿತ ಮಾಡದೇ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವತ್ತ ಗಮನ ಹರಿಸೋಣ ಅಂತ ಹೇಳತಾ ಈ ಉಪನ್ಯಾಸಕ್ಕೆ ವಿರಾಮ ಹೇಳುತ್ತೇನೆ.
ಸಂಗ್ರಹ ಮತ್ತು ಲೇಖನ:
ಡಾ. ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಇಂಗ್ಲೀಷ್ ಶಾಲೆಯ ಹತ್ತಿರ
ಸುಭಾಷ್ ನಗರ, ಕ್ಯಾತ್ಸಂದ್ರ
ತುಮಕೂರು – 572 104
ಮೋ. ನಂ: +91 9741 357 132.
ಈ-ಮೇಲ್: vijikammar@gmail.com
ಸಹಾಯಕ ಗ್ರಂಥಗಳು:
• ಸೌಹಾರ್ದ ಪಥ: ಸಂ. ಡಾ. ಗುರುಲಿಂಗಪ್ಪ ಧಬಾಲೆ, ಡಾ. ಲಕ್ಷ್ಮಿಕಾಂತ ಪಂಚಾಳ.
• ಆಧುನಿಕ ಜಗತ್ತಿಗೆ ಶ್ರೀ ಬಸವೇಶ್ವರರ ಹೊಸ ಸಂದೇಶ: ಡಾ. ಎಸ್. ವಿ. ಅಯ್ಯನಗೌಡರ, ಶ್ರೀಮತಿ. ಶಕುಂತಲಾ.
• ನಾನು ಕಲಬುರ್ಗಿ: ಡಾ. ರಾಜೇಂದ್ರ ಚೆನ್ನಿ, ಡಾ. ರಹಮತ್ ತರೀಕೆರೆ, ಡಾ. ಮೀನಾಕ್ಷಿ ಬಾಳಿ.
• ಬಸವಣ್ಣನ ವಚನಗಳ ವರ್ಣನಾತ್ಮಕ ವ್ಯಾಕರಣ: ಡಾ. ನಾಗರಾಜ ದೊರೆ.
• ಜಂಗಮಶ್ರೀ: ಸಂ. ಡಾ. ಸಯ್ಯದ್ ಮುಯಿನ್, ಪ್ರೊ. ಶಪಾನ.
• ಭಾಷೆ: ಸಂ. ಕೆ. ವಿ. ನಾರಾಯಣ.
• ಲಿಪಿಗಳ ಹುಟ್ಟು ಮತ್ತು ಬೆಳವಣಿಗೆ: ಡಾ. ದೇವರಕೊಂಡಾ ರೆಡ್ಡಿ
• ವಚನ ಸಾಹಿತ್ಯ ಮತ್ತು ಆಧುನಿಕ ಕನ್ನಡ ಸಾಹಿತ್ಯ ಮುಖಾಮುಖಿ: ಸಂ. ಡಾ. ವೀರಣ್ಣ ರಾಜೂರ.
• ವಚನ ಸಾಹಿತ್ಯದಲ್ಲಿ ಸಮಾಜೋ-ಭಾಷಿಕ ಚಿಂತನೆಗಳು: ಡಾ. ವಿ. ಶಿವಾನಂದ.
• ಪರ್ಯಾಯ ಸಂಸ್ಕೃತಿ ವಚನ ಸಂಪುಟ: ಡಾ. ಸಿ. ವೀರಣ್ಣ.
• ಬದುಕು ಬದಲಿಸಬಹುದು: ನೇಮಿಚಂದ್ರ.
• ಸಮಗ್ರ ಹೊಸಗನ್ನಡ ವ್ಯಾಕರಣ: ಶ್ರೀ. ಆಯ್. ಎಸ್. ಅರಳಗುಪ್ಪಿ.
• ಸಂಸ್ಕೃತಿ ಕಥನ: ಸಂ. ಶ್ರೀ. ಅಗ್ರಹಾರ ಕೃಷ್ಣಮೂರ್ತಿ.
• ಹೊಸಗನ್ನಡದ ಅರುಣೋದಯ: ಡಾ. ಶ್ರೀನಿವಾಸ ಹಾವನೂರ.
• ಯುಗಯಾತ್ರೀ ಭಾರತೀಯ ಸಂಸ್ಕೃತಿ: ಸಂ. ಡಾ. ಹರಿದಾ ಭಟ್ಟಾಚಾರ್ಯ.
• ಅವಿಶ್ರಾಂತ: ಸಂ. ಡಾ. ಕಲ್ಯಾಣರಾವ ಪಾಟೀಲ, ಡಾ. ರಘುಶಂಖ ಭಾತಂಬ್ರಾ, ಡಾ. ಶರಣಬಸಪ್ಪ ವಡ್ಡನಕೇರಿ.
• ಬೆಟ್ಟದ ಮೇಲಿನ ಬೆಳಕು: ಸಂ. ಡಾ. ಎಚ್. ಎಲ್. ಮಲ್ಲೇಶಗೌಡ, ಜ. ನಾ. ತೇಜಶ್ರೀ, ಅರಕಲಗೂಡು ಜಯಕುಮಾರ.
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in and admin@vachanamandara.in
ಬಹಳ ಸುಂದರವಾಗಿ ಅರ್ಥಪೂರ್ಣವಾಗಿ ಭಾಷೆ ಮತ್ತು ಭಾಷಾ ಸಾಹಿತ್ಯದ ಸಾಂಸ್ಕೃತಿಕ ತಳಹದಿ ಅದರ ಮೇಲೆ ನೆಡೆ ನುಡಿಯ ಪರಿಪೂರ್ಣ ಅರಿವು ಮೂಡಿಸುವ ವಿಚಾರವನ್ನು ಶರಣರ ವಚನ ಪ್ರಸ್ತಾಪಿಸಿದ ಪರಿ ಹಾಗೂ ವಚನ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂಬುದನ್ನು ಚೆನ್ನಾಗಿ ಮೂಡಿ ಅರ್ಥಪೂರ್ಣವಾಗಿವೆ ಎಂದು ತಿಳಿಸಲು ಇಚ್ಚಿಸುತ್ತೇನೆ