ಅಲೌಕಿಕತೆಯಲ್ಲಿ ಲೌಕಿಕತೆ / ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಈ ಜಗತ್ತು ಮಿಥ್ಯ, ನಶ್ವರ, ಸಂಸಾರ ಅನ್ನೊದು ಒಂದು ಘೊರಾರಣ್ಯ ಎಂಬ ವಾದಗಳನ್ನು ಅಲ್ಲಗಳೆದು ಈ ಜಗತ್ತೇ ಒಂದು ಸಾಧನಾ ರಂಗ, ಸಂಸಾರ ಅನ್ನೊದು ಸಾಧನೆಗೆ ವೇದಿಕೆ ಅಂತ ನಂಬಿದೋರು 12 ನೇ ಶತಮಾನದ ಬಸವಾದಿ ಶಿವಶರಣರು. ಪ್ರಪಂಚದಲ್ಲಿದ್ದು ಸಂಸಾರದ ಸುಳಿಯಲ್ಲಿ ಸುತ್ತುತ್ತಲೇ ದಡ ಸೇರಬೇಕೆಂಬುದು ಶರಣರ ಅಭಿಪ್ರಾಯ ಮತ್ತು ಅದೇ ರೀತಿ ನಡೆದಿದ್ದಾರೆ ಕೂಡ. ಗೃಹಸ್ಥ ಜೀವನ ಬೇಡವೆಂದು ಅದಕ್ಕೆ ಬೆನ್ನು ತಿರುಗಿಸಿದ ಕೆಲವೇ ಶಿವಶರಣರಲ್ಲಿ ಸಿದ್ಧರಾಮರು, ಚೆನ್ನಬಸವಣ್ಣನವರು ಮತ್ತು ವೀರ ವಿರಾಗಿಣಿ ಮಹಾದೇವಿಯಕ್ಕ ಪ್ರಮುಖರಾಗಿದ್ದಾರೆ. ಆದರೆ ಇವರ‍್ಯಾರೂ ಸಂಸಾರ ಬಿಟ್ಟು ಸನ್ಯಾಸಿಗಳಾಗಿ ಗುಹಾಂತರ್ಗತರಾಗಿ ಉಳಿಯಲಿಲ್ಲ ಅನ್ನೊದು ಗಮನಾರ್ಹ ಸಂಗತಿ. ಅಕ್ಕಮಹಾದೇವಿಯವರು ಮಾತ್ರ ಪ್ರಾಪಂಚಿಕ ಬದುಕನ್ನ ನಿರಾಕರಿಸಿ ತನ್ನ ಆರಾಧ್ಯ ದೈವ ಚೆನ್ನ ಮಲ್ಲಿಕಾರ್ಜುನನ್ನ ಸೇರಲು ಶ್ರೀಶೈಲ ಗಿರಿಯನ್ನೆರಿ ಕದಳಿ ಬನದಲ್ಲಿ ಬಯಲಾಗಿ ಗುರಿಯನ್ನ ಸಾಧಿಸಿಕೊಂಡರು.

ಎಲ್ಲ ಶರಣರಿಂದ ಅಕ್ಕ ಎನಿಸಿಕೊಂಡು ಜಗದ ಅಕ್ಕನಾಗಿ ನಿಂತ ಉಡುತಡಿ ಗ್ರಾಮದ ಮಹಾದೇವಿಯವರು ಬಾಲ್ಯದಿಂದಲೆ ಶರಣ ಸತಿಯಾಗಿ ತನ್ನ ಲಿಂಗ ಪತಿಯನ್ನ ಆರಾಧಿಸಿದವರು. ತನ್ನ ಅಲೌಕಿಕ ಪತಿಯನ್ನು ಆರಾಧಿಸಿದವರು. ಅದಕ್ಕಾಗಿ ಅರಸೊತ್ತಿಯನ್ನು ಧಿಕ್ಕರಿಸಿ ಹೊರ ಬಂದದ್ದು ಸಹಜವಾಗಿತ್ತು. ಅಲ್ಲದೆ ಅಲ್ಲಮ ಪ್ರಭುಗಳು ಮತ್ತು ಶಿವಯೋಗಿ ಸಿದ್ದರಾಮರು, ಚೆನ್ನಬಸವಣ್ಣನವರು ತಮ್ಮದೇ ಆದ ಸಂಸಾರ ಕಟ್ಟಿಕೊಳ್ಳದಿದ್ದರೂ ಜಗತ್ ಸಂಸಾರಿಗಳಾಗಿ ಸಾಧನೆ ಮಾಡಿ ಸಿದ್ಧ ಪಡೆದವದಾಗಿದ್ದರು. ಈ ಎಲ್ಲ ಶರಣರ ಮಧ್ಯ ವೀರ ವಿರಾಗಿಣಿ ಮಹಾದೇವಿಯಕ್ಕನವರು ವಿಭಿನ್ನವಾಗಿ ನಿಲ್ಲುತ್ತಾರೆ. ಹೆಣ್ಣಾಗಿ ಹುಟ್ಟಿ ಆಧ್ಯಾತ್ಮಿಕದ ಉತ್ತುಂಗಕ್ಕೆ ಏರಿದ್ದ ಒಂದಾದರೆ ಸಂಸಾರವನ್ನೆಲ್ಲ ಬಿಟ್ಟು ದಿಗಂಬರೆಯಾಗಿ ಸಾಧನಾ ಪಥದಲ್ಲಿ ನಡೆದು, ತಾನು ಲೌಕಿಕ ವ್ಯಕ್ತಿಯಾದರೂ ಅಲೌಕಿಕ ಪತಿಯನ್ನು ಸೇರಬಯಸಿ ಬಯಲಲ್ಲಿ ಬಯಲಾದದ್ದು ಮತ್ತೊಂದು ವಿಶೇಷ. ಮಹಾದೇವಿಯಕ್ಕನವರ ವಚನಗಳಲ್ಲಿ ಕಂಡುಬರುವದೇನೆಂದರೆ, ಅಲೌಕಿಕ ಆಧ್ಯಾತ್ಮಿಕ ಜ್ಞಾನದ ಜೊತೆಗಿನ ಲೌಕಿಕ ಜ್ಞಾನದ ಬಗ್ಗೆಯೂ ಬೆರಗು ಉಂಟಾಗುತ್ತದೆ. ಅಂತೆಯ ತನ್ನ ಈ ಅಂತರ್ಯದ ಶಕ್ತಿಯಿಂದ ಲೌಕಿಕ ಜನರ ನಿಂದೆ-ನಿಷ್ಟೂರಗಳಿಗೆ ಹೆದರದೆ ಬೆದರದೆ, ಆತ್ಮಸ್ಥೆೈರ್ಯ ಕುಂದಿಸದೆ ಎಲ್ಲದರಲ್ಲಿಯೂ ಹೋರಾಡಿ ಗೆದ್ದರು. ವ್ಯೋಮಮೂರ್ತಿ ಮೇರು ವ್ಯಕ್ತಿತ್ವದ ಅಲ್ಲಮ ಪ್ರಭುಗಳ ಪರೀಕ್ಷೆಯಲ್ಲಿ ಗೆದ್ದು ಅಪ್ಪಟ ಬಂಗಾರವಾಗಿ ಹೊರ ಹೊಮ್ಮಿದರು.

ಪ್ರಪಂಚದಲ್ಲಿ ಸುಖ ದುಃಖ ಎಲ್ಲವೂ ಇರುತ್ತದೆ. ಅದಕ್ಕಾಗಿ ತನ್ನ ಈ ವಚನದಲ್ಲಿ ಈ ರೀತಿ ಹೇಳಿದ್ದಾರೆ.

ಹೆದರದಿರು ಮನವೆ, ಬೆದರದಿರು ತನುವೇ,
ನಿಜವನರಿತು ನಿಶ್ಚಿಂತನಾಗಿರು.
ಫಲವಾದ ಮರನ ಕಲ್ಲಲಿ ಇಡುವದೊಂದು ಕೋಟಿ,
ಎಲವರದ ಮರನ ಇಡುವರೊಬ್ಬರ ಕಾಣೆ.
ಭಕ್ತಿಯುಳ್ಳವರ ಬೈವರೊಂದೂ ಕೋಟಿ,
ಭಕ್ತಿ ಇಲ್ಲದವರ ಬೈವರೊಬ್ಬರ ಕಾಣೆ.
ನಿಮ್ಮ ಶರಣರ ನುಡಿಯೆ ಎನಗೆ ಗತಿ, ಸೋಪಾನ,
ಚೆನ್ನಮಲ್ಲಿಕಾರ್ಜುನ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-151/ವಚನ ಸಂಖ್ಯೆ-427)

ಈ ಪ್ರಪಂದಲ್ಲಿ ಸಜ್ಜನರಿಗಿಂತ ದುರ್ಜನರೆ ಹೆಚ್ಚಾಗಿರುವ ಹಾಗೂ ಫಲವತ್ತಾದ ಮರಕ್ಕೆ ಕಲ್ಲು ಬೀಳುವಂತೆ ಸಜ್ಜನರಿಗೆ ಹೆಚ್ಚಾಗಿ ಕಷ್ಟಗಳು ಬರುವ ಸತ್ಯವನ್ನು ಅರಿತ ಅಕ್ಕ ಹೆದರಬೇಡ ಬೆದರಬೇಡ ತನುವೇ ಅಂತ ತನ್ನ ಮನಸ್ಸಿಗೆ ತಾನೆ ಸಾಂತ್ವನ ಹೇಳಿಕೊಳ್ಳುತ್ತಾರೆ.

ಮನುಷ್ಯನಾದವನು ಜೀವನದಲ್ಲಿ ಎಡುವುದು ಸಹಜ. ಆದರೆ ಮಾಡಿದ ತಪ್ಪನ್ನು ತಿದ್ದಿಕೊಂಡು ಮತ್ತೆ ಆಗದಂತೆ ನೋಡಿಕೊಳ್ಳುವುದೇ ಮನುಷ್ಯತ್ವದ ಲಕ್ಷಣ. ತಮ್ಮ ಸದ್ಗುಣಗಳಿಂದ ಸಮಾಜದಲ್ಲಿ ಪ್ರಿಯರಾಗಿ ಬದುಕಬೇಕು. ಸಮಾಜದಲ್ಲಿ ಕಡೆಗಣಿಸಿಕೊಂಡು ಬಾಳುವದಕ್ಕಿಂತ ಸಾಯುವದೇ ಮೇಲು ಅಂತ ಈ ವಚನದಲ್ಲಿ ಹೇಳಿದ್ದಾರೆ.

ನಿಮ್ಮ ನಿಲವಿಂಗೆ ನೀವು ನಾಚಬೇಡವೇ?
ಅನ್ಯರ ಕೈಯಲ್ಲಿ ಅಲ್ಲ ಎನಿಸಿಕೊಂಬ ನಡೆನುಡಿ ಏಕೆ?
ಅಲ್ಲ ಎನಿಸಿಕೊಂಬುದರಿಂದ
ಆ ಕ್ಷಣವೇ ಸಾವುದು ಲೇಸು ಕಾಣಾ
ಚೆನ್ನಮಲ್ಲಿಕಾರ್ಜುನ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-92/ವಚನ ಸಂಖ್ಯೆ-259)

ಸಾಂಸಾರಿಕ ಜೀವನಕ್ಕೆ ಬೆನ್ನು ತಿರುಗಿಸಿದರೂ ಅಕ್ಕಮಹಾದೇವಿಯವರು ಲೌಕಿಕ ಜೀವನದ ಕಷ್ಟ-ಸುಃಖಗಳು, ಅದರ ಜೊತೆಗೆ ಬದುಕುವ ರೀತಿ-ನೀತಿಗಳನ್ನು ತಿಳಿದು, ಸಮಾಜದಲ್ಲಿ ಹೇಗೆ ಬದುಕಬೇಕು ಅಂತ ಹೇಳಿದ್ದಾರೆ. ಜನರ ಮತ್ತು ಪರಿಸ್ಥಿತಿಗಳ ಸಾಧಕ-ಬಾಧಕಗಳ ಬಗ್ಗೆ ಸ್ಪಷ್ಟ ತಿಳುವಳಿಕೆ ಉಳ್ಳವರೂ ಮತ್ತು ಚತುರಮತಿಯೂ ಆಗಿದ್ದ ಅಕ್ಕಮಹಾದೇವಿಯವರ ವ್ಯಕ್ತಿತ್ವವೆ ವಿಶಿಷ್ಟ. ಚಿಕ್ಕ ವಯಸ್ಸಿನಲ್ಲಿಯೇ ತನ್ನ ಬಾಳಲ್ಲಿ ಬಂದಂತಹ ಸಂಕಷ್ಟಗಳನ್ನ ಎದುರಿಸಿದ ಪರಿ ಮತ್ತು ಜನರ ಗುಣ ಸ್ವಭಾವಗಳನ್ನು ಗುರುತಿಸುವ ಚಾತುರ್ಯ ಸೂಕ್ಷ್ಮ ದೃಷ್ಟಿ ಅತ್ಯಂತ ಗಮನಾರ್ಹ. ತಮ್ಮ ನಿಲುವು ಹಾಗೂ ನಿರ್ಧಾರಗಳ ಬಗ್ಗೆ ಅಕ್ಕಮಹಾದೇವಿಯವರಿಗೆ ಅಪಾರ ನಂಬಿಕೆ ಮತ್ತು ದೃಢ ಮನೋಭಾವ ಇದ್ದವು. ಅವರ ವಚನಗಳಲ್ಲಿ ಆಧ್ಯಾತ್ಮಿಕತೆ ಹೆಚ್ಚಾಗಿದ್ರೂ ಕೆಲವು ವಚನಗಳಲ್ಲಿ ಲೌಕಿಕ ಜೀವನದ ರೀತಿ-ನೀತಿಗಳನ್ನು ಸಮರ್ಥವಾಗಿ ಹೇಳಿದ್ದಾರೆ.   

ಬೆಟ್ಟದ ಮೇಲೊಂದು ಮನೆಯ ಮಾಡಿ,
ಮೃಗಗಳಿಗೆ ಅಂಜಿದಡೆಂತಯಗಯಾ?
ಸಮುದ್ರದ ತಡಿಯಲೊಂದು ಮನೆಯ ಮಾಡಿ,
ನೊರೆತೊರೆಗಳಿಗಂಜಿದೊಡೆಂತಯ್ಯ?
ಸಂತೆಯೊಳಗೊಂದು ಮನೆಯ ಮಾಡಿ,
ಶಬ್ದಕ್ಕೆ ನಾಚಿದಡೆಂತಯ್ಯ?
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ,
ಲೊಕದೊಳಗೆ ಹುಟ್ಟಿದ ಬಳಿಕ
ಸ್ತುತಿ ನಿಂದೆಗಳು ಬಂದಡೆ
ಮನದಲ್ಲಿ ಕೊಪವ ತಾಳದೆ
ಸಮಾಧಾನಿಯಾಗಿರಬೇಕು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-106/ವಚನ ಸಂಖ್ಯೆ-302)

ಪ್ರಪಂಚದಲ್ಲಿ ಹುಟ್ಟಿದ ಬಳಿಕ ಸ್ತುತಿ-ನಿಂದನೆ, ನಿಷ್ಠೂರಗಳನ್ನು ಎದುರಿಸಿ ಹೊಗಳಿಕೆಯಿಂದ ಉಬ್ಬದೆ ತೆಗಳಿಕೆಯಿಂದ ಕುಗ್ಗದೆ ಧೈರ್ಯವಾಗಿ ಜೀವನವನ್ನ ಎದುರಿಸಬೇಕು ಅಂತ ಲೌಕಿಕ ಜೀವನದ ಬಗ್ಗೆ ಹೇಳ್ತಾರೆ.

ಬದುಕಿನ ಸಾರ್ಥಕತೆ ಇರುವದು ಪರೋಪಕಾರದಲ್ಲಿ. ಹಾಗೆನೇ ಪರೊಪಕಾರಿ ಆಗಿ ಬದುಕುವದು ಸಾಧ್ಯವಾಗೋದು ದೇವರನ್ನ ಅರಿತಾಗ ಮಾತ್ರ. ದೇವರನ್ನ ಅರಿತ ಬ್ರಹ್ಮಜ್ಞಾನಿಗಳಾದರೂ ನೆರಳು ನೀಡುವ ಮರದಂತೆ, ಹಾಲ ನೀವ ಹಸುವಂತೆ, ಜನರ ಸಮಾಜದ ಉಪಯೋಗಕ್ಕೆ ಮೀಸಲಾದ ಧನದಂತೆ ಸದ್ಬುಣಗಳಿಂದ ಕೂಡಿದ ರೂಪದಂತೆ ಹಾಗೂ ಅನ್ನ ತುಂಬಿದ ತಟ್ಟೆಯಂತೆ (ಜ್ಞಾನದಿಂದ ತುಂಬಿದ ಮನಸ್ಸಿನಂತೆ) ಉಪಯುಕ್ತವಾಗಿ ಜೀವಿಸಬೇಕು ಅಂತ ಅಕ್ಕಮಹಾದೇವಿಯವರು ತಮ್ಮ ಈ ವಚನದಲ್ಲಿ ಹೇಳಿದ್ದಾರೆ.

ಮರವಿದ್ದು ಫಲವೇನು ನೆರಳಿಲ್ಲದೆನ್ನಕ್ಕ?
ಧನವಿದ್ದು ಫಲವೇನು ದಯವಿಲ್ಲದೆನ್ನಕ್ಕ?
ಹಸುವಿದ್ದು ಫಲವೇನು ಹಯನಿಲ್ಲದೆನ್ನಕ್ಕ?
ರೂಪಿದ್ದು ಫಲವೇನು ಗುಣವಿಲ್ಲದೆನ್ನಕ್ಕ?
ಅಗಲಿದ್ದು ಫಲವೇನು ಬಾನವಿಲ್ಲದೆನ್ನಕ್ಕ?
ನಾನಿದ್ದು ಫಲವೆನು ನಿಮ್ಮ ಜ್ಞಾನವಿಲ್ಲದನ್ನಕ್ಕ?
ಚೆನ್ನಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-114/ವಚನ ಸಂಖ್ಯೆ-325)

ಕೇವಲ ಲೌಕಿಕತೆಯಲ್ಲಿಯೇ ಮುಳಿಗಿ ಹೋದವರ ಬಗ್ಗೆ ಅಕ್ಕ ಈ ವಚನದಲ್ಲಿ ಈ ರೀತಿ ಹೇಳ್ತಾರೆ.

ರತ್ನದ ಸಂಕೋಲೆಯಾದಡೆ ತೊಡರಲ್ಲವೇ?
ಮುತ್ತಿನ ಬಲೆಯಾದಡೆ ಬಂಧನವಲ್ಲವೇ?
ಚಿನ್ನದ ಕತ್ತಿಯಲ್ಲಿ ತಲೆ ಹೊಯ್ದೆಡೆ ಸಾಯದಿರ್ಪರೆ?
ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದಡೆ
ಜನನಮರಣ ಬಿಡುವದೇ ಚನ್ನಮಲ್ಲಿಕಾರ್ಜುನಾ?
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-120/ವಚನ ಸಂಖ್ಯೆ-344)

ಜೀವನದಲ್ಲಿ ಹುಟ್ಟು ಸಾವುಗಳನ್ನು ತಪ್ಪಿಸಿಕೊಳ್ಳುವುದು ಅಂದರೆ ಅವುಗಳ ಭೀತಿಯನ್ನು ಗೆದ್ದು, ನಿರ್ವಿಕಾರದಿಂದ ಎರಡನ್ನೂ ಸ್ವಾಗತಿಸುವುದು. ಇದನ್ನು ಸಾಧಿಸಬೇಕಾದರೆ ಬದುಕಿನಲ್ಲಿನ ಚಿನ್ನ ಮುತ್ತು ರತ್ನಗಳಂತೆ ಆಕರ್ಷಿಸುವ ಬಾಹ್ಯ ಬಂಧನಗಳಿಂದ, ಆಮಿಶಗಳ ವ್ಯಾಮೋಹಗಳಿಂದ ಮುಕ್ತರಾಗಿ ದೂರ ಆಗಬೇಕು. ಇದು ಜೀವನದ ಅಂತಿಮ ಸತ್ಯ ಅಂತ ಅಕ್ಕಮಹಾದೇವಿಯವರು ಹೇಳುತ್ತಾರೆ.

ಅಕ್ಕಮಹಾದೇವಿಯವರು ಸ್ವಭಾವತಃ ದಿಟ್ಟೆ, ಸೋಲೊಪ್ಪದ ಛಲಗಾರ್ತಿ, ಜೀವನದ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ನಿಂತ ಧೀರೆ. ಆಧ್ಯಾತ್ಮದ ಮೇರುಗಿರಿಯನ್ನೇರಿ ನಿಂತ ಅಕ್ಕ. ತನ್ನ ಆರಾಧ್ಯ ದೈವ ಚೆನ್ನಮಲ್ಲಿಕಾರ್ಜುನನ್ನು ಕೂಡಲು ಆಗದೆ ತನ್ನ ವಿರಹ ವೇದನೆಯನ್ನು, ಮನದ ನೋವನ್ನು ತನ್ನ ಅನೇಕ ವಚನಗಳಲ್ಲಿ ಹೇಳಿಕೊಂಡಿದ್ದಾರೆ.

ಹಿಂಡನಗಲಿ ಹಿಡಿವೆಡೆದ ಕುಂಜರ
ತನ್ನ ವಿಂಧ್ಯವ ನೆನೆವಂತೆ ನೆನೆವೆನಯ್ಯ.
ಬಂಧನಕ್ಕೆ ಬಂದ ಗಿಳಿ‌
ತನ್ನ ಬಂಧುವ ನೆನೆವಂತೆ ನೆನೆವನಯ್ಯ.
ಕಂದಾ, ನೀನನಿತ್ತ ಬಾ ಎಂದು
ನೀವು ನಿಮ್ಮಂದವ ತೋರಯ್ಯ,
ಚೆನ್ನಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-148/ವಚನ ಸಂಖ್ಯೆ-417)

ಚೆನ್ನಮಲ್ಲಿಕಾರ್ಜುನನ ಅಗಲಿಕೆಯಿಂದ ಆದ ದುಃಖವನ್ನು ಅಕ್ಕ ಈ ರೀತಿ ಹೇಳ್ತಾರೆ. ತಾನು ಲೌಕಿಕಳಾದರೂ ಅಲೌಕಿಕನಾದ ಪತಿಗೆ ತನ್ನ ಸರ್ವಸ್ವವನ್ನು ಅರ್ಪಿಸಿ ನಿಷ್ಠಾವಂತ ಸತಿ ಆಗ್ತಾರೆ. ಎಲ್ಲ ಯುವತಿಯರಂತೆ ಭಾವಿ ಪತಿಯ ಬಗೆಗಿನ ಹರೆಯದ ಹೆಣ್ಣಿನ ಕನಸುಗಳನ್ನ

ಅಕ್ಕ ಕೇಳೌ, ನಾನೊಂದು ಕನಸ ಕಂಡೆ.
ಅಕ್ಕಿ ಅಡಕೆ ಓಲೆ ತೆಂಗಿನಕಾಯ ಕಂಡೆ.
ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು
ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವಾ.
ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈವಿಡಿದೆನು.
ಚೆನ್ನಮಲ್ಲಿಕಾರ್ಜುನನ ಕಂಡು ಕಣ್ದೆರೆದೆನು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-5/ವಚನ ಸಂಖ್ಯೆ-12)

ಅನ್ನೋ ಈ ವಚನದಲ್ಲಿ ಕಾಣಬಹುದು.

ಪಚ್ಚೆಯ ನೆಲೆಗಟ್ಟು, ಕನಕದ ತೋರಣ,
ವಜ್ರದ ಕಂಬ, ಪವಳದ ಚಪ್ಪರವಿಕ್ಕಿ,
ಮುತ್ತುಮಾಣಿಕದ ಮೇಲುಕಟ್ಟ ಕಟ್ಟಿ,
ಮದುವೆಯ ಮಾಡಿದರು,
ಎಮ್ಮವರೆನ್ನ ಮದುವೆಯ ಮಾಡಿದರು.
ಕಂಕಣ ಕೈಧಾರೆ ಸ್ಥಿರಸೇಸೆಯನಿಕ್ಕಿ
ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ
ಮದುವೆಯ ಮಾಡಿದರು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-96/ವಚನ ಸಂಖ್ಯೆ-272)

ಎಂಬ ವಚನದಲ್ಲಿ ಅಕ್ಕನ ಮದುವೆಯ ಕಲ್ಪನೆಯನ್ನು ಕಾಣಬಹುದು.

ತನ್ನ ಪ್ರಿಯಕರ ಚೆನ್ನಮಲ್ಲಿಕಾರ್ಜುನನ್ನು ಶ್ರೀಶೈಲ ಗಿರಿಯಲ್ಲಿ ಹುಡುಕುವಾಗ ಗಿಳಿ, ಕೋಗಿಲೆ, ದುಂಬಿ ನವಿಲುಗಳನ್ನು ಆತ್ಮೀಯವಾಗಿ ಆತ ಎಲ್ಲಿದ್ದಾರೆಂದು ದೈನ್ಯದಿಂದ ಕೇಳಿಕೊಳ್ಳುವುದನ್ನ ಈ ವಚನದಲ್ಲಿ ಕಾಣಬಹುದು.

ಚಿಲಿ ಮಿಲಿ ಎಂದು ಓದುವ ಗಿಳಿಗಳಿರಾ,
ನೀವು ಕಾಣಿರೆ, ನೀವು ಕಾಣಿರೆ,
ಸರವೆತ್ತಿ ಪಾಡುವ ಕೋಗಿಲೆಗಳಿರಾ,
ನೀವು ಕಾಣಿರೆ, ನೀವು ಕಾಣಿರೆ,
ಎರಗಿ ಬಂದಾಡುವ ತುಂಬಿಗಳಿರಾ,
ನೀವು ಕಾಣಿರೆ, ನೀವು ಕಾಣಿರೆ,
ಕೊಳನ ತಡಿಯಾಳಾಡುವ ಹಂಸಗಳಿರಾ,
ನೀವು ಕಾಣಿರೆ, ನೀವು ಕಾಣಿರೆ,
ಗಿರಿ ಗಹ್ವರದೊಳಗಾಡುವ ನವಿಲುಗಳಿರಾ,
ನೀವು ಕಾಣಿರೆ, ನೀವು ಕಾಣಿರೆ,
ಚೆನ್ನಮಲ್ಲಿಕಾರ್ಜುನನೆಲ್ಲಿದ್ದಹನೆಂದು ಹೇಳಿರೆ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-96/ವಚನ ಸಂಖ್ಯೆ-272)

12 ನೇಯ ಶತಮಾನದ ಇತರ ಶಿವಶರಣರಂತೆ ಅಕ್ಕಮಹಾದೇವಿಯವರ ವಚನಗಳಲ್ಲೂ ಸಾಧನೆಗಳ ಬಗ್ಗೆ ಸಿದ್ಧಿಗಳ ಬಗ್ಗೆ ಅಭಿವ್ಯಕ್ತಿ ಇದೆ. ಆದರೆ ಅಲೌಕಿಕ ಸಾಧನೆಗಳನ್ನ ಲೌಕಿಕ ರೀತಿ-ನೀತಿಗಳ ಉದಾಹರಣೆಗಳೊಂದಿಗೆ ವ್ಯಕ್ತಪಡಿಸಿದ್ದು ವಿಶೇಷ. ಅಕ್ಕಮಹಾದೇವಿಯವರು ನೀಡಿದ ಉಪಮೆಗಳು ಲೌಕಿಕ ನಿತ್ಯ ಜೀವನದ ಆಗು-ಹೋಗುಗಳೆ ಆಗಿವೆ. ಲೌಕಿಕವಾಗಿದ್ದುಕೊಂಡು ಅಲೌಕಿಕವನ್ನ ಸಾಧಿಸುವ ರೀತಿ ಅನನ್ಯವಾದದ್ದು. 12 ನೇ ಶತಮಾನದ “ನುಡಿದಂತೆ ನಡೆದ ಮತ್ತು ನಡೆದಂತೆ ನುಡಿದ” ಶಿವಶರಣರ ನಡೆಯೂ ಇದೆ ಮತ್ತು ನುಡಿಯೂ ಇದೆ.

ಶ್ರೀಮತಿ. ಅನುಪಮ ಪಾಟೀಲ,
ನಂ. 10, ದೇಸಾಯಿ ಪಾರ್ಕ್‌,
ಕುಸೂಗಲ್‌ ರಸ್ತೆ, ಕೇಶ್ವಾಪೂರ,
ಹುಬ್ಬಳ್ಳಿ – 580 023.
ಮೋ. ಸಂ. +91 9845810708.

  • ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
  • ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply