
ಅನುಭವ ಮಂಟಪದ ನಿರ್ಮಾಣಕ್ಕೆ ಸಂಬಂಧಿಸಿದ ಶಿಫಾರಸು ಸಮಿತಿಯ ಮೊದಲ ಸಭೆಯ ಅಜೆಂಡಾದಲ್ಲಿ ಮೊದಲ ಪಾಯಿಂಟ್ “ಅನುಭವ ಮಂಟಪ ಕಾಲ್ಪನಿಕ” ಎಂದು ಸಮಿತಿಯ ಅಧ್ಯಕ್ಷರಾಗಿದ್ದ ಗೊ. ರು. ಚನ್ನಬಸಪ್ಪ ಅವರು ಬರೆದಿದ್ದರು. ನಾನು ಕೂಡಲೆ, ನೀಲಮ್ಮನವರ ವಚನವೊಂದರಲ್ಲಿ ಅನುಭವ ಮಂಟಪದ ಕುರಿತು ಹೇಳಿದ್ದನ್ನು ಹೇಳಿ ಆ ಪಾಯಿಂಟ್ ತೆಗೆಸಿದೆ. ಆ ವಚನ ಬಹಳ ದೀರ್ಘವಾಗಿದೆ. ಹಾಗಾಗಿ ಅದರ ಮೊದಲೆರಡು ಸಾಲುಗಳನ್ನು ಹಾಗೂ ಅನುಭವ ಮಂಟಪದ ಎರಡು ಸಾಲುಗಳನ್ನು ಇಲ್ಲಿ ಬರೆದಿದ್ದೇನೆ.
ಆದಿಯಾಧಾರವಿಲ್ಲದಂದು, ಕಳೆಮೊಳೆದೋರದಂದು,
ಕಾಮ ನಿಃಕಾಮವಿಲ್ಲದಂದು, ವೀರವಿತರಣವಿಲ್ಲದಂದು,
… … … … … … … … … … …
… … … … … … … … … … …
ಭಕ್ತಿಫಲವನುಂಡಾತ ನಮ್ಮ ಬಸವಯ್ಯನು.
ಚೆನ್ನಬಸವನೆಂಬ ಪ್ರಸಾದಿಯ ಪಡೆದು,
ಅನುಭವಮಂಟಪವನನುಮಾಡಿ,
ಅನುಭವಮೂರ್ತಿಯಾದ ನಮ್ಮ ಬಸವಯ್ಯನು.
… … … … … … … … … … …
… … … … … … … … … … …
ಭಕ್ತಿಸ್ಥಲವನಳಿದು ಭಾವವಡಗಿ ಬಟ್ಟಬಯಲ ಕೂಡಿ,
ಸಂಗಯ್ಯನಲ್ಲಿ ಸ್ವಯಲಿಂಗಿಯಾದ
ನಮ್ಮ ಬಸವಯ್ಯನು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-323/ವಚನ ಸಂಖ್ಯೆ-843)
ಎರಡನೇ ಮೀಟಿಂಗ್ ನಲ್ಲಿ ಅವರಿಗೆ ರೆವೆರೆಂಡ್ ಉತ್ತಂಗಿ ಚನ್ನಪ್ಪ ಅವರ ಅನುಭವ ಮಂಟಪದ ಐತಿಹಾಸಿಕತೆ ಪುಸ್ತಕ ಕೊಟ್ಟೆ. ಈ ಪುಸ್ತಕ ನೋಡಿದ್ದಿಲ್ಲ ಎಂದರು. ಅವರು ಮೊದಲ ಸಭೆಯಲ್ಲೇ ಸತ್ಯವನ್ನು ಒಪ್ಪಿಕೊಂಡಿದ್ದರು. ಅವರ ಪ್ರಜಾಪ್ರಭುತ್ವವಾದಿ ಗುಣಕ್ಕೆ ಶರಣು. ಇಂಥ ಗುಣ ನಮ್ಮೆಲ್ಲರಲ್ಲೂ ಇರುವುದು ಅವಶ್ಯವಾಗಿದೆ.
ಕೆಲ ದಿನಗಳ ಹಿಂದೆ ಅನುಭವ ಮಂಟಪಕ್ಕೆ ಸಂಬಂಧಿಸಿದಂತೆ ವೀಣಾ ಬನ್ನಂಜೆ ಅವರ ಭಯಂಕರ ಶೈಲಿಯ ಮಾತುಗಳನ್ನು ಕೇಳುವಾಗ ಸತ್ಯವಾಗಿಯೂ ತಲೆನೋವು ಶುರುವಾಯಿತು. ಅನುಭವ ಮಂಟಪ ಕಾಲ್ಪನಿಕ ಎಂದು ಸಾಧಿಸಲು ಅವರು ಪಟ್ಟ ಶ್ರಮವನ್ನು ಕಲ್ಪಿಸಿಕೊಂಡು ಅವರ ಬಗ್ಗೆ ಕರುಣೆ ಮೂಡಿತು. ಸುಳ್ಳನ್ನು ಸಾಧಿಸುವುದು ಬಹಳ ಕಷ್ಟದ ಕೆಲಸ. ಸತ್ಯಕ್ಕೆ ಯಾವುದೇ ತಿಣುಕಾಟದ ಅವಶ್ಯಕತೆ ಇಲ್ಲ.
ಅವರು 15 ನೇ ಶತಮಾನದ ಮೊದಲ ಶೂನ್ಯ ಸಂಪಾದನೆಯನ್ನು ತಮ್ಮ ವಾದಕ್ಕೆ ಬಳಸಿಕೊಂಡರು. ಶಿವಗಣಪ್ರಸಾದಿ ಮಹಾದೇವಯ್ಯನವರು 1415 ರಲ್ಲಿ ಬರೆದ ಮೊದಲ ಶೂನ್ಯ ಸಂಪಾದನೆ ಅದು. (ನಂತರ ಇನ್ನೂರು ವರ್ಷಗಳ ಅವಧಿಯಲ್ಲಿ ಮತ್ತೆ ಮೂರು ಬಂದಿವೆ.) ಅದರಲ್ಲಿ ಅವರು “ಇದು ಪಗರಣ” ಎಂದು ಸ್ಪಷ್ಟಪಡಿಸಿದ್ದಾರೆ. 15 ನೇ ಶತಮಾನದ ಮತ್ತು ತದನಂತರ ಇನ್ನೂರು ವರ್ಷಗಳ ಅವಧಿಯಲ್ಲಿ ಬಂದ ಶೂನ್ಯ ಸಂಪಾದನೆಗಳ ಸಂಭಾಷಣೆಗಳಲ್ಲಿನ ಕೆಲ ದುರ್ಬಲ ಅಂಶಗಳನ್ನು ಎತ್ತಿ 12 ನೇ ಶತಮಾನದ ಅನುಭವ ಮಂಟಪದ ಮಹತ್ವವನ್ನು ಅಳೆಯಲಿಕ್ಕಾಗದು. ಇನ್ನು ಕ್ರಿಸ್ತ ಪೂರ್ವದ ಪ್ಲೇಟೋನ ಡೈಲಾಗ್ ಗಳನ್ನು ಅನುಭವ ಮಂಟಪದ ಚರ್ಚೆಗೆ ಹೋಲಿಸಲಿಕ್ಕಾಗದು.
ಬೃಹದಾರಣ್ಯಕ ಉಪನಿಷತ್ತಿನ ಸಂಭಾಷಣೆ ಮತ್ತು ರಾಜರ್ಷಿಗಳ ಆನುಭಾವಿಕ ನೆಲೆಯ ಚಿಂತನೆಗಳ ಹೋಲಿಕೆ ಹಿನ್ನೆಲೆಯಲ್ಲಿ ಅನುಭವ ಮಂಟಪದ ಐತಿಹಾಸಿಕೆಯನ್ನು ಒರೆಗಲ್ಲಿಗೆ ಹಚ್ಚುವುದು ಬಾಲಿಶ ಎನಿಸಿತು. ಅವರು ಈ ಓಘದಲ್ಲಿ ಅಕ್ಬರ್ ನನ್ನೂ ಎಳೆ ತಂದರು! ಅನುಭವ ಮಂಟಪವನ್ನು “ಅನುಭಾವ ಮಂಟಪ” ಎಂದು ತಪ್ಪಾಗಿ ಭಾವಿಸಿ ಅದನ್ನೂ ಪ್ರತಿಪಾದಿಸಿದರು. ಅದು ಅನುಭವ ಮಂಟಪವೇ ಆಗಿದೆ. 770 ಅಮರಗಣಂಗಳು ಮನುವಾದಿ ಸಮಾಜದಲ್ಲಿ ಅತ್ಯಂತ ಹಿಂದುಳಿದ ನಟುವರ ಜನಾಂಗದಿಂದ ಬಂದ ಮಹಾಜ್ಞಾನಿ ಅಲ್ಲಮ ಪ್ರಭುಗಳ ಸಮ್ಮುಖದಲ್ಲಿ ತಮ್ಮ ಕಾಯಕಗಳ ಅನುಭವದ ಆಧಾರದಲ್ಲೇ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ.
ನಟುವರ ಜನಾಂಗದ ಮಹಾಜ್ಞಾನಿಯ ಅಧ್ಯಕ್ಷತೆಯಲ್ಲಿ ಅಸ್ಪೃಶ್ಯರನ್ನು ಮತ್ತು ಶೂದ್ರರನ್ನು ಸಂಘಟಿಸಿ ವರ್ಣ, ಜಾತಿ, ವರ್ಗ ಮತ್ತು ಲಿಂಗಭೇದ ವಿರೋಧಿ ಅನುಭವ ಮಂಟಪವನ್ನು ರಚಿಸಿದ ಬಸವಣ್ಣನವರ ಮಹಾ ಯೋಜನೆಯನ್ನು ಮೀರಿಸುವಂಥದ್ದು ಜಗತ್ತಿನ ಇತಿಹಾಸದಲ್ಲಿ ಎಲ್ಲಿಯಾದರೂ ನಡೆದಿದೆಯೆ? ಶರಣರ ಅನುಭಾವ ಎಂಬುದು ವೈದಿಕರ ಮತ್ತು ಪಾಶ್ಚಿಮಾತ್ಯರ Metaphysics ಅಲ್ಲ. ಅದು ಎಲ್ಲ ರೀತಿಯ ಅಸಮಾನತೆಯನ್ನು ನಾಶ ಮಾಡುವಂಥದ್ದು! ಅನುಭವ ಮಂಟಪದಲ್ಲಿ ಕಾಯಕ ಜೀವಿಗಳ ಅನುಭವದ ಮೂಲಕ ಅನುಭಾವದ ಸಾಕ್ಷಾತ್ಕಾರ ಆಗುತ್ತಿತ್ತು. ಹೀಗೆ ಅನುಭವ ಮಂಟಪದಲ್ಲಿ ಶರಣರ ಅನುಭವದ ಮೂಲಕವೇ ಅನುಭಾವ ಸೃಷ್ಟಿಯಾಗುತ್ತಿತ್ತು.
ಶರಣರ ಅನುಭವ ಮಕರಂದದ ಹಾಗೆ. ಅನುಭವ ಮಂಟಪದ ಚರ್ಚೆಯ ಪರಿಣಾಮವಾದ ಅನುಭಾವವು ಜೇನಿನ ಹಾಗೆ. ಹೀಗೆ ಅದು ಶರಣರ ಅನುಭವ ಮಂಟಪ ಆಗಿದೆ. ಮಂಟಪಕ್ಕೆ ಸಭೆ ಎಂಬ ಅರ್ಥವೂ ಇದೆ. ಮಂಟಪಕ್ಕೆ ಬಾಗಿಲುಗಳು ಇರುವುದಿಲ್ಲ. ಅಲ್ಲಿ ಎಲ್ಲಾ ವರ್ಣಗಳು, ಎಲ್ಲ ಜಾತಿಗಳ ಮೂಲದ ಶರಣ ಶರಣೆಯರಿಗೆ ಪ್ರವೇಶವಿತ್ತು. ಅವರೆಲ್ಲ ಇಷ್ಟಲಿಂಗಧಾರಿಗಳಾಗಿ ಜಾತಿ ಕುರುಹುಗಳನ್ನು ಕಳೆದುಕೊಂಡು ಲಿಂಗಭೇದವನ್ನು ಅಲ್ಲಗಳೆದು ನವಮಾನವರಾಗಿದ್ದರು. ಹೆಣ್ಣು ಗಂಡುಗಳು ಕೂಡಿ ಸಮೂಹ ಚರ್ಚೆಯಲ್ಲಿ ಭಾಗವಹಿಸುವ ಮನ್ವಂತರ ಅನುಭವ ಮಂಟಪದಲ್ಲಿ ಪ್ರಾರಂಭವಾಯಿತು.
ದುಡಿಯುವ ಜನರು ಮೊದಲ ಬಾರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಆನಂದವನ್ನು ಅನುಭವಿಸಿದರು. ಹೆಣ್ಣುಮಕ್ಕಳು ನಿಜದ ನೆಲೆಯಲ್ಲಿ ನಿಂತು ಪುರುಷರನ್ನು ಪ್ರಶ್ನಿಸಿದ್ದು ಅನನ್ಯವಾಗಿತ್ತು ಎಂಬುದು ಅವರ ವಚನಗಳಿಂಲೇ ಊಹಿಸಬಹುದು. ದಲಿತ, ಹಿಂದುಳಿದ ಕಾಯಕ ಜೀವಿಗಳು ಅನುಭವ ಮಂಟಪದ ವಾತಾವರಣದಲ್ಲಿ ನವ ಚೈತನ್ಯ ಹೊಂದಿದರು. ಕಾಯಕದ ಮೂಲಕವೇ ಬಡತನವನ್ನು ಮೆಟ್ಟಿ ನಿಂತು ಅರಿವಿನ ಶ್ರೀಮಂತಿಕೆ ಪಡೆದರು. ಸಮಾಜದಲ್ಲಿ ಇದರಿಂದಾಗಿ ಭಾರೀ ಬದಲಾವಣೆಯಾಯಿತು. ಎಲ್ಲಿ ನೋಡಿದಲ್ಲಿ ಜನ ಬಸವಾ ಬಸವಾ ಎನ್ನುವಂಥ ವಾತಾವರಣ ಸೃಷ್ಟಿಯಾಯಿತು. ದುಡಿಯುವ ಜನರ ಒಗ್ಗಟ್ಟನ್ನು ನೋಡಿ ಮನುಧರ್ಮ ಸಿಂಹಾಸನ ಮತ್ತು ರಾಜಸಿಂಹಾಸನ ಅಲುಗಾಡತೊಡಗಿದವು. ಮನುವಾದಿಗಳು ಇಲ್ಲಿಯೆ ಬೆಚ್ಚಿ ಬಿದ್ದದ್ದು. ಅವರು ಬುಸುಗುಟ್ಟುವ ಕ್ಷಣಕ್ಕಾಗಿ ಕಾಯುತ್ತಿದ್ದರು.
ಅನುಭವ ಮಂಟಪ ಕಾಯಕ ಜೀವಿಗಳ ಯಶಸ್ಸಿನ ಸಂಕೇತವಾಗಿತ್ತು. ಇಂಥ ಚೇತೋಹಾರಿ ವಾತಾವರಣದಲ್ಲಿಯೆ ಸಮಗಾರ ಹರಳಯ್ಯನವರ ಮಗ ಶೀಲವಂತ ಮತ್ತು ಬ್ರಾಹ್ಮಣ ಮೂಲದ ಮಧುವರಸರ ಮಗಳು ಲಾವಣ್ಯಳ ಮದುವೆಯಾಯಿತು. ಈ ಮದುವೆ, ಜಾತಿ ವಿನಾಶ ಮಾಡಿದ ಲಿಂಗವಂತರ ಮದುವೆ ಆಗಿತ್ತು. ಆದರೆ ಮನುವಾದಿಗಳು “ಇದು ಬ್ರಾಹ್ಮಣ ಕನ್ಯೆಯನ್ನು ಅಸ್ಪೃಶ್ಯ ಮದುವೆಯಾದ ಕಾರಣ ಮನುಸ್ಮೃತಿಯ ಪ್ರಕಾರ ವಿಲೋಮ ವಿವಾಹವಾಗಿದ್ದು ಇದರಿಂದ ಧರ್ಮಗ್ಲಾನಿಯಾಗುವುದು” ಎಂದು ಕ್ಯಾತೆ ತೆಗೆದರು. ಬಿಜ್ಜಳ ದೊರೆ ರಾಜಧರ್ಮ ಪಾಲಿಸಬೇಕೆಂದು ಹಟ ಹಿಡಿದರು.
ರಾಜಧರ್ಮ ಎಂದರೆ ವರ್ಣಾಶ್ರಮ ಧರ್ಮವಾದ ವೈದಿಕ ಧರ್ಮಕ್ಕೆ ಚ್ಯುತಿ ಬಾರದಂತೆ ರಾಜನು ರಾಜ್ಯವಾಳುವುದು. ಈ ವಿಲೋಮ ವಿವಾದದಿಂದಾಗಿ, “ಬಿಜ್ಜಳ ರಾಜಧರ್ಮವನ್ನು ಪಾಲಿಸುತ್ತಿಲ್ಲ” ಎಂದು ಗುಲ್ಲೆಬ್ಬಿಸಿದರು. ಕೊನೆಗೂ ಮನುವಾದಿಗಳು ಶಾಸ್ತ್ರ ಮುಂದಿಟ್ಟು ಬಿಜ್ಜಳನ ಕಿವಿ ಊದುವಲ್ಲಿ ಸಫಲರಾದರು. ವೈದಿಕರ ಶಾಸ್ತ್ರಗಳ ಆಜ್ಞೆಯನ್ನು ಬಿಜ್ಜಳನ ಶಸ್ತ್ರಗಳು ಪಾಲಿಸಿದವು. ಶರಣರ ಮೇಲೆ ನಡೆದ ಪ್ರತಿಕ್ರಾಂತಿಯಲ್ಲಿ ಸಹಸ್ರಾರು ವಚನ ಕಟ್ಟುಗಳು ಬೆಂಕಿಗೆ ಆಹುತಿಯಾದವು. ಅನೇಕ ಶರಣರು ಸಾವು ನೋವಿಗೆ ಈಡಾದರು. ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶರಣರು ಚೆಲ್ಲಾಪಿಲ್ಲಿಯಾಗಿ ಹೋದರು. ಹೀಗೆ 12 ನೇ ಶತಮಾನದ ಕಾಯಕ ಜೀವಿಗಳ ಅನುಭವ ಮಂಟಪವನ್ನು ಮನುವಾದಿಗಳು ಹಾಳು ಮಾಡಿ ಅವೈದಿಕ ನವ ಸಮಾಜದ ನಿರ್ಮಾಣವನ್ನು ಸ್ಥಗಿತಗೊಳಿಸಿದರು!
ಇದನ್ನೆಲ್ಲ ವೀಣಾ ಬನ್ನಂಜೆ ಅಂಥವರಿಗೆ ಯಾರು ಹೇಳಬೇಕು?
ಜಾಣಗಿವುಡರಿಗೆ ಹೇಳಲು ಸಾಧ್ಯವೆ?
- ಇನ್ನು ಕೆಲವರು ವೀಣಾ ಬನ್ನಂಜೆ ಅವರಿಗೆ ಏಕವಚನದಲ್ಲಿ ಟೀಕಿಸುತ್ತಿದ್ದಾರೆ. ಅದು ಸಲ್ಲದು.
- ಸಾಧ್ಯವಾದರೆ ಅವರು ಎತ್ತಿದ ಪ್ರಶ್ನೆಗಳಿಗೆ ತಾತ್ವಿಕವಾಗಿ ವೈಚಾರಿಕತೆಯ ಹಿನ್ನೆಲೆಯಲ್ಲಿ ಉತ್ತರಿಸುವುದು ಸಮಂಜಸ.
- ಅದಾಗದಿದ್ದರೆ ಸುಮ್ಮನಿರುವುದು ಒಳ್ಳೆಯದು. ಶರಣ ಸಂಸ್ಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುವುದು ಸರಿ ಅಲ್ಲ.
ಶ್ರೀ. ರಂಜಾನ್ ದರ್ಗಾ,
“ವಚನ”, ಸಿದ್ಧಾರೂಢ ಕಾಲನಿ,
ಮದಿಹಾಳ,
ಧಾರವಾಡ – 580 006
ಇ-ಮೇಲ್: ramjandarga@gmail.com
ಮೋಬೈಲ್ ಸಂ. +91 8660173149
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in