
ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ
ಎನ್ನ ತನು ಶುದ್ಧವಾಯಿತ್ತು.
ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ
ಎನ್ನ ಮನ ಶುದ್ಧವಾಯಿತ್ತು.
ಅಯ್ಯಾ, ನಿಮ್ಮ ಅನುಭಾವಿಗಳ ಸಂಗದಿಂದ
ಎನ್ನ ಪ್ರಾಣ ಶುದ್ಧವಾಯಿತ್ತು.
ಅಯ್ಯಾ, ನಿಮ್ಮ ಅನುಭಾವಿಗಳು
ಎನ್ನ ಒರೆದೊರೆದು ಆಗುಮಾಡಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮಗಾನು ತೊಡಿಗೆಯಾದೆನು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-10/ವಚನ ಸಂಖ್ಯೆ-27)
ತತ್ವನಿಷ್ಠೆ, ಜ್ಞಾನ, ವೈರಾಗ್ಯಗಳಿಂದ ಹಂಗಿನ ಅರಮನೆಯ ತೊರೆದು ಅರಿವಿನ ಮನೆಯತ್ತ ಪಯಣ ಬೆಳಸಿದ ಮಹಾ ಶಿವಯೋಗಿಣಿ, ತತ್ವ ಶಿಖಾಮಣಿ ವೈರಾಗ್ಯ ನಿಧಿ ಅಕ್ಕ ಮಹಾದೇವಿಯವರು ಈ ಭವಕ್ಕೆ ಬಂದ ಮಹಾ ಬೆಳಕು. ಸ್ತ್ರೀ ಕುಲರತ್ನ, ಸ್ತ್ರೀ ಕುಲದ ಸ್ವಾಭಿಮಾನದ ಪ್ರತೀಕವಾದ ಅಕ್ಕ ಮಹಾದೇವಿಯವರ ವ್ಯಕ್ತಿತ್ವವೇ ಅನುಪಮವಾದದು. ತನುವಿನೊಳೊಗಿದ್ದು ತನುವ ಗೆದ್ದು, ಮನದೊಳಗಿದ್ದು ಮನವ ಗೆದ್ದು, ವಿಷಯ ವಾಸನೆಗಳನ್ನೆಲ್ಲಾ ತೊರೆದು ಆಧ್ಯಾತ್ಮದ ಉತ್ತುಂಗ ಶಿಖರವೇರಿದ ಪಾವನಗಂಗೆಯಾದ ಅಕ್ಕ ಮಹಾದೇವಿ ತಾನು ಸಂಚರಿಸಿದ ಸ್ಥಳಗಳನ್ನೆಲ್ಲಾ ಪವಿತ್ರ ಮಾಡಿದವರು. ಜೀವಿತಾಧಿಯಲ್ಲಿ ಒದಗಿ ಬಂದ ಭೋಗ, ಭಾಗ್ಯಗಳನ್ನೆಲ್ಲಾ ನಿರಾಕರಿಸಿ, ತಾನೊಲಿದ ಚನ್ನಮಲ್ಲಿಕಾರ್ಜುನನಿಗೆ ಸಂಪೂರ್ಣವಾಗಿ ತನ್ನನ್ನು ಸಮರ್ಪಿಸಿಕೊಂಡ ಮೀಸಲು ಕುಸುಮ. ಅಂಗನೆಯರಿಗಿರುವ ಸಹಜ ಕಾಮನೆಗಳನ್ನೆಲ್ಲಾ ತೊರೆದು ಮುಕ್ತವಾದ ಮುಕ್ತಾಂಗನೆ ಅಕ್ಕ ಮಹಾದೇವಿಯವರು.
ಉಡುತಡಿಯಲ್ಲಿ ಉದಯಿಸಿದ ಕಿರಣಯೊಂದು ಇಡೀ ನಾಡಿಗೆ ಬೆಳಕಾದುದು ನಿಜಕ್ಕೂ ಚೋದ್ಯದ ವಿಷಯ, ಅಮಂಗಲೆ, ಅಪಶಕುನೆ, ಚಂಚಲೆ, ಮಾಯೆ, ನಡೆದಾಡುವ ಸ್ಮಶಾನ, ಕಿರುಬನ ಹೃದಯದವಳು, ಪಾಪಭೀರು, ಹೃದಯ ಭೇದಿಸುವವಳು ಇಂತಹ ಅವಹೇಳನಕಾರಿ ನುಡಿಗಳಿಂದ ನಲುಗಿ ಹೋಗಿದ್ದ ಸ್ತ್ರೀ ಸಂಕುಲದಲ್ಲಿ ಒಂದು ಭಿನ್ನ ಧ್ವನಿಯಾಗಿ, ಸ್ವತಂತ್ರ ವಿಚಾರವಾದಿ ಮಹಿಳೆಯಾಗಿ “ಈ ಸಾವ ಕೆಡುವ ಗಂಡರನೊಯ್ದು ಒಲೆಯೊಳಗಿಕ್ಕು” ಎನ್ನುತ್ತಲೇ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಧೀರೊದಾತ್ತದಿಂದ ನಡೆದಾಡಿ, ಲಿಂಗಾಂಗ ಸಾಮರಸ್ಯದಿಂದ ಚನ್ನಮಲ್ಲಿಕಾರ್ಜುನನಲ್ಲಿ ಬೆರತು ಕದಳಿಯ ವನದಲ್ಲಿ ಬಯಲಾದ ಅಕ್ಕಮಹಾದೇವಿಯವರು ಉರಿಕೊಂಡ ಕರ್ಪೂರ. ಇಂತಹ ಶ್ರೇಷ್ಠ ವ್ಯಕ್ತಿತ್ವ ಅಕ್ಕಮಹಾದೇವಿಯರದಾಗಿದೆ.
ಶತಶತಮಾನಗಳ ಅಖಂಡ ಹೆಣ್ಣಿನ ಮಾನಕ್ಕೆ ಧ್ವನಿ ಕೊಟ್ಟವರು ಅಪ್ಪ ಬಸವಣ್ಣನವರು. 12 ನೇ ಶತಮಾನದ ಕಾಲಘಟ್ಟದಲ್ಲಿ ಬಸವಾದಿ ಶಿವಶರಣರು “ಲಿಂಗ ತಾರತಮ್ಯ” ದ ಕುರಿತು ಪ್ರತಿಭಟನೆ ಮಾಡಿದರು. ಅದರ ಪ್ರತಿಫಲದ ರೂಪವಾಗಿ ಮಹಿಳೆಯರಲ್ಲಿ ಜ್ಞಾನ ಸ್ಫೋಟವಾಯಿತು. ಹೀಗೆ ದೊರೆತ ಅರಿವಿನಿಂದ ಮರುಜನ್ಮ ಪಡೆದುಕೊಂಡ ಮಹಿಳಾ ಸಂಕುಲ ಸಾಮಾಜಿಕವಾಗಿ, ಸಾಹಿತ್ಯಿಕವಾಗಿ, ಆಧ್ಯಾತ್ಮಿಕವಾಗಿ ಮುನ್ನೆಲೆಗೆ ಪಾದಾರ್ಪಣೆ ಮಾಡಿತು. ಇದಕ್ಕೆ ಸಾಕ್ಷಿಯೆಂಬಂತೆ ಆ ಸಂದರ್ಭದಲ್ಲಿ ಸುಮಾರು 39 ಕ್ಕೂ ಅಧಿಕ ಸಂಖ್ಯೆಯಲ್ಲಿ ಶರಣೆಯರು ವಚನಗಳ ರಚನೆ ಮಾಡಿದರು. ಕೌಟುಂಬಿಕ ನೆಲೆಯಲ್ಲಿ ಇದ್ದುಕೊಂಡು ಪಾರಮಾರ್ಥಿಕ ಸಾಧನೆ ಕೈಗೊಂಡರು. ಆದರೆ ಅಕ್ಕ ಮಹಾದೇವಿಯವರು ಮೊಟ್ಟ ಮೊದಲಿಗೆ ಲಗ್ನ ಸಂಸ್ಥೆಯನ್ನು ಪ್ರಶ್ನಿಸಿ “ಗಂಡಿಗೆ ಹೆಣ್ಣು ಮಾಯೆಯಾದರೆ; ಹೆಣ್ಣಿಗೆ ಗಂಡು ಮಾಯೆ” ಎಂದು ಉತ್ತರಿಸಿ, ಮಾಯೆಯ ತೊಡಕನ್ನು ಬಿಡಿಸಿ, ಭವಬಂಧನ ಬಿಡಿಸಿಕೊಂಡು ಆಧ್ಯಾತ್ಮದ ಮೇರು ಶಿಖರವನ್ನೆರುತ್ತಾ ಅವರು ವಿರಚಿಸಿಕೊಂಡ ವ್ಯಕ್ತಿತ್ವ ಎಂತಹವರನ್ನು ದಿಗ್ಭ್ರಮೆ ಹುಟ್ಟಿಸುವಂತಹದ್ದು.
ಅಕ್ಕ ಮಹಾದೇವಿಯವರ ಜನನದಿಂದ ಅವರು ಕದಳಿವನ ಪ್ರವೇಶಿಸುವವರೆಗಿನ ಅವರ ಅಂತರಂಗ ಪಯಣ ಅನುಪವಾದುದು. ಇವರ ವ್ಯಕ್ತಿತ್ವದ ಆಳ–ಎತ್ತರವನ್ನು ಅಳೆಯುವುದು ಅಷ್ಟೊಂದು ಸುಲಭ ಸಾಧ್ಯವಲ್ಲದ ಮಾತಾಗಿದೆ. “ಹುಲಿನೆಕ್ಕಿ ಬದುಕಿದೆನು ತಾಯೆ” ಎಂದು ಹೇಳಿದ ಕಿನ್ನರಿ ಬೊಮ್ಮಯ್ಯನವರ ಮಾತುಗಳಿಂದ ಅಕ್ಕಮಹಾದೇವಿಯರ ನಿಗಿನಿಗಿ ಕೆಂಡದಂತಹ ವ್ಯಕ್ತಿತ್ವದ ದರ್ಶನವಾಗುತ್ತದೆ. ಭಕ್ತಿಯ ಗಿರಿಯನ್ನೇರಿದ ಅಕ್ಕ ಮಹಾದೇವಿಯವರದು ಆತ್ಮ ನಿರ್ಭರವಾದ ಬದುಕು, ಕಿರಿಯ ವಯಸ್ಸಿನಲ್ಲಿ ಹಿರಿದಾದ ಸಾಧನೆ ಮಾಡಿ ಆಧ್ಯಾತ್ಮವ ತುತ್ತ ತುದಿಗೇರಿದ ಅಕ್ಕ ಮಹಾದೇವಿಯರ ವ್ಯಕ್ತಿತ್ವದ ದಿವ್ಯ ದರ್ಶನವನ್ನು ಶೂನ್ಯ ಸಂಪಾದಕರಾದ ಗೂಳೂರು ಸಿದ್ಧವೀರಣ್ಣರವರ ನುಡಿಗಡಣದಲ್ಲಿ ದರ್ಶಿಸಬಹುದು;
ಭಕ್ತಿಯ ಭಾಗ್ಯ, ಮುಕ್ತಿಯ ತವರುಮನೆ,
ಶಿವಭಾವ ಸಂಪನ್ನೆ, ಪ್ರಸಾದದ ಮೇರು,
ತತ್ವಶಿಖಾಮಣಿ, ಪುಣ್ಯದ ಪುಂಜೆ,
ನೈಷ್ಠೆಯ ಖಣಿ, ಸತ್ಯದ ಸದನ,
ಶಾಂತಿ ನಿಧಿ, ಚಿದಂಬರ ಸಂಯುತೆ,
ಸ್ವಾಭಿಮಾನದ ಸಾಗರೆ, ನಿತ್ಯದ ನಿವಾಸೆ.
ಎಂದೆಲ್ಲಾ ಕರೆದು ಧನ್ಯರಾಗಿದ್ದಾರೆ. ಇವರು ಪ್ರಯೋಗಿಸಿದ ಒಂದೊಂದು ಪದವೂ ಅಕ್ಕ ಮಹಾದೇವಿಯವರ ಸರ್ವಗ್ರಾಹ್ಯವಾದ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಂತಿದೆ.
ಲೋಕದೊಳಗಿದ್ದು ಲೋಕಾತೀತರಾದ ಅಕ್ಕ ಮಹಾದೇವಿಯವರು ಹೆಣ್ತತನವನ್ನು ಮೀರಿ ತಾನೊಂದು ಚೈತನ್ಯವೆಂಬ ಭಾವದಿಂದ ದೈಹಿಕ ಭಿನ್ನತೆಯನ್ನು ಮೀರಿ ಕಟ್ಟಿಕೊಂಡ ವ್ಯಕ್ತಿತ್ವ. ಇಂತಹ ಅರಿವಿನಿಂದಲೇ ಇವರಿಗೆ ಇಹಪರ ನಾಸ್ತಿಯಾದ ಸಾಧನೆ ಸಾಧ್ಯವಾಗಿ ಒಂದು ತಾತ್ವಿಕ ನೆಲೆಗಟ್ಟಿನಲ್ಲಿ ಮುನ್ನಡೆಯಲು ಸಾಧ್ಯವಾಯಿತು.
ಈ ದೇಹದ ಪ್ರಶ್ನೆ ಎದುರಾದಾಗಲೆಲ್ಲಾ ನನಗೆ ಅಲ್ಲಮ ಪ್ರಭುಗಳು, ಅಕ್ಕ ಮಹಾದೇವಿಯವರು ಇಬ್ಬರೂ ಕಾಡುತ್ತಲೇ ಇರುತ್ತಾರೆ. ಈ ಎರಡೂ ಮಹಾಚೇತನಗಳು ಪ್ರಾಪಂಚಿಕ ಮೋಹ ತೊರೆದು ಪಾರಮಾರ್ಥಿಕ ನೆಲೆಯನ್ನು ಅಪ್ಪಿಕೊಂಡವರು, ಇಬ್ಬರೂ ಜ್ಞಾನ–ವೈರಾಗ್ಯದ ಮೇರು ಶಿಖರಗಳು, ಜ್ಞಾನ ವೈರಾಗ್ಯದ ಪುರುಷ ಮುಖ ಅಲ್ಲಮನಾದರೆ, ಸ್ತ್ರೀ ಮುಖ ಅಕ್ಕ ಮಹಾದೇವಿಯಾಗಿದ್ದಾಳೆ. ಇವರಿಬ್ಬರೂ ಕಾಯಕದ ಕುರಿತು ಮಾತನಾಡಿದ್ದು ಕಡಿಮೆ, ಕಾಯದ ಕುರಿತು ಮಾತನಾಡಿದ್ದೇ ಹೆಚ್ಚು. ಗಮನಿಸಬೇಕಾದ ಸಂಗತಿಯೆಂದರೆ ಸಾಧನೆಗೆ ಇವರಿಬ್ಬರೂ ಹಾತೊರೆದಾಗ ಅಲ್ಲಮನ ಸಾಧನೆಯ ಹಾದಿಗೆ ಅವನ ಕಾಯ ಕಾಡಲಿಲ್ಲ, ಆದರೆ ಅದೇ ಸಾಧನೆಯ ಹಾದಿಯಲ್ಲಿ ಅಕ್ಕಮಹಾದೇವಿಯವರು ನಡೆದಾಗ ಅವಳ ಕಾಯ ಅಪಾರವಾಗಿ ಕಾಡಿತು. ಇದರಿಂದಾಗಿ ಅಕ್ಕ ಮಹಾದೇವಿ ಅನುಭವಿಸಿದ ಯಾತನೆ, ಅವಮಾನ, ಅವಹೇಳನ, ತಿರಸ್ಕಾರ, ಅಪಾರವಾದುದು. ಏಕೆಂದರೆ ಅಕ್ಕ ಮಹಾದೇವಿ ಸ್ತ್ರೀಯಾದ ಕಾರಣ. ಆದರೆ ಅಕ್ಕ ಮಹಾದೇವಿ ನಿಸ್ಸೀಮ ಸಾಧಕಿ, ಸ್ತ್ರೀಯೆಂಬ ಕಾಯದ ಲಜ್ಜೆಯನ್ನೇ ಕಳೆದುಕೊಂಡು ಶಿವಯೋಗ ಸಾಧಿಸಿದ ನಿಜವಾದ ಶಿವಯೋಗಿಣಿ. ಇದು ಅಸಾಧಾರಣವಾದ ಸಾಧನೆ. ಇದು ಅಕ್ಕ ಮಹಾದೇವಿಯವರ ವ್ಯಕ್ತಿತ್ವದ ನಿಲುವು, ತನ್ನ ನಿಲುವು, ಸಿದ್ಧಾಂತಗಳಿಗೆ, ತತ್ವಗಳಿಗೆ ತಾನು ಬದ್ಧಳಿದ್ದೇನೆ ಎಂಬ ಅಚಲವಾದ ಆತ್ಮವಿಶ್ವಾಸ ಅಕ್ಕ ಮಹಾದೇವಿಯರಿಗಿತ್ತು. ಸೈದ್ಧಾಂತಿಕವಾಗಿ ಗಟ್ಟಿಗೊಂಡ ಇವರ ವ್ಯಕ್ತಿತ್ವ ಪರಂಪರೆಯ ತಾಕಲಾಟದ ಮಧ್ಯದಲ್ಲಿಯೂ ಉಳಿದುಕೊಂಡು ಬಂದಿರುವುದರಿಂದ ಈ ಕಾಲಘಟ್ಟದಲ್ಲಿಯೂ ಅಕ್ಕ ಮಹಾದೇವಿಯವರು ಮತ್ತೆ ಮತ್ತೆ ಮುಖ್ಯರಾಗುತ್ತಾರೆ ಹಾಗೂ ಸ್ಮರಣೀಯರಾಗುತ್ತಾರೆ. ಅಕ್ಕ ಮಹಾದೇವಿಯವರ ವ್ಯಕ್ತಿತ್ವ ಮೂರು ಕಾರಣಗಳಿಂದ ಆದರಣೀಯವಾಗುತ್ತದೆ.
- ಅಕ್ಕಮಹಾದೇವಿಯವರು ತಮ್ಮ ಬದುಕಿನ ದಿಕ್ಕು-ಗುರಿಗಳನ್ನು ಆಯ್ದುಕೊಳ್ಳುವಲ್ಲಿ ಅವರು ತೋರುವ ಸ್ವತಂತ್ರವಾದ ನಿಲುವಿನಿಂದ ಮತ್ತು ನಿರ್ಭಿತ ವ್ಯಕ್ತಿತ್ವಯಿಂದ.
- ತಾವು ಆಯ್ಕೆ ಮಾಡಿಕೊಂಡ ದಿಕ್ಕು–ಗುರಿ ಸಾಧಿಸುವುದಕ್ಕೆ ಜಗತ್ತನ್ನೇ ಎದುರಿಸಿ ಹೊರಟ ಅವರ ದೃಢತೆ ಮತ್ತು ಅವರ ಮೇಲೆ ಅವರಿಗಿದ್ದ ಅಚಲ ಆತ್ಮ ವಿಶ್ವಾಸದಿಂದ.
- ಅವರ ವೈಯಕ್ತಿಕ ಬದುಕಿನ ಹೋರಾಟ ಮತ್ತು ಆಧ್ಯಾತ್ಮ ಸಾಧನೆಯಲ್ಲಿ ಅವರು ತೋರಿರುವ ತೀವ್ರ ವೈರಾಗ್ಯ, ಸ್ವಂತಿಕೆ ಮತ್ತು ಜ್ಞಾನದಿಂದ ಈ ಮೂರು ಕಾರಣಗಳಿಂದ ಇವರ ವ್ಯಕ್ತಿತ್ವ ಆದರಣೀಯವಾಗುತ್ತದೆ.
ಅಕ್ಕ ಮಹಾದೇವಿಯರ ವಚನಗಳಲ್ಲೂ ಸಹ ನಾವು ಅವರ ವೇದನೆ, ಸಂವೇದನೆ, ನಿವೇದನೆಗಳೆಂಬ ಮೂರು ತಾತ್ವಿಕ ನಿಲುವುಗಳನ್ನು ದರ್ಶಿಸುತ್ತೇವೆ.
ಅಕ್ಕ ಮಹಾದೇವಿಯವರ ಜನನದಿಂದ ಹಿಡಿದು ಕದಳಿಯ ವನವನ್ನು ಪ್ರವೇಶ ಮಾಡುವ ಅವರ ಪಯಣವನ್ನು ಮುಖ್ಯವಾಗಿ ಐದು ಹಂತಗಳಲ್ಲಿ ವಿಂಗಡಿಸಿಕೊಳ್ಳಬಹುದು.
- ಅಕ್ಕಮಹಾದೇವಿಯವರ ಜನನ.
- ಅಕ್ಕಮಹಾದೇವಿಯವರ ಬಾಲ್ಯ.
- ಅಕ್ಕಮಹಾದೇವಿಯವರ ಯೌವನ–ಮದುವೆ.
- ಅಕ್ಕಮಹಾದೇವಿಯವರ ಕಲ್ಯಾಣದೆಡೆಗಿನ ಪಯಣ.
- ಅಕ್ಕಮಹಾದೇವಿಯವರು ಕದಳಿಯವನ ಪ್ರವೇಶ ಮಾಡುವುದು.
ಈ ಎಲ್ಲಾ ಹಂತಗಳಲ್ಲಿ ಅಕ್ಕ ಮಹಾದೇವಿಯವರು ಕಟ್ಟಿಕೊಳ್ಳುವ ವ್ಯಕ್ತಿತ್ವ ಮತ್ತು ಮುಂದೆ ಅವರು ತಾಳುವ ತಾತ್ವಿಕ ನಿಲುವುಗಳ ಕುರಿತು ಹಲವಾರು ವಿದ್ವಾಂಸರು, ಚಿಂತಕರು ತಮ್ಮ ಚರ್ಚೆ, ವಿಮರ್ಶೆ, ಚಿಂತನಾ ಲಹರಿಯನ್ನು ಹಂಚಿಕೊಂಡಿದ್ದಾರೆ.
ಅಕ್ಕ ಮಹಾದೇವಿ ಬಸವಣ್ಣನವರು, ಅಲ್ಲಮಪ್ರಭುಗಳು, ಸಿದ್ಧರಾಮೇಶ್ವರರು, ಚನ್ನಬಸವಣ್ಣ ಮುಂತಾದ ಶಿವಶರಣರು ಬದುಕಿದ ಕಾಲಾವಧಿಯಲ್ಲಿ ಜೀವಿಸಿದವರು. ಅಕ್ಕ ಮಹಾದೇವಿಯವರ ಜೀವನದ ಮೇಲೆ ಬೆಳೆಕು ಚೆಲ್ಲುವ ವಿವರ ಅಥವಾ ಸಾಹಿತ್ಯ ಆಧಾರಗಳನ್ನು ಎರಡು ವಿಧದಲ್ಲಿ ಗುರುತಿಸಿಕೊಳ್ಳಬಹುದು.
- ಶರಣ ಕಾಲಾವಧಿಯ ಮುಂದಿನ ಹಂತದಲ್ಲಿ ಕವಿಗಳು ರಚಿಸಿದ ಕಾವ್ಯ, ಚರಿತೆ, ಪುರಾಣ ಮುಂತಾದವುಗಳು.
- 15 ನೇ ಶತಮಾನದಿಂದ ಮುಂದೆ ವೀರಶೈವ ತತ್ವ ಚಿಂತಕರು ರಚಿಸಿದ ನಾಲ್ಕು ಶೂನ್ಯ ಸಂಪಾದನೆಗಳು.
ಮೊದಲ ಹಂತದಲ್ಲಿ ಹರಿಹರ ಕವಿ ಬರೆದಿರುವ “ಮಹಾದೇವಿಯಕ್ಕನ ರಗಳೆ” ಇದು ಕಾಲದ ದೃಷ್ಠಿಯಿಂದ ತುಂಬಾ ಹಳೆಯದಾಗಿದೆ. ನಂತರದಲ್ಲಿ ಚನ್ನಬಸವಾಂಕನ “ಮಹಾದೇವಿಯಕ್ಕನ ಪುರಾಣ”, ರಾಚಕವಿ ರಚಿಸಿದ “ಮಹಾದೇವಿಯಕ್ಕನ ಸಾಂಗತ್ಯ”, ಇವು ಮುಖ್ಯವಾಗಿ ಮತ್ತು ನೇರವಾಗಿ ಅಕ್ಕ ಮಹಾದೇವಿಯವರ ಬದುಕನ್ನು ಕೇಂದ್ರೀಕರಿಸಿಕೊಂಡಿರುವ ಅಪ್ಪಟ ಕನ್ನಡ ಕೃತಿಗಳು.
ಇದಲ್ಲದೆ ಬೇರೆ ಶಿವಶರಣರ ಜೀವನ ಚರಿತ್ರೆಯಲ್ಲಿ ಸಾಂದರ್ಭಿಕವಾಗಿ ಬರುವ ಅಕ್ಕ ಮಹಾದೇವಿಯವರ ಜೀವನ ಚಿತ್ರಿಸಿರುವ ಕೃತಿಗಳು. ಅವುಗಳಲ್ಲಿ ಮುಖ್ಯವಾಗಿ ಚಾಮರಸನ ಪ್ರಭುಲಿಂಗಲೀಲೆ, ಎಳಂದೂರು ಹರೀಶ್ವರ ರಚಿತವಾದ “ಪ್ರಭುದೇವರ ಪುರಾಣ”, ವಿರೂಪಾಕ್ಷ ಪಂಡಿತ ಬರೆದಿರುವ “ಚನ್ನಬಸವ ಪುರಾಣ” ಮುಖ್ಯವಾದವುಗಳು. ಬಾಲಪಾಪಾಂಬಾ ಎಂಬಾಕೆ “ಅಕ್ಕಮಹಾದೇವಿ ಬೋದೋಲ್ಲಾಸ” ಎಂಬ ತೆಲುಗು ಯಕ್ಷಗಾನ ಅಕ್ಕಮಹಾದೇವಿಯವರ ಬದುಕನ್ನೇ ಕೇಂದ್ರೀಕರಿಸಿದ ಕೃತಿಯಾಗಿದೆ. ಇದಲ್ಲದೆ ಗೌರಿಶಂಕರ ಸ್ವಾಮಿಗಳು ಒಂದು ಚಂಪೂಕಾವ್ಯ ಬರೆದಿದ್ದರೆ, ಭೂಸನೂರಮಠ ಅವರು “ಭವ್ಯಮಾನವ” ಎಂಬ ಮಹಾಕಾವ್ಯ ರಚಿಸಿದ್ದಾರೆ.
12 ನೇ ಶತಮಾನದ ವಚನ ಸಾಹಿತ್ಯ ಮತ್ತು ಶರಣ ಚಳುವಳಿಯ ಪ್ರಭಾವ ಮುಂದಿನ ಕಾಲಮಾನಕ್ಕೂ ಉಳಿದುಕೊಂಡು ಬಂದಿತು. 15 ನೇಯ ಶತಮಾನದಲ್ಲಿ ಹುಟ್ಟಿಕೊಂಡ ನಾಲ್ಕು ಶೂನ್ಯ ಸಂಪಾದನೆಗಳು ಅಕ್ಕಮಹಾದೇವಿಯವರ ಜೀವನದ ಮೇಲೆ ಬೆಳಕು ಚೆಲ್ಲಿದವು. ಇವುಗಳಲ್ಲಿ ಚಾರಿತ್ರಿಕ ದಾಖಲೆಗಳಿಗಿಂತ ಅಕ್ಕ ಮಹಾದೇವಿಯವರ ವ್ಯಕ್ತಿತ್ವ ಮತ್ತು ಅವರ ತಾತ್ವಿಕ ನಿಲುವುಗಳ ಕುರಿತಾದ ಬೆರಗು, ಗೌರವ, ವಿಸ್ಮಯ, ಶ್ರದ್ಧೆಗಳು ಕಂಡು ಬರುತ್ತವೆ.
- ಕ್ರಿ. ಶ. 1190 ಪಾಲ್ಕುರಿಕೆ ಸೋಮನಾಥ: ಬಸವ ಪುರಾಣಮು.
- ಕ್ರಿ. ಶ. 1195 ಹರಿಹರ: ಬಸವರಾಜದೇವರ ರಗಳೆ.
- ಕ್ರಿ. ಶ. 1420 ಶಿವಗಣ ಪ್ರಸಾದಿ ಮಹದೇವಯ್ಯ: ಶೂನ್ಯ ಸಂಪಾದನೆ.
- ಕ್ರಿ. ಶ. 1430 ಚಾಮರಸ: ಪ್ರಭುಲಿಂಗಲೀಲೆ.
- ಕ್ರಿ. ಶ. 1495 ಹಲಗೆ ಆರ್ಯ: ಶೂನ್ಯ ಸಂಪಾದನೆ ಪರಿಷ್ಕರಣೆ.
- ಕ್ರಿ. ಶ. 1510 ಗೂಳೂರು ಸಿದ್ಧವೀರಣ್ಣನೊಡೆಯರು: ಪ್ರಭುದೇವರ ಶೂನ್ಯ ಸಂಪಾದನೆ.
- ಕ್ರಿ. ಶ. 1560 ಚೆನ್ನಬಸವಾಂಕ: ಮಹಾದೇವಿಯಕ್ಕನ ಪುರಾಣ.
- ಕ್ರಿ. ಶ. 1600 ರಾಚಕವಿ: ಮಹಾದೇವಿಯಕ್ಕನ ಸಾಂಗತ್ಯ.
- ಕ್ರಿ. ಶ. 1650 ಸಿದ್ಧನಂಜೇಶ: ಗುರುರಾಜ ಚಾರಿತ್ರ್ಯ.
- ಕ್ರಿ. ಶ. 1672 ಶಾಂತಲಿಂಗ ದೇಶಿಕ: ಭೈರವೇಶ್ವರ ಕಥಾಮಣಿ ಸೂತ್ರ ರತ್ನಾಕರ.
ಕನ್ನಡ ಮಣ್ಣಿನ ಮಗಳಾಗಿ ಅಪರೂಪದಲ್ಲೇ ಅಪರೂಪವಾದ ಧೀಃಶಕ್ತಿಯಿಂದ ಕಂಗೊಳಿಸಿ ಸ್ವಾನುಭಾವದಿಂದಲೇ ಗಟ್ಟಿಗೊಂಡ ಅಕ್ಕ ಮಹಾದೇವಿಯವರು ಅಂದಿನ ಕಾಲಘಟ್ಟದಲ್ಲಿ ಮಹಿಳಾ ಸಂಕುಲಕ್ಕೆ ಅಪರಿಚಿತವಾದ ಆಧ್ಯಾತ್ಮಿಕ ಹಾದಿಯಲ್ಲಿ ಒಂಟಿಯಾಗಿ ನಡೆದು ಸಿದ್ಧಿಯನ್ನು ಸಾಧಿಸಿದವರು. ಬಹುಶಃ ಅಕ್ಕ ಮಹಾದೇವಿಯವರು ಬದುಕಿದ ಕಾಲದಿಂದ ಬಹು ದೂರದಲ್ಲಿರುವ ನಾವುಗಳು ಸ್ತ್ರೀ ವಿಮುಕ್ತಿ, ಸ್ವತಂತ್ರ ಆಲೋಚನೆ, ಪ್ರಗತಿಪರ ವಿಚಾರಗಳಿಗೆ ಮತ್ತೆ ಮತ್ತೆ ಅಕ್ಕ ಮಹಾದೇವಿಯವರ ವ್ಯಕ್ತಿತ್ವದೊಂದಿಗೆ ಮುಖಾಮುಖಿಯಾಗುತ್ತಾ ಅವರ ತಾತ್ವಿಕ ನಿಲುವುಗಳೊಂದಿಗೆ ಅನುಸಂಧಾನಗೊಳುತ್ತಾ ನಡೆಯಬೇಕಾದ ಅನಿವಾರ್ಯತೆ ಇದೆ.
ಇದಕ್ಕೆ ಉತ್ತರ ಕೊಡೋದಿಕ್ಕೆ ನಮಗೆ ಹರಿಹರನ “ಮಹಾದೇವಿಯಕ್ಕನ ರಗಳೆ” ಹಾಗೂ ಶೂನ್ಯ ಸಂಪಾದನೆಗಳಲ್ಲಿ ಕಂಡು ಬರುವ ಚಿಂತನೆಗಳು ಸಹಾಯ ಮಾಡುತ್ತವೆ. ಎಲ್ಲಕ್ಕಿಂತ ಪ್ರಮುಖವಾದ ಆಕರ ಅಂದರೆ ವಿಶೇಷವಾಗಿ ಅಕ್ಕಮಹಾದೇವಿಯವರ ವಚನಗಳು. ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಬಹಳ ಸ್ಪಷ್ವವಾಗಿ ಮತ್ತು ನೇರವಾಗಿ ಅಕ್ಕಮಹಾದೇವಿಯವರು ತಮ್ಮ ವಚನಗಳ ಮೂಲಕ ಕೊಡತಾ ಹೋಗತಾರೆ.
ಅಕ್ಕಮಹಾದೇವಿಯವರ ಈ ಪಯಣವನ್ನು ಹರಿಹರನ ರಗಳೆಯ ಮೂಲಕ ಪ್ರಾರಂಭಿಸಿ ನಂತರ ಅಕ್ಕಮಹಾದೇವಿಯವರದೇ ಮಾತುಗಳನ್ನು ಅವರ ವಚನಗಳಿಂದ ತಿಳಿಯುವಂಥ ಪ್ರಯತ್ನವನ್ನು ಮಾಡೋಣ. ಇಲ್ಲಿ ಉಲ್ಲೇಖ ಮಾಡಿದ ಆಕರ ಗ್ರಂಥಗಳಲ್ಲಿ ಒಂದನೇಯದ್ದು 1933 ರಲ್ಲಿ ಶ್ರೀ ಚನ್ನಮಲ್ಲಿಕಾರ್ಜುನ ಅವರು ಪ್ರಕಾಶನ ಮಾಡಿದ “ಮಹಾದೇವಿಯಕ್ಕನ ರಗಳೆ” ಮತ್ತು ಎರಡನೇಯದ್ದು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಕಟ ಮಾಡಿರುವ ಡಾ. ಎಮ್ ಎಮ್ ಕಲಬುರ್ಗಿಯವರು ಸಂಪಾದನೆ ಮಾಡಿರುವ “ಹರಿಹರನ ರಗಳೆಗಳು” ಎನ್ನುವ ಪುಸ್ತಕಗಳು.

ಅಕ್ಕಮಹಾದೇವಿಯವರ ಕಥೆ ಕೈಲಾಸದಲ್ಲಿ ನಡೆಯುವ ಒಂದು ಸಭೆಯ ಮೂಲಕ ಶುರುವಾಗುತ್ತದೆ. ಪಾರ್ವತಿಯ ಬಳಿಯಲ್ಲಿ “ಮಹಾದೇವಿ” ಎನ್ನುವ ಹೆಸರಿನ ರುದ್ರಕನ್ನಿಕೆ ಅಥವಾ ಭಕ್ತೆ ನಿಂತಿರತಾಳೆ. ಒಬ್ಬ ಗುಪ್ತ ಗಣನಾಥ ಅಂದರೆ ಭಕ್ತ ಬಂದು ಪಾರ್ವತಿಗೆ ನಮಸ್ಕರಿಸುತ್ತಾನೆ. ಈ ನಮಸ್ಕರಿಸುವ ಭರದಲ್ಲಿ ಆ ಗುಪ್ತ ಗಣನಾಥನ ಕಾಲು ಹಿಂದೆ ನಿಂತಿದ್ದ ಈ ಮಹಾದೇವಿಗೆ ಬಡೀತದೆ. ಈ ಪ್ರಸಂಗವನ್ನ ಹರಿಹರ ಸೊಗಸಾಗಿ ಚಿತ್ರಿಸಿದ್ದಾನೆ.
ಎಂದು ಭಯ ಭಕ್ತಿಯಿಂದಲ್ಲಿ ಮೈಯಿಕ್ಕುತಿರೆ
ಪಿಂದಿರ್ದ ಭಕ್ತೆಯಂ ತನ್ನ ಕಾಲ್ ತಾಗುತಿರೆ
ದೇವಿಯ ಪೆಸರಪ್ಪ ಮಹಾದೇವಿ ಯೆಂಬುವಳಂ
ಭಾವಿಸಲು ರುದ್ರರ್ಕನ್ನಿಕೆ ಯೆನಿಸಿ ನಿಂದಳಂ
ಕಾಲ್ ತಾಗೆ ಕೋಪಿಸುತೆ ನುಡಿದಳತಿ ಗರ್ವದಿಂ
(ಮಹಾದೇವಿಯಕ್ಕನ ರಗಳೆ-1933/ಶ್ರೀ ಚನ್ನಮಲ್ಲಿಕಾರ್ಜುನ/ಪುಟ-6/ಸಾಲು-110)
ಆಗ ರುದ್ರ ಕನ್ನಿಕೆ ಮಹಾದೇವಿ ಕೋಪದಿಂದ ಗರ್ವದಿಂದ ಹೇಳುವುದು ಹೀಗೆ:
ಎಲೆ ಭವಿಯೇ ನೋಡಿ ಪೊಡಮಡು ಪೊಡ ಮಡೆಂದೆನಲು
ಎಲೆಲೆ ಪಿಂದಿರ್ದರಂ ಕಾಣಬಾರದೆ ಯೆನಲು
(ಮಹಾದೇವಿಯಕ್ಕನ ರಗಳೆ-1933/ಶ್ರೀ ಚನ್ನಮಲ್ಲಿಕಾರ್ಜುನ/ಪುಟ-6/ಸಾಲು-110)
ಎಲೆ ಭವಿಯೆ, ನಮಸ್ಕಾರ ಮಾಡಬೇಕಾದರೆ ಹಿಂದೆ ಮುಂದೆ ಯಾರಿದಾರೆ ಅಂತ ನೋಡಕೊಂಡ ಮಾಡಬೇಕು ಅಂತ ಹೇಳಿ ಆಕೆ ಹೇಳತಾಳೆ.
ಭವಿಯೆಂಬ ನುಡಿಗೇಳ್ದು ಗುಪ್ತಮಾಹೇಶ್ವರಂ
ತವೆಕಂದಿ ಭಕ್ತಿಯಭಿಮಾನಿ ನೋವುತೇ ಕರಂ
ದೇವಿತರ ವದನಮಂ ದೈನ್ಯದಿಂ ನೋಡುತಿರೆ
ದೇವಿಯರು ನುಡಿದರಾ ನೆರೆದ ಸಭೆ ನಡುಗುತಿರೆ
(ಮಹಾದೇವಿಯಕ್ಕನ ರಗಳೆ-1933/ಶ್ರೀ ಚನ್ನಮಲ್ಲಿಕಾರ್ಜುನ/ಪುಟ-6/ಸಾಲು-110)
ಭವಿ ಎನ್ನುವ ಮಾತು ಕೇಳಿ ಅವನಿಗೆ ಅವಮಾನವಾಯಿತು. ಸಭೆಯಲ್ಲಿ ಆ ಗಣನಾಥ ನಡಗತಾ ಇದ್ದಾ ಅಂತ ಹರಿಹರ ಬರೀತಾನೆ. ಇದನ್ನು ಕಂಡಂಥಾ ಪಾರ್ವತಿ ಮಹಾದೇವಿಗೆ ಬುದ್ಧಿ ಹೇಳತಾ ಮಾತಾಡತಾಳೆ.
ಏನವ್ವ ಮಹಾದೇವಿ ಭವಿಯೆಂದು ನುಡಿವರೇ
ಜ್ಞಾನನಿಧಿ ಗುಪ್ತ ಗಣನಾಥನಂ ಜಡಿವರೇ
ಹೊರ ವೇಷವಿದ್ದಲ್ಲಿ ಭಕ್ತಿ ದೊರೆ ಕೊಳ್ವುದೇ
ಬರಿ ವೇಷದೊಳು ನುಡಿಯ ಬಲೆಯೊಳಗೆ ಬೀಳ್ವುದೇ
ಗುಪ್ತರುಂ ಶಾಂತರುಂ ಸತ್ಯವುಳ್ಳವರುಂಟು
ಆಪ್ತರೆನ್ನವರ ಭವನೊಲುಮೆ ಯುಳ್ಳವರುಂಟು
(ಮಹಾದೇವಿಯಕ್ಕನ ರಗಳೆ-1933/ಶ್ರೀ ಚನ್ನಮಲ್ಲಿಕಾರ್ಜುನ/ಪುಟ-7/ಸಾಲು-120)
ಪಾರ್ವತಿಯ ನೇರವಾಗಿ ಮಹಾದೇವಿಗೆ ಕೇಳತಾಳೆ. ಏನವ್ವ ಮಹಾದೇವಿ ಗುಪ್ತ ಗಣನಾಥನನ್ನು ಭವಿಯೆಂದು ಜರಿಯುವುದೇ? ಹೊರಗಡೆಯ ವೇಷವನ್ನು ಹಾಕ್ಕೊಂಡಿದ್ದಕ್ಕಾಗಿ ಅವರನ್ನು ಭಕ್ತರು ಅಂತ ಹೇಳಿ ನಾವು ನೋಡೋದಕ್ಕೆ ಆಗೋದಿಲ್ಲಾ. ಹಾಗೇನೇ ಹೊರಗಿನ ವೇಷದಿಂದ ಅವರನ್ನು ಭವಿ ಅಂತ ಏನಾದರೂ ನಾವು ಭಾವಿಸಿ ಬಿಟ್ಟರೆ ಅದು ಸುಳ್ಳಾಗುತ್ತೆ. ಆದ್ದರಿಂದ ಪಾರ್ವತಿಯು ಮಹಾದೇವಿಗೆ ಅಂದರೆ ರುದ್ರ ಕನ್ನಿಕೆಗೆ ಹೇಳತಾಳೆ.
ಭಕ್ತರ ನಿರೋಧದಿಂ ಒಂದು ಜನ್ಮಂ ನಿನಗೆ
ಯುಕ್ತವೆನಿಸಿತ್ತು ನೂರ್ವರುಷ ಉರ್ವರೆ ಯೊಳಗೆ
ಭಕ್ತರುದರಂ ಬೊಕ್ಕು ನಿಜ ನಾಮಮಂ ತಳೆದು
ಭಕ್ತನಂ ಭವಿಯೆಂದ ದೂಸರಿಂದ ಪ್ಪುದಿದು
ಭವಿಗೆ ಹೆಂಡತಿಯಾಗಿ ಭಕ್ತರ್ಗೆ ಶರಣೆಂದು
ಭವ ವಾರ್ಧಿಯಂ ದಾಂಟಿ ಶ್ರೀಗಿರಿಗೆ ನಡೆತಂದು
ಬಳಿಕ ಬಪ್ಪುದು ಹೋಗೆನುತ್ತ ಬೆಸ ಸಲ್ಕಂದು
(ಮಹಾದೇವಿಯಕ್ಕನ ರಗಳೆ-1933/ಶ್ರೀ ಚನ್ನಮಲ್ಲಿಕಾರ್ಜುನ/ಪುಟ-7/ಸಾಲು-130)
ನನ್ನ ಭಕ್ತನನ್ನು ಭವಿ ಅಂತ ಕರೆಯೋದಕ್ಕೆ ಮುಂಚೆ ಒಂದು ಸರತಿ ಇದೇ ಹೆಸರಿಂದ ಭೂಮಿಗೆ ಹೋಗಿ ಭಕ್ತರ ಮನೆಯಲ್ಲಿ ಹುಟ್ಟಿ ಭವಿಯನ್ನು ಮದುವೆಯಾಗಿ ಆ ನೋವನ್ನು ಅನುಭವಿಸು. ಅಂದರೆ ಭವಿಯಾಗುವ ಆ ನೋವು, ಸಂಕಟ ಅಥವಾ ಕಿರಿಕಿರಿ ಇದೆಯಲ್ಲಾ ಮತ್ತು ಭಕ್ತರಾದಂತವರು ಭವಿಯ ಜೊತೆಗೆ ಇರಬೇಕಾದಾಗ ಆಗುವಂಥ ನೋವುಗಳನ್ನು ಅನುಭವಿಸಿ ಆ ಭವದ ಹಂಗನ್ನು ದಾಟಿ ಶ್ರೀಗಿರಿಯವರೆಗೆ ನಡೆದು ಬಂದು, ಬಳಿಕ ಕೈಲಾಸಕ್ಕೆ ಹಿಂತಿರುಗಿ ಬಾ ಅಂತ ಹೇಳಿದ್ದು ಅಕ್ಕ ಮಹಾದೇವಿಯವರ ಹುಟ್ಟಿಗೆ ಕಾರಣವನ್ನು ಹರಿಹರ ಬರೀತಾನೆ.
ಶಾಪ ವಿಮೋಚನೆಗಾಗಿ ರುದ್ರಕನ್ನಿಕೆಯೊಬ್ಬಳು ಜನಿಸಿ ಭವಿಯ ಕೈಹಿಡಿದು ತನ್ನ ಭವಿತನವ ನೀಗಿಕೊಳ್ಳುವ ಪುರಾಣ ಕಥೆಗಳು ಮಹಾತ್ಮರ ಜೀವನ ವೃತ್ತಾಂತಕ್ಕೆ ಉಚಿತವೆಂಬ ರೀತಿಯಲ್ಲಿ ದಾಖಲಾಗುತ್ತದೆ. ಹರಿಹರ ಕವಿ ಮೊಟ್ಟ ಮೊದಲ ತನ್ನ “ಮಹಾದೇವಿಯಕ್ಕನ ರಗಳೆ” ಯಲ್ಲಿ ಅಕ್ಕ ಮಹಾದೇವಿಯವರ ಜನನ ವೃತ್ತಾಂತವನ್ನು ಈ ವಿಧಾನದಲ್ಲಿ ನಿರೂಪಿಸುತ್ತಾನೆ.
ಮಹಾದೇವಿಯೆಂಬ ರುದ್ರಕನ್ನಿಕೆ ಗೂಢಮಾಹೇಶ್ವರನೊಬ್ಬನ ಕಾಲು ಸೋಂಕಿದಾಗ, ಮಾಹೇಶ್ವರನ ನಿಜರೂಪು ತಿಳಿಯದೆ ದುಡುಕಿ ಭವಿ ಎಂದು ಜರಿದ ಪರಿಣಾಮ, ಪಾರ್ವತಿದೇವಿಯಿಂದ ಶಾಪಕ್ಕೆ ತುತ್ತಾಗಿ, ಭೂಮಿಯಲ್ಲಿ ಶಿವಭಕ್ತರ ಮಗಳಾಗಿ ಹುಟ್ಟಿ ಭವಿಯ ಕೈಹಿಡಿದದ್ದು ಶಾಪ ವಿಧಿಯಿಂದ
ಎಂದು ಹರಿಹರ ಉಲ್ಲೇಖಿಸುತ್ತಾನೆ. ಮುಂದೆ ಶಿವಭಕ್ತರೊಡನೊಂದಾಗಿ ಭಕ್ತಿ ಪಥದಲ್ಲಿ ಸಾಗಿ ಬಳಿಕ ಶ್ರೀ ಪರ್ವತ ದ್ವಾರ ತಲುಪುವ ಸಂಗತಿಯನ್ನು ಮೊದಲು ಹರಿಹರ ತನ್ನ ರಗಳೆಯಲ್ಲಿ ಉಲ್ಲೇಖಿಸುತ್ತಾನೆ. ಇಲ್ಲಿ ಮಹಾದೇವಿಯಕ್ಕನವರ ಲೌಕಿಕ ಹುಟ್ಟನ್ನು ಎತ್ತರಿಸುತ್ತಾನೆ. ಕವಿ ಚಾಮರಸ ಪಾರ್ವತಿ ದೇವಿಯ ಸಾತ್ವಿಕ ಕಳೆ ಅಕ್ಕ ಮಹಾದೇವಿಯವರು ಎಂದು ಚಿತ್ರಿಸುತ್ತಾನೆ.
ಮಲೆನಾಡಿನ ಸುಂದರ ಪ್ರಕೃತಿಯ ಮಡಿಲಿನಲ್ಲಿರುವ ಇಂದಿನ ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ತಾಲೂಕಿನ ಉಡುತಡಿಯಲ್ಲಿ ಅಕ್ಕ ಮಹಾದೇವಿಯವರ ಜನನವಾಗುತ್ತದೆ. ಉಡುತಡಿಯು ಬಳ್ಳಿಗಾವಿಗೆ ಸಮೀಪದ ಊರು 12 ನೇ ಶತಮಾನದಲ್ಲಿ ಈ ಬಳ್ಳಿಗಾವೆಯು ಸಾಂಸ್ಕೃತಿಕ ಮತ್ತು ವಿದ್ಯಾಕೇಂದ್ರವಾಗಿ ಪ್ರಸಿದ್ಧವಾಗಿತ್ತು. ಅಕ್ಕ ಮಹಾದೇವಿಯವರ ಅಗಾಧವಾದ ಜ್ಞಾನಶಕ್ತಿ, ವೃದ್ಧಿಸಲು ಇಂತಹ ಪರಿಸರ ಪೂರಕವಾಗಿರಬಹುದು.
ಚಾಮರಸ ಕವಿ ಅಕ್ಕಮಹಾದೇವಿಯವರ ತಂದೆ–ತಾಯಿಗಳ ಹೆಸರನ್ನು ನಿರ್ಮಲ ಶೆಟ್ಟಿ-ಸುಮತಿ ಎಂದು ಉಲ್ಲೇಖಿಸುತ್ತಾನೆ. ನಿರ್ಮಲತ್ವಕ್ಕೂ, ಸುಮತಿಗೂ ಹುಟ್ಟುವುದು ಅಕ್ಕ ಮಹಾದೇವಿಯಂತಹ ಸಾತ್ವಿಕತೆಯಲ್ಲದೇ ಬೇರೊಂದು ಉಂಟೇ? ಎಂಬಂತಿದೆ. ಆ ಹೆಸರುಗಳ ಒಳಗಿನ ತಾತ್ವಿಕತೆ ಹರಿಹರ ಅದೇ ತಂದೆ–ತಾಯಿಗಳ ಹೆಸರನ್ನು ಶಿವಭಕ್ತ-ಶಿವಭಕ್ತಿ ಎಂದು ಕರೆದರೆ, ಶಾಂತೇಶ ಕವಿ ಓಂಕಾರಶೆಟ್ಟಿ ಮತ್ತು ಲಿಂಗಮ್ಮ ಎಂದು ಉಲ್ಲೇಖಿಸಿರುವುದು ಕಂಡು ಬರುತ್ತದೆ. ಹೀಗೆ ಅಕ್ಕ ಮಹಾದೇವಿಯವರ ಹುಟ್ಟು ಪವಾಡ ಸದೃಶವಾಗದೇ ಸಹಜವಾಗಿ ಎಲ್ಲರ ಹುಟ್ಟಿನಂತೆ ಸಹಜವಾಗಿದ್ದು, ಮುಂದೆ ಇವರು ದೇಹಭಾವ ನಿರಾಕರಿಸಿ ದೇವಭಾವ ಹೊಂದುವವರೆಗೂ ವಿಸ್ತರಿಸಿಕೊಳ್ಳುತ್ತಾ ಸಾಗುವುದು ಅವರ ಇಡೀ ಬದುಕಿನ ಭವ್ಯತೆಗೆ ದಿವ್ಯತೆಗೆ ಸಾಕ್ಷಿಯಾಗುತ್ತದೆ.
ಅಕ್ಕಮಹಾದೇವಿಯವರ ಬಾಲ್ಯದಿಂದ ಯೌವನದವರೆಗಿನ ಬೆಳವಣಿಗೆಯಲ್ಲಿ ತಂದೆ–ತಾಯಿಗಳಿಂದ ದೊರೆತ ಸಂಸ್ಕಾರ, ಗುರುವಿನಿಂದ ಪಡೆದ ಜ್ಞಾನ ತುಂಬಾ ಪ್ರಮುಖ ಪಾತ್ರವಹಿಸುತ್ತವೆ. ಉಡುತಡಿಯಲ್ಲಿರುವ ಗುರುಲಿಂಗ ದೇವರ ಮಠ ಮತ್ತು ಮಲ್ಲಿಕಾರ್ಜುನ ದೇವಾಲಯಗಳ ಪ್ರಭಾವಗಳು ಅಕ್ಕನವರ ವ್ಯಕ್ತಿತ್ವ ಮೇಲೆ ಬಾಲ್ಯದಿಂದಲೂ ಪ್ರಭಾವಿಸುವುದು, ಗುರುಗಳ ಕೃಪೆ ಅವರಿಂದ ದೀಕ್ಷೆ ಪಡೆದುಕೊಂಡದ್ದು ತುಂಬಾ ಗಾಢವಾಗಿ ಇವರ ಮೇಲೆ ಪ್ರಭಾವ ಬೀರಿವೆ. ಅಕ್ಕ ಮಹಾದೇವಿಯವರು ಶ್ರೀ ಗುರುಲಿಂಗದೇವರಿಂದ ದೀಕ್ಷೆ ಪಡೆದುಕೊಂಡು, ಆಳವಾದ ಅಧ್ಯಯನ ಕೈಗೊಂಡಿದ್ದು ಅವರ ವಚನಗಳಿಂದಲೇ ತಿಳಿದು ಬರುತ್ತದೆ. ಅಕ್ಕಮಹಾದೇವಿಯವರು ಚಿಕ್ಕಂದಿನಿಂದಲೆ ಶಾಸ್ತ್ರೋಕ್ತವಾಗಿ ವಿದ್ಯಾಭ್ಯಾಸ ಮಾಡಿರಲು ಸಾಧ್ಯವಿದೆ. ಕಾವ್ಯ, ಶಾಸ್ತ್ರ, ತತ್ವಶಾಸ್ತ್ರಗಳ ಅಧ್ಯಯನ ಅವರಿಗೆ ದೊರೆತಿದೆ. ಅವರ ವಚನಗಳನ್ನು ಅಭ್ಯಾಸ ಮಾಡಿದರೆ ಅದರಲ್ಲಿರುವ ಕಾವ್ಯಾತ್ಮಕತೆ, ಗೇಯಾತ್ಮಕತೆ, ತಾತ್ವಿಕತೆ ಅತ್ಯಂತ ಪ್ರೌಢವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತವೆ. ಪ್ರೌಢಯುತವಾದ ಭಾಷಾ ಪ್ರಯೋಗದಿಂದ ಅಕ್ಕ ಮಹಾದೇವಿಯವರು ಕೇವಲ ಕನ್ನಡದ ಮೊಟ್ಟ ಮೊದಲ ಅನುಭವ ಕವಿಯಿತ್ರಿಯಾಗದೇ ಕನ್ನಡದ ಮೊದಲ ಮಹಿಳಾ ಭಾವಗೀತೆ ರಚನಾಕಾರರೂ ಇವರೇ ಎಂದು ಹೇಳುವಲ್ಲಿ ಅತಿಶಯೋಕ್ತಿ ಎನಿಸದು. ಅನುಭವ ಮತ್ತು ಭಾವಗೀತಾತ್ಮಕ ರಚನೆಯಲ್ಲಿ ಮಹಿಳಾ ಸಾಹಿತ್ಯದಲ್ಲಿ ಇವರಿಟ್ಟ ಮೊದಲ ಹೆಜ್ಜೆಯೇ ಗಟ್ಟಿ ಹೆಜ್ಜೆಯಾಗಿದೆ.
ಗುರುವಿನಿಂದ ಅನುಗ್ರಹಿತವಾದ ಅಕ್ಕ ಮಹಾದೇವಿಯರು ಯೌವನಕ್ಕೆ ಕಾಲಿಡುವ ಹಂತದಲ್ಲೇ ತಾತ್ವಿಕ ನಿಲುವಿಗೆ ಏರುತ್ತಿದ್ದರು. ಬಾಲ್ಯದಿಂದಲೇ ಗುರುವಿನ ಕಾರುಣ್ಯ ಅಕ್ಕ ಮಹಾದೇವಿಯವರಿಗೆ ದೊರೆತಿದ್ದು ಆಗಲೇ ಅವರಿಗೆ ಇಷ್ಟಲಿಂಗ ಧಾರಣೆಯಾಗಿತ್ತು. ಗುರುಮುಖವಾಗಿ ಬಂದ ಇಷ್ಟಲಿಂಗವನ್ನು ಪೂಜಿಸುತ್ತ ಭಕ್ತಿ ಮತ್ತು ಆಧ್ಯಾತ್ಮ ಸಾಧನೆಯ ವಿದ್ಯೆಯು ಗುರುಗಳ ಉಪದೇಶದಿಂದ ಇವರಿಗೆ ದೊರಕೊಂಡಿತ್ತು. ಇದು ಸುವರ್ಣ ಪುಷ್ಪಕ್ಕೆ ಸುವಾಸನೆ ಬಂದಂತೆ ಇತ್ತು. ತನ್ನಂತರಂಗದ ಅರಿವನ್ನು ಅರಳಿಸಿದ ಗುರುವು, ತನ್ನ ಭವ ಬಂಧನ ಬಿಡಿಸಿಕೊಳ್ಳುವ ಹಾದಿ ತೋರಿದ ಗುರುವು, ನನ್ನ ಬದುಕಿನ ಪರಮಗುರು ಎಂದು ಅಕ್ಕ ಮಹಾದೇವಿಯರು ತಮ್ಮ ವಚನಗಳಲ್ಲಿ ಗುರುಸ್ಮರಣೆ ಮಾಡಿದ್ದಾರೆ. ಗುರು ಮರುಳಸಿದ್ಧರು ಇವರ ದೀಕ್ಷಾಗುರುವೆಂದೂ, ಗುರುಲಿಂಗದೇವರು ಶಿಕ್ಷಾ ಗುರುವೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಅಕ್ಕ ಮಹಾದೇವಿಯವರ ಸಾಕಷ್ಟು ವಚನಗಳಲ್ಲಿ ಸದ್ಗುರುವಿನ ಕೃಪೆಗೆ ಪಾತ್ರವಾದ ವಿಚಾರಗಳು ಸ್ಪಷ್ಟವಾಗಿವೆ.
ಗುರುವಿನ ಕರುಣದಿಂದ
ಲಿಂಗವ ಕಂಡೆ, ಜಂಗಮವ ಕಂಡೆ,
ಗುರುವಿನ ಕರುಣದಿಂದ
ಪಾದೋದಕವ ಕಂಡೆ, ಪ್ರಸಾದವ ಕಂಡೆ,
ಗುರುವಿನ ಕರುಣದಿಂದ
ಸಜ್ಜನ ಸದ್ಭಕ್ತರ ಗೋಷ್ಠಿಯ ಕಂಡೆ.
ಚನ್ನಮಲ್ಲಿಕಾರ್ಜುನಯ್ಯಾ,
ನಾ ಹುಟ್ಟಲೊಡನೆ ಶ್ರೀಗುರು
ವಿಭೂತಿಯ ಪಟ್ಟವ ಕಟ್ಟಿ ಲಿಂಗಸ್ವಾಯತವ
ಮಾಡಿದನಾಗಿ ಧನ್ಯಳಾದೆನು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-69/ವಚನ ಸಂಖ್ಯೆ-194)
ಅಕ್ಷರಾಭ್ಯಾಸದ ಜೊತೆಯಲ್ಲಿ ಅಕ್ಕ ಮಹಾದೇವಿಯವರು ಗುರು ಕರುಣದಿಂದ ಅಷ್ಟಾವರಣ, ಷಟಸ್ಥಲ, ಪಂಚಾಚಾರ ವಿಚಾರಗಳನ್ನು ತಿಳಿದುಕೊಂಡಿದ್ದರೆಂಬುದು ಸ್ಪಷ್ಟವಾಗಿದೆ. “ನಾ ಹುಟ್ಟಲೊಡನೆ ವಿಭೂತಿಯ ಪಟ್ಟವ ಕಟ್ಟಿ ಸದ್ಗುರು ಸ್ವಾಮಿ ಲಿಂಗಸ್ವಾಯತ್ತವ ಮಾಡಿದನಾಗಿ ಧನ್ಯಳಾದೆನು” ಎಂಬ ಮಾತುಗಳು ಅಕ್ಕನವರು ತಾವು ಬೆಳೆದಂತೆ ಲಿಂಗನಿಷ್ಠೆ ಬಲಗೊಂಡಿತು ಎಂಬ ವಿವರವು ಕಾಣುತ್ತದೆ. ಲಿಂಗನಿಷ್ಠೆ ಬೆಳೆದಂತೆ ಅಕ್ಕಮಹಾದೇವಿಯರ ತಾತ್ವಿಕ ನಿಲುವು ಮೂರ್ತಗೊಳ್ಳುತ್ತಿರುವ ಕುರುಹು ದೊರೆಯುತ್ತದೆ. ಭಕ್ತಸ್ಥಲದಲ್ಲಿ ನೆಲೆ ನಿಲ್ಲುವ ಇವರು ದೇಹಭಾವ ಕಳಚಿಕೊಂಡು ದೇವ ಭಾವ ಹೊಂದುತ್ತಿರುವ ಪರಿವರ್ತನೆಯ ಸಂದರ್ಭವನ್ನು ಅದಕ್ಕೆ ಕಾರಣವಾದ ಅರಿವಿನ ಗುರುವನ್ನು ಬಹಳ ಸೂಕ್ಷ್ಮ ನೆಲೆಯಲ್ಲಿ ಗುರುತಿಸಿದ್ದು ಅಕ್ಕ ಮಹಾದೇವಿಯವರ ವಚನದಿಂದಲೇ ತಿಳಿಯುತ್ತದೆ.
ನರಜನ್ಮವ ತೊಡೆದು
ಹರಜನ್ಮವ ಮಾಡಿದ ಗುರುವೇ ನಮೋ ನಮೋ.
ಭವಬಂಧನವ ಬಿಡಿಸಿ
ಪರಮಸುಖವ ತೋರಿದ ಗುರುವೇ ನಮೋ ನಮೋ.
ಭವಿಯೆಂಬುದು ತೊಡೆದು
ಭಕ್ತ ಎಂದೆನಿಸಿದ ಗುರುವೇ ನಮೋ ನಮೋ.
ಚನ್ನಮಲ್ಲಿಕಾರ್ಜುನನ ತಂದೆನ್ನ
ಕೈವಶಕ್ಕೆ ಕೊಟ್ಟ ಗುರುವೇ, ನಮೋ ನಮೋ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-89/ವಚನ ಸಂಖ್ಯೆ-245)
ಎಂದು ಹೃದಯತುಂಬಿ ಶ್ರೀ ಗುರುವನ್ನು ಅಕ್ಕಮಹಾದೇವಿಯರು ಭಕ್ತಿ, ಗೌರವದಿಂದ ಸ್ಮರಿಸಿ ಕೊಂಡಾಡುತ್ತಾರೆ. ನರಜನ್ಮದಿಂದ ಹರಜನ್ಮಕ್ಕೆ, ಭವ ಬಂಧನದಿಂದ ಪರಮ ಸುಖ (ಅಲೌಕಿಕ ದೆಡೆಗೆ) ದೆಡೆಗೆ ಭವಿತನದಿಂದ ಭಕ್ತಿಯೆಡೆಗೆ ಸಾಗುತ್ತಿರುವ ಅಕ್ಕ ಮಹಾದೇವಿಯವರ ಚನ್ನಮಲ್ಲಿಕಾರ್ಜುನನ ಹಂಬಲ ಹೆಚ್ಚಾಗಿ ತಮ್ಮ ತಾತ್ವಿಕತೆಗೆ ಬದ್ಧವಾಗುತ್ತಿರುವ ಸಂಕ್ರಮಣದ ಸಂದರ್ಭವನ್ನು ಇಲ್ಲಿ ಗುರುತಿಸಬಹುದು.
ಶ್ರೀ ಗುರುಲಿಂಗದೇವರಿಂದ ತಾನು ಕೃತಾರ್ಥಳಾದವಳೆಂದು ಅಕ್ಕನವರು ತಮ್ಮ ವಚನದ ಮೂಲಕವೇ ಸ್ಪಷ್ಟಪಡಿಸುತ್ತಾರೆ.
ಶಿವಶಿವಾ, ಶ್ರೀಗುರುಲಿಂಗಯ್ಯದೇವರು
ತನ್ನ ಕರಸ್ಥಲವ ತಂದು
ಎನ್ನ ಶಿರಸ್ಥಲದ ಮೇಲಿರಿಸಿದ ಬಳಿಕ
ಎನ್ನ ಭವಂ ನಾಸ್ತಿಯಾಯಿತ್ತು.
ಎನ್ನ ತನ್ನಂತೆ ಮಾಡಿದ, ತನ್ನ ಎನ್ನಂತೆ ಮಾಡಿದ;
ಎನ್ನಲ್ಲಿ ತನ್ನಲ್ಲಿ ತೆರಹಿಲ್ಲದೆ ಮನಕ್ಕೆ ತೋರಿದ.
ತನ್ನ ಕರಸ್ಥಲದೊಳಗಿದ್ದ ಶಿವಲಿಂಗದೇವರನು
ಎನ್ನ ಕರಸ್ಥಲದೊಳಗೆ ಮೂರ್ತಿಗೊಳಿಸಿದ.
ಎನ್ನ ಕರಸ್ಥಲದೊಳಗಿದ್ದ ಶಿವಲಿಂಗದೇವರನು
ಎನ್ನ ತನುವಿನ ಮೇಲೆ ಮೂರ್ತಿಗೊಳಿಸಿದ.
ಎನ್ನ ತನುವಿನ ಮೇಲಣ ಶಿವಲಿಂಗದೇವರನು
ಎನ್ನ ಮನವೆಂಬ ಮಂಟಪದೊಳಗೆ ಮೂರ್ತಿಗೊಳಿಸದ.
ಎನ್ನ ಮನವೆಂಬ ಮಂಟಪದೊಳಗೆ
ಮೂರ್ತಿಗೊಳಿಸಿದ ಶಿವಲಿಂಗದೇವರನು
ಎನ್ನ ಜ್ಞಾನವೆಂಬ ಮಂಟಪದೊಳಗೆ ಮೂರ್ತಿಗೊಳಿಸಿದ.
ಎನ್ನ ಜ್ಞಾನವೆಂಬ ಮಂಟಪದೊಳಗಣ ಶಿವಲಿಂಗದೇವರನು
ಮಹಾಘನದಲ್ಲಿ ಮೂರ್ತಿಗೊಳಿಸಿದ.
ಕಬ್ಬಿನ ತನಿರಸವ ಕೊಂಡು ಸಿಪ್ಪೆಯ ಬಿಡುವಂತೆ,
ಮನದ ಮೇಲಣ ಶಿವಲಿಂಗದೇವರಿರಲು
ತನುವಿನ ಮೇಲಣ ಶಿವಲಿಂಗದೇವರು ಹೋಯಿತ್ತೆಂದು
ಆತ್ಮಘಾತವ ಮಾಡಿಕೊಂಬ ಬ್ರಹ್ಮೇತಿ ಸೂನೆಗಾರರ ನೋಡಯ್ಯಾ,
ಚೆನ್ನಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-133/ವಚನ ಸಂಖ್ಯೆ-375)
ಶ್ರೀ ಗುರುವಿನ ಹಸ್ತ ತಮ್ಮ ಮಸ್ತಕ ಸೋಂಕಿದ ಕ್ಷಣವೇ ತಮ್ಮ ಭವ ನಾಸ್ತಿಯಾಯಿತು ಎಂಬಲ್ಲಿ ತಮ್ಮ ಆಧ್ಯಾತ್ಮಿಕ ಹಸಿವು ಬಲಗೊಳ್ಳುತ್ತಿರುವ ಸೂಚನೆಯನ್ನು ಅಕ್ಕ ಮಹಾದೇವಿಯವರು ವಚನಗಳ ಮೂಲಕ ನೀಡುತ್ತಾರೆ. “ಎನ್ನ ತನ್ನಂತೆ ಮಾಡಿದ, ಎನಗೆ ತನಗೆ ತೆರಹಿಲ್ಲದಂತೆ ಮಾಡಿ ತೋರಿದವನು” ಎನ್ನುವ ಮಾತುಗಳು ಅಕ್ಕ ಮಹಾದೇವಿಯವರು ಗುರುವಿನಿಂದ ಪಡೆದುಕೊಂಡ ಅರಿವನ್ನು ಕುರಿತು ಸ್ಪಷ್ಠಪಡಿಸುತ್ತದೆ. ಈ ಕ್ರಿಯೆಯು “ತರುತಳೆದ ಪುಪ್ಪ” ದಂತೆ ಅಂತರಂಗದ ಜ್ಞಾನವಾಗಿದ್ದು, ವೈರಾಗ್ಯ ಮೂರ್ತಿ ಅಕ್ಕ ಮಹಾದೇವಿಯವರೊಂದಿಗೆ ಬೆರತುಕೊಳ್ಳುತ್ತದೆ. ಹೀಗೆ ಗುರುದತ್ತವಾದ ಅರಿವನ್ನು ಅಕ್ಕ ಮಹಾದೇವಿಯವರು ಸ್ಮರಿಸುತ್ತಾರೆ.
ಗುರುವಿನ ಅನುಗ್ರಹದಿಂದ ಇಡೀ ತಮ್ಮ ವ್ಯಕ್ತಿತ್ವದಲ್ಲಾದ ಮಾರ್ಪಾಡು ಮತ್ತು ಆ ಅನುಗ್ರಹದಿಂದ ಹೊಂದಿದ ಧನ್ಯತಾ ಭಾವದಿಂದ ಅಕ್ಕ ಮಹಾದೇವಿಯವರು ಹರ್ಷಗೊಳ್ಳುವ ಪರಿಯೂ ಅವರ ವಚನದಲ್ಲಿ ಅನನ್ಯವಾಗಿ ಅಭಿವ್ಯಕ್ತಿಗೊಂಡಿದೆ. ಅರಲುಗೊಂಡ, ಬರಲುಗೊಂಡ ದೇಹದೊಳಗೆ ಲಿಂಗಚೈತನ್ಯ ಅವಿರ್ಭಸಿದ ಘಳಿಗೆ ಶುಭಕರವಾದದ್ದು. ಅದಕ್ಕೆ ಕಾರಣವಾದ ಶ್ರೀ ಗುರುವನ್ನು ನೆನೆದು ಧನ್ಯತೆ ಹೊಂದುವುದೇ ಸೌಭಾಗ್ಯ ಎಂದು ಅಕ್ಕ ಮಹಾದೇವಿಯವರು ಪರಿಭಾವಿಸುತ್ತಾರೆ.
ಅರಲುಗೊಂಡ ಕೆರೆಗೆ ತೊರೆ ಬಂದು ಹಾಯ್ದಂತಾಯಿತ್ತು.
ಬರಲುಗೊಂಡ ಸಸಿಗೆ ಮಳೆ ಸುರಿದಂತಾಯಿತ್ತು
ನೋಡಾ ಇಂದೆನೆಗೆ.
ಇಹದ ಸುಖ, ಪರದ ಗತಿ
ನಡೆದು ಬಂದಂತಾಯಿತ್ತು ನೋಡಾ ಎನಗೆ,
ಚನ್ನಮಲ್ಲಿಕಾರ್ಜುನಯ್ಯಾ,
ಗುರುಪಾದವ ಕಂಡು ಧನ್ಯಳಾದೆ ನೋಡಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-18/ವಚನ ಸಂಖ್ಯೆ-38)
ಎಂಬಲ್ಲಿ ಶ್ರೀ ಗುರುಲಿಂಗ ದೇವರು ಅಕ್ಕ ಮಹಾದೇವಿಯವರಲ್ಲಿ ದೇವಭಾವ ಜಾಗೃತಗೊಳಿಸಿದವರು. ಇಷ್ಟಲಿಂಗವನ್ನು ಕೈಯಲಿಟ್ಟು, ಕರಸ್ಥಲದ ಲಿಂಗ, ಮನಸ್ಥಲಕ್ಕೆ ಬರುವಂತೆ, ಮನಸ್ಥಲದಿಂದ ಭಾವಸ್ಥಲಕ್ಕೆ ಬರುವಂತೆ ಮಾಡಿ ಜ್ಞಾನಸ್ಥಲದಿಂದ ಅಂಗವು ಲಿಂಗವಾಗುವ, ಲಿಂಗವು ಅಂಗವಾಗುವ, ಲಿಂಗಾಂಗ ಸಾಮರಸ್ಯ ತತ್ವ ಸಾಧಿಸುವ ವಿದ್ಯೆ ಕಲಿಸಿದ ಗುರುವಿನ ಪಾದ ಕಂಡು ಧನ್ಯತೆ ಅನುಭವಿಸಿದ ಜೀವ ಅಕ್ಕ ಮಹಾದೇವಿಯವರದು. ಗುರುವಿನಿಂದ ಅರಿವು ದೊರೆತ ಕ್ಷಣ ಅವರಿಗೆ ಇಹದ ಸುಖ, ಪರದ ಗತಿ ಏಕಕಾಲಕ್ಕೆ ಸಂಭವಿಸಿದೆ.
ಅಕ್ಕ ಮಹಾದೇವಿಯವರಿಗೆ ಬುದ್ಧಿ ತಿಳಿದಾಗಿನಿಂದ ಹಂತ ಹಂತವಾಗಿ ಯೌವನಕ್ಕೆ ಕಾಲಿಡುತ್ತಿರುವ ಹಂತದಲ್ಲಿ ಸಾಮಾನ್ಯ ಹುಡುಗಿಯರಿಗೆ ಕಾಡುವ ಬಯಕೆಗಳು ಅವರಿಗೆ ಕಾಡಲಿಲ್ಲ. ಅವರ ತನು, ಮನಗಳಲ್ಲಿ ತುಂಬಿಕೊಂಡಿದ್ದು ಚನ್ನಮಲ್ಲಿಕಾರ್ಜುನನೇ ಹೊರತು ಅನ್ಯ ವಿಚಾರಗಳಲ್ಲ. ಪ್ರತಿಕ್ಷಣವೂ, ನಿತ್ಯ ನಿರಂತರವಾಗಿ ಅವರು ಆರಾಧಿಸುತ್ತಿದ್ದದ್ದು ಚನ್ನಮಲ್ಲಿಕಾರ್ಜುನನ್ನೇ:
ಉದಯದಲೆದ್ದು ನಿಮ್ಮ ನೆನೆವೆನಯ್ಯಾ,
ಕಸದೆಗೆದು ಚಳೆಯ ಕೊಟ್ಟು
ನಿಮ್ಮ ಬರವ ಹಾರುತಿರ್ದೆನಯ್ಯಾ,
ಹಸೆ ಹಂದರವನಿಕ್ಕಿ
ನಿಮ್ಮಡಿಗಳಿಗೆ ಮಾಡಿಕೊಂಡಿರ್ದೆನಯ್ಯಾ.
ಚನ್ನಮಲ್ಲಿಕಾರ್ಜುನಯ್ಯಾ,
ನೀನಾವಾಗ ಬರುವೆಯ್ಯಾ ಎನ್ನ ದೇವಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-34/ವಚನ ಸಂಖ್ಯೆ-79)
ಎಂಬ ಭಾವ ಬಲಿತು ಮುಂದೆ ಕನಸು ಮನಸುಗಳಲ್ಲಿ ಅಂದರೆ ಜಾಗೃತಾವಸ್ಥೆಯಲ್ಲಿ ಹಾಗೂ ಸುಪ್ತಾವಸ್ಥೆಯಲ್ಲೂ ಕೂಡ ಚನ್ನಮಲ್ಲಿಕಾರ್ಜುನನ್ನೆ ಕೂಡುವ ಬಯಕೆ ಹೆಚ್ಚಾಯಿತು. ತಮ್ಮ ಓರೆಗೆಯವರೊಂದಿಗೆ ತಮ್ಮ ಕನಸಿನ ಚೆಲುವನನ್ನು ವರ್ಣಿಸುವ ಪರಿಯೂ ಕಾವ್ಯ ಮೀಮಾಂಸೆಯಲ್ಲೇ ಹೊಸತಾದದ್ದು. ಸಾಮಾನ್ಯವಾಗಿ ಕಾವ್ಯ ವರ್ಣನೆಗಳು ಹೆಣ್ಣಿನ ಚೆಲುವನ್ನು ವರ್ಣಿಸಿ ಸೋತಿವೆ. ಆದರೆ ಅಕ್ಕಮಹಾದೇವಿಯವರ ವಚನಗಳಲ್ಲಿ (ಚನ್ನಮಲ್ಲಿಕಾರ್ಜುನನ) ಪುರುಷ ವರ್ಣನೆಯೇ ಮನೋಹರವಾಗಿದೆ.
ಅಕ್ಕ ಕೇಳೌ, ನಾನೊಂದ ಕನಸ ಕಂಡೆ,
ಅಕ್ಕಿ ಅಡಕೆ ಓಲೆ ತೆಂಗಿನಕಾಯಿ ಕಂಡೆ,
ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು
ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವ.
ಮುಕ್ಕು ಮೀರಿ ಹೋಹನ ಬೆಂಬತ್ತಿ ಕೈಹಿಡಿದೆನು.
ಚನ್ನಮಲ್ಲಿಕಾರ್ಜುನನ ಕಂಡು ಕಣ್ತೆರೆದೆನು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-5/ವಚನ ಸಂಖ್ಯೆ-12)
ಅಕ್ಕಿ, ಅಡಕೆ, ಓಲೆ, ತೆಂಗಿನಕಾಯಿಗಳೆಲ್ಲ ಮಂಗಳಕರ ದ್ರವ್ಯಗಳು, ಶುಭ ಸೂಚಕ ವಸ್ತುಗಳು. ಇವುಗಳನ್ನು ಪೂರಕವಾಗಿ ಬಳಸಿಕೊಂಡು ಚನ್ನಮಲ್ಲಿಕಾರ್ಜುನನ್ನು ವರ್ಣಿಸುವ ಭಾಷೆಯಂತೂ ಅತ್ಯಂತ ಮನೋಹರ. ಗೊರವನ ಸೌಂದರ್ಯ ವರ್ಣನೆಯೇ ಅನುಪಮ. ಚಿಕ್ಕ ಚಿಕ್ಕ ಜಡೆಗಳು, ಶುಭ್ರವಾದ ಕಾಂತಿಯುತವಾದ ಹಲ್ಲುಗಳ ಬಿಳುಪು ಹೊಳೆಪು ಇದು ಸ್ನಿಗ್ಧ, ಮುಗ್ಧ ನಗುವಿನ ಪ್ರತೀಕ. ಇಂತಹ ಚೆಲುವಾದ ಗೊರವ ಭಿಕ್ಷಕ್ಕೆ ಬರುವುದು, ನಿಲ್ಲದೇ ಮುಂದೆ ಹೋಗುವುದು, ಎಲ್ಲ ತೊರೆದು ಹೊರಟವನ ಬೆನ್ನು ಹತ್ತಿ ಕೈಹಿಡಿಯುವುದು, ಅವನೇ ಚನ್ನಮಲ್ಲಿಕಾರ್ಜುನ ಆಗಿರುತ್ತಾನೆ, ತಕ್ಷಣವೇ ಅಕ್ಕ ಮಹಾದೇವಿಯವರ ಕನಸು ಮುಗಿಯುವುದು. ಎಂತಹ ಭಾವ ತನ್ಮಯತೆ ಇದು. ಇಲ್ಲಿಯೂ ಅಲೌಕಿಕ ಉತ್ಕಟ ಪ್ರೇಮದ ನಿಲುವಿನ ಸ್ಥಿತಿಯಲ್ಲಿ ಅಕ್ಕ ಮಹಾದೇವಿಯವರ ವ್ಯಕ್ತಿತ್ವ ಭಿನ್ನವಾಗಿಯೇ ತೋರುತ್ತದೆ.
ಸದಾ ಲಿಂಗ ಪೂಜೆಯಲ್ಲಿ ನಿರತವಾಗಿ ಚನ್ನಮಲ್ಲಿಕಾರ್ಜುನನ ಆರಾಧನೆಯಲ್ಲೇ ತಲ್ಲೀನರಾದ ಅಕ್ಕ ಮಹಾದೇವಿಯರಿಗೆ ಓರಿಗೆಯವರು, ನೆರೆಹೊರೆಯವರು, ತಂದೆ ತಾಯಿಗಳು ಮದುವೆ ಪ್ರಸ್ತಾಪ ಎತ್ತಿದಾಗಲೆಲ್ಲಾ ತಮ್ಮ ಮದುವೆ ಚನ್ನಮಲ್ಲಿಕಾರ್ಜುನನೊಂದಿಗೆ ಆಗಿದೆ ಎಂಬ ಭಾವವನ್ನೇ ಅಭಿವ್ಯಕ್ತಿಸಿದ್ದು ಸ್ವತಃ ಅವರ ವಚನಗಳಂದಲೇ ಅರ್ಥೈಸಿಕೊಳ್ಳಬಹುದು.
ಉರಕ್ಕೆ ಜವ್ವನಗಳು ಬಾರದ ಮುನ್ನ,
ಮನಕ್ಕೆ ನಾಚಿಕೆಗಳು ತೋರದ ಮುನ್ನ,
ನಮ್ಮವರಂದೆ ಮದುವೆಯ ಮಾಡಿದರು
ಸಿರಿಶೈಲ ಚನ್ನಮಲ್ಲಿಕಾರ್ಜುನಂಗೆ.
ಹೆಂಗೂಸೆಂಬ ಭಾವ ತೋರದ ಮುನ್ನ
ನಮ್ಮವರಂದೇ ಮದುವೆ ಮಾಡಿದರು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-35/ವಚನ ಸಂಖ್ಯೆ-81)
ಇಂತಹ ವಚನಗಳಲ್ಲಿ ಅಕ್ಕನವರು ಶ್ರೀ ಶೈಲ ಮಲ್ಲಿಕಾರ್ಜುನನ ಮೇಲಿಟ್ಟ ಅಪಾರ ಭಕ್ತಿ, ವಿಶ್ವಾಸ, ಪ್ರೇಮಗಳು ಹೊರ ಹೊಮ್ಮುತ್ತವೆ. “ಹರನೇ ನೀನನಗೆ ಗಂಡನಾಗಬೇಕೆಂದು ಅನಂತ ಕಾಲ ತಪಸಿದ್ದೆ ನೋಡಾ” ಎನ್ನುವಲ್ಲಿ “ಸಾವ ಕೆಡುವ ಗಂಡರನೊಯ್ದು ಒಲೆಯೊಳಗಿಕ್ಕು” ಎಂಬ ವಿಚಾರದಲ್ಲಿ ತಿಳಿಯುವ ವಿಚಾರವೆಂದರೆ ಅಕ್ಕಮಹಾದೇವಿಯರಿಗೆ ಲೌಕಿಕ ಮದುವೆಯಲ್ಲಿ ಆಸಕ್ತಿ ಇರಲಿಲ್ಲವೆಂಬುದೇ ಸ್ಪಷ್ಟವಾಗುತ್ತದೆ.
ಮಹಾದೇವಿಯಕ್ಕನವರ ಬದುಕಿನಲ್ಲಿ ಅವರ ವಿವಾಹವು ತುಂಬಾ ಚರ್ಚೆಗೆ ಗ್ರಾಸವಾಗಿದೆ. 12 ನೇ ಶತಮಾನದ ಪೂರ್ವದಲ್ಲಿ ಮತ್ತು 12 ನೇ ಶತಮಾನದ ಹೊತ್ತಿನಲ್ಲಿ ವಿವಾಹ ವ್ಯವಸ್ಥೆಯು ಕಟ್ಟುನಿಟ್ಟಾದ ನಿಯಮಗಳನ್ನು ಹೊಂದಿತ್ತು. ಸತಿಯಾದವಳು ಪತಿಯ ಅಜ್ಞಾಧಾರಕಳಾಗಿರಬೇಕಿತ್ತು. ಕುಟುಂಬ ವ್ಯವಸ್ಥೆಯಲ್ಲಿ ಅವಳಿಗೆ ನಿರ್ಣಯ ತೆಗೆದುಕೊಳ್ಳುವ ಹಕ್ಕಾಗಲಿ, ಅಭಿವ್ಯಕ್ತಿ ಸ್ವಾತಂತ್ರ್ಯವಾಗಲಿ ಇರಲಿಲ್ಲ. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಬಸವಾದಿ ಶಿವಶರಣರು ‘ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ’ ಎಂದು ಪ್ರತಿಪಾದಿಸುವ ಮೂಲಕ ಸತಿತ್ವಕ್ಕೆ ಪ್ರಾಮುಖ್ಯತೆ ನೀಡಿ, ಆತ್ಮೀಕವಾದ ದಾಂಪತ್ಯ ನಡೆಸಿದರು. ಈ ಎಲ್ಲಾ ಸಿದ್ಧಮಾದರಿಗಳು ಅಕ್ಕ ಮಹಾದೇವಿಯರ ಎದುರಿಗಿದ್ದವು. ಇಂತಹ ಪರಿಸರದಲ್ಲಿ ಅಕ್ಕ ಮಹಾದೇವಿಯವರು ವಿವಾಹವೇ ಹೆಣ್ಣಿನ ಬದುಕಿಗೆ ಸದ್ಗತಿ ಎಂಬ ಸಿದ್ಧ ಮಾದರಿಯನ್ನು ಒಡೆದು ಮಹಿಳೆಯೂ ಪಾರಮಾರ್ಥದೆಡೆಗೆ ಸಾಗಿ ಸದ್ಗತಿ ಹೊಂದಬಹುದೆಂದು ತಾವು ಆಯ್ಕೆ ಮಾಡಿಕೊಂಡ ವಿರಕ್ತಿ ಮಾರ್ಗದಲ್ಲಿ ನಡೆದು ತೋರಿದರು. ಹೀಗೆ ವೈರಾಗ್ಯ ಸ್ವೀಕರಿಸಿ ಹಾಗೆ ಬದುಕಿದ್ದು ಇವರ ಅಪೂರ್ವ ಸಾಹಸವೇ ಎನ್ನಬಹುದು.
ತಾವು ಲಗ್ನ ಸಂಸ್ಥೆಯನ್ನು ಅಲ್ಲಗಳೆದರೂ ತಮ್ಮಂತೆ ಇತರರೂ ಬದುಕಬೇಕೆಂಬ ಯಾವ ಒತ್ತಡವನ್ನು ಹಾಕದೇ, ಶರಣ ದಾಂಪತ್ಯವನ್ನು ಗೌರವಿಸುತ್ತಲೆ ಬದುಕಿದ ಅಕ್ಕ ಮಹಾದೇವಿಯರ ವ್ಯಕ್ತಿತ್ವ ನಿಜಕ್ಕೂ ಹಿರಿದಾದದ್ದು. ಲೌಕಿಕ ಸಂಸಾರವನ್ನು ತುಚ್ಛವೆನ್ನದೇ, ಸಂಸಾರಿಗಳನ್ನು ದೂರದೇ ಸಂಸಾರದಲ್ಲಿ ಇದ್ದುಕೊಂಡು ಪಾರಮಾರ್ಥಿಕ ನೆಲೆ ಕಂಡುಕೊಂಡವರನ್ನು ಅಕ್ಕಮಹಾದೇವಿಯವರು ಗೌರವಿಸಿದರು.
ಹಾವಿನ ಹಲ್ಲ ಕಳೆದು ಹಾವನಾಡಿಸಬಲ್ಲಡೆ
ಹಾವಿನ ಸಂಗವೆ ಲೇಸು ಕಂಡಯ್ಯಾ.
ಕಾಯದ ಸಂಗವ ವಿವರಿಸಬಲ್ಲಡೆ
ಕಾಯದ ಸಂಗವೆ ಲೇಸು ಕಂಡಯ್ಯಾ.
ತಾಯಿ ರಕ್ಕಸಿಯಾದಂತೆ ಕಾಯವಿಕಾರವು.
ಚೆನ್ನಮಲ್ಲಿಕಾರ್ಜುನಯ್ಯಾ,
ನೀನೊಲಿದವರು ಕಾಯಗೊಂಡಿದ್ದರೆನಬೇಡ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-147/ವಚನ ಸಂಖ್ಯೆ-41)
“ಹಾವಿನ ಬಾಯ ಹಲ್ಲಕಳೆದು, ಹಾವನಾಡಿಸಬಲ್ಲಡೆ ಹಾವಿನ ಸಂಗವೇ ಲೇಸುಕಂಡಯ್ಯಾ” ಎಂಬ ತಾತ್ವಿಕ ನಿಲುವು ಅವರದಾಗಿತ್ತು.
ಅಕ್ಕ ಮಹಾದೇವಿಯವರ ದಿವ್ಯ ಸೌಂದರ್ಯದ ಸೊಬಗಿಗೆ ಮನಸೋತು ಅವರ ಕೈ ಹಿಡಿಯಲು ಬಯಸಿದವನು ಉಡುತಡಿಯ ಅರಸ ಕೌಶಿಕ ಎಂಬುದನ್ನು ಕಾವ್ಯಗಳೆಲ್ಲ ಉಲ್ಲೇಖಿಸಿವೆ. ಕೌಶಿಕ ಮಹಾರಾಜ ವೈಹಾಳಿಯಿಂದ ಹಿಂದಿರುಗುವಾಗ ಆ ಮೆರವಣಿಗೆಯನ್ನು ನೋಡಲು ಗೆಳೆತಿಯರೊಂದಿಗೆ ಅಕ್ಕ ಮಹಾದೇವಿಯವರು ಬಂದಿರುತ್ತಾರೆ. ಅಪೂರ್ವ ಸೌಂದರ್ಯ ರಾಶಿಯಿಂದ ಕೂಡಿದ ಅಕ್ಕಮಹಾದೇವಿಯರು ಕೌಶಿಕ ರಾಜನ ದೃಷ್ಟಿಗೆ ಬೀಳುತ್ತಾರೆ. ಕೌಶಿಕ ರಾಜನು ಅಕ್ಕಮಹಾದೇವಿಯರ ಮೇಲೆ ಮೋಹಗೊಂಡು ವಿವಾಹದ ಪ್ರಸ್ತಾಪ ಕಳುಹಿಸುತ್ತಾನೆ. ಈ ಮದುವೆಗೆ ಅಕ್ಕ ಮಹಾದೇವಿಯವರು ಒಪ್ಪುವುದಿಲ್ಲ. ಇಲ್ಲಿ ಮತ್ತೇ ‘ಭವಿ–ಭಕ್ತ’ ಎರಡು ಅಂಶಗಳು ಅಡ್ಡಿಯಾಗುತ್ತವೆ. ಭವಿಯಾದ ಕೌಶಿಕನನ್ನು ನಾನು ಮದುವೆಯಾಗಲಾರೆ ಎನ್ನುವ ನಿರ್ಣಾಯಕ ಉತ್ತರವನ್ನು ಅಕ್ಕ ಮಹಾದೇವಿಯವರು ನೀಡುತ್ತಾರೆ. ಆದರೆ ಅಧಿಕಾರಶಾಹಿ, ರಾಜಶಾಹಿ ದರ್ಪಕ್ಕೆ ಇವರ ತಂದೆ–ತಾಯಿಗಳು ಒಪ್ಪಿಗೆ ಸೂಚಿಸಿರಬಹುದು. ತನ್ನಿಂದ ತಂದೆ–ತಾಯಿಗಳಿಗೆ ತೊಂದರೆಯಾಗಬಾರದೆಂದು ಅಕ್ಕ ಮಹಾದೇವಿಯವರು ಈ ಮದುವೆಗೆ ಸಮ್ಮಿತಿಸಿರಬಹುದು. ಇದು ಅಕ್ಕ ಮಹಾದೇವಿಯವರಿಗೆ ಒಲ್ಲದ ಮದುವೆ ಕೆಲವು ಷರತ್ತುಗಳ ಮೂಲಕ ವಿವಾಹಕ್ಕೆ ಸಮ್ಮತಿ ನೀಡುವಲ್ಲಿಯೂ ಅಕ್ಕ ಮಹಾದೇವಿಯವರ ವ್ಯಕ್ತಿತ್ವ ಲೋಕಕ್ಕೆ ಜೋದ್ಯವಾಗುತ್ತದೆ. ಪುರುಷ ಪ್ರಧಾನ ವ್ಯವಸ್ಥೆಯ ಆ ಕಾಲಘಟ್ಟದಲ್ಲಿ ಒಬ್ಬ ಸಾಮಾನ್ಯ ಹೆಣ್ಣುಮಗಳು ಷರತ್ತುಗಳನ್ನು ಹಾಕುವುದು, ಷರತ್ತುಗಳು ಮುರಿದರೆ ದಾಂಪತ್ಯ ಸಂಬಂಧ ಮುರಿಯುತ್ತದೆ ಎಂದು ಕರಾರು ವಾಕ್ಕಿನಿಂದ ನುಡಿಯುವುದು, ಮುಂದೆ ಆ ಷರತ್ತುಗಳು ಮುರಿದು ಬಿದ್ದಾಗ ನಿರ್ದಾಕ್ಷಿಣ್ಯವಾಗಿ ಅರಮನೆಯ ವೈಭೋಗ ತೊರೆಯುವುದು ಇವೆಲ್ಲಾ ಏಕಕಾಲಕ್ಕೆ ಅಕ್ಕ ಮಹಾದೇವಿಯವರು ಪುರುಷಶಾಹಿಯನ್ನು, ರಾಜಶಾಹಿಯನ್ನು ಮುರಿದು ಹೊರಟ ಸ್ವತಂತ್ರ್ಯ ಧೀರೋದಾತ್ತ ನಿಲುವೇ ಅವರ ತಾತ್ವಿಕತೆಯ ಗಟ್ಟಿತನ. ಅರಮನೆ, ವೈಭೋಗ, ಆಳು–ಕಾಳು, ವಸ್ತ್ರ-ಬಡವೆ, ಸುಖದ ಸುಪ್ಪತ್ತಿಗೆ ಇವೆಲ್ಲ ಇದ್ದಾಗಲೂ ಅವೆಲ್ಲವನ್ನೂ ಅಕ್ಕ ಮಹಾದೇವಿಯವರು ನಿರಾಕರಿಸುವುದು ಸಾಮಾನ್ಯವಾದುದೆಲ್ಲ. ಇವುಗಳಿಗಾಗಿ ಲೋಕವೇ ಹಪಹಪಿಸುತ್ತಿರುವಾಗ ತುಂಬಾ ನಿರಾಳತೆಯಿಂದ ಅವುಗಳನ್ನು ತ್ಯಜಿಸಿ ಹೊರಟು ನಿಲ್ಲುವ ಅಕ್ಕ ಮಹಾದೇವಿಯವರ ವ್ಯಕ್ತಿತ್ವ ಅಪರೂಪದಲ್ಲೇ ಅಪರೂಪದ್ದು. ಅಕ್ಕ ಮಹಾದೇವಿಯವರು ಕೌಶಿಕ ರಾಜನಿಗೆ ಹಾಕಿದ ಮೂರು ಷರತ್ತುಗಳು ಇಂತಿವೆ;
- ಎನ್ನಿಚ್ಛೆಯೊಳು ಲಿಂಗ ಪೂಜೆಯೊಳು ಸಲಿದಿಪ್ಪೆ.
- ಎನ್ನಿಚ್ಛೆಯೊಳು ಮಾಹೇಶ್ವರರ ಗೋಷ್ಠಿಯೊಳಿಪ್ಪೆ.
- ಎನ್ನಿಚ್ಛೆಯೊಳು ಗುರುವಿನಂಘ್ರಿಯ ಸೇವೆಯೊಳಿಪ್ಪೆ.
ಈ ಮೂರು ಷರತ್ತುಗಳನ್ನು ಕೌಶಿಕನು ಮುರಿಯುತ್ತಾನೆ. ಕವಿಗಳು ತಮ್ಮ ತಮ್ಮ ಕಾವ್ಯದಲ್ಲಿ ಕೌಶಿಕನಿಂದ ಷರತ್ತುಗಳು ಮುರಿಯುವ ಸಂದರ್ಭಗಳನ್ನು ತರುತ್ತಾರೆ. ಒಟ್ಟಾರೆಯಾಗಿ ಕಾಮಾತುರ ತಾಳಲಾರದೆ ಕೌಶಿಕನು ಲಿಂಗಪೂಜಾ ನಿರತಳಾದ ಭಕ್ತೆಯ ಮೇಲೆ ಎರಗುವುದು. ಅದನ್ನು ಅಕ್ಕ ಮಹಾದೇವಿಯವರು ಖಂಡಿಸುವುದು ಅವರ ವಚನದಲ್ಲೇ ಕಂಡು ಬಂದಿದೆ.
ಎಮ್ಮೆಗೊಂಡು ಚಿಂತೆ, ಸಮ್ಮಗಾರನಿಗೊಂದು ಚಿಂತೆ,
ಧರ್ಮಿಗೊಂದು ಚಿಂತೆ, ಕರ್ಮಿಗೊಂದು ಚಿಂತೆ,
ಎನಗೆ ಎನ್ನ ಚಿಂತೆ, ನಿನಗೆ ನಿನ್ನ ಕಾಮದ ಚಿಂತೆ,
ಬಲ್ಲೆ ಹೋಗು, ಸೆರಗ ಬಿಡು ಮರುಳೆ,
ಎನಗೆ ಎಮ್ಮ ಚನ್ನಮಲ್ಲಿಕಾರ್ಜುನದೇವರು
ಬಲಿವರೋ ಒಲಿಯರೋ ಎಂಬ ಚಿಂತೆ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-41/ವಚನ ಸಂಖ್ಯೆ-104)
ಈ ವಚನವಂತು ಅಕ್ಕ ಮಹಾದೇವಿಯವರ ವೈವಾಹಿಕ ಬದುಕಿನಲ್ಲಿ ನಡೆದ ಕಹಿ ಘಟನೆಗೆ ಸಾಕ್ಷಿ ನುಡಿಯುವಂತಿದೆ.
• ನಿನಗೆ ನಿನ್ನ ಕಾಮ ಚಿಂತೆ
• ಒಲ್ಲೆ ಹೋಗು
• ಸೆರಗ ಬಿಡು ಮರುಳೆ
• ಎನಗೆ ಎಮ್ಮ ಚನ್ನಮಲ್ಲಿಕಾರ್ಜುನದೇವರು ಒಲವರೋ ಒಲಿಯರೂ ಎಂಬ ಚಿಂತೆ
ಒಂಟಿಯಾದ ಹೋರಾಟ ಅಕ್ಕ ಮಹಾದೇವಿಯವರದು. ಸೆರಗ ಬಿಡು ಮರುಳೆ ಎನ್ನುವ ಅರಮನೆಯಲ್ಲೂ ಅಕ್ಕ ಮಹಾದೇವಿಯವರಲ್ಲಿ ಆ ಕ್ಷಣವೇ ಅವರೊಳಗಿದ್ದ ವೈರಾಗ್ಯ ಹೊರಗೆ ಸ್ಪೋಟವಾಗುತ್ತದೆ. ತಕ್ಷಣವೇ ಉಟ್ಟ ಬಟ್ಟೆಯನ್ನು, ಅರಮನೆಯನ್ನು, ಪತಿಯನ್ನು ತೊರೆಯುವ ಹಂತ ತೆಂಗಿನಮರ ಏಕಾಏಕಾ ತನ್ನ ಗರಿಯನ್ನು ಕಳಚಿಕೊಳ್ಳುವಂತೆ ಲೋಕದ ಹಂಗನ್ನೇ ಅಕ್ಕ ಮಹಾದೇವಿಯವರು ಕಳಚಿಕೊಳ್ಳುತ್ತಾರೆ.
ಯಾವ ಹಂತದಲ್ಲೂ, ಯಾವ ಪ್ರಲೋಭನಗಳಿಂದಲೂ ನನ್ನೊಳಗಿರುವ ವೈರಾಗ್ಯವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂಬ ತಾತ್ವಿಕ ನಿಲುವು ಅಕ್ಕ ಮಹಾದೇವಿಯವರದಾಗಿತ್ತು. ಹೌದು ಯಾವ ಅಧಿಕಾರವಾಗಲಿ, ರಾಜನೆಂಬ ದರ್ಪವಾಗಲಿ, ಪುರುಷನೆಂಬ ಅಹಂಮಿಕೆಯಾಗಲಿ ಅಕ್ಕ ಮಹಾದೇವಿಯವರ ವೈರಾಗ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಎಲ್ಲವೂ ಅಕ್ಕಮಹಾದೇವಿಯರ ವೈರಾಗ್ಯಕ್ಕೆ ಸೋತು ಶರಣಾಯಿತು.
ಕೈ ಸಿರಿಯ ದಂಡವ ಕೊಳಬಹುದಲ್ಲದೆ,
ಮೈ ಸಿರಿಯ ದಂಡವ ಕೊಳಲುಂಟೆ?
ಉಟ್ಟ ಉಡಿಗೆಯ ಸೆಳೆದುಕೊಳಬಹುದಲ್ಲದೆ,
ಮುಚ್ಚು ಮುಸುಕಿರ್ದ ನಿರ್ವಾಣವ ಸೆಳೆದುಕೊಳಬಹುದೆ?
ಚನ್ನಮಲ್ಲಿಕಾರ್ಜುನದೇವರ ಬೆಳಗನುಟ್ಟು ಲಜ್ಜೆಗೆಟ್ಟವಳಿಗೆ
ಉಡುಗೆ ತೊಡುಗೆಯ ಹಂಗೇಕೋ ಮರುಳೆ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-63/ವಚನ ಸಂಖ್ಯೆ-179)
ಒಬ್ಬ ರಾಜನು ಎಷ್ಟೇ ಬಲಿಶಾಲಿ ಇರಬಹುದು, ಆದರೆ ಕೌಶಿಕನ ಬಲವೆಲ್ಲ, ಪೌರುಷವೆಲ್ಲಾ, ಗರ್ವವೆಲ್ಲಾ ಅಕ್ಕ ಮಹಾದೇವಿಯವರ ಗಟ್ಟಿ ವ್ಯಕ್ತಿತ್ವದೆದುರು ಸೋತು ಹೋಗಿದೆ. ಇದು ಬಹು ದೊಡ್ಡ ಸೋಲು. ನನ್ನ ಉಡುಗೆ ತೊಡುಗೆಯನ್ನು ನೀನು ಸೆಳೆಯಬಹುದು. ನನ್ನೊಗಿರುವ ನಿರ್ವಾಣವ ಸೆಳೆಯಲು ನಿನ್ನಿಂದ ಸಾಧ್ಯವಿಲ್ಲ. ನೀನು ಬೇಡ, ನಿನ್ನ ಉಡುಗೆ ತೊಡುಗೆಯೂ ಬೇಡಾ, ನಿನ್ನ ಹಂಗಿನ ಅರಮನೆಯೂ ಬೇಡಾ ಎಂದು ಧಿಕ್ಕರಿಸುವ ಅಕ್ಕ ಮಹಾದೇವಿಯವರು ಜ್ಞಾನ, ವೈರಾಗ್ಯ, ಭಕ್ತಿಯನ್ನು ಹೊದ್ದು, ಚನ್ನಮಲ್ಲಿಕಾರ್ಜುನನ ಬೆಳಗನುಟ್ಟು (ಅರಿವು) ಸ್ತ್ರೀಯೆಂಬ ಲಜ್ಜೆಯನ್ನು ತೊಡೆದು ತಾನೊಂದು ಲಿಂಗಚೇತನ ಎಂದು ನಿರ್ಮಾಣ ಸ್ಥಿತಿಯಲ್ಲಿ ಹೊರಟು ನಿಲ್ಲುವ ಹಂತವೇ ಅಕ್ಕ ಮಹಾದೇವಿಯವರ ವೈರಾಗ್ಯ ಬದುಕಿನ ದಿವ್ಯ ಪುಟವಾಗಿದೆ. ತಂದೆ–ತಾಯಿ, ಬಂಧು-ಬಳಗ, ನನ್ನವರು–ತನ್ನವರು, ನನ್ನ ಊರು–ಮನೆ ಎಂಬ ಎಲ್ಲಾ ಮೋಹ ಬಂಧನಗಳನ್ನು ಕಳಚುವುದು ಅಷ್ಟು ಸುಲಭವಲ್ಲ. ಆದರೆ ಅಕ್ಕ ಮಹಾದೇವಿಯವರು ಅಂತರಂಗದಿಂದಲೇ ವಿರಾಗಿಗಳಾದ್ದರಿಂದ ಭೌತಿಕವಾದ ಇವುಗಳನ್ನೆಲ್ಲಾ ತೊರೆಯುವುದು ಅವರಿಗೆ ಕಷ್ಟವಾಗಲಿಲ್ಲ. ಅವರ ‘ತನು’ ಈಗ ನಿರ್ಣವಾವಾಗಿರಬಹುದು. ಆದರೆ ಅವರ ಮನ ಎಂದೋ ನಿರ್ಣವಾವಾಗಿತ್ತು ಎಂಬುದು ಸ್ಪಷ್ಟ. ಇದು ಅಕ್ಕ ಮಹಾದೇವಿಯವರ ವ್ಯಕ್ತಿತ್ವದ ನಿಲುವು ‘ತನು ಬತ್ತಲೆಯಾದರೆ ಸಾಲದು ಮನವು ಬತ್ತಲೆಯಾಗಬೇಕು’ ಎಂಬ ತಾತ್ವಿಕತೆಯ ನಿಲುವುನಿಂದ ಅಕ್ಕ ಮಹಾದೇವಿಯವರು ತನುಮನ ಬತ್ತಲೆಯಾಗಿ ತಮ್ಮನ್ನೇ ಶೋಧನೆಗೆ ಒಪ್ಪಿಕೊಳ್ಳುತ್ತಾರೆ.
ಅಕ್ಕಮಹಾದೇವಿಯವರ ಏಕಾಂಗಿ ಹೋರಾಟ, ಅರಮನೆ ತೊರೆದ ಬಳಿಕ ಮತ್ತಷ್ಟು ತೀವ್ರವಾಗುತ್ತದೆ. ತಮ್ಮ ಆತ್ಮಶೋಧನೆಗಾಗಿ ಸಾಕಷ್ಟು ಹೋರಾಟಗಳು ಅವರೊಳಗೆ ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಅಕ್ಕ ಮಹಾದೇವಿಯವರ ವಸ್ತ್ರ ನಿರಾಕರಣೆಯ ಕುರಿತು ವಿದ್ವತ್ ವಲಯದಲ್ಲಿ ಚರ್ಚೆಗಳು ನಡೆದಿವೆ. ಆದರೆ ಅಕ್ಕ ಮಹಾದೇವಿಯವರು ಅನುಭಾವಿಗಳು. ಭಾರತದಂತಹ ಶ್ರೇಷ್ಠ ಆಧ್ಯಾತ್ಮ ವಲಯದಲ್ಲಿ ದಿಗಂಬರ ತತ್ವಕ್ಕೆ ಅದರದೇ ತಾತ್ವಿಕತೆ ಇದೆ. “ದಿಗಂಬರ ತತ್ವ” ಅಂದರೆ ದೇಹದ ನಿರ್ವಾಣ ಸ್ಥಿತಿ ಮಾತ್ರವಾಗಿರದೆ ಅದು ಭಾವದ ನಿರ್ವಾಣ ಸ್ಥಿತಿಯೂ ಆಗಿರುತ್ತದೆ. ಒಂದರ್ಥದಲ್ಲಿ “ಸರ್ವಸಂಗ ಪರಿತ್ಯಾಗ” ಎನ್ನಬಹುದು. ಈ ಭಾವ ನಿರ್ವಾಣದಿಂದ ಶೂನ್ಯ ತತ್ವಕ್ಕೆ ಅಕ್ಕ ಮಹಾದೇವಿಯವರು ನಡೆದಾಗ ಸರ್ವಸಂಗ ಪರಿತ್ಯಾಗಿಗಳಾಗಿ ಏಕಾಂಗಿಯಾಗುತ್ತಾರೆ. ಇದು ಮಹಿಳಾ ಆಧ್ಯಾತ್ಮ ಲೋಕಕ್ಕೆ ಕಠಿಣವಾದುದು. ಈ ಕಠಿಣತಮ ಹಾದಿಯನ್ನೇ ಆಯ್ಕೆ ಮಾಡಿಕೊಂಡು ಅಕ್ಕ ಮಹಾದೇವಿಯವರು ನಡೆದಾಗ ಅದೂ ನಿರ್ವಾಣ ಸ್ಥಿತಿಯಲ್ಲಿ ಹೊರಟಾಗ ಸಮಾಜದ ಎಷ್ಟು ಜನರು ಇವರಿಗೆ ನಿಂದಿಸಿರಬಹುದು? ಕುಹಕವನ್ನಾಡಿರಬಹುದು? ಅವಮಾನಿಸಿರಬಹುದು? ಪೀಡಿಸಿರಬಹುದು? ಅಸಹ್ಯ ಪಟ್ಟಿರಬಹುದು? ಹಿಡಿ ಶಾಪ ಹಾಕಿರಬಹುದು? ಇವೆಲ್ಲವನ್ನೂ ಅಕ್ಕ ಮಹಾದೇವಿಯವರು ಸಮ ಸ್ಥಿತಿಯಿಂದ ಗಲಿಬಿಲಿಗೊಳ್ಳದೆ, ಆವೇಶಕ್ಕೆ ಒಳಗಾಗದೇ, ಆಕ್ರೋಶಕ್ಕೆ ಆಸ್ಪದ ಕೊಡದೇ ಹೇಗೆಲ್ಲಾ ಸ್ವೀಕರಿಸಿರಬಹುದು? ಅರಮನೆ ತೊರೆದು ಹೊರಟ ಅಕ್ಕ ಮಹಾದೇವಿಯವರು ಹೋಗುವುದಾದರೂ ಎಲ್ಲಿಗೆ? ಆಗಲೇ ಅಕ್ಕ ಮಹಾದೇವಿಯವರ ಗಮ್ಯ ಶ್ರೀಶೈಲದ ಕದಳಿ ವನವಾಗಿದ್ದರೂ ಕಲ್ಯಾಣದ ಆಣ್ಣ ಬಸವಣ್ಣನವರನ್ನು, ಶರಣರನ್ನು ಹಾಗೂ ಅನುಭವ ಮಂಟಪವನ್ನು ನೋಡುವ ಮತ್ತು ಅಲ್ಲಿನ ಶರಣರ ಸಂಗದಲ್ಲಿ ಸ್ವಲ್ಪ ದಿನ ಇದ್ದು ಶ್ರೀಶೈಲ ಗಿರಿಗೆ ಹೋಗುವುದಾಗಿರಬಹುದು. ಉಡುತಡಿಯಿಂದ ಕಲ್ಯಾಣದೆಡೆಗೆ ಇವರು ಹೊರಟು ನಿಂತಾಗ ಅದೆಷ್ಟು ದೈಹಿಕ ಆಯಾಸ ಆಗಿರಬಹುದು? ಮಾರ್ಗ ಮಧ್ಯದಲ್ಲಿ ಅವರಿಗೆ ಎಂತೆಂತಹ ಜನರು ಎದುರಾಗಿರಬಹುದು? ಒಟ್ಟಾರೆ ಅಕ್ಕ ಮಹಾದೇವಿಯವರು ಅನುಭವಿಸಿದ ವೇದನೆ, ಸಂವೇದನೆ, ನಿವೇದನೆಗಳೆಲ್ಲವೂ ಅವರ ವಚನಗಳಲ್ಲಿ ಅನುಸಂಧಾನಗೊಂಡಿವೆ.
ಅಕ್ಕ ಮಹಾದೇವಿಯವರು ಏಕಾಂಗಿಯಾಗಿದ್ದರೂ ಧೀರೋದ್ದಾತ್ತ ನಿಲುವನ್ನು ತಾಳಿದರು. ಲೋಕದ ನಿಂದೆ, ಅಪವಾದಗಳಿಗೆ ದಿವ್ಯ ಮೌನಿಗಳಾದವರು. ಅವರ ಒಂದು ವಚನ ಈ ನಿಲುವನ್ನು ನಿರೂಪಣೆ ಮಾಡುತ್ತದೆ.
ಬೆಟ್ಟದ ಮೇಲೊಂದು ಮನೆಯ ಮಾಡಿ,
ಮೃಗಗಳಿಗಂಜಿದಡೆಂತಯ್ಯಾ?
ಸಮುದ್ರದ ತಡಿಯಲೊಂದು ಮನೆಯ ಮಾಡಿ,
ನೊರೆತೆರೆಗಳಿಗಂಜಿದಡೆಂತಯ್ಯಾ?
ಸಂತೆಯೊಳಗೊಂದು ಮನೆಯ ಮಾಡಿ,
ಶಬ್ದಕ್ಕೆ ನಾಚಿದಡೆಂತಯ್ಯಾ?
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ,
ಲೋಕದೊಳಗೆ ಹುಟ್ಟಿದ ಬಳಿಕ
ಸ್ತುತಿನಿಂದೆಗಳು ಬಂದಡೆ
ಮನದಲ್ಲಿ ಕೋಪವ ತಾಳದೆ
ಸಮಾಧಾನಿಯಾಗಿರಬೇಕು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-106/ವಚನ ಸಂಖ್ಯೆ-302)
“ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು” ಎಂಬ ತಾತ್ವಿಕ ನಿಲುವು ಇವರದು. ಚನ್ನಮಲ್ಲಿಕಾರ್ಜುನನು ಆತ್ಮ ಸಂಗಾತಿಯಾಗಿರುವಾಗ ತಾನು ಏಕಾಂಗಿಯಲ್ಲ ಎಂಬ ನಿರ್ಭಯತೆ ಇವರ ವ್ಯಕ್ತಿತ್ವದ ಲಕ್ಷಣ.
ಹಸಿವಾದಡೆ ಊರೊಳಗೆ ಬ್ಥಿಕ್ಷಾನ್ನಗಳುಂಟು.
ತೃಷೆಯಾದಡೆ ಕೆರೆ ಹಳ್ಳ ಬಾವಿಗಳುಂಟು.
ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು.
ಶಯನಕ್ಕೆ ಹಾಳು ದೇಗುಲಗಳುಂಟು.
ಚೆನ್ನಮಲ್ಲಿಕಾರ್ಜುನಯ್ಯಾ,
ಆತ್ಮಸಂಗಾತಕ್ಕೆ ನೀನೆನಗುಂಟು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-145/ವಚನ ಸಂಖ್ಯೆ-409)
ಹಸಿವು, ತೃಷೆ, ನಿದ್ರೆಗಳಂತಹ ದೈಹಿಕ ನಿಯಾಮಗಳಿಗೆ ಉಪಶಮನವನ್ನು ಹೇಗೋ ಕಂಡುಕೊಳ್ಳಬಹುದು. ಆದರೆ, ಏಕಾಂಗಿತನಕ್ಕೆ ಸಮಾನ ಮನಸ್ಕರು ಅಕ್ಕ ಮಹಾದೇವಿಯವರಿಗೆ ಯಾರುಂಟು ಎಂದಾಗ ಆತ್ಮ ಸಂಗಾತಿಯಾಗಿ ಚನ್ನಮಲ್ಲಿಕಾರ್ಜುನನಿದ್ದಾನೆ ಎಂಬ ಧೈರ್ಯ ಅಕ್ಕ ಮಹಾದೇವಿಯವರದ್ದು. ಇದರಿಂದ ತಮ್ಮೊಳಗಿನ ಎಲ್ಲಾ ವಿಷಯ ವಾಸನೆಗಳನ್ನು ಸುಟ್ಟುಕೊಂಡು ಮುನ್ನಡೆದ ಶಿವಯೋಗಿಣಿ ಇವರು. ಆಧ್ಯಾತ್ಮ ಲೋಕದ ವೀರಯೋಗಿಣಿ ಪಾರಮಾರ್ಥದ ಕಡೆಗೆ ಹೆಜ್ಜೆ ಇಟ್ಟಿದ್ದೇನೆ ಎಂದರೆ ಎಂತಹ ಪ್ರಸಂಗದಲ್ಲಿಯೂ ನಾನು ಧೃತಿಗೆಡಲಾರೆ ಎಂಬ ಅಪ್ರತಿಮ ಧೈರ್ಯ ಅಕ್ಕ ಮಹಾದೇವಿಯವರದ್ದು.
ಆಳುತನದ ಮಾತನೇರಿಸಿ ನುಡಿದಡೆ
ಆಗಳೆ ಕಟ್ಟಿದೆನು ಗಂಡುಗಚ್ಚೆಯ.
ತಿಗುರನೇರಿಸಿ ತಿಲಕವನಿಟ್ಟು
ಕೈದುವ ಕೊಂಡು ಕಳನೇರಿದ ಬಳಿಕ,
ಕಟ್ಟಿದ ನಿರಿ ಸಡಿಲಿದಡೆ ಇನ್ನು ನಿಮ್ಮಾಣೆ,
ಕಾಣಾ ಚೆನ್ನಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-31/ವಚನ ಸಂಖ್ಯೆ-70)
ಎಂತಹ ಆತ್ಮ ಪ್ರತ್ಯಯದ ಮಾತಿದು! ಎಂತಹ ಧೀರೋದ್ದಾತ ನಿಲುವಿದು!
ಆರೂ ಇಲ್ಲದವಳೆಂದು
ಆಳಿಗೊಳಲುಬೇಡ ಕಂಡೆಯಾ?
ಏನ ಮಾಡಿದಡೂ ಆನಂಜುವಳಲ್ಲ.
ತರಗೆಲೆಯ ಮೆಲಿದು ಆನಿಹೆನು,
ಸರಿಯ ಮೇಲೊರಗಿ ಆನಿಹೆನು.
ಚೆನ್ನಮಲ್ಲಿಕಾರ್ಜುನಯ್ಯಾ, ಕರ ಕೇಡನೊಡ್ಡಿದಡೆ
ಒಡಲನು ಪ್ರಾಣವನು ನಿಮಗರ್ಪಿಸಿ ಶುದ್ಧಳಹೆನು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-29/ವಚನ ಸಂಖ್ಯೆ-63)
ಇಂತಹ ತಾತ್ವಿಕ ನಿಲುವಿನಿಂದ ಕಲ್ಯಾಣದೆಡೆಗೆ ಅಕ್ಕ ಮಹಾದೇವಿಯವರು ನಡೆಯುತ್ತಾರೆ. ಮತ್ತಷ್ಟು ತಾತ್ವಿಕವಾಗಿ ಗಟ್ಟಿಗೊಳ್ಳುತ್ತಾರೆ. ಪ್ರಕೃತಿಯೊಂದಿಗೆ ಒಂದಾಗುತ್ತಾರೆ. ಪ್ರಕೃತಿಯ ಭಾಷೆಯನ್ನು ಕಲಿಯುತ್ತಾರೆ. ಸಚರಾಚರವನ್ನು ಪ್ರೀತಿಸುತ್ತಾರೆ. ತಮ್ಮನ್ನು ಪ್ರತಿಶೋಧಿಸಿಕೊಳ್ಳುತ್ತಾರೆ. ಹಸಿವು, ತೃಷೆ, ನಿದ್ರಾದಿಗಳನ್ನು ಕಟ್ಟಿ ಹಾಕುತ್ತಾರೆ. ನಾನು ಎಂಬ ಅಹಂಮಿಕೆಯೂ ಸೋರಿ ಹೋಗುವಂತೆ ತಮ್ಮನ್ನು ತಾವೇ ತಯಾರಿ ಮಾಡಿಕೊಳ್ಳುತ್ತಾರೆ. ಇವೇ ಅಕ್ಕ ಮಹಾದೇವಿಯವರ ತಾತ್ವಿಕ ನಿಲುವುಗಳು.
ಹಸಿವೆ ನೀನು ನಿಲ್ಲು ನಿಲ್ಲು,
ತೃಷೆಯೆ ನೀನು ನಿಲ್ಲು ನಿಲ್ಲು,
ನಿದ್ರೆಯೆ ನೀನು ನಿಲ್ಲು ನಿಲ್ಲು,
ಕಾಮವೆ ನೀನು ನಿಲ್ಲು ನಿಲ್ಲು,
ಕ್ರೋಧವೆ ನೀನು ನಿಲ್ಲು ನಿಲ್ಲು,
ಮೋಹವೆ ನೀನು ನಿಲ್ಲು ನಿಲ್ಲು,
ಲೋಭವೆ ನೀನು ನಿಲ್ಲು ನಿಲ್ಲು,
ಮದವೆ ನೀನು ನಿಲ್ಲು ನಿಲ್ಲು,
ಮಚ್ಚರವೆ ನೀನು ನಿಲ್ಲು ನಿಲ್ಲು,
ಸಚರಾಚರವೆ ನೀನು ನಿಲ್ಲು ನಿಲ್ಲು,
ನಾನು ಚೆನ್ನಮಲ್ಲಿಕಾರ್ಜುನದೇವರ
ಅವಸರದ ಓಲೆಯನೊಯ್ಯುತ್ತಲಿದ್ದೇನೆ ಶರಣಾರ್ಥಿ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-146/ವಚನ ಸಂಖ್ಯೆ-412)
ಇದು ಅಕ್ಕ ಮಹಾದೇವಿಯವರ ವೀರ ವೈರಾಗ್ಯ. ವೈರಾಗ್ಯದ ತೀವ್ರತೆ ಅಕ್ಕ ಮಹಾದೇವಿಯವರಲ್ಲಿ ಅಗಾಧವಾಗಿತ್ತು. ಸ್ವತಃ ಅಕ್ಕ ಮಹಾದೇವಿಯವರ ವಚನಗಳು ಅವರ ವೈರಾಗ್ಯದ ಪ್ರತಿಧ್ವನಿಯಾಗಿದೆ.
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ,
ಕರಣಂಗಳ ಚೇಷ್ಟೆಗೆ ಮನವೇ ಬೀಜ.
ಎನಗುಳ್ಳುದೊಂದು ಮನ.
ಆ ಮನ ನಿಮ್ಮಲ್ಲಿ ಸಿಲುಕಿದ ಬಳಿಕ
ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನಾ?
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-125/ವಚನ ಸಂಖ್ಯೆ-357)
ಎಂದು ಚೆನ್ನಮಲ್ಲಿಕಾರ್ಜುನನನ್ನೇ ಪ್ರಶ್ನಿಸುವ ಹಂತಕ್ಕೆ ಅಕ್ಕ ಮಹಾದೇವಿಯವರು ತಾತ್ವಿಕವಾಗಿ ಬೆಳೆದು ನಿಲ್ಲುತ್ತಾರೆ. ಇದು ಅವರ ಸಾಧನೆ ಸಿದ್ಧಿಯ ಫಲ.
ಮನೆ ಮನೆದಪ್ಪದೆ ಕೈಯೊಡ್ಡಿ ಬೇಡುವಂತೆ ಮಾಡಯ್ಯ;
ಬೇಡಿದಡೆ ಇಕ್ಕದಂತೆ ಮಾಡಯ್ಯ;
ಇಕ್ಕಿದಡೆ ನೆಲಕ್ಕೆ ಬೀಳುವಂತೆ ಮಾಡಯ್ಯ;
ನೆಲಕ್ಕೆ ಬಿದ್ದಡೆ ನಾನೆತ್ತಿಕೊಂಬುದಕ್ಕೆ ಮುನ್ನವೆ
ಸುನಿಯೆತ್ತಿಕೊಂಬಂತೆ ಮಾಡಾ ಚೆನ್ನಮಲ್ಲಿಕಾರ್ಜುನಯ್ಯ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-113/ವಚನ ಸಂಖ್ಯೆ-322)
ಹೀಗೆ ತಮ್ಮನ್ನು ತಾವು ಕಷ್ಟಗಳಿಗೆ ಒಡ್ಡಿಕೊಳ್ಳುತ್ತಾ ವ್ಯಕ್ತಿತ್ವ ನಿರಸನದ ಮೆಟ್ಟಿಲನ್ನೇರುತ್ತಾರೆ. ಶೋಧನೆ, ಪ್ರತಿಶೋಧನೆಗಳಿಂದ ತಮ್ಮ ವಿರಾಗದ ಪಯಣವನ್ನು ಮುಂದುವರೆಸಿಕೊಂಡು ಇನ್ನೇನು ಕಲ್ಯಾಣದ ಅನುಭವ ಮಂಟಪವನ್ನು ಪ್ರವೇಶಿಸುವ ಸಂಭ್ರಮದಲ್ಲಿರುತ್ತಾರೆ. ಕಲ್ಯಾಣದ ಕೀರ್ತಿ, ಬಸವಣ್ಣನವರ ಅಂತಃಕರಣ, ಅಲ್ಲಮ ಪ್ರಭುಗಳ ಜ್ಞಾನ ವೈರಾಗ್ಯ, ಶರಣರೆಲ್ಲರ ಸತ್ಯನಿಷ್ಠೆ, ಕಾಯಕ, ದಾಸೋಹದ ಮಾಟ ಅವರ ಕರ್ಣಗಳಿಗೆ ತಲುಪಿರುತ್ತದೆ. ಅವರು ಪುಳಕಿತರಾಗಿರುತ್ತಾರೆ. ಕಲ್ಯಾಣದೊಳಗೆ ಅವರು ಎರಡು ರೀತಿಯ ಕಲ್ಯಾಣ ಕಾಣುತ್ತಾರೆ. ಒಂದು ಬಿಜ್ಜಳನ ಕಲ್ಯಾಣ. ಮತ್ತೊಂದು ಆತ್ಮ ಕಲ್ಯಾಣ. ಆತ್ಮ ಕಲ್ಯಾಣ ಕಟ್ಟಿದ್ದು ಬಸವಣ್ಣನವರು. ಬಿಜ್ಜಳನ ಕಲ್ಯಾಣಕ್ಕೆ ಯಾರಾದರೂ ಬರಬಹುದಿತ್ತು, ಹೋಗಬಹುದಿತ್ತು. ಆದರೆ ಬಸವಣ್ಣನವರು ಕಟ್ಟಿದ ಆತ್ಮ ಕಲ್ಯಾಣಕ್ಕೆ ಪ್ರವೇಶಿಸಲು ಎಲ್ಲರಿಗೂ ಸಾಧ್ಯವಿಲ್ಲ. ಅದಕ್ಕೆ ಅರ್ಹತೆಗಳಿವೆ ಎಂಬುದೇ ಅಕ್ಕ ಮಹಾದೇವಿಯವರ ನಿಲುವಾಗಿತ್ತು.
ಕಲ್ಯಾಣವೆಂಬುದಿನ್ನಾರಿಗೆ ಹೊಗಬಹುದು?
ಹೊಗಬಾರದು, ಅಸಾಧ್ಯವಯ್ಯಾ.
ಆಸೆ ಆಮಿಷ ಅಳಿದಂಗಲ್ಲದೆ
ಕಲ್ಯಾಣದತ್ತಲಡಿಯಿಡಬಾರದು.
ಒಳಹೊರಗು ಶುದ್ಧನಾದಂಗಲ್ಲದೆ
ಕಲ್ಯಾಣವ ಹೊಗಬಾರದು.
ನೀನಾನೆಂಬುದ ಹರಿದಂಗಲ್ಲದೆ
ಕಲ್ಯಾಣದ ಒಳಗು ತಿಳಿಯಬಾರದು.
ಚೆನ್ನಮಲ್ಲಿಕಾರ್ಜುನಂಗೊಲಿದು
ಉಭಯ ಲಜ್ಜೆ ಅಳಿದೆನಾಗಿ
ಕಲ್ಯಾಣವಂ ಕಂಡು ನಮೋ ನಮೋ ಎನುತಿದ್ದೆನು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-54/ವಚನ ಸಂಖ್ಯೆ-147)
ಎಂದು ಅಕ್ಕ ಮಹಾದೇವಿಯವರು ಕಲ್ಯಾಣದ ಒಳಗು ಹೊರಗು ಪ್ರವೇಶಿಸುವ ವಿಧಾನ ತಿಳಿಸುತ್ತಾರೆ. ಅಂತಹ ಕಲ್ಯಾಣದೊಳಗೆ ತಾವು ಪ್ರವೇಶಿಸುತ್ತಿದ್ದೇವೆ ಎಂಬ ಉತ್ಕಟ ಭಾವ ಅವರನ್ನಾವರಿಸಿಕೊಳ್ಳುತ್ತದೆ. ಕಲ್ಯಾಣ ಮಾರ್ಗದತ್ತ ನಡೆದು ಬರುವಾಗ ಅಲ್ಲಮ ಪ್ರಭುಗಳ ಆಣತಿಯ ಮೇರೆ ಕಿನ್ನರಿ ಬೊಮ್ಮಯ್ಯನವರಿಂದ ಸಾತ್ವಿಕ ಪರೀಕ್ಷೆಗೆ ಒಳಗಾಗುತ್ತಾರೆ. ಈ ಸಂದರ್ಭದಲ್ಲಿ ಅಕ್ಕ ಮಹಾದೇವಿಯವರಿಗಿರುವ ದೇಹಜ್ಞಾನ ಮತ್ತು ದೇಹಭಾವದಿಂದ ದೂರಾದ ನಿರ್ಲಿಪ್ತ ಸ್ಥಿತಿಯನ್ನು ಕಾಣುತ್ತೇವೆ. ಅಕ್ಕ ಮಹಾದೇವಿಯವರ ಚೆಲುವನ್ನು ಬಣ್ಣಿಸಿ ಕೆಣಕುವ ಕಿನ್ನರಿ ಬೊಮ್ಮಯ್ಯನವರಿಗೆ ಅಕ್ಕ ಮಹಾದೇವಿಯವರು ನೀಡುವ ಉತ್ತರ ತುಂಬಾ ವೈರಾಗ್ಯದ ಎತ್ತರದಲ್ಲಿದೆ.
ಬಟ್ಟಿಹ ಮೊಲೆಯ ಭರದ ಜವ್ವನದ
ಚಲುವ ಕಂಡು ಬಂದಿರಣ್ಣಾ
ಅಣ್ಣಾ, ನಾನು ಹೆಂಗೂಸಲ್ಲ;
ಅಣ್ಣಾ, ನಾನು ಸೂಳೆಯಲ್ಲ;
ಅಣ್ಣಾ, ಮತ್ತೆ ನನ್ನ ಕಂಡು ಕಂಡು
ಆರೆಂದು ಬಂದಿರಣ್ಣಾ?
ಚೆನ್ನಮಲ್ಲಿಕಾರ್ಜುನನಲ್ಲದ ಮಿಕ್ಕಿನ ಪರಪುರುಷನು
ನಮಗಾಗದ ಮೋರೆ ನೋಡಣ್ಣಾ?
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-100/ವಚನ ಸಂಖ್ಯೆ-287)
“ನಾನು ಹೆಂಗೂಸಲ್ಲ” ಆ ಭಾವವೇ ಬತ್ತಿ ಹೋದ ಮೇಲೆ ಏನ ಕಂಡು ಮೋಹಿಸುವಿರಿ ನನ್ನ? ನಾಮದಲಿ ಹೆಂಗೂಸಾದಡೇನು ಭಾವಿಸಲು ಗಂಡುರೂಪು ನನ್ನದು ಎನ್ನುವ ಅಕ್ಕ ಮಹಾದೇವಿಯವರ ಸಮಚಿತ್ತದ ಉತ್ತರ ಬೊಮ್ಮಯ್ಯನವರಿಗೆ ದಿಗಿಲು ಮೂಡಿಸುತ್ತದೆ. ಆತ್ಮಜ್ಞಾನದಂತೆ ದೇಹಜ್ಞಾನದ ಅರಿವು ಇರುವ ಅಕ್ಕ ಮಹಾದೇವಿಯವರು ದೇಹ ವಿಜ್ಞಾನದ ಸಾರವನ್ನೇ ದರ್ಶಿಸುತ್ತಾರೆ.
ಅಮೇಧ್ಯದ ಮಡಿಕೆ, ಮೂತ್ರದ ಕುಡಿಕೆ,
ಎಲುವಿನ ತಡಿಕೆ, ಕೀವಿನ ಹಡಿಕೆ
ಸುಡಲೀ ದೇಹವ; ಒಡಲುವಿಡಿದು ಕೆಡದಿರು,
ಚೆನ್ನಮಲ್ಲಿಕಾರ್ಜುನನನರಿಯದ ಮರುಳೆ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-9/ವಚನ ಸಂಖ್ಯೆ-23)
ಕೆಡುವ ದೇಹದೊಳಗಿರುವ ಆತ್ಮಜ್ಞಾನವನ್ನು ತಿಳಿದುಕೋ ಎನ್ನುತ್ತಲೇ ತಮ್ಮ ದೇಹದ ನಿರ್ಮೋಹ ತತ್ವವನ್ನು ಅಕ್ಕ ಮಹಾದೇವಿಯವರು ಪ್ರತಿಪಾದಿಸುತ್ತಾರೆ. ಅಕ್ಕ ಮಹಾದೇವಿಯವರು ವೈರಾಗ್ಯದ ಮೂರ್ತಿಯೆಂಬುದು ಆಗಲೇ ಕಿನ್ನರಿ ಬೊಮ್ಮಯ್ಯನವರಿಗೆ ಸ್ಪಷ್ಟವಾಗುತ್ತದೆ. ಅಕ್ಕ ಮಹಾದೇವಿಯವರ ದಿವ್ಯ ನಿಲುವನ್ನು ದರ್ಶಿಸಿ ಬೆರಗಾದ ಕಿನ್ನರಿ ಬೊಮ್ಮಯ್ಯನವರು ಹೇಳುವ ಮಾತುಗಳು ಇಂತಿವೆ.
ಮಸ್ತಕವ ಮುಟ್ಟಿ ನೋಡಿದಡೆ,
ಮನೋಹರದಳಿವು ಕಾಣ ಬಂದಿತ್ತು!
ಮುಖಮಂಡಲವ ಮುಟ್ಟಿ ನೋಡಿದಡೆ,
ಮೂರ್ತಿಯ ಅಳಿವು ಕಾಣ ಬಂದಿತ್ತು!
ಕೊರಳ ಮುಟ್ಟಿ ನೋಡಿದಡೆ,
ಗರಳಧರನ ಇರವು ಕಾಣ ಬಂದಿತ್ತು!
ತೋಳುಗಳ ಮುಟ್ಟಿ ನೋಡಿದಡೆ,
ಶಿವನ ಘನವು ಕಾಣ ಬಂದಿತ್ತು!
ಉರಸ್ಥಲವ ಮುಟ್ಟಿ ನೋಡಿದಡೆ,
ಪರಸ್ಥಲದಂಗಲೇಪ ಕಾಣ ಬಂದಿತ್ತು!
ಬಸಿರ ಮುಟ್ಟಿ ನೋಡಿದಡೆ,
ಬ್ರಹ್ಮಾಂಡವ ಕಾಣ ಬಂದಿತ್ತು!
ಗುಹ್ಯವ ಮುಟ್ಟಿ ನೋಡಿದಡೆ,
ಕಾಮದಹನ ಕಾಣ ಬಂದಿತ್ತು!
ಮಹಾಲಿಂಗ ತ್ರಿಪುರಾಂತಕದೇವಾ,
ಮಹಾದೇವಿಯಕ್ಕನ ನಿಲುವನರಿಯದೆ
ಅಳುಪಿ ಕೆಟ್ಟೆನು.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-32/ವಚನ ಸಂಖ್ಯೆ-63)
ಅಕ್ಕ ಮಹಾದೇವಿಯವರ ದಿವ್ಯ ವ್ಯಕ್ತಿತ್ವಕ್ಕೆ ಶರಣ ಕಿನ್ನರಿ ಬೊಮ್ಮಯ್ಯನವರು ಶರಣಾಗತರಾದದ್ದು ಸ್ವತಃ ಅವರ ವಚನದಿಂದ ತಿಳಿದು ಬರುತ್ತದೆ. ಮುಂದೆ ಕಿನ್ನರಿ ಬೊಮ್ಮಯ್ಯನವರೇ ಗೌರವಾದರಗಳಿಂದ ಅಕ್ಕ ಮಹಾದೇವಿಯವರನ್ನು ಕಲ್ಯಾಣಕ್ಕೆ ಕರೆದೊಯ್ಯುತ್ತಾರೆ. ಅಕ್ಕ ಮಹಾದೇವಿಯವರ ವೈರಾಗ್ಯ ಅವರ ಅರಿವನ್ನು ಜಾಗೃತಗೊಳಿಸಿದ ವಿವರ ಇಂತಿದೆ.
ಶರಣು ಶರಣಾರ್ಥಿ ಎಲೆ ನಮ್ಮವ್ವ,
ಶರಣು ಶರಣಾರ್ಥಿ ಶರಣಾರ್ಥಿ
ಕರುಣ ಸಾಗರ ನಿಧಿಯೆ,
ದಯಾಮೂರ್ತಿ ತಾಯೆ, ಶರಣಾರ್ಥಿ!
ಮಹಾಲಿಂಗ ತ್ರಿಪುರಾಂತಕನೊಡ್ಡಿದ ತೊಡಕು,
ನೀವು ಬಿಡಿಸಿದರಾಗಿ ನಿಮ್ಮ ದಯದಿಂದ
ನಾನು ಹುಲಿನೆಕ್ಕಿ ಬದುಕಿದೆನು
ಶರಣಾರ್ಥಿ ಶರಣಾರ್ಥಿ ತಾಯೆ.
(ಸಮಗ್ರ ವಚನ ಸಂಪುಟ: ಏಳು-2021/ಪುಟ ಸಂಖ್ಯೆ-33/ವಚನ ಸಂಖ್ಯೆ-65)
ಈ ಎಲ್ಲಾ ಪರೀಕ್ಷೆಗಳನ್ನು ಗೆಲಿದು ಇನ್ನೇನು ಕಲ್ಯಾಣದ ಅನುಭವ ಮಂಟಪವನ್ನು ಅಕ್ಕ ಮಹಾದೇವಿಯವರು ಪ್ರವೇಶಿಸಬೇಕು ಎನ್ನುವ ಹಂತದಲ್ಲಿ ಮತ್ತೆ ಅಲ್ಲಮ ಪ್ರಭುಗಳಿಂದ ಅವರು ಪರೀಕ್ಷೆಗೆ ಒಳಗಾಗುತ್ತಾರೆ. ಇಲ್ಲಿ ಆತ್ಮ ಮತ್ತು ದೇಹಗಳ ಕುರಿತಾದ ತಾತ್ವಿಕ ಚರ್ಚೆಗಳು ನಡೆಯುತ್ತವೆ. ಅಲ್ಲಮ ಪ್ರಭುಗಳೊಡ್ಡಿದ ಪ್ರಶ್ನೆಗಳಿಗೆ ಅಕ್ಕ ಮಹಾದೇವಿಯವರು ತಾತ್ವಿಕ ನೆಲೆಯಲ್ಲಿಯೇ ಸಮರ್ಥ ಉತ್ತರ ನೀಡಿ ಗೆಲ್ಲುತ್ತಾರೆ. ಅಕ್ಕ ಮಹಾದೇವಿಯವರ ವೀರ ವೈರಾಗ್ಯ, ಜ್ಞಾನದ ಎತ್ತರವನ್ನು ಲೋಕಕ್ಕೆ ತೋರುವ ಉದ್ದೇಶ ಅಲ್ಲಮ ಪ್ರಭುಗಳದಾಗಿತ್ತು.
ಅಕ್ಕ ಮಹಾದೇವಿಯವರು ಕಲ್ಯಾಣದಲ್ಲಿ ಸ್ವಲ್ಪ ಕಾಲ ನೆಲೆ ನಿಲ್ಲುತ್ತಾರೆ. ಕಲ್ಯಾಣ ಮತ್ತು ಕಲ್ಯಾಣದ ಶರಣರೊಡನೆ ಬೆರೆಯುತ್ತಾರೆ. ಕಲ್ಯಾಣದ ಮಹಿಮೆಗೆ ಅಕ್ಕ ಮಹಾದೇವಿಯವರು ಭಾವುಕರಾಗುತ್ತಾರೆ.
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು.
ಒಳಗೂ ಕಲ್ಯಾಣ ಹೊರಗೂ ಕಲ್ಯಾಣ.
ಇದರಂತುವನಾರು ಬಲ್ಲರಯ್ಯಾ?
ನಿಮ್ಮ ಸತ್ಯ ಶರಣರ ಸುಳುಹು ತೋರುತ್ತಿದೆಯಯ್ಯಾ.
ನಿಮ್ಮ ಶರಣ ಬಸವಣ್ಣನ ಕಾಂಬೆನೆಂಬ ತವಕವೆನಗಾಯಿತ್ತು
ಕೇಳಾ ಚೆನ್ನಮಲ್ಲಿಕಾರ್ಜುನಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-54/ವಚನ ಸಂಖ್ಯೆ-146)
“ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು, ಒಳಗೂ ಕಲ್ಯಾಣ ಹೊರಗೂ ಕಲ್ಯಾಣ ಇದರಂತುವನಾರು ಬಲ್ಲರಯ್ಯಾ?” ಎನ್ನುತ್ತಲೇ ಬಸವಣ್ಣನವರ ದಿವ್ಯ ಚೇತನಕ್ಕೆ ಶರಣಾಗುತ್ತಾರೆ.
ಅಯ್ಯಾ, ನಿಮ್ಮ ಶರಣರು ಮೆಟ್ಟಿದ ಧರೆ
ಪಾವನವಯ್ಯಾ.
ಅಯ್ಯಾ, ನಿಮ್ಮ ಶರಣರಿದ್ದ ಪುರವೆ
ಕೈಲಾಸಪುರವಯ್ಯಾ.
ಅಯ್ಯಾ, ನಿಮ್ಮ ಶರಣರು ನಿಂದುದೆ
ನಿಜನಿವಾಸವಯ್ಯಾ.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಶರಣ ಬಸವಣ್ಣನಿದ್ದ ಕ್ಷೇತ್ರ
ಅವಿಮುಕ್ತ ಕ್ಷೇತ್ರವಾಗಿ,
ಆನು ಸಂಗನಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎನುತಿರ್ದೆನು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-11/ವಚನ ಸಂಖ್ಯೆ-30)
ಪಾವನಮಯವಾದ, ಅವಿಮುಕ್ತ ಕ್ಷೇತ್ರವಾದ ಕಲ್ಯಾಣವನ್ನು ಹಾಗೂ ಕಲ್ಯಾಣದ ಶರಣರನ್ನು ಕಂಡು ಅಕ್ಕ ಮಹಾದೇವಿಯವರ ಭಾವ ತೃಪ್ತವಾಗುತ್ತದೆ. ಮುಂದಿನ ಅವರ ಏಕಾಂಗಿ ಪಯಣಕ್ಕೆ ಪರಮ ಜ್ಞಾನಿ ಅಲ್ಲಮ ಪ್ರಭುಗಳೆ ದಾರಿ ತೋರುತ್ತಾರೆ. ಆ ವಚನ ಇಂತಿದೆ.
ನೀನು'
ನಾನು’ ಎಂಬ ಉಭಯಸಂಗವಳಿದು
ತಾನು ತಾನಾದ ತ್ರಿಕೂಟವೆಂಬ ಮಹಾಗಿರಿಯ
ತುಟ್ಟತುದಿಯ ಮೆಟ್ಟಿ ನೋಡಲು,
ಬಟ್ಟಬಯಲು ಕಾಣಬಹುದು ನೋಡಾ!
ಆ ಬಯಲ ಬೆರಸುವಡೆ ತ್ರಿಕೂಟಗಿರಿಯೊಳಗೊಂದು
ಕದಳಿಯುಂಟು ನೋಡಾ!
ಆ ಕದಳಿಯ ತಿಳಿದು ಅಲ್ಲಿ ಒಳಹೊಕ್ಕು ನೋಡಲು
ತೊಳಗಿ ಬೆಳಗುವ ಜ್ಯೋತಿಯುಂಟು ಕೇಳಾ!
ನಡೆ ಅಲ್ಲಿಗೆ ತಾಯೆ,
ಗುಹೇಶ್ವರಲಿಂಗದಲ್ಲಿ ಪರಮಪದವಿ
ನಿನಗೆ ಸಯವಪ್ಪುದು ನೋಡಾ.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-484/ವಚನ ಸಂಖ್ಯೆ-1299)
ಇಲ್ಲಿ ಅಲ್ಲಮ ಪ್ರಭುಗಳ ದೃಷ್ಟಿಯಲ್ಲಿ “ಕದಳಿ” ಎಂಬುದು ಸಾಧನಾ ರಂಗ. ಅಲ್ಲಿ ಸಾಧನೆಯಿಂದ ಪಾರಮಾರ್ಥಿಕ ತುಟ್ಟ ತುದಿಗೇರಿ ಶಿವಯೋಗ ಸಾಧನೆ ಮಾಡಿದವರು ಅಕ್ಕ ಮಹಾದೇವಿಯವರು. ಶಿವಯೋಗ ಸಾಧಿಸಿದ ಶಿವಯೋಗಿಣಿ. ಆಗಲೇ ಆಧ್ಯಾತ್ಮ ಸಿದ್ಧಿಯಿಂದ ಪಕ್ವವಾದವರು. ಈಗ ಅವರು ಚನ್ನಮಲ್ಲಿಕಾರ್ಜುನನಲ್ಲಿ ಐಕ್ಯವಾಗುವ ಐಕ್ಯಸ್ಥಲದಲ್ಲಿ ನಿಂದು ತಮ್ಮ ತಾತ್ವಿಕ ನೆಲೆಯಲ್ಲಿ ಅನುಪಮ ಸ್ತ್ರೀ ರತ್ನವಾಗಿ ಕಂಗೊಳಿಸುತ್ತಾರೆ. ಹೀಗಾಗಿ ಅಕ್ಕ ಮಹಾದೇವಿಯವರಿಗೆ “ಕದಳಿ” ಎಂದರೆ ಈ ಭವದ ಬದುಕು. ಅದನ್ನು ಗೆದ್ದು ಬಂದಿರುವೆ. ಇನ್ನು ನೀನು ನನ್ನನ್ನು ಪರೀಕ್ಷಿಸಬೇಡ ತಂದೆ, ಭವ ಗೆದ್ದ ಬಂದ ಮಗಳೆಂದು ನನ್ನನ್ನು ಎತ್ತಿಕೋ ಎಂಬ ತಾತ್ವಿಕ ನಿಲುವಿಗೆ ಅಕ್ಕ ಮಹಾದೇವಿ ತಲುಪುತ್ತಾರೆ. ಆ ವಚನ ಇಂತಿದೆ.
ಕದಳಿ ಎಂಬುದು ತನು, ಕದಳಿ ಎಂಬುದು ಮನ,
ಕದಳಿ ಎಂಬುದು ವಿಷಯಂಗಳು.
ಕದಳಿ ಎಂಬುದು ಭವಘೋರಾರಣ್ಯ.
ಈ ಕದಳಿ ಎಂಬುದ ಗೆದ್ದು ತವೆ ಬದುಕಿ ಬಂದು
ಕದಳಿಯ ಬನದಲ್ಲಿ ಭವಹರನ ಕಂಡೆನು.
ಭವ ಗೆದ್ದು ಬಂದ ಮಗಳೆಂದು
ಕರುಣದಿ ತೆಗೆದು ಬಿಗಿಯಪ್ಪಿದಡೆ
ಚೆನ್ನಮಲ್ಲಿಕಾರ್ಜುನನ
ಹೃದಯಕಮಲದಲ್ಲಿ ಅಡಗಿದೆನು.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-52/ವಚನ ಸಂಖ್ಯೆ-139)
ಹೀಗೆ ಅಕ್ಕ ಮಹಾದೇವಿಯವರ ಏಕಾಂಗಿ ಹೋರಾಟಕ್ಕೆ ಕದಳಿ ವನದಲ್ಲಿ ವಿರಾಮ ದೊರೆಯುತ್ತದೆ.
ಅಕ್ಕ ಮಹಾದೇವಿಯವರ ತಾತ್ವಿಕ ನಿಲುವಿಗೆ ಅಲ್ಲಮ ಪ್ರಭುಗಳಂಥ ಜ್ಞಾನ ವೈರಾಗ್ಯಮೂರ್ತಿಗಳೇ ಬೆರಗಾಗಿ ಅಕ್ಕ ಮಹಾದೇವಿಯವರ ವ್ಯಕ್ತಿತ್ವವನ್ನು ಕೊಂಡಾಡುತ್ತಾರೆ.
ತನುಗುಣನಾಸ್ತಿಯಾಗಿ ಲಿಂಗಸಂಗಿಯಾದಳು.
ಮನಗುಣನಾಸ್ತಿಯಾಗಿ ಅರಿವುಸಂಗಿಯಾದಳು.
ಭಾವಗುಣನಾಸ್ತಿಯಾಗಿ ಮಹಾಪ್ರಭೆ ತಾನಾದಳು.ತಾನು'
ಇದಿರು’ ಎಂಬ ಎರಡಳಿದು
ನಮ್ಮ ಗುಹೇಶ್ವರಲಿಂಗದಲ್ಲಿ ಸ್ವಯಲಿಂಗವಾದ
ಮಹಾದೇವಿಯಕ್ಕಗಳ ನಿಲವಿಂಗೆ ಶರಣೆನುತಿರ್ದೆನು.
(ಸಮಗ್ರ ವಚನ ಸಂಪುಟ: ಎರಡು-2021/ಪುಟ ಸಂಖ್ಯೆ-52/ವಚನ ಸಂಖ್ಯೆ-139)
ಕಿರಿಯ ವಯಸ್ಸಿನಲ್ಲಿ ಹಿರಿದಾದ ಸಾಧನೆ ಮಾಡಿದ ಅಕ್ಕ ಮಹಾದೇವಿಯವರ ವ್ಯಕ್ತಿತ್ವವನ್ನು ಅವಿರಳಜ್ಞಾನಿ ಚನ್ನಬಸವಣ್ಣನವರು ಕೊಂಡಾಡುತ್ತಾರೆ.
ಅಜಕೋಟಿ ಕಲ್ಪ ವರುಷದವರೆಲ್ಲರು ಹಿರಿಯರೆ?
ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರು ಹಿರಿಯರೆ?
ನಡುಬಾಗಿ ಗುಡುಗೂರಿ ತಲೆ ನಡುಗಿ
ನೆರೆತೆರೆ ಹೆಚ್ಚಿ ಮತಿಗೆಟ್ಟು
ಒಂದನಾಡ ಹೋಗಿ ಒಂಬತ್ತನಾಡುವ
ಅಜ್ಞಾನಿಗಳೆಲ್ಲರು ಹಿರಿಯರೆ?
ಅನುವನರಿದು, ಘನವ ಬೆರಸಿ ಹಿರಿದು
ಕಿರಿದೆಂಬ ಭೇದವ ಮರೆದು,
ಕೂಡಲಚೆನ್ನಸಂಗಯ್ಯನಲ್ಲಿ ಬೆರಸಿ
ಬೇರಿಲ್ಲದಿಪ್ಪ ಹಿರಿಯತನ
ನಮ್ಮ ಮಹಾದೇವಿಯಕ್ಕಂಗಾಯಿತ್ತು.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-372/ವಚನ ಸಂಖ್ಯೆ-921)
ಅಕ್ಕ ಮಹಾದೇವಿಯವರ ಹಿರಿತನಕ್ಕೆ ದಿವ್ಯಜ್ಞಾನಿ ಚನ್ನಬಸವಣ್ಣನವರು ನಮೋ ನಮೋ ಎನ್ನುತ್ತಾರೆ.
ತನುವಿನೊಳಗಿದ್ದು ತನುವ ಗೆದ್ದಳು,
ಮನದೊಳಗಿದ್ದು ಮನವ ಗೆದ್ದಳು,
ವಿಷಯದೊಳಗಿದ್ದು ವಿಷಯಂಗಳ ಗೆದ್ದಳು,
ಅಂಗಸುಖವ ತೊರೆದು ಭವವ ಗೆದ್ದಳು,
ಕೂಡಲಚೆನ್ನಸಂಗಯ್ಯನ
ಹೃದಯಕಮಲವ ಬಗಿದು ಹೊಕ್ಕು
ನಿಜಪದವನೈದಿದ ಮಹಾದೇವಿಯಕ್ಕನ
ಶ್ರೀಪಾದಕ್ಕೆ ನಮೋ ನಮೋ ಎಂಬೆನು.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-602/ವಚನ ಸಂಖ್ಯೆ-1291)
ಅಕ್ಕ ಮಹಾದೇವಿಯವರ ವಚನಗಳಲ್ಲಿ ಯೋಗಾಂಗ ತ್ರಿವಿಧಿಯ ತತ್ವಪದಗಳಲ್ಲಿ ಸಾಕಷ್ಟು ತಾತ್ವಿಕತೆ ಅಡಗಿದೆ. ಅಲ್ಲೆಲ್ಲಾ ಅಕ್ಕ ಮಹಾದೇವಿಯವರ ಅಂತರಂಗ ಮತ್ತು ಬಹಿರಂಗ ಲೋಕದ ಹುಡುಕಾಟವಿದೆ. ಬದುಕಿನ ಕೆಲವು ಅಮಾನವೀಯ ನೆಲೆಯನ್ನು ನಿರಾಕರಿಸಿ ಅಕ್ಕ ಮಹಾದೇವಿಯವರು ನಡೆಸಿದ ಹೋರಾಟ ಈ ಕಾಲಘಟ್ಟಕ್ಕೂ ಪ್ರೇರಕವಾಗಿದೆ. ಹೀಗಾಗಿ ಅಕ್ಕ ಮಹಾದೇವಿಯವರ ತಾತ್ವಿಕ ನಿಲುವು ಅವರ ವಚನಗಳಲ್ಲೂ ಹೆಪ್ಪುಗಟ್ಟಿದೆ. ಅವರ ವಚನಗಳು ಹೂವೆಂದು ಮುಟ್ಟಲು ಹೋದರೆ ನಿಗಿ ನಿಗಿ ಕೆಂಡದಂತಹ ಬಿಸಿ ಅನುಭವವನ್ನು ನೀಡಿದೆ. ಅಕ್ಕ ಮಹಾದೇವಿಯವರ ಜ್ಞಾನದ ಎತ್ತರ ಅವರ ವಚನಗಳಲ್ಲಿ ಕಾಣಬಹುದು.
ಆದ್ಯರ ಅರವತ್ತು ವಚನಕ್ಕೆ
ದಣ್ಣಾಯಕರಿಪ್ಪತ್ತು ವಚನ,
ದಣ್ಣಾಯಕರ ಇಪ್ಪತ್ತು ವಚನಕ್ಕೆ
ಪ್ರಭುದೇವರ ಹತ್ತುವಚನ,
ಪ್ರಭುದೇವರ ಹತ್ತು ವಚನಕ್ಕೆ
ಅಜಗಣ್ಣನ ಅಯ್ದು ವಚನ,
ಅಜಗಣ್ಣನ ಅಯ್ದು ವಚನಕ್ಕೆ
ಕೂಡಲಚೆನ್ನಸಂಗಮದೇವಾ,
ಮಹಾದೇವಿಯಕ್ಕಗಳದೊಂದೆ ವಚನ ನಿರ್ವಚನ.
(ಸಮಗ್ರ ವಚನ ಸಂಪುಟ: ಮೂರು-2021/ಪುಟ ಸಂಖ್ಯೆ-91/ವಚನ ಸಂಖ್ಯೆ-225)
ಎಂಬ ಚನ್ನಬಸವಣ್ಣನವರ ನುಡಿಗಳು ಅಕ್ಕ ಮಹಾದೇವಿಯವರ ವಚನ ಪ್ರಬುದ್ಧತೆಗೆ ಕನ್ನಡಿ ಹಿಡಿದಿದೆ.
ಅಕ್ಕ ಮಹಾದೇವಿಯವರ ವ್ಯಕ್ತಿತ್ವ ಮತ್ತು ತಾತ್ವಿಕ ನಿಲುವು ಅವರ ಬದುಕಿನ ಎಲ್ಲ ಸ್ಥರಗಳಲ್ಲೂ ಕಾಣಬಹುದು. ಬದುಕಿನ ಎದುರಲ್ಲಿ ಅಕ್ಕ ಮಹಾದೇವಿಯವರು ತಮ್ಮನ್ನು ಒಡ್ಡಿಕೊಂಡ ರೀತಿಯಲ್ಲಿ, ತಮ್ಮತನ ಉಳಿಸಿಕೊಳ್ಳುವಲ್ಲಿ, ತಮ್ಮ ಗಮ್ಯದೆಡೆಗೆ ಅಚಲತೆಯಿಂದ ಸಾಗುವಲ್ಲಿ, ವ್ಯಕ್ತಿತ್ವವನ್ನು ವಿರಚಿಸಿಕೊಳ್ಳುವಲ್ಲಿ, ಪಾರಮಾರ್ಥಿಕ ನೆಲೆಗೆ ಏರುವಲ್ಲಿ, ಸಾಹಿತ್ಯ ಗುಣ ಶ್ರೇಷ್ಠತೆ ಎತ್ತರಿಸಿಕೊಳ್ಳುವಲ್ಲಿ, ಅತ್ಯಂತ ಶ್ರೇಷ್ಠತೆಯನ್ನು ಅನನ್ಯತೆಯನ್ನು ಕಂಡುಕೊಂಡದ್ದು ಶ್ಲಾಘನೀಯ ಮತ್ತು ಸ್ತುತ್ಯಾರ್ಹ.
ಅಕ್ಕ ಮಹಾದೇವಿಯವರು ಅನುಭಾವಿ ಕವಿಯಿತ್ರಿಯೂ ಹೌದು, ಮಹಾ ಶರಣೆಯೂ ಹೌದು, ಶಿವಯೋಗ ಸಾಧಕಿಯೂ ಹೌದು, ಸ್ವತಂತ್ರ ವಿಚಾರವಾದಿ ಮಹಿಳೆಯೂ ಹೌದು. ಈ ಎಲ್ಲ ದೃಷ್ಟಿಯಿಂದ ಅಕ್ಕ ಮಹಾದೇವಿಯವರು ಸ್ತ್ರೀ ಕುಲದ ಅನರ್ಘ್ಯ ರತ್ನವಾಗಿದ್ದಾರೆ.
ಡಾ. ಪುಷ್ಪಾ ಶಲವಡಿಮಠ,
ಕನ್ನಡ ಉಪನ್ಯಾಸಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಚಿಕ್ಕ ಬಾಸೂರು, ಹಾವೇರಿ ಜಿಲ್ಲೆ.
ಮೋಬೈಲ್. ಸಂ. 97407 38330
ಪರಾಮರ್ಶನ ಕೃತಿಗಳು:
• ಶರಣರ ತಾತ್ವಿಕ ಚಿಂತನೆಗಳು: ಮಣ್ಣೂರು ಗುರಪ್ಪ.
• ವಚನ ಸಾಹಿತ್ಯ ಮತ್ತು ಮಹಿಳೆ: ಡಾ. ಶೈಲಜಾ ಉಡಚಣ.
• ವಚನ ಸಂಜೀವಿನಿ: ಪ. ಪೂ.ಡಾ. ಬಸವಲಿಂಗ ಪಟ್ಟದ್ದೇವರು.
• ಅಕ್ಕಮಹಾದೇವಿ: ಡಾ. ಬಿ. ಎಸ್. ಸುಮಿತ್ರಾದೇವಿ.
• ಅಕ್ಕಮಹಾದೇವಿಯವರ ಅಂತರಂಗ ಪಯಣ: ಡಾ. ವಿಜಯಕುಮಾರ ಕಮ್ಮಾರ.
• ಬಸವ ಯುಗದ ವಚನ ಸಂಪುಟ: ಪ್ರ. ಸಂ. ಡಾ. ಎಮ್ ಎಮ್ ಕಲಬುರ್ಗಿ.
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamand