ಅನುಭವ ಮಂಟಪಕೆ ಅನುಭಾವಿ ಬಸವಣ್ಣ | ಡಾ. ಸುಜಾತಾ ಅಕ್ಕಿ, ಮೈಸೂರು.

ಜಿಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಯಲ್ಲಿ ಬೆವರ ಹನಿಯ ದುಡಿತದ ಜನರಿಗೆ ಶ್ರಮದ ಮಹತ್ವ ಮತ್ತು ಘನತೆಯನ್ನು ಎತ್ತಿ ಹಿಡಿದವರು ಅಣ್ಣ ಬಸವಣ್ಣನವರು. ಶಿವಶರಣರೊಂದಿಗೆ ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಲಿಂಗ ತಾರತಮ್ಯವಿಲ್ಲದ, ವರ್ಗ ಬೇಧವಿಲ್ಲದ, ಜಾತಿರಹಿತ, ಪ್ರಾದೇಶಿಕತೆ ಅಸಮಾನತೆವಿಲ್ಲದ, ಭಾಷಾ ಬೇಧವಿಲ್ಲದೆ ಸರ್ವ ಸಮಾನತೆಯ ನೆಲೆಯಲ್ಲಿ ಅಕ್ಷರ ಕಲಿಸಿ ಆತ್ಮಸ್ಥೈರ್ಯ ತುಂಬಿದವರು. ನೊಂದ ಮನಸ್ಸುಗಳಿಗೆ ಸಾಂತ್ವನ ನೀಡಿ ಗೌರವಿಸಿದರು. ಶ್ರಮಿಕರಿಗೆ ಮನ ಮುಟ್ಟುವಂತೆ ಮಾತನಾಡಿ ಅವರ ಮನೆಯಲ್ಲಿ ಅಂಬಲಿಯನ್ನು ಕುಡಿದು ಮೈದಡವಿದ ಮಹಾನ್ ವ್ಯಕ್ತಿ ವಿಶ್ವಗುರು ಬಸವಣ್ಣನವರು.

ಜನಪದರೇ ವಚನಕಾರರು, ಬಹುತೇಕ ವಚನಕಾರರೇ ಜನಪದರು. ಸೃಜನಶೀಲ ಜನಪದ ಮನಸ್ಸುಗಳು ವಚನಕಾರರ ಬಗ್ಗೆ ಆಯಾ ಕಾಲಘಟ್ಟದಲ್ಲಿ ತ್ರಿಪದಿಗಳನ್ನು ಕಟ್ಟಿ ಮನದಣಿಯೇ ಹಾಡುತ್ತ ಮೌಖಿಕ ಪರಂಪರೆಯನ್ನು ಇತಿಹಾಸವನ್ನು ಮುಂದುವರೆಸಿಕೊಂಡು ಬಂದು ಸಾಕ್ಷೀಕರಿಸಿವರು. ಅದೇ ಸಂದರ್ಭಗಳಲ್ಲಿ ಅಕ್ಷರಸ್ಥರು ಲಿಖಿತ ಸಾಹಿತ್ಯದ ಮೂಲಕ ವಚನಕಾರರನ್ನು ದೈವೀಮಟ್ಟಕ್ಕೇರಿಸಿ ವಚನಕಾರರ ಜೀವನವನ್ನು ಸಾಹಿತ್ಯ ಕಥಾ ಮಾದರಿಯಾಗಿಸಿ ಮೌಲ್ಯತೆಯನ್ನು ಮನನೀಯಗೊಳಿಸಿರುವರು. ಕನ್ನಡದಲ್ಲಿ ಅಲ್ಲದೆ, ತೆಲುಗು ಭಾಷೆಯಲ್ಲಿಯೂ ವಚನಕಾರರ ಚಳುವಳಿಯನ್ನು ತೆಲುಗು ಪಂಡಿತರು ಅನಾವರಣಗೊಳಿಸಿದ್ದಾರೆ.

ಸಾಗಿ ಬಸವನು ಬಂದು ತೂಗಿದನು ಕಲ್ಯಾಣ
ಹಾಗಿನಲಿ ಕಟ್ಟಿ ಅನುಭಾವ | ಮಂಟಪದ ಕೂಗು
ಕೇಳುತಲಿ ಜನವೆದ್ದು
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-232/ತ್ರಿಪದಿ ಸಂ-22)

ಅಕ್ಕನಾಗಾಯಿಗೆ ಉಪನಯನ ಮಾಡದೇ ಇದ್ದಾಗ ಪುರೋಹಿತರು ಮತ್ತು ಮನೆಯಲ್ಲಿ ಹಿರಿಯರನ್ನು ಪ್ರಶ್ನೆ ಮಾಡಿ ಜನಿವಾರ ಕಿತ್ತೆಸೆದು ಕಲ್ಯಾಣಕ್ಕೆ ಬಂದು ಚಾಲುಕ್ಯರ ಬಿಜ್ಜಳನ ಆಸ್ಥಾನದಲ್ಲಿ ಕಾರಣಿಕನಾಗಿ ಮುಂದೆ ಮಂತ್ರಿಯಾಗಿ ಮತ್ತು ಭಂಡಾರಿಯಾಗಿ ಅಧಿಕಾರ ಸ್ವೀಕರಿಸಿದ ಬಸವಣ್ಣನವರು ಕ್ರಮೇಣವಾಗಿ ಶಿವಭಕ್ತರಿಗೆ ಅನುಭವ ಮಂಟಪದ ಕಟ್ಟಿದರು. ಈ ಅನುಭವ ಮಂಟಪದಲ್ಲಿ ಲಕ್ಷದ ಮೇಲೆ ತೊಂಭತ್ತಾರು ಸಾವಿರ ನಿತ್ಯ ಜಂಗಮರ ತಾಣವಾಗಿ ನೆಲೆಯಾಯಿತು. ಆಗ ಮಂಟಪದ ಕೂಗನ್ನು ಕೇಳುತ್ತಲೇ ಜನರೆಲ್ಲಾ ಅನುಭವ ಮಂಟಪದಲ್ಲಿ ತಮ್ಮ ಸದಸ್ಯತ್ವವನ್ನು ಪ್ರತಿನಿಧಿಸುವ ಮೂಲಕ ತಮ್ಮ ಅಸ್ಮಿತೆಯನ್ನು ಅಭಿವ್ಯಕ್ತಿಗೊಳಿಸಿ ಅನನ್ಯ ಸೇವೆಯನ್ನು ಸಲ್ಲಿಸಿದ್ದಾರೆ.

ಅಲ್ಲಮನೆ ಗುರುವಾದ ಕಲ್ಯಾಣ ಮಂಟಪಕೆ
ಕಲ್ಲೆದೆಯ ಬಂಟ ಮಡಿವಾಳ | ಕರುವಾಳು
ಸಲ್ಲಿಸಲು ಸೇವೆ ಮಂಟಪಕೆ
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-234/ತ್ರಿಪದಿ ಸಂ-36)

ಅಲ್ಲಮ ಪ್ರಭುವೇ ಶೂನ್ಯ ಪೀಠಕ್ಕೆ ಸೂಕ್ತವಾದ ವ್ಯಕ್ತಿ ಎಂದು ಎಲ್ಲಾ ಶಿವಶರಣರು ಮಾಡಿ ಶೂನ್ಯ ಪೀಠಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು. ಮಡಿವಾಳ ಮಾಚಯ್ಯನವರು ಕಲ್ಲೆದೆಯ ಬಂಟನಾಗಿ ಕಲ್ಯಾಣ ಮಂಟಪವೆಂಬ ಅನುಭವ ಮಂಟಪದಲ್ಲಿ ಸೇವೆಯನ್ನು ಸಲ್ಲಿಸಿದ್ದಾನೆ. ಪರಂಜ್ಯೋತಿಯಾಗಿ, ಗುರುವಾಗಿ ಅಲ್ಲಮ ಪ್ರಭುಗಳು ಅನುಭವ ಮಂಟಪವನ್ನು ಅನುಭಾವದ ನೆಲೆಯಲ್ಲಿ ಮುನ್ನಡೆಸಿದವರು.

ಕಲ್ಯಾಣ ಮಂಟಪದ ಎಲ್ಲ ಶರಣರು ಕೇಳಿ
ಸೊಲ್ಲು ಹೊಸಮತವ ಸಾರುದಕೆ |
ಚೌಡಯ್ಯ ಒಳ್ಳೆ ಆದರವ ತೋರಿದರು
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-296/ತ್ರಿಪದಿ ಸಂ-88)

ಕಲ್ಯಾಣ ಮಂಟಪದ ಎಲ್ಲ ಶರಣರನ್ನು ಒಟ್ಟುಗೂಡಿಸಿ ತಂಡೋಪತಂಡವಾಗಿ ಎಲ್ಲಾ ವರ್ಗದ ವೃತ್ತಿ ಬಾಂಧವರು, ಕುಲ ಕಸಬುದಾರರಿಗೆ ಶರಣು ಕೊಟ್ಟ ಗೌರವದ ಪ್ರತೀಕ. ಹೊಸಮತ ಸೊಲ್ಲು ಸಾರುವುದಕ್ಕೆ ಅಂಬಿಗರ ಚೌಡಯ್ಯನವರು ಒಳ್ಳೆಯ ಅಭಿಮಾನ ಪ್ರೀತಿ ಗೌರವ ಆದರವನ್ನು ತೋರಿಸಿದರು. ಜನತೆಯು ಗುಂಪು ಗುಂಪಾಗಿ ಕಲ್ಯಾಣ ಮಂಟಪದಲ್ಲಿ ನೆರೆದು ಸರ್ವ ಸಮಾನತೆಯ ಸಮಾಜವನ್ನು ಕಟ್ಟಿ ಬೆಳೆಸಲು ಬಸವಾದಿ ಪ್ರಮಥರಿಗೆ ಸಾಧ್ಯವಾಯಿತು.

ತಂದೆ ಬೊಮ್ಮಯೈಂದು ಮಂಟಪವು ಕರೆಯುತಿದೆ
ಚೆಂದ ವಚನಗಳ ಕಿನ್ನರಿಯು | ಹಾಡುವುದ
ಜಂಗಮರು ಕೇಳಿ ತಲೆದೂಗಿ
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-255/ತ್ರಿಪದಿ ಸಂ-9)

ಕಿನ್ನರಿ ಬೊಮ್ಮಯ್ಯ ಸದ್ಗುಣದಿಂದ ತಂದೆಯಂತೆ ಏಳನೂರ ಎಪ್ಪತ್ತು ಅಮರ ಗಣಂಗಳಿಗೆ ಸನ್ನುತದಲಿ ತಂದೆಯಂತೆ ಇದ್ದರು. ಕಿನ್ನುರಿ ಕೈಲಿ ಬಾರಿಸುತ್ತ ವಚನಗಳನ್ನು ಜಂಗಮರು ಕೇಳಿ ತಲೆದೂಗುವಂತೆ ಹಾಡುತ್ತಿದ್ದರು. ಕಲ್ಯಾಣ ಮಂಟಪಕೆ ಕಿನ್ನರಿ ಬೊಮ್ಮಯ್ಯರು ಶಿವಗುಡಿಗೆ ಹೊನ್ನ ಕಳಸವಾದವರು ಎಂದು ಜನಪದ ಮನಸ್ಸುಗಳು ಹಾಡಿ ಹರಸುತ್ತಾರೆ. ಇವರ ಕಿನ್ನರಿ ಗಾಯನ ಕೇಳುತ್ತ ತಲ್ಲೀನರಾಗಿ ಮನದಣಿಯೇ ತಲೆದೂಗಿದವರು ಶಿವಶರಣರು.

ಸಂಗೀತ ವಿದ್ಯೆಯದು ಸಂಗಡವೆ ಬಂದದ್ದು
ಲಿಂಗಿಗಳ ಹಿರಿಮೆ ಹಾಡುತಲಿ | ಕಲ್ಯಾಣ
ಲಿಂಗ ಮಂಟಪವ ಕೂಡಿದನು
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-255/ತ್ರಿಪದಿ ಸಂ-5)

ಕೈಲಿರುವ ಹಣವನ್ನು ಬೊಮ್ಮಯ್ಯ ಕಳೆದುಕೊಂಡು ಕಿನ್ನರಿ ಹಿಡಿಯುವನು. ಬೊಮ್ಮಯ್ಯನಿಗೆ ಸಂಗೀತ ವಿದ್ಯೆ ಹುಟ್ಟಿನ ಸಂಗಡವೇ ರಕ್ತದಲ್ಲಿಯೇ ಬಂದಿರುತ್ತದೆ. ಲಿಂಗವಂತರ ಹಿರಿಮೆಯನ್ನು ಹಾಡುವುದು, ಅವರ ವ್ಯಕ್ತಿತ್ವವನ್ನು ಸಂಗೀತದ ಮೂಲಕ ಜನರಿಗೆ ಕೇಳುವಂತೆ ಹಾಡಿ ಹಾಡಿ ಹಾಡುತ್ತಲೇ ಕಲ್ಯಾಣದ ಲಿಂಗ ಮಂಟಪವನ್ನು ಕೂಡುತ್ತಾನೆ ಎಂದು ಜನಪದರು ತ್ರಿಪದಿಗಳಲ್ಲಿ ಹಾಡಿದ್ದಾರೆ.

ಕಿನ್ನರಿ ಬಾರಿಸುತ ಕಿನ್ನರಿಯ ರಾಗದಲಿ
ನನ್ನಿಯಲಿ ಹಾಡಿ ಶಿವಲೀಲೆ | ಶರಣರಿಗೆ
ಕಿನ್ನರಿಯ ಬೊಮ್ಮ ಮಂಟಪಕೆ
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-255/ತ್ರಿಪದಿ ಸಂ-6)

ಬೊಮ್ಮಯ್ಯ ಕಿನ್ನರಿಯ ಹೊಸ ಲೋಕವನ್ನೇ ಅನುಭವ ಮಂಟಪದ ಮುಂದೆ ತೆರೆದಿಡುತ್ತಾನೆ. ಕಿನ್ನರಿ ತಯಾರಿಸಿದಷ್ಟೇ ಅಲ್ಲ. ಕಿನ್ನರಿಯ ರಾಗದ ಜೊತೆಗೆ ಶರಣರ ಬದುಕನ್ನು ಸತ್ಯದ ನೆಲೆಯಲ್ಲಿ ಶರಣರಿಗೆ ಶಿವಲೀಲೆಯನ್ನು ಹಾಡಿ ಅನುಭವ ಮಂಟಪದಲ್ಲಿ ಕಿನ್ನರಿ ಬೊಮ್ಮಯ್ಯ ಎಂದು ಹೆಸರಾಗಿದ್ದಾರೆ ಎಂದೇ ಜನಪದರು ತ್ರಿಪದಿಗಳಲ್ಲಿ ಅಭಿವ್ಯಕ್ತಿಸಿರುವರು.

ಅನುಭಾವ ಮಂಟಪಕೆ ಅನುಭಾವಿ ಬಸವಣ್ಣ
ಅನುನಯದಿ ಮೂಲ ಚಾಲಕನು | ಶಿವಮತಕೆ
ತನುಮನವ ಧನವನೆರೆದಿದ್ದ
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-255/ತ್ರಿಪದಿ ಸಂ-7)

ಬಸವಾದಿ ಪ್ರಮಥರಲ್ಲಿ ಅನುಭವ ಮಂಟಪದಲ್ಲಿ ಬಸವಣ್ಣನೇ ದೊಡ್ಡ ಅನುಭಾವಿ ಶರಣ. ಅನುಭವ ಮಂಟಪಕೆ ಮೂಲ ಚಾಲಕನೇ ಬಸವೇಶ. ಎಲ್ಲ ಕುಲ ಕಸಬುದಾರರಿಗೆ ಗೌರವಿಸಿ ಅಕ್ಷರ ಜ್ಞಾನದ ಮೂಲಕ ಕಾಯಕದ ಮಹತ್ವವನ್ನು ಮತ್ತು ದಾಸೋಹ ಕಲಿಸುವಾಗ ಬಸವಣ್ಣ ವ್ಯವಸ್ಥೆಯ ವಿರುದ್ಧ ತನು, ಮನ, ಧನವನ್ನು ಧಾರೆ ಎರೆದು ಅನುಭವ ಮಂಟಪವನ್ನು ಕಟ್ಟಿರುವರು. ಶಿವಮತಕೆ ಬಸವಣ್ಣನವರು ತಮ್ಮ ತನು, ಮನ, ಧನವನ್ನೇ ಧಾರೆ ಎರೆದಾಗ ಶರಣರಲ್ಲಿ ಕಾಯಕವು ಉಕ್ಕುತ್ತ ಬೆಳೆದು ಸಿರಿಯನ್ನು ಶರಣರಿಗೆ ಕೊಟ್ಟಿತ್ತು ಎಂದು ಜನಪದ ಈ ಹಂತಿ ಹಾಡುಗಳನ್ನು ಹಂತಿ ಪದಕಾರರು ತನ್ಮಯದಿ ಹಾಡಿದ್ದಾರೆ.

ಶಿವಯೋಗಿ ಮಗ ಬಾರೋ ಶಿವಪುತ್ರ ಚೆನಬಸವ
ಶಿವನಾಣಿ ಚೆನ್ನಬಸವಣ್ಣ | ಕಲ್ಯಾಣ
ಶಿವಗಳರಸ ಬಾರೋ ಮಂಟಪಕೆ
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-234/ತ್ರಿಪದಿ ಸಂ-44)

ಚೆನ್ನಬಸವಣ್ಣ ಅವಿರಳ ಜ್ಞಾನವನ್ನು ಪಡೆದಿದ್ದು ಸೋದರ ಮಾವ ಬಸವಣ್ಣನವರ ಪ್ರೇರಣೆಯಿಂದ. ಅವಿರಳಜ್ಞಾನಿ ಚಿನ್ಮಯ ಜ್ಞಾನಿಯಾಗಿ ಷಟಸ್ಥಳದ ಚಕ್ರವರ್ತಿ ಎಂದೇ ಅನುಭವ ಮಂಟಪದಲ್ಲಿ ಇದ್ದವರು. ಅವರನ್ನು ಶರಣರು ಕಲ್ಯಾಣದ ಚಳವಳಿಯ ಕೊನೆಯ ಕಾಲಘಟ್ಟದಲ್ಲಿ ಈ ರೀತಿ ಕರೆದು ಮನಸಾರೆ ಅಭಿನಂದಿಸಿದ್ದಾರೆ‌. ಕಲ್ಯಾಣದ ಅನುಭವ ಮಂಟಪದಲ್ಲಿ ಅಲ್ಲಮನಿಲ್ಲದೆ, ಬಸವನಿಲ್ಲದೇ ಬಿಕೋ ಎನ್ನುವ ಸಂದರ್ಭದಲ್ಲಿ ಶರಣರು ನೀನಾದರೂ ಬಂದು ಶಿವ ಮಂಟಪದ ಮೆರಗನ್ನು ತಂದುಕೊಡು ಎಂದೇ ತ್ರಿಪದಿಗಳಲ್ಲಿ ಜನಪದರು ತಮ್ಮ ಮನದ ಹಿಂಗಿತವನ್ನು ಅಭಿವ್ಯಕ್ತಿಸಿದ್ದಾರೆ.

ಉಪ್ಪದಿನ್ನಿಸಂಗ ಅಪ್ಪ ಶರಣನು ಹರಳ
ಹಿಪ್ಪರಗಿ ಮಾಚ ಬಸವನಿಗೆ | ಕೂಡಿದನು
ಅಪ್ಪಣ್ಣ ಶರಣ ಮಂಟಪಕೆ
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-236/ತ್ರಿಪದಿ ಸಂ-3)

ಉತ್ತಮರ ಸಂಗದಿಂದ ಅಪ್ಪ ಶರಣನಾಗಿ ಹರಳಯ್ಯ ಹಿಪ್ಪರಗಿಯಿಂದ ಬಂದ ಮಾಚ ಬಸವನಿಗೆ ಹಡಪದ ಅಪ್ಪಣ್ಣ, ಹರಳಯ್ಯ ಎಲ್ಲರೂ ಕೂಡಿ ಶರಣ ಮಂಟಪಕೆ ಕಳೆತಂದು ಶಿವಶರಣರ ಬದುಕನ್ನು ಊರ್ಜಿತಗೊಳಿಸಿ ಸರ್ವ ಸಮಾನತೆಯಿಂದ ಬದುಕನ್ನು ಮೌಲೀಕರಿಸಿದರು ನಮ್ಮ ವಚನಕಾರರು.

ತನುವಿಟ್ಟು ಮನ ಧನವ ಮನೆಯ ಕಾಯಕ ಮಾಡಿ
ಅನುಭಾವಿಯಾದ ಹರಳಯ್ಯ | ಮಂಟಪಕೆ
ಮಣಿ ಮಾಲೆಯಾದ ಶಿವಮತಕೆ
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-236/ತ್ರಿಪದಿ ಸಂ-6)

ಹರಳಯ್ಯನು ಅನುಭವ ಮಂಟಪಕೆ ತನ್ನ ತನು, ಮನ, ಧನವನ್ನು ಧಾರೆ ಎರೆದು ಮನೆಯ ಕಾಯಕವನ್ನು ಮಾಡುವಂತೆ ಮಾಡಿ ಅನುಭಾವಿಯಾಗಿ ಮಣಿಮಾಲೆಯಾಗಿ ಶಿವಮತಕೆ ಉನ್ನತಿ ಸ್ಥಿತಿಯನ್ನು ತಲಪಿರುವ ಹರಳಯ್ಯನು ಅನುಭಾವಿಯಾಗಿ ಶರಣ ಮಂಟಪದಲ್ಲಿ ಉತ್ತುಂಗದ ಮೇರು ಪರ್ವತವಾಗಿದ್ದಾರೆ ಎಂದು ಜನಪದ ಅಭಿಜ್ಞಾ ಶರಣರು ಹಂತಿ ಪದಕಾರರು ಹಂತಿಪದ ಹಾಡುತ್ತ ತಮ್ಮ ಭೌದ್ಧಿಕ ಸಾಮರ್ಥ್ಯವನ್ನು ಸಾಬೀತುಪಡಿಸಿರುವರು.

ನೀತಿ ಮಂಟಪದೊಳಗೆ ಭೀತಿ ಶರಣರಿಗುಂಟೆ
ಮಾತಿನಲಿ ಮೊದಲು ನೂರೊಂದು | ಸ್ಥಲಗಳಿಗೆ
ಕಾತಿ ನೀಯೆಂದ ಹರಳನಿಗೆ
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-238/ತ್ರಿಪದಿ ಸಂ-26)

ಶರಣ ಸಮೂಹಕ್ಕೆ ನೀತಿ ಮಂಟಪ ಎಂಬ ಅನುಭವ ದಲ್ಲಿ ಶರಣರಿಗೆ ಭೀತಿ ಹೆದರಿಕೆ ಎಂಬ ಮಾತೇ ಇಲ್ಲ. ಮಾತು, ಸಂವಾದ, ಚರ್ಚೆ ನೂರೊಂದು ಹರಳಯ್ಯ ನೀನು ಎಲ್ಲಾ ಸ್ಥಳಗಳಲ್ಲಿ ಕಾಂತಿಯುಕ್ತವಾಗಿರು ಎಂದು ಜನಪದರು ವಿಚಾರಯುಕ್ತವಾಗಿ ತ್ರಿಪದಿ ಗಳಲ್ಲಿ ಹಾಡಿದ್ದಾರೆ.

ಕೂಡಿಸಿದ ಮಂಟಪವ ಹಾಡಿಸಿದ ಶಿವಮತವ
ನಾಡ ಶರಣರಿಗೆ ತಿಳಿಸಿದನು | ಬಸವಯ್ಯ
ಹೂಡುವರು ಕದನವಾದಿಗಳು
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-241/ತ್ರಿಪದಿ ಸಂ-60)

ಎಲ್ಲಾ ನಾಡ ಶಿವ ಶರಣರನ್ನು ಕೂಡಿಸಿ ಹಾಡಿಸಿ ತನು ಮನವನ್ನು ಸಂತೈಯಿಸುವ ಶಕ್ತಿ ಆ ಬಸವನೊಬ್ಬರಿಗೆ ಮಾತ್ರ ಇತ್ತು. ಇದನ್ನು ಕಂಡು ವಿರೋಧಿ ಮನುವಾದಿಗಳು, ಕದನವಾದಿಗಳು ಸಹಿಸಲಾಗದೇ ತಲ್ಲಣಗೊಂಡರು. ಎಲ್ಲ ನೊಂದ ಮನಸ್ಸುಗಳನ್ನು‌ ಗೆದ್ದ ಕೀರ್ತಿ ಬಸವಣ್ಣನವರಿಗೆ ಮತ್ತು ಶಿವ ಶರಣರಿಗೆ ತಲಪುತ್ತದೆ. ಈ ಎಲ್ಲಾ ಸಾಮರಸ್ಯ ಸೌಹಾರ್ದತೆಯ ಜನರ ಮನಸ್ಸು ತಂದು ಬಸವಣ್ಣನವರು ಸ್ವಾಭಿಮಾನ ಆತ್ಮ ಶಕ್ತಿಯನ್ನು ಅನುಭವ ಮಂಟಪದಲ್ಲಿ ತುಂಬಿದರು. ಹಾಗಾಗಿ ಅನುಭವ ಮಂಟಪದಲ್ಲಿ ಶಿವಮತವನ್ನು ಹಾಡಿಸಿ ಎಲ್ಲರ ಮನಸ್ಸುಗಳನ್ನು ಗೆದ್ದರು.

ಕಲ್ಯಾಣ ಮಂಟಪಕೆ ಬಲ್ಲವರು ಬಂದಿರಲು
ಅಲ್ಲಗಳೆಯುದಕೆ ಶರಣರನು | ಮಾಚಯ್ಯ
ಎಲ್ಲರೊಳಗವನು ಮಿಗಿಲಾದ
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-246/ತ್ರಿಪದಿ ಸಂ-21)

ನಾಡ ಜಾಣರೆಲ್ಲಾ ಬಂದು ಕಲ್ಯಾಣ ಮಂಟಪದಲ್ಲಿ ಕೂಡಿ ಶರಣನು ಅಲ್ಲಗಳೆಯುವಾಗ ಮಡಿವಾಳ ಮಾಚಯ್ಯನು ಎಲ್ಲರನ್ನೂ ಮೀರಿ ಶರಣರ ಬಗ್ಗೆ ಶರಣ ತತ್ವದ ಬಗ್ಗೆ ಕಾಯಕ ದಾಸೋಹದ ಬಗ್ಗೆ ಅನುಭವ ಮಂಟಪದಲ್ಲಿ ಅನುಭವದಿಂದ ಅನುಭಾವಿಗಳಾಗಿ ವಚನಕಾರರಾಗಿ ಸಂವಾದ ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಆತ್ಮಾಭಿಮಾನದ ವಚನಗಳನ್ನು ರಚಿಸಿದ್ದಾರೆ. ಮಾನವೀಯತೆ ಮೆರೆದು ದುಡಿದು ತಮ್ಮ ಘನತೆಯನ್ನು ಸಾಕ್ಷೀಕರಿಸಿರುವರು ನಮ್ಮ ಬಸವಾದಿ ಪ್ರಮಥರು.

ಅನುಭಾವ ಮಂಟಪಕೆ ಅನುನಯದಿ ಹಾಡುತಲಿ
ಬನವು ಕೂಗುತಲಿ ಮಾಚಯ್ಯ | ಶರಣೆಂದು
ಜನವಿಂದು ಭಜನೆ ಮಾಡುವದು
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-250/ತ್ರಿಪದಿ ಸಂ-57)

ಬಹುತೇಕ ವಚನಕಾರರು ವಚನ ರಚನೆಯನ್ನು ಮಾಡುತ್ತಲೇ ಹಾಡಿದ್ದಾರೆ. ಬನವೇ ವಚನವನ್ನು ಹಾಡುವಷ್ಟು ಕೂಗುತ್ತಾ ಮಾಚಯ್ಯ ಘನ ಶರಣನೆಂದು ಜನರೆಲ್ಲಾ ಭಜನೆ ಮಾಡುತ್ತಾರೆ. ಅನುಭವ ಮಂಟಪದಲ್ಲಿ ಎಲ್ಲಾ ಅನುಭಾವಿಗಳು ಮನಸಾರೆ ಹಾಡತ್ತ ಕುಣಿಯುತ್ತ ಸಗ್ಗದ ಸಂಭ್ರಮವನ್ನು ಸಡಗರದಿಂದ ಅನುಭವಿಸುತ್ತ ಅನುಭಾವಿಗಳ ಸಂಗಮವಾಗಿತ್ತು ಶರಣರ ಅನುಭವ ಮಂಟಪ.

ಅಂದು ಸಂಜೆಗೆ ಶಿವನೆ ಹೊಂದಿ ಮಂಟಪ ಕೂಡಿ
ಬಂದ ಬವಣೆಯನುಗಳೆಯುದಕೆ | ದಂಡೇಶ
ಸಂದಣಿಗೆ ಉಳವಿ ಸೇರೆಂದ
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-252/ತ್ರಿಪದಿ ಸಂ-85)

ಪ್ರತಿನಿತ್ಯ ವಚನಕಾರರು ಇಳಿಹೊತ್ತಿಗೆ ಅನುಭವ ಮಂಟಪದಲ್ಲಿ ಸೇರುತ್ತಿದ್ದರು. ನಂತರ ತಮ್ಮ ತಮ್ಮ ಅಂದಿನ ಘಟನೆ ಏನು ನಡೆಯಿತು, ಎಲ್ಲಾ ವಿವರಿಸಿ ಮಾತನಾಡಿ ಅಂದು ಯಾರ ವಚನ ಚಿಂತನೆ ಇರುವುದು ಅದನ್ನು ಓದಿ ಹೇಳಿ ಸಂವಾದ ಚರ್ಚೆ ಅನಂತರದಲ್ಲಿ ನಡೆಯುತ್ತಿತ್ತು. ಕಲ್ಯಾಣದ ಕ್ರಾಂತಿಯ ಕಾಲದಲ್ಲಿ ಶಿವನೆ ಬಂದು ಮಂಟಪವ ಕೂಡಿ ಎಲ್ಲಾ ಬವಣೆಯನು ಕಳೆಯುದಕೆ ದಂಡೇಶನಿಗೆ ಹೇಳಿದಾಗ ಆಗ ಶರಣರ ದಂಡು ಇದ್ದದ್ದು ಉಳವಿಯಲ್ಲಿ. ಆದ್ದರಿಂದ ಅನುಭವ ಮಂಟಪದಲ್ಲಿ ಶರಣರ ಅಂತ್ಯದಲ್ಲಿ ಇದ್ದ ಸ್ಥಿತಿಯನ್ನು ಈ ತ್ರಿಪದಿಯು ವಿವರಿಸುತ್ತದೆ.

ಸಂಗೀತ ವಿದ್ಯೆಯದು ಸಂಗಡವೆ ಬಂದದ್ದು
ಲಿಂಗಿಗಳ ಹಿರಿಮೆ ಹಾಡುತಲಿ | ಕಲ್ಯಾಣ
ಲಿಂಗ ಮಂಟಪವ ಕೂಡಿದನು
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-255/ತ್ರಿಪದಿ ಸಂ-5)

ಕಿನ್ನರಿ ಬೊಮ್ಮಯ್ಯನಿಗೆ ಸಂಗೀತ ವಿದ್ಯೆಯು ಜನ್ಮತಃ ಬಂದಿರುತ್ತದೆ. ಕಲ್ಯಾಣವೆಂಬ ಅನುಭವ ಮಂಟಪದಲ್ಲಿ ಎಲ್ಲಾ ಲಿಂಗವಂತರ ಹಿರಿಮೆಯನ್ನು ಹಾಡುತ್ತ ಬೊಮ್ಮಯ್ಯನು ಅನುಭವ ಮಂಟಪವೆಂಬ ಲಿಂಗ ಮಂಟಪವ ಕೂಡಿ ಮನಸಾರೆ ಹಾಡಿ ಹರಸುತ್ತ ತನ್ನ ಸಂಗೀತದ ಕಲೆಯನ್ನು ಅಭಿವ್ಯಕ್ತಿಗೊಳಿಸಿದನು ಕಿನ್ನರಿ ಬೊಮ್ಮಯ್ಯ.

ಕಿನ್ನರಿಯ ಬಾರಿಸುತ ಕಿನ್ನರಿಯ ರಾಗದಲಿ
ನನ್ನಿಯಲಿ ಹಾಡಿ ಶಿವಲೀಲೆ | ಶರಣರಿಗೆ
ಕಿನ್ನರಿಯ ಬೊಮ್ಮ ಮಂಟಪಕೆ
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-255/ತ್ರಿಪದಿ ಸಂ-6)

ಕಿನ್ನರಿ ಬೊಮ್ಮಯ್ಯನ ಜೀವಾಳವೇ ಕಿನ್ನರಿಯ ಕಲೆ. ರಾಗದಲಿ ಅನುರಾಗ ಪಡೆದು ಸತ್ಯದಲಿ ಶಿವ ಲೀಲೆಯನ್ನು ಹಾಡುವಾಗ ಎಲ್ಲಾ ಜಂಗಮರು ಕೇಳಿ ತಲೆದೂಗುತ್ತಿದ್ದರು. ಆಗ ಅನುಭವ ಮಂಟಪದಲ್ಲಿ ಸದಸ್ಯರಾಗಿ ಕಿನ್ನರಿ ಬೊಮ್ಮಯ್ಯ ಸೇರಿದನು.

ಅನುಭಾವ ಮಂಟಪಕೆ ಅನುಭಾವಿ ಬಸವಣ್ಣ
ಅನುನಯದಿ ಮೂಲ ಚಾಲಕನು | ಶಿವ ಮತಕೆ
ತನುಮನವ ಧನವನೆರದಿದ್ದ
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-255/ತ್ರಿಪದಿ ಸಂ-7)

ಅನುಭವ ಮಂಟಪದ ರೂವಾರಿ ಬಸವಣ್ಣ. ಮೂಲ ಚಾಲಕನು. ಅನುಭವ ಮಂಟಪದಲ್ಲಿ ಅನುಭಾವಿ ಬಸವಣ್ಣ ಅನುನಯದಿಂದ ಶಿವಮತಕೆ ತನ್ನ ತನು, ಮನು, ಧನವನ್ನು ಧಾರೆ ಎರೆದು ಕಟ್ಟಿ ಬೆಳೆಸಿದ ಅನುಭವ ಮಂಟಪವು ಅನುಭಾವದ ನೆಲೆಯಲ್ಲಿ ಇಂದು ಜಗತ್ತಿನ ಮೊದಲ ಸಂಸತ್ತು ಎಂಬ ಕೀರ್ತಿಗೆ ಭಾಜನವಾಗಿ ಇಂದು ಇಂಗ್ಲೆಂಡ್ ನ ಲ್ಯಾಂಬೆತ್ ನಗರದಲ್ಲಿ ಬಸವಣ್ಣ ವಿರಾಜಿಸುತ್ತಿದ್ದಾನೆ.

ವಚನಮಂಟಪದೊಳಗೆ ವಚನಗಳ ಮಳೆ ಸುರಿದು
ಸುಚಿ ಹೊಂದಿ ಜಗವು ಅನುಭಾವ | ಬಿತ್ತಿದರು
ಉಚಿತ ಹೊಸಮತವು ಬೆಳೆಬಂತು
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-260/ತ್ರಿಪದಿ ಸಂ-64)

ದುಡಿತ ವರ್ಗದ ಜನರಿಗೆ ಉಸುಕಿನಲ್ಲಿ ಅಕ್ಷರವ ಕಲಿಸಿ ಉಸಿರು ಇರುವವರೆಗೂ ಆತ್ಮಸ್ಥೈರ್ಯದಿಂದ ಬದುಕಿದ ಎಲ್ಲಾ ಶ್ರಮಿಕರು ಒಂದಾಗಿ ಬರೆದು ವಚನಗಳ ಮಳೆಯನ್ನೇ ಸುರಿಸಿದರು. ಜಗತ್ತೆ ಅನುಭಾವದ ನೆಲೆಯಲ್ಲಿ ಸ್ವಚ್ಛವಾಗಿ ಮಾನವೀಯ ನೆಲೆಯಲ್ಲಿ ಸರ್ವ ಸಮಾನವಾದ ಹೊಸ ಮತವೆಂಬ ಲಿಂಗಾಯತ ಮತ, ಬಸವ ಮತ ಎಂಬ ಹೊಸ ಬೆಳೆ ಹುಲುಸಾಗಿ ಬಂದಿತು ಎಂದು ಜನಪದ ಅಭಿಜ್ಞಾ ಕವಿಗಳು ಹಂತಿ ಪದದಲ್ಲಿ ಮನದಣಿಯೇ ವಚನಕಾರರ ಬಗ್ಗೆ ಅನುಭವ ಮಂಟಪದ ಬಗ್ಗೆ ಹಾಡಿರುವರು.

ನೂರೊಂದು ಸಾವಿರದ ಭೂರಿ ಜಂಗಮರುಂಡು
ಸಾರಿದರು ವಚನ ಮಂಟಪಕೆ | ಕೇತನದು
ಹೇರೆಂದು ಭಕ್ತಿ ದಾಸೋಹ
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-265/ತ್ರಿಪದಿ ಸಂ-41)

ಅನುಭಾವವೆಂಬ ವಚನ ಮಂಟಪಕೆ ನೂರೊಂದು ಸಾವಿರ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮರು ಉಂಡು ತಮ್ಮ ವಚನಗಳಲ್ಲಿ ಮೇದಾರ ಕೇತಯ್ಯನ ಭಕ್ತಿ ದಾಸೋಹದ ಹೆಚ್ಚುಗಾರಿಕೆಯನ್ನು ವಚನಕಾರರು ಸಾರಿ ಬರೆದು ಕೇತಯ್ಯನವರ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ್ದಾರೆ.

ಸಕಲೇಶ ಮಾದರಸು ಭಕುತ ಮಾದಯ್ಯನಿಗೆ
ನಿಕಟಗುರು ಲಿಂಗ ಜಂಗಮನು | ಕಾಯಕದ
ನಿಕಸ ಮಂಟಪ ಮೂಗುತಿಯು
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-285/ತ್ರಿಪದಿ ಸಂ-10)

ಮಾದಯ್ಯನಿಗೆ ಸಕಲೇಶ ಮಾದರಸ ಭಕ್ತನಾಗಿದ್ದನು. ಲಿಂಗ ಜಂಗಮನು ಕಾಯಕದ ನಿಕಷ ಮಂಟಪ ಅಂದರೆ ಬದುಕಿನ ಎಲ್ಲಾ ವಿಷಯಗಳನ್ನು ಒರೆಗೆ ಹಚ್ಚಿ ನೋಡುವುದು ಅನುಭವ ಮಂಟಪದ ಉದ್ದೇಶ. ನಿಕಷ ಮಂಟಪಕೆ ಮೂಗುತಿಯಾಗಿತ್ತು. ಸಕಲೇಶ ಮಾದರಸನು ಭಕ್ತನಾಗಿದ್ದು, ಗುರು ಲಿಂಗ ಜಂಗಮಕೆ ನಿಕಟ ಶರಣರಾಗಿದ್ದು ಅನುಭವ ಮಂಟಪದಲ್ಲಿ ತಮ್ಮ ಅಸ್ಮಿತೆಯನ್ನು ಸಾಕ್ಷೀಕರಿಸಿದ್ದಾರೆ.

ತಳಿರು ತೋರಣವೇನೋ ಎಳೆಚಿಗರ ಮರಬಳ್ಳಿ
ಹೊಳೆವ ಮಂಟಪವು ಕಾಡೇನೊ | ಗುಗ್ಗುಳದ
ಸುಳಿವ ಹೊಗೆ ಏನೊ ಚಳಿಗೊಳವು
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-281/ತ್ರಿಪದಿ ಸಂ-22)

ಪ್ರಕೃತಿಯ ಎಳೆಚಿಗುರು, ಮರಬಳ್ಳಿ, ತಳಿರು ತೋರಣದಲ್ಲಿ ಹೊಳೆವ ಮಂಟಪವು ನಿಸರ್ಗದ ಮಡಿಲಲ್ಲಿ ಏನೆಲ್ಲಾ ಸೌಂದರ್ಯ ಇದೆ ಅದನ್ನು ನಾವು ಅನುಭವಿಸುತ್ತಲೇ ಅನುಭವ ಮಂಟಪದಲ್ಲಿ ಬದುಕನ್ನು ಕಂಡುಕೊಂಡಿದ್ದೇವೆ ಎಂಬ ಶರಣರ ಆಶಯವನ್ನು ಹಂತಿ ಪದಕಾರರು ಅಭಿಮಾನ ಪೂರ್ವಕವಾಗಿ ಹಾಡಿದ್ದಾರೆ.

ಮಡದಿ ಮಕ್ಕಳ ಕೂಡ ಒಡಲೂಟ ದಾಸೋಹ
ನಡೆಸಿ ದಿನಗೆಲಸ ಕಾಯಕವ | ಮಾದಯ್ಯ
ಒಡನಾಡಿ ಶರಣ ಮಂಟಪಕೆ
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-283/ತ್ರಿಪದಿ ಸಂ-43)

ಶಿವ ಶರಣರಲ್ಲಿ ಮಾದಯ್ಯನೇ ಬಂಟನಾಗುತ್ತಾನೆ. ಲಿಂಗ ಮತವೆಂಬ ಹೊಸಮತ ಸಾರುವುದು ಆತನ ಕಾಯಕವಾಗಿರುತ್ತದೆ. ಮಹಾಮನೆಯ ಅನುಭವ ಮಂಟಪದಲ್ಲಿ ಮಡದಿ ಮತ್ತು ಮಕ್ಕಳೊಂದಿಗೆ ಒಡಲೂಟ ಮಾಡಿ ದಾಸೋಹದಲ್ಲಿ ಕಾಯಕವೆಂಬ ದಿನನಿತ್ಯದ ಕಾಯಕವ ಮಾಡಿ ಶರಣ ಮಂಟಪಕೆ ವಚನ ಮಂಟಪಕೆ ಒಡನಾಡಿಯಾಗಿದವರು ಶಿವಶರಣರ ಹೂಗಾರ ಮಾದಯ್ಯ.

ಕಲ್ಯಾಣ ಮಂಟಪದ ಎಲ್ಲ ಶರಣರು ಕೇಳಿ
ಸೊಲ್ಲು ಹೊಸಮತವ ಸಾರುದಕೆ | ಚೌಡಯ್ಯ
ಒಳ್ಳೆ ಆದರವ ತೋರಿದರು
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-296/ತ್ರಿಪದಿ ಸಂ-88)

ಕಲ್ಯಾಣದ ಅನುಭವ ಮಂಟಪದಲ್ಲಿ ಎಲ್ಲ ಶರಣರು ಕೇಳಿ ಹೊಸ ಮತದ ಧ್ವನಿಯನ್ನು ಸಾರಿದಾಗ ಅಂಬಿಗರ ಚೌಡಯ್ಯನೆಂಬ ಮಹಾ ಶರಣ ಅಭಿಮಾನ ಆದರವನ್ನು ತೋರಿಸಿ ವೀರಗಣಾಚಾರಿ ಘನ ಶರಣನೆಂಬ ಶರಣರ ಪ್ರೀತಿಗೆ ಪಾತ್ರರಾಗಿದ್ದಾರೆ.

ಬರಲಾರೆ ಸಿದರಾಮ ತಿರುಗಿ ಸೊನ್ನಲಪುರಕೆ
ಶರಣರೂಳಿಗವು ಕರೆಯುವದು | ಮಂಟಪಕೆ
ನೆರುವಾಗಿ ಸೇವೆ ಸಲ್ಲಿಸುವೆ
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-304/ತ್ರಿಪದಿ ಸಂ-69)

ಸೊನ್ನಲಿಗೆಯಿಂದ ಅಲ್ಲಮರ ಆದೇಶದಂತೆ ಕಲ್ಯಾಣಕ್ಕೆ ಹೋದ ಸಿದ್ಧರಾಮನು ಶಿವ ಶರಣರಿಗೆಲ್ಲಾ ನಾಯಕರಾಗಿ ಸೇವೆ ಸಲ್ಲಿಸಿದನು. ಆದ್ದರಿಂದ ಶಿವಶರಣರ ಕರೆಯು ನನಗೆ ಬಹು ಅಪ್ತವೆನಿಸಿತ್ತದೆ. ನನಗೆ ಬಹು ನಿರೀಕ್ಷಿತ ಮನದ ಜನರೇ ನನಗೆ ಒಡನಾಡಿಗಳಾಗಿರುವರು. ನಾನು ಕಲ್ಯಾಣಕ್ಕೆ ಬಂದು ನನಗೀಗ ಬೌದ್ಧಿಕ ಸಾಮರ್ಥ್ಯ ಹೆಚ್ಚಾಗಿ ನನ್ನ ಅರಿವನ್ನು ನಿಕಷಕ್ಕೆ ಒಡ್ಡಿಕೊಂಡಿದ್ದೇನೆ. ಆದ್ದರಿಂದ ಬರಲಾರೆ ನಾನು ತಿರುಗಿ ಸೊನ್ನಲಪುರಕ್ಕೆ ಬರಲಾರೆ ಇಲ್ಲಿಯೇ ಸೇವೆ ಸಲ್ಲಿಸುವೆ ಎಂದು ಸಿದ್ಧರಾಮರ ಮನದ ಇಂಗಿತವನ್ನು ಹಂತಿ ಪದಕಾರರು ಅಭಿಮಾನದಿಂದ ಹಾಡಿರುವರು.

ನೇಗಿಕಾಯಕ ಹೂಡಿ ತಾಗು ಬಾಗಿನ ಶರಣ
ಕೂಗಿ ನೇಯುತಲಿ ಕಲ್ಯಾಣ | ಮಂಟಪವು
ಬಾಗಿ ಶರಣೆಂದು ಬಾರೆಂದು
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-304/ತ್ರಿಪದಿ ಸಂ-72)

ಕಲ್ಯಾಣದಲ್ಲಿ ಇರುವ ಶರಣರ ಕಾಯಕ ವಿಭಿನ್ನವಾಗಿತ್ತು. ಅವರವರ ಕಾಯಕ ಮುಗಿದಾಕ್ಷಣ ಎಲ್ಲರೂ ಅನುಭವ ಮಂಟಪಕ್ಕೆ ಬರುತ್ತಿದ್ದರು. ಅದೇ ರೀತಿಯಲ್ಲಿ ನೇಗಿಲ ಕಾಯಕ ಹೂಡಿಕೊಂಡು ತಾಗು ಬಾಗಿನಲ್ಲಿ ಶಿವ ಶರಣರೆಲ್ಲಾ ಕಲ್ಯಾಣವೆಂಬ ಪ್ರಣತಿಯನ್ನು ತಯಾರಿಸಿದರು. ಎಲ್ಲರ ಮನವನ್ನು ನೇಯ್ದು ಕಲ್ಯಾಣವನ್ನು ಕಟ್ಟಿ ಬೆಸೆದಾಗ ಅನುಭವ ಮಂಟಪವೇ ಬಾಗಿ ಶರಣು ಎನ್ನುತ್ತ ಅನುಭಾವಿಗಳೆಲ್ಲ ಬಾರೆಂದು ಕರೆಯುತ್ತಿದ್ದರು ಎಂದು ಹಂತಿ ಪದಕಾರರು ಶಿವಶರಣರ ಮನಸ್ಸು ಅರಿತು ಹಂತಿ ತ್ರಿಪದಿಗಳನ್ನು ಹಾಡಿದ್ದಾರೆ.

ಸೋಸಿ ವಚನದ ತಿರುಳ ಬೀಸಿದವು ಶಿವಗಾಳಿ
ಮೂಸಿಬಂದಂತೆ ಗುಂಗಿಗಳು | ಹೂಗಳಿಗೆ
ರಾಸಿ ಜನ ಬಂತು ಮಂಟಪಕೆ
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-304/ತ್ರಿಪದಿ ಸಂ-74)

ಒಂದಿಷ್ಟು ಪುರುಸೊತ್ತಿಲ್ಲದೆ, ಅಕ್ಷರವ ಕಲಿತ ಮೇಲೆ ಶಿವಶರಣರು ನಾ ಮುಂದು ತಾ ಮುಂದು ಎಂದು ವಚನ ರಚಿಸಿ ತಾಡೋಲೆಯಲ್ಲಿ ಬರೆದರು. ಆಗ ಜನರೆಲ್ಲಾ ವಚನಗಳ ಆಳ ಅರಿತು ಶಿವಗಾಳಿ ಬೀಸಿದಂತಾಗಿ ಗುಂಗಿಹುಳ ಹರಿದಾಡಿ ಬಂದಂತೆ ಹಿಂಡು ಹಿಂಡಾಗಿ ಹೂಗಳಿಗೆ ಬಂದಂತೆ ರಾಶಿ ರಾಶಿ ಜನ ಅನುಭವ ಮಂಟಪಕೆ ಬರುತ್ತಾರೆ ಎಂದು ಜನಪದ ಸೃಜನಶೀಲ ಮನಸ್ಸುಗಳು ಹಾಡುತ್ತ ಹಂತಿ ಕಾರ್ಯ ನಿರ್ವಹಿಸಿದ್ದಾರೆ.

ವಚನ ಮಂಟಪ ಬಳ್ಳಿ ಸುಚಿ ಮೊಗ್ಗೆ ಹೂ ಬಿಡಲು
ರುಚಿಜೇನ ಹುಟ್ಟಿ ಹೊಸಮತವ | ಕಟ್ಟಿದರು
ವಚನ ಶಾಸ್ತ್ರಕರು ನಾಡೊಳಗೆ
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-304/ತ್ರಿಪದಿ ಸಂ-75)

ವಚನ ಮಂಟಪವೆಂಬ ಬಳ್ಳಿ ಸುಚಿಯಾದ ಮೊಗ್ಗೆಯಿಂದ ಹೂ ಬಿಡಲು ಅಲ್ಲಿ ಆ ಹೂವಿನಲ್ಲಿ ಹೊಸ ಮತವೆಂಬ ರುಚಿಜೇನು ತನ್ನ ಮಕರಂದವನ್ನು ಎಲ್ಲೆಲ್ಲೂ ಮನುಜ ಕುಲದಲ್ಲಿ ಹರಡಿದಾಗ ಎಲ್ಲಾ ಆ ಸವಿಜೇನೆಂಬ ಹೊಸ ಮತದಲ್ಲಿ ವಚನ ಶಾಸ್ತ್ರಕಾರರು ನಾಡೊಳಗೆ ತಮ್ಮ ಜ್ಞಾನದ ಸಾಮರ್ಥ್ಯವನ್ನು ಸಾಬೀತು ಪಡಿಸಿದರು. ಆ ಘನತೆಯನ್ನು ನಮ್ಮ ಜನಪದ ಹಂತಿ ಪದಕಾರರು ತಮ್ಮ ತ್ರಿಪದಿಗಳಲ್ಲಿ ಹಾಡುತ್ತ ಹಂತಿಯನ್ನು ತಿರುಗಿಸುತ್ತ ನಮ್ಮ ನಾಡಿನಲ್ಲಿ ಇಂಥ ವಚನ ಶಾಸ್ತ್ರದ ಶರಣರು ನಮ್ಮಲ್ಲಿ ಇದ್ದರು ಎಂಬುದನ್ನು ಕಾಯಕವನ್ನು ಮಾಡುತ್ತಲೇ ತಮ್ಮ ಭೌದ್ಧಿಕತೆಯನ್ನು ಮೆರೆದಿದ್ದಾರೆ.

ಕೊಂಡಿಗಳು ಹಾರವರು ಕಂಡು ಮಂಟಪಕಂಜಿ
ಹಿಂಡುವದು ನಮ್ಮ ಶಿವಮತವು | ನಾಡೊಳಗೆ
ಭಂಡು ಎಬ್ಬಿಸುದೆ ಲೇಸೆಂದು
(ಕನ್ನಡ ಜಾನಪದ ಗೀತಗಳು | ಡಾ. ಬಿ. ಎಸ್. ಗದ್ದಗಿಮಠ:1963/ಪುಟ ಸಂಖ್ಯೆ-304/ತ್ರಿಪದಿ ಸಂ-76)

ಅಂದಿನ ಹಾರವರು ಕೊಂಡಿಗಳಾಗಿದ್ದರು. ಅನುಭವ ಮಂಟಪವನ್ನು ನೋಡಿ ಹೆದರಿಕೆಯಿಂದ ನಮ್ಮ ಶಿವ ಮತವು ಅವರನ್ನು ಹಿಂಡುವುದೆಂದು ಈ ನಾಡಿನಲ್ಲಿ ಭಂಡು ಎಬ್ಬಿಸುವುದೇ ಅವರಿಗೆ ಲೇಸಾಗಿ ಕಲ್ಯಾಣ ಕೊನೆಗೆ ಬಸವ ಮಂಟಪ ಅನುಭವ ಮಂಟಪದ ಬೆಳವಣಿಗೆಯನ್ನು ನೋಡಿ ಸಹಿಸದಾಗಿ ಭಂಡು ಎಬ್ಬಿಸಿ ಶರಣರ ಗುಂಪನ್ನು ಹೊಡೆದರು. ಕಲ್ಯಾಣವು ಕ್ರಾಂತಿಯಲ್ಲಿ ಮುಳುಗಬೇಕಾಯಿತು. ಮಂಟಪದ ಸಂದರ್ಭವನ್ನು ಹಂತಿ ಪದಕಾರರು ಈ ರೀತಿಯಲ್ಲಿ ಕಟ್ಟಿ ಹಾಡಿದ್ದಾರೆ.

ಅಮುಗಯ್ಯನು ಅನುಭವ ಮಂಟಪಕೆ ಬೆನ್ನ ಹುರಿಯಂತೆ ಇದ್ದನು. ಸುಮಧುರ ಪರಿಮಳದಂತೆ ಗಾಳಿಯಲ್ಲಿ ತೇಲಿ ಬಂದ ಸನ್ನುತದ ವಚನಗಳು ಹೊಸ ಮತದಲ್ಲಿ ನೆಲೆನಿಂತು ಶರಣರಿಗೆ ಗಟ್ಟಿತನ ಬಂದಿದ್ದೆ ವಚನಗಳ ರಚನೆಯಿಂದಾಗಿ. ಹೊಸ ಚಿಂತನೆಯು ಬೆಳೆದು ಮಾನವೀಯ ಧರ್ಮ, ವಚನ ಧರ್ಮ, ಬಸವ ಧರ್ಮವು ಕನ್ನಡ ಸಾಂಸ್ಕೃತಿಕ ಸಾಹಿತ್ಯ ಚರಿತ್ರೆಯಲ್ಲಿ ವಿಶ್ವದಾದ್ಯಂತ ಮಾದರಿಯ ಅನುಭವ ಮಂಟಪವಾಗಿದೆ ಎಂಬುದು ಗಮನಾರ್ಹ ಸಂಗತಿ.

ಅನುಭವ ಮಂಟಪಕೆ ಅನುಭಾವಿ ಬಸವಣ್ಣ ತನ್ನೆಲ್ಲಾ ಸ್ವಸಾಮರ್ಥ್ಯದಿಂದ ವಿಶ್ವ ಗುರುವಾಗಿ ಗುರುತಿಸಲ್ಪಟ್ಟಿದ್ದಾರೆ. ವಿಶ್ವದ ಪ್ರಥಮ ಸಂಸತ್ತಿನ ರೂವಾರಿ. ಅನುಭವ ಮಂಟಪದ ಚಾಲಕರು. ಯಾವುದೇ ಬೇಧವಿಲ್ಲದ, ಸಾಂಸ್ಥಿಕವಲ್ಲದ, ಪೌರೋಹಿತ್ಯವಿಲ್ಲದ, ಲಿಂಗತಾರತಮ್ಯವಿಲ್ಲದ, ಬಡವ ಬಲ್ಲಿದರೆನ್ನದೆ, ಜಾತಿ, ವರ್ಗ, ಪ್ರಾದೇಶಿಕ ಭಿನ್ನತೆ, ಭಾಷಾಭಿನ್ನತೆ ಇಲ್ಲದ ಸರ್ವ ಸ್ವತಂತ್ರ ಧರ್ಮ ಎಂದರೆ ಅದು ಬಸವ ಧರ್ಮ, ಶರಣ ಧರ್ಮ, ಕಾಯಕ ಧರ್ಮ, ಇಷ್ಟಲಿಂಗ ಧರ್ಮ, ವಚನ ಧರ್ಮ, ಲಿಂಗಾಯತ ಧರ್ಮವಾಗಿದೆ. ಈ ಧರ್ಮ ನಿಂತಿರುವುದೇ ವಚನಗಳ ಸಂವಿಧಾನದಲ್ಲಿ. ಈ ವಚನಗಳ ಚಿಂತನೆ, ಬರೆವಣಿಗೆ, ಸಂವಾದ, ಚರ್ಚೆ, ವಚನ ರಚನೆಯು ಬೆಳೆದು ಬಂದಿದ್ದು ಅನುಭವ ಮಂಟಪದಲ್ಲಿ. ಅಕ್ಷರ ಕಲಿಕೆಯಿಂದಲೇ. ಸಮಾಜದ ಕಟ್ಟಕಡೆಯ ವ್ಯಕ್ತಿಗಳೂ ಇಲ್ಲಿ ಗೌರವಿಸಲ್ಪಟ್ಟರು.

ಮಹಿಳೆಯರು ಮಹಾಮನೆಯಲ್ಲಿ ಮಹೋನ್ನತೆಯರಾಗಿ ವಚನ ಮಹೋತ್ಸವದಲ್ಲಿ ಸಹಭಾಗಿತ್ವವನ್ನು ಪಡೆದರು. ಅಂಥ ಕಾಲಘಟ್ಟದಲ್ಲಿ ಮೇರು ಪರ್ವತವಾಗಿ ಜೇಡರ ದಾಸಿಮಯ್ಯ, ರೇವಣಸಿದ್ಧ, ಮರಳುಸಿದ್ಧ, ಬಸವಣ್ಣ, ಅಲ್ಲಮಪ್ರಭು, ಚೆನ್ನಬಸವಣ್ಣ, ಸಿದ್ದರಾಮ, ಅಂಬಿಗರ ಚೌಡಯ್ಯ,ಮಡಿವಾಳ ಮಾಚಯ್ಯ, ಮರುಳ ಶಂಕರದೇವ, ನುಲಿಯ ಚೆಂದಯ್ಯ, ಡೋಹಾರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಹರಳಯ್ಯ, ಅಕ್ಕನಾಗಮ್ಮ, ಅಕ್ಕ ಮಹಾದೇವಿ, ಗಂಗಾಂಬಿಕೆ, ನೀಲಾಂಬಿಕೆ, ಸೂಳೆ ಸಂಕವ್ವೆ, ಕದಿರೆ ರೆಮ್ಮವ್ವೆ, ಕಾಯಕದ ಸತ್ಯಕ್ಕ, ಗೊಗ್ಗವ್ವೆ, ಕಾಳವ್ವೆ ಮುಂತಾದ ಏಳನೂರ ಎಪ್ಪತ್ತು ಅಮರ ಗಣಂಗಳ ಪಾತ್ರವನ್ನು ನಾವು ಪರಿಗಣಿಸಲೇ ಬೇಕು. ಇಂಥ ಅನುಭವ ಮಂಟಪದಲ್ಲಿ ಅನುದಿನವೂ ಅನುನಯದಿ ಹಾಡುತಲಿ ವಚನಕಾರರು ತಮ್ಮ ಅಂಕಿತದಲ್ಲಿ ಇಷ್ಟಲಿಂಗ ಪೂಜೆಯನ್ನು ಮಾಡುತ್ತಾರೆ. ಹಾಗೆಯೇ ವಚನಗಳನ್ನು ರಚಿಸಿದ್ದಾರೆ ಮತ್ತು ಪ್ರಕಟಿಸಿದ್ದಾರೆ.

ವಚನ ಚಳುವಳಿ ಹೋರಾಟ ಮೂರ್ತ ರೂಪ ಪಡೆದಿದ್ದು ಅನುಭವ ಮಂಟಪದಿಂದಲೇ. ಇಂಥ ಹೋರಾಟದ ಅನುಭವ ಮಂಟಪವೇ ಇರಲಿಲ್ಲ ಎಂದು ಡಾ. ವೀಣಾ ಬನ್ನಂಜೆಯವರು ಹೇಳುವುದು ಸರಿಯಲ್ಲ.

ಹನ್ನೆರಡನೆ ಶತಮಾನದಲ್ಲಿ ಅನುಭವ ಮಂಟಪದಿಂದಲೇ ಎಲ್ಲರೂ ಅಕ್ಷರ ಕಲಿತು ಬರೆವಣಿಗೆ ಮಾಡಿ ಕಾಯಕ ಮತ್ತು ದಾಸೋಹದ ಮಹತ್ವವನ್ನು ಸಾರಿದವರು ನಮ್ಮ ಶಿವಶರಣರು.

ಶಾಸನಗಳು, ಹರಿಹರ, ಚಾಮರಸ, ರಾಘವಾಂಕ, ವಿರುಪಾಕ್ಷ ಪಂಡಿತ, ಕೆರೆಯ ಪದ್ಮರಸ, ಶೂನ್ಯ ಸಂಪಾದನಾಕಾರರು ಮುಂತಾದವರ ಸಾಹಿತ್ಯ ರಚನೆಯು ಏನು ಹೇಳಿದೆ ನೋಡಿರಿ. ಜಾನಪದ ಮೌಖಿಕ ಸಾಹಿತ್ಯ ಈಗ ಪ್ರಕಟಣೆಯಲ್ಲಿ ಇದೆ. ಡಾ. ಬಿ. ಎಸ್. ಗದ್ದಗಿಮಠ ಅವರ Ph. D ಫ್ರೌಢ ಪ್ರಬಂಧ “ಕನ್ನಡ ಜಾನಪದ ಗೀತೆಗಳು” ಈ ಕೃತಿಯಲ್ಲಿ ಹಂತಿ ಪದಕಾರರು ತ್ರಿಪದಿಗಳಲ್ಲಿ ತಮ್ಮ ಅಭಿವ್ಯಕ್ತಿ ಕೌಶಲ್ಯವನ್ನು ಅಭಿವ್ಯಕ್ತಿಸಿರುವರು.

ಅನುಭವ ಮಂಟಪಕ್ಕೆ ಪರ್ಯಾಯವಾಗಿ

• ನೀತಿ ಮಂಟಪ
• ತತ್ವ ಮಂಟಪ
• ವಚನ ಮಂಟಪ
• ಕಲ್ಯಾಣ ಮಂಟಪ
• ಶರಣ ಮಂಟಪ

ಮುಂತಾದ ಹೆಸರುಗಳಿಂದ ಕರೆದಿದ್ದಾರೆ. ವಚನ ಚಳುವಳಿ ಮತ್ತು ವಚನಕಾರರು ತಮ್ಮ ಜೀವಿತಾವಧಿಯಲ್ಲಿ ಮಾನವೀಯತೆಯ ಘನತೆಯನ್ನು ಕಾಪಾಡಿಕೊಂಡು ನುಡಿದಂತೆ ನಡೆದು ಬದುಕಿ ಬೆಳೆದಿದ್ದಾರೆ. ಕಾಯಕ ಮತ್ತು ದಾಸೋಹದ ಭಕ್ತಿ ನೆಲೆಯಲ್ಲಿ ನಮ್ಮ ಸಮಾಜದಲ್ಲಿರುವ ಕಂದಾಚಾರ, ಮೌಢ್ಯ, ಅಸಮಾನತೆ, ಜಾತಿ, ವರ್ಗ, ಲಿಂಗ ತಾರತಮ್ಯವನ್ನು ಬುಡಮಟ್ಟದಿಂದ ಕಿತ್ತೆಸೆದು ಅಂಧಕಾರದ ಸಮಾಜಕ್ಕೆ ಅಕ್ಷರ ಜ್ಞಾನದ ಅರಿವಿನ ಬೆಳಕನ್ನು ಅರುಣೋದಯವಾಗಿಸಿದವರು ಬಸವಾದಿ ಪ್ರಮಥರು. ಇಲ್ಲಿ ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಲೋಕದ ಪರಿಯನ್ನು ಪರೀಕ್ಷಿಸಿ ಪರಿಚಯಿಸಿದವರು. ಅವರ ಒಂದೊಂದು ವಚನವೂ ವಿಶಿಷ್ಠವಾಗಿ ಬದುಕುವ ಶಕ್ತಿಯನ್ನು ನಮಗೆ ತುಂಬುತ್ತದೆ. ಇಂಥ ಅನುಭವ ಮಂಟಪದ ಬಗ್ಗೆ ಅಲ್ಲಗಳೆಯುವುದು ಅವರಿಗೆಲ್ಲ ಅರಿವಿನ ಕೊರತೆ ಎಂದೇ ಹೇಳಬಹುದು.

“ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ” ಎಂದು ಎಲ್ಲರಿಗೂ ವಾಕ್ ಸ್ವಾತಂತ್ರ್ಯ, ಬರೆಯುವ ನೆಮ್ಮದಿಯಿಂದ ಬದುಕು ಸ್ವಾತಂತ್ರ್ಯ ಕೊಟ್ಟವರು ಬಸವಾದಿ ಶಿವಶರಣರು. ಹನ್ನೆರಡನೆಯ ಶತಮಾನದ ಬಸವಣ್ಣ ಮನುಕುಲಕ್ಕೆ ಪರ್ಯಾಯ ವ್ಯವಸ್ಥೆಯ ಪ್ರತಿಸೂರ್ಯ. ಭೂತ, ವರ್ತಮಾನ, ಭವಿಷ್ಯತ್ತಿನಲ್ಲಿ ಬಸವಣ್ಣ ಎನ್ನುವ ಶಬದಪುಂಜಕ್ಕೆ ಇನ್ನೂ ಮುಂದಿನ ಶಬ್ದವಿಲ್ಲ.

ಡಾ. ಸುಜಾತಾ ಅಕ್ಕಿ.
ಮನೆ ನ. 57, 6 ನೇ ಮುಖ್ಯ ರಸ್ತೆ,
ಮಾರುತಿ ದೇವಸ್ಥಾನ ರಸ್ತೆ,
ಸರಸ್ವತಿಪುರಂ,
ಮೈಸೂರು – 580 009
ಮೋಬೈಲ್‌ ಸಂ. +91 99012 85196

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ಸಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply