
‘ಸಂಶೋಧನೆ ಎನ್ನುವುದು ಅಲ್ಪವಿರಾಮ, ಅರ್ಧವಿರಾಮಗಳ ಮೂಲಕ ಪೂರ್ಣವಿರಾಮಕ್ಕೆ ಸಾಗುವ ಪ್ರಕ್ರಿಯೆಯಾಗಿದೆ’ ಎಂಬುದು ಡಾ. ಎಂ. ಎಂ. ಕಲಬುರ್ಗಿ ಅವರು ಸದಾ ಹೇಳುತ್ತಿದ್ದ ಅರ್ಥಪೂರ್ಣ ಮಾತು. ಇಂಥ ಸಂಶೋಧನೆಯ ‘ಮಾರ್ಗ’ ಕ್ಕೆ ಅವರು ಬಳಸಿಕೊಳ್ಳುತ್ತಿದ್ದ ಆಕರ, ಪರಿಕರ, ಸಾಕ್ಷಿ, ಆಧಾರ ಮತ್ತು ಪೂರಕ ಮಾಹಿತಿಗಳು ಒಂದೇ ಎರಡೇ! ಇಂಥದ್ದೆಲ್ಲ ಎಷ್ಟೇ ಇದ್ದರೂ ಮೊದಲು ಅದನ್ನೆಲ್ಲ ಗುಂಪುಗೂಡಿಸಿ, ಹಾಗೆ ಗುಂಪುಗೂಡಿಸಿದ್ದನ್ನೆಲ್ಲ ತೂರಿ, ಕೇರಿ, ಜರಡಿ ಹಿಡಿದು ಪರೀಕ್ಷಿಸಿ, ಸತ್ಯದ ಒರೆಗಲ್ಲಿಗೆ ಹಚ್ಚಿ, ಆಂತರಿಕ ಮತ್ತು ಬಾಹ್ಯ ವಿದ್ಯಮಾನಗಳೊಂದಿಗೆ ತಾಳೆ ಹಾಕಿ, ಒಟ್ಟಾರೆ ಅದರಲ್ಲಿರಬಹುದಾದ ವಾಸ್ತವವನ್ನು ಹೆಕ್ಕಿ ತೆಗೆದು ಒಂದು ಪೂರ್ಣವಿರಾಮದ ಹಂತಕ್ಕೆ ಬಂದಾಗಲೇ ಅವರಿಗೆ ಸಮಾಧಾನ. ಇದು ಕೇವಲ ಅವರ ಸಂಶೋಧನೆಯ ಕ್ರಮ ಮಾತ್ರ ಆಗಿರಲಿಲ್ಲ; ಅವರ ದಿನನಿತ್ಯದ ಬದುಕಿನ ‘ಮಾರ್ಗ’ವೂ ಆಗಿತ್ತು. ಹೀಗಾಗಿ ಅವರು ಏನನ್ನಾದರೂ ನೋಡಿದರೆ, ಕೇಳಿದರೆ, ತಕ್ಷಣ ಒಪ್ಪಿಕೊಳ್ಳದೆ, ಅದರ ಪೂರ್ವಾಪರಗಳ ಸಮಗ್ರ ಪರಾಮರ್ಶೆ ಮಾಡಿಯೇ ತೀರ್ಮಾನಕ್ಕೆ ಬರುತ್ತಿದ್ದರು.
ಇಂಥ ಡಾ. ಎಂ. ಎಂ. ಕಲಬುರ್ಗಿಯವರು ವರ್ಗದ ಕೋಣೆಯಲ್ಲಿ ಹಳಗನ್ನಡದ ಪಾಠ ಮಾಡತೊಡಗಿದರೆಂದರೆ, ಅವರ ಮೈಯ್ಯಲ್ಲೆಲ್ಲಾ ಅದಾವುದೋ ಶಕ್ತಿಯ ಆವಾಹನೆ ಆದಂತಾಗಿಬಿಡುತ್ತಿತ್ತು. ಸಾಮಾನ್ಯವಾಗಿ ಅವರು ಮೊದಲು ಪಾಠ ಮಾಡಬೇಕಾದ ಪಠ್ಯದ ಭಾಗದ ಹಿನ್ನೆಲೆಯನ್ನು ಅತ್ಯಂತ ಸ್ಪಷ್ಟವಾಗಿ ವಿದ್ಯಾರ್ಥಿಗಳ ಮನಮುಟ್ಟುವಂತೆ ವಿವರಿಸಿ, ಅನಂತರ ಪದ್ಯದ ಪದವಿಚ್ಛೇದನ ಮಾಡುತ್ತ, ಅರಳು ಹುರಿದಂತೆ ಬಿಡಿ ಬಿಡಿಸಿ ಅದನ್ನು ಓದುತ್ತಿದ್ದರು. ಅದಾದ ನಂತರ ಪದ್ಯದ ಸಾಮಾನ್ಯಾರ್ಥ, ವಿಶೇಷಾರ್ಥ, ಅದರ ಧ್ವನ್ಯಾರ್ಥ, ಕಾವ್ಯ ಸಂದರ್ಭದಲ್ಲಿ ಆ ಪದ್ಯದ ಮಹತ್ವ, ಮತ್ತು ಒಟ್ಟಾರೆಯಾಗಿ ಆ ಪದ್ಯಕ್ಕಿರುವ ಮೌಲ್ಯ, ವರ್ತಮಾನಕ್ಕೆ ಅದರ ಆನ್ವಯಿಕತೆ-ಹೀಗೆ ಅವರ ಅಧ್ಯಾಪನದ ರೀತಿ ಒಂದು ಕ್ರಮಬದ್ಧ ಹಾಗೂ ಶಿಸ್ತಿನ ಪ್ರಕ್ರಿಯೆಯಾಗಿ ಸಾಗುತ್ತಿತ್ತು. ಕೇಳುತ್ತ ಕುಳಿತರೆ ಸಾಕು ಅವರ ಆಲೋಚನೆಗಳೆಲ್ಲವೂ ತಲೆಯೊಳಗೆ ತಂತಾನೇ ಮುದ್ರಣವಾಗಿಬಿಡುತ್ತಿದ್ದವು. ಒಬ್ಬ ನಿಜವಾದ ಅಧ್ಯಾಪಕನ ಶ್ರಮ, ಕ್ರಮ ಮತ್ತು ರೀತಿಗೆ ಮಾದರಿಯಾಗಿದ್ದರು ಅವರು.
ಇದೇ ಕ್ರಮದಲ್ಲಿ ಸರ್ ಅವರು ಅದೊಂದು ದಿನ ಪಂಪಭಾರತದ ಐದನೆಯ ಆಶ್ವಾಸದ ಒಂದು ಘಟನೆಯ ಬಗ್ಗೆ ಪಾಠ ಮಾಡುತ್ತಿದ್ದರು. ಅದು ಖಾಂಡವ ವನದ ದಹನಕ್ಕೂ ಮುಂಚಿನ ಭಾಗ. ಅವತ್ತು ಪಾಠ ಮಾಡುತ್ತಿದ್ದುದು ಅರ್ಜುನನು ಹೇಳುವ, ನಿಜವಾದ ವೀರನ ಹಾಗೂ ಮನುಷ್ಯನ ಗುಣಲಕ್ಷಣಗಳನ್ನು ಎತ್ತಿ ತೋರಿಸುವ ಪದ್ಯ.
ಒಂದು ದಿನ ಅರ್ಜುನ ಮತ್ತು ಕೃಷ್ಣ ಇಬ್ಬರೂ ಬೇಟೆಯಾಡಿ, ಅನಂತರ ನದಿಯಲ್ಲಿ ಈಜಾಡಿ ಹೊರಬಂದು, ವನಾಂತರದಲ್ಲಿ ವಿಹರಿಸುತ್ತಿದ್ದಾಗ, ಅವರೆದುರು ಒಬ್ಬ ಬಡಬ್ರಾಹ್ಮಣ ಬರುತ್ತಾನೆ. ಏನಾದರೂ ದಾನ ಕೊಡಲು ಇವನಿಗಿಂತ ಅರ್ಹರಾದವರು ಮತ್ತಾರೂ ಇರಲಿಕ್ಕಿಲ್ಲವೆನಿಸುವಷ್ಟು ಆತ ಕೃಷನಾಗಿದ್ದ. ಎಲುಬಿನ ಹಂದರದಂತಿದ್ದ ಅವನನ್ನು ನೋಡಿದ ತಕ್ಷಣ ಅರ್ಜುನನು, ‘ಈ ಬಡ ಬ್ರಾಹ್ಮಣನು ಅಗ್ನಿಗೆ ಸಮಾನನು; ಇವನು ಏನು ಬೇಡಿದರೂ ಅದನ್ನು ಕೊಟ್ಟು ಪೂರ್ಣ ಪುಣ್ಯವಂತನಾಗುವೆ’ ಎಂದು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಿರುವಾಗ, ಆ ಬಡ ಬ್ರಾಹಣನು ಕೃಷ್ಣ ಮತ್ತು ಅರ್ಜುನನ ಹತ್ತಿರವೇ ಬಂದು, ನಾಲ್ಕೂ ವೇದಗಳಿಂದ ಆಯ್ದ ಒಂದೊಂದು ಋಕ್ಕುಗಳನ್ನು ಅರ್ಥವತ್ತಾಗಿ ಹೇಳಿ ಆರ್ತನಾಗಿ ನಿಂತುಕೊಂಡುಬಿಡುತ್ತಾನೆ. ಅವನ ಆ ದಯನೀಯ ಸ್ಥಿತಿಯನ್ನು ಗಮನಿಸಿದ ಅರ್ಜುನನು ಕನಿಕರದಿಂದ ‘ನಿಮಗೆ ಏನು ಬೇಕೋ ಅದನ್ನು ಕೇಳಿಕೊಳ್ಳಿ, ಕೊಡುವೆ’ ಎಂದು ಒಮ್ಮೆಲೇ ಉದಾರವಾಗಿ ಆಶ್ವಾಸನೆ ಕೊಟ್ಟುಬಿಡುತ್ತಾನೆ.
ಇಷ್ಟೇ ಸಾಕಾಗಿರುತ್ತದೆ ಆ ಬಡ ಬ್ರಾಹ್ಮಣನಿಗೆ. ತಕ್ಷಣ ಆತನು, ‘ನನಗೆ ಮಣಿ ಕನಕಾದಿ ಯಾವ ವಸ್ತುಗಳೂ ಬೇಡ, ನನಗೆ ಜೀವ ಹೋಗುವಂಥ ಹಸಿವಾಗುತ್ತಿದೆ, ಅದಕ್ಕಾಗಿ ಸದ್ಯಕ್ಕೆ ನನಗೆ ತೃಪ್ತಿಯಾಗುವಂತೆ ಉಣ್ಣಲು ಕೊಟ್ಟರೆ ಸಾಕು’ ಎಂದಾಗ, ಅರ್ಜುನನು ‘ಅರೆ, ಅದೇನು ದೊಡ್ಡ ಕೆಲಸ, ಈಗಲೇ ಕೊಡುವೆನು’ ಎಂದು ತಕ್ಷಣ ಒಪ್ಪಿಕೊಂಡುಬಿಡುತ್ತಾನೆ. ಆದರೆ, ಆ ವ್ಯಕ್ತಿಯ ಹಿನ್ನೆಲೆಯೆಲ್ಲವನ್ನೂ ಸಂಪೂರ್ಣವಾಗಿ ಅರಿತಿದ್ದ ಕೃಷ್ಣನು, ಅರ್ಜುನನ ಈ ನಿರ್ಧಾರ ಕೇಳಿ, ‘ಅರ್ಜುನಾ, ನೀನು ಏಕೆ ಈ ಜಾಲದಲ್ಲಿ ಸಿಕ್ಕಿಕೊಂಡೆ? ಈತ ಸಾಮಾನ್ಯ ವ್ಯಕ್ತಿಯಲ್ಲ; ಇವನು ಅಗ್ನಿ. ಹಿಂದೆ ಹೀಗೆಯೇ ಅನೇಕ ಸುಳ್ಳುಗಳನ್ನು ಹೇಳಿರುವ ಈತನು, ಆದಿ ನರೇಂದ್ರರೆಲ್ಲರೂ ಇಂದ್ರನ ಜೊತೆ ಹೋರಾಡುವಂತೆ ಮಾಡಿದ್ದಾನೆ. ಇವನು ಆಡಿನ ಮುಖದ ಹುಲಿ. ಇಂಥವನಿಗೆ ನೀನು ಅವನು ಕೇಳಿದ್ದನ್ನು ಕೊಡಲು ಹೀಗೆ ಒಪ್ಪಿಗೆ ಸೂಚಿಸಿದ್ದು ತುಂಬ ಅಪಾಯಕಾರಿ’ ಎಂದಾಗ, ಕೃಷ್ಣನ ಆ ಮಾತಿಗೆ ಅರ್ಜುನ ಹೇಳಿದ ಪ್ರತಿಮಾತೇ ಅಂದು ಕಲಬುರ್ಗಿ ಗುರುಗಳು ಕಲಿಸಹೊರಟಿದ್ದ ಪದ್ಯ. ಆ ಪದ್ಯದ ಪೂರ್ಣ ಪಾಠ ಹೀಗಿದೆ-
ಒತ್ತಿ ತರುಂಬಿ ನಿಂದ ರಿಪುಭೂಜಸಮಾಜದ ಬೇರ್ಗಳಂ ನಭ
ಕ್ಕೆತ್ತದೆ ಬಂದು ತನ್ನ ಮರೆವೊಕ್ಕಡೆ ಕಾಯದೆ ಚಾಗದೊಳ್ಪಿನ
ಚ್ಚೊತ್ತದೆ ಮಾಣ್ದು ಬಾಳ್ವ ಪುಳುವಾನಸನೆಂಬನಜಾಂಡಮೆಂಬುದೊಂ
ದತ್ತಿಯ ಪಣ್ಣೊಳಿರ್ಪ ಪುಳುವಲ್ಲದೆ ಮಾನಸನೇ ಮುರಾಂತಕಾ.
(ಪಂ. ಭಾ. 5-75)
ಈ ಪದ್ಯವನ್ನು ಓದಿ ಮುಗಿಸಿದ ಸರ್ ಅವರು, ಅದರ ಮೊದಲ ಪಂಕ್ತಿಯ ಪದವಿಂಗಡಣೆ ಮಾಡುತ್ತ, ‘ಯುದ್ಧಕ್ಕೆ ಸಿದ್ಧನಾಗಿ ರಣಾಂಗಣದಲ್ಲಿ ನಿಂತ ಯೋಧನು, ತನ್ನ ಎದುರಿಗೆ ಏರಿ ಬರುವ ವೈರಿ ಸಮೂಹದ ಬೇರನ್ನೇ ಕಿತ್ತಿ ಆಕಾಶಕ್ಕೆ ಎತ್ತಿ ಹಿಡಿಯದಿದ್ದರೆ ಅವನೆಂಥ ಶೂರ, ಎಂಬುದು ಮೊದಲ ಪಂಕ್ತಿಯ ಸಾಮಾನ್ಯ ಅರ್ಥ. ಅಂದರೆ ವೈರಿ ಸಮೂಹವನ್ನು ಸಂಪೂರ್ಣ ನಾಶ ಮಾಡುವುದೇ ವೀರನ ಲಕ್ಷಣ. ಇಲ್ಲಿ ಪಂಪ ಆ ಅರ್ಥವನ್ನು ಪುಷ್ಟೀಕರಿಸಿ ಹೇಳಲು, ವೈರಿಸಮೂಹದ ಬೇರನ್ನೇ ಕಿತ್ತು ಆಕಾಶಕ್ಕೆ ತೋರಿಸಬೇಕು ಅನ್ನೋ ವಿಶೇಷ ಕ್ರಿಯೆಯೊಂದನ್ನು ಸೂಚಿಸುತ್ತಾನೆ’ … ಹೀಗೆ ಸಹಜವಾಗಿ ಹೇಳುತ್ತ, ಹೇಳುತ್ತಲೇ, ಅವರಿಗೆ ಏನು ನೆನಪಾಯಿತೋ, ತಕ್ಷಣ ಒಂದು ಕ್ಷಣ ಗಕ್ಕನೇ ಹಾಗೇ ನಿಂತವರೇ, ‘ಏನಿದು ವೈರಿಸಮೂಹದ ಬೇರನ್ನೇ ಕಿತ್ತು ‘ನಭಕ್ಕೆತ್ತುವುದು’ ಅಂದ್ರ?’ ಎನ್ನುತ್ತ, ಒಮ್ಮೆ ತಮ್ಮ ಬಾಯ ಮೇಲೆ ಬೆರಳಿಟ್ಟುಕೊಂಡರು. ತಕ್ಷಣ ಅದೇನೋ ಸಿಕ್ಕಂತವರಾಗಿ, ‘ಹಾಂ ಸಿಕ್ತು, ಸಿಕ್ತು, ‘ನಭಕ್ಕೆತ್ತುವುದು’ ಅಂದ್ರ ಏನು ಅಂತ ಸಿಕ್ತು’, ಎಂದು ವಿಚಿತ್ರವಾಗಿ ವರ್ತಿಸತೊಡಗಿದರು. ಎಲ್ಲರಿಗೂ ಅಚ್ಚರಿಯೋ ಅಚ್ಚರಿ! ‘ಏನ್ ಸರ್, ಏನ್ ಸಿಕ್ತು?’ ಎಂದು ನಮ್ಮಲ್ಲಿ ಒಬ್ಬ ವಿದ್ಯಾರ್ಥಿ ಕೇಳಲಾಗಿ, ಅದಕ್ಕೆ ಸಾಕ್ಷಿಯಾಗಿ ಸಿಕ್ಕ ವಾಸ್ತವ ಘಟನೆಯೊಂದನ್ನೇ ಅವರು ಹೇಳತೊಡಗಿದರು.
‘ಈಗೊಂದು ವಾರದ ಹಿಂದ್, ನನ್ನ ಮಗಾ ಮತ್ತ ನಾನು ನಮ್ಮ ಮನೀ ಮುಂದಿನ ತ್ವಾಟದಾಗ ಕಾಯಿಪಲ್ಲೇದ ನಡುವೆ ಬೆಳೆದಿದ್ದ ಕಸದ ಗಿಡಾ ಕೀಳಾಕ ಹತ್ತಿದ್ವಿ. ಅಂವಾ ಒಂದ ಗಿಡಾ ಕಿತ್ತಾವನS, ಆ ಗಿಡದ ಮ್ಯಾಲಿನ ತುದೀನ ಕೆಳಗ ಮಾಡಿ, ಕೆಳಗಿದ್ದಂತಾ ಬೇರಿನ ಭಾಗಾನ ಉರಪಾಟಿ ಮಾಡಿ ಹಿಡದು, ಆಕಾಶದ ಕಡೆ ತೋರಸಾಕತ್ತಿದಾ. ಒಂದಲ್ಲ, ಎರಡ್ಮೂರು ಕಸದ ಗಿಡಾ ಕಿತ್ತಾಗೂ ಅಂವಾ ಹಂಗS ಮಾಡಿದಾ. ನನಗ ಇದು ಭಾಳ ವಿಚಿತ್ರ ಅನಿಸ್ತು. ನಾನು ತಕ್ಷಣ, ‘ಯಾಕೋ ಶ್ರೀ, (ಶ್ರೀವಿಜಯ) ಗಿಡದ ಬೇರನ್ನ ಹಂಗ್ಯಾಕ ಆಕಾಶದ ಕಡೆ ಹಿಡ್ಯಾಕ್ ಹತ್ತೀದಿ?’ ಅಂತ ಕುತೂಹಲದಿಂದ ಪ್ರಶ್ನೆ ಕೇಳೀದ್ಯಾ. ಅದಕ್ಕ ಅಂವಾ ಕೊಟ್ಟ್ ಉತ್ತರ ಏನ್ ಗೊತ್ತಾ ನಿಮಗ?’ ಎಂದು ನಮ್ಮ ಕಡೆ ಪ್ರಶ್ನೆ ಎಸೆದಾಗ, ಉತ್ತರ ಗೊತ್ತಿಲ್ಲದ ನಾವೆಲ್ಲಾ ಮೂಕ ಪ್ರೇಕ್ಷಕರಾಗಿದ್ವಿ. ನಮ್ಮನ್ನ ನೋಡಿ ಮತ್ತ ಸರ್ ಅವರೇ ಮುಂದುವರೆಸಿದರು, ‘ಹಾಂ, ಅಂವಾ ಅವತ್ತ ಕೊಟ್ಟ ಉತ್ತರದಾಗ ಪಂಪನ ಈ ‘ನಭಕ್ಕೆತ್ತದೆ’ ಅನ್ನೋ ಶಬ್ದಕ್ಕ ಸಂಪೂರ್ಣ ಸಾಕ್ಷಿ ಮತ್ತ ಅರ್ಥಸಾದೃಶ್ಯ ಐತಿ. ಅದು ನೆನಪಾತು ನನಗ ಈಗ. ನಿಮಗ ಅದನ್ನ ಹೇಳ್ತೇನಿ ಕೇಳ್ರಿಲ್ಲೆ’ ಎಂದು ಮತ್ತೆ ತಮ್ಮ ಮಗ ಕೊಟ್ಟ ಉತ್ತರವನ್ನು ಮುಂದುವರೆಸತೊಡಗಿದರು.
‘ಅಪ್ಪಾ, ನಮ್ಮ ಸಾಲ್ಯಾಗ ಇವತ್ತ ವಿಜ್ಞಾನದ ಸರ್ ಹೇಳಿದ್ದಿದು. ಯಾವ್ದS ಒಂದು ಬ್ಯಾಡಾದ ಗಿಡಾನ ಹಂಗS ಒಗದ್ರ ಅದು ಮತ್ತ ಒಗದಲ್ಲೇ ಚಿಗರಾಕ್ ಸುರೂ ಅಕ್ಕೆೈತೆಂತ. ಅದಕ್ಕ ಬದಲಾಗಿ, ಆ ಗಿಡಾನ ಉಲ್ಟಾ ಮಾಡಿ ಹಿಡದು, ಅದರ ಬೇರುಗಳನ್ನು ಸೂರ್ಯನ ಕಿರಣಕ್ಕ ತೋರಿಸಿ ಹಿಡದ್ರ, ಬೇರಿನೊಳಗ ಇರೋ ಜೀವಕಣಗಳು ಸೂರ್ಯನ ಬಿಸಿಲಿನ ಕಿರಣಗಳ ಶಾಖಕ್ಕೆ ಸುಟ್ಟು ಸತ್ತು ಹೊಕ್ಕಾವಂತ. ಅದು ಮತ್ತ ನೆಲಕ್ಕ ಬಿದ್ರೂ ಬೆಳಿಯೂದುಲ್ಲಂತ. ಅದಕ್ಕS ಕಸದ ಗಿಡಾ ಮತ್ತ ಬೆಳೀಬಾರದಂದ್ರ ಅದರ ಬೇರನ್ನ ಆಕಾಶದ ಕಡೆ ತೋರಿಸಬೇಕು ಅಂತ ಹೇಳಿದ್ರು. ನಾನು ಇಲ್ಲೆ ಮಾಡಿದ್ದು ಅದನ್ನS’ ಅಂತ ನಮ್ಮ ಶ್ರೀ ಉತ್ತರಾ ಹೇಳಿದ. ಪಂಪನ ಈ ಪದ್ಯದ ಪಾಠಾ ಮಾಡೂವಾಗ ಅಂವಾ ಹಂಗ್ ಹೇಳಿದ ಆ ಘಟನಾ ಸಟಕ್ಕನ ನೆನಪಾತು. ನೋಡ್ರಿ ಪಂಪ ನಮ್ಮ ದೇಶಿ ಜ್ಞಾನವನ್ನ ಎಷ್ಟ್ ಆಳವಾಗಿ ತಿಳಕೊಂಡಿದ್ದಾ ಅನ್ನೂದು ಇದರಿಂದ ತಿಳೀತೈತಿ. ಬರೇ ತಿಳಕೊಳ್ಳೂದಷ್ಟ ಅಲ್ಲ, ಅದನ್ನ ತನ್ನ ಕಾವ್ಯದೊಳಗ ಪ್ರಯೋಗಾ ಸೈತ ಮಾದಿದಾ ಅಂವಾ. ಇದಕ್ಕS ಹೇಳೂದು ಪಂಪ ‘ದೇಶಿಯೊಳಗ ಹೊಕ್ಕು ಮಾರ್ಗವನ್ನ ನಿರ್ಮಾಣಾ ಮಾಡಿದ ಕವಿ’ ಅಂತ.
ಬಹುಶಃ ನಿಮಗ ಈಗ ಅರ್ಥ ಆಗಿರಬೇಕು. ಈ ಪದ್ಯದೊಳಗ ಅರ್ಜುನ ಹೇಳೂ ಶೂರರ ಲಕ್ಷಣ ಏನಂದ್ರ, ವೈರಿ ಸಮೂಹಾನ ಪೂರ್ತಿ ಹುಟ್ಟಡಗಿಸಬೇಕಂದ್ರ, ಮತ್ತ ಅದು ಮುಂದ ಮತ್ತೊಮ್ಮ ತೆಲೀ ಎತ್ತಲಾರದಂಗ ಮಾಡಬೇಕಂದ್ರ ಅದನ್ನ ಬೇರು ಸಹಿತ ನಾಶ ಮಾಡಬೇಕು. ಬೇರು ಸಹಿತ ನಾಶ ಮಾಡೂದಂದ್ರ ಕಸದ ಗಿಡಾನ ಕಿತ್ತು ಅದರ ಬೇರುಗಳನ್ನು ಆಕಾಶಕ್ಕ ತೋರಸೂ ಹಂಗ ವೈರಿ ಸಮೂಹದ ಹುಟ್ಟಡಗಿಸಬೇಕು ಅಂತ. ಹಿಂಗ್ ಮಾಡೂದS ನಿಜವಾದ ಶೂರನ ಲಕ್ಷಣ ಅಂತ ಅರ್ಜುನ ಕೃಷ್ಣಗ ಇಲ್ಲೆ ಹೇಳ್ತಾನ’. ಹೀಗೆ ಹೇಳುತ್ತಲೇ ಪದ್ಯದ ಮುಂದಿನ ಭಾಗದಲ್ಲಿ ಬರುವ ಮೊರೆ ಹೊಕ್ಕವರನ್ನು ರಕ್ಷಿಸುವುದು, ತ್ಯಾಗದ ಮತ್ತು ಒಳ್ಳೆಯತನದ ನಡತೆಯಿಂದ ಜನಮಾನಸದಲ್ಲಿ ಅಚ್ಚೊತ್ತುವಂತೆ ಬದುಕುವುದು ಇವೆಲ್ಲವೂ ಒಬ್ಬ ಒಳ್ಳೆಯ ಮನುಷ್ಯ ಲಕ್ಷಣಗಳು ಎಂದೂ, ಇವು ಇಲ್ಲದಿರುವ ಮನುಷ್ಯನು ಈ ಬ್ರಹ್ಮಾಂಡವೆಂಬ ಅತ್ತಿಯ ಹಣ್ಣಿನಲ್ಲಿ ಇರುವ ಹುಳದಂತೆ ನಿರುಪಯುಕ್ತವೆಂದೂ ಮುಂದಿನ ಪದ್ಯಭಾಗದ ಅರ್ಥವನ್ನು ವಿವರಿಸಿದ್ದರು.
ನಾವೆಲ್ಲ ಹಳ್ಳಿಯಲ್ಲಿ ಬೆಳೆದ ರೈತರ ಮಕ್ಕಾಳದರೂ ಕಸವನ್ನು ಪೂರ್ತಿಯಾಗಿ ನಾಶ ಮಾಡಲು ಆ ಗಿಡದ ಬೇರನ್ನು ಸೂರ್ಯನಿಗೆ ತೋರಿಸಬೇಕೆಂಬ ವಿಜ್ಞಾನದ ಈ ಕ್ರಮ ನಮಗೆ ಗೊತ್ತಿರಲಿಲ್ಲ. ಪಂಪನ ಮೂಲಕ ಡಾ. ಕಲಬುರ್ಗಿ ಸರ್ ಅವರು ನಮಗ ಇದನ್ನು ದರ್ಶನದ ರೀತಿಯಲ್ಲಿ ತೋರಿಸಿದ್ದರು. ಕಲಬುರ್ಗಿ ಸರ್ ಅವರಿಗೂ ಇದು ತಿಳಿದಿರಲಿಲ್ಲ. ಅವರ ಮಗ ತೋಟದಲ್ಲಿ ಆಕಸ್ಮಿಕವಾಗಿ ಹಾಗೆ ಮಾಡಿದಾಗ, ಅವನ ಮೂಲಕ ಆ ಕ್ರಿಯಯ ಹಿಂದಿನ ಸತ್ಯವನ್ನು ಅರಿತಿದ್ದ ಅವರು ಪಂಪನ ಪಾಠ ಮಾಡುವಾಗ ಅದನ್ನು ‘ನಭಕ್ಕೆತ್ತದೆ’ ಎಂಬ ಶಬ್ದಕ್ಕೆ ‘ತಗುಳ್ಚಿ’ ಹೇಳಿದ್ದರು.
ಡಾ. ಕಲಬುರ್ಗಿ ಅವರು ತಮ್ಮ ಸಂಶೋಧನಾ ಕ್ರಮಕ್ಕೆ ಯಾವ ಯಾವ ರೀತಿಯಲ್ಲಿ ಆಕರಗಳನ್ನು ಪಡೆಯುತ್ತಿದ್ದರೆಂಬುದಕ್ಕೆ ಈ ಘಟನೆ ಒಂದು ಸಣ್ಣ ಸಾಕ್ಷಿ. ಅವರು ತಮ್ಮ ದಿನನಿತ್ಯದ ಅನುಭವಗಳೆಲ್ಲವನ್ನೂ ಸಂಶೋಧನೆಗೆ ಬಳಸಿಕೊಳ್ಳುತ್ತಿದ್ದರೆಂಬುದು ಇದರಿಂದ ಅರ್ಥವಾಗುತ್ತದೆ. ಈ ಕ್ರಮದಲ್ಲಿಯೇ, ತಮ್ಮ ಮಗ ತೋರಿಸಿಕೊಟ್ಟ ಒಂದು ನಿಜಾನುಭವದ ಘಟನೆಯನ್ನು ಆಧಾರವಾಗಿಟ್ಟುಕೊಂಡು ಅವರು ಪಂಪನ ಆ ಪದ್ಯದ ಅರ್ಥವನ್ನು ಸಾಕ್ಷಿಭೂತವಾಗಿ ನಮಗೆ ಅರ್ಥೈಸಿಕೊಟ್ಟಿದ್ದರು. ಆ ದಿನದ ಪಾಠ ನಮ್ಮ ಮನಸ್ಸಿನಲ್ಲಿ ಎಂದೂ ಮರೆಯಲಾರದಂತೆ ಅಚ್ಚೊತ್ತಿದೆ.
ಸಂಶೋಧಕನಾದವರು ಕೇವಲ ಪುಸ್ತಕಗಳ ಓದಿನಿಂದ, ಸಂಗ್ರಹಿಸಿದ ವಿವಿಧ ಆಕರಗಳಿಂದ, ತರ್ಕದಿಂದ, ಬಾಹ್ಯ ಪ್ರಮೇಯಗಳಿಂದ ಮಾತ್ರ ಅಂತಿಮ ನಿರ್ಧಾರಕ್ಕೆ ಬಂದರೆ ಸಾಲದು. ಆತ ದಿನನಿತ್ಯದ ಬದುಕಿನಲ್ಲಿ ಕಾಣುವ ಮತ್ತು ಅನುಭವಿಸಿವ ಎಲ್ಲ ವಿದ್ಯಮಾನಗಳಿಂದಲೂ ಸಂಶೋಧನೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಅಂತೆಯೇ ಅವರು ಮತ್ತೆ ಮತ್ತೆ ಹೇಳುತ್ತಿದ್ದ, ‘ಸಂಶೋಧನೆ ಎನ್ನುವುದು ಅಲ್ಪವಿರಾಮ, ಅರ್ಧವಿರಾಮಗಳ ಮೂಲಕ ಪೂರ್ಣವಿರಾಮಕ್ಕೆ ಸಾಗುವ ಪ್ರಕ್ರಿಯೆಯಾಗಿದೆ’ ಎಂಬ ಮಾತು ನಿಜಕ್ಕೂ ಮೌಲಿಕವಾದುದು ಎನಿಸುತ್ತದೆ. ಅಂಥ ಮಾತಿಗೆ ಸಾಕ್ಷಿಯಾಗುವ ಹಾಗೆ ತಮ್ಮ ಸಂಶೋಧನೆಯನ್ನು ಸಮಗ್ರ ದೃಷ್ಟಿಯ ಅಧ್ಯಯನವನ್ನಾಗಿ ಮಾಡುತ್ತಿದ್ದರು ಡಾ. ಕಲಬುರ್ಗಿ ಸರ್ ಅವರು.. ಪಂಪನ ಪ್ರಸ್ತುತ ಪದ್ಯದ ಅರ್ಥವಿವರಣೆಯೇ ಇದಕ್ಕೊಂದು ನೈಜ ನಿದರ್ಶನ.
ಡಾ. ಬಸವರಾಜ ಸಾದರ.
ನಿಲಯದ ನಿರ್ದೇಶಕರು (ನಿ), ಆಕಾಶವಾಣಿ, ಬೆಂಗಳೂರು.
#303, ಎಸ್. ಎಲ್. ವಿ. ತೇಜಸ್, 3 ನೇ ಮಹಡಿ,
2 ನೇ ಅಡ್ಡ ರಸ್ತೆ, ಭುವನೇಶ್ವರಿ ನಗರ,
(ಹೆಬ್ಬಾಳ-ಕೆಂಪಾಪೂರ)
ಬೆಂಗಳೂರು – 560 024
ಮೋಬೈಲ್ ಸಂ. +91 98869 85847
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamanda