ಓಂ ಶ್ರೀ ಗುರುಬಸವ ಲಿಂಗಾಯ ನಮಃ

ಬಸವಜ್ಯೋತಿ, ಮಹಾಂತ ಜೋಳಿಗೆಯ ಶಿವ ಶಿಲ್ಪಿ, ಶಿವಾನುಭವ ಚರವರ್ಯ ಎಂದೇ ಖ್ಯಾತರಾದ ಪೂಜ್ಯ ಶ್ರೀ ಶ್ರೀ ಶ್ರೀ ಮಹಾಂತಶಿವಯೋಗಿಗಳು ಈ ನಾಡು ಕಂಡ ಮಹಾನ್ ಚೇತನರು. ಮಾನವೀಯತೆಯ ಮಾತೃ ಹೃದಯಿಗಳು. ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನರ ಅಜ್ಞಾನ, ಮೂಡನಂಬಿಕೆಗಳನ್ನು ತೊಲಗಿಸಲು ಹಗಲಿರುಳು ಶ್ರಮಿಸಿದರು. ಮಹಾಂತ ಜೋಳಿಗೆಯನ್ನು ಹುಟ್ಟುಹಾಕಿ ಜನರಲ್ಲಿರತಕ್ಕಂತ ದುಶ್ಚಟ & ದುರ್ವ್ಯಸನಗಳನ್ನು ದೂರ ಮಾಡಿ ಸಾವಿರಾರು ಹೃದಯಗಳನ್ನು ಪರಿವರ್ತನೆ ಮಾಡಿ ಬದುಕಿಗೆ ಬೆಳಕು ತಂದರು.
ಬಸವಣ್ಣ ಇವರ ಅಂಗವಾದ. ಮಡಿವಾಳ ಮಾಚಿದೇವರು ಇವರ ಮನಸ್ಸಾದರು. ಪ್ರಭುದೇವರು ಇವರ ಪ್ರಾಣವಾದರು. ಚೆನ್ನಬಸವಣ್ಣನವರು ಇವರ ಕರಸ್ಥಲದ ಲಿಂಗವಾದರು. ಸೊಡ್ಡಳ ಬಾಚರಸರು ಇವರ ಅರಿವಾದರು. ಮಹಾದೇವಿ ಅಕ್ಕ ಇವರ ಜ್ಞಾನ. ಮುಕ್ತಾಯಕ್ಕ ಇವರ ಅಕ್ಕಂದಿರಾದರು. ಸತ್ಯಕ್ಕ ಇವರ ಯುಕ್ತಿಯಾದರು.
ಹೀಗೆ ಶರಣ ಸಾಹಿತ್ಯದ ಬೆನ್ನತ್ತಿ ಹೋದ ಪೂಜ್ಯರಿಗೆ ಎಲ್ಲ ಬಸವಾದಿ ಶಿವಶರಣರು ಒಬ್ಬೊಬ್ಬರಾಗಿ ಪೂಜ್ಯರ ಮನ ಭಾವಗಳನ್ನು ಆಕ್ರಮಿಸಿದರು. ಹೀಗೆ ಬಸವತತ್ವವನ್ನೆ ಉಸಿರಾಗಿಸಿಕೊಂಡು ಚಿತ್ತರಗಿ ಪೀಠದ ಕೀರ್ತಿಯನ್ನು ಕಡಲಾಚೆಗೂ ಬೆಳೆಸಿದ ಮಹಾಪುರುಷರು.
ವಿಶ್ವಗುರು ಅಪ್ಪ ಬಸವಣ್ಣನವರು ಜಗಜ್ಯೋತಿ ಎನಿಸಿದರೆ ಪೂಜ್ಯ ಮಹಾಂತಪ್ಪಗಳವರು ಬಸವ ಜ್ಯೋತಿಯಾದರು. ಇಂತಹ ಮಹಾಂತಪ್ಪಗಳುಪೂಜ್ಯರ ಮಹೋನ್ನತ, ಸುಂದರ, ನಿರ್ಮಲ, ಪವಿತ್ರ ಬದುಕಿನ ಸ್ಮರಣೆಯೇ ನಮ್ಮೆಲ್ಲರದು. ಡಾ. ಮಹಾಂತಪ್ಪಗಳು ಇತಿಹಾಸಕಾರರಲ್ಲ. ಆದರೆ ಇತಿಹಾಸ ನಿರ್ಮಿಸಿದರು. ಸಾಹಿತಿಗಳಲ್ಲ, ಆದರೆ ಸಾಹಿತ್ಯಕ್ಕೆ ವಸ್ತುವಾದರು. ಡಾಕ್ಟರೇಟ್ ಮಾಡಿದವರಲ್ಲ. ಆದರೆ ಡಾಕ್ಟರೇಟ್ ಅಧ್ಯಯನಕ್ಕೆ ಭಾಜನರಾದರು.
ಬರೀ ನುಡಿಯಲ್ಲಿ ನಿಸ್ಸೀಮರು ಎನಿಸಿಕೊಳ್ಳಲಿಲ್ಲ. ಸಾವಿರ ಸಾವಿರ ಸಮಸ್ಯೆಗಳನ್ನು ನುಂಗಿ ನಡೆ ನುಡಿ ಪೂರೈಸಿ ಬಸವ ಪ್ರಜ್ಞೆಗೆ ಅರ್ಥಪೂರ್ಣವಾಗಿ ಚಾಲನೆ ಕೊಟ್ಟವರು. ಅಲ್ಲಮರ ಅಭಿಪ್ರಾಯದಲ್ಲಿ ಗುಹೇಶ್ವರ ಲಿಂಗಕ್ಕೆ ಬಸವಣ್ಣ ವಿಳಾಸವಾದರೆ ಆ ಬಸವ ತಂದೆಗೆ ಪರಮಪೂಜ್ಯ ಶ್ರೀ ಮ. ನಿ. ಪ್ರ ಡಾ. ಮಹಾಂತ ಶಿವಯೋಗಿಗಳು ವಿಳಾಸವಾದರು.
ಜಗದಗಲ ಮುಗಿಲಗಲ ಮಿಗೆಯಗಲ ಬೆಳೆದ ಮಹಾಮೇರು. ಲೋಕದ ಡೊಂಕ ತಿದ್ದುವ ಮೊದಲು ತನು-ಮನವ ಸಂತೈಸಿಕೊಂಡ ಲೋಕ ಸಂಚಾರಿ. ತನುವಿನಲ್ಲಿ ನಿರ್ಮೋಹ ಮನದಲ್ಲಿ ನಿರಹಂಕಾರ, ಧನದಲ್ಲಿ ಶುಚಿ, ಭಾವದಲ್ಲಿ ದಿಗಂಬರವೆಂಬ ಶರಣರ ವಚನ ವಾಣಿಗೆ ಜೀವ ತುಂಬಿದ ಮಹಾ ಮೇರು ನಿಮಗೆ ಸಮನಾರು? ಜಾತಿಯ ಖಗ್ರಾಸ ಸೂರ್ಯಗ್ರಹಣದಲ್ಲಿಯೂ ಮಿರುಗುವ ಚರಚಂಗಮ ನಕ್ಷತ್ರದ ಇಳಕಲ್ಲ ಗುರುವೇ ನಿಮಗೆ ಸಮನಾರು?.
ಬಸವಜ್ಯೋತಿ ಮಹಾಂತಜೋಳಿಗೆಯ ಶಿವ ಶಿಲ್ಪಿ, ಮಾನವೀಯತೆಯ ಮಾತೃ ಹೃದಯಿ, ಜನರ ಅಜ್ಞಾನ, ಮೂಢನಂಬಿಕೆಗಳನ್ನು ತೊಲಗಿಸಲು ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹಗಲಿರಳು ಶ್ರಮಿಸಿ ಬಸವ ತತ್ವವನ್ನು ಆಡದೆ ಮಾಡಿ ತೋರಿಸಿದ ಏಕೈಕ ಪೂಜ್ಯರು ಪರಮಪೂಜ್ಯ ಶ್ರೀ ಮ. ನಿ. ಪ್ರ ಡಾ. ಮಹಾಂತ ಶಿವಯೋಗಿಗಳು. ವಿಶ್ವಗುರು ಅಪ್ಪ ಬಸವಣ್ಣನವರು ಜಗಜ್ಯೋತಿ ಎನಿಸಿದರೆ ಪರಮಪೂಜ್ಯ ಶ್ರೀ ಮ. ನಿ. ಪ್ರ ಡಾ. ಮಹಾಂತ ಶಿವಯೋಗಿಗಳು ಬಸವ ಜ್ಯೋತಿಯಾಗಿದ್ದಾರೆ. ದುರ್ವ್ಯಸನಿ ದುರಾಚಾರಿ ಎಂದೆನಿಸದಿರಯ್ಯ ಎನ್ನ ಲಿಂಗವ್ಯಸನಿ ಜಂಗಮ ಪ್ರೇಮಿ ಎಂದೆನಿಸಯ್ಯ ಎನ್ನುವ ಬಸವಣ್ಣನವರ ಸಮಾಜೋದ್ಧಾರದ ಕಳಕಳಿಯೂ ಪರಮಪೂಜ್ಯ ಶ್ರೀ ಮ. ನಿ. ಪ್ರ ಡಾ. ಮಹಾಂತ ಶಿವಯೋಗಿಗಳ ಜೋಳಿಗೆಯಲ್ಲಿ ಕಾಣಬಹುದು. ಮಹಾಂತ ಜೋಳಗಿಯ ಮೂಲಕ ಜನಮನದ ಮಾಲಿನ್ಯವನ್ನು ಹೋಗಲಾಡಿಸಿ ರಾಜ್ಯ, ಹೊರರಾಜ್ಯ, ದೇಶ, ವಿದೇಶದಲ್ಲೂ ಜ್ಯೋತಿಯಾಗಿ ಬೆಳಗು ಬಸವಣ್ಣನವರ ನುಡಿ ನಡೆಯಲ್ಲಿ ತಂದ ಮಹಾ ಧೀರರು ಮಹಾಂತ ಶಿವಯೋಗಿಗಳು.
ಜನರ ದುರಾಚಾರಗಳನ್ನು ದೂರಿಕರಿಸಿ ಸದ್ಗುಣ ಧಾರ್ಮಿಕ ಭಾವನೆಗಳನ್ನು ಜಾಗೃತಗೊಳಿಸಿ ಬಾಳನ್ನು ಸುಂದರ ಹಾಗೂ ಸುಮಧುರವನ್ನಾಗಿಸಿದರು. ಲೋಕಾನುಭವಕ್ಕೆ ಸ್ವಾನುಭಾವದ ಸಂಸ್ಕಾರ ಕೊಟ್ಟು ಸತ್ಯ ಶುದ್ಧ ಕಾಯಕದಲ್ಲಿ ಮನವನ್ನು ತೊಡಗಿಸಿ ಭಕ್ತರಲ್ಲಿ ಸಾರ್ಥಕ ಜೀವನದ ಪ್ರಜ್ಞೆಯನ್ನು ಮೂಡಿಸಿದರು. ಅಂಧಶ್ರದ್ಧೆ, ಕಂದಾಚಾರ, ಮೂಢನಂಬಿಕೆ, ಅನಿಷ್ಟ ಪದ್ದತಿಗಳನ್ನು ಹೊಡೆದೋಡಿಸಿ ಸಮಾಜದಲ್ಲಿ ವೈಚಾರಿಕತೆಯ ಕ್ರಾಂತಿ ಮೂಡಿಸಿದರು. ಸವದಿಮಠದ ಸಂಗನಬಸವರ ಕಾರುಣ್ಯದ ಶಿಶು ಚಿತ್ತರಗಿ ಪೀಠದ ಚಿಜ್ಯೋತಿಯ ಪರಂಜ್ಯೋತಿ ಬಸವ ಜ್ಯೋತಿಯಾಗಿ ಭಕ್ತರ ಮನ-ಮನಂಗಳಲ್ಲೆಲ್ಲ ಬಸವ ಬೆಳಗನ್ನು ಬಿತ್ತಿದರು. ನಾಡಿನ ಆರಾಧ್ಯ ದೈವ ಬಸವ ತತ್ವದ ಹರಿಕಾರ. ಜಾತಿ, ಮತ, ಪಂಥಗಳ ಎಲ್ಲೆಯನ್ನು ಮೀರಿ ಬಸವ ತತ್ವದ ತಿರುಳನ್ನು ಜಗತ್ತಿಗೆ ಸಾರಿದ್ದಲ್ಲದೆ ನಾಡಿನ ಭಕ್ತರ ಮನದಲ್ಲಿ ನಿತ್ಯ ಹಚ್ಚಹಸಿರಾಗಿ ಜನಸಾಮಾನ್ಯರಲ್ಲಿ ಅರಿವು ಮೂಡಿಸಿದ ಮಹಾನ್ ದಾರ್ಶನಿಕರು. ಇಂತಹ ಪೂಜ್ಯರ ಮಹೋನ್ನತ, ಸುಂದರ, ನಿರ್ಮಲ, ಪವಿತ್ರ ಬದುಕಿನ ಸ್ಮರಣೆಯೇ ನಮ್ಮೆಲ್ಲರದು. ನೊಂದ ಹಲವಾರು ಹೆಣ್ಣು ಮಕ್ಕಳ ಬಾಳನ್ನು ಕರುಣಿಸಿ ಬದುಕನ್ನು ಬೆಳಗಿಸಿದ ಮಹಾನ್ ಜ್ಯೋತಿ. ಪರಮಪೂಜ್ಯ ಶ್ರೀ ಮ. ನಿ. ಪ್ರ ಡಾ. ಮಹಾಂತ ಶಿವಯೋಗಿಗಳವರು ಇಂದು ನಮ್ಮೊಂದಿಗಿಲ್ಲ ಆದರೆ ನಮ್ಮನ್ನು ಮುನ್ನಡೆಸುವುದನ್ನು ಬಿಟ್ಟಿಲ್ಲ. ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲ ಆದರೆ ಶಾಶ್ವತವಾಗಿ ನಮ್ಮೊಂದಿಗೆ ಇದ್ದಾರೆ. ಅವರ ತತ್ವಗಳನ್ನು ಪಾಲಿಸುವುದೇ ನಾವು ಅವರಿಗೆ ಕೊಡುವ ಗೌರವ. ಬಸವ ತತ್ವ ಪ್ರತಿಪಾದಕರಾಗಿ ನಾಡಿಗೆ ಬೆಳಕು ನೀಡಿ ಪ್ರಜ್ವಲಿಸಿದ ಪರಮಪೂಜ್ಯ ಶ್ರೀ ಮ. ನಿ. ಪ್ರ ಡಾ. ಮಹಾಂತ ಶಿವಯೋಗಿಗಳಿಗೆ ಭಕ್ತಿ ಪೂರ್ವಕ ಕೋಟಿ ಕೋಟಿ ನಮನಗಳು.
ಶ್ರೀಮತಿ. ಅಮರವಾಣಿ ಐದನಾಳ,
ಲಿಂಗಸೂಗೂರು.
ಮೋಬೈಲ್. ಸಂ. 99809 58759
ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 97413 57132 / e-Mail ID: info@vachanamandara.in / admin@vachanamandara.in