
ವಚನ ಸಾಹಿತ್ಯ ಮತ್ತು ಬಸವ ತತ್ವ ಎನ್ನುವುದು ಒಂದು ಜೀವನ ಕ್ರಮ. ಕನ್ನಡದ ಮೇರುತನವನ್ನು ಬಿಂಬಿಸುವ ಅದರ ಪ್ರಭಾವ ಅಪಾರ. ಹೀಗಾಗಿ ಶರಣ ಸಂಸ್ಕೃತಿಯ ಬಯಲಲ್ಲಿ ಬಸವ ತತ್ವ ವಿಶಾಲವಾಗಿ ಬೆಳೆದಿದೆ. ತಾತ್ವಿಕವಾಗಿ ಸಾಮಾಜಿಕ ಮತ್ತು ಧಾರ್ಮಿಕವಾಗಿ ನಾವು ಪಡೆದುಕೊಂಡಿರುವ ಶರಣ ಧರ್ಮದ ಆಧ್ಯಾತ್ಮಿಕ ತತ್ವವು ಆರೋಗ್ಯಪೂರ್ಣ ಸಮಾಜವನ್ನು ನಮಗೆ ನೀಡಿದೆ. ಹೀಗಾಗಿ ಬಸವಾದಿ ಶರಣರ ಬೌದ್ಧಿಕ ಚಿಂತನೆಗಳ ಅನುಸಂಧಾನ ಮಾಡುವ. ಪುನರ್ ಮೌಲ್ಯೀಕರಣ ಮಾಡುವ ಅಗತ್ಯತೆ ಇಂದಿದೆ. ನಮ್ಮ ವರ್ತಮಾನ ಕಾಲದ ಒಳನೋಟ ಜನಪರವಾದ ಚಿಂತನೆಗಳು ತಾತ್ವಿಕವಾಗಿ ಹೇಗೆ ನೆಲೆಗೊಂಡಿವೆ ಎಂಬುದನ್ನು ಶ್ರೀ ಸಿದ್ದರಾಮೇಶ್ವರರ ವಚನಗಳಲ್ಲಿ ಕಾಣಬಹುದು.
ನಮ್ಮ ಭಾರತೀಯ ಪರಂಪರೆಯಲ್ಲಿ ಜೀವಪರ ಜೀವ ವಿರೋಧಿ ಚಿಂತನೆಗಳ ವಿರುದ್ಧ ಸದಾ ಸೆಣಸುತ್ತಲೇ ಬಂದಿವೆ. ಅಂತಹ ಕೆಲ ತಾತ್ವಿಕ ಧಾರೆಗಳನ್ನು 12 ನೇ ಶತಮಾನದ ಬಸವಾದಿ ಶರಣರ ವಚನಗಳಲ್ಲಿ ಕಾಣಬಹುದು. ವಚನಗಳ ಪ್ರಸ್ತುತತೆ ಎನ್ನುವುದೇ ವೈವಿಧ್ಯತೆಯನ್ನು ವೈಚಾರಿಕತೆಯನ್ನು ಬಿಂಬಿಸುತ್ತವೆ. ಮನುಷ್ಯನ ಅಂತರಂಗ ಮತ್ತು ಬಹಿರಂಗದ ಸಮತೋಲನವನ್ನು ಸಾಧಿಸುವ ವಚನಗಳ ವೈಚಾರಿಕತೆ ಮುಖ್ಯ ಆಶಯವಾಗಿದ್ದರೂ ನಮ್ಮ ಕಾಲದ ಆದರ್ಶಗಳ ಒಳ ಧ್ವನಿಗಳನ್ನು ವಚನಗಳಲ್ಲಿ ಕಾಣಬಹುದು.
ಮಹಾರಾಷ್ಟ್ರದ ಸೊನ್ನಲಿಗೆ ಈಗಿನ ಸೊಲ್ಲಾಪುರದ ಮುದ್ದಯ್ಯ ಮತ್ತು ಸುಗ್ಗವ್ವೆಯರ ಮಗ ಶರಣ ಶ್ರೀ ಸಿದ್ದರಾಮರು ಈ ದಂಪತಿಗಳಿಗೆ ಶಿವಯೋಗಿ ಜನ್ಮಿಸುವರೆಂದು ರೇವಣಸಿದ್ದರು ಆಶೀರ್ವದಿಸಿದ್ದರು. ಶ್ರೀ ಸಿದ್ದರಾಮ ಶರಣರು ಶ್ರೀಶೈಲ ಮಲ್ಲಯ್ಯನ ಭಕ್ತರಾಗಿ ಅನೇಕ ಪವಾಡ ಸದೃಶ ಸಮಾಜಮುಖಿಯಾಗಿ ಕೆಲಸ ಮಾಡಿದ್ದು ಗಮನಾರ್ಹವಾಗಿದೆ. ಶ್ರೀ ಸಿದ್ದರಾಮರ ವಚನಗಳ ಸಂಖ್ಯೆ 1965. ವಚನಾಂಕಿತ ಕಪಿಲಸಿದ್ಧಮಲ್ಲಿಕಾರ್ಜುನ.
ಭಾರತೀಯ ಸಂಸ್ಕೃತಿ ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಸಿಕೊಂಡ ಮುಖಾಮುಖಿಯ ಪ್ರತಿಫಲನವನ್ನು ವಚನಕಾರರಲ್ಲಿ ಕಾಣಬಹುದು. ಶ್ರೀ ಸಿದ್ದರಾಮ ಶರಣರ ಅಧ್ಯಯನದಲ್ಲಿ ಇನ್ನಷ್ಟು ಸ್ಪಷ್ಟತೆಯನ್ನು ಕೊಡಬಹುದು. ನಮ್ಮ ಅನುಭಾವದ ಪ್ರಪಂಚದಲ್ಲಿ ಪಂಚೇಂದ್ರಿಯಗಳು ಪ್ರಕೃತಿಯಿಂದ ಸ್ವಾನುಭಾವದ ಮೂಲಕ ಪ್ರವೇಶ ಪಡೆಯುತ್ತವೆ.
ಆಜ್ಞೆಯನು ಮೀರಿಪ್ಪುದಾತನವ
ಸಂಬಂಧ ತಾನು ಅಜಲೋಕದಲ್ಲಿ ನಿತ್ಯ
ಸುಖಿಯೆ ಸ್ವಾನುಭಾವೈಕ್ಯದಲಿ
ಆತನದ ಸಂಬಂಧ ಸೋಮ ರೀತಿಯ
ದೀಪ್ತಿ ಸಮಾಜ ದೊಡನಾಟ ನಾಮ
ಲೀಯನ ಕೂಟ ಕಾಮ್ಯಾರ್ಥಿಗಳಿಗಿಲ್ಲ
ಕಪಿಲ ಸಿದ್ದ ಮಲ್ಲಿಕಾರ್ಜುನ
(ಸಮಗ್ರ ವಚನ ಸಂ.4-ಪು. ಸಂ-42 ವ.ಸಂ 143)
ವಚನ ಸಾಹಿತ್ಯ ಮನೋವಿಜ್ಞಾನ ಸಮಾಜ ವಿಜ್ಞಾನದ ಅನುಭವ ಪ್ರಧಾನವಾದ ಕಲಾ ಪ್ರಕಾರವಾಗಿದೆ. ಇಲ್ಲಿ ಹೆಚ್ಚು ಹೆಚ್ಚು ಆಧ್ಯಾತ್ಮಿಕ ಸಂವಹನ ಸೇರ್ಪಡೆಯಾದರು ವಚನಗಳ ತೀಕ್ಷ್ಣತೆಯನ್ನು ಪಡೆದುಕೊಳ್ಳುವತ್ತ ಧಾವಿಸುತ್ತದೆ. ಪ್ರಕೃತಿ ಕಲಾತತ್ವದ ವಾಸ್ತವಿಕ ಪರಿಣಾಮ ಶಿವನೇ ಆಗಿದ್ದಾನೆ. ಜ್ಞಾನ ಇಚ್ಚಾ ಶಕ್ತಿಗಳ ರೂಪವೇ ಪರಶಕ್ತಿಯದು. ಸ್ವಾನುಭಾವೈಕ್ಯದಲ್ಲಿ ಶಬ್ದ ಸ್ಪರ್ಶ ರೂಪ ರಸ ಗಂಧಗಳ ತೀವ್ರತೆಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ.
“ಸಮಾಜದೊಡನಾಟ ನಾಮಲೀಯನ ಕೂಟ” ವಾದರೂ ಪ್ರಸ್ತುತ ಸಂದರ್ಭದಲ್ಲಿ ಸಮಾಜದ ಕಟ್ಟುಪಾಡುಗಳಿಗೆ ಅನುಗುಣವಾಗಿ ನಾವು ನಡೆಯುತ್ತಿದ್ದೇವೆಯೇ ಎಂಬ ಅಂತರಂಗದ ಮಾತುಗಳನ್ನು ಪರಾಮರ್ಷಿಸಿಕೊಳ್ಳಬೇಕು. ಡಾ. ಬಿ. ಆರ್ ಅಂಬೇಡ್ಕರ್ ಅವರು ಹೇಳುವಂತೆ ಸಮಾಜವನ್ನು ತಿದ್ದುವ ಪ್ರಯತ್ನ ಮಾಡಬೇಕೆ ಹೊರತು ಸಮಾಜವನ್ನು ಧಿಕ್ಕರಿಸುವುದಲ್ಲ. ಶರಣ ಸಿದ್ದರಾಮೇಶ್ವರರ ವಚನದಲ್ಲಿ ಕಾಣುವಂತೆ ಸಾಮಾಜಿಕ ಕ್ರಾಂತಿ ಸಮಾಜಮುಖಿ ಚಿಂತನೆ ಅಲ್ಲ ಭೂತ ಮತ್ತು ಭವಿಷ್ಯತ್ತಿನ ಅರ್ಥದಲ್ಲಿಯೇ ನೋಡಬೇಕು. ಸಮಾಜ ಮನಸ್ಸಿನ ನಿರಂತರ ಆಲೋಚನೆಯ ಸೋಮ ರೀತಿಯ ದೀಪ್ತಿಯಾಗಬೇಕು. ಅಂದರೆ ಚಂದ್ರನ ಬೆಳಗಿನಂತೆ ಪರಿಶುಭ್ರವಾಗಿರಬೇಕು. ಹೀಗಾಗಿ ಭವಿಷ್ಯವೆನ್ನುವುದು ಆಶೆ ಮತ್ತು ಭಯಗಳಿಂದ ಮೂಡುವ ಕಲ್ಪನೆ. ಅರಿವು ಮೂಡುವವರೆಗೆ ಸಾವಕಾಶವಾಗಿ ಕುರುಹನ್ನು ಹಿಡಿದು ವಿಕಾಸ ಹೊಂದಿ ಕೊನೆ ಮುಟ್ಟಬೇಕು.
ಶ್ರೀ ಸಿದ್ದರಾಮೇಶ್ವರರ ಸ್ಫೂರ್ತಿಯಿಂದ ಕೂಡಿದ ಬಹುಮುಖಿ ವ್ಯಕ್ತಿತ್ವ ಸಮಕಾಲೀನ ಸಾಮಾಜಿಕ ಬದಲಾವಣೆಗೆ ಎಷ್ಟು ಪರಿಣಾಮಕಾರಿಯಾಗಿ ಮಿಡಿಯುತ್ತವೆ ಎಂಬ ಸಾಕ್ಷಿ ಪ್ರಜ್ಞೆ ವಚನಗಳ ಪ್ರಸ್ತುತತೆಯನ್ನು ಬಿಂಬಿಸುತ್ತದೆ. 12 ನೇ ಶತಮಾನದ ಚಾರಿತ್ರಿಕ ವಿರಾಟ ವ್ಯಕ್ತಿತ್ವ …. ಮಾನವತ್ವ ಸಂಬಂಧಗಳಿಂದ ದೈವತ್ವವನ್ನು ಪಡೆದ ಅನುಭಾವಿ. ಸಂಘಟನಾ ಶಕ್ತಿ ಪಡೆದ ಆದರ್ಶ ಶರಣ ಶ್ರೀ ಸಿದ್ದರಾಮ ಶರಣರಾಗಿದ್ದರು. ಸಾಮಾಜಿಕ ಕೆಲಸಗಳಲ್ಲಿ ಆತ್ಮಾನಂದವನ್ನು ಪಡೆದುಕೊಂಡ ಶರಣ. ಭಾವಿ ತೋಡಿಸುವುದು ಕೆರೆಕಟ್ಟಿಸುವುದು ತೋಟ ಮಾಡಿಸುವ ದೇವಸ್ಥಾನಗಳನ್ನು ನಿರ್ಮಿಸುವ ಲಿಂಗ ಪ್ರತಿಷ್ಠೆ ಮಾಡಿಸುವ ಗಣ ಪರ್ವಗಳನ್ನು ಮತ್ತು ಸಾಮೂಹಿಕ ವಿವಾಹಗಳನ್ನು ಏರ್ಪಡಿಸಿ ವಧು ವರರ ದಾಂಪತ್ಯಕ್ಕೆ ಅನುವು ಮಾಡಿ ಕೊಟ್ಟದ್ದು ವಿಶೇಷತೆ ಎಂದೇ ಹೇಳಬಹುದು.
ಆಧ್ಯಾತ್ಮಿಕ ಪಯಣದಲ್ಲಿ ಅಮ್ಮ ಎಂಬ ಭಾವ ಬಂಧ ಬದಲಾಗುವುದಿಲ್ಲ. ಶರಣ ಸತಿ ಲಿಂಗ ಪತಿಯ ಭಾವ ಭಕ್ತಿಯ ಆತ್ಮವಿಶ್ವಾಸದ ಗಟ್ಟಿತನವಾಗಿರುತ್ತದೆ. ಮನಃಶಾಸ್ತ್ರದ ಅಧ್ಯನವೂ ಇದನ್ನೇ ಹೇಳುತ್ತದೆ. ತಾಯಿ ಎಂಬ ಪದ ಧೈನ್ಯತೆಯಲ್ಲಿ ತಾತ್ವಿಕ ಸೌಂದರ್ಯವಿರುತ್ತದೆ. ಧನ್ಯತೆ ಮತ್ತು ಪ್ರೀತಿ ಲಿಂಗ ಭಾವವಾದಾಗ..
ಹೆತ್ತ ತಾಯಿ ನೀನೇ ಅವ್ವಾ
ನನ್ನ ಹತ್ತಿರ ಬಂದಾಕಿ ನೀನೆ ಅವ್ವಾ
ಲಿಂಗದ ಮೊತ್ತವಾದಾಕಿ ನೀನೆ ಅವ್ವಾ
ಇದರನುಭಾವವ ತಿಳಿದಾತನೆ ಜಂಗಮ
ಇದರನುಭಾವವ ಕೇಳಿದಾತನೆ ಭಕ್ತ ನೋಡವ್ವ
ಆತ ಪ್ರಾಣ ಲಿಂಗಿಯವ್ವಾ
(ಸ.ವ ಸಂ.4, ವ ಸಂ 1352 ಪು ಸಂ 390)
ಲಿಂಗ ನುಡಿ ಎನ್ನುವುದು ಬರಿಯ ಭಾವುಕ ರೂಪವಲ್ಲ. ವಾಸ್ತವ ಸತ್ಯ. ಲಿಂಗವನ್ನು ಹೆತ್ತ ತಾಯಿ ಎಂದು ತಿಳಿದ ಶರಣರು ಶರಣ ಸತಿ ಲಿಂಗ ಪತಿ ಸಾಮಾನ್ಯ ವಿವರಗಳೂ ವಿಶೇಷವೆನಿಸುತ್ತದೆ. ಎರಿಕ್ ಫ್ರಾಂ ಚಿಂತಕ ಹೇಳುವಂತೆ ಮಗು ಹುಟ್ಟುತ್ತಿದ್ದಂತೆ ಹೊಕ್ಕಳ ಬಳ್ಳಿ ಕತ್ತರಿಸಿ ತಾಯಿಯಿಂದ ದೂರವಾಗುತ್ತದೆ. ಒಡಲೊಳಗಿದ್ದ ಮಗು ಮಡಿಲಿಗೆ ಬರುತ್ತದೆ. ಮಗು ಬೆಳೆಯುತ್ತಾ ಇನ್ನಷ್ಟು ದೂರವಾಗಿ ತೋಳಿಗೆ ಬರುತ್ತದೆ. ಇಂತಹ ಭೌತಿಕ ಹೋಲಿಕೆ ಅಸಾಮಾನ್ಯ ಸೂಕ್ಷ್ಮತೆಯನ್ನು ಪಡೆದುಕೊಳ್ಳುತ್ತದೆ. ಭಕ್ತ ಮತ್ತು ಭಗವಂತನ ಸಾಮಿಪ್ಯದಲ್ಲಿ ಲಿಂಗವೆಂಬ ದೇವರನ್ನು ಹೊರಗೆ ಹುಡುಕದೆ ಕಾಯದಲ್ಲಿ ದೇವರನ್ನು ಕಂಡರು. ತಾಯಿ ಎಂದರೆ ಶಕ್ತಿ. ಆಧ್ಯಾತ್ಮದ ಸತ್ಯ ಎಂದರೆ ಅವ್ವ. ಭೌತಿಕ ಪರಶಕ್ತಿ. ಸೌಮ್ಯ ರೂಪದ ತಾಯಿಯ ಶಕ್ತಿ ವಿಶ್ವದ ಚೈತನ್ಯ ತಾತ್ವಿಕತೆಯ ಮಾಯ ಸಿದ್ಧಾಂತವಾಗಿದೆ. ಸಂಸಾರ ಮತ್ತು ಮುಕ್ತಿ ಬೇರೆ ಬೇರೆಯಾದರೂ ಲೋಕವನ್ನು ಕಾಣುವ ದೃಷ್ಟಿಕೋನ ಒಂದೇ ಆಗುತ್ತದೆ. ದೈವದ ಸೃಷ್ಟಿ ಕರುಳ ಬಳ್ಳಿಯ ಸಂಬಂಧಗಳಾಗಿ ಮುಖಾಮುಖಿಯಾಗಿ ಪರಶಕ್ತಿಯ ಲೀಲೆಯಾಗುತ್ತದೆ. ಸಂಸಾರ ಹೇಗೆ ಮುಕ್ತಿಗೆ ಅಂಟಿಕೊಂಡಿದೆಯೋ ಹಾಗೆ ಲೋಕದಲ್ಲಿ ಪ್ರತಿಯೊಂದು ಪ್ರಕೃತಿಯೊಂದಿಗೆ ಪರಶಕ್ತಿಯೊಂದಿಗೆ ಏಕವಾಗಿದೆ. ಹೀಗಾಗಿ ಸಿದ್ದರಾಮ ಶರಣರು ಲೋಕ ಕಲ್ಯಾಣಕ್ಕಾಗಿ ದುಷ್ಟರ ಶಿಕ್ಷೆಗಾಗಿ ಸ್ತ್ರೀಯನ್ನು ಪೂಜಿಸಿದ್ದಾರೆ. ಸಿದ್ದ ಮಾರ್ಗದಿಂದ ಕಲಿತ ಶಕ್ತಿಯನ್ನು ಶರಣ ಧರ್ಮದ ಪ್ರಾಣಲಿಂಗದ ಅರಿವಿನಲ್ಲಿ ಪ್ರತಿಕ್ರಿಯಿಸಿದ್ದಾರೆ.
ನಮ್ಮ ಆಧ್ಯಾತ್ಮಿಕ ಚಿಂತನೆಯ ವಿಭಿನ್ನ ತರ್ಕದ ಪ್ರತಿಫಲನ ಕೃಷಿಯಾಗಿದೆ. ಶರಣರ ವೈಜ್ಞಾನಿಕ ತತ್ವವನ್ನು ಆಧ್ಯಾತ್ಮಿಕವಾಗಿ ಸಾಮಾನ್ಯ ಜನರಿಗೆ ತಿಳಿ ಹೇಳಿದ್ದಾರೆ. ಕೃಷಿಯನ್ನು ಆರಾಧನಾ ಭಾವದಿಂದ ಕಂಡಂತವರು ಶರಣರಾಗಿದ್ದರು. ಶರಣ ಸಿದ್ದರಾಮರು ಕೃಷಿ ಬದುಕಿನ ಮೂಲಕ ಕಾಯಕದ ಶ್ರೇಷ್ಠತೆಯನ್ನು ಅರುಹಿ ಮಣ್ಣಿನ ಸಾಂದ್ರತೆಯನ್ನು ವೈಜ್ಞಾನಿಕವಾಗಿ ತಿಳಿ ಹೇಳಿದ್ದನ್ನು ಅವರ ವಚನಗಳಲ್ಲಿ ಕಾಣಬಹುದು.
ಕೃಷಿಯ ಮಾಡಿ ಉಣ್ಣದೆ ಹಸಿವು ಹರಿವ
ಪರಿ ಇನ್ನೆಂತೊ ಕರ್ಮ ಯೋಗವ
ಮಾಡದೆ ಸುಚಿತ್ತವನರಿವ ಪರಿ ಇಇನ್ನೆಂತೊ
ಬೇಯದ ಆಶವನುಂಬ ತಾವಾವುದು
ಕಪಿಲ ಸಿದ್ದ ಮಲ್ಲಿಕಾರ್ಜುನ ಲಿಂಗಕ್ಕೆ.
(ಸ ವ ಸಂ 4- ವ ಸಂ 1371 ಪು ಸಂ 369)
ಶರಣರಲ್ಲಿ ಕಂಡು ಬರುವ ಒಕ್ಕಲುತನ ಬೇಸಾಯ ಕೃಷಿ ಮುಂತಾದ ಪದಗಳು ಶ್ರಮ ಸಂಸ್ಕೃತಿಯನ್ನು ಬಿಂಬಿಸುವ ಮೇರು ಪದಗಳಾಗಿವೆ. ಒಕ್ಕಲುತನ ರೈತ ಕಾರ್ಮಿಕ ಆಯಗಾರರೆಂದು ಗುರುತಿಸಿಕೊಳ್ಳುವ ಸಂಘಟಿತ ಶ್ರಮ ಸಂಸ್ಕೃತಿಯಾಗಿದೆ. ಕೃಷಿ ಸಂಸ್ಕೃತಿಯಲ್ಲಿ ಲೋಕ ಕಲ್ಯಾಣ ಕಂಡಂತಹ ಶರಣರು ಕಾಯಕದಲ್ಲಿ ಮುಕ್ತಿಯನ್ನು ಕಾಣಬೇಕೆಂಬ ಆಶಯ ಅವರದು.
ನಿಸ್ವಾರ್ಥ ಸೇವೆಯೇ ಕರ್ಮ ಯೋಗ. ಚಿತ್ತ ಶುದ್ದಿಯ ಮೂಲಕ ಫಲದ ಆಶೆಯನ್ನು ಬಿಟ್ಟು ಕರ್ಮಯೋಗ ಮಾಡಬೇಕು. ಫಲದ ಆಶೆಯಿಂದ ಕರ್ಮಯೋಗ ಮಾಡಿದರೆ ಫಲವನ್ನು ಭೋಗಿಸಲೇಬೇಕಾಗುತ್ತದೆ. ಇದು ಸಂಸಾರದ ಬಂಧನಕ್ಕೆ ಕಾರಣವಾಗುತ್ತದೆ. ಫಲದ ಆಶೆ ಇಲ್ಲದವನು ಧ್ಯಾನ ಯೋಗವನ್ನು ಬಯಸುತ್ತಾನೆ. ರೈತನು ಪರಿಸರ ಭೂ ರಕ್ಷಣೆ ಮಾಡಿದರೆ ಸುಚಿತ್ತ ಮನದಿಂದ ಕರ್ಮ ಯೋಗ ಮಾಡಲು ಸಾಧ್ಯವಾಗುತ್ತದೆ. ರೈತನ ದುಡಿಮೆ ಮನುಕುಲ ಮತ್ತು ಜೀವ ಸಂಕುಲ ಈ ಕಾಯಕದಲ್ಲಿ ಸಂತಸವನ್ನು ಕಾಣುವುದು ಇದನ್ನೇ ಶರಣ ಸಿದ್ದರಾಮರು ಹೇಳುವಂತೆ ಆಶವನುಂಬ ತಾವಾವುದು ಮಲ್ಲಿಕಾರ್ಜುನ. ಇನ್ನೊಂದು ವಚನದಲ್ಲಿ ”ಕೆರೆ ತೊರೆ ದೇಗುಲಗಳ ಕಡೆಯಿಂದ ನಿಮ್ಮ ಕಂಡೆ. ಎಡರುವ ಕಲ್ಲ ತೆಗೆವ ಮರೆಯಲ್ಲ ನಿಧಾನವ ಕಂಡಂತೆ” (1391) ಇದನ್ನು ಪ್ರಕೃತಿಯ ತತ್ವಶಾಸ್ತ್ರವೆಂದು ಸ್ಪಷ್ಟಪಡಿಸಬಹುದು. ಏಕೆಂದರೆ ಶರಣರ ವಚನಗಳಲ್ಲಿ ಪರಿಸರ ಭಕ್ತಿ ದ್ವಂದ್ವ ಆತ್ಮ ಪರಮಾತ್ಮ… ಇವುಗಳ ಮಧ್ಯದಲ್ಲಿ ಅರಿವಿನ ಪ್ರಜ್ಞೆ ಸದಾ ನಮ್ಮನ್ನು ಪ್ರೇರೇಪಿಸುತ್ತದೆ.
ಶ್ವಾನ ಎಂದರೆ ಸಾಂಪ್ರದಾಯಿಕವಾದಿಗಳಿಗೆ ಭಯ ಆಸಹನೆ… ಸಾಮಾನ್ಯ ಜೀವನದ ವಿವರಗಳು ಪ್ರಾಣಿಗಳ ರೂಪಕದ ಎತ್ತರಕ್ಕೆ ಒಯ್ದ ಶರಣರು ಆಧ್ಯಾತ್ಮಿಕ ಒಳಾರ್ಥವನ್ನು ವ್ಯಾಚ್ಯಾರ್ಥದ ಮೂಲಕ ಸ್ಪಷ್ಟಪಡಿಸಿದ್ದಾರೆ.
ಶ್ವಾನನ ಗುಣ ನೋಡದು ನೋಡಾ
ಮದಗಜವು ಕಾನನದ ಗುಣ ನೋಡದು
ನೋಡಾ ಮಹದಗ್ನಿಯು ಕಾವಳದ
ಗುಣ ನೋಡದು ನೋಡಾ ಮಹತ್ಪ್ರಕಾಶವು
ಜನನದ ಗುಣ ನೋಡದು ನೋಡಾ
ಶಿವಾನು ಭಾವ ಜ್ಞಾನವು ಜನನದ ಗುಣ
ನೋಡದು ನೋಡಾ ಕಪಿಲ ಸಿದ್ದ
ಮಲ್ಲಿಕಾರ್ಜುನನ ಪೂಜಿಸಿದ ಫಲವು
(ಸ.ವ.ಸಂ 4.- ಪು. ಸಂ-508- ವ- ಸಂ1780)
ಅಹಂಕಾರ ತಂಬಿದ ಆನೆ ನಡೆದುಹೋಗುತ್ತಿದ್ದರೆ ನಾಯಿ ಬೊಗಳುವುದನ್ನು ಕೇಳುವುದೇ ಇಲ್ಲ. ಏಕೆಂದರೆ ನಾಯಿ ವಿಭಿನ್ನ ಇಂದ್ರಿಯಗಳ ಸಂವೇದನೆಯನ್ನು ಗ್ರಹಿಸುವ ಮೂಲಕ ಮನುಷ್ಯರ ಸ್ವಭಾವಗಳನ್ನು ಕಂಡು ಹಿಡಿಯುತ್ತದೆ. ನಾಯಿ ಸಾಮಾನ್ಯವಾಗಿ ಮನುಷ್ಯನಿಗೆ ಸಹಾಯ ಮತ್ತು ಅದೃಷ್ಟವನ್ನು ಉಂಟು ಮಾಡುವ ಪ್ರಾಣಿಯಾಗಿದೆ. ಮನುಷ್ಯನು ಗ್ರಹಿಸದ ಶಕ್ತಿಯನ್ನು ಶ್ವಾನ ಪ್ರತಿಕ್ರಿಯಿಸುತ್ತದೆ. ಮದ ತುಂಬಿದ ಆನೆಯನ್ನು ಕೆಣಕಲು ಶ್ವಾನನ ಗುಣ ನೋಡದು ನೋಡಾ ಎಂದರೆ ವೈಚಾರಿಕತೆಯ ಆಶಯಗಳು ಆತ್ಮೀಯತೆಯನ್ನು ಬಿಂಬಿಸುತ್ತವೆ. ಪ್ರಭುವಿನ ವಚನದ ಸಾಲು ಇದೇ ಅರ್ಥವನ್ನು ಕೊಡುತ್ತದೆ.
“ಸಂಸಾರವೆಂಬ ಹೆಣ ಬಿದ್ದರೆ ತಿನ ಬಂದ ನಾಯ ಜಗಳ ನೋಡಿರೋ” … ಶಾಂತವಾದ ಕಾನನದಲ್ಲಿ ಅಗ್ನಿ ಇದೆ. ಮನಸ್ಸು ಶಾಂತತೆಯನ್ನು ಬಯಸಿದರು ಕೊಳಕಾದ ಮನದಲ್ಲಿ ಅಗ್ನಿ ಅಡಗಿರುತ್ತದೆ. ಕಾವಳದ ಗುಣ ತಂಪಾದರು ಪ್ರಕೃತಿಯಲ್ಲಿ ಇಬ್ಬನಿಯನ್ನು ನೀಡಿ ಪರಿಸರವನ್ನು ರಕ್ಷಿಸುತ್ತದೆ. ಜ್ಞಾನಿಯಾದವನೇ ಶಿವಾನುಭಾವದ ದಿವ್ಯ ಶಕ್ತಿಯನ್ನು ಪಡೆದಿರುತ್ತಾನೆ. ಪ್ರಕೃತಿಯಲ್ಲಿ ಕಂಡ ಪರಶಕ್ತಿಯ ಸತ್ಯ… ಶ್ವಾನ ಕಾನನ ಜನನ ಶಬ್ದಗಳು ಶಿವ ತತ್ವದ ಆವರಣಗಳನ್ನು ಒಳಗೊಂಡ ತತ್ವಗಳಾಗಿವೆ.
ವಚನಗಳ ಪ್ರಸ್ತುತತೆ ಎನ್ನುವುದು ವಿಶೇಷವಾದ ರೋಮಾಂಚನ ಕೊಡುತ್ತದೆ. ”ಮಾತುಳ್ಳನ್ನಕ್ಕ ದೇಹ ಹಿಂಗದು ನೆನಹು ಉಳ್ಳನ್ನಕ್ಕ ಪ್ರಾಣ ಸೂತಕ ಬಿಡದು” (1362) ಎನ್ನುವ ಎಚ್ಚರದ ಮಾತುಗಳು ಸದಾ ನಮಗೆ ಬೆಳಕನ್ನು ನೀಡಿ ಎಚ್ಚರಿಸುತ್ತದೆ. ಶರಣ ಸಿದ್ದರಾಮರ ವಚನ ತತ್ವಗಳು ಇಂದಿಗೂ ಕನ್ನಡ ಭಾಷೆಯ ನೆನಪಿನಂಗಳದಲ್ಲಿ ಜನಪದ ಭಾಷೆಯಲ್ಲಿ ತತ್ವಪದಗಳಲ್ಲಿ ಅರಳಿ ವಚನ ಭಾಷೆಯ ಮೇರುತನವನ್ನು ಬಿಂಬಿಸುತ್ತವೆ.
ಡಾ. ಸರ್ವಮಂಗಳ ಸಕ್ರಿ,
ಲೇಖಕರು,
ಅಧ್ಯಕ್ಷರು,
ಜಾಗತಿಕ ಲಿಂಗಾಯತ ಮಹಾಸಭ,
ಮಹಿಳಾ ಘಟಕ,
ರಾಯಚೂರು.
ಮೋಬೈಲ್ ಸಂ. 94499 46839.
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನಸಾಹಿತ್ಯ ಮಂದಾರ ಫೌಂಡೇಶನ್ ದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in