ಶರಣ ಸಗರದ ಬೊಮ್ಮಣ್ಣನವರ ವಚನ ವಿಶ್ಲೇಷಣೆ / ಡಾ. ಪ್ರದೀಪಕುಮಾರ ಹೆಬ್ರಿ, ಮಂಡ್ಯ.

ಇದು ಸಗರದ ಬೊಮ್ಮಣ್ಣ ನವರ ವಚನ. ಇವರು ಯಾದಗಿರಿ ಜಿಲ್ಲೆಯ “ಸಗರ ಗ್ರಾಮದವರು. ಇವರ ಪತ್ನಿ ಶಿವದೇವಿ. ಶಿವನಿಲ್ಲದೆ ಅನ್ಯ ದೈವವಿಲ್ಲವೆಂಬ ವೀರ ನಿಷ್ಠೆಯವರಿವರು, “ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರ” ವಚನಾಂಕಿತದಿಂದ ಬರೆದ 92 ವಚನಗಳು ಇಲ್ಲಿಯವರೆಗೆ ಲಭ್ಯವಾಗಿವೆ.

ಇವರ ಪ್ರಸ್ತುತ ಈ ವಚನದಲ್ಲಿ ದೇವರ ಬಗೆಗಿನ ಧನ್ಯತಾ ಭಾವದ ಆನಂದ ಹೆಪ್ಪುಗಟ್ಟಿದೆ. ಭಗವದ್ ದರ್ಶನದಿಂದ ಎಲ್ಲ ಕೊಳೆಗಳು ಅಳಿಸಿ ಹೋದವು ಎಂಬ ಆನಂದದ ಅನುಭೂತಿ ಇದೆ. ಭಗವಂತನ ಕರುಣೆಯಿಂದಲೆ ನನ್ನ ಅಸ್ತಿತ್ವ ಎಂಬ ಶರಣಾಗತಿಯಿದೆ.

ಭಗವಂತನನ್ನು ಕುರಿತು ಅನೇಕರು ಅನೇಕ ರೀತಿಯಲ್ಲಿ ಪಡಿನುಡಿಗಳನ್ನಾಡಿದ್ದಾರೆ. ಆ ಮಾತುಗಳಲ್ಲಿ ಭಗವಂತನ ಭಾವಚಿತ್ರ ಮೂಡಿ ಅರಳಿದೆ. ಆದರೆ ಒಂದಂತೂ ಸತ್ಯ, ದೇವರನ್ನು ಬಣ್ಣಗಳಲ್ಲಿ ಮೂಡಿಸಲು ಅಸಾಧ್ಯ ಕಲ್ಲಿನಲ್ಲಿ ಕೆತ್ತಲು ಅಸಾಧ್ಯ. ಆದರೆ ಶಬ್ದಗಳಿಂದ ವರ್ಣಿಸಬಹುದು. ಕಣ್ಣಿಗೆ ಕಟ್ಟುವಂತೆ ದರ್ಶಿಸಲು ನೆರವಾಗಬಹುದು. ಹಾಗಾಗಿಯೇ ಮಾತೆಂಬುದು ಜ್ಯೋತಿರ್ಲಿಂಗ.

ಈ ವಚನಕಾರರು ಹೇಳುವುದು ಹೀಗೆ: “ಓ ಭಗವಂತ! ನಿಮ್ಮ ದರ್ಶನದಿಂದ ನನ್ನ ಕಣ್ಣುಗಳಿಗೆ ಅಂಟಿದ್ದ ಸೂತಕ ತೊಲಗಿ ಅವು ಶಿವಮಯವಾದವು. ನಿಮ್ಮನ್ನು ನಿರಂತರ ಧ್ಯಾನಿಸುತ್ತಿದ್ದುದರಿಂದ ನನ್ನ ಮನಸ್ಸಿಗೆ ಅಂಟಿದ್ದ ಪಾಪಗಳೆಲ್ಲವೂ ಕಳೆದು ಅವ್ರು ಶಿವಮಯವಾದವು. ನಿಮ್ಮನ್ನು ಕುರಿತು ಚಿಂತನೆ ಮಾಡುತ್ತ ಪಡೆದ ಬೆಳಕಿನಿಂದ ಎಲ್ಲಾ ರೀತಿಯ ಭ್ರಾಂತಿಗಳು ದೂರವಾಗಿ ಬಿಟ್ಟವು. ಲೋಕದ ಬಗೆ ಬಗೆಯ ಭೇದೋಪಾಯಗಳೆಲ್ಲವೂ ನಿಮ್ಮ ಕರುಣೆಯಿಂದ ದೂರವಾಗಿ ನಿಮ್ಮಲ್ಲೇ ನಾನು ಸೇರಿಹೋಗಿ ನೀವೇ ಆಗಿದ್ದೇನೆ.

ಭಗವಂತನು ನಿತ್ಯ ನಿರಾಕಾರ, ಸತ್ಯ ಸಾಕಾರ. ಮನಸ್ಸಿಗೂ ನಿಲುಕದವನು ಭಗವಂತ. ಭಾಷೆಯಿಂದ ಮಾತ್ರ ಅವನನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯ. ಶರಣರೂ ಅದೇ ಮಾಧ್ಯಮವನ್ನು ಅಂಗೀಕರಿಸಿದರು. ಶಕ್ತಿಯುತವಾದ ನುಡಿಗಳಿಂದ ಬ್ರಹ್ಮ ಸಾಕ್ಷಾತ್ಕಾರಕ್ಕೆ ಮುಂದಾದರು. ತಮಗೆ ಒಲಿದ ಭಗವಂತನ ದರ್ಶನವನ್ನು ಮಾತುಗಳಿಂದಲೇ ಜನ ಸಾಮಾನ್ಯರಿಗೂ ಮಾಡಿಸಿದರು.

ದೇವರು ಇರುವುದು ನಿಜಭಕ್ತನ ಹೃದಯದಲ್ಲಿ, ದೇವರಿಗಾಗಿ ಗುಡಿ –  ಮಂದಿರಗಳನ್ನು ಕಟ್ಟುವುದು ಸಲ್ಲದ ಕೆಲಸ, ದೇವರನ್ನು ಒಳಗಿರಿಸಿಕೊಳ್ಳಬಹುದೇ ಹೊರತು ಬಂಧಿಸಿಡಲು ಸಾಧ್ಯವೇ? ನಿಜಭಕ್ತನ ಹೃದಯ ಮಂದಿರ ಅಥವಾ ಎದೆ ಗುಡಿಯೆಂಬುದು ಪ್ರೇಮದ ಗಾರೆಯಿಂದ ಕಟ್ಟಲ್ಪಟ್ಟುದು. ಭಿತ್ತಿಗಳೇ ಇಲ್ಲದಿರುವಂತಹ, ಅಹಂ, ಮಮಕಾರ, ಅಳಿಯಾಸೆ, ಆಮಿಷ, ಸಂಕಲ್ಪಗಳ ಸೊಲ್ಲಿಲ್ಲದಂತಿರುವುದು. ಹೀಗೆ ನಮ್ಮೆಲ್ಲರ ಬದುಕಿನ ಕೊಳೆ ಕಲ್ಮಶ ಕಳೆದು ನಿರ್ಮಲತೆಯನ್ನು ಪ್ರಸಾದಿಸುವ, ಸಮಸ್ತ ಜಗತ್ತಿಗೆ ಆಶ್ರಯವಾದ ದೇವನಿಗಿರುವ ಆಶ್ರಯ ಭಕ್ತಿ ದೇಗುಲ!

ಇಲ್ಲಿ ವಿಶ್ವಕವಿ ರವೀಂದ್ರನಾಥ ಟಾಗೋರರ ಒಂದು ಮಾತನ್ನು ಉಲ್ಲೇಖಿಸಬಹುದು:

“ನಾನು ನನ್ನ ಮನೆಯನ್ನು ಗುಡಿಸಿದೆ, ಸಾರಿಸಿದೆ, ಸ್ವಚ್ಛವಾಗಿ ಒರೆಸಿದೆ. ಧೂಪವನ್ನು ಹಾಕಿದೆ. ಹಾಸಿದೆ. ಒಂದು ದೀಪವನ್ನು ಹಚ್ಚಿ ಇಟ್ಟೆ, ಭಗವಂತನೇದೀಪಸ್ವಚ್ಛವಾದ ವಾತಾವರಣ ಮನೆಯೊಳಗಿದೆ. ನಾನೀಗ ಹೊಸ್ತಿಲಲ್ಲಿ ಕುಳಿತು ದಾರಿ ಕಾಯುತ್ತಿರುವೆ, ನೀನು ಯಾವಾಗಲಾದರೂ ಬಾ, ತೊಂದರೆಯಿಲ್ಲ

ಎಲ್ಲಿ ಸ್ವಚ್ಛತೆಯಿರುತ್ತದೋ ಅಲ್ಲಿ ಭಗವಂತನಿರುತ್ತಾನೆ. ನಮ್ಮ ಮನವನ್ನು ಸ್ವಚ್ಛವಾಗಿಟ್ಟುಕೊಳ್ಳೋಣ. ನಾವೇ ಭಗವಂತರಾಗುತ್ತೇವೆ. ವಚನಕಾರ ಸಗರದ ಬೊಮ್ಮಣ್ಣ ಅನುಭವಿಸುವ ಧನ್ಯತೆ ಇದೇ. ಭಗವಂತನ ಉದಯ ಶುದ್ಧ ಮನಸ್ಸಿನಲ್ಲಿ ತನ್ನಷ್ಟಕ್ಕೆ ತಾನೇ ಉಂಟಾಗುತ್ತದೆ. ಇಂತಹ ಅವತರಣ ನಮ್ಮ ಮನದಲ್ಲಾಗುವ ಧನ್ಯತೆಯಿಂದ ನಾವೆಲ್ಲ ಸಂಭ್ರಮಿಸೋಣ.


ಡಾ. ಪ್ರದೀಪಕುಮಾರ ಹೆಬ್ರಿ,
ಮಂಡ್ಯ.
ಮೋಬೈಲ್.‌ ನಂ. 9844018457

Loading

Leave a Reply