ಉಭಯ ಭ್ರಷ್ಟ ಲಜ್ಜೆಗೇಡಿಗಳಿಗೊಂದು ಹೆಸರು ಕೊಡಿ./ಡಾ. ಬಸವರಾಜ ಸಾದರ, ಬೆಂಗಳೂರು.
ಕಣ್ಣು ನೋಡಲು, ಕಿವಿ ಕೇಳಲು, ಮೂಗು ವಾಸಿಸಲು, ಬಾಯಿ ರುಚಿ ನೋಡಲು ಮತ್ತು ಚರ್ಮ ಸ್ಪರ್ಶಿಸಲು-ಹೀಗೆ ಮನುಷ್ಯನ ಪಂಚೇಂದ್ರಿಯಗಳು, ತಮಗೆ ಅವಕಾಶವಿರುವ ಮಾರ್ಗಗಳ ಮೂಲಕ ತಮ್ಮ ಆಸೆ-ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಸದಾ ಪಹಪಿಸುತ್ತಿರುತ್ತವೆ ಮತ್ತು ಹವಣಿಸುತ್ತಿರುತ್ತವೆ. ಮನಸ್ಸೆಂಬ ಮಹಾನಿಯಂತ್ರಕಶಕ್ತಿಯು ಪಂಚೇಂದ್ರಿಯಗಳ ಮೂಲಕವೇ ತನ್ನ ಸಕಾರಾತ್ಮಕ ಮತ್ತು ನಕಾರಾತ್ಮಕ, ಎರಡೂ ಬಗೆಯ ಅಪೇಕ್ಷೆಗಳನ್ನು ಈಡೇರಿಸಿಕೊಳ್ಳುತ್ತದೆ. ಮನುಷ್ಯನ ಭಾವಕೋಶದೊಂದಿಗೆ ಬಿಡಿಸಿಕೊಳ್ಳಲಾರದಂತೆ ಬೆಸೆದುಕೊಂಡಿರುವ ಈ ಮನಸ್ಸು ಮತ್ತು ಪಂಚೇಂದ್ರಿಯಗಳ ಬೇಡಿಕೆಗಳನ್ನು ನಿರಾಕರಿಸುವುದು ಅಷ್ಟೇನೂ ಸುಲಭದ ಕೆಲಸವಲ್ಲ. ಈ ಕಾರಣಕ್ಕಾಗಿಯೇ ಮನುಷ್ಯ ಅವುಗಳ ಬೇಡಿಕೆಗಳನ್ನು ಈಡೇರಿಸಲು ಒಳ್ಳೆಯ ಕೆಲಸಗಳಂತೆಯೇ ಕೆಟ್ಟ ಕೆಲಸಗಳನ್ನೂ ಮಾಡುತ್ತಾನೆ.…