Fiscal Policy: ವಚನಕಾರರು ಕಂಡಂತೆ ವಿತ್ತೀಯ ಕಾರ್ಯನೀತಿ ಒಂದು ಅನುಪಮ ಸಮಕಾಲೀನ ಚಿತ್ರಣ

ಅಮರಾವತಿಯ | ಪಟ್ಟಣದೊಳಗೆ ||
ದೇವೇಂದ್ರನಾಳುವ | ನಂದನವನವಯ್ಯಾ ||
ಅತ್ತ ಸಾರಲೆ ಕಾಮಯ್ಯ | ಮೋಹವೇ ನಿನಗೆ? ||
ಲೋಕಾದಿಲೋಕವೆಲ್ಲವ | ಮರುಳು ಮಾಡಿದೆ ||
ಕಾಮಾ | ಗುಹೇಶ್ವರಲಿಂಗವನರಿಯೊ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-149 / ವಚನ ಸಂಖ್ಯೆ-131)

ದೇವೇಂದ್ರನ ರಾಜಧಾನಿ ಅಮರಾವತಿಯು ಅಮರರಾದ ದೇವಾನು-ದೇವತೆಗಳ ವಾಸಸ್ಥಾನ ಎನ್ನುವುದು ದ್ವೈತ ತತ್ವವನ್ನು ನಂಬುವ ಜನಗಳ ಕಲ್ಪನೆ. ಅದು ಫಲಭರಿತ ಹಣ್ಣುಗಳು, ಸುಗಂಧ ಸುವಾಸನೆ ಬೀರುವ ಹೂವುಗಳು ಮತ್ತು ಸೇವಕಿಯರು ಮುಂತಾದವುಗಳಿಂದ ಕೂಡಿ ಪಂಚೇಂದ್ರಿಯಗಳಿಗೆ ಆನಂದದ ಅನುಭವವನ್ನು ನೀಡುವ ಲೋಕ. ಕಾಮನೇ, ಮೋಹದಿಂದೊಡಗೂಡಿದ ಲೋಕದ ಜನರನ್ನು ಕಾಡುವ ಬದಲು ನಿನಗೆ ಯೋಗ್ಯ ಸ್ಥಳವಾದ ದೇವೇಂದ್ರನ ಅಮರಾವತಿಯನ್ನು ಸೇರು. ಸಾಧಕರನ್ನು ವಿಚಲಿಗೊಳ್ಳುವಂತೆ ಮಾಡಿರುವೆ ನೀನು. ನಿನ್ನ ಮಾಯಾ ವಿಲಾಸದಿಂದ ಲೋಕದ ಜನರನ್ನು ಮರುಳು ಮಾಡುವುದನ್ನು ನಿಲ್ಲಿಸು. ಅಂತರಂಗದ ಅರಿವನ್ನು ಅರಿತುಕೊಳ್ಳುವ ತವಕದಲ್ಲಿರುವವರನ್ನು ಮೋಹಗೊಳಿಸಬೇಡ. ಕಾಮನೇ ಗುಹೇಶ್ವರಲಿಂಗವನ್ನು ಅರಿತುಕೊಳ್ಳುವ ಪ್ರಯತ್ನ ಮಾಡು. ಅಲ್ಲಮ ಪ್ರಭುಗಳು ಅತ್ಯಂತ ಮಾರ್ಮಿಕವಾಗಿ ಮಾಯಾ-ಮೋಹದ ಆಮಿಷಗಳನ್ನು ದೇವೇಂದ್ರನ ಅಮರಾವತಿಯ ಪ್ರತಿಮೆಯೊಂದಿಗೆ ಜೋಡಿಸಿ ನಿರೂಪಿಸಿದ್ದಾರೆ.

ಬಸವಾದಿ ಶರಣರು 12 ನೇ ಶತಮಾನದಲ್ಲಿಯೇ ತಮ್ಮ ಅನುಭವ-ಅನುಭಾವಗಳನ್ನು ವಚನಗಳ ಮೂಲಕ ಕ್ರೋಢೀಕರಿಸಿ ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಮಾಡಿದರು. ಸರಿ ಸುಮಾರು 900 ವರ್ಷಗಳಾದರೂ ಈಗಲೂ ಪ್ರಸ್ತುತವೆನಿಸುತ್ತವೆ. ವಚನಕಾರರು ಕೇವಲ ಸಾಮಾಜಿಕ ಮತ್ತು ಆಧ್ಯಾತ್ಮಿಕ ವಿಚಾರಗಳನ್ನು ಮಾತ್ರವೇ ಚಿಂತನೆಗೊಳಪಡಿಸದೇ ಆಧುನಿಕ ಜಗತ್ತಿನ ವಿವಿಧ ಆಯಾಮಗಳನ್ನು ಈ ವಚನಗಳ ಮೂಲಕ ಪರಿಚಯಿಸಿದ್ದನ್ನು ನಾವು ಕಾಣಬಹುದು. ಅವುಗಳಲ್ಲಿ ಆರ್ಥಿಕ ನೀತಿಗಳನ್ನು ಪರಿಚಯಿಸುವುದು ಈ ಲೇಖನದ ಮೂಲ ಉದ್ದೇಶ.

Fiscal Policy ಅಂದರೇನು ಎನ್ನುವುದನ್ನು ಡಾ. ಪಾರ್ಥಸಾರಥಿ ಶೋಮೆ ಅವರು ಸಂಪಾದಿಸಿದ Fiscal Policy, Public Policy & Governance” ಪುಸ್ತಕದಿಂದ ತಿಳಿದುಕೊಳ್ಳೋಣ.

  • ಲ್ಯಾಟಿನ್‌ ಭಾಷೆಯಲ್ಲಿ “ಫಿಸ್ಕಸ್‌” ಅಂದರೆ ಹಣವಿಡುವ ಸಣ್ಣ ಚೀಲ ಅಥವಾ ಜೇಬು.
  • ಲ್ಯಾಟಿನ್‌ ಭಾಷೆಯಿಂದ ಬಂದಿರುವ “ಫಿಸ್ಕ್‌” ಎನ್ನುವ ಪದದ ಅರ್ಥ “ರಾಜ್ಯದ ಬೊಕ್ಕಸ”
  • ಇದರಿಂದ ತದ್ಭವವಾಗಿರುವ ಪದಪುಂಜ “ವಿತ್ತೀಯ ಕಾರ್ಯನೀತಿ (Fiscal Policy)” ಯ ಮೂಲಭೂತ ಕಾರ್ಯ ಎಂದರೆ, ರಾಜ್ಯದ ಬೊಕ್ಕಸವನ್ನು ಸಾಮಾಜಿಕ ಆರ್ಥಿಕ ಅಭಿವೃದ್ಧಿಗೊಳಿಸಲು ಹಣಕಾಸನ್ನು ಸದುಪಯೋಗಗೊಳಿಸುವುದು.
  • “ವಿತ್ತೀಯ ಕಾರ್ಯನೀತಿ (Fiscal Policy)” ಗಳು ರಾಷ್ಟ್ರದ ಅಭಿವೃದ್ಧಿ ಮತ್ತು ಮಾನವ ಸಂಪನ್ಮೂಲಗಳ ಅಭಿವೃದ್ಧಿಯ ಜೊತೆಗೆ ಜನ ಜೀವನವನ್ನು ಸುಧಾರಿಸುವತ್ತ ಸಾಗುವ ಸಶಕ್ತ ಸಾಧನ.  

ಇದನ್ನು ವಚನಕಾರರೂ ಸಹ ತಮ್ಮ ವಚನಗಳಲ್ಲಿ ನಿರೂಪಿಸಿದ್ದಾರೆ. ಶರಣ ಗಾವುದಿ ಮಾಚಯ್ಯನವರ ಈ ವಚನದಲ್ಲಿ ಆಧ್ಯಾತ್ಮದ ಜೊತೆ ಜೊತೆಗೆ ಹಣ ಗಳಿಕೆ ಮತ್ತು ಅದರ ಸದುಪಯೋಗದ ಮಹತ್ವವನ್ನು ತಿಳಿಸುತ್ತಾ Fiscal Policy ಗೆ ಒಂದು ವೇದಿಕೆಯನ್ನು ಒದಗಿಸಿದ್ದಾರೆ.

ಭಕ್ತರು | ದ್ರವ್ಯವ ಗಳಿಸಿದಲ್ಲಿ ||
ತಮ್ಮ ತನುವಿದ್ದಲ್ಲಿಯೆ | ಗುರು ಲಿಂಗ ಜಂಗಮಕ್ಕರ್ಪಿಸುವುದು ||
ಇದೇ | ಸದ್ಭಕ್ತಿಯ ಹೊಲಬು ||
ತಾನಳಿದು ಮತ್ತೆ | ಮನೆಮಕ್ಕಳಿಗೆಂದಡೆ ||
ಅದೆ ಆಚಾರಕ್ಕೆ ಭಂಗ | ಆತ ಸ್ವಾಮಿಗೆ ಸ್ವಾಮಿದ್ರೋಹಿ ||
ಇದನರಿದು ಕಲ್ಯಾಣದ | ತ್ರಿಪುರಾಂತಕಲಿಂಗದಲ್ಲಿ ||
ಗಾವುದಿ ಮಾಚಯ್ಯ | ಹೇಳಿದುದ ಕೇಳಿ ||
ಎಲ್ಲರೂ | ಸತ್ಯವೆನ್ನಿರಣ್ಣಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1228 / ವಚನ ಸಂಖ್ಯೆ-277)

ಪ್ರಾಮಾಣಿಕ ದುಡಿಮೆಯಿಂದ ಬಂದ ಫಲವನ್ನು ಪ್ರಸಾದವೆಂದು ಸ್ವೀಕರಿಸಿದವರು 12 ನೇ ಶತಮಾನದ ಶರಣರು. ಕಾಯಕ ಜೀವಿಗಳಾದ ಶರಣರು ತಾವು ಗಳಿಸಿದ ಫಲವನ್ನು ತಮಗೆ ಬೇಕಾದಷ್ಟನ್ನು ಇರಿಸಿಕೊಂಡು ಉಳಿದದ್ದನ್ನು ನಿಷ್ಕಾಮದಿಂದ ಜಂಗಮಕ್ಕೆ ಅಂದರೆ ಸಮಷ್ಠಿಗೆ ಸಮರ್ಪಿಸಿದವರು. ಇದು ನಿಜವಾದ “ವಿತ್ತೀಯ ಕಾರ್ಯನೀತಿ (Fiscal Policy)”. ಹೀಗೆ ಭಕ್ತನು ತನ್ನ ದುಡಿಮೆಯ ಫಲವನ್ನು ಸಮಷ್ಠಿಗೆ ಅರ್ಪಿಸಿದಾಗ ಅದು ತನಗೆ ಬೇಕಾದ ಹಾಗೆ ಅದನ್ನು ಉಪಯೋಗಿಸದೇ ಸಮಾಜೋ-ಆರ್ಥಿಕ ಉನ್ನತಿಗಾಗಿ ಬಳಸಿದ್ದನ್ನು 12 ನೇ ಶತಮಾನದಲ್ಲಿಯೇ ನಾವು ಕಂಡುಕೊಂಡದ್ದು. ತಮ್ಮ ಎಲ್ಲ ವಚನಗಳಲ್ಲಿ ಬರೆದಂತೆ ನಡೆದರು ನಡೆದಂತೆ ನುಡಿದವರು ಶರಣರು. ಈಗ ಅದು ಆಧುನಿಕ ಜಗತ್ತಿಗೆ ವಿವಿಧ ಆಯಾಮಗಳಲ್ಲಿ ಅಂದರೆ ವಿವಿಧ Terminology ಗಳಲ್ಲಿ ತೆರೆದುಕೊಂಡಿರುವುದನ್ನು ನಾವು ಗಮನಿಸಬಹುದು. ಹಾಗಾಗಿ ಅದ್ಭುತ ಸಂಸ್ಕೃತಿ, ಮಹೋನ್ನತ ಪರಂಪರೆ ಮತ್ತು ಸಮಾಜೋ-ಆರ್ಥಿಕ ಚಿಂತನೆಗಳಿಂದ ಇಂದಿಗೂ ನಾವು ವಚನಗಳನ್ನು ಗೌರವದಿಂದ ಕಾಣುತ್ತೇವೆ.

ಬೃಹದರ್ಥಶಾಸ್ತ್ರ (Macroeconomics) ಸಮಗ್ರ ಆರ್ಥಿಕ ನಿರ್ವಹಣೆ, ಸ್ವರೂಪ, ವರ್ತನೆ ಹಾಗೂ ತೀರ್ಮಾನ ತಳೆಯುವಿಕೆಯೊಂದಿಗೆ ಅದು ವ್ಯವಹರಿಸುತ್ತದೆ. ಇಲ್ಲಿ ತಿಳಿಸಿರುವ ಸಮಗ್ರ ಆರ್ಥಿಕತೆಯು ಒಂದು ರಾಷ್ಟ್ರೀಯ, ಪ್ರಾದೇಶಿಕ ಅಥವಾ ಜಾಗತಿಕ ಆರ್ಥಿಕತೆಯ ಸ್ವರೂಪದಲ್ಲಿರಬಹುದು. ವ್ಯಷ್ಠಿ ಆರ್ಥಶಾಸ್ತ್ರದ ಜೊತೆಯಲ್ಲಿ ಸೇರಿಕೊಂಡು ಬೃಹದರ್ಥಶಾಸ್ತ್ರವು ಸಾರ್ವತ್ರಿಕ ಕ್ಷೇತ್ರದ ಅರ್ಥವ್ಯವಸ್ಥೆಯ ಸ್ವರೂಪವನ್ನು ತಿಳಿಸುವಲ್ಲಿ ಸಹಾಯ ಮಾಡುತ್ತದೆ. ರಾಷ್ಟ್ರೀಯ ಆದಾಯ (GDP) ದ ಏರಿಳಿತದ ಕಾರಣಗಳು ಮತ್ತು ಪರಿಣಾಮಗಳನ್ನು ಅರ್ಥೈಸಿಕೊಳ್ಳುವಲ್ಲಿ ಪೂರಕ ವಾತಾವರಣ ನಿರ್ಮಿಸುತ್ತದೆ.

ಬೃಹದರ್ಥಶಾಸ್ತ್ರ (Macroeconomics) ದ ಒಂದು ಭಾಗ ವಿತ್ತೀಯ ಕಾರ್ಯನೀತಿ (Fiscal Policy). ರಾಷ್ಟ್ರದ ಅರ್ಥವ್ಯವಸ್ಥೆಯನ್ನು ಸ್ಥಿರೀಕರಣಗೊಳಿಸುವುದು ಇದರ ಮೂಲ ಉದ್ದೇಶ. ಮೂಲ ಉದ್ದೇಶಗಳನ್ನು ಅವಲೋಕನೆ ಮಾಡೋಣ.

Objectives of Fiscal Policy-ವಿತ್ತೀಯ ಕಾರ್ಯನೀತಿಗಳ ಉದ್ದೇಶಗಳು:

  • Development by effective mobilization of resources.
    ಸಂಪನ್ಮೂಲಗಳ ಕ್ರೋಢೀಕರಣ.

  • Reduction in inequalities of income and wealth.
    ಆರ್ಥಿಕ ಸಂಪನ್ಮೂಲಗಳ ಅಸಮಾನತೆಯನ್ನು ಹೋಗಲಾಡಿಸುವುದು.
  • Price stability and control of inflation.
    ಅಗತ್ಯ ವಸ್ತುಗಳ ಬೆಲೆ ಮತ್ತು ಹಣದುಬ್ಬರವನ್ನು ನಿಯಂತ್ರಣದಲ್ಲಿಡುವುದು.

  • Employment generation.
    ಸಮರ್ಪಕ ಉದ್ಯೋಗಗಳನ್ನು ಸೃಷ್ಟಿ ಮಾಡುವುದು

  • Reducing the deficit in the balance of payment.
    ವಿತ್ತೀಯ ಕೊರತೆಯನ್ನು ಸರಿದೂಗಿಸುವುದು.

  • Increasing national income (GDP).
    ದೇಶದ ಒಟ್ಟು ಆದಾಯವನ್ನು ಹೆಚ್ಚುಪಡಿಸುವುದು.

  • Development of infrastructure.
    ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು.

ಈ ಮೂಲ ಉದ್ದೇಶಗಳನ್ನು ವಚನ ಸಾಹಿತ್ಯದ ಹಿನ್ನೆಲೆಯಲ್ಲಿ ವ್ಯಾಖ್ಯಾನವನ್ನು ಮಾಡೋಣ.

  1. Development by effective mobilization of resources – ಸಂಪನ್ಮೂಲಗಳ ಕ್ರೋಢೀಕರಣ:

Effective mobilization is done by setting up basic and heavy industries like steel, chemical, fertilizers, machine tools, etc. There is strong need to build infrastructure like roads, water canals, railways, airports, education, agriculture infra-structure and health services, water and electricity supply, telecommunications, etc. that will enhance the overall economic growth of a country. This will not only generate employment, it also gives boost to economic development.

ನಮ್ಮ ಸುತ್ತ ಮುತ್ತಲಿನ ಪರಿಸರ, ಪ್ರಕೃತಿಗಳಲ್ಲಿರುವ ಎಲ್ಲ ಸಂಸಾಧನಗಳನ್ನು ತಾಂತ್ರಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬಳಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿಯತ್ತ ಸಾಗುವ ಪ್ರಕ್ರಿಯೆ ಸಂಪನ್ಮೂಲಗಳ ಅಭಿವೃದ್ಧಿ. ಇದಕ್ಕಾಗಿ ಪರಿಸರ ಮತ್ತು ಪ್ರಕೃತಿಯನ್ನು ಹಾಳು ಮಾಡದೇ ಸಮರ್ಥವಾಗಿ ಅಭಿವೃದ್ಧಿಗೆ ಬಳಸಿಕೊಳ್ಳುವ ತಂತ್ರಜ್ಞಾನ. ಮುಂದಿನ ಪೀಳಿಗೆಗೆ ಪ್ರಕೃತಿಯನ್ನು ಸಹಜವಾಗಿ ಉಳಿಸಿಕೊಳ್ಳಬೇಕೆಂಬ ಸದಾಶಯವೂ ಈ ಉದ್ದೇಶಗಳಲ್ಲೊಂದು.

ಸತ್ಯ ಶುದ್ಧ ಕಾಯಕದಿಂದ | ಬಂದ ದ್ರವ್ಯದಲ್ಲಿ ||
ಚಿತ್ತ | ವಿಚ್ಛಂದವಾಗಿರಬೇಕು ||
ನೇಮದ ಕೂಲಿಯಂದಿನ | ನಿತ್ಯ ನೇಮದಲ್ಲಿ ಸಂದಿಲ್ಲದಿರಬೇಕು ||
ನೇಮದ ಕೂಲಿಯ ಬಿಟ್ಟು | ಹೇಮದಾಸೆಗೆ ಕಾಮಿಸಿ ||
ದ್ರವ್ಯವ ಹಿಡಿದಡೆ ತಾ | ಮಾಡುವ ಸೇವೆ ನಷ್ಟವಯ್ಯಾ ||
ನಿನ್ನಾಸೆಯ ವೇಷದ ಪಾಶಕ್ಕೆ | ನೀನೆ ಹೋಗು ||
ನನಗೆ ನಮ್ಮ | ಜಂಗಮ ಪ್ರಸಾದದಾಗೆ ||
ಚಂದೇಶ್ವರಲಿಂಗಕ್ಕೆ | ಪ್ರಾಣವಯ್ಯಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1336 / ವಚನ ಸಂಖ್ಯೆ-1326)

ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.

ವಿಚ್ಛಂದ    : ಕತ್ತರಿಸು, ಕಡಿಮೆ ಮಾಡು.

ಶರಣ ನುಲಿಯ ಚಂದಯ್ಯನವರು 12 ನೇ ಶತಮಾನದ ಶ್ರೇಷ್ಠ ಕಾಯಕಯೋಗಿ. ಸತ್ಯಶುದ್ಧ ಕಾಯಕದಿಂದ ಗಳಿಸಿದ ಹಣವನ್ನು ತನಗೆ ಎಷ್ಟು ಬೇಕೋ ಅಷ್ಟನ್ನು ಉಳಿಸಿಕೊಂಡು ಉಳಿದೆಲ್ಲವನ್ನೂ ಸಮಾಜಕ್ಕಾಗಿ ಕೊಡುವುದನ್ನು ಈ ವಚನದಲ್ಲಿ ನಿರೂಪಿಸಲಾಗಿದೆ. ತನ್ನ ಪಂಚೇಂದ್ರಿಯಗಳ ಸುಖಭೋಗಗಳಿಗಾಗಿ ಹಣವನ್ನು ವ್ಯಯ ಮಾಡುವುದನ್ನು ವಿರೋಧಿಸಿದ್ದಾರೆ. ಜಂಗಮ ಪ್ರಸಾದವೆನ್ನುವುದು ಸಮಷ್ಠಿಯ ಕಲ್ಯಾಣಕ್ಕಾಗಿ ಇರುವ ತತ್ವ. ಹಾಗಾಗಿ ಸಂಪತ್ತಿನ ಕ್ರೋಢೀಕರಣ ಸಮಾಜೋದ್ಧಾರಕ್ಕಾಗಿ ಇರುವುದನ್ನು ಇಲ್ಲಿ ಸಮರ್ಥವಾಗಿ ಬಿಂಬಿಸಲಾಗಿದೆ.

2.Reduction in inequalities of income and wealth – ಆರ್ಥಿಕ ಸಂಪನ್ಮೂಲಗಳ ಅಸಮಾನತೆಯನ್ನು ಹೋಗಲಾಡಿಸುವುದು:

Its continuous efforts of all Governments in power to reduce inequalities in the society. There are many ways to do this. One way is to create an equal economical scenario is to taxing the rich more and spending more on the poor. In continuation, it creates the employment generation opportunities to poor that help them to earn.

ವಿತ್ತೀಯ ಕಾರ್ಯನೀತಿ (Fiscal Policy) ಯ ಪ್ರಮುಖ ತತ್ವ ಸಾಮಾಜದಲ್ಲಿರುವ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸುವುದು. ಇದನ್ನು 12 ನೇ ಶತಮಾನದಲ್ಲಿ ಸರ್ವ ಸಮಾನತೆಯ ಹರಿಕಾರರಾದ ಬಸವಣ್ಣನವರು ಶ್ರೇಣೀಕೃತ ಸಮಾಜದ ಸಂಕೋಲೆಗಳನ್ನು ಕಿತ್ತೆಸೆದು ಎಲ್ಲರನ್ನು ಅಪ್ಪಿಕೊಂಡು ಒಪ್ಪಿಕೊಂಡು ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತಿ ಆರ್ಥಿಕ ಸಮಾನತೆಯನ್ನು ತರುವಲ್ಲಿ ಯಶಸ್ವಿಯಾಗಿದ್ದರು. ಮನುಷ್ಯನ ಯೋಗ್ಯತೆಯನ್ನು ಅಳೆಯುವುದು ಅವರ ಆರ್ಥಿಕ ಪರಿಸ್ಥಿತಿ, ಜನ್ಮ ಅಥವಾ ಜಾತಿಯಿಂದಲ್ಲ. ಅವನ ಆಚಾರ ವಿಚಾರಗಳಿಂದ, ಗುಣ ಧರ್ಮಗಳಿಂದ ಎಂದು ಹೇಳಿದ್ದಲ್ಲದೇ ನುಡಿದಂತೆ ನಡೆದವರು ಬಸವಣ್ಣನವರು.

ಇದಕ್ಕಾಗಿ ಅವರು ಕೊಟ್ಟ ಎರಡು ಅದ್ಭುತ ತತ್ವಗಳೆಂದರೆ ಕಾಯಕ ಮತ್ತು ದಾಸೋಹ. ಈ ವಿಚಾರಧಾರೆಯನ್ನು ತೀವ್ರವಾಗಿ ಪ್ರತಿಪಾದಿಸಿದವರಲ್ಲಿ ಬಸವಣ್ಣನವರು ಅಗ್ರಗಣ್ಯರು. ವರ್ಗ ರಹಿತ, ವರ್ಣ ರಹಿತ, ಲಿಂಗಭೇದ ರಹಿತ, ಆಶ್ರಮಭೇದ ರಹಿತ, ಸಾಂಸ್ಥೀಕರಣವಲ್ಲದ, ಪೌರೋಹಿತ್ಯವಲ್ಲದ, ಶ್ರೇಷ್ಠತೆ ಮತ್ತು ಜ್ಯೇಷ್ಠತೆಯಿಲ್ಲದ ಸಮಾಜವನ್ನು ಕಟ್ಟಿ ಮುನ್ನಡೆಸುವಲ್ಲಿ ಕ್ರಾಂತಿಕಾರಿ ಹೆಜ್ಜೆಯಿಟ್ಟವರು. The only philosopher who advocated “Metamorphosis” is Basavanna. ಅವರ ವಚನದ ಮೂಲಕ ನೋಡುವ ಪ್ರಯತ್ನ ಮಾಡೋಣ.

ಭಕ್ತಿಯಿಲ್ಲದ | ಬಡವ ನಾನಯ್ಯ ||
ಕಕ್ಕಯ್ಯನ | ಮನೆಯಲ್ಲೂ ಬೇಡಿದೆ ||
ಚೆನ್ನಯ್ಯನ | ಮನೆಯಲ್ಲೂ ಬೇಡಿದೆ ||
ದಾಸಯ್ಯನ | ಮನೆಯಲ್ಲೂ ಬೇಡಿದೆ ||
ಎಲ್ಲ ಪುರಾತರು ನೆರೆದು | ಭಕ್ತಿ ಭಿಕ್ಷೆಯನಿಕ್ಕಿದೊಡೆ ||
ಎನ್ನ ಪಾತ್ರೆ ತುಂಬಿತ್ತು | ನೋಡಾ ಕೂಡಲಸಂಗಮದೇವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-36 / ವಚನ ಸಂಖ್ಯೆ-35
0)

ಸ್ವತಃ ಬಸವಣ್ಣನವರೇ “ಭಕ್ತಿಯಿಲ್ಲದ ಬಡವ ನಾನಯ್ಯ ಅಂತ ಭಕ್ತಿಯ ಭಿಕ್ಷಾಪಾತ್ರೆ ಹಿಡಿದುಕೊಂಡು ಶ್ರೇಣಿಕೃತ ಸಮಾಜದ ನಿಕೃಷ್ಠ ಜನರ ಮುಂದೆ ನಿಂತು ಭಿಕ್ಷೆ ಕೇಳಿದಾಗ ಅವರ ಮನಸ್ಥಿತಿಯನ್ನು ಒಮ್ಮೆ ಯೋಚಿಸಿ ನೋಡಿ. ನಿಮ್ಮ ಮನೆಯ ಮಗ ನಾನು ಅಂದಾಗ ಶೋಷಣೆಗೆ ಒಳಗಾಗಿದ್ದಂಥ ಅತ್ಯಂತ ಕೀಳು ಮಟ್ಟದಲ್ಲಿಂದಂಥಾ ಜನರ ಅಂತರಂಗದೊಳಗೆ ಅಡಗಿದ್ದ ಸಚೇತಕ ಶಕ್ತಿಯನ್ನು ಎಬ್ಬಿಸಿ ಹೊರಗೆ ತರುವಂಥಾ ಶಕ್ತಿ ಈ ಶಬ್ದಗಳಿಗಿದೆ. ಹಾಗಾಗಿ ಒಂದು ಸಮ ಸಮಾಜವನ್ನು ಕಟ್ಟುವಲ್ಲಿ ಮತ್ತು ಆರ್ಥಿಕ ಸಮಾನತೆಯನ್ನು ತರುವಲ್ಲಿ ಬಸವಣ್ಣನವರ ಪಾತ್ರ ಬಹಳ ದೊಡ್ಡದು.

ಕಾಯಕಕ್ಕೆ ಇಂಗ್ಲೀಷನಲ್ಲಿ ಪರ್ಯಾಯ ಶಬ್ದ ಇಲ್ಲ, at best we can say “Work”. ಬಸವಣ್ಣನವರು ಕಾಯಕಕ್ಕೆ ಕೊಡುವ Definition ಅಂದರೆ”

•   Self-Responsibility             : ತನ್ನನ್ನು ತಾನು ಸಂರಕ್ಷಿಸಿ ಕೊಳ್ಳಬೇಕಾದ ಜವಾಬ್ದಾರಿ.

•   Family Responsibility         : ತನ್ನ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ.

•   Social Responsibility           : ಜಗತ್ತಿನ ಎಲ್ಲ ಚರಾಚರ ವಸ್ತುಗಳ ಜವಾಬ್ದಾರಿ.

ಸಕಲ ಜೀವಾತ್ಮರಿಗೆ ಲೇಸನು ಬಯಸುವ ನಮ್ಮಕೂಡಲ ಸಂಗನ ಶರಣರೇ ಕುಲಜರು. ಕುಲ-ಜಾತಿಯನ್ನು ಮೀರಿದ ತತ್ವ. ಬಸವಣ್ಣನವರು ಕಾಯಕವನ್ನು ದೈವತ್ವವನ್ನು ಹೋಲಿಸುತ್ತಾರೆ. ಅದು ನೈತಿಕತೆಯಿಂದ ಕೂಡಿರಬೇಕು ಮತ್ತು ಕಾಯಕ ಇಡೀ ಸಮಾಜಕ್ಕೆ ಉಪಯುಕ್ತವಾಗಿರಬೇಕು.

3.Price stability and control of inflation – ಅಗತ್ಯ ವಸ್ತುಗಳ ಬೆಲೆ ಮತ್ತು ಹಣದುಬ್ಬರವನ್ನು ನಿಯಂತ್ರಣದಲ್ಲಿಡುವುದು:

It is very much necessary to keep the prices of essential goods and services stable under the standard economic conditions.  So, Government spends on ration and fair price shops that keep sufficient stock of food grains, so that common man should not be affected. Government subsidizes cooking gas, electricity, water and essential services like transport to maintain their prices at low level inexpensive to the common man.

ಆಡಮ್‌ ಸ್ಮಿತ್‌ (ಸ್ಕಾಟ್‌ ಲ್ಯಾಂಡ್)
(FRSA – Fellow Royal Society of Arts)
(1723 –1790)

ಆಡಮ್‌ ಸ್ಮಿತ್‌ ಸ್ಕಾಟ್‌ ಲ್ಯಾಂಡ್‌ ನ ಪ್ರಖ್ಯಾತ ಅರ್ಥಶಾಸ್ತ್ರಜ್ಞ, ತತ್ವಜ್ಞಾನಿ ಮತ್ತು ಶ್ರೇಷ್ಠ ಲೇಖಕ. ಇವರನ್ನು “ಅರ್ಥಶಾಸ್ತ್ರದ ಜನಕ” (The Father of Economics) ಅಂತಲೂ ಕರಿತಾರೆ. ಆಡಮ್‌ ಸ್ಮಿತ್‌ ಅವರ ಎರಡು ಪುಸ್ತಕಗಳು ಒಂದು The Theory of Moral Sentiments (1759)” ಮತ್ತೊಂದು Inquiry into the Nature and Causes of the Wealth of Nations (1776)” ಅತ್ಯಂತ ಪ್ರಸಿದ್ಧವಾದವುಗಳು.

ಅವರುಗಳ ಒಂದು ಪುಸ್ತಕಗಳ ವಿಮರ್ಶೆಯನ್ನು ಮಾಡುವಾಗ ಸುಪ್ರಸಿದ್ಧ ಲೇಖಕರು ಬಸವಣ್ಣವರ ಆರ್ಥಿಕ ನೀತಿಗಳಿಗೆ ಹೋಲಿಸಿ ಬರೆದಿದ್ದಾರೆ.

Basavanna’s economic thoughts emerging from Vachana Literature stands on a much higher plane in relation to those of Adam Smith, the so called “Father of Economics of the 18th Century” – as embedded in his book “Inquiry into the Nature and Causes of the Wealth of Nations” and equally so in relation to those of Karl Marx, the architect of communism of the 19th century as contained in his book “Das Capital”. We say so, because the economic ideas enshrined in the Vachana Literature stand on ethical spiritual plane as against just a materialistic plane on which others stand. Hence, they have an everlasting value and significance.

18 ನೇ ಶತಮಾನದಲ್ಲಿ “ಆರ್ಥಿಕತೆಯ ಜನಕ” ಎಂದೇ ಪ್ರಖ್ಯಾತರಾದ ಆಡಮ್‌ ಸ್ಮಿತ್‌ ಅವರು ಬರೆದಂಥಾ ಪುಸ್ತಕ Inquiry into the Nature and Causes of the Wealth of Nations ಮತ್ತು 19 ನೇ ಶತಮಾನದಲ್ಲಿ ಸಮಾತಾವಾದ (communism) ದ ಶೇಷ್ಠ ಚಿಂತಕ ಕಾರ್ಲ್‌ ಮಾರ್ಕ್ಸ್‌ ಅವರ ಪುಸ್ತಕ “ದಾಸ್‌ ಕ್ಯಾಪಿಟಲ್” ನಲ್ಲಿ ವಚನ ಸಾಹಿತ್ಯವು ಪ್ರತಿಪಾದಿಸಿದಂಥ ಯಾವುದೇ ಕಾಯಕ ಸಿದ್ಧಾಂತಗಳು ಕಂಡು ಬರುವುದಿಲ್ಲ. ವಚನ ಸಾಹಿತ್ಯದಲ್ಲಿ ಕಂಡು ಬರುವಂಥ ಆರ್ಥಿಕ ನೀತಿಯಲ್ಲಿ ಬರುವ ಕಾಯಕ ಸಿದ್ಧಾಂತವು ನೈತಿಕ ಮತ್ತು ಆಧ್ಯಾತ್ಮಿಕ ತಳಹದಿಯ ಮೇಲೆ ಪ್ರತಿಪಾದಿತವಾಗಿದೆ. ಯಾವುದೇ ಭೌತಿಕ ವಸ್ತು ಅಥವಾ ವ್ಯಕ್ತಿಯ ಮೇಲೆ ಪ್ರತಿಪಾದಿತವಾಗಿಲ್ಲ. ಇದು ವಚನ ಸಾಹಿತ್ಯದ ಶ್ರೇಷ್ಠತೆಯ ಉದಾಹರಣೆ.

 ಕಾಯಕದಲ್ಲಿ | ನಿರತನಾದೊಡೆ ||
ಗುರು ದರುಶನವಾದಡೂ | ಮರೆಯಬೇಕು ||
ಲಿಂಗ ಪೂಜೆಯಾದಡೂ | ಮರೆಯಬೇಕು ||
ಜಂಗಮ ಮುಂದೆ ನಿಂತಿದ್ದಡೂ | ಹಂಗು ಹರಿಯಬೇಕು ||
ಕಾಯಕವೇ ಕೈಲಾಸವಾದ | ಕಾರಣ ||
ಅಮರೇಶ್ವರಲಿಂಗವಾಯಿತ್ತಾದಡೂ || ಕಾಯಕದೊಳು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-36 / ವಚನ ಸಂಖ್ಯೆ-350)

ಆಯ್ದಕ್ಕಿ ಮಾರಯ್ಯನವರ ಈ ವಚನ ಕಾಯಕ ಸಿದ್ಧಾಂತದ ಶ್ರೇಷ್ಠತೆಯನ್ನು ತಿಳಿಸುತ್ತದೆ. ಆಯಗಾರರು ಎಂಬ ಕಾಯಕ ಕೇಂದ್ರೀಕೃತ ಸಾಮಾಜಿಕ ವ್ಯವಸ್ಥೆಯನ್ನು ಹುಟ್ಟು ಹಾಕಿದ ಬಸವಣ್ಣನವರು ವಿಶ್ವನಾಯಕರು ಎನ್ನಲು ಇದಕ್ಕಿಂತ ಉತ್ತಮ ಉದಾಹರಣೆ ಬೇಕಾಗಿಲ್ಲ ಅಂತ ನನಗೆ ಅನಿಸುತ್ತದೆ. ಕಾಯಕವೇ ಕೈಲಾಸ ಎನ್ನುವ ಉದಾತ್ತ ಮತ್ತು ಶ್ರೇಷ್ಠ ಪರಿಕಲ್ಪನೆ ಬಹುಶಃ ಜಗತ್ತಿನಲ್ಲಿ ಎಲ್ಲಿಯೂ ಕಾಣೋದಕ್ಕೆ ಸಾಧ್ಯವಿಲ್ಲ. ಇದು ಶರಣರ ಮತ್ತು ವಚನ ಸಾಹಿತ್ಯದ ಮಹತ್ವ.‌

ಈ ಮೂಲಕ ನಾವು ನೆನಪಿಸಿಕೊಳಬೇಕಾದ ಒಂದು ಮಹತ್ವ ಅಂದರೆ 12 ನೇ ಶತಮಾನದಲ್ಲಿ ಬಸವಣ್ಣನವರು ಜನರಲ್ಲಿದ್ದ ಸಾಮಾಜಿಕ ಬದ್ಧತೆ ಮತ್ತು ಉತ್ತರದಾಯಿತ್ವವನ್ನು ಅಂದರೆ Social Responsibility & Social Accountability ಎಚ್ಚರಿಸುವ ಮಹತ್ತರ ಕೆಲಸವನ್ನು ಮಾಡಿದರು. ಪ್ರತಿಯೊಬ್ಬರಲ್ಲಿಯೂ ಬದ್ಧತೆ ಇತ್ತು. ಈ ಬದ್ಧತೆಯನ್ನು ಶರಣರು ಎಂದೂ ಮೀರಲಿಲ್ಲಾ.

4.Employment generation – ಸಮರ್ಪಕ ಉದ್ಯೋಗಗಳನ್ನು ಸೃಷ್ಟಿ ಮಾಡುವುದು:

By setting up Industries by giving incentives like tax holidays, low rates of taxes etc. that encourage production and employment. It is also necessary to encourage setting up of small scale, cottage and village industries by the people who are having character of entrepreneurship talent.

ಬಸವಣ್ಣನವರು ಆಧುನಿಕ ಅರ್ಥ ಶಾಸ್ತ್ರದಲ್ಲಿ ಹೇಳಿರುವಂತೆ ಉದ್ಯೋಗಗಳನ್ನು ಸೃಷ್ಟಿ ಮಾಡುವ ನಿಟ್ಟಿನಲ್ಲಿ ಉತ್ಪಾದಕರನ್ನು ಸಂಘಟಿಸಿದರು. ಭಾರತ ಕೃಷಿ ಆಧಾರಿತ ದೇಶ. ಶೇಕಡ 60 ರಿಂದ 65 ರಷ್ಟು ಪ್ರಜೆಗಳು ಕೃಷಿ ಅಥವಾ ಕೃಷಿ ಆಧಾರಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Our culture is Agriculture “ನಮ್ಮದು ಕೃಷಿ ಸಂಸ್ಕೃತಿ” Agriculture is Mother of all cultures, ಎನ್ನುವದು ಭಾರತದ ಪರಿಕಲ್ಪನೆ. ಎಲ್ಲ ಕಾಯಕಗಳಿಗೂ ಮತ್ತು ಸಂಸ್ಕೃತಿಗಳಿಗೂ ತಾಯಿಯ ಸ್ಥಾನದಲ್ಲಿರುವುದೇ ವ್ಯವಸಾಯ.

ಹಾಗೆಯೇ ವ್ಯವಸಾಯ ಕೇಂದ್ರೀಕೃತ ಕೆಲಸ-ಕಾರ್ಯಗಳಿಗೆ ಬೇಕಾಗುವಂಥ ಮತ್ತು ದಿನ ನಿತ್ಯ ಬಳಕೆಗೆ ಬೇಕಾಗುವ ಪರಿಕರಗಳನ್ನು ತಯಾರಿಸುವ ಕಾಯಕ ಯೋಗಿಗಳನ್ನು ಬಸವಣ್ಣನವರು “ಆಯಗಾರರು” ಎಂದು ಕರೆದು, ಅವರ ಕಾಯಕಕ್ಕೆ ದೈವತ್ವವನ್ನು ಕಲ್ಪಿಸಿದರು. ಅರ್ಧದಷ್ಟು ಜನರು ನೇರವಾಗಿ ವ್ಯವಸಾಯದಲ್ಲಿ ತೊಡಗಿಸಿಕೊಂಡರೆ ಇನ್ನುಳಿದವರು ವ್ಯವಸಾಯಕ್ಕೆ ನೆರವಾಗುವ ಪರಿಕರಗಳನ್ನು ತಯಾರಿಸುವ ವೃತ್ತಿಯಲ್ಲಿ ತೊಡಗಿಸಿಕೊಂಡವರು. ಶರಣರೆಲ್ಲಾ ಕಾಯಕಯೋಗಿಗಳಾಗಿ ಸಂಘಟಿತರಾಗಿದ್ದರಿಂದ ಕಲ್ಯಾಣದಲ್ಲಿ ಉದ್ಯೋಗಗಳು ಸೃಷ್ಟಿಯಾಗಿ ಕಲ್ಯಾಣದಲ್ಲಿ ಉತ್ಪಾದನೆಯಿಂದ ಸಮೃದ್ಧಿಯಾಗಿ ಸಂಪದ್ಭರಿತವಾಯಿತು. ಇದನ್ನೇ 12 ನೇ ಶತಮಾನದಲ್ಲಿ ಬಸವಣ್ಣವರು ತಮ್ಮ ಒಂದು ವಚನದಲ್ಲಿ ಹೇಳಿದ್ದು.

ನಾನು ಆರಂಬವ ಮಾಡುವೆನಯ್ಯಾ | ಗುರುಪೂಜೆಗೆಂದು ||
ನಾನು ಬೆವಹಾರವ ಮಾಡುವೆನಯ್ಯಾ | ಲಿಂಗಾರ್ಚನೆಗೆಂದು ||
ನಾನು ಪರಸೇವೆಯನು ಮಾಡುವೆನಯ್ಯಾ | ಜಂಗಮ ದಾಸೋಹಕ್ಕೆಂದು ||
ನಾನಾವಾವ ಕರ್ಮಂಗಳ | ಮಾಡಿದಡೆಯು ||
ಆ ಕರ್ಮಫಲಭೋಗವ ನೀ ಕೊಡುವೆ | ಎಂಬುದ ನಾನು ಬಲ್ಲೆನು ||
ನೀ ಕೊಟ್ಟ ದ್ರವ್ಯವ ನಿಮಗಲ್ಲದೆ | ಮತ್ತೊಂದಕ್ಕೆ ಮಾಡೆನು ||
ನಿಮ್ಮ ಸೊಮ್ಮಿಂಗೆ ಸಲಿಸುವೆನು | ನಿಮ್ಮಾಣೆ ಕೂಡಲಸಂಗಮದೇವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-65 / ವಚನ ಸಂಖ್ಯೆ-709)

ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.

ಆರಂಬ    : ವ್ಯವಸಾಯ, ವೃತ್ತಿ, ಕಾಯಕ
ಬೆವಹಾರ   : ವ್ಯಾಪಾರ, ವಹಿವಾಟು
ಪರಸೇವೆ   : ಸೇವೆಗಳು, ಸೌಕರ್ಯಗಳನ್ನು ಒದಗಿಸುವುದು.

ಸೊಮ್ಮು   : ಸಂಪತ್ತು, ಸಂಬಂಧ, ಸೊಬಗು, ಸೊತ್ತು, ಆಸ್ತಿ

ಎಷ್ಟು ಅದ್ಭುತವಾಗಿ ಹೇಳುತ್ತಾರೆ ಬಸವಣ್ಣನವರು. “ಆರಂಬವ ಮಾಡುವೆನಯ್ಯಾ ಗುರುಪೂಜೆಗೆಂದು”, ಆರಂಬ ಅಂದರೆ ವ್ಯವಸಾಯ. ಎಲ್ಲ ಕಾಯಕಗಳಿಗೂ ಮತ್ತು ಸಂಸ್ಕೃತಿಗಳಿಗೂ ತಾಯಿಯ ಸ್ಥಾನದಲ್ಲಿರುವುದೇ ವ್ಯವಸಾಯ.

I start my work with agriculture. I take agriculture as a culture, which is mother of all cultures under the sun.
























ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಜಾಗೀರ ಜಾಡಲದಿನ್ನಿಯ “ನೀಲಾಂಬಿಕೆ ಬಸವ ಯೋಗಾಶ್ರಮ” ದ ಅಧ್ಯಕ್ಷರಾದ ಶ್ರೀ ವೀರಭದ್ರ ಸ್ವಾಮೀಜಿಯವರು ಹೊಲದಲ್ಲಿ ಕಾಯಕದಲ್ಲಿ ನಿರತರಾದ ಅನುಪಮ ದೃಶ್ಯ.

“ಆಯ” ಎಂದರೆ ವ್ಯವಸಾಯ ದೃಷ್ಟಿಯಲ್ಲಿ ಆದಾಯ ಅಥವಾ ಭೂಮಿಯಿಂದ ಬರುವ ಲಾಭ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೋಡಿದರೆ ವ್ಯವಸಾಯಕ್ಕೆ ಬೇಕಾದ ಸೇವೆ ಮತ್ತು ಸಲಕರಣೆಗಳನ್ನು ತಯಾರಿಸಿ ಒದಗಿಸಿ ಕೊಡುವ ಕಾಯಕ ಸಮುದಾಯಕ್ಕೆ ರೈತರು ತಾವು ಬೆಳೆದ ಕಾಳು-ಕಡಿಗಳಲ್ಲಿನ ಒಂದು ಪಾಲನ್ನು ನೀಡುವ ಪ್ರತಿಫಲಕ್ಕೆ “ಆಯ” ಎಂದು ಕರೆಯಲಾಗುತ್ತದೆ.  ಕಾರ ಅಥವಾ ಗಾರ ಪ್ರತ್ಯಯವನ್ನು ಸೇರಿಸಿ “ಆಯಗಾರ” ಎನ್ನುವ ಶಬ್ದ ಉತ್ಪತ್ತಿಯಾಗಿದೆ. ಅಂದರೆ ರೈತರ ಆದಾಯಕ್ಕೆ ಕೈ ಜೋಡಿಸುವವರು ಆಯಗಾರರು. ಉತ್ತರ ಕರ್ನಾಟಕದಲ್ಲಿ ಆಯಗಾರರಿಗೆ “ಬಾರಾಬುಲತೆ”, ಹಳೆ ಮೈಸೂರು ಭಾಗದಲ್ಲಿ “ಅಡದೆಯವರು” ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ “ಎಚ್ಚಗಾರರು” ಅಂತನೂ ಗುರುತಿಸುತ್ತಾರೆ. ಇನ್ನು ಉತ್ತರ ಭಾರತದಲ್ಲಿಯೂ ಕೂಡ ಆಯಗಾರರನ್ನು ಜಜಮಾನಿ, ಕಾಮೀನ್‌, ಫರ್ಜನ್‌, ಪರ್ಧಾನ್‌, ಕಾಮವಾಲೆ ಅಂತಲೂ ಪ್ರಾದೇಶಿಕವಾಗಿ ಕರೆಯುವುದು ರೂಢಿಯಲ್ಲಿದೆ.

ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸಮಾನತೆಯನ್ನು ಬಿಂಬಿಸುವಲ್ಲಿ ಗ್ರಾಮದಲ್ಲಿದ್ದ ಗೌಡರು, ಪಟೇಲರು, ಶಾನುಭೋಗರು, ಬಣಗಾರ, ತಳವಾರ, ತೋಟಿ, ನೀರಗಂಟಿ, ಅಕ್ಕಸಾಲಿಗ, ಕಮ್ಮಾರ, ಮಡಿವಾಳ, ಕ್ಷೌರಿಕ ಮುಂತಾದ ಎಲ್ಲ ಆಯಗಾರರೂ ತಮ್ಮ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಾ ಬರುತ್ತಾರೆ. ಪರಸ್ಪರ ಅವಲಂಬನೆ, ಕರ್ತವ್ಯವೇ ದೇವರು ಎನ್ನುವ ತತ್ವ, ನಂಬಿಕೆಗಳು ಈ ಆಯಗಾರರ ಸಿದ್ಧಾಂತಗಳು. ಅದು ಸಮೂಹ ಹೊಣೆಗಾರಿಕೆಯ ಸಂಗತಿಯಾಗಿತ್ತು. ಸುಗಮವಾದ ಜೀವನ ನಡೆಸಲು ಒಂದು ದಾರಿ ಮಾಡಿಕೊಂಡಿದ್ದ ಆಯಗಾರರನ್ನು ಕೂಲಿ ಕಾರ್ಮಿಕರನ್ನಾಗಿ ಗ್ರಾಮೀಣ ಜನರು ಎಂದೂ ನಡೆಸಿಕೊಂಡಿದ್ದಿಲ್ಲ. ಒಂದು ಸಮೂಹ, ಸಮುದಾಯ ಅಥವಾ ಆಯಾ ಪ್ರದೇಶದ ಸಂಸ್ಕೃತಿ, ಸಾಮಾಜಿಕ ಧಾರ್ಮಿಕ ಪ್ರಜ್ಞೆಯಿಂದ ಸುಗಮವಾಗಿ ನಡೆಯುವಲ್ಲಿ ಆಯಗಾರರು ಪ್ರಮುಖ ಪಾತ್ರವಹಿಸುತ್ತಾರೆ.

5.Reducing the deficit in the balance of payment – ವಿತ್ತೀಯ ಕೊರತೆಯನ್ನು ಸರಿದೂಗಿಸುವುದು:

The balance of payments of a country is account of its receipts and payment with foreign countries. When payments to other countries are more than receipts from other countries, it is called deficit. The main reason is when a country imports more than it exports. Consequently, the payments on imports to foreigners are more than the receipts from exports. In such a situation, to reduce the deficit in balance of payment account, the government discourages imports by increasing taxes on them and encourages exports by increasing subsidies and other export incentives. However, it should be noted that tax on import is not a popular measure now as it is treated as an obstacle to free flow of goods and services between countries.

ಪ್ರಪಂಚದ ಎಲ್ಲ ದುಡಿಯುವ ಮತ್ತು ಕಾಯಕ ವರ್ಗದವರಿಗೆ ಸೇರಬೇಕಾದದ್ದು ನಿಯತ ಕಾಲದಲ್ಲಿ ಬರುವ ಸಂಭಾವನೆ ಅಥವಾ ವರಮಾನ. ಈ ತತ್ವ ಸರ್ಕಾರಕ್ಕೂ ಅನ್ವಯವಾಗುತ್ತದೆ. ಖರ್ಚುಗಳಿಗಿಂತ ವರಮಾನ ಅಥವಾ ವಿತ್ತೀಯ ಆದಾಯ ಕಡಿಮೆ ಆದರೆ ಜನಸಾಮಾನ್ಯರ ಮೇಲೆ ಮತ್ತಷ್ಟು ಸುಂಕಗಳ ಹೊರೆ ಬೀಳುವದಂತೂ ಶತಸಿದ್ಧ. ಈ ತತ್ವ ಸಿದ್ಧಾಂತವನ್ನೇ 12 ನೇ ಶತಮಾನದಲ್ಲಿ ಅಲ್ಲಮ ಪ್ರಭುಗಳ ಈ ವಚನ ಪ್ರಶ್ನಾರ್ಥಕವಾಗಿ ನಿರೂಪಿಸಿದೆ. ಅಂದರೆ ಈ ಎಲ್ಲ ಸಿದ್ಧಾಂತಗಳನ್ನೂ ನಾವು ಪಾಲಿಸಿದಾಗ ಮಾತ್ರ ಆಯ-ವ್ಯಯ ಸರಿದೂಗಿಸಲು ಮಾತ್ರ ಸಾಧ್ಯ ಎನ್ನುವದಕ್ಕೆ ಉದಾಹರಣೆ.

ಬೆವಸಾಯವ ಮಾಡಿ ಮನೆಯ | ಬೀಯಕ್ಕೆ ಬತ್ತವಿಲ್ಲದಿರ್ದಡೆ ||
ಆ ಬೆವಸಾಯದ | ಘೋರವೇತಕ್ಕಯ್ಯಾ? ||
ಕ್ರಯವಿಕ್ರಯವ ಮಾಡಿ | ಮನೆಯಸಂಚ ನಡೆಯದನ್ನಕ್ಕ ||
ಆ ಕ್ರಯವಿಕ್ರಯದ | ಘೋರವೇತಕ್ಕಯ್ಯಾ? ||
ಒಡೆಯನನೋಲೈಸಿ ತನುವಿಂಗೆ | ಅಷ್ಟಭೋಗವ ಪಡೆಯದಿರ್ದಡೆ ||
ಆ ಓಲಗದ | ಘೋರವೇತಕ್ಕಯ್ಯಾ? ||
ಭಕ್ತನಾಗಿ ಭವಂ | ನಾಸ್ತಿಯಾಗದಿರ್ದಡೆ ||
ಆ ಉಪದೇಶವ ಕೊಟ್ಟ ಗುರು | ಕೊಂಡ ಶಿಷ್ಯ ||
ಇವರಿಬ್ಬರ ಮನೆಯಲಿ | ಮಾರಿ ಹೊಗಲಿ ||
ಗುಹೇಶ್ವರನೆಂಬವನತ್ತಲೆ | ಹೋಗಲಿ || 
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-143 / ವಚನ ಸಂಖ್ಯೆ-65)

ವ್ಯವಸಾಯದಿಂದ ಉತ್ಪನ್ನವಿಲ್ಲದಿದ್ದರೆ, ವ್ಯಾಪಾರ ಮಾಡಿ ಲಾಭವಿಲ್ಲದಿದ್ದರೆ, ಒಡೆಯರನ್ನು ಸಂತುಷ್ಟಗೊಳಿಸಿ ಕಾಣಿಕೆಗಳನ್ನು ಪಡೆಯದಿದ್ದರೆ, ಗುರುವಿನಿಂದ ಪಾಠ ಕಲಿಯಲು ಅವಕಾಶವಿಲ್ಲದಿದ್ದರೆ ಎಲ್ಲವೂ ವ್ಯರ್ಥ. ಅಂತೆಯೇ ಸಮಾಜದ ಎಲ್ಲ ಚರಾಚರ ವಸ್ತುಗಳಿಂದ, ಎಲ್ಲ ವರ್ಗಗಳವರ ಸಹಯೋಗದಿಂದ ಲಾಭವಾದಾಗ ಮಾತ್ರ ಸುಖಿ ಸಮಾಜ ನಿರ್ಮಾಣ ಸಾಧ್ಯ ಎನ್ನುವುದನ್ನು ಈ ವಚನದಲ್ಲಿ ನಿರೂಪಿಸಿದ್ದಾರೆ ಅಲ್ಲಮ ಪ್ರಭುಗಳು.

ಎಲ್ಲವೂ ಆಧುನಿಕ ಮತ್ತು ನಾವೇ ಶ್ರೇಷ್ಠ ಮತ್ತು ವೈಜ್ಞಾನಿಕ ಸೂತ್ರಗಳನ್ನು ಅನುಷ್ಠಾನಗೊಳಿಸಿಕೊಂಡಿದ್ದೇವೆ ಎನ್ನುವದು ನಮ್ಮ ಇಂದಿನ ಭ್ರಾಂತಿ ಎಂದರೆ ತಪ್ಪಾಗಲಾರದು. ನಾವು ಅಥವಾ ಹಿರಿಯ ಸಾಮಾಜಿಕ ಮತ್ತು ಆರ್ಥಿಕ ತಜ್ಞರು ಅಥವಾ ವಿಜ್ಞಾನಿಗಳು ಹೇಳಿರುವ ಎಲ್ಲ ಸೂತ್ರಸಿದ್ಧಾಂತಗಳನ್ನು 12 ನೇ ಶತಮಾನದ ಬಸವಾದಿ ಶರಣರು ಅನುಷ್ಠಾನಗೊಳಿಸಿ ಸುಖಿ ಮತ್ತು ಸಮ ಸಮಾಜವನ್ನು ನಿರ್ಮಾಣ ಮಾಡಿದ್ದು ನಮಗೆ ವಚನ ಸಾಹಿತ್ಯ ಮತ್ತ ಇತಿಹಾಸದಿಂದ ತಿಳಿದು ಬರುತ್ತದೆ.

ಹಸಿವು ಮುಕ್ತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಬಸವಣ್ಣನವರು ಕೊಟ್ಟ ಎರಡು ಬಹುದೊಡ್ಡ ಕೊಡುಗೆಗಳೆಂದರೆ “ಕಾಯಕ ಮತ್ತು ದಾಸೋಹ” ಕಾಯಕದಿಂದ ಬರುವ ಆದಾಯ ಮತ್ತು ದಾಸೋಹದಿಂದ ಸಮಾಜಕ್ಕೆ ಹಂಚುವ ಕೆಲಸ. ಈ ಮೂಲಕ ಸಮಾಜದ ಎಲ್ಲ ಪ್ರಜೆಗಳೂ ಆರ್ಥಿಕವಾಗಿ ಸಮಾನರಾಗಿರಬೇಕೆಂಬ ಸದಾಶಯ ಬಸವಣ್ಣನವರಿಗಿತ್ತು. ಹಾಗಾಗಿ ಆಧುನಿಕ ಜಗತ್ತಿಗೆ ಜಗತ್ತಿಗೆ ಕೊಡುವ ಅದ್ಭುತ ಸಂದೇಶವೆಂದರೆ ಸತ್ಯಶುದ್ಧ ಕಾಯಕದಿಂದ ಬಂದ ಆದಾಯವನ್ನು ತನಗೆಷ್ಟು ಬೇಕು ಅಷ್ಟನ್ನು ಮಾತ್ರ ಇಟ್ಟುಕೊಂಡು ಉಳಿದದ್ದನ್ನು ಸಮನಾಗಿ ಎಲ್ಲ ವರ್ಗದವರಿಗೆ ಹಂಚುವ ಪ್ರಕ್ರಿಯೆ. ಸಮ ಸಮಾಜದ ಸಮಾನತೆಗೆ ಬಸವಣ್ಣನವರ ಈ ವಚನ ಒಂದು ಉತ್ತಮ ನಿದರ್ಶನ.

ಲಿಂಗವ ಪೂಜಿಸಿ | ಫಲವೇನಯ್ಯಾ ||
ಸಮರತಿ ಸಮರಸ | ಸಮಕಳೆ ಸಮಸುಖವನರಿಯದನ್ನಕ್ಕ ||
ಲಿಂಗವ ಪೂಜಿಸಿ | ಫಲವೇನಯ್ಯಾ ||
ಕೂಡಲಸಂಗಮದೇವರ | ಪೂಜಿಸಿ ||
ನದಿಯೊಳಗೆ ನದಿ | ಬೆರೆಸಿದಂತಾಗದನ್ನಕ್ಕ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-83 / ವಚನ ಸಂಖ್ಯೆ-930)

ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.

ಸಮರತಿ    : ಪತ್ನಿಯನ್ನು ತನ್ನಂತೆ ಸಮವಾಗಿ ಕಾಣುವುದು.
ಸಮಕಳೆ    : ಬಂಧುಗಳನ್ನು ತನ್ನಂತೆ ಸಮವಾಗಿ ಕಾಣುವುದು.
ಸಮಸುಖ   : ಸಮಷ್ಠಿಯ ಎಲ್ಲವನ್ನೂ ತನ್ನಂತೆ ಸಮವಾಗಿ ಕಾಣುವುದು.

ಸ್ತ್ರೀಯರಲ್ಲಿ ಸಮಾನತೆ, ಬಂಧುಗಳಲ್ಲಿ ಸಮಾನತೆ ಮತ್ತು ಸಮಾಜದಲ್ಲಿ ಸಮಾನತೆ ಕಾಣದೇ ಪೂಜಿಸಿ ಏನು ಫಲ, ಎಲ್ಲವೂ ವ್ಯರ್ಥ ಅಂತಾರೆ ಬಸವಣ್ಣನವರು. ಸಮಾನ ಮತ್ತು ಸಮ-ಸಮಾಜವನ್ನು ನಿರ್ಮಿಸಲು ನಿರಂತರ ಹೋರಾಟ ಮತ್ತು ನಿಷ್ಠೆ ಅಮೂಲ್ಯವಾದ ಚಿಂತನೆ. ಇದೇ ಶರಣರ ಸಂಪತ್ತು ಮತ್ತು ಆಸ್ತಿ. ಅಂತರಂಗ ಮತ್ತು ಬಹಿರಂಗ ಶುದ್ಧಿ ಅತ್ಯವಶ್ಯಕ. ಹಾಗೆಯೇ ಬಸವಣ್ಣನವರು ಇಂಥ ನಡೆ ನುಡಿ ಶುದ್ಧಿಯಿಂದ ನಮಗೆಲ್ಲ ಬೆಳಕಾಗಿ ಬಂದರು. ಈ ವಚನ ಸಮಾಜದಲ್ಲಿ ಸಮಾನತೆಯನ್ನು ಕಾಣುವದರ ಸಂದೇಶವನ್ನು ನೀಡುತ್ತದೆ.

6.Increasing national income (GDP) – ದೇಶದ ಒಟ್ಟು ಆದಾಯವನ್ನು ಹೆಚ್ಚುಪಡಿಸುವುದು:

Gross domestic product (GDP) is a measure of the market value of all the final goods and services produced in a specific period of time by countries. The ratio of GDP to the total population of the region is the per capita GDP.

  1. The Organisation for Economic Co-operation and Development (OECD) defines GDP as “an aggregate measure of production equal to the sum of the gross values added of all resident and institutional units engaged in production and services (plus any taxes, and minus any subsidies, on products not included in the value of their outputs)”.
  2. An IMF publication states that, “GDP measures the monetary value of final goods and services that are bought by the final user, produced in a country in a given period of time (say a quarter or a year).

ಒಂದು ನಿಗದಿತ ಕಾಲಮಾಪನದಲ್ಲಿ ಅಳೆಯಲ್ಪಡುವ ಒಟ್ಟಾರೆ ದೇಶೀಯ ವಸ್ತುಗಳ ಉತ್ಪಾದನೆಯನ್ನು ಕ್ರೋಢೀಕರಿಸಿದ ಮಾರುಕಟ್ಟೆಯ ಬೆಲೆಯನ್ನು “ಒಟ್ಟು ದೇಶೀಯ ಉತ್ಪಾದನೆ” ಎನ್ನುತ್ತಾರೆ. ಬೇರೆ ಸಂಸ್ಥೆಯವರು ಇದನ್ನು ಬೇರೆ ಬೇರೆ ಅರ್ಥದಲ್ಲಿ ವ್ಯಾಖ್ಯಾನಿಸಿದ್ದಾರೆ.

  1. ಒಟ್ಟು ದೇಶೀಯ ಉತ್ಪಾದನೆ ಮತ್ತು ಅದಕ್ಕೆ ಸಮನಾದ ಗೃಹ ಉತ್ಪಾದನೆ ಹಾಗೂ ಔದ್ಯೋಗಿಕ ಉತ್ಪಾದನೆಗಳ ಜೊತೆಗೆ ಸೇವೆಗಳ ಮೌಲ್ಯವರ್ಧಿತ ಕ್ರೋಢೀಕರಿಸಿದ ಮೊತ್ತವೇ“ಒಟ್ಟು ದೇಶೀಯ ಉತ್ಪಾದನೆ” ಎಂದು The Organisation for Economic Co-operation and Development (OECD) ಎನ್ನುವ ಸಂಸ್ಥೆ ವ್ಯಾಖ್ಯಾನಿಸುತ್ತದೆ.
  2. ಅಂತಿಮವಾಗಿ ಸಿದ್ಧಗೊಂಡ ವಸ್ತುಗಳ ಮತ್ತು ಸೇವೆಗಳ ಒಟ್ಟು ಮೌಲ್ಯವರ್ಧಿತ ಮಾರುಕಟ್ಟೆಯ ಬೆಲೆಯೇ “ಒಟ್ಟು ದೇಶೀಯ ಉತ್ಪಾದನೆ” ಎಂದು The Internal Monetary Fund (IMF) ಎನ್ನುವ ಸಂಸ್ಥೆ ವ್ಯಾಖ್ಯಾನಿಸುತ್ತದೆ.       

12 ನೇ ಶತಮಾನದ ಶರಣರಾದ ಗಾವುದಿ ಮಾಚಯ್ಯನವರು ಪ್ರಬುದ್ಧ ವಚನಕಾರರು. ಅವರು “ಕಲ್ಯಾಣದ ತ್ರಿಪುರಾಂತಕಲಿಂಗದಲ್ಲಿ ಗಾವುದಿ ಮಾಚಯ್ಯ ಹೇಳಿದುದ ಕೇಳಿ ಸತ್ಯವೆನ್ನಿರಯ್ಯ” ಎನ್ನುವ ವಚನಾಂಕಿತದಿಂದ ಬರೆದ 11 ವಚನಗಳು ಇಲ್ಲಿಯವರೆಗೆ ಲಭ್ಯವಾಗಿವೆ. ತಮ್ಮ ಒಂದು ವಚನದಲ್ಲಿ ಆದಾಯ ಮತ್ತು ವ್ಯಯಗಳನ್ನು ಉಲ್ಲೇಖಿಸಿದ್ದಾರೆ. ಈ ವಚನದ ಮೂಲಕ ಒಟ್ಟು ಆದಾಯದ ಪರಿಕಲ್ಪನೆಯನ್ನು ಕಾಣಬಹುದು.   

ಭಕ್ತರು ದ್ರವ್ಯವ | ಗಳಿಸಿದಲ್ಲಿ ||
ತಮ್ಮ ತನುವಿದ್ದಲ್ಲಿಯೆ | ಗುರು ಲಿಂಗ ಜಂಗಮಕ್ಕರ್ಪಿಸುವುದು ||
ಇದೇ ಸದ್ಭಕ್ತಿಯ | ಹೊಲಬು ||
ತಾನಳಿದು ಮತ್ತೆ | ಮನೆ ಮಕ್ಕಳಿಗೆಂದೆಡೆ ||
ಅದೆ ಆಚಾರಕ್ಕೆ ಭಂಗ | ಆತ ಸ್ವಾಮಿಗೆ ಸ್ವಾಮಿದ್ರೋಹಿ ||
ಇದನರಿದು ಕಲ್ಯಾಣದ | ತ್ರಿಪುರಾಂತಕ ಲಿಂಗದಲ್ಲಿ ||
ಗಾವುದಿ ಮಾಚಯ್ಯ ಹೇಳಿದುದ | ಕೇಳಿ ಎಲ್ಲರೂ ಸತ್ಯವೆನ್ನಿರಣ್ಣಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1228 / ವಚನ ಸಂಖ್ಯೆ-277)

ಸಮಾಜದ ಎಲ್ಲರೂ ತಮ್ಮ ತಮ್ಮ ಗಳಿಕೆಯನ್ನು ಸತ್ಯ ಶುದ್ಧ ಕಾಯಕದಿಂದ ಮಾಡಿದಲ್ಲಿ ಸಮಾಜದ ಒಟ್ಟು ಉತ್ಪನ್ನವು ಇಮ್ಮಡಿಯಾಗುತ್ತದೆ. ಎಲ್ಲರೂ ತಮ್ಮ ತಮ್ಮ ಯೋಗದಾನದಿಂದ ಇಡೀ ರಾಷ್ಟ್ರದ ಗಳಿಕೆಯಾಗುತ್ತದೆ ಎನ್ನುವುದನ್ನು ಸೂಚ್ಯವಾಗಿ ನಿರೂಪಿಸಿದ್ದಾರೆ. ಗಳಿಕೆಯಲ್ಲಿನ ಸ್ವಲ್ಪ ಸಂಪತ್ತನ್ನು ರಾಷ್ಟ್ರಕ್ಕಾಗಿ ಅಥವಾ ಸಮಾಜಕ್ಕಾಗಿ ಮೀಸಲಿಡಬೇಕು. ಇದರಿಂದ ಸಧೃಢ ಆರ್ಥಿಕ ವ್ಯವಸ್ಥೆ ನಿರ್ಮಾಣವಾಗುತ್ತದೆ.

7.Development of infrastructure – ಮೂಲಭೂತ ಸೌಕರ್ಯಗಳ ಅಭಿವೃದ್ಧಿ:

Infrastructure is a major sector that propels overall development of the economy of a country, which focuses on physical structures such as Power, Bridges, Dams, Roads and Urban Infrastructure Development. In general, infrastructure has been defined as “the physical components of interrelated systems providing commodities and services essential to enable, sustain, or enhance quality of living conditions” and maintain the surrounding environment.

ಸಮಾಜದ ಅಭಿವೃದ್ಧಿಗೆ ಪೂರಕವಾದ ತಾಂತ್ರಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ವ್ಯಕ್ತ ಪಡಿಸುವ ಶಬ್ದಪುಂಜವೇ “ಮೂಲಭೂತ ಸೌಕರ್ಯಗಳ ಅಭಿವೃದ್ಧಿ”. ಆರ್ಥಿಕ ನಿರ್ವಹಣೆ, ಅಗತ್ಯ ಸೇವೆಗಳನ್ನು ಒಳಗೊಂಡಂತೆ ಭೌತಿಕ ಮತ್ತು ಸಾಂಸ್ಥಿಕ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಿ ಸುಧಾರಣೆಯನ್ನು ಮಾಡುವ ಪ್ರಕ್ರಿಯೆ. ಇದರಲ್ಲಿ ರಸ್ತೆಗಳು, ಕುಡಿಯುವ ಮತ್ತು ನೀರಾವರಿಗೆ ಅಗತ್ಯವಾದ ನೀರು ಪೂರೈಕೆ, ವಿದ್ಯುತ್‌ ಜಾಲಗಳು ಮುಂತಾದ ಸ್ಥೂಲ ವಿಷಯಗಳು ಒಳಗೊಂಡಿವೆ. ಮೂಲ ಸೌಕರ್ಯಗಳಲ್ಲಿ ಶಾಲಾ-ಕಾಲೇಜುಗಳು, ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು ಕೂಡಾ ಬರುತ್ತವೆ. ಒಟ್ಟಾರೆ ಜನ ಸಾಮಾನ್ಯರ ದಿನ ನಿತ್ಯದ ಅಗತ್ಯತೆಗಳನ್ನು ಪೂರೈಸುವ ಸಾಧನ. ಇಂಥ ಅಭೂತಪೂರ್ವ ಮೂಲಭೂತ ಸೌಕರ್ಯಾಭಿವೃದ್ಧಿಯ ಚಿಂತನೆಯನ್ನು 12 ನೇ ಶತಮಾನದಲ್ಲಿದ್ದ ಶಿವಯೋಗಿ ಸಿದ್ಧರಾಮೇಶ್ವರರು ತಮ್ಮ ವಚನದಲ್ಲಿ ನಿರೂಪಣೆ ಮಾಡಿದ್ದಾರೆ.

ಅಯ್ಯಾ ನಿಮ್ಮ ಶರಣರಲ್ಲದವರ ಮನೆ | ಕೆಮ್ಮನೆ ಕಂಡಯ್ಯಾ ||
ನಿಮ್ಮ ಶರಣರ ಮನೆ | ನೆರೆವನೆ ನೋಡಾ ಎನಗೆ ||
ಸಿರಿಯಾಳ ಮನೆಗಟ್ಟಿ | ಬೇರೂರಿಗೆ ಒಕ್ಕಲು ಹೋದ ||
ದಾಸಿಮಯ್ಯ ಮನೆಗಟ್ಟಿ | ವ್ಯವಹಾರನಾಗಿ ಹೋದ ||
ಸಿಂಧುಬಲ್ಲಾಳ ಮನೆಗಟ್ಟಿ | ಕೈಕೂಲಿಕಾರನಾಗಿ ಹೋದ ||
ಗಂಗೆವಾಳುಕರು ಮನೆಗಟ್ಟಿ | ಲಿಂಗದ ಹೊಲಬನರಿಯದೆ ಹೋದರು ||
ಇವರೆಲ್ಲರು ಮನೆಯ ಮಾಡಿ | ಮಹದ್ವಸ್ತುವನರಿಯದೆ ||
ಸಾಲೋಕ್ಯ ಸಾಮಿಪ್ಯ | ಸಾರೂಪ್ಯ ||
ಸಾಯುಜ್ಯವೆಂಬ | ಪದವಿಗೊಳಗಾದರು ||
 ನಿಮ್ಮ ಸಂಗನ ಬಸವಣ್ಣ ಬಂದು | ಕಲ್ಯಾಣದಲ್ಲಿ ಮನೆಯ ಕಟ್ಟಿದಡೆ ||
ಮರ್ತ್ಯಲೋಕವೆಲ್ಲವು | ಭಕ್ತಿ ಸಾಮ್ರಾಜ್ಯವಾಯಿತು ||
ಆ ಮನೆಗೆ ತಲೆವಾಗಿ ಹೊಕ್ಕವರೆಲ್ಲರು | ನಿಜಲಿಂಗ ಫಲವ ಪಡೆದರು ||
ಆ ಗೃಹವ ನೋಡಬೇಕೆಂದು ನಾನು | ಹಲವು ಕಾಲ ತಪಸ್ಸಿನಲ್ಲಿದ್ದೆನು ||
ಕಪಿಲಸಿದ್ಧಮಲ್ಲಿನಾಥಾ | ನಿಮ್ಮ ಶರಣ ಸಂಗನಬಸವಣ್ಣನ ||
ಮಹಾಮನೆಗೆ ನಮೋ ನಮೋ | ಎಂದು ಬದುಕಿದೆನು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-689 / ವಚನ ಸಂಖ್ಯೆ-1378)

ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.

ಕೆಮ್ಮನೆ         : ವ್ಯರ್ಥ, ಸುಮ್ಮನೆ.
ನೆರೆವನೆ         : ಪ್ರಶಾಂತ ಮನೆ, ಉತ್ತಮ ಮನೆ.
ಒಕ್ಕಲು          : ಬೇರೆಯವರ ಆಧೀನದಲ್ಲಿರು ಅಥವಾ ಆಶ್ರಯದಲ್ಲಿರು.
ಹೊಲಬನರಿಯದೆ  : ದಾರಿ ತಿಳಿಯದೆ, ಆಶ್ರಯವಿರದೆ, ಮುಂದಿನ ಮಾರ್ಗ ತಿಳಿಯದೆ.
ತಲೆವಾಗಿ        : ತಲೆಬಾಗಿ, ಗೌರವದಿಂದ, ಸೌಜನ್ಯಯುತವಾಗಿ ದ್ವೈತ ವೇದಾಂತದಲ್ಲಿ ಬರುವ ಮುಕ್ತಿ ಮಾರ್ಗಗಳು:
ಸಾಲೋಕ್ಯ    : ದೇವರ ವಾಸಸ್ಥಾನಕ್ಕೆ ಹೋಗಿ ನೆಲೆಸುವ ಮುಕ್ತಿ ಮಾರ್ಗ.
ಸಾಮಿಪ್ಯ      : ದೇವರ ಹತ್ತಿರವೇ ವಾಸ ಮಾಡುತ್ತಾ ಪಡೆಯುವ ಮೋಕ್ಷ.
ಸಾರೂಪ್ಯ      : ದೇವರ ರೂಪವನ್ನೇ ತಾಳುವುದು.
ಸಾಯುಜ್ಯ     : ದೇವರಲ್ಲಿಯೇ ಲೀನವಾಗಿ ಮೋಕ್ಷ ಪಡೆಯುವ ಸ್ಥಿತಿ.

ಸಮಾಜಕ್ಕೆ ಉಪಯುಕ್ತವಿಲ್ಲದ ಮನೆ ಹೇಗಿದ್ದರೇನು? ಎಷ್ಟೇ ಚಂದವಿದ್ದರೇನು? ಅದು ವ್ಯರ್ಥ. ಹಾಗೆಯೇ ಮೂಲ ಸೌಕರ್ಯಗಳಿಲ್ಲದ ಊರು ವಾಸಕ್ಕೆ ಯೋಗ್ಯವಲ್ಲ. ಭಕ್ತಿ ಜ್ಞಾನ ಅತಿಥಿ ಸತ್ಕಾರಗಳು ಇದ್ದ ಮನೆ ಅತ್ಯಂತ ಶ್ರೇಷ್ಠ ಎನ್ನುವುದನ್ನು ನೆರೆವನೆ ಎನ್ನುವುದರ ಮೂಲಕ ಮೂಲಭೂತ ಸೌಕರ್ಯಗಳು ಜನಮಾನಸಕ್ಕೆ ಹತ್ತಿರವಿಬೇಕೆಂಬುದನ್ನು ನಿರೂಪಣೆ ಮಾಡಿದ್ದಾರೆ ಶಿವಯೋಗಿ ಸಿದ್ಧರಾಮೇಶ್ವರರು. ಪೂರಕವಾಗಿ ಬಸವಣ್ಣನವರ ಈ ವಚನ ಉತ್ತಮ ಉದಾಹರಣೆ.

 ಮನೆ ನೋಡಾ ಬಡವರು | ಮನ ನೋಡಾ ಘನ ||
ಸೋಂಕಿನಲ್ಲಿ ಶುಚಿ | ಸರ್ವಾಂಗ ಕಲಿಗಳು ||
ಪಸರಕ್ಕನುವಿಲ್ಲ | ಬಂದ ತತ್ ಕಾಲಕ್ಕೆ ಉಂಟು ||
ಕೂಡಲಸಂಗನ ಶರಣರು | ಸ್ವತಂತ್ರ ಧೀರರು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-35 / ವಚನ ಸಂಖ್ಯೆ-326)

ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.

ಪಸರ      : ಅಂಗಡಿ, ಅನುಗ್ರಹ, ಉಡುಗೊರೆ.
ಸೋಂಕು   : ಆಚಾರ, ವಿಷಯಾಸಕ್ತಿ.

ಮನೆಯಲ್ಲಿ ಬಡತನವಿದ್ದರೂ ಕೂಡ ಮನಸ್ಸು ಸ್ವಚ್ಛವಾಗಿದ್ದರೆ ಅದೇ ಹೂವಿನ ತೋಟವಾಗುತ್ತದೆ ಎನ್ನುವುದು ಈ ವಚನದ ಆಶಯ. ಮನೆಯನ್ನು ಕಟ್ಟುವವರು ಅಥವಾ ಮೂಲಭೂತ ಸೌಕರ್ಯಾಭಿವೃದ್ಧಿಯನ್ನು ಮಾಡುವ ಹೊಣೆ ಹೊತ್ತಿರುವವರ ಕೈ-ಬಾಯಿ ಶುಚಿಯಾಗಿರಬೇಕು. ಅಂದಾಗ ಮಾತ್ರ ಈ ಎಲ್ಲ ಸೌಲಭ್ಯಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಲು ಸಾಧ್ಯ.

ಶಿವಯೋಗಿ ಸಿದ್ಧರಾಮೇಶ್ವರರ ಈ ವಚನದಲ್ಲಿ ಸಿರಿಯಾಳ, ದಾಸಿಮಯ್ಯ, ಸಿಂಧುಬಲ್ಲಾಳ ಮತ್ತು ಗಂಗೆವಾಳುಕರನ್ನು ನೆನಪಿಸಿಕೊಂಡಿದ್ದಾರೆ. ಇವರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳೋಣ.

ಸಿರಿಯಾಳ:       ಕಾಂಚೀಪುರದ ಸಿರಿಯಾಳ ಮತ್ತು ಅವನ ಧರ್ಮಪತ್ನಿ ಚೆಂಗಳೆ ಮಹಾ ಶಿವಭಕ್ತರು ಮತ್ತು ಜಂಗಮ ದಾಸೋದಲ್ಲಿ ತೊಡಗಿಸಿಕೊಂಡವರು. ಅವರಿಗೆ ಚೇಲಾಳ ಎಂಬ ಮಗನಿದ್ದ. ಅವರ ಶಿವಭಕ್ತಿಯನ್ನು ಪರೀಕ್ಷಿಸಲು ಶಿವನು ಜಂಗಮವೇಷಧಾರಿಯಾಗಿ ಬಂದು ಅವನ ಮಗನ ನರಮಾಂಸವನ್ನು ಬೇಡುತ್ತಾನೆ. ಅತ್ಯುತ್ಕಟ ಜಂಗಮ ದಾಸೋಹಿಗಳಾಗಿದ್ದ ಸಿರಿಯಾಳ ಮತ್ತು ಚೆಂಗಳೆ ತಮ್ಮ ಮಗನ ಮಾಂಸದಿಂದ ಅಡುಗೆ ಮಾಡಿ ಬಡಿಸುತ್ತಾರೆ. ಪ್ರಸನ್ನನಾದ ಶಿವನು ಮಗುವನ್ನು ಬದುಕಿಸುತ್ತಾನೆ. ಸಿರಿಯಾಳ ಮತ್ತು ಚೆಂಗಳೆಯರನ್ನು ಕಾಂಚೀಪುರದಿಂದ ಕೈಲಾಸಕ್ಕೆ ಕರೆದೊಯ್ಯುತ್ತಾನೆ.

ದಾಸಿಮಯ್ಯ:     ಈಗಿನ ಯಾದಗಿರಿ ಜಿಲ್ಲೆಯ ಮುದೇನೂರಿನವರಾದ ದಾಸಿಮಯ್ಯನವರು ಶಿವನಿಂದ ತವನಿಧಿಯನ್ನು ಪಡೆದವರು. ಇದರಿಂದ ಅಹಂಕಾರ ಹೆಚ್ಚಿದಾಗ ಶಂಕರ ದಾಸಿಮಯ್ಯನವರು ತವನಿಧಿಯನ್ನು ಇಲ್ಲವಾಗಿಸುವ ಮೂಲಕ ದಾಸಿಮಯ್ಯನವರ ಅಹಂಕಾರವನ್ನು ಮುರಿದರು ಎನ್ನುವ ಕಥೆ ಪ್ರಚಲಿತದಲ್ಲಿದೆ.

ಸಿಂಧುಬಲ್ಲಾಳ:   ಕಾವೇರಿಪುರದಲ್ಲಿದ್ದ ಈ ರಾಜನು ಪರಮ ಶಿವಭಕ್ತನಾಗಿದ್ದ. ಇವನ ಭಕ್ತಿಯನ್ನು ಪರೀಕ್ಷಿಸಲು ಶಿವನು ವಿಟ ಜಂಗಮರೂಪದಲ್ಲಿ ಬಂದಿ ಇವನ ಸತಿಯನ್ನು ಬೇಡುತ್ತಾನೆ. ಸಿಂಧುಬಲ್ಲಾಳ ಹಿಂದು-ಮುಂದೆ ನೋಡದೆ ತನ್ನ ಸತಿಯನ್ನು ಶಿವನ ಬಳಿಗೆ ಕಳುಹಿಸುತ್ತಾನೆ. ಅವಳು ನಿದ್ದೆಯಿಂದ ಎದ್ದಾಗ ಶಿವನು ಮಗುವಾಗಿರುತ್ತಾನೆ. ಆಶ್ಚರ್ಯಚಕಿತರಾದ ಸಿಂಧು ಬಲ್ಲಾಳ ಮತ್ತು ಆತನ ಸತಿ ಮುಂದೆ ಗಣಪದವಿಯನ್ನು ಪಡೆಯುತ್ತಾರೆ.

ಗಂಗೆವಾಳುಕರು: ಗಂಗಾನದಿಯ ತೀರದಲ್ಲಿರುವ ಅಪಾರ ಮರಳಿನ ರಾಶಿಯಂತೆ ಅಸಂಖ್ಯಾತ ರುದ್ರಗಣಂಗಳು. ಇವರನ್ನು ಉಪಮಾತೀತರಾದ ರುದ್ರಗಣಂಗಳು ಅಂತಾ ಅಕ್ಕಮಹಾದೇವಿಯವರು ತಮ್ಮ ಒಂದು ವಚನದಲ್ಲಿ ಸ್ಮರಿಸಿದ್ದಾರೆ.

ಹೋದೆನೂರಿಗೆ | ಇದ್ದೆ ನಾನಲ್ಲಿ ||
ಹೋದಡೆ ಮರಳಿ | ಇತ್ತ ಬಾರೆನವ್ವಾ ||
ಐವರು ಭಾವದಿರು | ಐವರು ನಗೆವೆಣ್ಣು ||
ಈ ಐವರು ಕೂಡಿ | ಎನ್ನ ಕಾಡುವರು ||
ಬೈವರು ಹೊಯ್ವರು | ಮಿಗೆ ಕೇಡನುಡಿವರು ||
ಇವರೈವರ ಕಾಟಕ್ಕೆ | ನಾನಿನ್ನಾರೆ ಕಂಡವ್ವಾ ||
ಅತ್ತೆ ಮಾವ | ಮೈದುನ ನಗೆವೆಣ್ಣು ||
ಚಿತ್ತವನೊರೆದು | ನೋಡುವ ಗಂಡ ||
ಕತ್ತಲೆಯಾದಡೆ | ಕರೆದನ್ನವ ನೀಡವ್ವಾ ||
ಅತ್ತಿಗೆ ಹತ್ತೆಂಟ | ನುಡಿವಳಮ್ಮಮ್ಮ ತಾಯೆ ||
ಉಪಮಾತೀತರು | [ರುದ್ರಗಣಂಗಳು] ||
[ಅವರೆನ್ನ] | ಬಂಧುಬಳಗಂಗಳು ||
[ನಮ್ಮ] ಶ್ರೀಶೈಲ | ಚೆನ್ನಮಲ್ಲಿಕಾರ್ಜುನ ಒಲಿದಡೆ ||
ಮರಳಿ[ತ್ತ] | ಬಾರೆನಮ್ಮ ತಾಯೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-831 / ವಚನ ಸಂಖ್ಯೆ-432)

ಮುಂದುವರೆದು ಶಿವಯೋಗಿ ಸಿದ್ಧರಾಮೇಶ್ವರರು ಸಿರಿಯಾಳ, ದಾಸಿಮಯ್ಯ, ಸಿಂಧುಬಲ್ಲಾಳ ಮತ್ತು ರುದ್ರಗಣಂಗಳೆಂದು ಕರೆಸಿಕೊಳ್ಳುವವರು ಏನೇ ಮಾಡಿದರೂ ತಮಗಿರುವ ಅಹಂಕಾರದಿಂದ ಕಟ್ಟಿದ ಲೋಕವೆಲ್ಲವೂ ವ್ಯರ್ಥವಾಗಿ ಹೋದವು. ಆದರೆ ಅವರ ಅಹಂಕಾರ ನೀಗಿದ ಮೇಲೆ ಅಂತರಂಗದ ಅರಿವಿನ ಸಾಕ್ಷಾತ್ಕಾರವನ್ನು ಕಟ್ಟಿಕೊಂಡರು. ಹೀಗೆ ನಿರಾಕಾರ ಶಿವನನ್ನು ಅರಿಯದೇ ಸಾಲೋಕ್ಯ, ಸಾಮಿಪ್ಯ, ಸಾರೂಪ್ಯ ಮತ್ತು ಸಾಯುಜ್ಯ ಎನ್ನುವ ಮುಕ್ತಿ/ಮೋಕ್ಷ ಮಾರ್ಗಗಳನ್ನು ಕಂಡುಕೊಂಡರು. ಆದರೆ ಇವು ಪದವಿಗಳೇ ಹೊರತು ಸಾಧನೆಯಲ್ಲ ಅಂತ ನಿರೂಪಣೆ ಮಾಡತಾರೆ. ವೈಯಕ್ತಿಕ ಸಾಧನೆಗಿಂತ ಸಾಮಾಜಿಕವಾಗಿ ಉಪಯುಕ್ತವಾಗುವ ಸಾಧನ ಸಂಪನ್ಮೂಲಗಳನ್ನು ರೂಢಿಸಿಕೊಂಡರೆ ಸಮಾಜದ ಹಿತ ದೃಷ್ಟಿಯಿಂದ ಅನುಕೂಲಕರ ವಾತಾವರಣ ನಿರ್ಮಾಣವಾಗುವ ತತ್ವ ಈ ಸಾಲುಗಳಲ್ಲಿ ನಿರೂಪಿತವಾಗಿದೆ. ಇದಕ್ಕೆ ಪೂರಕವಾಗಿ ಶಿವಯೋಗಿ ಸಿದ್ಧರಾಮೇಶ್ವರರ ಮತ್ತೊಂದು ವಚನ ಸಾಂದರ್ಭಿಕವಾಗಿ ಸರಿಯಾಗಿ ಹೊಂದಿಕೊಳ್ಳುತ್ತದೆ.

ಕೆರೆತೊರೆ ದೇಗುಲಂಗಳ | ಕಡೆಯಿಂದ ನಿಮ್ಮ ಕಂಡೆ ||
ಎಡಹುವ ಕಲ್ಲ ತೆಗೆವ ಮರೆಯಲ್ಲಿ | ನಿಧಾನವ ಕಂಡಂತೆ ||
ಎನ್ನ ಮರವೆಯ ತಮದ ಅದ್ರಿಗೆ | ದಿನಮಣಿ ಜನಿಸಿದಂತೆ ||
ಕಪಿಲಸಿದ್ಧ ಮಲ್ಲಿಕಾರ್ಜುನ | ಲಿಂಗವೆಂಬ ಭ್ರಾಂತು ||
ಸ್ವಯವಾಯಿತ್ತು | ಪ್ರಭುದೇವರ ಕಾರುಣ್ಯದಿಂದ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-688 / ವಚನ ಸಂಖ್ಯೆ-1369)

ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.

ಎಡಹುವ   : ಎಡವಿ ಬೀಳು.
ತಮ      : ಕತ್ತಲೆ, ಅಜ್ಞಾನ
ಅದ್ರಿಗೆ      : ಬೆಟ್ಟದಷ್ಟು, ಅಗಾಧವಾದ.
ದಿನಮಣಿ   : ಸೂರ್ಯ, ಜ್ಞಾನವೆಂಬ ಬೆಳಕು
ಸ್ವಯವಾಗು : ಒಂದಾಗು.

ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಮೂಲ ಮಂತ್ರವನ್ನು ತಮ್ಮ ಕೊನೇಯ ಸಾಲುಗಳಲ್ಲಿ ಅತ್ಯದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ ಶಿವಯೋಗಿ ಸಿದ್ಧರಾಮೇಶ್ವರರು. ಮಹಾಮನೆಯನ್ನು ಕಟ್ಟುವುದರ ಮೂಲಕ ಇಡೀ ಸಮಾಜಕ್ಕೆ ಒಂದು ಉತ್ಕೃಷ್ಟ ಕೊಡುಗೆಯನ್ನು ನೀಡುತ್ತಾರೆ ಬಸವಣ್ಣನವರು. ಹಾಗೇಯೆ ನಾವು ಕೈಗೊಳ್ಳುವ ಎಲ್ಲ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಕೆಲಸ-ಕಾರ್ಯಗಳು ಸಮಾಜಕ್ಕೆ ಅತ್ಯಂತ ಉಪಯುಕ್ತವಾಗಿರಬೇಕು. ಬಸವಣ್ಣನವರು ಕಟ್ಟಿದ ಮಹಾಮನೆಗೆ ಇಡೀ ಕಲ್ಯಾಣದ ಎಲ್ಲ ಪ್ರಜೆಗಳೂ ಸಹ ಹೋಗುತ್ತಿದ್ದರು. ಅಂತೆಯೆ ಮೂಲಭೂತ ಸೌಕರ್ಯಗಳೂ ಸಹ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕು. Brilliant Simily we can quote with this Vachana.

ಆದರೆ, 12 ನೇ ಶತಮಾನದ ಶರಣರು ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಚಿಂತನೆಗಳಲ್ಲಿ ಪ್ರಾಮಾಣಿಕತೆಯ ಅತ್ಯಂತ ಶ್ರೇಷ್ಠ ಮೇಲ್ಪಂಕ್ತಿಯನ್ನು ಹಾಕಿ ಕೊಟ್ಟಿದ್ದಾರೆ. ವ್ಯೋಮಮೂರ್ತಿ ಅಲ್ಲಮ ಪ್ರಭುದೇವರ ವಚನ ಈ ಪ್ರಾಮಾಣಿಕತೆಯ ತತ್ವವನ್ನು ಪ್ರಮುಖವಾಗಿ ಸಾರುತ್ತದೆ.

ಭೂಮಿ ನಿನ್ನದಲ್ಲ | ಹೇಮ ನಿನ್ನದಲ್ಲ ||
ಕಾಮಿನಿ ನಿನ್ನವಳಲ್ಲ | ಅವು ಜಗಕ್ಕಿಕ್ಕಿದ ವಿಧಿ ||
ನಿನ್ನ ಒಡವೆ ಎಂಬುದು | ಜ್ಞಾನ ರತ್ನ ||
ಅಂತಪ್ಪ ದಿವ್ಯ ರತ್ನವ | ಕೆಡುಗಡದೆ ||
ಆ ರತ್ನವ ನೀನು | ಅಲಂಕರಿಸಿದೆಯಾದಡೆ ||
ನಮ್ಮ ಗುಹೇಶ್ವರಲಿಂಗದಲ್ಲಿ | ನಿನ್ನಿಂದ ಬಿಟ್ಟು ||
ಸಿರಿವಂತರಿಲ್ಲ ಕಾಣಾ | ಎಲೆ ಮನವೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-270 / ವಚನ ಸಂಖ್ಯೆ-1412)

ಹೆಣ್ನು-ಹೊನ್ನು-ಮಣ್ಣು ನಮ್ಮದಲ್ಲ ಅಂದ ಮೇಲೆ ಅದರ ಮೇಲಿನ ವ್ಯಾಮೋಹವೇಕೆ? ಎನ್ನುವ ಮೂಲಭೂತ ಪ್ರಶ್ನೆಯನ್ನು ಅಲಮ ಪ್ರಭುಗಳು ಕೇಳುವ ಮೂಲಕ ಪ್ರಾಮಾಣಿಕತೆಯ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕೆನ್ನುವ ತತ್ವವನ್ನು ನಿರೂಪಿಸಿದ್ದಾರೆ.

Instruments of Fiscal Policy-ವಿತ್ತೀಯ ಕಾರ್ಯನೀತಿಯ ಸಾಧನಗಳು:

  1. Government Expenditure – ಸರ್ಕಾರ ಮಾಡುವ ಖರ್ಚು-ವೆಚ್ಚಗಳು
  2. Taxation – Direct & Indirect – ತೆರಿಗೆಗಳು: ನೇರ ಮತ್ತು ಪರೊಕ್ಷ ತೆರಿಗೆ.
  3. Public Debt & Expenditure – ಸಾರ್ವಜನಿಕ ಸಾಲ ಮತ್ತು ವೆಚ್ಚಗಳು.
  4. Budgetary Surplus & deficit – ಸರ್ಕಾರದ ವಾರ್ಷಿಕ ಆಯ-ವ್ಯಯ ಪತ್ರ.
  1. Government Expenditure – ಸರ್ಕಾರ ಮಾಡುವ ಖರ್ಚು-ವೆಚ್ಚಗಳು:

Money spent by the Government on the acquisition of goods and provision of services such as education, healthcare, social protection, and defense. In the broader viewpoint, when the government acquires goods and services for current use to directly satisfy the individual or collective needs and requirements of the community, it is classified as government final consumption spending.

ಸರಕುಗಳನ್ನು ಮತ್ತು ಅಗತ್ಯ ಸಾರ್ವಜನಿಕ ಸೇವೆಗಳನ್ನು ಖರೀದಿಸಲು ಸರ್ಕಾರ ಮಾಡುವ ಹಣ ವಿನಿಯೋಗವೇ “ಸರ್ಕಾರ ಮಾಡುವ ಖರ್ಚು-ವೆಚ್ಚಗಳು”. ಅಗತ್ಯ ಸಾರ್ವಜನಿಕ ಸೇವೆಗಳೆಂದರೆ ಶಿಕ್ಷಣ, ವೈದ್ಯಕೀಯ ಸೇವೆಗಳು, ಸಾಮಾಜಿಕ ಭದ್ರತೆ ಮತ್ತು ರಕ್ಷಣಾ ವ್ಯವಸ್ಥೆ ಮುಂತಾದ ಸೇವೆಗಳು. ಸರ್ಕಾರವು ಮಾಡುವ ಹಣ ವಿನಿಯೋಗವು ಸಾಮಾಜಿಕವಾಗಿ ಸ್ಥೂಲ ವ್ಯವಸ್ಥೆಗಳನ್ನು ಕಲ್ಪರಿಸುವುದಾಗಿದೆ.

 When the government acquires goods and services for future use, it is classified as government investment. This includes public consumption and public investment, and transfer payments consisting of income transfers.

ಭವಿಷ್ಯದಲ್ಲಿ ಬಳಕೆಯಾಗುವಂತೆ ಸರಕುಗಳನ್ನು ಮತ್ತು ಅಗತ್ಯ ಸಾರ್ವಜನಿಕ ಸೇವೆಗಳನ್ನು ಒದಗಿಸಲು ಸರ್ಕಾರ ಅಗತ್ಯ ಹಣವನ್ನು ಖರ್ಚು ಮಾಡುತ್ತದೆ. ಇದರಲ್ಲಿ ಸರ್ಕಾರಿ ನೌಕರರಿಗೆ ಸಂಬಳವನ್ನು ನೀಡುವುದು, ರಸ್ತೆ, ಆಣೆಕಟ್ಟುಗಳ ನಿರ್ಮಾಣದಂಥ ಯೋಜನೆಗಳಿಗೆ ಹಣವನ್ನು ವಿನಿಯೋಗಿಸುತ್ತದೆ.

ಬಿಜ್ಜಳ ಅರಸರ ಆಸ್ಥಾನದಲ್ಲಿ ಭಂಡಾರಿಗಳಾಗಿದ್ದ ಬಸವಣ್ಣನವರು ಒಬ್ಬ ಶ್ರೇಷ್ಠ ಆರ್ಥಿಕ ತಜ್ಞರು. ಸಾರ್ವಜನಿಕವಾಗಿ ಹಣವನ್ನು ಬಳಕೆ ಮಾಡುವಾಗ ಇಡೀ ಸಾಮಾಜಿಕ ಸಮಾನತೆ ಮತ್ತು ಅಭಿವೃದ್ಧಿಯ ಚಿಂತನೆಯನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದರು. ಅವರ ಈ ವಚನ ಈ ತತ್ವವನ್ನು ಸ್ಪಷ್ಟವಾಗಿ ಹೇಳುತ್ತದೆ.

ಲಿಂಗಕ್ಕಲ್ಲದೆ | ಮಾಡೆನೀ ಮನವನು ||
ಜಂಗಮಕ್ಕಲ್ಲದೆ | ಮಾಡೆನೀ ಧನವನು ||
ಪ್ರಸಾದಕ್ಕಲ್ಲದೆ | ಮಾಡೆನೀ ತನುವನು ||
ಲಿಂಗಜಂಗಮ | ಪ್ರಸಾದಕ್ಕಲ್ಲದೆ ||
ಬಾಯ್ದೆರೆಯೆನೆಂಬುದೆನ್ನ | ಭಾಷೆ ||
ಅನರ್ಪಿತವಾದಡೆ | ತಪ್ಪೆನ್ನದು ||
ಮೂಗ ಕೊಯಿ | ಕೂಡಲಸಂಗಮದೇವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-66 / ವಚನ ಸಂಖ್ಯೆ-728)

ಶರಣ ಸಿದ್ಧಾಂತ ಮತ್ತು ತತ್ವಗಳಲ್ಲಿ ಅಷ್ಠಾವರಣಗಳು ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿವೆ. ಗುರು-ಲಿಂಗ-ಜಂಗಮ ಎನ್ನುವುದು ತನ್ನನ್ನು ತಾನು ಶುದ್ಧ ಮಾಡಿಕೊಳ್ಳುವ ಸಿದ್ಧಾಂತಗಳು. ಸಾರ್ವಜನಿಕ ಹಿತಾಸಕ್ತಿಗಳಿಗಾಗಿ ಖರ್ಚು-ವೆಚ್ಚಗಳನ್ನು ಮಾಡುವಾಗ ಇಡೀ ಸಮಷ್ಠಿಯ ಅಭಿವೃದ್ಧಿಯ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕೆನ್ನುವ ಅಗಾಧ ಸಂದೇಶ ಈ ವಚನದಲ್ಲಿ ಇದೆ. “ಅನರ್ಪಿತವಾದಡೆ ತಪ್ಪೆನ್ನದು” ಎಂದು ಸಾರ್ವಜನಿಕ ಖರ್ಚು-ವೆಚ್ಚದ ವಿಷಯದಲ್ಲಿ ತಾರತಮ್ಯ ಸಲ್ಲದು ಎನ್ನುವ ಸಂದೇಶವೂ ಕೂಡ ಈ ವಚನದಲ್ಲಿ ಅಡಗಿದೆ. ಇಂದಿನ ಸಮಾಜೋ-ಆರ್ಥಿಕ ನೀತಿಗಳಲ್ಲಿ ಬಸವಾದಿ ಶರಣರ ಚಿಂತನೆಗಳನ್ನು ಅಳವಡಿಸಿಕೊಂಡರೆ ಸಮಾಜ ಅತ್ಯಂತ ಉನ್ನತ ಮಟ್ಟಕ್ಕೆ ಬೆಳೆಯಬಹುದು.

  • Taxation: Direct & Indirect – ತೆರಿಗೆಗಳು: ಪ್ರತ್ಯಕ್ಷ ಮತ್ತು ಪರೋಕ್ಷ:

A Taxation is a financial charge or a duty imposed by the Government on an individual or an organization. Taxes are imposed in order to fund Government Expenditure to support works like public services and goods. Public services meaning (Power, health infrastructure, education infrastructure, transport services like Metro, buses, etc). Paying taxes to Governments or officials has been the practice right from ancient civilization.

Two types of taxes:

a. Direct Taxes: Corporate Tax, Personal Income Tax, Fringe Benefit Taxes, Banking Cash Transaction Tax etc.
b. Indirect taxes: GST, CST, Customs, Service Tax, Excise Duty etc.

“ತೆರಿಗೆ” ಅಥವಾ “ಕಂದಾಯ” ವು ಸರ್ಕಾರದ ವಿತ್ತೀಯ ಅಥವಾ ಆರ್ಥಿಕತೆಯ ಒಂದು ವ್ಯವಸ್ಥೆ. ಸರ್ಕಾರವು ತೆರಿಗೆದಾರರ ಮೇಲೆ ಹೇರುವ ಶುಲ್ಕ. ಇವು ಸಾರ್ವಜನಿಕ ಸೇವೆಗಳಿಗೆ ಹಣಕಾಸುಗಳಿಗೆ ಕೊಡುಗೆ ನೀಡಲು ಉದ್ದೇಶಿತ ವ್ಯವಸ್ಥೆ. ಸಾರ್ವಜನಿಕ ಸೇವೆಗಳಲ್ಲಿ ಮೂಲಸೌಕರ್ಯಗಳ ನಿರ್ಮಾಣ (ವಿದ್ಯುತ್‌, ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ಬಂದರುಗಳು), ಸಾರ್ವಜನಿಕ ಆರೋಗ್ಯ ಸೇವೆಗಳನ್ನು ನೀಡುವುದಕ್ಕಾಗಿ, ಶಿಕ್ಷಣ, ರಕ್ಷಣೆ, ಸಾಮಾಜಿಕ ಸಂರಕ್ಷಣೆಗಳನ್ನು ಒದಗಿಸುವುದು ಇತ್ಯಾದಿ ಸೇವೆಗಳನ್ನು ನೀಡಲು ತೆರಿಗೆ ರೂಪದಲ್ಲಿ ಹಣ ಸಂಗ್ರಹಣೆ ಮಾಡುವ ವ್ಯವಸ್ಥೆ. ತೆರಿಗೆಗಳನ್ನು ಪ್ರತ್ಯಕ್ಷ ತೆರಿಗೆ ಮತ್ತು ಪರೋಕ್ಷ ತೆರಿಗೆ ಹೀಗೆ ಎರಡು ರೂಪದಲ್ಲಿ ಸಂಗ್ರಹ ಮಾಡಲಾಗುತ್ತದೆ.

ತೆರಿಗೆ ವಿಧಿಸಿದ ಸಂಸ್ಥೆಗೆ ನೇರವಾಗಿ ಹಣ ಪಾವತಿಸುವ ವ್ಯವಸ್ಥೆಗೆ ನೇರ ತೆರಿಗೆ ಎಂದು ವಿಭಾಗ ಮಾಡಲಾಗಿದೆ. ವೈಯಕ್ತಿಕ ಆದಾಯ ತೆರಿಗೆ, ಆಸ್ತಿ ತೆರಿಗೆ ಮುಂತಾದವುಗಳು ನೇರ ತೆರಿಗೆಗೆ ಒಳಲ್ಪಡುತ್ತವೆ. ಬಳಕೆಯಾಗುವ ಉತ್ಪನ್ನಗಳ ಮತ್ತು ಸೇವೆಗಳ ಮೇಲೆ ವಿಧಿಸಲ್ಪಡುವ ಕಂದಾಯವೇ ಪರೋಕ್ಷ ತೆರಿಗೆ. ನೇರವಾಗಿ ವೈಯಕ್ತಿಕ ಅಥವಾ ಸಂಸ್ಥೆಗಳಿಗೆ ವಿಧಿಸದೆ ಉತ್ಪನ್ನಗಳ ಮೇಲೆ ಹೇರುವ ತೆರಿಗೆ.

12 ನೇ ಶತಮಾನವು ಮಾರಾಟ ಮತ್ತು ವ್ಯಾಪಾರ ಅಭಿವೃದ್ಧಿಯ ಪುನರುತ್ಥಾನದ ಪರ್ವ ಕಾಲವಾಗಿತ್ತು. ಕಲ್ಯಾಣದ ಚಾಲುಕ್ಯರ ಅರಸ ಭೂಲೋಕಮಲ್ಲ ಎಂದು ಬಿರುದಾಂಕಿತನಾದ ಮೂರನೇ ಸೋಮೇಶ್ವರ (ಕ್ರಿ. ಶ. 1127 ರಿಂದ 1138) ನು ಸಂಸ್ಕೃತದಲ್ಲಿ ಬರೆದ “ಮಾನಸೋಲ್ಲಾಸ ಅಥವಾ ಅಭಿಲಾಷಿತಾರ್ಥ ಚಿಂತಾಮಣಿ” ಕೃತಿಯಲ್ಲಿ ಬಟ್ಟೆ ಉದ್ಯಮಕ್ಕೆ ಪ್ರಾಶಸ್ತ್ಯ ನೀಡುವುದರ ಜೊತೆಗೆ ಅದರ ಮೇಲೆ ವಿಧಿಸುವ ತೆರಿಗೆಗಳ ಪ್ರಸ್ತಾಪವನ್ನೂ ಕೂಡ ಮಾಡಿದ್ದಾರೆ. ಈ ಗ್ರಂಥದಲ್ಲಿ ಪೈಠಾಣ, ನಾಗಪಟ್ಟಿಣಮ್‌, ಕಳಿಂಗ ಮತ್ತು ಮುಲ್ತಾನ ಪಟ್ಟಣಗಳ ಉಲ್ಲೇಖವನ್ನು ಮಾಡಿದ್ದಾರೆ.

ಕಳಚೂರಿಯ ಅರಸ ರಾಯಮುರಾರಿ ಸೋವಿದೇವನ ಆಳ್ವಿಕೆಯ ಕ್ರಿ. ಶ. 1172 ರ ಶಾಸನದಲ್ಲಿ ವಿವಿಧ ವಸ್ತುಗಳ ಮೇಲಿನ ಸುಂಕಗಳನ್ನು ದಾಖಲಿಸಲಾಗಿದೆ. ಪ್ರಮುಖವಾಗಿ ದೀಪದ ಎಣ್ಣೆ ಮತ್ತು ಅಡುಗೆ ಎಣ್ಣೆಯ ಮೇಲಿನ ಸುಂಕವನ್ನು ದಾಖಲಿಸಲಾಗಿದೆ.

ಬಸವಣ್ಣನವರ ಕಾಲಘಟ್ಟದಲ್ಲಿಯೂ ಕೂಡ ವಿವಿಧ ರೀತಿಯ ಸುಂಕಗಳನ್ನು ವಿಧಿಸಲಾಗಿತ್ತು. ಆದರೆ ಈ ಸುಂಕಗಳು ಪ್ರಜೆಗಳಿಗೆ ಹೊರೆಯಾಗದಂತೆ ನೋಡಿಕೊಳ್ಳಲಾಗಿತ್ತು. ಭೂ ಕಂದಾಯದ ವ್ಯವಸ್ಥೆಗಾಗಿಯೇ ಕಡಿತವೆರ್ಗಡೆ ಎಂಬ ಅಧಿಕಾರಿಯನ್ನು ನೇಮಿಸಲಾಗಿತ್ತು. ವ್ಯಾಪಾರದಲ್ಲಿ ಹಾಗೂ ವ್ಯವಹಾರಗಳಲ್ಲಿ ವಿವಿಧ ಶ್ರೇಣಿಗಳಿದ್ದವು. 

 ಅದರಲ್ಲಿ ಕೆಲವು ಸುಂಕಗಳನ್ನು ಇಲ್ಲಿ ನಮೂದಿಸಿದ್ದೇನೆ. ಇದರಲ್ಲಿನ ಕೆಲವು ಸುಂಕಗಳ ವಿವರಗಳನ್ನು “ಬಸವ ಬೆಳಗು” ಪತ್ರಿಕೆಯಲ್ಲಿ ಪ್ರಕಟವಾದ ಶ್ರೀ ಗುರುಬಸವ ರಮೇಶ ತುಂಬರಗುದ್ದಿ ಅವರು ಬರೆದ “12 ನೇ ಶತಮಾನದಲ್ಲಿ ಪ್ರಧಾನಿ ಬಸವಣ್ಣನವರು ಜಾರಿಗೊಳಿಸಿದ್ದ ತೆರಿಗೆಗಳು” ಎನ್ನುವ ಲೇಖನದಿಂದ ಆಯ್ದುಕೊಳ್ಳಲಾಗಿದೆ.

  1. ಬಂಕಧರೆ        : ಉಡಾಫೆಯಾಗಿ ಓಡಾಡುವ ಜನರಿಗೆ ವಿಧಿಸುವ ಸುಂಕ.
  2. ಕವಣಿ           : ವಿದ್ಯಾಸಂಸ್ಥೆಗಳನ್ನು ಬೆಳೆಸಲು ವಿಧಿಸುವ ಸುಂಕ.
  3. ಉಂಡಿಗೆ         : ಸುಖ ಸಾಧನಗಳ ಮೇಲೆ ವಿಧಿಸುವ ಸುಂಕ.
  4. ದಂತ           : ನೀರಾವರಿ ಮತ್ತು ಕೃಷಿ ಸುಂಕ.
  5. ಕಡಮಾಯಿ      : ಕೃಷಿಭೂಮಿ ಮೇಲಿನ ಸುಂಕ.
  6. ಸಿದ್ಧದಾಯ       : ವರಮಾನ ತೆರಿಗೆ.
  7. ಬಿಟ್ಟಿಕೊಟ್ಟಣ      : ಮದುವೆ ಮುಂತಾದ ಸಮಾರಂಭಗಳಿಗೆ ವಿಧಿಸುವ ಸುಂಕ.
  8. ಅಂಕೆಯ ಸೊಲ್ಲಿಗೆ  : ತೆರಿಗೆ ಕಳ್ಳತನದ ಮೇಲೆ ವಿಧಿಸುವ ದಂಡ.
  9. ಬಿಲಕೋಡೆ       : ಮಾರಾಟ ತೆರಿಗೆ.
  10. ಅಪುತ್ರಿಕೆ         : ಸಂತಾನವಿರದವರ ಆಸ್ತಿ ರಾಜ್ಯ ಸ್ವತ್ತಾಗಿ ಪರಿವರ್ತಿಸುವ ಸುಂಕ.
  11. ಸೊಲ್ಲಿಗೆ         : ಸಮಾಜ ಘಾತಕ ಶಕ್ತಿಗಳಿಂದ ವಸೂಲಿ ಮಾಡುವ ದಂಡ.
  12. ಗುತ್ತಿಗೆ          : ಗುತ್ತಿಗೆದಾರರಿಂದ ಪಡೆವ ಸುಂಕ.
  13. ತಳವರಿಕೆ        : ಕೆಳವರ್ಗದವರ ಕಲ್ಯಾಣಕ್ಕೆ ಬಳಸಲು ಪಡೆವ ಸುಂಕ.
  14. ಕಡ್ಡಾಯದಂತ     : ಎಲ್ಲ ವರ್ಗದವರೂ ನೀಡಲೇಬೇಕಾದ ಸುಂಕ.
  15. ಪೇರಜುಂಕಾ      : ರಸ್ತೆಯ ಸುಂಕ.
  16. ಕಿರಕುಳ         : ಸರಕು ಸಾಗಾಣಿಕೆ ತೆರಿಗೆ.
  17. ಉಪಕೃತಿ        : ಗ್ರಾಮಾಭಿವೃದ್ಧಿ ಸುಂಕ.
  18. ಕಣಿಕಾ          : ಸೇವಾ ಸುಂಕ.

“ವೀರಶೈವ ಷಟಸ್ಥಲ” ಕೃತಿಯನ್ನು ರಚಿಸಿದ ಸಿದ್ಧಗಿರಿಮಠ ಪರಂಪರೆಗೆ ಸೇರಿದ ಶ್ರೀ. ಕಾಡಸಿದ್ಧೇಶ್ವರರು ತಮ್ಮ ಈ ವಚನದಲ್ಲಿ ಸುಂಕವನ್ನು ಕೊಡುವ ಬಗ್ಗೆ ವಿವರಣೆ ನೀಡಿದ್ದಾರೆ.

ಹೊನ್ನು ತೆತ್ತಲ್ಲದೆ | ಹೊಲ ಮಾಡಬಾರದು ||
ಬಿಟ್ಟಿ ಬೇಗಾರವಿಲ್ಲದೆ | ಊರೊಳಗಿರಬಾರದು ||
ಸರ್ಕಾರಕ್ಕೆ ರುಜುವಿಲ್ಲದೆ | ರೈತನಾಗಬಾರದು ||
ಅದೆಂತೆಂದೊಡೆ ಇಷ್ಟುಳ್ಳಾತನೆ | ಪಾಚ್ಚಾ ರೈತ ||
ಇಲ್ಲದಾತ ದಬ್ಬುಳಕ | ಎಂದನಯ್ಯಾ ನಿಮ್ಮ ಶರಣ ||
ಕಾಡನೊಳಗಾದ ಶಂಕರಪ್ರಿಯ | ಚೆನ್ನಕದಂಬಲಿಂಗ ನಿರ್ಮಾಯಪ್ರಭುವೆ ||
(ಸಮಗ್ರ ವಚನ ಸಂಪುಟ: ಎರಡು-2016 / ಪುಟ ಸಂಖ್ಯೆ-32 / ವಚನ ಸಂಖ್ಯೆ-43)

ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.

ದಬ್ಬುಳಕ   : ಪೀಡಕ, ಹಿಂಸಾಚಾರಿ.
ಪಾಚ್ಚಾ     : ಬಾದಶಾಹ, ಅರಸು.

ಸುಂಕವನ್ನು ಕೊಡಲಾರದೆ ಹೊಲವನ್ನು ಮಾಡಬಾರದು. ಕೆಲಸವಿಲ್ಲದವನಿಗೆ ಊರೊಳಗೆ ಸ್ಥಳವಿಲ್ಲ. ಸರ್ಕಾರಕ್ಕೆ ಕಾಣಿಕೆ ಕೊಡದೆ ರೈತನಾಗಬಾರದು ಎನ್ನುವ ವಿಷಯಗಳನ್ನು ತಮ್ಮ ಈ ವಚನದಲ್ಲಿ ಶ್ರೀ ಕಾಡಸಿದ್ಧೇಶ್ವರರು ನಿರೂಪಿಸಿದ್ದಾರೆ.

  • Public Debt & Public Expenditures – ಸಾರ್ವಜನಿಕ ಸಾಲ ಮತ್ತು ವೆಚ್ಚಗಳು:

The term “Public Debt” is also refered to overall liabilities of government. It represents the total outstanding liabilities (bonds and other securities) borrowed by the government to meet its development budget.

The term “Public Expenditure” is expenditure made by the government to satisfy the collective needs and wants of people, such as pension, provisions (which includes education, healthcare and housing), security, infrastructure, etc

ಸರ್ಕಾರದ ಖರ್ಚು-ವೆಚ್ಚಗಳು ಆದಾಯಕ್ಕಿಂತ ಹೆಚ್ಚಿದ್ದರೆ ಮಾರುಕಟ್ಟೆ ಮತ್ತು ಬಾಹ್ಯಮೂಲಗಳಿಂದ ಸಾಲವನ್ನು ಪಡೆಯುತ್ತದೆ. ಇದನ್ನೇ “ಸಾರ್ವಜನಿಕ ಸಾಲ” ಎಂದು ಕರೆಯುತ್ತಾರೆ. ಸಾರ್ವಜನಿಕರ ಸವಲತ್ತುಗಳನ್ನು ಒದಗಿಸಲು ಸರ್ಕಾರವು ಮಾಡುವ ವೆಚ್ಚವನ್ನು “ಸಾರ್ವಜನಿಕ ವೆಚ್ಚ” ವೆಂದು ಕರೆಯಲಾಗುತ್ತದೆ.

ಸತ್ಯಶುದ್ಧ ಕಾಯಕ ಮಾಡಿ ಹಣ ಗಳಿಸುವುದನ್ನು ಆಯ್ದಕ್ಕಿ ಮಾರಯ್ಯನವರು ತಮ್ಮ ಈ ವಚನದಲ್ಲಿ ನಿರೂಪಿಸಿದ್ದಾರೆ. ಹಾಗೆಯೇ ಸರ್ಕಾರಗಳು ಸಹ ಖರ್ಚು-ವೆಚ್ಚಗಳತ್ತ ಗಮನ ಹರಿಸಿ ಸಾಲ ಮಾಡುವುದನ್ನು ತಪ್ಪಿಸುವುದಕ್ಕೆ ಪ್ರಯತ್ನ ಮಾಡಬೇಕೆಂದು ಈ ವಚನದ ಮೂಲಕ ಹೇಳಿದ್ದಾರೆ ಎಂದು ನನ್ನ ಅನಿಸಿಕೆ.

ಹಾಗದ ಕಾಯಕವ ಮಾಡಿ | ಹಣವಡ್ಡವ ತಾ ಎಂಬಲ್ಲಿ ||
ಸತ್ಯದ ಕಾಯಕ | ಉಂಟೆ? ||
ಭಕ್ತರಲ್ಲಿ ಕಾಯಕಕ್ಕೆ | ಕಡಿಮೆಯಾಗಿ ||
ತಾ ಎಂಬುದು | ಅಮರೇಶ್ವರಲಿಂಗಕ್ಕೆ ಚಿತ್ತಶುದ್ಧ ಕಾಯಕ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1070 / ವಚನ ಸಂಖ್ಯೆ-1190)

ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.

ಹಾಗ      : 12 ನೇ ಶತಮಾನದಲ್ಲಿ ಚಲಾವಣೆಯಲ್ಲಿದ್ದ ನಾಣ್ಯ.
ಹಣವಡ್ಡ    : ಹಾಗಕ್ಕಿಂತ ಹೆಚ್ಚಿನ ಮೌಲ್ಯದ ನಾಣ್ಯ.

  • Budgetary Surplus & deficit – ಸರ್ಕಾರದ ವಾರ್ಷಿಕ ಆಯ-ವ್ಯಯ ಪತ್ರ:

A budget is a financial plan for a specified period. It is an estimate of revenue & expenses a government will incur, over a specified period and usually broken out by category, for the purpose of providing a roadmap that the government should follow. There are two types of Budgets:

a. Surplus Budget
b. Deficit Budget

A Surplus Budget is when income exceeds expenditures. The term surplus refers to a government’s financial state and is an indication that a government’s finances are being effectively managed. A deficit budget is the opposite of a surplus. When spending exceeds revenues, the government must borrow money in order to fund Government Spending.

ಒಂದು ನಿರ್ದಿಷ್ಟ ಅವಧಿಯಲ್ಲಿ ಸರ್ಕಾರದ ಆದಾಯ ಮತ್ತು ಖರ್ಚು-ವೆಚ್ಚಗಳ ಮುನ್ನೋಟವೇ ಆಯ-ವ್ಯಯ ಪತ್ರ. ಈ ಆಯ-ವ್ಯಯವು ಎರಡು ರೀತಿಯಲ್ಲಿ ವಿಂಗಡಣೆ ಮಾಡಬಹುದು.

  • ವಿತ್ತೀಯ ಆದಾಯ ಆಯ-ವ್ಯಯ ಪತ್ರ
  • ವಿತ್ತೀಯ ಕೊರತೆ ಆಯ-ವ್ಯಯ ಪತ್ರ.

ಬನ್ನಿ ಕರಣಿಕರು | ನೀವು ಲೆಕ್ಕವ ಹೇಳಿ ||
ಧಾನ್ಯ ಧಾನ್ಯಂಗಳ | ಸಂಚವನು ||
ಹೊಸ ಜೋಳ | ಅರವತ್ತು ಲಕ್ಷ ಖಂಡುಗ ||
ಶಾಲಿಧಾನ್ಯ | ಮೂವತ್ತು ಲಕ್ಷ ಖಂಡುಗ ||
ಗೋದಿ | ಹನ್ನೆರಡು ಲಕ್ಷ ಖಂಡುಗ ||
ಕಡಲೆ ಬತ್ತೀಸ ಖಂಡುಗ | ಹೆಸರು ಮೂವತ್ತಾರು ಖಂಡುಗ ||
ನವಣೆ ಹಾರಕ ಬರಗು | ಸಾವೆ ದೂಸಿಗಳೆಂಬ ||
ಧಾನ್ಯ | ಐವತ್ತು ಲಕ್ಷ ಖಂಡುಗ ||
ಹೊಸ ಸುಗ್ಗಿಯ ವೇಳೆ | ಬಹ ಭತ್ತ ಅಗಣಿತ ||
ಮಹಾದಾನಿ ಸೊಡ್ಡಳನ | ಆರೋಗಣೆಯ ||
ಅವಸರಕ್ಕೆ | ಅಳವಟ್ಟ ಸಯದಾನ ||
ಇನಿತನವಧರಿಸಯ್ಯಾ | ಸಂಗನ ಬಸವಣ್ಣಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1702 / ವಚನ ಸಂಖ್ಯೆ-788)

ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.

ಕರಣಿಕ    : ಲೆಕ್ಕಪತ್ರ, ಆಯವ್ಯಯ, ಹಣಕಾಸು ದಾಖಲೆಗಳನ್ನು ನೋಡಿಕೊಳ್ಳುವವ.
ಸಂಚ      : ಸಂಗ್ರಹಿಸಿದ.
ಖಂಡುಗ   : ವಿಶೇಷ ಅಳತೆ.
ಬತ್ತೀಸ     : ಮೂವತ್ತೆರಡು.
ಶಾಲಿ      : ಭತ್ತ,ನವಣೆ, ಹಾರಕ, ಬರಗು, ಸಾವೆ, ದೂಸಿ : ಧಾನ್ಯಗಳು.
ಆರೋಗಣೆ  : ಊಟ ಮಾಡು, ಪ್ರಸಾದ ಸ್ವೀಕಾರ.
ಅಳವಟ್ಟ    : ಸಾಧ್ಯವಾಗು, ನಿಲುಕುವ.
ಸಯದಾನ  : ಪರಿಪೂರ್ಣ ಅರಿವು.
ಅವಧರಿಸು  : ಮನವಿಟ್ಟು ಕೇಳು.
ಒಂದು ರೀತಿಯಲ್ಲಿ ಶರಣ ಸೊಡ್ಡಳ ಬಾಚರಸರ ಈ ವಚನ ಆಯ-ವ್ಯಯದ ನಿರೂಪಣೆಯನ್ನು ಮಾಡುತ್ತದೆ. ಸಂಗ್ರಹವಾಗಿರುವ ಮತ್ತು ಮುಂದೆ ಬರುವ ವಸ್ತುಗಳ ಸಮಗ್ರ ಚಿತ್ರಣವನ್ನು ನೀಡುತ್ತದೆ.

ಭಾಂಡ ಭಾಜನ ಉಪಕರಣ | ವಸ್ತ್ರ ಮುಂತಾದ ||
ಸಕಲ ದ್ರವ್ಯಂಗಳ ಮನದ ಕಟ್ಟಿಂಗೆ | ತಟ್ಟು-ಮುಟ್ಟನರಿತು ||
ಅಹುದಾದುದನೊಪ್ಪಿ | ಅಲ್ಲದುದ ಬಿಟ್ಟು ||
ಇದಿರು ಮೆಚ್ಚುವಂತೆ | ಕಪಟ ಅನುಕರಣೆಗೆ ಒಳಗಾಗದೆ ||
ಲಿಂಗ ಮೆಚ್ಚುವಂತೆ | ಶರಣರು ಒಪ್ಪುವಂತೆ ||
ನಿಂದ ಸದ್ಭಕ್ತನಂಗವೆ | ಏಲೇಶ್ವರಲಿಂಗವು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1164 / ವಚನ ಸಂಖ್ಯೆ-1701)

ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.
ಭಾಂಡ     : ಅಡಿಗೆ ಮಾಡುವ ಪಾತ್ರೆ.
ಭಾಜನ    : ಪಾತ್ರೆ, ಊಟದ ತಟ್ಟೆ.
ಕಟ್ಟಿಂಗೆ    : ನಿಯಂತ್ರಣ.

ಆಧ್ಯಾತ್ಮಿಕ ಸೊಗಡಿನಿಂದ ಕೂಡಿದ ಈ ವಚನದಲ್ಲಿ ಇಂದ್ರಿಯ ಮಾಯೆಗಳನ್ನು ನಿಯಂತ್ರಣದಲ್ಲಿಡುವುದು ಹೇಗೆ ಎಂಬುದನ್ನು ನಿರೂಪಿಸಲಾಗಿದೆ. ಹಾಗೆಯೇ ನಮ್ಮ ದೈನಂದಿನ ಅವಶ್ಯಕತೆಗಳನ್ನು ಅನುಕೂಲಕ್ಕೆ ತಕ್ಕಂತೆ ಆದಾಯ ಮತ್ತು ಖರ್ಚುಗಳನ್ನು ಮಾಡುವ ಬಗೆಯನ್ನು ತಿಳಿಸುತ್ತದೆ. ಒಟ್ಟಾರೆ ಆಯ-ವ್ಯಯಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ನಮ್ಮ ಆದಾಯದ ಇತಿಮಿತಿಯೊಳಗೆ ಬದುಕಬೇಕೆಂದು ಈ ವಚನ ನಿರೂಪಣೆ ಮಾಡುತ್ತದೆ.

Achievements of Fiscal Policy – ವಿತ್ತೀಯ ಕಾರ್ಯನೀತಿಯಿಂದ ಆಗುವ ಲಾಭಗಳು:

  • Mobilization of Resources – ಸಂಪನ್ಮೂಲಗಳ ಕ್ರೋಢೀಕರಣ.
  • Increase in Savings ಉಳಿತಾಯದಲ್ಲಿ ಹೆಚ್ಚಳ.
  • Increase in Capital Formation – ಬಂಡವಾಳ ಕ್ರೋಢೀಕರಣ.
  • Incentives to Investments ಬಂಡವಾಳ ಹೂಡಿಕೆಗೆ ಪ್ರೋತ್ಸಾಹ.
  • Reduction in Wealth Inequalities ಆರ್ಥಿಕ ಅಸಮತೋಲನ ನಿವಾರಣೆ.
  • Reduction in Inter Regional Variations – ಪ್ರಾದೇಶಿಕ ಅಸಮತೋಲನ ನಿವಾರಣೆ.

ಆಧುನಿಕತೆಯು ನಮ್ಮ ಜನ ಜೀವನವನ್ನು ಸುಧಾರಿಸುವತ್ತ ಸಾಗಬೇಕು. ಆದರೆ ಆಧುನಿಕತೆಯೇ ಜೀವನವಲ್ಲವೆಂಬುದನ್ನು ನಾವು ಅರಿತುಕೊಳ್ಳಬೇಕು. 12 ನೇ ಶತಮಾನದಲ್ಲಿಯೇ ವಚನ ಸಾಹಿತ್ಯ ಇಂಥ ಒಂದು ಪ್ರತಿಮೆಯನ್ನು ಬಳಸಿ ಸಮ-ಸಮಾಜವನ್ನು ನಿರ್ಮಿಸಿದ್ದು ನಿರೂಪಿತವಾಗಿದೆ. Ordinary people created extra ordinary society in 12th Century. ಇದು ಕೇವಲ Statement ಅಲ್ಲ. ಶರಣರು ವಚನಾಮೃತದ ಅಕ್ಕರೆಯ ಬೀಜಗಳನ್ನು ಸಮಾಜದಲ್ಲಿ ಬಿತ್ತಿದರು. ಸಾಮಾನ್ಯರಂತೆ ಬದುಕಿ ಅಸಾಮಾನ್ಯ ತತ್ವಗಳನ್ನು ಜಗತ್ತಿಗೇ ನೀಡಿ ಬೆಳಕನ್ನಿತ್ತ ಶರಣರ ಬದುಕು ಇಂದಿಗೂ ಆದರ್ಶಮಯ. ಇಂಥ ಆದರ್ಶಗಳನ್ನು ಮೌಲ್ಯಗಳನ್ನು ತಿಳಿದುಕೊಳ್ಳುವ, ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ. ಹಾಗಾಗಿ ಒಂದು ಆತ್ಮಾವಲೋಕನದಿಂದ ಶರಣರನ್ನು ಅರಿಯೋಣ ಅಂತ ಹೇಳತಾ ಈ ಲೇಖನಕ್ಕೆ ವಿರಾಮವನ್ನು ಹೇಳುತ್ತೇನೆ.

ಸಂಗ್ರಹ ಮತ್ತು ಲೇಖನ:

ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಇಂಗ್ಲೀಷ್‌ ಶಾಲೆಯ ಹತ್ತಿರ  
ಸುಭಾಷ್‌ ನಗರ, ಕ್ಯಾತ್ಸಂದ್ರ
ತುಮಕೂರು – 572 104
ಮೋಬೈಲ್‌ ನಂ   : 9741 357 132
ಈ-ಮೇಲ್‌      : vijikammar@gmail.com

ಸಹಾಯಕ ಗ್ರಂಥಗಳು :

  • ಕಲ್ಯಾಣದ ಶರಣರು                  : ಡಾ. ವೀರಣ್ಣ ದಂಡೆ.
  • ಶೂನ್ಯಸಂಪಾದನೆಯ ಪರಾಮರ್ಶೆ       : ಪ್ರೊ. ಸಂ. ಶಿ. ಭೂಸನೂರಮಠ
  • ಕರ್ನಾಟಕ ಆಯಗಾರರ ಸಂಸ್ಕೃತಿ         : ಡಾ. ವೀರೇಶ ಬಡಿಗೇರ.
  • ಕನ್ನಡ ಸಾಹಿತ್ಯದಲ್ಲಿ ಅಲ್ಲಮಪ್ರಭುದೇ  : ಡಾ. ಎಸ್.‌ ಎಮ್.‌ ವೃಷಭೇಂದ್ರಸ್ವಾಮಿ
  • ಅಲ್ಲಮನ ವಚನ ಚಂದ್ರಿಕೆ              : ಎಲ್.‌ ಬಸವರಾಜು
  • ಶರಣ ಚರಿತಾಮೃತ                     : ಡಾ. ಸಿದ್ಧಯ್ಯ ಪುರಾಣಿಕ
  • ಬಸವಯುಗದ ವಚನ ಮಹಾಸಂಪುಟ     : ಡಾ. ಎಮ್.‌ ಎಮ್.‌ ಕಲಬುರ್ಗಿ
  • Annam Bahu Kurvita                     : Jitendra Bajaj & M Doddamane Srinivas
  • Ancient Hindu Polity                      : Narendranath Law
  • Fiscal Policy, Public Policy & Governance : Parthasarathi Shome
  • The Distribution of Wealth             : John R Commons
  • Lives of Saints                                 :  Dr. Ujwala S. Hiremath
  • Shunya Sampadane                        : S. S. Bhusnurmath & Armando Menezes
  • Booming Sector and De-Industrialization
    in a Small Open Economy                          : W. Max Corden and J. Peter Neary
  • Fiscal Policy for Inclusive Growth  : Gemma Estrada, Sang-Hyop Lee & D Park
  • Essence of Shatsthala                      : Armando Menezes & S M Angadi
  • ಬಸವಣ್ಣ ಹಾಗೂ ಲಿಂಗಾಯತ ಧರ್ಮ    : ಹಿರೇಮಲ್ಲೂರ ಈಶ್ವರನ್
  • Kalaburagi Dist Gazzet – 1997        : Chapter 17, Places of Interest.

Loading

Leave a Reply