
ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ?
ಬೇಟದ ಮರುಳಗೆ ಲಜ್ಜೆ ಮುನ್ನುಂಟೆ?
ನಿಮ್ಮನರಿದ ಶರಣಂಗೆ ಪೂಜೆಯ ಹಂಬಲ, ದಂದುಗವೇಕೆ?
ಮಿಸುನಿಯ ಚಿನ್ನಕ್ಕೆ ಒರೆಗಲ್ಲ ಹಂಗೇಕೆ?
ಗುಹೇಶ್ವರಲಿಂಗಕ್ಕೆ ಕುರುಹು ಮುನ್ನುಂಟೇ?
(ಸಮಗ್ರ ವಚನ ಸಂಪುಟ: ಎರಡು-2021 / ಪುಟ ಸಂಖ್ಯೆ-138 / ವಚನ ಸಂಖ್ಯೆ-425)
ನಿಜವಾದ ಭಕ್ತನಾದವನು ಪೂಜೆ ಎಂಬ ಆಚರಣೆಯ ಬಗೆಗೆ ಅಷ್ಟಾಗಿ ಗಮನವನ್ನು ಕೊಡಬೇಕಾಗಿಲ್ಲ ಎಂಬುದು ಅಲ್ಲಮರ ವಿಚಾರವಾಗಿದೆ. ಬಹಿರಂಗದ ಆಚರಣೆಗಳು ಕೇವಲ ನಮ್ಮ ತೋರಿಕೆಯ ಅಭಿವ್ಯಕ್ತಿಗಳೇ ಹೊರತು ನಿಜವಾದ ಲಿಂಗ ಪೂಜೆಯನ್ನುವದು ಅದು ಭಕ್ತನು ಲಿಂಗಕ್ಕೆ ತನ್ನನ್ನು ನಿರಹಂಭಾವದಿಂದ ಅರ್ಪಿಸಿಕೊಳ್ಳುವದರಲ್ಲಿದೆ ಎನ್ನುವದು ಶರಣರ ವಿಚಾರವಾಗಿದೆ.
ಇನ್ನೊಂದು ರೀತಿಯಿಂದ ಆಲೋಚನೆ ಮಾಡಿದಾಗಲೂ ಕೂಡ ಪೂಜೆ ಕೇವಲ ಬಹಿರಂಗದ ಆಡಂಬರವೇ ಆಗಿ ಶರಣರಿಗೆ ತೋರುತ್ತದೆ. ಅಲ್ಲಿ ಭಕ್ತನಾದವನು ಏನನ್ನಾದರೂ ತಂದು ಅರ್ಪಿಸಲೇಬೇಕಲ್ಕವೇ? ಹಾಗಾದರೆ ಅವನದು ಎನ್ನುವದು ಏನಿದೆ? ಎಲ್ಕವೂ ನಿಸರ್ಗ ಜನ್ಯವಾದದ್ದು. ಆದ್ದರಿಂದ ಕೊಡಲು ನಮ್ಮಲ್ಲಿ ಏನಿದೆ ಎಂಬ ಪ್ರಶ್ನೆಯನ್ನು ಪೂಜೆಯಂಬ ತತ್ವ ಕೇಳುತ್ತದೆ. ಇದೇ ಅರ್ಥದಲ್ಲಿ ಪೂಜೆಗೆ ಸಂಬಂಧಿಸಿದಂತೆ “ಪೂಜೆಗೆ ನೀರ ಬೇಕಾಗಿಲ್ಲ. ಅಲ್ಲಿ ನೀ ಇರಬೇಕು” ಎಂಬ ಜಾಣೂಕ್ತಿ ಚಾಲ್ತಿಯಲ್ಲಿದೆ. ಇದೆಲ್ಲ ಚಿಂತನೆಗಳು ಅಲ್ಲಮಪ್ರಭುಗಳ ಪ್ರಸ್ತುತ ಈ ವಚನದ ಓದಿಗೆ ಪೂರಕವಾಗಿ ಬಂದಿದೆ.
ಬಹಳ ಸರಳವಾದ ಮತ್ತು ಲೌಕಿಕಕ್ಕೆ ತಿಳಿಯಬಹುದಾದ ಉಪಮೆಗಳನ್ನು ಅಲ್ಲಮಪ್ರಭುಗಳು ಇಲ್ಲಿ ಬಳಸುತ್ತಿದ್ದಾರೆ. ದಂಪತಿಗಳ ನಡುವಿನ ಕೂಟಕ್ಕೆ ಯಾವ ವಸ್ತುಗಳೂ ಬೇಕಾಗಿಲ್ಲ. ಅವರು ಕೂಡಬೇಕು ಎಂಬ ಪ್ರಬಲ ಇಚ್ಛೆ ಅವರಲ್ಲಿದ್ದರೆ ಸಾಕು. ಅವರು ಒಂದಾಗಲು ಹಾಸುಗೆಯೆ ಬೇಕು ಇನ್ನೊಂದು ಮಗದೊಂದು ಬೇಕು ಎಂಬುದೇನೂ ಇಲ್ಲ. ಹಾಗೆಯೇ ಬೇಟದ ಮರುಳಿಗೆ ಲಜ್ಜೆ ಹೇಗೆ ಇರಲು ಸಾಧ್ಯ? ಬೇಟ ಎಂದರೆ ಇಬ್ಬರ ನಡುವಿನ ಪ್ರೇಮವೇ. ಅವರು ಎಂದೂ ಯಾರಾದರೂ ನಮಗೆ ಏನಾದರೂ ಅಂದಾರು! ಎಂಬ ಚಿಂತೆ ಮಾಡಲಾರರು. ಅವರೊಳಗಿನ ತೀವ್ರ ಪ್ರೇಮ ಅವರನ್ನು ಎಂತಹ ಸಂದಿಗ್ಧತೆಯಲ್ಲಿಯೂ ಅವರಿಗೆ ನಾಚಿಕೆ ಎನ್ನುವುದು ಕಾಡಿಸದು. “ಕಾಮಾತುರಾಣಾಂ ನ ಭಯಂ ನ ಲಜ್ಜಾ” ಎಂಬ ಪ್ರಸಿದ್ಧ ಉಕ್ತಿಯೇ ಇದೆ. ಭಕ್ತಿಯನ್ನುವದೂ ಕೂಡ ತೀವ್ರತರವಾದ ಕಾಮದಂತೆ ಅದು ಎಂದೂ ನಾಚದು. ಚಾಮರಸನ ಪ್ರಭುಲಿಂಗಲೀಲೆಯಲ್ಲಿ ಶಿವನ ದೇವಾಲಯಕೆ ಭಕ್ತಿ ಅರ್ಪಿಸಲು ಹೋಗಿ ಬಂದ ಮಾಯಾದೇವಿ “ಮಧುಕೇಶ್ವರನ ಸಂಭೋಗಿಸಿಯೆ ಬಂದಿರ್ದಳೊ ಪೇಳೆನಲ್ಮೆರೆದಿರ್ದಳಾ ಮಾಯೆ” ಎಂಬ ವರ್ಣನೆ ಬಂದಿದೆ. ಭಕ್ತಿಯ ಮೋಹ ಸಂಭೋಗದಷ್ಟೇ ತೀವ್ರತರವಾದುದು ಎಂಬ ಭಾವ ಅಲ್ಲಿಯೂ ವ್ಯಕ್ತವಾಗಿದೆ. ಬೇಟದಂತೆ ಭಕ್ತಿಯೂ ಮರುಳೇ ಎನ್ನುವದು ಇಲ್ಲಿ ಸಾಧಿತ.
ಈ ಮೇಲಿನ ಲೌಕಿಕ ಉದಾಹರಣೆಗಳ ಮೂಲಕ ನಿಜವಾದ ಪ್ರೇಮಕ್ಕೆ ಯಾವ ವಸ್ತುಗಳ ಅಗತ್ಯ ಇಲ್ಲ. ಪ್ರೇಮದಲ್ಲಿ ಮಿಂದವರಿಗೆ ನಾಚಿಕೆ ಲಜ್ಜೆಗಳು ಇಲ್ಲ. ಹಾಗೆಯೆ, ನಿಜ ಭಕ್ತಿಗೆ ಪೂಜೆ ದಂದುಗವಿಲ್ಲ ಎನ್ನುತ್ತಾರೆ ಅಲ್ಲಪ ಪ್ರಭುಗಳು. ನಿಜವಾದ ಭಕ್ತಿ ಎನ್ನುವದು ಅಪರಂಜಿ ಚಿನ್ನ. ಅದನ್ನು ಒರೆಗೆ ಹಚ್ಚುವ ಅಗತ್ಯವಾದರೂ ಎಲ್ಕಿದೆ ಎನ್ಜುವ ಅಲ್ಲಮ ಪ್ರಭುಗಳು ಗುಹೆಶ್ವರಲಿಂಗಕ್ಕೆ ಯಾವುದೇ ಕುರುಹುಗಳ ಅಗತ್ಯವಿಲ್ಲ ಎನ್ನುವದನ್ನು ಈ ವಚನದ ಮೂಲಕ ಸಾರಿದ್ದಾರೆ. ನಿಜವಾದ ಭಕ್ತಿಗೂ ಹೇಗೆ ಯಾವುದೂ ಉಪಾಧಿಯ ಅಗತ್ಯವಿಲ್ಲವೊ ಹಾಗೆಯೆ ಗುಹೇಶ್ವರ ಲಿಂಗಕ್ಕೆಯೂ ಯಾವುದೆ ಕುರುಹುಗಳಿಲ್ಲ ಎಂದು ಸಾರುವದು ವಚನದ ಉದ್ದೇಶವಾಗಿದೆ.
ಡಾ. ಯಲ್ಲಪ್ಪ ಯಾಕೊಳ್ಳಿ.
ಪ್ರಾಚಾರ್ಯರು (ನಿವೃತ್ತ),
ಸವದತ್ತಿ, ಬೆಳಗಾವಿ ಜಿಲ್ಲೆ.
ಮೋಬೈಲ್ ಸಂ. 97319 70857
- ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
- ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in and admin@vachanamandara.in