ಎಸೆವಕ್ಷರಕ್ಕೆ ಹೆಸರಿಲ್ಲ | ಶರಣೆ ನೀಲಾಂಬಿಕೆಯವರ ವಚನ ವಿಶ್ಲೇಷಣೆ | ಶ್ರೀಮತಿ. ಸುನಿತಾ ಮೂರಶಿಳ್ಳಿ, ಧಾರವಾಡ.

ಎಸೆವಕ್ಷರಕ್ಕೆ ಹೆಸರಿಲ್ಲ, ಆ ಹೆಸರಿಂಗೆ ರೂಹಿಲ್ಲ;
ರೂಪಿಂಗೆ ನಿರೂಪಿಲ್ಲ.
ನಿರೂಪಳಿದು ನಿರಾಕುಳವಾಗಿ
ನೀರಸಂಗಕ್ಕೆ ಹೋದರೆ,
ಆ ನೀರು ಬಯಲಾಳವ
ತೋರಿತ್ತಯ್ಯ ಸಂಗಯ್ಯ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-343/ವಚನ ಸಂಖ್ಯೆ-909)

ಬದುಕು ಒಂದು ವಿಧವಾಗಿ ಯೋಚಿಸಿದರೆ ಬಿಡಿ ಬಿಡಿಯಾದ ಅಕ್ಷರಗಳೇ. ಬದುಕು ಪೂರ್ತಿ ಅನಿರೀಕ್ಷಿತವಾದ ಘಟನೆಗಳೆ. ಪ್ರತಿ ಕ್ಷಣವು ಮುಂದೇನಾಗುವುದೆಂದು ಊಹಿಸಲು ಸಾಧ್ಯವಿಲ್ಲ. ಅನುಕ್ಷಣವೂ ಮನ ಒಂದಿಲ್ಲಾ ಒಂದು ಗೋಜಲುಗಳಿಗೆ ಒಡ್ಡಿಕೊಳ್ಳುತ್ತಲೇ ನಡೆವುದು. ಎಷ್ಟೋ ಬಾರಿ ತನ್ನದಲ್ಲದ ತಪ್ಪಿಗಾಗಿ ಶಿಕ್ಷೆ, ಅವಮಾನ, ಅನುಕ್ಷಣವೂ ಹೋರಾಟ. ಈ ಎಲ್ಲ ಓಟದ ಮಧ್ಯ ಅಲ್ಲಿಗೊಂದು ಇಲ್ಲಿಗೊಂದು ನೆಮ್ಮದಿಯ ಉಸಿರಾಟ. ಇವೆಲ್ಲದಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲ. ಇವೆಲ್ಲಕ್ಕೂ ಅರ್ಥ ಕಲ್ಪಿಸುವುದೂ ಸಾಧ್ಯವಿಲ್ಲ. ಇವೆಲ್ಲವೂ ಬಿಡಿ ಬಿಡಿಯಾದ ಅಕ್ಷರಗಳಂತೆ. ಬದುಕಿನ ಓಟದಲ್ಲಿ ಬಯಸಿದ್ದೇನು? ಸಿಕ್ಕಿದ್ದೇನು? ಎಲ್ಲವೂ ಕನ್ನಡಿಯೊಳಗಣ ಗಂಟು.

ಹೀಗೆಯೆ ಅಕ್ಷರಗಳಿಗೆ ತನ್ನದೇ ಆದ ಆಸ್ತಿತ್ವವಿದೆಯೆ? ಇಲ್ಲ. ಅವನ್ನು ಜೋಡಿಸಿದಾಗ ಶಬ್ದಗಳೇನೋ ಆಗುವವು. ಆದರೂ ಅವುಗಳಿಗೂ ತನ್ನದೇ ಆದ ಅರ್ಥವಿಲ್ಲ. ಅವನ್ನು ಕ್ರಮಬದ್ದವಾಗಿ ಜೋಡಿಸಿ ಆ ಶಬ್ದಗಳನ್ನು ಸಮರ್ಪಕವಾಗಿ ಹೆಣೆದಾಗ ಮಾತ್ರ ಆ ವಾಕ್ಯಗಳಿಗೆ ಅರ್ಥ ಬರುವುದು. ಎಸೆಯುವುದರ ಅರ್ಥವನ್ನು ನೋಡಿದಾಗ ಎಲ್ಲಿ ಬೇಕಲ್ಲಿ ಬೀಳುವುದು ಎಂದಾಯಿತು. ಹಾಗೆ ಅಕ್ಷರಗಳನ್ನು ಎಲ್ಲಿ ಬೇಕಲ್ಲಿ ಬರೆದರೆ ಅರ್ಥ ಬರುವುದೆ? ಅಂಥ ಅಸಂಬದ್ಧ ಪದಕ್ಕೆ ರೂಪ ಇರುವುದೆ? ಅದು ಕೇವಲ ಶಬ್ದ ಮಾತ್ರ. ಅಕ್ಷರವಿದೆ ಹೆಸರಿಲ್ಲ, ಹೆಸರಿದೆ ರೂಪವಿಲ್ಲ, ರೂಪವಿದೆ ನಿರೂಪವಿಲ್ಲ. ಹೀಗೆ ವಚನವು ಇದೆ ಇಲ್ಲಗಳ ಮಧ್ಯೆ ಅರ್ಥ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಹೋಗುವುದು. ಇದು ಒಂದು ನಿರಂತರವಾದ ಅನ್ವೇಷಣೆ. ಅಕ್ಷರದಲ್ಲಡಗಿರುವ ಶಬ್ದದ ಹುಡುಕಾಟ, ಶಬ್ದದಲ್ಲಡಗಿರುವ ಅರ್ಥದ ಹುಡುಕಾಟ. ಅರ್ಥದಲ್ಲಡಗಿರುವ ರೂಪದ ಹುಡುಕಾಟ.‌ ಕಾಣುವ ವಸ್ತುವಿನ ವಿಷಯದ ಹಿಂದೆ ಅಡಗಿರುವ ಕಾಣದಿರುವ ಸತ್ಯದ ಹುಡುಕಾಟ.

ಹಾಲಿನಲ್ಲಡಗಿರುವ ತುಪ್ಪದಂತೆ‌, ಈ ಸೃಷ್ಟಿಯಲ್ಲಿ ಅಡಗಿರುವ ಶಕ್ತಿ ಕೂಡಾ ಅಗೋಚರ. ಹಾಗೆಯೇ ಅಂತರಂಗದಲ್ಲಿ ಅಡಗಿರುವ ಅದಮ್ಯ ಚೇತನ ಕೂಡಾ ಅಗೋಚರವಾಗಿದೆ.

ರೂಪಿಂಗೆ ನಿರೂಪಿಲ್ಲ. ರೂಪವು ಮೂರ್ತವಾಗಿದೆ. ಹಿಂದೆ ಅಡಗಿರುವ ನಿರೂಪವಾಗಿರುವ ಸತ್ಯದ ವ್ಯಾಪ್ತಿ ನಿರ್ದಿಗಂತವಾಗಿದೆ. ಅಂತಹ ಅಮೂರ್ತವಾದ ಸತ್ಯವನ್ನು ಅನ್ವೇಷಿಸುವುದು ಸುಲಭಸಾಧ್ಯವೆ? ಶಬ್ದ, ಅರ್ಥ, ರೂಪ, ನಿರೂಪ ಎಲ್ಲ ಸಂಕೋಲೆಗಳನ್ನು ಕಳಚಿಕೊಂಡು ಅಂತರಂಗದ ಆಳದಲ್ಲಿ ಅನ್ವೇಷಿಸಿದಾಗ ಅಡಗಿದ ಅರಿವಿಲ್ಲದಂತೆ ಅಪರಿಮಿತ ಬೆಳಗು. ಅಂತಹ ಘನ ಅಡಗಿದ ಮನದ ಕೊನೆಯ ಮೊನೆಯ ಮೇಲೆ. ಅದು ಪರಮಾನಂದದ ನೆಲೆ ಎಲ್ಲೆಲ್ಲೂ ಆನಂದ, ಎಲ್ಲೆಲ್ಲೂ ಬೆಳಕು. ಒಂದೊಂದೇ ಹೆಜ್ಜೆ ಆಳಕ್ಕೆ ಹೋದಂತೆ ಪರಿಶುದ್ಧವಾದ ನೀರು ಗೋಚರವಾಗುವಂತೆ, ಮನೋಮಧ್ಯದಲ್ಲಿ ನಿಂದು ಅಂತರಾಳದ ಆಳಕ್ಕೆ ಇಳಿದಂತೆಲ್ಲ ತನ್ನಷ್ಟಕ್ಕೆ ತಾನೆ ನಿರ್ಮಲವಾದ ಮಹಾ ಬೆಳಗಿನ ದರ್ಶನ. ಅದುವೇ ಬಯಲಿನಲ್ಲಿ ಬಯಲಾದ ಸ್ಥಿತಿ, ಲಿಂಗೈಕ್ಯ ಸ್ಥಿತಿ.

ಇಂತಹ ಮೇರು ಅನುಭಾವವನ್ನು ನೀಲಮ್ಮನವರು ಅನುಭವಿಸಿದ್ದು. ಅದರ ಅಮೃತವನ್ನು ಬಿಚ್ಚಿಟ್ಟದ್ದು ಭವದ ತೆಕ್ಕೆಗೆ ಸಿಲುಕಿದ ಸಾಮಾನ್ಯರಿಗೆ ಕೈಗೆಟುಕದ ದಿಗಂತ.

ಶ್ರೀಮತಿ. ಸುನಿತಾ ಮೂರಶಿಳ್ಳಿ,
“ಶಿವಶಕ್ತಿ” ಮಂಜುನಾಥ ಪುರ,
ಮಾಳಮಡ್ಡಿ, ಧಾರವಾಡ.
ಫೋ ನಂ. 9986 437 474

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನ ಮಂದಾರದ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply