ಶರಣ ವೀರ ಗೊಲ್ಲಾಳೇಶ | ಶ್ರೀಮತಿ. ಅನುಪಮಾ ಪಾಟೀಲ, ಹುಬ್ಬಳ್ಳಿ.

ಪ್ರಪಂಚದ ಇತಿಹಾಸವನ್ನು ಅವಲೋಕಿಸಿದಾಗ 12 ನೇ ಶತಮನಾದಲ್ಲಿ ವಿಶ್ವಮಾನವ ಸಂದೇಶವನ್ನು ಸಾರಿದ ಹೆಮ್ಮಯ ಕನ್ನಡ ನಾಡಿದು. ಆ ಕಾಲಘಟ್ಟವನ್ನು ಅವಿಸ್ಮರಣೀಯವನ್ನಾಗಿ ಮಾಡಿದವರು ಬಸವಾದಿ ಶರಣರು. ಕೆಲವೇ ವರ್ಷಗಳಲ್ಲಿ ನೂರಾರು ಶಿವಶರಣರು ಜೀವನದ ಎಲ್ಲಾ ರಂಗಗಳ ಕುರಿತು ಅರ್ಥಪೂರ್ಣ ಚಿಂತನೆ ನಡೆಸಿದ ಕಾಲಘಟ್ಟವದು. ಎಲ್ಲರ ಪ್ರಮುಖ ಉದ್ದೇಶ ಮಾನವ ಕಲ್ಯಾಣವಾಗಿತ್ತು. ಬಸವಣ್ಣನವರ ನೇತೃತ್ವದಲ್ಲಿ ನಡೆದ ಚಳುವಳಿ ಕಾಯಕ ಜೀವಿಗಳ ಚಳುವಳಿ ಆಗಿತ್ತು. ಕಾಯಕ ವರ್ಗದ ಎಲ್ಲ ಜನರು ಚಳುವಳಿಯಲ್ಲಿ ಪಾಲ್ಗೊಂಡರು. ಅಂಬಿಗರ ಚೌಡಯ್ಯ, ಜೇಡರ ದಾಸಿಮಯ್ಯ, ಆಯ್ದಕ್ಕಿ ಮಾರಯ್ಯ, ಒಕ್ಕಲಿಗ ಮುದ್ದಣ್ಣ, ಕೊಟ್ಟಣದ ಸೋಮವ್ವ, ತುರುಗಾಹಿ ರಾಮಣ್ಣ, ನುಲಿಯ ಚಂದಯ್ಯ ಮುಂತಾದ ಕಾಯಕ ಜೀವಿಗಳು ಪಾಲ್ಗೊಂಡು ಸಮಾನತೆಯನ್ನು ಸಾಧಿಸಿದರು. ಅಷ್ಟೆ ಅಲ್ಲ ವಚನಗಳನ್ನು ರಚನೆ ಮಾಡಿ ಈ ಚಳುವಳಿಯ ಅರ್ಥಸ್ವರೂಪವನ್ನು ವಿಸ್ತರಿಸಿದ್ರು.

ಸಂಪರ್ಕ ಮಾಧ್ಯಮ ಮತ್ತು ಯಾವುದೇ ಸಮೂಹ ಮಾಧ್ಯಮಗಳು ಇಲ್ಲದ ಕಾಲದಲ್ಲಿ ಬಸವಣ್ಣನವರ ವೈಚಾರಿಕ ಕ್ರಾಂತಿಗಳಿಂದ ಆಕರ್ಷಿತರಾಗಿ ನಾಡಿನ ಎಲ್ಲ ಕಡೆಗಳಿಂದ ಕಾಯಕ ಜೀವಿಗಳು ಕಲ್ಯಾಣಕ್ಕೆ ಆಗಮಿಸಿದರು. ಕಲ್ಯಾಣ ಕೈಲಾಸವಾಯಿತು. ಇಂತಹ ಕಲ್ಯಾಣಕ್ಕೆ ಆಗಮಿಸಿದ ಶರಣರಲ್ಲಿ ವೀರ ಗೊಲ್ಲಾಳೇಶರೂ ಒಬ್ಬರು. ಮೊದ ಮೊದಲು ಮುಗ್ಧ ಭಕ್ತಿಯ ಸಾಧಕರಾಗಿದ್ದ ಗೊಲ್ಲಾಳೇಶರು ನಂತರದಲ್ಲಿ ಶರಣರ ಸಂಪರ್ಕದ ಸಂಸ್ಕಾರ ಬಲದಿಂದ ನಿಧಾನವಾಗಿ ಚಿಂತನಶೀಲರೂ ವೈಚಾರಿಕರಾಗಿ ಪರಿವರ್ತನೆಗೊಂಡು ಶ್ರೇಷ್ಠ ಶಿವಶರಣರಾಗಿ ಹೊರ ಹೊಮ್ಮಿ 770 ಅಮರಗಣಂಗಳ ಸಾಲಿನಲ್ಲಿ ಸೇರ್ಪಡೆಗೊಂಡರು.

ವೀರ ಗೊಲ್ಲಾಳನ ಬಗ್ಗೆ ಹಲವಾರು ಕಾವ್ಯಗಳಲ್ಲಿ ಪ್ರಸ್ತಾಪ ಕಂಡು ಬರುತ್ತದೆ. ಹರಿಹರ, ಪಾಲ್ಕುರಿಕ ಸೋಮನಾಥ, ಭೀಮಕವಿ, ವಿರೂಪಾಕ್ಷ ಪಂಡಿತ, ಲಕ್ಕಣ್ಣ ದಂಡೇಶ, ಸಿದ್ಧಲಿಂಗೇಶ, ಶಾಂತಲಿಂಗ ದೇಶಿಕ ಮುಂತಾದ ವೀರಶೈವ ಕವಿಗಳು ಬರೆದಿರುವ ಕೃತಿಗಳಲ್ಲಿ ಗೊಲ್ಲಾಳೇಶರ ಬಗೆಗೆ ಪ್ರಾಸಂಗಿಕವಾಗಿ ವಿವರಿಸಲಾಗಿದೆ. ಇದಕ್ಕಿಂತ ವಿಶೇಷ ಏನೆಂದರೆ ಗೊಲ್ಲಾಳರು ಬದುಕಿದ ಪ್ರದೇಶಗಳಲ್ಲಿ ಇಂದಿಗೂ ಅವರನ್ನು ಕುರಿತು ಜನಪದರು ಕಥೆಗಳನ್ನು ಹೇಳುತ್ತಾರೆ. ಪದ ಹಾಡುತ್ತಾರೆ. ಹೀಗಾಗಿ ವೀರ ಗೊಲ್ಲಾಳರು ಶರಣರ ಸಮುದಾಯದಲ್ಲಿ ಒಬ್ಬ ಪ್ರಭಾವಿ ವ್ಯಕ್ತಿ ಆಗಿದ್ದರು ಅಂತ ತಿಳಿಯುತ್ತದೆ. ಅವರ ಬದುಕಿನ ವಿವರಣೆ ನೋಡಿದಾಗ ಅವರೊಬ್ಬ ಹೋರಾಟಗಾರರಾಗಿದ್ದರು ಅಂತ ತಿಳಿಯುತ್ತದೆ.

ವಿಜಯಪುರ ಜಿಲ್ಲೆಯ ಸಿಂಧಗಿಯ ಢವಳಾರ ಎಂಬ ಗ್ರಾಮದಲ್ಲಿ ವಾಸವಾಗಿದ್ದ ಕಾಟಕೋಟ ಮತ್ತು ದುಗ್ಗಳವ್ವೆ ಎಂಬ ಶ್ರೀಮಂತ ಕುರುಬ ದಂಪತಿಗಳ ಮಗನಾಗಿ ವೀರ ಗೊಲ್ಲಾಳ ಜನಿಸಿದರು. ಬಾಲ್ಯದಿಂದಲೇ ಕುರಿಗಳನ್ನು ಮೇಯಿಸುವ ಕಾಯಕ ಮಾಡುತ್ತಿದ್ದರು. ಕುರಿಗಳನ್ನು ಕಾಡು ಮೇಡುಗಳಲ್ಲಿ ಮೇಯಲು ಬಿಟ್ಟು ಶಿವಧ್ಯಾನದಲ್ಲಿ ತೊಡಗುತ್ತಿದ್ದರು.

ವೀರ ಗೊಲ್ಲಾಳನವರ ಕುರಿತು ಒಂದು ಜನಪದ ಕಥೆ ಇದೆ. ಒಂದು ದಿನ ಕುರಿಗಳನ್ನು ಮೇಯಿಸುತ್ತಿರುವಾಗ ಮಾರ್ಗ ಮಾಧ್ಯದಲ್ಲಿ ಶ್ರೀ ಶೈಲಕ್ಕೆ ತೆರಳುತ್ತಿರುವ ಭಕ್ತಿ ಸಮೂಹ ಎದುರಾಗುತ್ತದೆ. ಅವರನ್ನು ನೋಡಿದ ಗೊಲ್ಲಾಳರಿಗೆ ಮಲ್ಲಯ್ಯನ ದರ್ಶನ ಮಾಡುವ ಆಸೆ ಮೊಳೆಯುತ್ತದೆ. ಆಗ ಗೊಲ್ಲಾಳರು ಭಕ್ತರ ಮಧ್ಯದಲ್ಲಿದ್ದ ಒಬ್ಬ ಭಕ್ತನಿಗೆ ತಮ್ಮ ಆಸೆಯನ್ನು ಹೇಳಿದಾಗ ಆತ ಚಿಂತಸಬೇಡ, ನಾನು ಶ್ರೀಶೈಲದಿಂದ ಬರುವಾಗ ನಿನಗಾಗಿ ಒಂದು ಮಲ್ಲಿಕಾರ್ಜುನ ಲಿಂಗವನ್ನು ತರುತ್ತೇನೆ ಅಂತ ಭರವಸೆ ನೀಡುತ್ತಾನೆ. ಆನಂದದಿಂದ ಪುಳುಕಿತಗೊಂಡ ಗೊಲ್ಲಾಳರು ಒಂದು ಹೊನ್ನಿನ ನಾಣ್ಯವನ್ನು ಕೊಡುತ್ತಾನೆ. ಗೊಲ್ಲಾಳರು ಪ್ರತಿನಿತ್ಯ ಆ ಲಿಂಗದ ದಾರಿಯನ್ನು ಕಾಯುತ್ತಾ ಇರುತ್ತಾರೆ. ಸ್ವಲ್ಪ ದಿನಗಳ ನಂತರ ಆ ಶಿವಭಕ್ತರ ಗುಂಪು ವಾಪಸ್ಸು ಬರುತ್ತದೆ. ಆದರೆ ಅವರು ಲಿಂಗವನ್ನು ತರೋದನ್ನೇ ಮರೆತು ಬಿಟ್ಟಿರುತ್ತಾರೆ. ಗೊಲ್ಲಾಳರ ಭಯದಿಂದ ದಾರಿಯಲ್ಲಿ ಬಿದ್ದ ಕುರಿಯ ಹಿಕ್ಕಿಯನ್ನೆ ಲಿಂಗ ಅಂತ ಹೇಳಿ ಕೊಡುತ್ತಾರೆ. ಪೂಜೆಯ ವಿಧಾನವನ್ನು, ಲಿಂಗದ ಮಹಾತ್ಮೆಯನ್ನು ಬೋಧಿಸುತ್ತಾರೆ. ಸಮರ್ಪಣಾ ಭಾವದಿಂದ ಲಿಂಗದ ಪೂಜಿಸಿದರೆ ನೀನೊಬ್ಬ ಮಹಾ ಶಿವಶರಣ ಆಗ್ತೀಯ ಅಂತ ಗೊಲ್ಲಾಳರಿಗೆ ಉಪದೇಶಿಸುತ್ತಾರೆ. ಇದನ್ನು ಕೇಳಿದ ಮುಗ್ಧ ಗೊಲ್ಲಾಳರು ಅದನ್ನೇ ನಿಜ ಲಿಂಗವೆಂದು ನಂಬಿ ಪ್ರತಿ ದಿನ ಹಾಲಿನಿಂದ ಅಭಿಷೇಕ ಮಾಡಿ ಕಾಡಿನ ಹೂಗಳಿಂದ ಅಲಂಕರಿಸಿ ಪೂಜಿ ಮಾಡುತ್ತಾನೆ. ಒಂದು ದಿನ ಇದನ್ನೆಲ್ಲ ನೋಡಿದ ಗೊಲ್ಲಾಳನ ತಂದೆ ಕಾಟಕೂಟನು ಆ ಲಿಂಗವನ್ನು ನಾಶ ಮಾಡುತ್ತಾನೆ. ಇದನ್ನು ನೋಡಿದ ಗೊಲ್ಲಾಳನು ಕೊಪಗೊಂಡು ತಂದೆಯನ್ನು ಕೊಲ್ಲಲು ಹೋಗ್ತಾನೆ. ಆದರೆ ಶಿವ ಕಾರುಣ್ಯದಿಂದ ಇದೆಲ್ಲ ತಪ್ಪುತ್ತದೆ. ನಂತರ ಶಿವಧ್ಯಾನದಲ್ಲಿಯೇ ನಿರತರಾಗಿದ್ದ ವೀರ ಗೊಲ್ಲಾಳರು ಕಲ್ಯಾಣದತ್ತ ಹೊರಡುತ್ತಾರೆ. ಇವೆಲ್ಲ ಅವಾಸ್ತವಿಕ ಸಂಗತಿಗಳು ಅನಿಸಿದರೂ ಕೂಡ ವೀರ ಗೊಲ್ಲಾಳರ ಮುಗ್ಧ ಭಕ್ತಿಯ ಆನಾವರಣವಾಗುತ್ತದೆ.

ಅನಂತರದಲ್ಲಿ ಗೊಲ್ಲಾಳ ವೀರ ಗೊಲ್ಲಾಳರಾಗಿ ಶಿವಶರಣರಾಗುತ್ತಾರೆ. ಕಲ್ಯಾಣದಲ್ಲಿ ಬಸವಣ್ಣನವರ ಚಳುವಳಿಯ ವಿಚಾರಗಳಿಂದ ಆಕರ್ಷಿತರಾಗಿ ಕಲ್ಯಾಣಕ್ಕೆ ಬಂದು ಅನುಭವ ಮಂಟಪದ ಗೋಷ್ಠಿಯಲ್ಲಿ ಭಾಗವಹಿಸಿದ್ದು ಕಂಡು ಬರುತ್ತದೆ. “ವೀರ ಬೀರೇಶ್ವರ” ಎಂಬ ಅಂಕಿತದಿಂದ ವಚನಗಳನ್ನು ರಚಿಸಲು ಪ್ರಾರಂಭಿಸುತ್ತಾರೆ.

ವೀರ ಗೊಲ್ಲಾಳರ ವಚನ ರಚನೆಯ ಬಗೆಗೂ ಜಿಜ್ಞಾಷೆ ಹೆಚ್ಚಾಗಿ ಆಗಬೇಕಿದೆ. ಫ. ಗು ಹಳಕಟ್ಟಿ ಅವರ ಪ್ರಕಾರ ಸಧ್ಯ 20 ವಚನಗಳು ಮಾತ್ರ ಲಭ್ಯವಾಗಿವೆ. ಇದರಲ್ಲಿ ಸುಮಾರು 10 ಬೆಡಗಿನ ವಚನಗಳು ಸಮಗ್ರ ವಚನ ಸಂಪುಟದಲ್ಲಿ ಪ್ರಕಟವಾಗಿವೆ.

ವೀರ ಗೊಲ್ಲಾಳರ ಪತ್ನಿ ರೇಚವ್ವೆ. ಇವರೂ ಕೂಡ “ನಿಜಶಾಂತೇಶ್ವರ” ಅಂಕಿತದಲ್ಲಿ ಒಂದು ವಚನ ಬರೆದಿದ್ದಾರೆ. ಅವರ ವಚನ ಹೀಗಿದೆ.

ಬಂಜೆಯಾವಿಂಗೆ ಕ್ಷೀರವುಂಟೇ?
ವ್ರತಹೀನನ ಬೆರೆಯಲುಂಟೆ?
ನೀ ಬೆರೆದಡೂ ಬೆರೆ;
ನಾನೊಲ್ಲೆ ನಿಜಶಾಂತೇಶ್ವರಾ.
(ಸಮಗ್ರ ವಚನ ಸಂಪುಟ: ಐದು-2021/ಪುಟ ಸಂಖ್ಯೆ-286/ವಚನ ಸಂಖ್ಯೆ-747)

ಕಂಥೆಯ ಕಟ್ಟಿ, ತಿತ್ತಿಯ ಹೊತ್ತು,
ಮರಿಯ ನಡಸುತ್ತ,
ದೊಡ್ಡೆಯ ಹೊಡೆವುತ್ತ,
ಅಡ್ಡಗೋಲಿನಲ್ಲಿ ಹೋಹ ಚುಕ್ಕಿ ಬೊಟ್ಟಿನವ ತಿಟ್ಟುತ್ತ,
ಹಿಂಡನಗಲಿ ಹೋಹ ದಿಂಡೆಯ
ಮಣೆಘಟ್ಟನ ಅಭಿಸಂದಿಯ ಕೋಲಿನಲ್ಲಿಡುತ್ತ.
ಈ ಹಿಂಡಿನೊಳಗೆ ತಿರುಗಾಡುತಿದ್ದೇನೆ.
ಈ ವಿಕಾರದ ಹಿಂಡ ಬಿಡಿಸಿ,
ನಿಜನಿಳಯ ನಿಮ್ಮಂಗವ ತೋರಿ, ಸುಸಂಗದಲ್ಲಿರಿಸು,
ಎನ್ನೊಡೆಯ ವೀರಬೀರೇಶ್ವರಲಿಂಗಾ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-34/ವಚನ ಸಂಖ್ಯೆ-87)

ಎಂಬ ಈ ವಚನದಲ್ಲಿ ವೀರ ಗೊಲ್ಲಾಳರು ಕುರುಬ ಸಮುದಾಯಕ್ಕೆ ಸೇರಿದರೆಂದು ಅಷ್ಟೆ ಅಲ್ಲದೆ ಈ ವಚನದಲ್ಲಿ ಹಲವು ವಿಧಧ ಕುರಿಗಳನ್ನು ಮತ್ತು ಕುರಿಗಳು ಕಾಯುವ ವಿಧಾನವನ್ನು ತಿಳಿಸಿರುವದಲ್ಲದೆ ಬೆಡಗಿನ ಮುಖಾಂತರ ಆಧ್ಯಾತ್ಮಿಕ ಸಾಧನೆಯನ್ನು ತನ್ನ ಕಾಯಕದ ಪ್ರತಿಮೆಗಳಲ್ಲಿ ಬಳಸಿರುವುದು ಮನೋಜ್ಞವಾಗಿದೆ. ಈ ವಚನ ವೀರಗೊಲ್ಲಾಳನ ಆಧ್ಯಾತ್ಮಿಕ ಜಾನತ್ಯಕ್ಕೆ ಮತ್ತು ವಚನಗಳ ಪ್ರತಿಮಾ ವಿಧಾನಕ್ಕೆ ಉದಾಹರಣೆ ಆಗಿದೆ.

ಸ್ಥಲಂಗಳನರಿದಿಹೆನೆಂದಡೆ ತ್ರಿವಿಧಸ್ಥಲ ಎನಗಿಲ್ಲ.
ಷಡುಸ್ಥಲವ ಮುನ್ನವೆ ಅರಿಯೆ.
ತತ್ವವನರಿದಿಹೆನೆಂದಡೆ ಇಪ್ಪತ್ತೈದರ ಗೊತ್ತಿನವನಲ್ಲ.
ಮಿಕ್ಕಾದ ಸತ್ಕ್ರೀಯದಲ್ಲಿ ನಡೆದಿಹೆನೆಂದಡೆ
ಭಕ್ತಿ ಜ್ಞಾನ ವೈರಾಗ್ಯ ತ್ರಿವಿಧ ಲಕ್ಷ್ಯವಿಧ ನಾನಲ್ಲ.
ನಿಷ್ಠೆಯಲ್ಲಿ ದೃಷ್ಟವ ಕಂಡಿಹನೆಂದಡೆ ವಿಶ್ವಾಸ ಎನಗಿಲ್ಲ.
ವಿರಕ್ತಿಯಲ್ಲಿ ವೇಧಿಸಿಹೆನೆಂದಡೆ,
ತ್ರಿವಿಧ ಮಲದ ಮೊತ್ತದೊಳಗೆ ಮತ್ತನಾಗಿದೇನೆ.
ಮತ್ತೆ ನಿಶ್ಚಯವನರಿದಿಹೆನೆಂದಡೆ,
ಆತ್ಮಂಗೆ ಲಕ್ಷವಿಡುವದೊಂದು ಗೊತ್ತ ಕಾಣೆ.
ಇಂತೀ ಕಷ್ಟತನುವಿನಲ್ಲಿ ಬಂದು,
ಧೂರ್ತನಾಗಿ ಕೆಟ್ಟುಹೋಗುತ್ತಿದೇನೆ.
ಗುಡಿಸಿದ ಹಿಕ್ಕೆಯಲ್ಲಿ ಬಂದು ತನ್ನ ನಿಷ್ಠೆಯ ತೋರಿ,
ಎನಗೆ ಸದ್ಭಕ್ತಿಯ ಬೀರಿ, ವಿಶ್ವಾಸಿಗಳಿಗೆಲ್ಲಕ್ಕೆ ಕೃತ್ಯದೊಳಗಾಗಿ,
ನಿತ್ಯನೇಮಂಗಳಲ್ಲಿ ಅಚ್ಚೊತ್ತಿದಂತಿರು.
ನೀನೆ ಮುಕ್ತನಹೆ, ನಿಜನಿತ್ಯನಹೆ, ಜಗಕೆ ಕರ್ತೃವಹೆ.
ಎನ್ನ ಹಿಕ್ಕೆಗೆ ಬಂದು ಸಿಕ್ಕಿದೆಯಲ್ಲಾ,
ಮಹಾಮಹಿಮ ವೀರಬೀರೇಶ್ವರಾ.
(ಸಮಗ್ರ ವಚನ ಸಂಪುಟ: ಒಂಭತ್ತು-2021/ಪುಟ ಸಂಖ್ಯೆ-36/ವಚನ ಸಂಖ್ಯೆ-92)

ಮುಗ್ಧರಾದ ವೀರ ಗೊಲ್ಲಾಳರು ಗುರು ಲಿಂಗ ಶಿಷ್ಯರೆಂಬ ತ್ರಿವಿಧಿ ಸ್ಥಲಗಳಾಗಲಿ, ಘಟಸ್ಥಲಗಳ ಬಗೆಗಾಗಲಿ, ಭಕ್ತಿ ಜ್ಞಾನ ಮತ್ತು ವೈರಾಗ್ಯವೆಂಬ ತ್ರಿವಿಧ ಲಕ್ಷ್ಯವೂ ನನಗಿಲ್ಲ, ಆತ್ಮ ನಿಗ್ರಹವು ನನಗಿಲ್ಲ. ಇಂತಹ ಕಷ್ಟ ದೇಹದಲ್ಲಿ ಹುಟ್ಟಿ ಬಂದ ನಾನು ಧೂರ್ತನಾಗಿ ಕೆಟ್ಟು ಹೋಗಿರುವೆ ಎಂದು ತಮ್ಮನ್ನು ತಾನು ಹಳಿದುಕೊಳ್ಳುತ್ತಾರೆ. ಅದಕ್ಕೆ ಎನೂ ತಿಳಿಯದವನಾದ ಪಾಮರನಾದ ನಾನು ನನ್ನ ಕುರಿಗಳು ಹಾಕಿದ ಹಿಕ್ಕಿಯಲ್ಲಿ ನಿರ್ಮಿಸಿದ ಲಿಂಗಕ್ಕೆ ನನ್ನ ನಿಷ್ಠೆಯಲ್ಲಿ ತೋರಿದ್ದೇನೆ. ನನ್ನ ದೇವರು ನಿರ್ಮಿಸಿದ ಕುರಿಯ ಹಿಕ್ಕಿಯಲ್ಲಿ ನನಗಾಗಿ ಎಂದು ಸಿಕ್ಕಿ ಹಾಕಿಕೊಂಡನಲ್ಲಿ ಆತನ ಮುಕ್ತನು ನಿಜ ನಿತ್ಯನು ಜಗದ ಕರ್ತವ್ಯ ಎಂದು ಶಿವಾನುಭವ ಗಾಥೆಯನ್ನು ಹೇಳುತ್ತಾರೆ.

ಸ್ವಲ್ಪ ಕಾಲದ ನಂತರ ವೀರ ಗೊಲ್ಲಾಳೇಶ ಕಲ್ಯಾಣದಿಂದ ಮರಳಿ ಗೋಲಗೇರಿಗೆ ಬಂದು ನೆಲೆಸುತ್ತಾರೆ. ಅಲ್ಲಿ ಶಿವ ಚಿಂತನೆಯನ್ನು ಮಾಡುವದಲ್ಲದೆ ಜನರಲ್ಲಿ ವೈಚಾರಿಕತೆಯನ್ನು ಭೋಧಿಸುತಾರೆ. ಕೊನೆಗೆ ಅಲ್ಲಿಯೆ ಲಿಂಗೈಕ್ಯರಾಗುತ್ತಾರೆ. ಇಂದಿಗೂ ಗೋಲಗೇರಿಯಲ್ಲಿ ಗೊಲ್ಲಾಳರ ಸಮಾಧಿಯನ್ನು ಆ ದೇವಾಲಯವನ್ನು ನೋಡಬಹುದು. ಪ್ರತಿ ವರ್ಷ ಗೋಲಗೇರಿಯಲ್ಲಿ ಗೊಲ್ಲಾಳೇಶ್ವರನ ಜಾತ್ರೆ ನಡೆಯುತ್ತದೆ. ವೀರ ಗೊಲ್ಲಾಳರ ಕುರಿತು ಜನಪದ ಕಾವ್ಯವೊಂದು ರಚನೆಯಾಗಿದೆ. ಇದರಿಂದ ಇವರು ಜನಪದರ ಮೇಲೆ ಎಷ್ಟು ಪ್ರಭಾವ ಬೀರಿದ್ದಾರೆಂದು ತಿಳಿಯುತ್ತದೆ.

ಇಂದು ಇಂತಹ ಅರುಹು ಕುರುಹಿನ ಶರಣ ವೀರ ಗೋಲ್ಲಾಳೇಶರ ಜಯಂತಿ ಇಂದು ಇದೆ. ವೀರ ಗೊಲ್ಲಾಳೇಶರ ತತ್ವ ಸಿದ್ಧಾಂತಗಳನ್ನು ಹಾಗೂ ಅವರ ನಡೆ-ನುಡಿ ಸಿದ್ಧಾಂತಗಳನ್ನು ನಮ್ಮ ಬಾಳಿನಲ್ಲಿ ಅಳವಡಿಸಿಕೊಳ್ಳೋನ ಅಂತ ಹೇಳುತ್ತಾ ನನ್ನ ಲೇಖನಕ್ಕೆ ವಿರಾಂವನ್ನು ಹೇಳುತ್ತೇನೆ.

ಶ್ರೀಮತಿ. ಅನುಪಮ ಪಾಟೀಲ,
ನಂ. 10, ದೇಸಾಯಿ ಪಾರ್ಕ್‌,
ಕುಸೂಗಲ್‌ ರಸ್ತೆ, ಕೇಶ್ವಾಪೂರ,
ಹುಬ್ಬಳ್ಳಿ – 580 023.
ಮೋ. ಸಂ. +91 9845810708.

 ಓದುಗರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನೇರವಾಗಿ ಲೇಖಕರನ್ನು ಸಂಪರ್ಕಿಸಿ ಹಂಚಿಕೊಳ್ಳಬಹುದು.
 ವಚನಸಾಹಿತ್ಯ ಮಂದಾರ ಫೌಂಡೇಶನ್ ಸಂಚಾಲಕರನ್ನು ಸಂಪರ್ಕಿಸಬೇಕಾದ ಮೋಬೈಲ್ ನಂ. 9741 357 132 / e-Mail ID: info@vachanamandara.in / admin@vachanamandara.in

Loading

Leave a Reply